ಸದಸ್ಯ:223.186.13.246/WEP 2018-19 dec

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿದೇಶಗಳಿಗೆ ತೆರಳುವ ತಮ್ಮ ದೇಶದ ನಾಗರಿಕರಿಗೆ ಎಲ್ಲಾ ದೇಶಗಳೂ ಆಗಾಗ ಪ್ರಯಾಣ ಮುನ್ನೆಚ್ಚರಿಕೆ ನೀಡುವುದುಂಟು. ದೇಶದ ನಾಗರಿಕನೊಬ್ಬ ವಿದೇಶಕ್ಕೆ ಹೊರಟ ಸಮಯದಲ್ಲಿ ಆ ನಿರ್ದಿಷ್ಟ ದೇಶದಲ್ಲಿ ಪ್ರತಿಕೂಲ ಹವಾಮಾನ, ಭದ್ರತಾ ಲೋಪ, ಬಂಡುಕೋರರ ದಾಳಿ ಅಥವಾ ಮಾರಣಾಂತಿಕ, ಸಾಂಕ್ರಾಮಿಕ ಕಾಯಿಲೆಗಳು ಪತ್ತೆಯಾಗಿದ್ದಲ್ಲಿ ಸರ್ಕಾರಗಳು ಇಂತಹ ಮುನ್ಸೂಚನೆ ನೀಡುತ್ತವೆ.

ವಿಶ್ವಬ್ಯಾಂಕ್‌ ಪ್ರಕಾರ ಭಾರತ ಅತಿ ಹೆಚ್ಚು ವಿದೇಶಿ ಹಣ ಸ್ವೀಕರಿಸುವ ದೇಶ. ಪ್ರತಿ ವರ್ಷ ಸುಮಾರು 4.54 ಲಕ್ಷ ಕೋಟಿ ರೂ. ವಿದೇಶಿ ಹಣ ಭಾರತಕ್ಕೆ ರವಾನೆಯಾಗುತ್ತದೆ. ನಮ್ಮ ದೇಶದಿಂದ ವಿದ್ಯಾವಂತರಷ್ಟೇ ಅಲ್ಲ, ಅವಿದ್ಯಾವಂತರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿವರ್ಷ ಉದ್ಯೋಗ ಅರಸಿ ವಿದೇಶಗಳಿಗೆ ಹೋಗುತ್ತಾರೆ. ಅರಬ್‌ ದೇಶಗಳು, ಅಮೆರಿಕ, ಆಸ್ಟ್ರೇಲಿಯಾ, ಯುರೋಪ್‌ ರಾಷ್ಟ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಹೋಗುತ್ತಾರೆ. ಇವರಲ್ಲಿ ಬಹುತೇಕರು ವಿದ್ಯಾರ್ಥಿಗಳು, ಇಂಜಿನಿಯರ್‌ಗಳು, ಡಾಕ್ಟರ್‌ಗಳು, ದಾದಿಯರು ಮತ್ತು ಕೂಲಿ ಕಾರ್ಮಿಕರಾಗಿರುತ್ತಾರೆ. ಇವರೆಲ್ಲರ ಗುರಿ ಒಳ್ಳೆಯ ಕೆಲಸಕ್ಕೆ ಸೇರಿ ಕೈತುಂಬಾ ಹಣ ಸಂಪಾದಿಸುವುದು. ತಾವು ಆರಿಸಿಕೊಂಡಿರುವ ವಿದೇಶ ತಮ್ಮ ಕನಸುಗಳನ್ನು ಪೊರೆಯುವ ಸುರಕ್ಷಿತ ದೇಶ ಎಂದು ಇವರು ನಂಬಿಕೊಂಡಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರವೃತ್ತಿ ನಾಟಕೀಯವಾಗಿ ಬದಲಾಗುತ್ತಿದೆ. ಇದಕ್ಕೆ ಕಾರಣ ಹೊರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಘರ್ಷಣೆಗಳು, ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗಗಳು ಮತ್ತು ಭದ್ರತಾ ಲೋಪ.

ಪ್ಯೂ ಎಂಬ ಏಜೆನ್ಸಿ ನಡೆಸಿದ ಸಮೀಕ್ಷೆಯ ಪ್ರಕಾರ ಗಲ್ಫ್ ರಾಷ್ಟ್ರಗಳಿಂದ ಪ್ರತಿವರ್ಷ ಭಾರತಕ್ಕೆ ರವಾನೆಯಾಗುವ ಹಣ ಸುಮಾರು 2 ಲಕ್ಷ ಕೋಟಿ ರೂಪಾಯಿ. ಇದು ಎಲ್ಲಾ ದೇಶಗಳಿಂದ ಭಾರತಕ್ಕೆ ಹರಿದುಬರುವ ಹಣದ ಸುಮಾರು ಅರ್ಧದಷ್ಟು. 2012ರಲ್ಲಿ ಭಾರತಕ್ಕೆ ವಿದೇಶಗಳಿಂದ ಒಟ್ಟು 4.4 ಲಕ್ಷ ಕೋಟಿ ರೂ. ಹಣ ಬಂದಿತ್ತು. ಸುಮಾರು 60ರಿಂದ 70 ಲಕ್ಷ ಭಾರತೀಯರು ಮಧ್ಯ ಪೂರ್ವ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿಂದ ಅವರು ಭಾರತದಲ್ಲಿರುವ ತಮ್ಮ ಕುಟುಂಬಕ್ಕೆ ಕಳುಹಿಸುತ್ತಾರೆ. ಎಷ್ಟೋ ಭಾರತೀಯ ಕುಟುಂಬಗಳು ವಿದೇಶಗಳಲ್ಲಿರುವ ತಮ್ಮ ಸದಸ್ಯರು ಕಳಿಸುವ ಹಣವನ್ನೇ ನೆಚ್ಚಿಕೊಂಡಿವೆ. ಹೀಗೆ ಹಣ ಕಳುಹಿಸುವವರು ಭಾರತದ ಆರ್ಥಿಕತೆಗೂ ಗಣನೀಯ ಕೊಡುಗೆ ನೀಡುತ್ತಿದ್ದಾರೆ.

ಪರಿಸ್ಥಿತಿ ಈಗ ಮೊದಲಿನಂತಿಲ್ಲ

ಮಧ್ಯ ಪೂರ್ವ ರಾಷ್ಟ್ರಗಳಲ್ಲಿ ಇಸ್ಲಾಮಿಕ್‌ (ಐಸಿಸ್‌) ಉಗ್ರರ ಉಪಟಳ ಮಿತಿಮೀರಿದಂತೆಲ್ಲ ಜನತೆಯ ಬದುಕು ದುಸ್ತರವಾಗುತ್ತಿದೆ. ಗಲ್ಫ್ ರಾಷ್ಟ್ರಗಳ ಸಮೃದ್ಧಿ, ಐಶಾರಾಮ ಹಾಗೂ ದೊಡ್ಡ ಸಂಬಳದ ಬಗ್ಗೆ ಭಾರತೀಯರು ಕಾಣುತ್ತಿದ್ದ ಕನಸು ಐಸಿಸ್‌ ಉಗ್ರರ ಮಾರಣಾಂತಿಕ ದಾಳಿ ಮತ್ತು ಸರ್ಕಾರ ಹಾಗೂ ಉಗ್ರರ ನಡುವಿನ ಹೋರಾಟಗಳಿಂದ ಕಮರುತ್ತಿದೆ.

ಐಸಿಸ್‌ ನಡೆಸುವ ಅಪಹರಣಗಳು, ಜನಾಂಗೀಯ ಘರ್ಷಣೆಗಳು, ಕಾನೂನು ವಿರೋಧಿ ಕೃತ್ಯಗಳು ಭಾರತದಲ್ಲೂ ಐಸಿಸ್ಸನ್ನು ನಿಷೇಧಿಸುವಂತೆ ಮಾಡಿದೆ. ಭದ್ರತಾ ದೃಷ್ಟಿಯಿಂದ ತೀವ್ರ ಅನಿಶ್ಚಯತೆ ಎದುರಿಸುತ್ತಿರುವ ಇರಾಕ್‌, ಸಿರಿಯಾ, ಲಿಬಿಯಾಗಳಿಗೆ ಹೋಗದಂತೆ ಭಾರತ ಸರ್ಕಾರ ಎಚ್ಚರಿಕೆ ನೀಡುತ್ತಿದೆ. ಅಲ್ಲದೇ ಅಲ್ಲಿ ನೆಲೆಸಿರುವವರಿಗೆ ಭಾರತಕ್ಕೆ ವಾಪಸ್‌ ಬರುವಂತೆಯೂ ಹೇಳಿದೆ. ಆದರೆ ಉದ್ಯೋಗ, ಹಣ ಸಂಪಾದನೆ ಮೊದಲಾದವುಗಳಿಗೆ ಕಟ್ಟುಬಿದ್ದಿರುವ ಹಲವು ಭಾರತೀಯರು ಅಭದ್ರತೆ ನಡುವೆಯೇ ಆ ದೇಶಗಳಲ್ಲಿ ಇನ್ನೂ ಜೀವನ ನಡೆಸುತ್ತಿದ್ದಾರೆ. ಹೊರದೇಶಗಳಲ್ಲೇ ಉಳಿಯುವುದು ಅವರ ಸ್ವಂತ ನಿರ್ಧಾರವಾದರೂ ಕೂಡ, ಅವರಿಗೇನಾದರೂ ತೊಂದರೆಯಾದರೆ ಅದಕ್ಕೆ ಉತ್ತರಿಸುವ ಇಕ್ಕಟ್ಟಿಗೆ ಭಾರತ ಸರ್ಕಾರ ಸಿಲುಕುತ್ತದೆ ಎಂಬುದು ಅವರಿಗೆ ಗೊತ್ತಿರಲಿಕ್ಕಿಲ್ಲ. ದೇಶದ ಪ್ರತಿ ನಾಗರಿಕನ ರಕ್ಷಣೆಯ ಹೊಣೆ ಹೊತ್ತಿರುವ ಸರ್ಕಾರಕ್ಕೆ ಇದು ನಿಜಕ್ಕೂ ಸಂಕಟದ ಸ್ಥಿತಿ.

ಸರ್ಕಾರಕ್ಕೆ ರಕ್ಷಣೆಯ ಹೊಣೆ

ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಭಾರತೀಯರನ್ನು ನಮ್ಮ ದೇಶ ಯಾವತ್ತೂ ರಕ್ಷಿಸುತ್ತಲೇ ಬಂದಿದೆ. 1990ರ ಪರ್ಷಿಯಾದ ಗಲ್ಫ್ ಯುದ್ಧದ ವೇಳೆ 1,11,000 ಜನರನ್ನು ರಕ್ಷಿಸಿ ಅಮನ್‌ನಿಂದ ಮುಂಬೈಗೆ ಏರ್‌ ಇಂಡಿಯಾ ವಿಮಾನದಲ್ಲಿ ಕರೆತರಲಾಗಿತ್ತು. ಸುಮಾರು 4,111 ಕಿ.ಮೀ. ದೂರದ ಅಮನ್‌ಗೆ 1990ರ ಆಗಸ್ಟ್‌ 13ರಿಂದ ಅಕ್ಟೋಬರ್‌ 11ರವರೆಗೆ 59 ದಿನಗಳ ಕಾರ್ಯಾಚರಣೆಯಲ್ಲಿ ಏರ್‌ ಇಂಡಿಯಾ ತನ್ನ ವಿಮಾನಗಳನ್ನು 488 ಬಾರಿ ಕಳಿಸಿ ಜೋರ್ಡಾನ್‌ನಲ್ಲಿ ಸಿಲುಕಿದ್ದ ಜನತೆಯನ್ನು ರಕ್ಷಿಸಿತ್ತು. ನಾಗರಿಕ ವಿಮಾನ ಸಂಸ್ಥೆಯೊಂದು ಅತಿ ಹೆಚ್ಚು ಜನರನ್ನು ಸ್ಥಳಾಂತರ ಮಾಡಿದ್ದಕ್ಕಾಗಿ ಏರ್‌ ಇಂಡಿಯಾ ಗಿನ್ನೆಸ್‌ ದಾಖಲೆಗೂ ಸೇರಿತು.

ಇತ್ತೀಚೆಗಷ್ಟೇ ಯೆಮನ್‌ನಲ್ಲಿ ಗಲಭೆ ನಡೆಯುತ್ತಿದ್ದ ವೇಳೆ ಭಾರತೀಯರನ್ನು ರಕ್ಷಿಸುವ ಸಲುವಾಗಿ ತನ್ನ ನೌಕಾ ಹಡಗನ್ನು ಗುಂಡಿನ ಮಳೆ ಸುರಿಯುತ್ತಿದ್ದ ಅಡೆನ್‌ಗೆ ಕಳಿಸಿ ಸಾವಿರಾರು ಜನರನ್ನು ಭಾರತ ರಕ್ಷಿಸಿತು. ಅಡೆನ್‌ನಿಂದ ಜನರನ್ನು ನೌಕಾ ಹಡಗಿನಲ್ಲಿ ಜಿಬೋತಿಗೆ ಸಾಗಿಸಿ ನಂತರ ಅವರನ್ನು ವಾಯುಪಡೆಯ ವಿಮಾದಲ್ಲಿ ಭಾರತಕ್ಕೆ ಸುರಕ್ಷಿತವಾಗಿ ತರೆತರಲಾಯಿತು. ಈ ರೀತಿಯ ರಕ್ಷಣಾ ಕಾರ್ಯಗಳು ಹಿಂದೆಯೂ ನಡೆದಿದ್ದವು. 2003ರಲ್ಲಿ ಅಮೆರಿಕವು ಇರಾಕ್‌ ಮೇಲೆ ಆಕ್ರಮಣ ಮಾಡಿದ ಸಂದರ್ಭದಲ್ಲಿ, 2006ರ ಲೆಬೆನಾನ್‌ ದಾಳಿ ವೇಳೆ ಮತ್ತು 2011ರಲ್ಲಿ ಲಿಬಿಯಾ ಬಿಕ್ಕಟ್ಟು ಸಂದರ್ಭದಲ್ಲೂ ಭಾರತ ಆ ದೇಶಗಳಲ್ಲಿದ್ದ ತನ್ನ ಜನರನ್ನು ರಕ್ಷಣೆ ಮಾಡಿದೆ.

ಸರ್ಕಾರದ ಮಾತು ಕೇಳಿ

ಇಷ್ಟಾದರೂ, ಸರ್ಕಾರದ ಆದೇಶ, ಸೂಚನೆಗಳನ್ನು ಮೀರಿ ಹಣ ಮಾಡುವ ಆಸೆಯಿಂದ ಸಮಸ್ಯೆಪೀಡಿತ ರಾಷ್ಟ್ರಗಳಿಗೆ ತೆರಳಿ ಸಮಸ್ಯೆಗೆ ಸಿಲುಕುವ ಜನರಿಗೆ ಕೊರತೆ ಇಲ್ಲ. ಇದಕ್ಕೆ ಉತ್ತಮ ನಿದರ್ಶನವೆಂದರೆ, ಲಿಬಿಯಾದ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ 4 ಭಾರತೀಯ ಉಪನ್ಯಾಸಕರನ್ನು ಐಸಿಸ್‌ ಅಪಹರಿಸಿತ್ತು. ಅವರಲ್ಲಿ ಇಬ್ಬರನ್ನು ಬಿಡುಗಡೆ ಮಾಡುವಲ್ಲಿ ಭಾರತ ಸಫ‌ಲವಾಯಿತು. ಆದರೆ ಇನ್ನುಳಿದವರ ಸ್ಥಿತಿ ಏನಾಗಿದೆ ಎಂಬುದು ಇನ್ನೂ ತಿಳಿದಿಲ್ಲ.

ಭಾರತೀಯ ನಾಗರಿಕರಾದ ನಾವು ನಮ್ಮ ದೇಶ ನೀಡುವ ಆದೇಶಕ್ಕೆ ತಲೆಬಾಗಬೇಕು. ದೇಶ ನೀಡಿದ ಸಲಹೆಯನ್ನೂ ಮೀರಿ ಗಲಭೆಪೀಡಿತ ದೇಶಗಳಿಗೆ ಹೋಗಿ ಸಿಲುಕಿದರೆ ಅಥವಾ ರೋಗಪೀಡಿತ ದೇಶಗಳಿಗೆ ಹೋದರೆ ಅವರನ್ನು ರಕ್ಷಿಸುವ ಅನಗತ್ಯ ಹೊಣೆಗಾರಿಕೆ ಸರ್ಕಾರದ ಮೇಲೆ ಬೀಳುತ್ತದೆ.