ಸದಸ್ಯ:A j mahalaxmi/ನನ್ನ ಪ್ರಯೋಗಪುಟ6

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ, ಶಿರಳಗಿ

ಸ್ಥಳ[ಬದಲಾಯಿಸಿ]

ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಈ ಬಸದಿಯು ಸಿದ್ಧಾಪುರ ತಾಲೂಕಿನ ಶಿರಳಗಿ ಎಂಬ ಊರಿನಲ್ಲಿದೆ.ಸಿದ್ಧಾಪುರ ಪೇಟೆಯಿಂದ ಇಲ್ಲಿಗೆ ೬ ಕಿಲೋಮೀಟರ್ ದೂರ. ಈ ಪೇಟೆಯಿಂದ ಸೊರಬಕ್ಕೆ ೨೦ ಕಿ.ಮೀ ಹಾಗೂ ಪ್ರಸಿದ್ಧ ಸ್ಥಳ ಚಂದ್ರಗುತ್ತಿಗೆ ೧೦ ಕಿಲೋಮೀಟರ್ ದೂರವಿದೆ.

ಇತಿಹಾಸ[ಬದಲಾಯಿಸಿ]

ಬೀಳಗಿಯ ಅರಸ ಸೋಮಶೇಖರನ ಕ್ರಿ.ಶ ೧೭೭೦ ಒಂದು ತಾಮ್ರ ಶಾಸನವು ಇದನ್ನು ಶಿರುವಳಿಗೆ ಎಂದು ಕರೆದಿದೆ. ಹಿಂದೊಮ್ಮೆ ಈ ಸ್ಥಳವನ್ನು ಸಿದ್ಧಾಪುರ ದೇವಾಲಯದ ಶ್ರೀ ಗಂಗಾಧರೇಶ್ವರ ದೇವರಿಗೆ ಉಂಬಳಿ ಬಿಡಲಾಗಿತ್ತು. ಇಲ್ಲಿ ಕೆಲವು ವೀರಗಲ್ಲು ಮತ್ತು ಮಾಸ್ತಿ ಕಲ್ಲುಗಳನ್ನು ಕಾಣಬಹುದು. ಈ ಪರಿಸರದಲ್ಲಿ ತುಂಬಾ ಜೈನ ಕುಟುಂಬಗಳು ಇಲ್ಲದಿರುವುದರಿಂದ ಈ ಜಿನಾಲಯಕ್ಕೆ ಇಲ್ಲಿಯ ಪುರೋಹಿತರ ಕುಟುಂಬಗಳು ಬಂದು ಇಲ್ಲಿಯ ವಿಶೇಷ ಕಾರ್ಯಕ್ರಮಗಳಲ್ಲಿ, ಮುಖ್ಯವಾಗಿ ನೂಲ ಹುಣ್ಣಿಮೆಯ ದಿನ ಭಾಗವಹಿಸುತ್ತಾರೆ. ಈ ಬಸದಿಯು ಸೋಂದಾ ಮಠಕ್ಕೆ ಸೇರಿದೆ.ಈ ಬಸದಿಯನ್ನು ಪ್ರಸಿದ್ಧ ಕದಂಬ ವಂಶಸ್ಥರು ಅಥವಾ ಬೀಳಗಿಯ ಅರಸು ಮನೆತನದವರು ಸುಮಾರು ೮೦೦ ವರ್ಷಗಳ ಹಿಂದೆ ಕಟ್ಟಿಸಿದ್ದರು ಎಂದು ಹೇಳಲಾಗುತ್ತಿದೆ.

=ಒಳಾಂಗಣ ಶಿಲಾನ್ಯಾಸ[ಬದಲಾಯಿಸಿ]

ಪರಿಸರದಲ್ಲಿ ಕೆಲವು ಜೈನ ಮುನಿಗಳ ನಿಷಿಧಿಗಳು ಇದ್ದು ಅವುಗಳ ಪೈಕಿ ಕೆಲವಲ್ಲಿ ಬರವಣಿಗೆಯ ಫಲಕಗಳು ಇವೆ.ಗರ್ಭಗೃಹ ಮಾತ್ರ ಶಿಲಾಮಯವಾಗಿದ್ದು ಉಳಿದಂತೆ ಹಂಚಿನ ಮಾಡನ್ನು ಹೊಂದಿದೆ. ಗರ್ಭಗೃಹದಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿಯ ಮೂಲಬಿಂಬವಲ್ಲದೆ, ಶ್ರೀ ಚಂದ್ರನಾಥ, ಶಾಂಥಿನಾಥ, ಪಾರ್ಶ್ವನಾಥ, ರತ್ನತ್ರಯ ಮೂರ್ತಿಗಳು ಮತ್ತು ಪಂಚಲೋಹದ ೨೪ ತೀರ್ಥಂಕರರ ಮೂರ್ತಿಗಳು ಹಾಗೂ ಮಾತೆ ಪದ್ಮಾವತಿಯ ಮೂರ್ತಿ, ಜ್ವಾಲಿನಿ, ಕೂಷ್ಮಾಂಡಿನಿ ದೇವಿಯರ ಮೂರ್ತಿಗಳಿವೆ.ಬಸದಿಯನ್ನು ಪ್ರವೇಶಿಸುವಾಗ ದ್ವಾರಬಂಧನ ಮೇಲ್ಗಡೆಯಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ, ಕೆಳಭಾಗದಲ್ಲಿ ದ್ವಾರಪಾಲಕರ ಮೂರ್ತಿಗಳಿವೆ. ಒಳಗಿನ ಪ್ರಾರ್ಥನಾ ಮಂಟಪದಲ್ಲಿ ಘಂಟೆಗಳು, ಜಾಗಟೆಗಳು ಮತ್ತು ಪಂಚವಾದ್ಯಗಳನ್ನು ಜೋಡಿಸಲಾಗಿದೆ. ಇಲ್ಲಿ ಎಲ್ಲಾ ದೇವರಿಗೆ ಪ್ರತಿದಿನ ಪೂಜೆ ನಡೆಯುತ್ತದೆ. ಪದ್ಮಾವತಿ ದೇವಿಯ ಶಿಲೆಯ ಮೂರ್ತಿ ಇದೆ. ಇದಕ್ಕೆ ಪ್ರತಿದಿನ ಅಲಂಕರಿಸಿ ಪೂಜೆ ಮಾಡುತ್ತಾರೆ. ಅಮ್ಮನವರು ಪೂರ್ವಕ್ಕೆ ಮುಖ ಮಾಡಿ ಆಸೀನರಾಗಿದ್ದಾರೆ. ಕಾಲಿನ ಬಳಿ ಸರ್ಪ ಇದೆ.ಒಂಭತ್ತು ಬಾಯಿಗಳುಳ್ಳ ನಾಗಫಣದ ಕೆಳಗಿರುವ ಶ್ರೀ ಪಾರ್ಶ್ವನಾಥ ಸ್ವಾಮಿಯ ಖಡ್ಗಾಸನ ಭಂಗಿಯ ಶಿಲಾಮೂರ್ತಿಯ ೧೫ ಇಂಚು ಎತ್ತರವಿದೆ. ಬಸದಿಯ ಎಡಭಾಗದಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ಅಲ್ಲಿ ಪಂಚಲೋಹದ ಮೂರ್ತಿ ಇದೆ. ಗುಂಡು, ತ್ರಿಶೂಲಗಳು ಇವೆ. ೫ ನಾಗರಕಲ್ಲುಗಳು ಇವೆ.[೧]

ಪೂಜಾ ವಿಧಾನ[ಬದಲಾಯಿಸಿ]

ಸ್ವಾಮಿಗೆ ಎಲ್ಲಾ ರೀತಿಯ ಅಭಿಷೇಕ ಪೂಜಾದಿಗಳನ್ನು ಮಾಡಲಾಗುತ್ತದೆ. ಮೂಲಮಂತ್ರ ಜಪ ಮಾಡುವುದು. ಕಲಿಕುಂಡ ಆರಾಧನೆ ಮತ್ತು ಸಮಯ ಸಂದರ್ಭಕ್ಕೆ ತಕ್ಕಂತೆ ವಿಶೇಷ ಪೂಜೆ ಮಾಡಲಾಗುತ್ತದೆ. ಹಿಂದುಗಳು ಇಲ್ಲಿಗೆ ಬಂದು ಕಾಣಿಕೆ, ಹರಕೆ ಪೂಜೆ ಮಾಡಿಸುತ್ತಾರೆ. ಬೆಳಿಗ್ಗೆ ೮ ಗಂಟೆಗೆ ಪೂಜೆ, ಮತ್ತು ಸಂಜೆ ೬:೩೦ ರಿಂದ ೮:೦೦ ರ ಒಳಗೆ ಆರತಿ, ಭಜನೆ ಆಗುತ್ತದೆ. ಪ್ರತಿವರ್ಷ ಯುಗಾದಿ ಹಬ್ಬದ ನಂತರ ಶುಕ್ಲಪಕ್ಷದಲ್ಲಿ ವಾರ್ಷಿಕೋತ್ಸವ ನಡೆಯುತ್ತದೆ.ಜೈನಧರ್ಮದ ಎಲ್ಲಾ ಹಬ್ಬಗಳನ್ನು ಇಲ್ಲಿ ಆಚರಿಸಲಾಗುತ್ತದೆ.ಕ್ಷೇತ್ರ ಪಾಲನ ಮಹಿಮೆ ಅಪಾರ. ಬೇಡಿದ್ದನ್ನು ಕೊಡುವ ಶಕ್ತಿ ಆತನದು. ಎಲ್ಲರ ಮನೆ ಮೇಲೆ ಈತನ ರಕ್ಷಣೆ ಇದೆ. ಇವರೆಲ್ಲರಿಗೂ ಈ ಕ್ಷೇತ್ರಪಾಲನ ಮೇಲೆ ಭಯ ಭಕ್ತಿ ಇದೆ.

ಉಲ್ಲೇಖ[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್. p. ೪೧೨-೪೧೩.