ಸದಸ್ಯ:Arpitha hb/WEP

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb|ಅಬ್ರಹಾಮ್ ಹೆರೋಲ್ಡ್ ಮಾಸ್ಲೋ thumb|ಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿ

ಬಾಲ್ಯ[ಬದಲಾಯಿಸಿ]

ಅಬ್ರಹಾಮ್ ಹೆರೊಲ್ಡ್ ಮಾಸ್ಲೊ[೧] ಅವರು ಅಮೆರಿಕಾದ ಪ್ರಖ್ಯಾತ ಮನಶಾಸ್ತ್ರಜ್ಞರು ಹಾಗು ತತ್ವಜ್ಞಾನಿಗಳಲ್ಲಿ ಒಬ್ಬರು. ಇವರು ಏಪ್ರಿಲ್ ೧, ೧೯೦೮ರಲ್ಲಿ ಅಮೆರಿಕಾದ ನ್ಯೂಯಾರ್ಕ್ ನಗರದ ಬ್ರೂಕ್ಲಿನ್ನಲ್ಲಿ ಹುಟ್ಟಿದರು‌. ಇವರ ತಂದೆ ತಾಯಿಯರ ಏಳು ಜನ ಮಕ್ಕಳಲ್ಲಿ ಇವರು ಹಿರಿಯವರು. ಬಡ ಕುಟುಂಬದಲ್ಲಿಯೇ ಹುಟ್ಟಿ ಬೆಳೆದ ಇವರು ವರ್ಣ ಮತ್ತು ಜನಾಂಗೀಯ ಭೇದದ ನಿಂದನೆಗೆ ತುತ್ತಾಗಿ ಹತಾಶೆಗೊಂಡರೂ, ಇದರ ವಿರುದ್ಧ ದನಿಯೆತ್ತಬೇಕೆಂಬ ನಿರ್ಧಾರ ಮಾಡಿದರು. ಮನೆಯಲ್ಲಿ ತಾಯಿಯೊಂದಿಗಿನ ಸಂಬಂಧವೂ ಹಳಸಿತ್ತು. ಗೆಳೆಯರು ಹೆಚ್ಚಿಲ್ಲದಿದ್ದರೂ, ಪುಸ್ತಕಗಳು ಮತ್ತು ಗ್ರಂಥಾಲಯದತ್ತಲೇ ಇವರ ಒಲವು.

ಶಿಕ್ಷಣ ಮತ್ತು ಕುಟುಂಬ[ಬದಲಾಯಿಸಿ]

ನ್ಯೂಯಾರ್ಕ್ನಲ್ಲಿಯೇ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಮುಗಿಸಿ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನದ ವಿಷಯದಲ್ಲಿ ಸಂಶೋಧನೆ ಮಾಡತೊಡಗಿದರು‌. ತಮ್ಮ ಮೊದಲ ಸಂಶೋಧನಾ ಪ್ರಬಂಧದ ಬಗ್ಗೆ ಅವರಿಗೇ ಹೇಸಿಗೆ ಎನಿಸಿ, ಅದನ್ನು ಹರಿದು ಹಾಕಿ, ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ತೆರಳಿ ಅಧ್ಯಯನ ಮುಂದುವರಿಸಿದರು‌. ಈ ಸಮಯದಲ್ಲಿಯೇ ೧೯೨೮ರಲ್ಲಿ ತಮ್ಮ ಸಂಬಂಧಿಯೇ ಆದ ಬೆರ್ತ ಅವರನ್ನು ವಿವಾಹವಾಗಿ, ಆಯನ್ ಮತ್ತು ಎಲ್ಲೆನ್ ಎಂಬ ಎರಡು ಮಕ್ಕಳ ತಂದೆಯಾದರು .

ಕೊಡುಗೆಗಳು[ಬದಲಾಯಿಸಿ]

ಮನುಷ್ಯನ ಮನಸ್ಸನ್ನು ಅರಿಯಲು ಅವರಿಗಿದ್ದ ಆಲೋಚನೆಗಳು , ಅವರ ಕೌಟುಂಬಿಕ ಜೀವನ ಹಾಗು ಅನುಭವಗಳಿಂದ ಪ್ರಭಾವಿತಗೊಂಡಿತ್ತು. ತಮ್ಮ ೩೩ನೇ ವಯಸ್ಸಿನಲ್ಲಿ ಎರಡನೇ ಮಹಾಯುದ್ಧದ ಭಯಾನಕ ದೃಶ್ಯ ಕಂಡು, ಆಂತರಿಕ ನೆಮ್ಮದಿ ಹಾಗು ಆತ್ಮವಿಶ್ವಾಸದ ಆಧಾರದ ಮೇಲೆ ಸ್ವಯಂವಾಸ್ತವೀಕರಣದ[೨] ಸಿದ್ಧಾಂತವನ್ನು ಮಂಡಿಸಲು ಮುಂದಾದರು‌. ತಮ್ಮ ಈ ಕ್ಷೇತ್ರವನ್ನು ಮಾನವತಾವಾದಿ ಮನೋವಿಜ್ಞಾನ[೩] ಎಂದು ಕರೆದರು‌. ರುತ್ ಬೆನೆಡಿಕ್ಟ್ ಮತ್ತು ಮ್ಯಾಕ್ಸ್ ವರ್ತಯ್ಮರ್ ಅವರಡಿಯಲ್ಲಿ ಈ ವಿಷಯದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳತೊಡಗಿದರು‌. ಈ ವಾದದ ಪ್ರಕಾರ ಮಾನವನ ಸ್ವಭಾವವು ಒಳ್ಳೆತನದಿಂದ ಕೂಡಿರುತ್ತದೇ ಹೊರತು ದುಷ್ಟತನದಿಂದಲ್ಲ. ಪ್ರತಿಯೊಬ್ಬರಿಗೂ ತಮ್ಮ ಸಾಮರ್ಥ್ಯಗಳನ್ನು ಸಾಧಿಸುವಂತಹ ಶಕ್ತಿಯಿದೆ ಎಂದು ಹೇಳುವ ಮೂಲಕ ಸಕಾರಾತ್ಮಕ ಅಂಶವನ್ನು ತಿಳಿಸಿಕೊಟ್ಟರು‌. ಇವರ ಬಹುಮುಖ್ಯ ಕೊಡುಗೆಯೆಂದರೆ ಅಗತ್ಯ ವರ್ಗಶ್ರೇಣಿ[೪]. ಇದನ್ನು ೧೯೪೩ರಲ್ಲಿ ತಮ್ಮ " ಎ ಥಿಯರಿ ಆಫ಼್ಹ ಹ್ಯುಮನ್ ಮೋಟಿವೇಶನ್" ಎಂಬ ಪತ್ರಿಕೆಯಲ್ಲಿ ಪ್ರಸ್ತಾಪಿಸಿದರು. ಈ ಕ್ರಮದ ಪ್ರಕಾರ, ಯಾವುದೇ ಮನುಷ್ಯ ಮೊದಲು ಹೆಚ್ಚು ಅವಶ್ಯಕ ಇರುವ ಅಗತ್ಯಗಳನ್ನು ಪೂರೈಸಿಕೊಂಡು ನಂತರ ಕಡಿಮೆ ಅವಶ್ಯಕವಿರುವ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾನೆ. ಶಾರೀರಿಕ, ಸುರಕ್ಷತೆ, ಆತ್ಮೀಯತೆ, ಪ್ರೀತಿ, ಗೌರವ, ಸ್ವಯಂ-ವಾಸ್ಥವೀಕರಣ/ ಸ್ವಯಂ-ಉತ್ಕೃಷ್ಟತೆ ಎಂಬ ಹಂತಗಳ ಅವಶ್ಯಕತೆಗಳಿವೆ. ಇವುಗಳನ್ನು ಪೂರೈಸುತ್ತಾ ಹೋದಂತೆ, ಜೀವನದಲ್ಲಿ ತೃಪ್ತಿಕರವಾಗಿರಬಹುದು. ಕ್ರಮದ ಕೊನೆಯಲ್ಲಿ ಸ್ವಯಂವಾಸ್ತವೀಕರಣವಿದ್ದು, ಈ ಹಂತದಲ್ಲಿ ಒಬ್ಬ ವ್ಯಕ್ತಿ ತನ್ನ ನಿಜವಾದ ಬಲಾಢ್ಯತೆಗಳನ್ನು ತಿಳಿದು, ಸಾಧನೆಗೈಯುತ್ತಾನೆ. ಮೊದಲಿಗೆ ಈ ಸಿದ್ದಾಂತವನ್ನು ಹೆಸರಾಂತ ವ್ಯಕ್ತಿಗಳಾದ ಆಲ್ಬರ್ಟ್ ಐನ್ಸ್ಟೈನ್, ಜೇನ್ ಆಡಮ್ಸ್, ಎಲೀನರ್ ರೊಸ್ಟೆಲ್ಟ್ ಮತ್ತು ಫ಼್ರೆಡೆರಿಕ್ ಡಗ್ಲಾಸ್ ಅಂತಹವರ ಮೇಲೆ ಪ್ರಯೋಗಿಸಿದರೂ, ನಂತರ ಸಾಮಾನ್ಯ ಜನರಿಗೆ ಅನ್ವಯಗೊಳಿಸಿದರು. ಹಲವಾರು ವಿಶ್ವವಿದ್ಯಾಲಯಗಳಲ್ಲಿ ಪ್ರಾದ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿದರು. ಆದರೆ ಇವರ ಈ ಸಿದ್ಧಾಂತದ ಬಗ್ಗೆ ಇರುವ ವಿಮರ್ಶೆಗಳೆಂದರೆ ವೈಜ್ಞಾನಿಕ ತಳಹದಿ ಇಲ್ಲದಿರುವುದು, ನಕರಾತ್ಮಕ ಸಾಧ್ಯತೆಗಳನ್ನು ಕಡೆಗಾಣಿಸಿರುವುದು ಮತ್ತು ಈ ಅವಶ್ಯಕತೆಗಳು ಮಾನವನ ಸ್ವಭಾವಕ್ಕೆ ಮುಖ್ಯ ಪ್ರೇರಕ ಅಂಶಗಳಾದರೂ ಆ ಶ್ರೇಣಿಯಲ್ಲಿಯೇ ಇರಬೇಕೆಂಬುದಿಲ್ಲ ಇಂತಹ ವಾದಗಳು. ಇವರ ಬರಹಗಳೆಂದರೆ 'ಮೋಟಿವೇಶನ್ ಅಂಡ್ ಪಸನಾಲಿಟಿ', 'ದಿ ಫ಼ಾರ್ದರ್ ರೀಚಸ್ ಆಫ್ ಹ್ಯೂಮನ್ ನೇಚರ್', 'ರಿಲಿಜಿಯನ್ಸ್, ವ್ಯಾಲ್ಯೂಸ್ ಅಂಡ್ ಪೀಕ್ ಎಕ್ಸ್ಪೀರಿಯೆಂನ್ಸ್ಸ್' ಇತ್ಯಾದಿ. ಈ ಮಾನವತಾವಾದವನ್ನು ಅನುಸರಿಸಿದ ಮತ್ತೊಬ್ಬ ಮುಖ್ಯ ಮನಶಾಸ್ತ್ರಜ್ಞರೆಂದರೆ ಕಾರ್ಲ್ ರೋಜರ್ಸ್[೫]. ಈ ಅಡಿಪಾಯವನ್ನು ಇಟ್ಟುಕೊಂಡು, ಇತರ ಮನಶಾಸ್ತ್ರಜ್ಞರೂ ಹೆಚ್ಚಿನ ಅಧ್ಯಯನ ನಡೆಸಲು ಅವಕಾಶ ಮಾಡಿಕೊಟ್ಟಿತು.ಈ ಕಾಲದ ಎಲ್ಲಾ ಮನಶಾಸ್ತ್ರಜ್ಞರೂ ಅಸಹಜ ವರ್ತನೆಗಳ ಮೇಲೆ ಅಧ್ಯಯನ ನಡೆಸುತ್ತಿರಬೇಕಾದರೆ, ಮಾನವತಾವಾದಿ ಮನಶಾಸ್ತ್ರಜ್ಞರು ಜನರ ಆರೋಗ್ಯಕರ ಬೆಳವಣಿಗೆಯತ್ತ ಗಮನಹರಿಸಿದರು.

ನಿಧನ[ಬದಲಾಯಿಸಿ]

ಜೂನ್ ೭, ೧೯೭೦ರಲ್ಲಿ ತಮ್ಮ ೬೨ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಕ್ಯಾಲಿಫೋರ್ನಿಯಾದ ಮೆನ್ಲೊ ಪಾರ್ಕ್ನಲ್ಲಿ ಕೊನೆಯುಸಿರೆಳೆದರು.


ಉಲ್ಲೇಖಗಳು[ಬದಲಾಯಿಸಿ]

<