ವರ್ಧಮಾನ ಸ್ವಾಮಿ ಬಸದಿ, ಗೇರುಸೊಪ್ಪೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಬಸದಿ ವಾಸುಪೂಜ್ಯ ಭಗವಾನರ ಬಸದಿ.ತಪ್ಪು ತಿಳುವಳಿಕೆಯಿಂದ ವರ್ಧಮಾನಸ್ವಾಮಿ ಬಸದಿ ಎಂದಾಗಿದೆ.ಪ್ರಮುಖ ನಾಯಕರ ಸಪ್ರಭಾವಳಿಯ ಸುತ್ತಲಿರುವ ತೀರಥಂಕರರನ್ನು ಆಧರಿಸಿ ಸ್ಪಷ್ಟಪಡಿಸಬಹುದು.

ಸ್ಥಳ[ಬದಲಾಯಿಸಿ]

ವರ್ಧಮಾನ ಸ್ವಾಮಿ ಬಸದಿಯು ಗೆರುಸೊಪ್ಪೆಯ ಶ್ರೀ ನೇಮಿನಾಥ ಸ್ವಾಮಿ ಬಸದಿಯ ಎದುರುಗಡೆ ಇದೆ. ಆದರೆ ಬಸದಿಯ ಸುತ್ತಲಿನ ಅಂಗಳಕ್ಕಿಂತ ಸ್ವಲ್ಪ ಎತ್ತರದ ಒಂದು ದಿಣ್ಣೆಯ ಮೇಲೆ (ಇದು ಬಸ್ತಿಯ ಅಸ್ತವಾರವೇ ಆಗಿದೆ) ನಿರ್ಮಾಣಗೊಂಡಿದೆ.

ಪ್ರಕಾರ[ಬದಲಾಯಿಸಿ]

ಬಸದಿಯ ಪ್ರಾಕಾರವನ್ನು ಪ್ರವೇಶಿಸುವಾಗಲೇ ನಮ್ಮ ಎಡಬದಿಗೆ ಶ್ರೀ ಬಾಹುಬಲಿ ಸ್ವಾಮಿಯ ಸುಮಾರು ಆರು ಅಡಿ ಎತ್ತರದ ಶಿಲಾಮೂರ್ತಿಯನ್ನು ಪ್ರಾಕಾರಗೋಡೆಗೆ ಇರಗಿಸಿ ಇಟ್ಟಿರುವುದನ್ನು ಕಾಣಬಹುದು. ಇದು ಬಸದಿಯನ್ನು ಗುರುತಿಸಲು ಸಹಕಾರಿಯಾಗಿದೆ. ಯಾಕೆಂದರೆ ಇಲ್ಲಿಯ ಕೆಲವು ಬಸದಿಗಳ ಗರ್ಭಗೃಹದ ರಚನೆ ಏಕಪ್ರಕಾರವಾಗಿದೆ. ಇದರ ಪ್ರಾಕಾರಗೋಡೆಯ ಒಳಗಿನ ಜಗಲಿಯ ಪೂರ್ವ ದಿಕ್ಕಿಗೆ ಮೂರು ಬೃಹತ್ ಶಿಲಾಶಾಸನಗಳನ್ನೂ, ಉತ್ತರ ದಿಕ್ಕಿಗೆ ಏಳು ಬೃಹತ್ ಶಿಲಾಶಾಸನಗಳನ್ನೂ ಶಾಸನಗಳಿರುವ ಏಳು ವೀರಗಲ್ಲುಗಳನ್ನು ಒರಗಿಸಿ ಇಡಲಾಗಿದೆ. [೧]

ಕಾಲ ಮತ್ತು ನಿಮಾ‍ಣ[ಬದಲಾಯಿಸಿ]

ಇವುಗಳ ಪೈಕಿ ಇಂದು ಬೃಹತ್ ಶಿಲಾಶಾಸನವು ಕ್ರಿ.ಶ. ೧೩೭೮ನೇ ಇಸವಿಯದ್ದಾಗಿದ್ದು, ಗೇರುಸೊಪ್ಪೆಯ ಅರಸನ ಪ್ರಜೆಯಾದ ಚಂದ್ರಪುರ (ಚಂದಾವರ)ದ ಹೊನ್ನಪ್ಪ ಶೆಟ್ಟಿಯು ಬಸದಿಗೆ ಭೂದಾನ ಮಾಡಿದ ವಿಷಯವನ್ನು ಹೇಳುತ್ತದೆ. ಇನ್ನೊಂದು ನಿಷಿಧಿ ಶಾಸನವಾಗಿದ್ದು ಕ್ರಿ.ಶ. ೧೩೯೨ನೇ ಇಸವಿಗೆ ಸಂಬಧಿಸಿದ್ದಾಗಿದೆ. ಇದು ಗೇರುಸೊಪ್ಪೆಯ ಶ್ರೀ ಅನಂತಸ್ವಾಮಿ ಬಸದಿಯನ್ನು ಯೋಜನ ಶೆಟ್ಟಿಯ ಪತ್ನಿ ರಾಮಕ್ಕ ನಿರ್ಮಿಸಿದಳು ಎಂದು ಹೇಳುತ್ತದೆ. ಮತ್ತೊಂದು ೧೪ನೇ ಶತಮಾನದ ಶಾಸನವು ಬೊಮ್ಮರಸ ಮತ್ತು ಆತನ ರಾಣಿಯ ಪುತ್ರಿಯಾದ ಶಾಂತಲಾದೇವಿಯ ಮರಣದ ಕುರಿತು ಹೇಳುತ್ತದೆ. ಇವೆಲ್ಲವುಗಳ ಶಿಸ್ತುಬದ್ಧ ಅಧ್ಯಯನವು ಈ ಸ್ಥಳದ ಹಾಗೂ ನಗಿರೆ-ಗೇರುಸೊಪ್ಪೆ ರಾಜ್ಯದ ಇತಿಹಾಸದ ಮೇಲೆ ಬಹು ಅಮೂಲ್ಯವಾದ ಬೆಳಕನ್ನು ಚೆಲ್ಲಬಹುದು. ಅಲ್ಲೇ ಬಳಿಯಲ್ಲಿ ಒಂದು ಪೀಠದ ಮೇಲೆ ಕೆಲವು ಗುಂಡು ಕಲ್ಲುಗಳನ್ನು ಇಡಲಾಗಿದೆ. ಈ ಬಸದಿಯ ನಿವೇಶನಕ್ಕೆ ಹೊರಗಿನಿಂದ ಒಂದು ಪ್ರಾಕಾರ ಗೋಡೆ ಇದ್ದು, ಒಳಗೆ ಬಸದಿಯ ಅಂಗಳ ಸಹಿತವಾಗಿ ಈ ಬಸದಿಯ ಗರ್ಭಗೃಹಕ್ಕೆ ಇನ್ನೊಂದು ಮುರ ಕಲ್ಲಿನಿಂದ ಕಟ್ಟಿದ ಪ್ರಾಕಾರ ಗೋಡೆ ಇದೆ. ಒಳಗಿನ ಅಂಗಳಕ್ಕೆ ಇಲಾಕೆಯಿಂದ ಸಿಮೆಂಟ್ ಹಾಕಲಾಗಿದೆ. ಗರ್ಭಗೃಹವೂ ಮುರಕಲ್ಲಿನಿಂದ ನಿರ್ಮಿಸಲ್ಪಟ್ಟಿದ್ದು, ಇತ್ತೀಚೆಗೆ ಸಿಮೆಂಟಿನಿAದ ಗೋಡೆಗಳನ್ನು ಬಲಗೊಳಿಸಲಾಗಿದೆ. ಬಸದಿಗೆ ಒಳಗಿನಿಂದಲೂ ಹೊರಗಿನಿಂದಲೂ ಪ್ರದಕ್ಷಿಣಾ ಪಥಗಳಿವೆ. ಗರ್ಭಗೃಹದ ಮರದ ಬಾಗಿಲನ್ನು ಸರಿಸಿ ಒಳಗೆ ಹೋದರೆ ಶ್ರೀ ವರ್ಧಮಾನ ಸ್ವಾಮಿಯ ಪರ್ಯಂಕಾಸನದ ಸುಂದರ ಶಿಲಾಬಿಂಬವು ದರ್ಶನ ಕೊಡುತ್ತದೆ. ಆದರೆ ಇಲ್ಲಿ ಶ್ರೀ ಶಾಂತಿ ತೀರ್ಥಂಕರರ ಒಂದು ಬಸದಿ ಇರುವುದಾಗಿಯೂ ಅದು ಅತ್ಯಂತ ಉತ್ತಮವಾಗಿರುವುದಾಗಿಯೂ ಡಾ.ಪಿ.ಗುರುರಾಜ ಭಟ್ಟರು ತಮ್ಮ ಸ್ಟಡೀಸ್ ಇನ್ ತುಳುವ ಹಿಸ್ಟರಿ ಆ್ಯಂಡ್ ಕಲ್ಚರ್ ಗ್ರಂಥ(ಪುಟ ೧೧೮)ದಲ್ಲಿ ಹೇಳಿದ್ದಾರೆ. ಅದನ್ನು ಕೂಡ ಇಲ್ಲಿಯ ರಾಣಿ ಚೆನ್ನಾಭೈರಾದೇವಿಯೇ ನಿರ್ಮಿಸಿದ್ದುದಾಗಿ ಅವರು ಹೇಳಿದ್ದಾರೆ. ಆದರೆ ಬಸದಿ ಯಾವುದೆಂದು ತಿಳಿದು ಬರುವುದಿಲ್ಲ.

ವಿಶೇಷ[ಬದಲಾಯಿಸಿ]

ಪ್ರಸ್ತುತ ಈ ಗರ್ಭಗೃಹದಲ್ಲಿರುವ ಜಿನಬಿಂಬವು ಪೀಠ ಸಹಿತವಾಗಿ ಸುಮಾರು ಎರಡವರೆ ಅಡಿ ಎತ್ತರವಿದೆ. ಬೇರೆ ಜೀನಬಿಂಬಗಳಲ್ಲಿರುವಂತೆ ಇಲ್ಲಿಯೂ ತೀರ್ಥಂಕರರ ಎರಡೂ ಬದಿಗಳಲ್ಲಿ ಯಕ್ಷಯಕ್ಷಿಯರ ಉಬ್ಬುಶಿಲ್ಪಗಳಿವೆ. ಪ್ರಭಾವಳಿ ಸಹಿತವಾಗಿ ಈ ಸಮಗ್ರ ಮೂರ್ತಿಯು ಒಂದೇ ಈಲೆಯಲ್ಲಿ ಮಾಡಲ್ಪಟ್ಟಿರುವುದಾಗಿ ಹೇಳುತ್ತಾರೆ. ಪ್ರಭಾವಳಿಯಲ್ಲಿ ಮಕರ ತೋರಣದ ಅಲಂಕಾರ ಮತ್ತು ಇಪ್ಪತ್ತನಾಲ್ಕು ತೀರ್ಥಂಕರರ ಪರ್ಯಂಕಾಸನದ ಸುಂದರ ಬಿಂಬಗಳಿವೆ. ಮೂರ್ಥಯ ಶಿರದ ಹಿಂಬದಿಯಲ್ಲಿ ವೃತ್ತಾಕಾರದ ಇನ್ನೊಂದು ಪ್ರಭಾವಲಯವಿದೆ. ಎರಡೂ ಕಡೆಯಲ್ಲಿ ಚಾಮರಧಾರಿಗಳು ನಿಂತುಕೊಂಡಿದ್ದಾರೆ. ಎಲ್ಲಕ್ಕಿಂತ ಮೇಲ್ಗಡೆ ಕೀರ್ತಿಮುಖವಿದೆ. ಗರ್ಭಗುಡಿಯ ಒಳಗಡೆ ಇದಕ್ಕೆ ಸಂಬಂಧಿಸಿದ ಎರಡು ಶಿಲಾಶಾಸನಗಳಿವೆ. ಇವುಗಳಲ್ಲಿ ಮುನಿಗಳೋರ್ವರು ರಾಣಿಯೊಬ್ಬಳಿಗೆ ತತ್ವಾರ್ಥಗಳನ್ನು ಬೋಧಿಸುತ್ತಿರುವಂತೆ ತೋರಿಸಲಾಗಿದೆ. ಇಲ್ಲಿ ಅಂತಹ ಒಟ್ಟು ನಾಲ್ಕು ಆಕೃತಿಗಳಿವೆ. ಈ ಶಾಸನಗಳ ಮೇಲ್ಗಡೆಯಲ್ಲಿ ಮಂಟಪದೊಂದಿಗೆ ಜಿನೇಶ್ವರರ ಬಿಂಬಗಳಿದ್ದು ಅವರಿಗೆ ಚಾಮರ ಬೀಸುತ್ತಿರುವಂತೆ ತೋರಿಸಲಾಗಿದೆ. ಇವುಗಳಲ್ಲಿ ಬಹಳ ಐತಿಹಾಸಿಕ ಮಹತ್ವ ಇದ್ದಂತೆ ಕಾಣುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂಶ್ರೀ ಪ್ರಂಟರ್ಸ್. p. ೩೯೦.