ವ್ಯಕ್ತಿತ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವ್ಯಕ್ತಿತ್ವವು ಒಬ್ಬ ವ್ಯಕ್ತಿಯ ಭಾವನಾತ್ಮಕ, ಮನೋಭಾವದ, ಮತ್ತು ವರ್ತನಾತ್ಮಕ ಪ್ರತಿಕ್ರಿಯೆ ಮಾದರಿಗಳ ನಿರ್ದಿಷ್ಟ ಸಂಯೋಜನೆ. ವಿವಿಧ ವ್ಯಕ್ತಿತ್ವ ಸಿದ್ಧಾಂತಿಗಳು ತಮ್ಮ ಸೈದ್ಧಾಂತಿಕ ನಿಲುವನ್ನು ಆಧರಿಸಿ ಶಬ್ದಕ್ಕೆ ತಮ್ಮ ಸ್ವಂತ ವ್ಯಾಖ್ಯಾನವನ್ನು ಮಂಡಿಸುತ್ತಾರೆ. ಫ಼್ರಾಯ್ಡ್ ಮತ್ತು ಎರಿಕ್‍ಸನ್‍ನಂತಹ ಮನೋವಿಜ್ಞಾನಿಗಳು ವ್ಯಕ್ತಿತ್ವ ಸಿದ್ಧಾಂತಗಳನ್ನು ಪ್ರಸ್ತಾಪಿಸಲು ಪ್ರಯತ್ನಿಸಿದ್ದಾರೆ.

ಪ್ರತಿಯೊಬ್ಬ ಮನುಷ್ಯನ ವ್ಯಕ್ತಿತ್ವದ ಗುಣಲಕ್ಷಣಗಳು ಅವನ ಆಲೋಚನೆ, ಭಾವನೆ, ವರ್ತನೆಗಳ ಮೇಲೆ ನಿರ್ದಾರವಾಗಿದೆ.

ಸಿದ್ಧಾಂತ

ಒಂದೇ ವ್ಯಾಖ್ಯಾನ ಎಲ್ಲಾ ವ್ಯಕ್ತಿತ್ವ ಸಿದ್ಧಾಂತಿಗಳು ಸ್ವೀಕಾರಾರ್ಹ ಆದರೂ, ನಾವು ವ್ಯಕ್ತಿತ್ವ ವ್ಯಕ್ತಿಯ ವರ್ತನೆಗೆ ಸ್ಥಿರತೆ ಮತ್ತು ಪ್ರತ್ಯೇಕತೆ ಎರಡೂ ನೀಡುವ ತುಲನಾತ್ಮಕವಾಗಿ ಶಾಶ್ವತ ಲಕ್ಷಣಗಳು ಮತ್ತು ಅನನ್ಯ ಗುಣಲಕ್ಷಣಗಳು ಒಂದು ಮಾದರಿ ಎಂದು ಹೇಳಬಹುದು.

ವ್ಯಕ್ತಿತ್ವದ ಅಂಗಗಳು/ವಿಭಜನೆಗಳು ಅಥವಾ ಘಟಕಗಳು

  1. ಸ್ಥಿರತೆ
  2. ಮಾನಸಿಕ ಮತ್ತು ದೈಹಿಕ
  3. ಅನೇಕ ಹಾವಭಾವಗಳು/ಅಭಿವ್ಯಕ್ತಿಗಳು
  4. ಇದು ವ್ಯಕ್ತಿಯ ವರ್ತನೆಗಳ ಹಾಗೂ ನಡವಳಿಕೆಯ ಮೇಲೆ ಪ್ರಭಾವ ಬೀರುತ್ತದೆ.

ವ್ಯಕ್ತಿತ್ವ ಸಾಮಾನ್ಯವಾಗಿ ಬಿಗ್ ಐದು ಎಂಬ ಭಾಗಗಳಾಗಿ ವಿಭಾಗಿಸಲಾಗಿದೆ. ಅವುಗಳು

  1. ಅನುಭವದ ಮುಕ್ತತೆ
  2. ಮನಸ್ಸಾಕ್ಷಿ
  3. ಬಹಿರ್ಮುಖತೆ
  4. ಒಪ್ಪಿಕೊಳ್ಳುವಿಕೆ
  5. ನ್ಯೂರೋಟಿಸಿಸಂ (ಅಥವಾ ಭಾವನಾತ್ಮಕತೆ)

ವ್ಯಕ್ತಿತ್ವ ದೋಷದ ಕಾಯಿಲೆಗಳು

ಶರೀರದ ಹೊರರೂಪ, ಉಡುಗೆ-ತೊಡುಗೆ, ಜ್ಞಾನ, ತಿಳುವಳಿಕೆ, ಧೋರಣೆ, ಬುದ್ಧಿಚಾತುರ್ಯ, ಭಾವನೆಗಳನ್ನು ಪ್ರಕಟಿಸುವ ರೀತಿ, ಸ್ವಾರ್ಥ-ಪರಹಿತಕ್ಕೆ ಎಷ್ಟು ಆದ್ಯತೆ, ನೈತಿಕ ಮೌಲ್ಯಗಳು, ಯಾವುದೇ ಸಂದರ್ಭ-ಸನ್ನಿವೇಶ ವಿಷಯಕ್ಕೆ ಪ್ರಕಟವಾಗುವ ಪ್ರತಿಕ್ರಿಯೆಗಳು, ಜೀವನದ ಗುರಿ/ಉದ್ದೇಶಗಳೆಲ್ಲ ಸೇರಿ “ವ್ಯಕ್ತಿತ್ವ” ಎನಿಸಿಕೊಳ್ಳುತ್ತದೆ. ಆರೋಗ್ಯಕರ ಹಾಗೂ ಒಳ್ಳೆಯ ವ್ಯಕ್ತಿತ್ವವಿದ್ದರೆ, ವ್ಯಕ್ತಿ ತಾನೂ ಕ್ಷೇಮವಾಗಿ, ಇತರರೂ ಕ್ಷೇಮವಾಗಿರಲು ಕೆಲಸ ಮಾಡಬಲ್ಲ. ಬದುಕಿನಲ್ಲಿ ಸ್ವಾವಲಂಬಿಯಾಗಿ, ಉಪಯುಕ್ತವಾಗಿ ಬಹುತೇಕ ಜನರೊಡನೆ ಹೊಂದಿಕೊಂಡು, ಪ್ರಗತಿಯೆಡೆಗೆ ಸಾಗಬಲ್ಲ. ವ್ಯಕ್ತಿತ್ವದ ವಿಕಾಸ ಹುಟ್ಟುವ ಮೊದಲೇ ಪ್ರಾರಂಭವಾಗಿ (ಜೀನ್‍ಗಳ ಪ್ರಭಾವ) ಹುಟ್ಟಿದ ಮೇಲೆ 20 ವರ್ಷಗಳ ಅವಧಿಯಲ್ಲಿ ಹಂತ-ಹಂತವಾಗಿ ನಡೆಯುತ್ತದೆ. ಅನುವಂಶೀಯತೆ, ತಂದೆ ತಾಯಿಗಳ ಲಾಲನೆ-ಪಾಲನೆ,ಕುಟುಂಬದ ಪರಿಸರ, ನೆರೆಹೊರೆ, ಶಾಲೆ-ಶಿಕ್ಷಣ, ಸಹಪಾಠಿಗಳು, ಆಗಿಂದಾಗ್ಯೆ ಘಟಿಸುವ ಘಟನೆಗಳು, ಅನಾರೋಗ್ಯಗಳು, ಆರ್ಥಿಕ ಪರಿಸ್ಥಿತಿಗಳು, ವ್ಯಕ್ತಿತ್ವ ವಿಕಸನದಲ್ಲಿ ಪಾಲ್ಗೊಳ್ಳುತ್ತದೆ.

ಕೆಲವರಲ್ಲಿ ಈ ವ್ಯಕ್ತಿತ್ವ ವಿಕಸನ ಸರಿಯಾಗಿ ನಡೆಯದೆ, ಅನೇಕ ನ್ಯೂನ್ಯತೆ, ಕೊರತೆಗಳು ಸೇರಿಕೊಂಡು, ವ್ಯಕ್ತಿತ್ವ ದೋಷ ಉಂಟಾಗುತ್ತದೆ. ಇದರಿಂದ ವ್ಯಕ್ತಿಯೂ, ಮನೆಯವರೂ, ಸಮಾಜದವರೂ ಅನೇಕ ಕಷ್ಟನಷ್ಟ ನೋವುಗಳಿಗೆ ತುತ್ತಾಗಬೇಕಾಗುತ್ತದೆ.

ವ್ಯಕ್ತಿತ್ವ ದೋಷದ ಹಲವು ನಮೂನೆಗಳು ಮತ್ತು ಲಕ್ಷಣಗಳು

  1. ಸಂಶಯಪೀಡಿತ ವ್ಯಕ್ತಿತ್ವ: ಯಾರಲ್ಲೂ ನಂಬಿಕೆ ವಿಶ್ವಾಸಗಳಿಲ್ಲ, ಇತರರು ತನ್ನ ಹಿತಕ್ಕೆ ಕ್ಷೇಮಕ್ಕೆ ವಿರುದ್ಧವಾಗಿದ್ದಾರೆ. ತನಗೆ ಕೆಟ್ಟದ್ದನ್ನು ಮಾಡಲು, ಹಾನಿಯುಂಟು ಮಾಡಲು ಸಿದ್ಧರಾಗಿದ್ದಾರೆ. ತನಗೆ ಸೋದರ-ಸೋದರಿ, ಗಂಡ ಅಥವಾ ಹೆಂಡತಿ, ಸ್ನೇಹಿತರು, ಸಹೋದ್ಯೋಗಿಗಳು ಪ್ರಾಮಾಣಿಕರಾಗಿಲ್ಲ, ನಿಷ್ಠರಾಗಿಲ್ಲ, ಮೋಸ ವಂಚನೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತಿತ್ವದ ಒಂದು ಭಾಗವಾಗಿ ಬಿಡುತ್ತದೆ. ತಾನೇ ಸರಿ, ತಾನು ಮಾಡುವುದೇ ಸರಿ, ಇತರರು ಸರಿಯಾಗಿ ಮಾಡುವುದಿಲ್ಲ ಎಂಬ ಧೋರಣೆ ಇರುತ್ತದೆ. ಬದಲಾವಣೆ ಇಷ್ಟಪಡುವುದಿಲ್ಲ, ಜಿಗುಟುತನ ಇರುತ್ತದೆ.
  2. ಅತಿ ಅಚ್ಚುಕಟ್ಟುತನದ ವ್ಯಕ್ತಿತ್ವ: ಎಲ್ಲವೂ ಪರಿಪೂರ್ಣವಾಗಿರಬೇಕು, ಪ್ರತಿಯೊಂದೂ ಅಚ್ಚುಕಟ್ಟಾಗಿರಬೇಕು, ಸಮಯಪಾಲನೆಯಾಗಬೇಕು, ಏನು ಕೆಲಸ ಮಾಡಿದರೂ ಅದು ಏ-ಒನ್ ಆಗಿರಬೇಕು, ಪ್ರತಿಯೊಂದು ವಸ್ತು ಎಲ್ಲಿರಬೇಕೋ ಅಲ್ಲಿರಬೇಕು, ವ್ಯವಸ್ಥೆ ಚೆನ್ನಾಗಿರಬೇಕು, ಸ್ವಲ್ಪ ಕೂಡ ಹೆಚ್ಚುಕಡಿಮೆಯಾಗಬಾರದು, ಎಲ್ಲಿಯೂ ಕಸ-ಕಡ್ಡಿ-ಕೊಳಕಿರಬಾರದು. ಹಿಮದಂತೆ ಸ್ವಚ್ಛವಾಗಿರಬೇಕು, ೧೦೦% ಶಿಸ್ತು ಇರಬೇಕೆಂದು ಬಯಸುತ್ತಾರೆ. ಹಾಗೇ ನಡೆದುಕೊಳ್ಳಲು ಇಷ್ಟಪಡುತ್ತಾರೆ. ಇದು ಒಂದು ಮಿತಿಯಲ್ಲಿದ್ದರೆ ಚೆನ್ನ. ಆದರೆ ಮಿತಿಮೀರಿದಾಗ, ಎಲ್ಲರಿಗೂ ಕಿರಿಕಿರಿ.
  3. ಉನ್ಮಾದ ವ್ಯಕ್ತಿತ್ವ (ಹಿಸ್ಟ್ರಿಯಾನಿಕ್ ಪರ್ಸನಾಲಿಟಿ ಡಿಸಾರ್ಡರ್): ಅತಿಯಾದ ಭಾವೋದ್ವೇಗ, ನಾಟಕೀಯತೆ/ಎಲ್ಲರ ಗಮನವನ್ನು ತನ್ನಡೆಗೆ ಸೆಳೆಯುವ ಪ್ರಯತ್ನ, ಶ್ರಮಪಡಲು ತಯಾರಿಲ್ಲದ ಮನಸ್ಸು, ವಿಫಲತೆಗೆ, ನಿರಾಶೆಗೆ ತೀವ್ರವಾಗಿ ಪರಿತಪಿಸುವುದು, ಅದಕ್ಕಾಗಿ ಇತರರನ್ನು ದೂಷಿಸುವುದು, ಸಂಬಂಧಗಳಲ್ಲಿ ಗಂಭೀರತೆ ಇಲ್ಲದಿರುವುದು, ಹುಡುಗಾಟಿಕೆಯ ಪ್ರವೃತ್ತಿ ಹೆಚ್ಚು.
  4. ಸಾಮಾಜಿಕ ಸನ್ನಿವೇಶಗಳಲ್ಲಿ ಅತಿಯಾದ ಆತಂಕ: ಜನರೊಂದಿಗೆ ಬೆರೆಯುವುದನ್ನು ನಿವಾರಿಸಿಕೊಳ್ಳುವ ತವಕ, ಜನಗಳ ನಡುವೆ ಇರುವಾಗ ಏನೋ ಮುಜುಗರ, ಸಂಕೋಚ, ಸಭೆ-ಸಮಾರಂಭಗಳಲ್ಲಿ ಭಾಗವಹಿಸಲು ನಿರಾಕರಣೆ-ಈ ವ್ಯಕ್ತಿತ್ವದ ಪ್ರಮುಖ ಲಕ್ಷಣ.
  5. ಸಮಾಜ ವಿರೋಧಿ ವ್ಯಕ್ತಿತ್ವ: ಅತಿಸ್ವಾರ್ಥ, ಸ್ವಾರ್ಥಕ್ಕಾಗಿ ನೀತಿ ನಿಯಮಗಳು, ಮೌಲ್ಯಗಳನ್ನು ಬಿಡಲು ಸದಾ ಸಿದ್ಧ. ಬೇರೆಯವರ ಯೋಗಕ್ಷೇಮದ ಬಗ್ಗೆ ದಿವ್ಯ ನಿರ್ಲಕ್ಷ್ಯ. ಮೋಸ, ವಂಚನೆ, ಅಪರಾಧ ಮಾಡಲು ಹಿಂಜರಿಯುವುದಿಲ್ಲ. ತನ್ನ ಬೇಕು ಬೇಡಗಳ ಬಗ್ಗೆಯೇ ಸದಾ ಮಗ್ನತೆ. ಸುಖಪಡುವುದೇ ಇವರ ಗುರಿ. ಇಂಥವರು ಅಪರಾಧ ಜಗತ್ತಿನೊಳಕ್ಕೆ ಪ್ರವೇಶ ಪಡೆದರೆ, ಎಂತಹ ಹೀನವಾದ ಅಪರಾಧ ಮಾಡಲೂ ಸಿದ್ಧರಾಗಿರುತ್ತಾರೆ. ತಪ್ಪಿತಸ್ಥ ಭಾವನೆಯಾಗಲೀ, ಪಾಪಪ್ರಜ್ಞೆಯಾಗಲೀ ಇರುವುದಿಲ್ಲ. ಶಿಕ್ಷೆಯಿಂದ ಪಾಠ ಕಲಿಯುವುದಿಲ್ಲ. ಮಾಡಿದ ತಪ್ಪನ್ನೇ ಮತ್ತೆ ಮಾಡಲು ಸಿದ್ಧರಿರುತ್ತಾರೆ.
  6. ಗಡಿರೇಖೆಯ ವ್ಯಕ್ತಿತ್ವದೋಷ: (ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್): ಸದಾ ಒಂಟಿತನ, ಆಗೊಮ್ಮೆ ಈಗೊಮ್ಮೆ ಅತ್ಮಹತ್ಯೆ/ಹಿಂಸಾಚಾರ, ವಿಚಿತ್ರವಾಗಿ ವರ್ತಿಸುವುದು, ಸ್ವಲ್ಪ ಅವಧಿಗೆ ಅಸಂಬದ್ಧ ನಡೆ-ನುಡಿ, ನಿರಾಶೆಗಳನ್ನು ನಿಭಾಯಿಸುವ ಶಕ್ತಿ, ಚತುರತೆ ಇಲ್ಲದಿರುವುದು, ಸಂಬಂಧಗಳನ್ನು ಉಳಿಸಿಕೊಳ್ಳುವುದು ವಿಫಲವಾಗುವುದು, ಬಹುಬೇಗ ಭಾವೋದ್ವೇಗಕ್ಕೆ ತುತ್ತಾಗುವುದು, ತನ್ನ ಬಗ್ಗೆ ಕೀಳರಿಮೆ, ಹೊಂದಿಕೊಳ್ಳಲಾಗದೆ, ತಾನೂ ಹಿಂಸೆಪಟ್ಟು, ಇತರರಿಗೂ ಹಿಂಸೆ ನೀಡುವುದು, ಹಿಂದೆ ಮುಂದೆ ನೋಡದೆ ಸಾಧಕಭಾದಕಗಳ ಬಗ್ಗೆ ಚಿಂತಿಸದೆ ದುಡುಕಿ ವರ್ತಿಸುವುದು-ಈ ವ್ಯಕ್ತಿತ್ವ ದೋಷದ ಮುಖ್ಯ ಲಕ್ಷಣ.
  7. ಆಕ್ರಮಣಕಾರಿ ವ್ಯಕ್ತಿತ್ವ: ಅತ್ಯಲ್ಪ ಪ್ರಚೋದನೆ-ನಿರಾಶೆಗೆ ವಿಪರೀತ ಸಿಟ್ಟು, ಕೋಪಗಳನ್ನು ಪ್ರಕಟಿಸುವುದು, ಮನೆಯವರ ಮೇಲೆ, ಇತರರ ಮೇಲೆ ಆಕ್ರಮಣ ಮಾಡುವುದು, ಜಗಳ ಹಿಂಸಾಚಾರಕ್ಕೆ ಇಳಿಯುವ ಪ್ರವೃತ್ತಿ ಇವರಲ್ಲಿ ಕಂಡು ಬರುತ್ತದೆ. ನಿರಾಶೆ, ಅತೃಪ್ತಿಗಳನ್ನು ಇವರು ಸರಿಯಾಗಿ ನಿಭಾಯಿಸುವುದಿಲ್ಲ.
  8. ಪರಾವಲಂಬನೆಯ ವ್ಯಕ್ತಿತ್ವ: ಎಲ್ಲದಕ್ಕೂ ಅವಲಂಬಿಸುವುದು, ಸ್ವಂತವಾಗಿ ಏನನ್ನೂ ಮಾಡಲಾರರು, ಬುದ್ಧಿ ವಿವೇಚನೆ ಇದ್ದರೂ ಅವನ್ನು ಬಳಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾರರು. ನಿರ್ಧಾರ/ತೀರ್ಮಾನ ಸಣ್ಣದಿರಲಿ, ದೊಡ್ಡದಿರಲಿ, ಬೇರೆಯವರ ಸೂಚನೆ, ಸಲಹೆಯಂತೆಯೇ ನಡೆಯಲು ಇಚ್ಛೆಪಡುತ್ತಾರೆ. ಪ್ರೌಢ ವಯಸ್ಸಿನವರೆಗೆ ತಂದೆತಾಯಿ/ಮನೆಯವರ ಮೇಲೆ ಅವಲಂಬನೆ, ಮದುವೆಯಾದ ಮೇಲೆ ಜೀವನ ಸಂಗಾತಿಯ ಮೇಲೆ ಅವಲಂಬನೆ, ತಾನು ಮಾಡಿದ್ದು ಸರಿಹೋಯಿತೇ, ತಾನು ತೆಗೆದುಕೊಂಡ ನಿರ್ಧಾರ ಅನುಕೂಲಕಾರಿಯೇ ಎಂದು ಇತರರನ್ನು ಕೇಳುತ್ತಾರೆ, ಇತರರಿಗೆ ಇಲ್ಲ ಎನ್ನಲು ಸಂಕೋಚ, ನೀನು ಮಾಡಿದ್ದು ಸರಿ ಅಲ್ಲ ಎಂದು ಹೇಳಲು ಹೆದರಿಕೆ, ಒಂಟಿಯಾಗಿರಲು ಭಯ, ಎಲ್ಲಿ ಎಲ್ಲರೂ ತಮ್ಮನ್ನು ದೂರ ಮಾಡಿಬಿಡುತ್ತಾರೋ, ತನ್ನ ನೆರವಿಗೆ ಯಾರೂ ಬರುವುದಿಲ್ಲವೇನೋ ಎಂಬ ಆತಂಕ ಸದಾ ಇರುತ್ತದೆ.
  9. ಸ್ಕಿಜಾಯಿಡ್ ವ್ಯಕ್ತಿತ್ವ: ಸದಾ ತಾನಾಯಿತು, ತನ್ನ ಪಾಡಾಯಿತು ಎಂದು ಒಂಟಿಯಾಗೇ ಇರುವ ಇಚ್ಛೆ, ಯಾರೊಂದಿಗೂ ಮುಕ್ತವಾದ, ಆಳವಾದ ಸಂಬಂಧ ಇಟ್ಟುಕೊಳ್ಳಲು ಬಯಸುವುದಿಲ್ಲ. ತನ್ನ ಅನಿಸಿಕೆ, ಅನುಭವ ಭಾವನೆಗಳನ್ನು ಆಸೆ-ಆಕಾಂಕ್ಷೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ. ಒಂಟಿಯಾಗೇ ಮಾಡಬಲ್ಲ ಕೆಲಸ-ಹವ್ಯಾಸಗಳಲ್ಲಿ ಮಗ್ನ, ಹೊಗಳಿಕೆಗೆ, ತೆಗಳಿಕೆಗೆ ಒಂದು ಬಗೆಯ ನಿರ್ಲಿಪ್ತತೆ. ಭಾವೋದ್ವೇಗ ಉಂಟು ಮಾಡುವ ಸನ್ನಿವೇಶಗಳಲ್ಲೂ ತಣ್ಣಗೆ ಇರುತ್ತಾರೆ. ಜೀವನ ಸಂಗಾತಿ ಸೇರಿದಂತೆ ಎಲ್ಲರ ಪಾಲಿಗೆ ಈತ “ಮುಚ್ಚಿದ ಪುಸ್ತಕ! ಒಳಗೇನಿದೆ ಯಾರಿಗೂ ಗೊತ್ತಾಗುವುದಿಲ್ಲ!”.
  10. ಸ್ಕಿಜೋಟೈಪಲ್ ವ್ಯಕ್ತಿತ್ವ: ಇತರರು ತನ್ನ ಬಗ್ಗೆ ಮಾತನಾಡಿಕೊಳ್ಳಬಹುದು, ಆಡಿಕೊಳ್ಳಬಹುದೆನ್ನುವ ಅನುಮಾನ, ತುಂಬಾ ಮೂಢನಂಬಿಕೆ, ಅಂಧಶ್ರದ್ಧೆ, ಶಕುನಗಳಲ್ಲಿ ನಂಬಿಕೆ, ರಮ್ಯ-ಭೀಕರ ಕಲ್ಪನೆಗಳನ್ನು ಮಾಡಿಕೊಂಡು ಸಂತೋಷಪಡುವುದು ಅಥವಾ ಭಯಪಡುವುದು, ಇತರರಿಗೆ ಅರ್ಥವಾಗದ ವಿಚಾರಗಳು, ಮಾತು ವರ್ತನೆಗಳು, ಸಂಶಯಪ್ರವೃತ್ತಿ, ಸನ್ನಿವೇಶ, ಸಂದರ್ಭಗಳಿಗೆ ವೃತಿರಿಕ್ತವಾದ ಭಾವನೆಗಳ ಪ್ರಕಟಣೆ, ಆಪ್ತರಾಗಲೀ, ಸ್ನೇಹಿತರಾಗಲೀ ಇಲ್ಲ, “ವಿಚಿತ್ರ ವ್ಯಕ್ತಿ” ಎಂದು ಇತರರಿಂದ ಹಣೆಪಟ್ಟಿ.

ಕಾರಣಗಳು: ನಿರ್ದಿಷ್ಟ ಕಾರಣಗಳಿಲ್ಲ. ಹಲವು ಅಂಶಗಳು ಸೇರಿ ಈ ಬಗೆಯ ದೋಷಪೂರ್ಣ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಅನುವಂಶೀಯತೆ, ಮಿದುಳಿಗೆ ಸಣ್ಣ ಪ್ರಮಾಣದ ಹಾನಿ, ತಂದೆ ತಾಯಿಗಳ ಲಾಲನೆ-ಪಾಲನೆಯಲ್ಲಿ ದೋಷ, ಅತಿಮುದ್ದು ಅಥವಾ ಅತಿಶಿಕ್ಷೆ-ತಿರಸ್ಕಾರ, ಶ್ಲಾಘನೆ, ಮೆಚ್ಚುಗೆ ಇಲ್ಲದಿರುವುದು, ರೀತಿನೀತಿಗಳನ್ನು ಕಲಿಸದಿರುವುದು, ಕುಟುಂಬದ ಇತರ ಸದಸ್ಯರಲ್ಲಿ ನೈತಿಕ ಮೌಲ್ಯಗಳು, ಶಿಸ್ತು-ಸಂಯಮ ಇಲ್ಲದಿರುವುದು, ಯೋಗ್ಯ ಶಿಕ್ಷಣ ದೊರೆಯದಿರುವುದು, ಕೆಟ್ಟ ಮಾದರಿ ಹಾಕಿಕೊಡುವ ಮಾಧ್ಯಮಗಳು, ಸಮಾಜದ “ನಾಯಕರುಗಳು” ಹೀಗೆ ಹಲವು ಕಾರಣಗಳಿಂದ ವ್ಯಕ್ತಿತ್ವ ಬೆಳವಣಿಗೆಯಲ್ಲಿ ವ್ಯತ್ಯಯ ಉಂಟಾಗಿ, ವ್ಯಕ್ತಿಯು ವ್ಯಕ್ತಿತ್ವ ದೋಷದ ಕಾಯಿಲೆಯಿಂದ ಬಳಲುವಂತಾಗುತ್ತದೆ.

ಚಿಕಿತ್ಸೆ: ಮನೋಚಿಕಿತ್ಸೆ, ಆಪ್ತ ಸಲಹೆ, ಮಾರ್ಗದರ್ಶನ ಮತ್ತು ನಡವಳಿಕೆಯ ಸುಧಾರಣೆ, ವ್ಯಕ್ತಿಯ ಮನ ಒಲಿಸಿ, ವ್ಯಕ್ತಿತ್ವದಲ್ಲಿರುವ ದೋಷಗಳನ್ನು ಸರಿಪಡಿಸಿಕೊಳ್ಳಲು ಒತ್ತಾಯವಿರಬೇಕು. ಆತ/ಆಕೆಯನ್ನು ದೂಷಿಸದೇ ಬದಲಾಗಲು ಪ್ರೋತ್ಸಾಹ ನೀಡಬೇಕು. ಮನೆಯವರು, ಬಂಧು-ಮಿತ್ರರು, ಸಹೋದ್ಯೋಗಿಗಳು ಒಟ್ಟಾಗಿ ಈ ಬದಲಾವಣೆಗೆ ಬೇಕಾದ ಪರಿಸರ ಮತ್ತು ಅವಕಾಶಗಳನ್ನು ಸೃಷ್ಟಿಸಬೇಕು, ವ್ಯಕ್ತಿ ಸಮಸ್ಯಾತ್ಮಕ ಮತ್ತು ಅಸಹಜ ಧೋರಣೆ ಮತ್ತು ವರ್ತನೆಗಳನ್ನು ತೋರಿಸದಂತೆ ಒತ್ತಾಸೆ ನೀಡಬೇಕು. ಬಹುಮಾನ, ಶ್ಲಾಘನೆ, ಶಿಸ್ತು, ಶಿಕ್ಷೆಗಳನ್ನು ಹದವಾಗಿ ಬೆರೆಸಿ, ತರಬೇತಿ ನೀಡಬೇಕು. ಅಗತ್ಯ ಬಿದ್ದರೆ, ವ್ಯವಸ್ಥೆ ಚೆನ್ನಾಗಿರುವ ಪರಿಸರದಲ್ಲಿ ಇಂತಹ ವ್ಯಕ್ತಿಗಳನ್ನು ಇಟ್ಟು, ಅಗತ್ಯವಾದ ಬದಲಾವಣೆಗಳನ್ನು ಸುಧಾರಣೆಗಳನ್ನು ತರಬೇಕು. ಈ ಬದಲಾವಣೆಯ ಕಾಲದಲ್ಲಿ ವ್ಯಕ್ತಿಗೆ ಪ್ರೀತಿ-ಸಹಾನುಭೂತಿಗಳು ಬೇಕು. ಕಠಿಣವಾದ ನಿರೂಪ ಹಾಗೂ ಹೀಗೆ ಮಾಡು, ಹೀಗೆ ಮಾಡಬೇಡ, ಮಾಡಿದರೆ ಪರಿಣಾಮ ಚೆನ್ನಾಗಿರುವುದಿಲ್ಲ ಎಂದು ಹೇಳಿ ಉಸ್ತುವಾರಿ ಮಾಡುವವರೂ ಇರಬೇಕು.

ಅವಶ್ಯಕತೆ ಇದ್ದಾಗ, ಶಮನಕಾರೀ ಮಾತ್ರೆಗಳು, ಖಿನ್ನತೆ ನಿವಾರಕ ಮಾತ್ರೆಗಳು, ಭಾವೋದ್ರೇಕಗಳನ್ನು ತಗ್ಗಿಸುವ ಔಷಧಿಯನ್ನು ವೈದ್ಯರು ಬರೆದುಕೊಡುತ್ತಾರೆ. ವ್ಯಕ್ತಿತ್ವ ದೋಷಗಳನ್ನು ಬದಲಿಸಬಹುದು. ವ್ಯಕ್ತಿ ಸುಧಾರಿಸುತ್ತಾನೆ. ಆದರೆ ಇದಕ್ಕೆ ಸಾಕಷ್ಟು ಸಮಯ ಪ್ರಯತ್ನಗಳು ಬೇಕಾಗುತ್ತವೆ.

ವ್ಯಕ್ತಿತ್ವ ವಿಕಾಸ

ಈಗೀನ ಪೀಳಿಗೆಯಲ್ಲಿ ಪೇಪರ್, ಕಾದಂಬರಿಗಳನ್ನು ಓದುವ ಅಭ್ಯಾಸ ಕಡಮೆಯಾಗುತ್ತಿದೆ. ಟಿವಿ, ಕಂಪ್ಯೂಟರ್, ವೀಡಿಯೊ ಗೇಮ್, ಇಂಟರ್ ನೆಟ್ ಹೀಗೆ ಮನರಂಜನೆ ಮತ್ತು ಮಾಹಿತಿಗೆ ನಾನಾ ಸಾಧನಗಳು ಇರುವಾಗ ದೊಡ್ಡ ಪುಸ್ತಕಗಳನ್ನು ಗಂಟೆ ಗಟ್ಟಲೆ ಓದುವುದು ಯಾರು ಅನ್ನುವ ಉದಾಸೀನ ಹೆಚ್ಚಿನವರಲ್ಲಿ ಬಂದು ಬಿಟ್ಟಿದೆ. ಆದರೆ ಒಂದು ವಿಷಯ ನೆನೆಪಿಟ್ಟುಕೊಳ್ಳಿ. ಓದುವ ಅಭ್ಯಾಸವನ್ನು ಬಿಟ್ಟರೆ ಅನೇಕ ಪ್ರಯೋಜನಗಳಿಂದ ವಂಚಿತರಾಗುತ್ತೇವೆ. ಓದುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯಲು ಇದನ್ನು ಓದಿ:

  1. ಮೆದುಳಿಗೆ ವ್ಯಾಯಾಮ: ಓದುವಾಗ ಮೆದುಳು ಓದಿದನ್ನು ಅರ್ಥೈಸಿಕೊಳ್ಳುತ್ತಾ, ಕಲ್ಪನೆ ಮಾಡುತ್ತಾ ಹೋಗುತ್ತದೆ. ಇದರಿಂದ ಮೆದುಳಿಗೆ ಹೆಚ್ಚಿನ ಕೆಲಸ ಬೀಳುವುದರಿಂದ ಅದರ ಸಾಮರ್ಥ್ಯ ಹೆಚ್ಚಾಗುವುದು. ಇದರಿಂದ ಮೆದುಳಿಗೆ ಉತ್ತಮ ರೀತಿಯ ವ್ಯಾಯಾಮ ಉಂಟಾಗುತ್ತದೆ.
  2. ಮನಸ್ಸಿಗೆ ತೃಪ್ತಿ: ಕತೆಪುಸ್ತಕಗಳನ್ನು ಓದುತ್ತಾ ಹೋಗುವಾಗ ವಾಸ್ತವನ್ನು ಮರೆತು ಕಾಲ್ಪನಿಕ ಲೋಕದಲ್ಲಿರುತ್ತವೆ. ಕತೆಯಲ್ಲಿರುವ ಪಾತ್ರಗಳನ್ನು ಮನಸ್ಸು ಆನಂದಿಸುತ್ತದೆ. ಅನೇಕ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತದೆ. ಇದರಿಂದ ಮನಸ್ಸಿಗೆ ತೃಪ್ತಿ ಸಿಗುತ್ತದೆ.
  3. ಕಲ್ಪನಾ ಸಾಮರ್ಥ್ಯ ಹೆಚ್ಚುತ್ತದೆ: ಓದುವಾಗ ಅದರ ಬಗ್ಗೆ ಚಿತ್ರಿಸಿಕೊಳ್ಳುವುದರಿಂದ ಕಲ್ಪನಾ ಸಾಮರ್ಥ್ಯ ಹೆಚ್ಚಾಗುತ್ತದೆ. ಆದರೆ ಟಿವಿ ನೋಡಿದಾಗ ಅದರಲ್ಲಿರುವ ಚಿತ್ರಗಳನ್ನು ನೋಡುತ್ತಾ ಕಲ್ಪನೆಯನ್ನು ಮಾಡಿಕೊಳ್ಳುವುದಿಲ್ಲ.
  4. ದೂರದೃಷ್ಟಿತ್ವ: ಪುಸ್ತಕ ಓದುವುದರಿಂದ ಜೀವನದದಲ್ಲಿ ಅನೇಕ ವಿಷಯಗಳ ಬಗ್ಗೆ ತಿಳಿಯಬಹುದು. ಇವು ನಿಜ ಜೀವನದಲ್ಲಿ ನಿರ್ಧಾರಗಳನ್ನು ತೆಗೆಯಲು ಸಹಾಯ ಮಾಡುತ್ತದೆ.
  5. ಜ್ಞಾನಾಭಿವೃದ್ಧಿ ಹೆಚ್ಚಾಗುತ್ತದೆ: ಜ್ಞಾನ ವ್ಯಕ್ತಿಗೆ ಉತ್ತಮ ವ್ಯಕ್ತಿತ್ವ ಕೊಡುತ್ತದೆ. ಉತ್ತಮವಾದ ಜ್ಞಾನ ಪಡೆಯ ಬೇಕೆಂದರೆ ಓದಬೇಕು.
  6. ವಾಗ್ಮಿ: ಉತ್ಮವಾದ ವಾಗ್ಮಿ ಅನಿಸಿಕೊಳ್ಳಬೇಕಾದರೆ ಅವನು ತುಂಬಾ ಓದುವ ಅಭ್ಯಾಸವನ್ನು ಬೆಳೆಸಿಕೊಂಡಿರಬೇಕು.
  7. ಜೀವಿಸುವ ಕಲೆ: ಅನೇಕ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಓದಿದರೆ ಅದು ನಮಗೆ ಬದುಕಲು ಮಾರ್ಗದರ್ಶನ ನೀಡುತ್ತದೆ. ಆದ್ದರಿಂದಲೆ ಪುಸ್ತಕಗಳು ಜೀವನದ ಅತ್ಯುತ್ತಮವಾದ ಸಂಗತಿಗಳಾಗಿವೆ.
  8. ಸಂಸ್ಕೃತಿ: ಪುಸ್ತಕ ಓದುವುದರಿಂದ ತರ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಬಹುದು. ಟಿವಿಯಲ್ಲಿ ಅಥವಾ ನೆಟ್ ನಲ್ಲಿ ನೋಡಿದರೆ ತುಂಬಾ ಕಾಲ ತಲೆಯಲ್ಲಿ ಉಳಿಯುವುದಿಲ್ಲ. ಆದರೆ ಓದಿದರೆ ಅದು ಮರೆಯುವುದು ತುಂಬಾ ವಿರಳ. ಇದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುವುದು.

ಅಹಂ(ಈಗೋ)

ಮನುಷ್ಯ ವ್ಯಕ್ತಿತ್ವ ಅನ್ನುವುದು ಅತ್ಯಂತ ಸಂಕೀರ್ಣ ಅದನ್ನು ಅರ್ಥಮಾಡಿಕೊಳ್ಳುವುದು ಸಹ ಅಷ್ಟೆ ಕಷ್ಟಕರವಾದದ್ದು. ವ್ಯಕ್ತಿಗಳ ನಡುವೆ ನಡೆಯುವ ಸಂವಹನ ಕ್ರಿಯೆಯ ವಿಶ್ಲೇಷಣೆ ಆಧಾರದ ಮೇಲೆ, ಮನೋ ವಿಜ್ಞಾನಿಗಳು ಈ ವ್ಯಕ್ತಿತ್ವಗಳನ್ನು ಗ್ರಹಿಸಲು ಪ್ರಯತ್ನ ಪಡುತ್ತಾರೆ. ಈ ಮನುಷ್ಯರ ನಡುವಿನ ಸಂವಹನ ಕ್ರಿಯೆ ಯಾವುದೇ ರೂಪದಲ್ಲಿರಬಹುದು, ಅದು ಮಾತುಕತೆಯ ರೂಪ, ಬರವಣಿಗೆಯ ರೂಪ, ಭಾವನೆಗಳನ್ನು ವ್ಯಕ್ತಪಡಿಸುವ ಯಾವುದೇ ರೂಪದ ಸಂವಹನ ವ್ಯಕ್ತಿತ್ವ ವಿಶ್ಲೇಷಣೆಗೆ ನೆರವಾಗುತ್ತದೆ.

ವ್ಯಕ್ತಿತ್ವಗಳ ಮನಗಳ ಅರಿವಿಕೆಯ ಈ ಜ್ಞಾನ ಎಲ್ಲ ರೂಪದಲ್ಲೂ ಸಹ ಒಳ್ಳೆಯದೇ ಇದು ನಮ್ಮ ಮನಸಿನ ಸ್ಥಿತಿಯನ್ನು ನಾವೇ ತಿಳಿಯಲು, ಬೇರೆಯವರ ಮನಸಿಕ ಸ್ಸ್ಥಿತಿಗತಿಗಳನ್ನು ನಿರ್ಧರಿಸಲು ಸಹಾಯಕವಾಗಿದ್ದು, ನಾವು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯಕವಾಗಿದೆ. ಹಾಗೇ ಮನುಷ್ಯನ ಮನಸ್ಸಿನ ನಡುವೆ ಇರುವ ದೂರವನ್ನು ಕಡಿಮೆಗೊಳಿಸಿ ಮನಸ್ಸನ್ನು ತಿಳಿಗೊಳಿಸಲು ಸಹ ಸಹಾಯಕವೆನಿಸುವುದು.

ಈ ವಿಶ್ಲೇಷಣೆಯಂತೆ ಪ್ರತಿ ಮನುಷ್ಯನ ಮನಸಿಕ ಸ್ಸ್ಥಿತಿಯನ್ನು ಮೂರು ಆಯಾಮಗಳಲ್ಲಿ ಗುರುತಿಸಬಹುದು

  1. ತಂದೆಯ ಭಾವ (ಪೇರೆಂಟ್ ಈಗೋ)
  2. ಸಮಸ್ಥಿಥಿ ಭಾವ (ಅಡಲ್ಟ್ ಈಗೋ)
  3. ಶಿಶು ಭಾವ (ಚೈಲ್ಡ್ ಈಗೋ)

ಈ ಭಾವಗಳ ಅರ್ಥ ಮನುಷ್ಯನೊಬ್ಬ ಸದಾ ಒಂದೇ ಭಾವದಲ್ಲಿರುವನೆಂಬ ಅರ್ಥವಲ್ಲ, ನಮ್ಮೆಲ್ಲರ ಮನಸು , ಮಾತುಕತೆ, ನಡೆನುಡಿಗಳು ಸದಾ ಈ ಮೂರು ಭಾವಗಳ ಸುತ್ತಲೇ ಸುತ್ತುತ್ತಿರುತ್ತದೆ. ಎಲ್ಲರ ಮನಗಳು ಈ ಮೂರು ಆಯಾಮಗಳಲ್ಲಿದ್ದು ವ್ಯಕ್ತಿತ್ವಗಳ ನಡುವಿನ ಮನಸ್ಸಿನ, ಹೊರಗಿನ ಸಂವಹನ ಕ್ರಿಯೆ ನಡೆದಿರುತ್ತದೆ. ಕೆಲವೊಮ್ಮೆ ಇಬ್ಬರು ವ್ಯಕ್ತಿಗಳ ನಡುವಿನ ಮಾತುಕತೆ ಒಂದೆ ಭಾವದಲ್ಲಿರದೆ, ಎಲ್ಲ ಮೂರು ಭಾವಗಳನ್ನು ಒಳಗೊಂಡಿದ್ದು, ಇಬ್ಬರ ನಡುವಿನ ಸಂವಹನ, ಸಂಪರ್ಕ ನಡೆಯುತ್ತದೆ.

ತಂದೆಯಭಾವ (ಪೇರೆಂಟ್ ಈಗೋ)

ಇದನ್ನು ಬೇಕಾದಲ್ಲಿ ತಾಯಿಯ ಭಾವ ಎಂದು ಕರೆಯಬಹುದು. ಈ ಭಾವ ನಮ್ಮನ್ನು ಹೊರಗಿನಿಂದ ಪ್ರೇರೆಪಿಸಿದ ಭಾಗ, ಇದು ನಮ್ಮ ಸ್ವಂತ ಚಿಂತನೆಯಾಗದೆ, ಚಿಕ್ಕ ವಯಸ್ಸಿನಿಂದ ನಮ್ಮ ತಂದೆ ತಾಯಿ ದೊಡ್ಡವರು ಇವರನ್ನೆಲ್ಲ ನೋಡಿ, ನಮಗರಿವಿಲ್ಲದೆ ಕಲಿತ ಭಾವವಾಗಿರುತ್ತದೆ. ಈ ತಂದೆಯ ಭಾವವು ತೀಕ್ಷ್ಣವಾಗಿದ್ದು, ನಮ್ಮ ಮನಸ್ಸನ್ನು ಹೊರಗಿನಿಂದ ಹೊಕ್ಕ ಅಭಿಪ್ರಾಯಗಳಿಂದ ರೂಪಿಸಿಕೊಂಡ, ನಮ್ಮ ನಡೆ ನುಡಿಗಳನ್ನು ನಿಯಂತ್ರಿಸುವ ಭಾವ. ಕೆಲವು ಮಾತುಗಳು : ನಿನಗೆ ಎಂದಿಗೂ ಸಾದ್ಯವಿಲ್ಲ, ನೀನು ಇದನ್ನು ಮಾಡಲಾರೆ, ಅದನ್ನು ಮಾಡಬೇಡ, ಹಾಗಲ್ಲ ಈ ರೀತಿ ನಾನು ಹೇಳಿದಂತೆ ಮಾಡು ---- ಇಂತಹ ವಾಕ್ಯಗಳೆಲ್ಲ ತಂದೆ ಭಾವದ ರೂಪಕ.

ಇನ್ನೊಂದು ತರಹದ ತಂದೆಭಾವ : "ಈ ಕೆಲಸ ಮುಗಿಸುವ ವರೆಗೂ ಯಾರು ಹೊರಹೋಗಬಾರದು" , ಇಲ್ಲಿ ಆಜ್ಞೆಯನ್ನು ಅಧಿಕಾರವನ್ನು ಗುರುತಿಸಬಹುದು. ನನ್ನ ಮಾತೇ ಕೇಳಬೇಕೆಂಬ ಭಾವ. ಅನುನಯದ ತಂದೆಭಾವ: "ಈ ಕೆಲಸ ನಿನ್ನಿಂದ ಆಗದು ಬಿಡು, ನಾನು ಮಾಡಿಕೊಳ್ಳುವೆ" , ಈ ಭಾವ ಮಗುವನ್ನು ಹಾಳು ಮಾಡಬಲ್ಲದು, ಇದು ಗುಣಾತ್ಮಕ ಕ್ರಿಯೆಯಾಗಿದ್ದು, ವ್ಯಕ್ತಿಯನ್ನು ಹೇಡಿಯನ್ನಾಗಿಸಬಲ್ಲದು.

ಸಮಸ್ಥಿತಿ ಭಾವ : ಈ ಭಾವ ಸಹ ಹೊರಗಿನಿಂದ ಕಲಿತಿದ್ದಾಗಿದ್ದು, ಮನಸ್ಸು ಸದಾ ತರ್ಕ, ಸಾಧ್ಯತೆಗಳನ್ನು ಕುರಿತದ್ದಾಗಿದ್ದು, ಎದುರಿಗಿರುವರ ಮನಸ್ಸನ್ನು ಅರಿತು ಮಾತನಾಡುವ ಸ್ವಭಾವವಾಗಿದೆ, ಪ್ರತಿ ವಿಷಯ ಅರಿತುಕೊಂಡು ನಡೆಯನ್ನು ರೂಪಿಸಿಕೊಳ್ಳುವ ಸ್ವಭಾವ ಇರುತ್ತದೆ. ಸದಾ ಏಕೆ ಏನು ಹೇಗೆ ಯಾರು ಎಲ್ಲಿ , ಯಾವಾಗ , ಯಾವ ರೀತಿ ಈ ರೀತಿಯ ಪ್ರಶ್ನೆಗಳು ಹಾಗು ತರ್ಕಬದ್ದ ಉತ್ತರಗಳಿಂದ ರೂಪಿಸಿಕೊಳ್ಳುವ ವ್ಯಕ್ತಿತ್ವವಾಗಿರುತ್ತದೆ.

ಶಿಶುಭಾವ : ಅತ್ಯಂತ ತೀವ್ರವಾದ ಚಿಂತನೆಗಳು, ಭಾವ ಇದರ ವಿಶೇಷ , ಅಳು ನಗು ಕೋಪ ಸಂತಸ ಕಾಡುವ ಕೀಳುಭಾವ ಇವೆಲ್ಲ ಶಿಶುಭಾವದ ಪ್ರತೀಕ. ಶಿಶುಭಾವ ಪೂರ್ಣ ಒಳಗಿನಿಂದ ಮೂಡುವ ಭಾವವಾಗಿದ್ದು, ಈ ಭಾವಗಳು ತೀವ್ರವಾದಾಗ ಮನುಷ್ಯನ ನಡುವಳಿಕೆ ಸಾಮಾನ್ಯವೆನಿಸುವದಿಲ್ಲ.

  • ಸಹಜ ಶಿಶು: ಇದು ಅತ್ಯಂತ ಶಕ್ತಿಶಾಲಿ ಭಾವ, ಸದಾ ಕುತೂಹಲ, ಶಕ್ತಿಭರಿತ, ಒಳಹೊಕ್ಕು ನೋಡುವ ಸ್ವಭಾವ ಇಂತವೆಲ್ಲ ಎದ್ದು ಕಾಣುತ್ತವೆ, ಶಿಶು ಸ್ವಭಾವ ಜಾಗೃತವಾಗಿದ್ದಲ್ಲಿ ಬದುಕಿನ ಬಗ್ಗೆ ಸದಾ ಉತ್ಸಾಹ ಕುತೂಹಲವಿರುತ್ತದೆ.
  • ಪ್ರೇರಿತ ಶಿಶುಭಾವ: ಮನಸ್ಸು ಸದಾ ಸಹಜ ಶಿಶುವಿನ ಭಾವದಲ್ಲಿರುವುದು ಕಷ್ಟಕರ, ಹಾಗಾಗಿ ಬಲವಂತವಾಗಿ ಕೆಲವೊಮ್ಮೆ ಶಿಶು ಸ್ವಭಾವವನ್ನು ಆರೋಪಿಸಿಕೊಳ್ಳುವುದು ಇದೆ. ನಮಗಿಂತ ಹೆಚ್ಚು ಶಕ್ತಿವಂತರನ್ನು ಅಧಿಕಾರಸ್ತರನ್ನು ಕಂಡಾಗ ಕೆಲವೊಮ್ಮೆ ಅನುನಯದಿಂದ ನಡೆಯುತ್ತ, ಆಗಲಿ, ಥಾಂಕ್ಸ್, ಸಾರಿ, ಇಂತವೆಲ್ಲ ಹೇಳುತ್ತ ನಡೆಯುವ ಸ್ವಭಾವ.
  • ಬುದ್ಧಿವಂತ ಶಿಶು : ಇದು ಸ್ವಭಾವದ ಆರನೆ ಇಂದ್ರಿಯದಂತೆ ಕೆಲಸ ಮಾಡುತ್ತದೆ, ಉದಾಹರಣೆ: ವ್ಯಕ್ತಿಯನ್ನು ನೋಡುವಾಗಲೆ ಇವನು ಒಳ್ಳೆಯವನು ಅಥವಾ ಕೆಟ್ಟವನು ಎಂದು ನಿರ್ದರಿಸುವುದು, ನನಗೆ ಕಪ್ಪು ಇಷ್ಟವಿಲ್ಲ ಎನ್ನುವುದು ಇಂತವೆಲ್ಲ ಬುದ್ದಿವಂತ ಶಿಶುವಿನ ಕೆಲಸ.

ವ್ಯಕ್ತಿತ್ವದಲ್ಲಿನ ಪ್ರಧಾನ ಭಾವವನ್ನು ಗುರುತಿಸಲು ಈ ಅಂಶಗಳು ನೆರವಾಗಬಹುದು.