ಮ. ಗು. ಬಿರಾದಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಡಾ. ಮ. ಗು. ಬಿರಾದಾರವರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಬಬಲೇಶ್ವರದಲ್ಲಿ ೧೫.೩.೧೯೩೩ ರಲ್ಲಿ ಜನಿಸಿದರು.

ಸಾಹಿತ್ಯ[ಬದಲಾಯಿಸಿ]

“ಮಗು” ಕಾವ್ಯನಾಮದಿಂದ ಪ್ರಸಿದ್ಧರಾದ ಇವರು ಹಳ್ಳಿಗಾಡಿನ ವಾತಾವರಣದಲ್ಲೇ ಬೆಳೆದುದರಿಂದ ಗ್ರಾಮೀಣ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದವರು. ಈ ಕಾರಣದಿಂದ ಜಾನಪದ ಕ್ಷೇತ್ರದಲ್ಲಿ ಮಹತ್ತರ ಸೇವೆಯನ್ನು ಮಾಡಿದ್ದಾರೆ.

ಪ್ರೊ. ಕುಂದಣಗಾರ ಇವರ ಮಾರ್ಗದರ್ಶನದಲ್ಲಿ “ರತ್ನಾಕರ ವರ್ಣಿ” ವಿಷಯ ಕುರಿತು ಮಹಾಪ್ರಬಂಧವನ್ನು ಬರೆದಿದ್ದಾರೆ. ಜಾನಪದ ಸಮಾಲೋಕನ ಜಾನಪದ ಜೀವಾಳ (೧೯೮೭ ಪುಸ್ತಕ ಅಕಾಡೆಮಿ ಕಲಬುರ್ಗಿ) ಇದರಲ್ಲಿ ಒಟ್ಟು ೧೦ ಸಂಶೋಧನ ಲೇಖನಗಳನ್ನು ಒಳಗೊಂಡಿವೆ. ಸಾಗರ ಸಿಂಪಿ (೧೯೯೦ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು) ಇದಕ್ಕೆ ಸಂಬಂಧಿಸಿದಂತೆ ಅವರ ಬದುಕು ಬರಹಗಳ ವಿಹಂಗಮ ನೋಟವನ್ನು ನೀಡಬಲ್ಲ ಕೃತಿಯಾಗಿದೆ. ಇದರಲ್ಲಿ ೯ ಅಧ್ಯಾಯಗಳಾಗಿ ವಿಂಗಡಿಸಿದ್ದಾರೆ. ಒಟ್ಟಾರೆ ಅವರ ಸಾಹಿತ್ಯ ಬರಹಗಳ ಬಗ್ಗೆ ನೋಟ ಬೀರಿದ್ದಾರೆ. ಮೆಟ್ನಳ್ಳಿ ಹಸನ ಸಾಹೇಬರ ತತ್ವ ಪದಗಳು ‘ಯಯಾತಿ’ ಡಾ. ಲಠ್ಠೆಯವರೊಂದಿಗೆ (೧೯೯೧ ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬುರ್ಗಾ) ಯಕ್ಷಗಾನಕ್ಕೆ ಸಂಬಂಧಿಸಿದ ಪ್ರಕಾರಗಳಲ್ಲಿರುವ ದೊಡ್ಡಾಟಗಳ ಕೃತಿ. ಇವು ಇವರ ಪ್ರಮುಖ ಜಾನಪದ ಕೃತಿಗಳು.

ಹರದೇಶಿ ನಾಗೇಶಿ ಮತ್ತು ನೂರೆಂಟು ಕಥೆಗಳು ಇತರರೊಂದಿಗೆ ಸಂಪಾದಿಸಲ್ಪಟ್ಟ ಕೃತಿಗಳು. ಇವರ ೧೧೦ಕ್ಕೂ ಹೆಚ್ಚು ಸಂಶೋಧನ ಲೇಖನಗಳು ಪ್ರಕಟಗೊಂಡಿವೆ. ಅದರಲ್ಲಿ ಜಾನಪದಕ್ಕೆ ಸಂಬಂಧಪಟ್ಟ ಲೇಖನಗಳು ಅಧಿಕವಾಗಿವೆ. ಇತ್ತೀಚೆಗೆ ‘ಹೋಳಿ ಹಾಡು’ಗಳು ಎನ್ನುವ ಇವರ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಗೊಂಡಿದೆ.

ವೃತ್ತಿ[ಬದಲಾಯಿಸಿ]

ಡಾ. ಮ. ಗು. ಬಿರಾದಾರ ಅವರು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ ಅದರ ಮುಖ್ಯಸ್ಥರಾಗಿ ಮತ್ತು ಪ್ರಸಾರಾಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಗೋಕಾಕ ಚಳುವಳಿಯಲ್ಲಿ ಮುಖ್ಯಪಾತ್ರ, ಪುಸ್ತಕ ಅಕಾಡೆಮಿಯ ಅಧ್ಯಕ್ಷ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯ, ಇವರ ಜಾನಪದ ಸೇವೆಯನ್ನು ಗಮನಿಸಿ ೧೯೯೪ ರಲ್ಲಿ ಮುಂಡರಗಿಯಲ್ಲಿ ಜರುಗಿದ ಅಖಿಲ ಕರ್ನಾಟಕ ೨೩ನೇ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು, ಅವರು ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗೆ ಸಂದ ಗೌರವ ಎಂದು ಹೇಳಬಹುದು.