ವಸಂತ ಕಲಕೋಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:VKK.JPG
'ಕಲಕೋಟಿಯವರು,ಡಾ.ನಿಸಾರ್ ಅಹಮದ್ ರವರ ಜೊತೆ'

ಶ್ರೀ ವಸಂತ ಶ್ರೀನಿವಾಸ ಕಲಕೋಟಿ, ಮುಂಬಯಿಮಹಾನಗರದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದ ಮಹನೀಯರುಗಳಲ್ಲೊಬ್ಬರು. ಮಹಾರಾಷ್ಟ್ರದ ಥಾಣೆಜಿಲ್ಲೆಯ, ಡೊಂಬಿವಲಿಯ ನಿವಾಸಿ, ಕ್ರಿಯಾಶೀಲ ವ್ಯಕ್ತಿತ್ವ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಉಪಕುಲಸಚಿವರಾಗಿ ಸೇವೆಸಲ್ಲಿಸಿ, ನಿವೃತ್ತರಾದ ಅವರು ಕನ್ನಡಪರ ಚಟುವಟಿಕೆಗಳಿಗೆಲ್ಲಾ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. 'ಡೊಂಬಿವಲಿಯ ಕರ್ನಾಟಕ ಸಂಘದ ಅಧ್ಯಕ್ಷ'ರಾಗಿ ಬಹುಕಾಲ ಕೆಲಸಮಾಡಿ, ಕನ್ನಡಿಗರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ತಮಗಿದ್ದ ಆಳವಾದ ಅನುಭವವನ್ನು 'ಮಂಜುನಾಥ ವಿದ್ಯಾಲಯ'ದ ಬೆಳವಣಿಗೆಗೆ ಧಾರೆಯೆರೆದಿದ್ದಾರೆ.

ಚಿತ್ರ:SRKK.JPG
'ಖ್ಯಾತ ಕನ್ನಡ ಧಾರಾವಾಹಿ ನಿರ್ದೇಶಕ, ಶ್ರೀ.ಟಿ.ಎನ್. ಸೀತಾರಾಂ ಜೊತೆ, ಮುಂಬಯಿನ ಮೈಸೂರ್ ಅಸೋಸಿಯೇಷನ್ ನ ಕಾರ್ಯಕ್ರಮವೊಂದರಲ್ಲಿ'

ಜನನ, ವಿದ್ಯಾಭ್ಯಾಸ[ಬದಲಾಯಿಸಿ]

ಸನ್. ೧೯೩೮ ರಲ್ಲಿ ಜನಿಸಿದ ವಸಂತ ಕಲಕೋಟಿಯವರು ಬಹುಭಾಷಿಕ ಸಂವೇದನೆಯನ್ನುಳ್ಳವರು. ಎಂ.ಎ.ಎಲ್.ಎಲ್.ಬಿ; ಡಿ.ಎ.ಎಂ. ಪದವೀಧರರು. ಎರಡು ದಶಕಕ್ಕೂ ಹೆಚ್ಚುಕಾಲ ಕರ್ಮವೀರ, ಸಂಯುಕ್ತ ಕರ್ನಾಟಕ ಪತ್ರಿಕೆಗಳಿಗೆ ಅಂಕಣ ಬರೆಯುತ್ತಾ ಬಂದಿದ್ದಾರೆ ಹಿಂದಿ, ಮಾರಾಠಿ, ಭಾಷೆಗಳಲ್ಲಿನ ತಮಗೆ ಇಷ್ಟವಾದ ಕಥೆಗಳನ್ನು ಕಾಲಕಾಲಗಳಲ್ಲಿ ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸುತ್ತಾ ಬಂದಿದ್ದಾರೆ. ಅವರ ಹಲವಾರು ಲೇಖನಗಳು, ಬೇರೆಬೇರೆ ಕನ್ನಡ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಕಲಕೋಟಿಯವರು, ವಕೀಲರಾಗಿಯೂ ಕಾರ್ಯ ನಿರ್ವಹಿಸಿದರು. ಉತ್ತಮ ಸಂಘಟಕರು. ವಸಂತರಿಗೆ, ಇಂಟರ್ ಸೈನ್ಸ್ ಮುಗಿಸಿ ಇಂಜಿನಿಯರ್ ಆಗುವ ಕನಸಿತ್ತು. ಬೆಳಗಾವಿಯ ಬಿ.ಕೆ.ಮಾಡೆಲ್ ಹೈಸ್ಕೂಲ್ ನಲ್ಲಿ ಕಲಿಯುತ್ತಿದ್ದಾಗ, ಶಾಲೆಯ ಅಧ್ಯಾಪಕ ಶ್ರೀಮನಗೂಲಿಯವರ ಸಂಪಾದಕತ್ವದಲ್ಲಿ 'ಅಶೋಕ' ಮತ್ತು 'ಚಂದ್ರಗುಪ್ತ' ಎಂಬ ಎರಡು ಭಿತ್ತಿ ಪತ್ರಿಕೆಗಳು ಪ್ರಕಟವಾಗುತ್ತಿದ್ದವು. ಆಗ. ಅಧ್ಯಾಪಕರ ಒತ್ತಾಯದ ಮೇರೆಗೆ, ೧೯೫೭-೫೮ ರಲ್ಲಿ ಒಂದೆರಡು ಲೇಖನಗಳನ್ನು ಬರೆದು ಪ್ರಕಟಿಸಿದ್ದರು. ೧೯೫೮ ಹುಬ್ಬಳ್ಳಿಯ ಸೈನ್ಸ್ ಕಾಲೇಜಿನಲ್ಲಿ ಪ್ರವೇಶಕ್ಕೆ ಅರ್ಜಿ ಹಾಕಿದ್ದರು. ಆದರೆ ಕಾರಣಾಂತರಗಳಿಂದ ಅದನ್ನು ರದ್ದುಗೊಳಿಸಿ ಮುಂಬಯಿ ಮಹಾನಗರಕ್ಕೆ ಬಂದರು.

ಮುಂಬಯಿ ಮಹಾನಗರದಲ್ಲಿ[ಬದಲಾಯಿಸಿ]

ಮುಂಬಯಿ ಮಹಾನಗರ ಪಾಲಿಕೆ ಸ್ವಾಮಿತ್ವದಲ್ಲಿದ್ದ ಜಿ.ಎಸ್.ಮೆಡಿಕಲ್ ಕಾಲೇಜ್ ಮತ್ತು ಕೆ.ಇ.ಎಂ. ಆಸ್ಪತ್ರೆಯಲ್ಲಿ ನೌಕರಿ ಗಳಿಸಿದರು. ಸನ್ ೧೯೫೯ ರಲ್ಲಿ ಮಾಟುಂಗದಲ್ಲಿದ್ದ 'ಖಾಲ್ಸಾ ಕಾಲೇಜ್' ನಲ್ಲಿ ಎಫ್.ವೈ.ಆರ್ಟ್ಸ್ ಕ್ಲಾಸಿಗೆ ಸೇರಿಕೊಂಡರು. ಬೆಳಗಿನ ಕಾಲೇಜ್ ಆದ್ದರಿಂದ ಅವರ ಮುನಿಸಿಪಲ್ ನೌಕರಿಗೆ ತೊಂದರೆ ಆಗಲಿಲ್ಲ. ಬೆಳಿಗ್ಯೆ ೯-೩೦ ರವರೆಗೆ ಮಾತ್ರ ಕ್ಲಾಸಿಗೆ ಹಾಜರಾಗುತ್ತಿದ್ದರು. ೧೦-೩೦ ರ ನಂತರ ಕನ್ನಡ ಪೀರಿಯೆಡ್ ಇರುತ್ತಿತ್ತು. ಹಾಗಾಗಿ ಅದಕ್ಕೆ ಹಾಜರಾಗುವುದು ಬಹಳ ಕಷ್ಟವೆ ಆಗಿತ್ತು. ಆಗ ಪ್ರಾಧ್ಯಾಪಕ ಎಸ್.ಏನ್.ಬ್ಯಾತನಾಳ ಕನ್ನಡ ಕಲಿಸುತ್ತಿದ್ದರು. ಅವರಿಗೆ ತಮ್ಮ ಪರಿಸ್ಥಿತಿಯನ್ನು ಅರಿಕೆಮಾಡಿಕೊಂಡರು. ಅನಧಿಕೃತವಾಗಿ ಅಟೆಂಡೆನ್ಸ್ ರಿಯಾಯಿತಿ ಗಳಿಸಿಕೊಂಡರು. ಎಫ್.ವೈ.ಆರ್ಟ್ಸ್ ಕಾಲೇಜಿನ ಪರೀಕ್ಷೆಯಾಗಿತ್ತು. ಇಂಟರ ಆರ್ಟ್ಸ್ ನಲ್ಲಿದ್ದಾಗ ಇತಿಹಾಸ ಪ್ರಾಧ್ಯಾಪಕ ಸಿ.ಎಂ.ಕುಲಕರ್ಣಿಯವರ ಪರಿಚಯವಾಯಿತು. ಅದೇ ವರ್ಷ ಪ್ರಾ.ಜಿ.ವಿ.ಕುಲಕರ್ಣಿಕನ್ನಡ ಪ್ರಾಧ್ಯಾಪಕರಾಗಿ ಖಾಲ್ಸಾ ಕಾಲೇಜಿಗೆ ಬಂದರು. ಕಲಕೋಟಿಯವರು,ಎಸ್.ಎಸ್.ಸಿ ಯಲ್ಲಿ ೭೦% ಅಂಕ ಗಳಿಸಿದ್ದಿದ್ದರಿಂದ ಸರಕಾರದ ವಿದ್ಯಾರ್ಥಿ ವೇತನ ದೊರೆಯಿತು. ಡಾ.ಸಿ.ಎಂ.ಕುಲಕರ್ಣಿಯವರ ಶಿಫಾರಿಸಿನಿಂದ ಅದೇ ಕಾಲೇಜ್ ನಲ್ಲಿ ಹಾಸ್ಟೆಲ್ ನಲ್ಲಿ ಸ್ಥಾನ ದೊರೆಯಿತು. ಜಿ.ವಿ.ಯವರು ಕವಿ,ಹಾಗೂ ಒಳ್ಳೆಯ ಲೇಖಕರು. ಅವರ ಸಂಪರ್ಕದಿಂದ ಡಾ.ವಿ.ಕೆ.ಗೋಕಾಕ,ಬೇಂದ್ರೆ,ದಿನಕ ದೇಸಾಯಿ,ಮೊದಲಾದ ಉದ್ದಾಮ ಸಾಹಿತಿಗಳ ಪರಿಚಯವಾಯಿತು. ಕಾಲೇಜಿನ,ಕನ್ನಡಪ್ರೇಮಿ ಮಂಡಲದ ಸದಸ್ಯರಾದರು. ಕಾಲೇಜ್ ಮ್ಯಾಗಜೈನ್ ನಲ್ಲಿ ಒಂದೆರಡು ಲೇಖನಗಳೂ ಪ್ರಕಟವಾದವು.

ಖಾಲ್ಸ ಕಾಲೇಜ್ ದಿನಗಳು[ಬದಲಾಯಿಸಿ]

ಪ್ರೊ. ಜಿ.ವಿಯವರೂ, ಖಾಲ್ಸಕಾಲೇಜ್ ಹಾಸ್ಟೆಲ್ ನಲ್ಲೇ ವಾಸ್ತವ್ಯ ಹೂಡಿದ್ದರು. ಪ್ರತಿದಿನ ರಾತ್ರಿ,'ಜಿವಿ'ಯವರ ಭೇಟಿಯಾದಾಗ,ಅವರು ತಾವು ಬರೆದ ಕಥೆ ಲೇಖನಗಳನ್ನು ವಸಂತರಿಗೆ ಓದಿ ತೋರಿಸುತ್ತಿದ್ದರು. ಕರ್ನಾಟಕದ ಸುಪ್ರಸಿದ್ದ ಪತ್ರಿಕೆಗಳಲ್ಲಿ ಒಂದಾಗಿದ್ದ ಪಾಟೀಲ್ ಪುಟ್ಟಪ್ಪನವರ ಪ್ರಪಂಚ ಪತ್ರಿಕೆಗೆ ಲೇಖನ ಕಳಿಸಿ ಅವು ಪ್ರಕಟಗೊಂದಾಗ ಬಹಳ ಖುಷಿಪಟ್ಟರು. ಪ್ರಪಂಚ ವಾರ ಪತ್ರಿಕೆ, ಮನೋರಮಾ ಪಾಕ್ಷಿಕ ಪತ್ರಿಕೆ, ಸಂಗಮ ಮಾಸ ಪತ್ರಿಕೆಗಳಿಗೆ ಮುಂಬಯಿನ ಪ್ರತಿನಿಧಿಯಾಗಿ ನೇಮಿಸಲ್ಪಟ್ಟರು. ೧೯೬೦-೬೫ ರ ವರೆಗೆ ಕರ್ಮವೀರ ವಾರ ಪತ್ರಿಕೆಗೆ ಮುಂಬಯಿ ಪ್ರತಿನಿಧಿ. ೧೯೭೫-೭೮ ರ ವರೆಗೆ, ಸಂದರ್ಶ ಲೇಖನ, ವ್ಯಕ್ತಿ ಸಂಸ್ಥೆಗಳ ಪರಿಚಯ ಲೇಖನ,ವಿಶೇಷ ಸಚಿತ್ರ ಲೇಖನ, ಮುಂಬಯಿ ಕನ್ನಡಿಗರು,ಸಂಘ ಸಂಸ್ಥೆಗಳ ವರದಿಗಳ ಮುಂಬಯಿ ಪತ್ರ ನಿಯಮಿತವಾಗಿ ಬರೆದು ಪ್ರಕಟಿಸುತ್ತಿದ್ದರು. ಹೀಗೆ ಸುಮಾರು ೨೫ ವರ್ಷಗಳ ಪತ್ರಿಕಾ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು.

ಮನೆಯ ವಾತಾವರಣ[ಬದಲಾಯಿಸಿ]

ತಂದೆ, ಶ್ರೀನಿವಾಸರಾಯರು, ವೃತ್ತಿ ರಂಗಭೂಮಿಯಲ್ಲಿ ನಾಟಕ ನಿರ್ಮಾಣ, ಅಭಿನಯ, ದಿಗ್ದರ್ಶನದಲ್ಲಿ ಖ್ಯಾತಿ ಪಡೆದಿದ್ದರು. ತಾಯಿ ಓದಿದ್ದು ಮರಾಠಿ. ಧರ್ಮಪತ್ನಿ ಸೌ.ಗೀತಾ, ಧಾರ್ಮಿಕ ಸಾಹಿತ್ಯಾಸಕ್ತಳು.ಮನೆಯಲ್ಲಿ ಮಕ್ಕಳಿಗೆ ಕನ್ನಡ ಓದಲು ಬರೆಯಲು ಬಾರದು. ಬರೆದಿದ್ದ ಎಲ್ಲಾ ಗಳನ್ನೂ ತಾವೇ ಓದಿ ಸಂತೋಷಪಡುವ ಪರಿಸ್ಥಿತಿ. ಕನ್ನಡ ಭಾಷೆ, ಸಾಹಿತ್ಯ,ಸಂಸ್ಕೃತಿಯ ಬಲವರ್ಧನೆಗೆ ಶ್ರಮಿಸುತ್ತಾ ಬಂದಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಮುಂಬಯಿ ಕರ್ನಾಟಕ ಸಂಘವು, ೨೦೦೭ ರಲ್ಲಿ 'ಸಂಘದ ಪ್ರತಿಷ್ಥಿತ ಗೌರವ ಪುರಸ್ಕಾರನೀಡಿ ಸತ್ಕರಿಸಿದೆ.' ನಿರಂತರ ಬರವಣಿಗೆ ಅವರಿಗೆ ಪ್ರಿಯವಾದ ಸಂಗತಿಗಳಲ್ಲೊಂದು. ಕಲಕೋಟಿಯವರ ಚೊಚ್ಚಲ ಕಥಾ ಸಂಕಲನ 'ಹಳೆಯದು ಹೊನ್ನಲ್ಲವೆ' ಅಭಿಜಿತ್ ಪ್ರಕಾಶನ ಸಂಸ್ಥೆಯ, ೩೩ ನೆಯ ಪ್ರಕಟಣೆಯಾಗಿ ಸನ್.೨೦೧೦ರಲ್ಲಿ ಹೊರಬಂದಿದೆ. ಧಾರವಾಡದ ಡಾ. ಶ್ಯಾಮಸುಂದರ ಬಿದಿರಕುಂದಿ, ಈ ಪುಸ್ತಕ ಪ್ರಕಟಣೆಯ ಕಾರ್ಯದಲ್ಲಿ ಆಸಕ್ತಿವಹಿಸಿದರು. ಮುನ್ನುಡಿಯನ್ನು, ಮುಂಬಯಿನ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ, ಡಾ. ಗಣೇಶ ಉಪಾಧ್ಯ ಬರೆದಿದ್ದಾರೆ.

ಚಿತ್ರ:V ti.jpg
'ಹಳೆಯದು ಹೊನ್ನಲ್ಲವೆ'

ವಸಂತ ಕಲಕೋಟಿಯವರ ಪತ್ರಿಕೋದ್ಯಮ ಸೇವೆ[ಬದಲಾಯಿಸಿ]

೧೯೬೦-೬೨ ಬರವಣಿಗೆಯ ಆರಂಭಕಾಲ. ಹಲವು ಕಥೆಗಳೂ ಅವರ ಜೋಳಿಗೆ ಸೇರಿದವು. ಪ್ರಪಂಚ, ಮತ್ತು ಮುಂಬಯಿನಲ್ಲಿ ಪ್ರಕಟವಾಗುತ್ತಿದ್ದ ಸಚೇತನ ಮಾಸಪತ್ರಿಕೆಗಳಲ್ಲಿ ಅಚ್ಚಾಗುತ್ತಿದ್ದವು. ಬಿಜಾಪುರದಿಂದ ಹೊರಡುತ್ತಿದ್ದ ಸಂದರ್ಶನ ವಾರಪತ್ರಿಕೆ, ಧಾರವಾಡದಿಂದ ಪ್ರಕಟವಾಗುತ್ತಿದ್ದ 'ಜಯಂತಿ ಮಾಸಪತ್ರಿಕೆ, ಮುಂಬಯಿನಿಂದ ಪ್ರಕಟವಾಗುತ್ತಿದ್ದ ತಾಯಿ ನುಡಿ, ಪತ್ರಿಕೆಗಳಲ್ಲಿ ಅಚ್ಚಾಗುತ್ತಿದ್ದವು. ಖಾಲ್ಸ ಕಾಲೇಜಿನ ಹಿಂದಿ ಪ್ರಾಧ್ಯಾಪಕ, ಮಹಿಪ ಸಿಂಗರ ಲೇಖನಗಳು ಸಾರಿಕಾ ಎಂಬ ಹಿಂದಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಅಂತಹ ಕೆಲವು ಪ್ರಸಿದ್ಧ ಹಿಂದಿ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿ ಕೆಲವು ಕನ್ನಡ ಪತ್ರಿಕೆಗಳಲ್ಲಿ ಪ್ರಕಟಿಸಿದರು. ಇತಿಹಾಸ ಪ್ರಾಧ್ಯಾಪಕ, ಡಾ. ಜಗಜಿತ್ ಸಿಂಗ್, ಕಾಲೇಜ್ ಹಾಸ್ಟೆಲ್ ನ ವಾರ್ಡನ್ ಆಗಿದ್ದರು. ಅವರ ಕೆಲವು ಹಿಂದಿ ಕಥೆಗಳನ್ನೂ ಕನ್ನಡಿಸಿ ಪ್ರಕಟಿಸಿದರು. ಸಂಸ್ಕೃತ ಪ್ರಾಧ್ಯಾಪಕ, ಡಾ ಬಾಳ ಗಂಗಲ್, ಹೆಸರಾಂತ ಮರಾಠಿ ಸಾಹಿತಿ, ಡಾ. ಸಿ.ಎಂ. ಕುಲಕರ್ಣಿಯವರ ಆಪ್ತಗೆಳೆಯರು. ಅವರ ಕೆಲವು ಮರಾಠಿ ಕತೆಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಕಟಿಸಿದರು. ಪತ್ರಿಕಾ ಬರವಣಿಗೆ, ಕಲಕೋಟಿಯವರ ಹವ್ಯಾಸಿ ವೃತ್ತಿಯಾಗಿತ್ತು. ನಂತರದ ದಿನಗಳಲ್ಲಿ ಡಾ. ಹಾ. ಮಾ. ನಾಯಕ, ಡಾ. ಎಂ. ಎಂ. ಕಲಬುರ್ಗಿ, ಡಾ. ಚನ್ನವೀರ ಕಣವಿ, ಡಾ. ಮ. ಗು. ಬಿರಾದಾರ, ಡಾ. ಕೃಷ್ಣಾ ಮೂರ್ತಿ ಕಿತ್ತೂರ, ಪ್ರಾ.ಪಿ.ಕೆ.ಭಾಗೋಜ, ಪ್ರಾ. ಕೀರ್ತಿನಾಥ ಕುರ್ತುಕೋಟಿ, ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ, ಬಿ.ಎ.ಸನದಿ, ಅರವಿಂದ ನಾಡಕರ್ಣಿ, ವ್ಯಾಸರಾಯ ನಿಂಜೂರ,ಕೆ.ಟಿ. ವೇಣುಗೋಪಾಲ, ಶ್ರೀಮುಂಜೆ ಪರಾರಿ, ಬಿ.ಎಸ್. ಕುರ್ಕಾಲ್ ಮೊದಲಾದ ಸಾಹಿತಿಗಳ ಪರಿಚಯವಾಯಿತು.

ವೃತ್ತಿಜೀವನದ ಮಧ್ಯೆ ಓದು[ಬದಲಾಯಿಸಿ]

  • ೧೯೬೩ ಎಪ್ರಿಲ್ ನಲ್ಲಿ ಬಿ.ಎ.(ಎಕೊನೊಮಿಕ್ಸ್), ಸ್ಪೆಶಲ್ ಪದವಿ
  • ಮುಂಬಯಿ ವಿಶ್ವವಿದ್ಯಾಲಯದ, ಎಕೊನಾಮಿಕ್ಸ್ ಡಿಪಾರ್ಟ್ಮೆಂಟ್ ನಲ್ಲಿ ಎಂ. ಎ.(ಎಕೊನಾಮಿಕ್ಸ್) ಪದವಿ
  • 'New Law College' ನಲ್ಲಿ ಎಲ್.ಎಲ್.ಬಿ ಪದವಿಯನ್ನೂ ಗಳಿಸಿದರು.
  • ಮುಂಬಯಿನ ಪ್ರಖ್ಯಾತ (JLBMI) ಕಾಲೇಜಿನ (PGDIM) ಪದವಿ ಪಡೆದುಕೊಂಡರು.
  • ಸನ್. ೧೯೫೯-೬೧ ರಲ್ಲಿ (BMC)ಯ, ಜಿ.ಎಸ್.ಮೆಡಿಕಲ್ ಕಾಲೇಜ್'
  • ಸನ್. ೧೯೬೧-೬೩ ರ ಅವಧಿಯಲ್ಲಿ 'ಪ್ರೈವೇಟ್ ಕೆಮಿಕಲ್ ಕಾರ್ಖಾನೆಯಲ್ಲಿ',
  • ಸನ್. ೧೯೬೩-೬೫ ಅವಧಿಯಲ್ಲಿ ಪೊವಾಯಿನಲ್ಲಿರುವ,(IIT)ನಲ್ಲಿ ಸೇವೆ' ಸಲ್ಲಿಸಿದರು.
  • ಸನ್. ೧೯೬೫-೬೮, ೭೨ ಮುಂಬಯಿ ವಿಶ್ವವಿದ್ಯಾಲಯದ (UDCT) ಯಲ್ಲಿ 'ಸ್ಟೋರ್ಸ್ ಸೂಪರಿಡೆಂಟ್'
  • ನಂತರ 'ಸಹಾಯಕ ರೆಜಿಸ್ಟ್ರಾರ್' ಆಗಿ ಕಾರ್ಯನಿರ್ವಹಿಸಿದರು.
  • ಅನಂತರ ಮುಂಬಯಿ ವಿಶ್ವವಿದ್ಯಾಲಯದ ಪೋಸ್ಟ್ ಆಫೀಸ್ ನಲ್ಲಿ 'ಅಸಿಸ್ಟಂಟ್ ರೆಜಿಸ್ಟ್ರಾರ್',
  • ನಂತರ, 'ಡೆಪ್ಯುಟಿ ರೆಜಿಸ್ಟ್ರಾರ್' ಆಗಿ ದುಡಿದರು.
  • ಕಾಲಿನಾ, ವಿದ್ಯಾನಗರಿಯಲ್ಲಿರುವ(GICE&D)ಸಂಸ್ಥೆಯಲ್ಲಿ, ೧೯೯೦-೯೧ ರವರೆಗೆ, 'ಡೆಪ್ಯುಟಿ ಡೈರೆಕ್ಟರ್'ಆಗಿ ಕಾರ್ಯನಿರ್ವಹಿಸಿದರು.
  • ಸನ್.೧೯೯೮ ರಲ್ಲಿ ಸೇವಾ ನಿವೃತ್ತರಾದರು.

ಓದು ಕಡಿಮೆಯಾಯಿತು[ಬದಲಾಯಿಸಿ]

ಹತ್ತು ಹಲವು ಜವಾಬ್ದಾರಿಯುತ ಕೆಲಸಗಳ ಮಧ್ಯೆ ಬರವಣಿಗೆ ಪತ್ರಿಕಾ ವ್ಯವಸಾಯ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಕನ್ನಡದಲ್ಲಿ ಓದಿದ್ದು ಕಡಿಮೆಯಾಯಿತು. ಮುಂಬಯಿನ ಪತ್ರಕರ್ತ ಗೆಳೆಯ, ಎನ್.ಸಿ.ದೇಸಾಯಿ (ಕನ್ನಡ ಪ್ರಭಾ ಪ್ರತಿನಿಧಿ), ಕೆ.ಟಿ.ವೇಣುಗೋಪಾಲ (ಉದಯವಾಣಿ ಪ್ರತಿನಿಧಿ), ಸಂತೋಷಕುಮಾರ ಗುಲ್ವಾಡಿ (ಪ್ರಜಾವಾಣಿ ಪ್ರತಿನಿಧಿ) ಪತ್ರಿಕೆಯಲ್ಲಿ ತಮ್ಮ ಕಥೆ, ಲೇಖನಗಳನ್ನು ತುಂಬಾ ಅಚ್ಚುಕಟ್ಟಾಗಿ ಸ್ಕ್ರಾಪ್ ಬುಕ್ಕಿನಲ್ಲಿ ಅಂಟಿಸಿ ವ್ಯವಸ್ಥಿತವಾಗಿ ಇಡುತ್ತಿದ್ದರು. ಆದರೆ ವಸಂತ ಕಲಕೋಟಿಗಳಿಗೆ ಸಮಯದ ಅಭಾವದಿಂದ ಅವೆಲ್ಲಾ ಸಾಧ್ಯವಾಗಲಿಲ್ಲ. ಅವರ ಪ್ರಕಟವಾದ ಲೇಖನದ ಪ್ರತಿಗಳನ್ನು ಗಂಟಿನಲ್ಲಿ ಕಟ್ಟಿಟ್ಟು ಮನೆಯ ಹಳೆಯ ಕಪಾಟಿನಲ್ಲಿ ತುರುಕುತ್ತಿದ್ದರು. ಅವುಗಳಲ್ಲಿ ಹಲವು ಕಳೆದು ಹೋದ ಪ್ರಸಂಗವೂ ಇದೆ. ಕೆಲವು, ಜೀರ್ಣಾವಸ್ಥೆಯಲ್ಲಿದ್ದು ಹರಿದು ಹೋದವು.

ಮುಂಬಯಿಗೆಳೆಯರ ಸಹಾಯ[ಬದಲಾಯಿಸಿ]

ಮಿತ್ರ, ಕೆ.ಟಿ.ವೇಣುಗೋಪಾಲ, ಮುಂಬಯಿ ಪತ್ರ ಸಂಕಲನವನ್ನು ಪ್ರಕಟಿಸಿದರು.ಆಗ ಕಲಕೋಟಿಯವರೂ ಜಿ.ಡಿ.ಜೋಶಿ, ಬಿ.ಎಸ್.ಕುರ್ಕಾಲ್, ಗಣೇಶ ಉಪಾಧ್ಯ, ಬಿ.ಎನ್.ಸನದಿಯವರನ್ನು ಭೆಟ್ಟಿಯಾಗಿ ತಮ್ಮ ಲೇಖನಗಳನ್ನು ಪ್ರಕಟಿಸಲು ಸಹಾಯ ಕೋರಿದರು. ೫೦ ವರ್ಷಗಳ ಹಿಂದೆ ಬರೆದು ಪ್ರಕಟಿಸಿ ಜೀರ್ಣಾವಸ್ಥೆಯಲ್ಲಿದ್ದ ಗಂಟು ಕಟ್ಟಿದ್ದ ಪತ್ರಿಕೆಗಳನ್ನು ಹೊರತೆಗೆದು, ಅವುಗಳನ್ನು ಬೇರ್ಪಡಿಸುವ ಪ್ರಯತ್ನ ನಡೆಸಿದರು. ಕಲಕೋಟಿಯವರ ಪ್ರೀತಿಯ ಪತ್ನಿ ಗೀತ, ನಿಧನವಾಗಿ ಆರೂವರೆ ವರ್ಷಗಳೇ ಕಳೆದಿದ್ದವು. ಕಲಕೋಟಿಯವರ ಹೆಣ್ಣು ಮಕ್ಕಳು ತಮ್ಮ ತಮ್ಮ ಪತಿಯ ಮನೆಗಳಲ್ಲಿ ಸುಖಮಯ ಜೀವನ ನಡೆಸುತ್ತಿದ್ದರು. ಮನೆಯಲ್ಲಿ ಒಂಟಿತನ ಅವರನ್ನು ಕಾಡಿತ್ತು. ಡೊಂಬಿವಲಿಯ ಕರ್ನಾಟಕ ಸಂಘ ನಡೆಸಿಕೊಂಡು ಬರುತ್ತಿರುವ ಮಂಜುನಾಥ ಕಾಲೇಜಿನ ಪ್ರಾಂಶುಪಾಲ, ಡಿ.ವಿ.ಎಸ್.ಅಡಿಗಲರಿಗೆ ಪ್ರಕಟಿತ ಲೇಖನಗಳ ಬಗ್ಗೆ ಹೇಳಿಕೊಂಡಾಗ, ಕಾಲೇಜಿನ ಗ್ರಂಥ ಪಾಲರಾದ,ಶ್ರೀ.ಎಸ್.ಸಿ.ಗುಡ್ದೊಡಗಿಯವರ ಜೊತೆ ಸಮಾಲೋಚಿಸಿ, ಸ್ವಯಂಸ್ಪೂರ್ತಿಯಿಂದ ಅವರು ಒಂದೆರಡು ದಿನ ಅವರ ಮನೆಗೆ ಬಂದು,ಧೂಳುಮಯ ಪುಸ್ತಕಗಳನ್ನೆಲ್ಲಾ ಹೊರತೆಗೆದು, ಕಥೆ, ಲೇಖನ, ಮುಂಬಯಿ ಪತ್ರ,ಹರಟೆ ಪ್ರತಿಗಳನ್ನು ಬೇರ್ಪಡಿಸಿ, ಅವುಗಳ 'ಜೆರಾಕ್ಸ್ ಕಾಪಿ' ಮಾಡಿಸಿಕೊಟ್ಟು ಸಹಾಯಮಾಡಿದರು.

ಡಾ.ಗಣೇಶ ಉಪಾಧ್ಯರ ಸಹಕಾರ[ಬದಲಾಯಿಸಿ]

ನಂತರ ಈ ಪ್ರತಿಗಳನ್ನು ಮುಂಬಯಿವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ,ಡಾ. ಗಣೇಶ ಉಪಾಧ್ಯರಿಗೆ ತೊರಿಸಿದರು. ಅವರು, ಮೆಚ್ಚಿ ತಮ್ಮ ಅಭಿಜಿತ್ ಪ್ರಕಾಶನದ ವತಿಯಿಂದ ಪ್ರಕಟಿಸಲು ಆಶ್ವಾಸನೆಇತ್ತರು. ಆಸಮಯದಲ್ಲಿ ಕರ್ನಾಟಕ ಸಂಘಕ್ಕೆ ಕುಮಾರವ್ಯಾಸ ದತ್ತಿ ಉಪನ್ಯಾಸಕಾರರಾಗಿ ಬಂದಿದ್ದ, 'ಡಾ. ಶ್ಯಾಮ ಸುಂದರ ಬಿದರಕುಂದಿ'ಯವರು ಒಂದು ದಿನ ಪೂರ್ತಿ ಮನೆಯಲ್ಲಿ ಕುಳಿತು ಆ ಪ್ರತಿಗಳನ್ನೆಲ್ಲಾ ಓದಿ ಕೆಲವು ಟಿಪ್ಪಣಿಗಳನ್ನು ಮಾಡಿ ತಿದ್ದಿದರು. ಮುದ್ರಣದ ವ್ಯವಸ್ಥೆಯನ್ನು ಹುಬ್ಬಳ್ಳಿ ಧಾರವಾಡದಲ್ಲಿ ಮಾಡುವುದಾಗಿ ತಿಳಿಸಿದರು.

ಡಾ.ಶ್ಯಾಮಸುಂದರ ಬಿದರಕುಂದಿಯವರ ಆಶ್ವಾಸನೆ[ಬದಲಾಯಿಸಿ]

ವಸಂತರವರ ಕಥಾಸಂಕಲನಕ್ಕೆ, ತಕ್ಕ ಶೀರ್ಷಿಕೆಯನ್ನೂ ಸೂಚಿಸಿ, ಮುನ್ನುಡಿ ಬರೆಯಲು ಒಪ್ಪಿದರು. ಧಾರವಾಡದಲ್ಲಿ ಜರುಗಿದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಜರುಗಿದ ಹೊರನಾಡ ಕನ್ನಡಿಗರ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮಾವೇಶದಲ್ಲಿ ಹಿರಿಯಕವಿ, ಬಿ.ಎ.ಸನದಿ ಈ ಕಥೆಗಳನ್ನು ಓದಿ,ಮೆಚ್ಛಿಕೊಂಡರು. ಪ್ರಕಟವಾಗಿದ್ದ ಎಲ್ಲ ಲೇಖನಗಳು ೬೦ ರ ದಶಕದವು. ಆಗ ವಸಂತ ಕಲಕೋಟಿಯವರ ಪ್ರಾಯ, ೨೨-೨೩ ಆಗಿತ್ತು. ಹೆಚ್ಚು ಕನ್ನಡ ಸಾಹಿತ್ಯ ಓದಿಕೊಂಡವನಲ್ಲ. ನವ್ಯ,ಅತಿನವ್ಯ, ಬಂಡಾಯ,ದಲಿತ ಸಾಹಿತ್ಯಗಳ ಸ್ಪಷ್ಟ ಪರಿಚಯವಿರಲಿಲ್ಲ. ಅವರಲ್ಲಿ ಲಭ್ಯವಿದ್ದ ಲೇಖನಗಳು, 'ಪ್ರಪಂಚ, ಸಂದರ್ಶನ, ಸಚೇತನ, ತಾಯಿನುಡಿ, ಕಲ್ಯಾಣ, ಜಯಂತಿ, ಪತ್ರಿಕೆಗಳಲ್ಲಿ ಪ್ರಕಟವಾದ ಬರಹಗಳು. ೧೯೭೬ ರ ದೀಪಾವಳಿ ವಿಶೇಷ ಸಂಚಿಕೆಯಲ್ಲಿ 'ಡಾ.ವಿಶ್ವನಾಥ ಕಾರ್ನಾಡ್' ರವರ ಸಂಪಾದಕತ್ವದಲ್ಲಿ ಅಚ್ಚಾದ ಅನುವಾದಿತ ಕಥೆ, ಈ ಪುಸ್ತಕದಲ್ಲಿ ಮರು ಪ್ರಕಟವಾಗಿದೆ. 'ಉದಯವಾಣಿ ದೀಪಾವಳಿ ಸಂಚಿಕೆ'ಯಲ್ಲಿ ಬರೆದ 'ಗಂಗಾ ಕಥೆ', 'ಗುಜರಾತಿ ಕಥಾ ಸಾಹಿತ್ಯ ನಡೆದು ಬಂದ ದಾರಿ' ಕುರಿತು ವಿಶೇಷ ಲೇಖನಗಳು ಪ್ರಕಟಿತವಾಗಿದ್ದವು. ಅವನ್ನು ಹುಡುಕುವುದು ಸಾಧ್ಯವಾಗಲಿಲ್ಲ.

ಪಾಟೀಲ್ ಪುಟ್ಟಪ್ಪನವರ ಆಶೀರ್ವಾದ[ಬದಲಾಯಿಸಿ]

ಕಳೆದ ೫೦ ವರ್ಷಗಳಿಂದ ಮುಂಬಯಿ ಕನ್ನಡಿಗನಾಗಿ ಒಳನಾಡಿಗೂ ಹೊರನಾಡಿಗೂ ಸುಪರಿಚಿತರಾದ ಲೇಖಕ,ಪತ್ರಕಾರ ಸಂಘಟಕ,ವಸಂತ ಶ್ರೀನಿವಾಸ ಕಲಕೋಟಿಯವರನ್ನು ಪ್ರಪಂಚ ಪತ್ರಿಕೆಯ ಪಾಟೀಲ್ ಪುಟ್ಟಪ್ಪನವರು, ಗುರುತಿಸುವುದು ಹೀಗೆ:

"ಹುಬ್ಬಳ್ಳಿ ಮೂಲದ ನಮ್ಮ ವಸಂತ, ಮುಂಬಯಿನಲ್ಲುಳಿದು, ಕನ್ನಡ ಕುಲಕೋಟಿಯವರಾಗಿಬಿಟ್ಟಿದ್ದಾರೆ".'ಡಾ.ಶ್ಯಾಮಸುಂದರ ಬಿದರಕುಂದಿ', ವಸಂತರ ಬಗ್ಗೆ ಬರೆಯುತ್ತಾ, 

ಪತ್ರಕಾರನಾಗಿ ಕಲಕೋಟಿಯವರು, ಸಂಯುಕ್ತಕರ್ನಾಟಕ, ಪ್ರಪಂಚ,ಸಚೇತನ,ಕರ್ಮವೀರಪತ್ರಿಕೆಗಳಿಗೆ ಸಣ್ಣಕತೆ, ಅನುವಾದ, ಮುಂಬಯಿನ ವಾರ್ತೆಗಳನ್ನು ಬರೆದು ಕಳಿಸುತ್ತಿದ್ದರು. ಈ ಹವ್ಯಾಸವನ್ನು ಅವರು,ಪ್ರವೃತ್ತಿಯಾಗಿ ಬೆಳೆಸಿಕೊಂಡು ಮುಂಬಯಿಯ ಸಾಹಿತ್ಯ,ಮತ್ತು ಸಂಸ್ಕೃತಿಲೋಕದೊಂದಿಗೆ ಬೆರೆತವರು. ಡೊಂಬಿವಲಿಯಲ್ಲಿ ಕರ್ನಾಟಕ ಸಂಘವನ್ನು ಕಟ್ಟಿ, ಶಾಲಾಶಿಕ್ಷಣದಲ್ಲಿ ಕನ್ನಡವನ್ನು ಕಲಿಯುವಂತೆ ಘೋಷಿಸಿದವರು. ಐವತ್ತು ವರುಷದ ಕಲಕೋಟಿಯವರ ಮುಂಬಯಿವಾಸವು,ಕನ್ನಡಿಗರು ಹೆಮ್ಮೆ ಪಡುವಂತಹದು. ಕತೆಗಾರನಾಗಿ ಕಲಕೋಟಿಯವರು ಮುಂಬಯಿನ ಆಧುನಿಕ ಸಮಾಜ, ಕುಟುಂಬ,ಉದ್ಯೋಗ ಜೀವನಗಳಲ್ಲಿ ತಮಗೆ ಕಂಡುದ್ದನ್ನು ಹಾಗೂ ತಾವು ಅನುಭವಿಸಿದ್ದನ್ನು ಘಟನಾಪ್ರಧಾನ ಸಣ್ಣಕತೆಯ ರೂಪದಲ್ಲಿ ಹಿಡಿದಿಟ್ಟಿದ್ದಾರೆ.ಇಲ್ಲಿಯ ಮುಂಬಯಿ ಆರನೆಯ ದಶಕದ್ದು. ಕಂಡುಂಡ ಕಣ್ಣು-ಮನಸ್ಸು ತಿಳುವಳಿಕೆ ತಾರುಣ್ಯದ್ದು. ಇದೆಲ್ಲಾ ಇಂದಿಗೆ ಹಳೆಯ ಚಿತ್ರವೆನಿಸಿದರೂ ಈ ಕತೆಗಳಿಗೆ ಹೊನ್ನಿನ ಗುಣವಿದೆ.