ವಾಸುದೇವ ಗಿರಿಮಾಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಾಸುದೇವ ಗಿರಿಮಾಜಿ
ಜನನಮಾರ್ಚ್ ೧೯, ೧೯೧೨
ಮರಣಆಗಸ್ಟ್ ೨೪, ೧೯೯೩
ಉದ್ಯೋಗಚಲನಚಿತ್ರ ಮತ್ತು ರಂಗಭೂಮಿ ನಟ, ನಿರ್ದೇಶಕ

‘’’ವಾಸುದೇವ ಗಿರಿಮಾಜಿ’’’(ಮಾರ್ಚ್ ೧೯, ೧೯೧೨ಆಗಸ್ಟ್ ೨೪,೧೯೯೩) ಕನ್ನಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ದುಡಿದವರು.

ಜೀವನ[ಬದಲಾಯಿಸಿ]

ಕನ್ನಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಪ್ರಸಿದ್ಧರಾದ ವಾಸುದೇವ ಗಿರಿಮಾಜಿ ಅವರು ಮಾರ್ಚ್ ೧೯, ೧೯೧೨ರ ವರ್ಷದಲ್ಲಿ ಜನಿಸಿದರು. ವೃತ್ತಿ ರಂಗಭೂಮಿಯಲ್ಲಿ ಸ್ತ್ರೀಪಾತ್ರಗಳನ್ನು ಪುರುಷರೇ ನಿರ್ವಹಿಸುತ್ತಿದ್ದ ಕಾಲದಲ್ಲಿ ಗೌರಿನರಸಿಂಹಯ್ಯ, ಬಿ. ರಾಚಪ್ಪ, ಸಮುಖದ ಲಕ್ಷ್ಮೀಪತಿ ಶಾಸ್ತ್ರಿ, ಸೋಮಾಜಿರಾವ್ ಜೊತೆಗೆ ವಾಸುದೇವ ಗಿರಿಮಾಜಿ ಅವರೂ ಪ್ರಸಿದ್ಧರಾಗಿದ್ದರು. ತಂದೆ ಗೋವಿಂದರಾವ್ ಗಿರಿಮಾಜಿ ತಾಯಿ ತುಂಗಮ್ಮನವರು. ಸ್ವಯಂ ಕಲಾವಿದರು, ಕಲಾಪ್ರೇಮಿಗಳಾದ ತಂದೆಯೊಡನೆ ರಂಗ ತಾಲೀಮಿನ ಸ್ಥಳಕ್ಕೆ ಹೋಗುತ್ತಿದ್ದ ವಾಸುದೇವರಿಗೂ ರಂಗಭೂಮಿಯ ನಂಟು ಕೂಡಿಬಂತು.

ಬಾಲನಟನಾಗಿ[ಬದಲಾಯಿಸಿ]

ಲಿಟರರಿ ಅಂಡ್ ಡ್ರಮ್ಯಾಟಿಕ್ಸ್ ಅಸೋಸಿಯೇಷನ್ನಿನ ವಿದ್ಯಾರಣ್ಯ, ಲವ-ಕುಶ, ರಾಮದಾಸ ನಾಟಕಗಳಲ್ಲಿ ಅವರು ಬಾಲಕಲಾವಿದನ ಪಾತ್ರ ವಹಿಸುತ್ತಿದ್ದರು. ಅಂದಿನ ದಿನಗಳಲ್ಲೇ ಅವರಿಗೆ ಶಾಕುಂತಲ, ರಾಜವರ್ಮ-ಲೀಲಾವತಿ ನಾಟಕಗಳಲ್ಲಿ ಅಭಿನಯಿಸುವಾಸೆ ಉತ್ಕಟವಾಯಿತು. ತಂದೆಗೆ ಶಿವಮೊಗ್ಗಕ್ಕೆ ವರ್ಗವಾದಾಗ ನಾಟಕದ ಹುಚ್ಚಿನಿಂದ ಮನೆಯಿಂದಲೇ ಪರಾರಿಯಾದರು.

ವೃತ್ತಿ ರಂಗಭೂಮಿಯಲ್ಲಿ[ಬದಲಾಯಿಸಿ]

ಹೀಗೆ ವಾಸುದೇವ ಗಿರಿಮಾಜಿ ಅವರು ಸಕಲೇಶಪುರದಲ್ಲಿ ನಾಟಕವಾಡುತ್ತಿದ್ದ ಪೀರ್ ಮಹಮದ್ ಕಂಪನಿಗೆ ಸೇರ್ಪಡೆಗೊಂಡರು. ಆದರೆ ಪ್ರಮುಖ ಪಾತ್ರ ದೊರೆಯದೆ ಅವರಲ್ಲಿ ನಿರಾಸೆ ತಾಂಡವವಾಡುತ್ತಿತ್ತು. ಕಂಪನಿಯಲ್ಲಿ ನಾಲ್ವಾರು ನಟರು ಕಂಪನಿ ಬಿಟ್ಟಿದ್ದರಿಂದ ರಾಮಾಯಣದಲ್ಲಿ ಸೀತೆ, ಸಂಸಾರ ನೌಕಾದಲ್ಲಿ ಸರಳ, ಗೌತಮಬುದ್ಧದಲ್ಲಿ ಯಶೋಧರ, ಷಹಜಾನ್‌ನಲ್ಲಿ ನಾದಿರ್ ಮುಂತಾದ ಪಾತ್ರಗಳು ಅವರಿಗೆ ದೊರಕಿ, ಪ್ರೇಕ್ಷಕರಿಂದ ಮೆಚ್ಚುಗೆ ದೊರೆಯತೊಡಗಿತು.

ಮುಂದೆ ಸಾಗರದಲ್ಲಿ ಗುಬ್ಬಿ ಕಂಪನಿ ಮೊಕ್ಕಾಂಮಾಡಿದಾಗ ಅಲ್ಲಿ ಸೇರ್ಪಡೆಗೊಂಡರು. ಸದಾರಮೆ ನಾಟಕವನ್ನು ಚಲನಚಿತ್ರವಾಗಿಸಲು ಬೊಂಬಾಯಿಯಲ್ಲಿ ಚಿತ್ರೀಕರಣ ಮಾಡಲಾಯಿತು. ಕುರುಕ್ಷೇತ್ರದಲ್ಲಿ ಗಾಂಧಾರಿ, ಶ್ರೀಕೃಷ್ಣನ ಪಾತ್ರ, ಗುಲೇಬಕಾವಲಿ, ಪ್ರಭಾಮಣಿ ವಿಜಯದಲ್ಲಿ ಪಾತ್ರ ದೊರೆಯಿತು. ಹೀಗೆ ಆಂಧ್ರದಲ್ಲೂ ಜಯಭೇರಿ ಭಾರಿಸಿದರು. ಇದೇ ಸಂದರ್ಭದಲ್ಲಿ ರಾಜಮಂಡ್ರಿ, ಕಾಕಿನಾಡ, ಹೈದರಾಬಾದ್‌ಗಳಲ್ಲೂ ನಾಟಕ ಪ್ರದರ್ಶನಗಳಲ್ಲಿ ಪಾಲ್ಗೊಂಡರು.

ಚಲನಚಿತ್ರ ಲೋಕದಲ್ಲಿ[ಬದಲಾಯಿಸಿ]

ಮುಂದೆ ಚಲನಚಿತ್ರಾಸಕ್ತರಾದ ವಾಸುದೇವ ಗಿರಿಮಾಜಿಯವರು ಹಲವಾರು ಪತ್ರವ್ಯವಹಾರ ನಡೆಸಿದರು. ಈ ಸಂದರ್ಭದಲ್ಲಿ ಅವರಿಗೆ ರಾಮಾನುಜ ಹಿಂದಿ ಚಿತ್ರದಲ್ಲಿ ಅಭಿನಯಿಸಲು ಕರೆ ಬಂತು. ಆದರೆ ಅಭಿನಯಕ್ಕೆ ಅವಕಾಶ ದೊರೆಯಲಿಲ್ಲ. ಬದಲಿಗೆ ಅವರಿಗೆ ದೊರೆತದ್ದು ಬಂಗಾಳಿ ಚಿತ್ರದ ಸಹಾಯಕ ನಿರ್ದೇಶಕರ ಹುದ್ದೆ. ಪಿ.ಸಿ. ಬರುವಾ ನಿಧನಾನಂತರ ಇರಾನ್-ಕಿ-ಏಕ್‌ರಾತ್ ಪೂರ್ಣ ನಿರ್ದೇಶನದ ಹೊಣೆ ನಿರ್ವಹಿಸಿದರು. ಕನ್ನಡದಲ್ಲಿ ಸುಭದ್ರಾ, ವಿಚಿತ್ರ ಪ್ರಪಂಚ, ಹಂಸಗೀತೆ, ನಾಗರಹೊಳೆ ಭರ್ಜರಿ ಭೇಟೆ, ಸಂಕ್ರಾಂತಿ ಮುಂತಾದವು ವಾಸುದೇವ ಗಿರಿಮಾಜಿ ಅವರು ವಿವಿಧ ಕಾಲಘಟ್ಟಗಳಲ್ಲಿ ನಟಿಸಿದ ಕೆಲವೊಂದು ಚಿತ್ರಗಳಲ್ಲಿ ಸೇರಿವೆ. ಹೀಗೆ ವಾಸುದೇವ ಗಿರಿಮಾಜಿಯವರು ಹಲವಾರು ಚಿತ್ರಗಳ ನಾಯಕ, ಖಳ ನಾಯಕ ಪಾತ್ರ ನಿರ್ವಹಿಸಿದ್ದರು.

ವಿದಾಯ[ಬದಲಾಯಿಸಿ]

ಹೀಗೆ ರಂಗಭೂಮಿ ಮತ್ತು ಚಲನಚಿತ್ರರಂಗಗಳಲ್ಲಿ ತಮ್ಮ ವಿಶಿಷ್ಟ ಛಾಪಿನಿಂದ ಕಂಗೊಳಿಸಿದ್ದ ವಾಸುದೇವ ಗಿರಿಮಾಜಿಯವರು ಆಗಸ್ಟ್ ೨೪, 1993ರ ವರ್ಷದಲ್ಲಿ ಈ ಲೋಕವನ್ನಗಲಿದರು.

ಮಾಹಿತಿ ಕೃಪ[ಬದಲಾಯಿಸಿ]

ಕಣಜ Archived 2016-06-10 ವೇಬ್ಯಾಕ್ ಮೆಷಿನ್ ನಲ್ಲಿ., ಪ್ರಜಾವಾಣಿ ಹಾಗೂ ವೆಬ್ ಅಂತರ್ಜಾಲದ ವಿವಿದ ತಾಣಗಳು