ಸದಸ್ಯ:Ganapathi Diwan/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ[ಬದಲಾಯಿಸಿ]

ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ(ರಿ), ಅಂಬಲಪಾಡಿ ಇದು ಉಡುಪಿ ಜಿಲ್ಲೆಯ ಅಂಬಲಪಾಡಿಯ ಹವ್ಯಾಸಿ ಯಕ್ಷಗಾನ ಸಂಸ್ಥೆಯಾಗಿದ್ದು ಅರುವತ್ತಕ್ಕೂ ಹೆಚ್ಚು ವರ್ಷಗಳನ್ನು ಪೂರೈಸಿ ಮುಂದೆ ಸಾಗುತ್ತಿದೆ. ಬಡಗುತಿಟ್ಟು ಯಕ್ಷಗಾನದ ಹವ್ಯಾಸಿ ಕಲಾರಂಗಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿರುವ ಈ ಕಲಾಮಂಡಳಿಯು ಮೂರು ತಲೆಮಾರಿನ ಕಲಾವಿದರು, ಸ್ವಂತ ವೇಷಭೂಷಣ, ಹಿಮ್ಮೇಳ, ಹಿಮ್ಮೇಳ ಪರಿಕರ ಮತ್ತು ನಿವೇಷನ ಹೊಂದಿರುವ ಯಶಸ್ವಿ ಹವ್ಯಾಸಿ ಯಕ್ಷಗಾನ ಸಂಸ್ಥೆ ಎಂಬ ಹಿರಿಮೆ ಹೊಂದಿದೆ.

ಇತಿಹಾಸ[ಬದಲಾಯಿಸಿ]

ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯು 1958ರಲ್ಲಿ ಸ್ಥಾಪನೆಗೊಂಡಿತು. ಸಂಘ ಸ್ಥಾಪನೆಗೆ ದಿ| ಕೆ. ಜನಾರ್ದನ ಆಚಾರ್, ದಿ| ಕೆ. ಬಾಬು ಶೆಟ್ಟಿಗಾರ್ ಮತ್ತು ದಿ| ಕೆ. ಬಾಲಕೃಷ್ಣ ಕಿಣಿ ಮುಖ್ಯ ಕಾರಣರಾದರು. ಈ ಸಂಸ್ಥೆಗೆ ಎರಡು ವರ್ಷಗಳ ತರುವಾಯ(5-3-1960 ರಲ್ಲಿ) ‘ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ, ಅಂಬಲಪಾಡಿ’ ಎಂಬ ಹೆಸರನ್ನುಇಡಲಾಯಿತು. ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960 ಇದರ ಪ್ರಕಾರ ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ, ಅಂಬಲಪಾಡಿಯು 3-2-1996ರಂದು ನೋಂದಾವಣೆಗೊಂಡಿದೆ. ಸಂಸ್ಥೆಯು ಶ್ರೀಮಂತ ಗುರುವೃಂದವನ್ನು ಹೊಂದಿದೆ. ಮಲ್ಪೆರಾಮದಾಸ ಸಾಮಗರು, ಸಕ್ಕಟ್ಟು ಸೀತಾರಾಮ ರಾವ್, ಹಿರಿಯಡಕ ಗೋಪಾಲ ರಾವ್, ಗೋರ್ಪಾಡಿ ವಿಠಲ ಆಚಾರ್ಯ, ಐರೋಡಿ ರಾಮ ಗಾಣಿಗ, ಬನ್ನಂಜೆ ನಾರಾಯಣ, ಕೆಮ್ಮಣ್ಣು ಆನಂದ, ಎಂ.ಕೆ. ರಮೇಶ ಆಚಾರ್ಯ, ಬನ್ನಂಜೆ ಸಂಜೀವ ಸುವರ್ಣ, ಸದಾನಂದ ಐತಾಳ ಮುಂತಾದ ಯಕ್ಷಗಾನ ಲೋಕದ ಮೇರು ಸಾಧಕರ ಮಾರ್ಗದರ್ಶನವನ್ನು ಸಂಘವು ಪಡೆದಿದೆ. ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯು 60 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ಅದರಲ್ಲಿ ಉದ್ಯೋಗ ನಿಮಿತ್ತ ಬೇರೆ ಊರಿನಲ್ಲಿ ನೆಲೆಸಿದವರೂ ಸೇರಿದ್ದಾರೆ. ಸಂಘಕ್ಕೆ ನಾಲ್ಕು ತಲೆಮಾರುಗಳ ಇತಿಹಾಸವಿದ್ದು ಸದಸ್ಯರನ್ನು ದಿವಂಗತರು, ನಿವೃತ್ತರು, ಪ್ರವೃತ್ತರು ಮತ್ತು ಬಾಲಕಲಾವಿದರು ಎಂದು ವಿಂಗಡಿಸಿ ಗುರುತಿಸಬಹುದು. ಹೀಗೆ 60 ವರ್ಷಗಳ ಸಾಧನೆ ಈ ಕಲಾಮಂಡಳಿಯದು.

ಉದ್ದೇಶ[ಬದಲಾಯಿಸಿ]

ಯಕ್ಷಗಾನ ಕಲಾಪ್ರಚಾರ, ಯಕ್ಷಗಾನ ಸಂಪ್ರದಾಯಗಳ ಪುನರುತ್ಥಾನ ಮತ್ತು ಯಕ್ಷಗಾನ ತರಬೇತಿ, ಕಲಾವಿದರನ್ನು ಗೌರವಿಸುವುದು, ಅಶಕ್ತ ಕಲಾವಿದರಿಗೆ ಸಹಾಯ ನೀಡುವುದು, ಯಕ್ಷಗಾನ ಗೋಷ್ಠಿಗಳನ್ನು ಏರ್ಪಡಿಸುವುದು, ಯಕ್ಷಗಾನ ಕೃತಿಗಳ ರಚನೆ, ಯಕ್ಷಗಾನ ವೇಷಭೂಷಣಗಳ ತಯಾರಿ, ಬಣ್ಣಗಾರಿಕೆ ಮಾಹಿತಿ, ವೇಷಭೂಷಣಗಳನ್ನು ಕಟ್ಟಿಕೊಳ್ಳುವುದು, ಯಕ್ಷಗಾನದ ಇತರ ಸಂಸ್ಥೆಗಳೊಡನೆ ಸಂಪರ್ಕ-ಸಹಕಾರ, ಯಕ್ಷಗಾನ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಕಲೆಯ ಬೆಳವಣಿಗೆ ಇತ್ಯಾದಿಗಳು ಸಂಘದ ಮುಖ್ಯ ಉದ್ದೇಶಗಳಾಗಿವೆ.

ಹೆಗ್ಗಳಿಕೆ[ಬದಲಾಯಿಸಿ]

ಮಂಡಳಿಯು ಪ್ರತೀ ವರ್ಷ ಗಣ್ಯರ ಹಿರಿತನದಲ್ಲಿ ವಾರ್ಷಿಕೋತ್ಸವವನ್ನು ನಡೆಸಿಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ನಿವೃತ್ತ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಅಶಕ್ತ ಕಲಾವಿದರಿಗೆ ಸಹಾಯಧನ ನೀಡುವ ಕಾರ್ಯಕ್ರ,ಮ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ 1988ರಲ್ಲಿ ‘ವಿಶ್ವಸ್ತ ನಿಧಿ’ ಸ್ಥಾಪಿಸಲಾಗಿದೆ. ಅಲ್ಲದೆ ಸಂಸ್ಥೆಯ ಹಿರಿಯ ಕಲಾವಿದರ ನೆನಪಿನಲ್ಲಿ ಕೆ. ಬಾಬು ಶೆಟ್ಟಿಗಾರ ಪ್ರಶಸ್ತಿ, ಕೆ. ಜನಾರ್ದನ ಆಚಾರ್ಯ ಪ್ರಶಸ್ತಿ ಮತ್ತು ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಯನ್ನು ಮೂವರು ಕಲಾವಿದರಿಗೆ ಮತ್ತು ನಿ. ಬೀ. ಅಣ್ಣಾಜಿ ಬಲ್ಲಾಳ ಪ್ರಶಸ್ತಿಯನ್ನು ಯಕ್ಷಗಾನ ಸಂಸ್ಥೆಯೊಂದಕ್ಕೆ ನೀಡಲಾಗುತ್ತಿದೆ. ಸಂಸ್ಥೆಯು ಸ್ವಂತ ವೇಷ ಭೂಷಣ, ರಂಗಸ್ಥಳ, ಹಿಮ್ಮೇಳ ಮತ್ತು ಹಿಮ್ಮೇಳ ಪರಿಕರಗಳನ್ನು ಒಳಗೊಂಡಿದೆ. ಜೊತೆಗೆ ಸ್ವಂತ ನಿವೇಷನ್ನೂ ಹೊಂದಿರುವುದು ಸಂಘದ ಹೆಗ್ಗಳಿಕೆ. ಉಡುಪಿಯಲ್ಲಿ ಆರಂಭವಾಗಿರುವ “ಯಕ್ಷ ಶಿಕ್ಷಣ ಟ್ರಸ್ಟ್” ಮತ್ತು ಇದರ ವತಿಯಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಡೆಸಲಾಗುವ ಯಕ್ಷಗಾನ ತರಬೇತಿಯಲ್ಲಿ ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯ ಹಲವು ಕಲಾವಿದರು ಗುರುಗಳಾಗಿ ಕೆಲಸ ನಿರ್ವಹಿಸಿರುವುದು ಗಣನೀಯ ಅಂಶ.  

ಸಾಧನೆ[ಬದಲಾಯಿಸಿ]

ಸಂಸ್ಥೆಯು ಮಂಗಳೂರು ಆಕಾಶವಾಣಿಯಲ್ಲಿ 19-10-1977 ರಿಂದ ಇದುವರೆಗೆ 35ಕ್ಕೂ ಹೆಚ್ಚು ತಾಳಮದ್ದಳೆ ಕಾರ್ಯಕ್ರಮಗಳನ್ನು ನೀಡಿದೆ. ಜೊತೆಗೆ ಬೆಂಗಳೂರು ದೂರದರ್ಶನ ವಾಹಿನಿಯಲ್ಲೂ 1993 ರಿಂದ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ಉಡುಪಿಯ ಪ್ರತಿಷ್ಠಿತ ಯಕ್ಷಗಾನ ಸಂಸ್ಥೆ “ಯಕ್ಷಗಾನ ಕಲಾರಂಗ” ಕೊಡಮಾಡುವ “ವಿಶ್ವೇಶತೀರ್ಥ ಪ್ರಶಸ್ತಿ”ಯನ್ನು 2006ರಲ್ಲಿ ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯು ಪಡೆದುಕೊಂಡಿದೆ. ಕಲಾಮಂಡಳಿಯು ತಾನು ಭಾಗವಹಿಸಿದ ನಾಲ್ಕೂ ಯಕ್ಷಗಾನ ಸ್ಪರ್ಧಾಕೂಟಗಳಲ್ಲಿ ಪ್ರಥಮ ಬಹುಮಾನ ಪಡೆದಿರುವುದು ವಿಶೇಷ. ಸಂಘದ ಹವ್ಯಾಸಿ ಕಲಾವಿದರು ತಮ್ಮ ಪರಿಶ್ರಮ ಮತ್ತು ಸಾಧನೆಯಿಂದ ವೃತ್ತಿಪರ ಕಲಾವಿದರಿಗೆ ಸರಿ ಹೊಂದುವಂತೆ ಬೆಳೆದಿರುವುದು ಸಂಸ್ಥೆಯ ಸಾಧನೆಯಾಗಿದೆ. ಈ ಕಾರಣದಿಂದ ಸಂಘದ ಹಲವು ಕಲಾವಿದರು ಅನಿವಾರ್ಯ ಸಂದರ್ಭಗಳಲ್ಲಿ ವೃತ್ತಿಪರ ಮೇಳಗಳಲ್ಲಿ ಬದಲಿ ಕಲಾವಿದರಾಗಿ ಭಾಗವಹಿಸಿದ್ದಾರೆ.

ವಿದೇಶದಲ್ಲಿ ಕಾರ್ಯಕ್ರಮ[ಬದಲಾಯಿಸಿ]

ಸಂಘದ ಸದಸ್ಯರು ಅಮೇರಿಕಾದ ಪಟ್ಟಣಗಳಾದ ಚಿಕಾಗೊ, ಕೊಲಂಬಸ್, ನ್ಯೂಜೆರ್ಸಿ, ಬೂಸ್ಟನ್, ವಾಷಿಂಗ್ಟನ್, ಅಟ್ಲಾಂಟ್, ಹೂಸ್ಟನ್, ಆಸ್ಟ್ರೀನ್, ಡಲ್ಲಾಸ್, ಸ್ಯಾನ್ ಫ್ರಾನ್ಸಿಸ್ಕೊ, ಯುರೋಪ್ ಪಟ್ಟಣಗಳಾದ ಇಟೆಲಿ, ಫ್ರಾನ್ಸ್, ಜರ್ಮನಿ, ಬೆಲ್ಜಿಯಮ್, ಲಂಡನ್‍ ಜೊತೆಗೆ ಸಿಂಗಾಪುರದಲ್ಲೂ ಕಾರ್ಯಕ್ರಮ ನೀಡಿರುತ್ತಾರೆ. 2004ರ ಸಪ್ಟಂಬರ್ 3 ರಿಂದ 5ರ ವರೆಗೆ ಅಮೇರಿಕಾದ ಫ್ಲೋರಿಡಾದಲ್ಲಿ ನಡೆದ ‘ಅಕ್ಕ ವಿಶ್ವಕನ್ನಡ ಸಮ್ಮೇಳನ’ದಲ್ಲಿ ಭಾಗವಹಿಸಿರುತ್ತಾರೆ.  

ಬೆಳ್ಳಿ ಹಬ್ಬ[ಬದಲಾಯಿಸಿ]

ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯು ಏಪ್ರಿಲ್ 16, 1983 ರಂದು ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿತು. ಜ್ಞಾನಪೀಠ ಪುರಸ್ಕೃತ ಸಾಹಿತಿ, ಕಡಲತಡಿಯ ಭಾರ್ಗವ ಬಿರುದಾಂಕಿತ ಕೋಟ ಶಿವರಾಮ ಕಾರಂತರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿ, ಪ್ರಬಂಧ ಮಂಡನೆ, ಗುರುವಂದನೆ, ಸನ್ಮಾನ, ಅಭಿನಂದನೆ, ಪ್ರಶಸ್ತಿ ಪ್ರಧಾನ ಮತ್ತು ಯಕ್ಷಗಾನ ಬಯಲಾಟ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳ್ಳಿಹಬ್ಬದ ಸ್ಮರಣ ಸಂಚಿಕೆ “ಯಕ್ಷಾಂಜಲಿ”ಯನ್ನು ಬಿಡುಗಡೆಗೊಳಿಸಲಾಯಿತು.

ಸುವರ್ಣ ಸಂಭ್ರಮ[ಬದಲಾಯಿಸಿ]

ಸಂಸ್ಥೆಯು ತನ್ನ ಸುವರ್ಣ ಸಂಭ್ರಮವನ್ನು ಅರ್ಥಪೂರ್ಣವಾಗಿ ಮತ್ತು ಅದ್ಧೂರಿಯಾಗಿ ಆಯೋಜಿಸಿತ್ತು. ಸುವರ್ಣ ವರ್ಷದ ಸಂದರ್ಭ ವರ್ಷ ಪೂರ್ತಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಫೆಬ್ರವರಿ 10, 2007ಕ್ಕೆ ಸುವರ್ಣೋತ್ಸವದ ಉದ್ಘಾಟನಾ ಸಮಾರಂಭ ನಡೆಸಲಾಯಿತು. ಮುಂದಿನ ವರ್ಷ ಅಂದರೆ 2008ರ ಫೆಬ್ರವರಿ ತಿಂಗಳಿನ 1 ರಿಂದ 10ನೇ ತಾರೀಖಿನವರೆಗೆ ಸುವರ್ಣೋತ್ಸವದ ಸಮಾರೋಪ ಸಮಾರಂಭ ನಡೆಸುವ ಮೂಲಕ ಸುವರ್ಣ ವರ್ಷ ಕಾರ್ಯಕ್ರಮಗಳಿಗೆ ತೆರೆ ಎಳೆಯಲಾಯಿತು. ಸುವರ್ಣ ವರ್ಷದಅವಧಿಯಲ್ಲಿ ಸಂಘದಕಲಾವಿದರಯಕ್ಷಗಾನ, ವೃತ್ತಿ ಮೇಳದ ಯಕ್ಷಗಾನ ಬಯಲಾಟ, ಹವ್ಯಾಸಿ ಯಕ್ಷಗಾನ ಸಂಘಗಳ ಯಕ್ಷಗಾನ ಸ್ಪರ್ಧೆ, ಮಕ್ಕಳ ಯಕ್ಷಗಾನ, ಯಕ್ಷಚಿತ್ರಕಲಾ, ಯಕ್ಷರಸಪ್ರಶ್ನೆ, ಯಕ್ಷರಂಗೋಲಿ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ತಾಳಮದ್ದಳೆ, ಯುಗಳ ಸಂವಾದ, ಯಕ್ಷ ಗಾನ-ನೃತ್ಯಕ್ಕೆ ಸಂಬಂಧಿಸಿದಂತೆ ಸುವರ್ಣ ಗಾನಲಹರಿ, ಯಕ್ಷನೃತ್ಯ ರಸಭಾವಾಭಿವ್ಯಕ್ತಿ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಎಲ್ಲಕ್ಕೂ ಹೆಚ್ಚಾಗಿ ಬಣ್ಣದ ವೇಷದಕಮ್ಮಟ, ವಠಾರ ಯಕ್ಷಗಾನ, ಪ್ರಬಂಧ ಮಂಡನೆ, ಗೋಷ್ಠಿಗಳು ನೆರವೇರಿದವು. ಯಕ್ಷಗಾನದ ಮೇರು ಕಲಾವಿದರ ಆದಿಯಾಗಿ ಹವ್ಯಾಸಿ ಕಲಾವಿದರನ್ನು ಸೇರಿಸಿದ ಕೀರ್ತಿ ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ, ಅಂಬಲಪಾಡಿ ಇದರದು. ಈ ಸುವರ್ಣ ಸಂಭ್ರಮದ ನೆನಪಿಗಾಗಿ, ದಾಖಲೆಯ ಉದ್ದೇಶದಿಂದ “ಹೊನ್ನ ಹೆಜ್ಜೆ” ಎಂಬ ಸ್ಮರಣ ಸಂಚಿಕೆಯನ್ನು ಸಂಸ್ಥೆಯು ಹೊರತಂದಿದೆ.