ಮಾಂಧಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾಂಧಾತ ಅಥವಾ ಮಾಂಧಾತ್ರಿ ಹಿಂದೂ ಪುರಾಣದಲ್ಲಿ ಬರುವ ಮುಖ್ಯ ರಾಜರಲ್ಲಿ ಒಬ್ಬ.[೧]

ಹುಟ್ಟುವಳಿ[ಬದಲಾಯಿಸಿ]

ಇಕ್ಷ್ವಾಕು ವಂಶದ (ಸೂರ್ಯವಂಶ ಅಥವಾ ರಘುವಂಶ) ಯುವನಾಶ್ವ ಮಹಾರಾಜನ ಮಗನಾದ ಮಾಂಧಾತನು ತನ್ನ ಪೌರುಷ, ಸತ್ಯವಂತಿಕೆ ಮತ್ತು ಆಡಳಿತದಿಂದ ಹೆಸರು ಪಡೆದನು. ಯಾದವ ರಾಜನಾದ ಶಶಬಿಂದುವಿನ ಮಗಳು ಬಿಂದುಮತಿ ಚೈತ್ರರಥಿಯನ್ನು ವರಿಸಿದ ಮಾಂಧಾತನಿಗೆ[೨] ಪುರುಕುತ್ಸ ಅಥವಾ ಸುಸಂಧಿ, ಅಂಬರೀಷ ಮತ್ತು ಮುಚುಕುಂದರೆಂಬ ಮೂರು ಮಂದಿ ಗಂಡು ಮಕ್ಕಳು ಮತ್ತು ಐವತ್ತು ಮಂದಿ ಹೆಣ್ಣುಮಕ್ಕಳು.


ಋಗ್ವೇದದ ಹತ್ತನೆಯ ಮಂಡಲದ ೧೩೪ನೆಯ ಸೂಕ್ತಿ ಮಾಂಧಾತನಿಗೆ ಅರ್ಪಿಸಲ್ಪಟ್ಟಿದೆ.[೩]

ಹುಟ್ಟು[ಬದಲಾಯಿಸಿ]

ಅಯೋಧ್ಯೆಯ ಮಹಾರಾಜ ಯುವನಾಶ್ವನಿಗೆ ಬಹುಕಾಲ ಮಕ್ಕಳು ಆಗುವುದಿಲ್ಲ.[೪] ಒಂದು ಮಧ್ಯಾಹ್ನ ಬೇಟೆಗೆ ತೆರಳಿದಾಗ ನೀರಡಿಕೆಯಾಗಿ ಕುಸಿದು ಬಿದ್ದಾಗ, ಅವನಿಗೆ ಕನವರಿಕೆ ಆಗುತ್ತದೆ. ಯುವನಾಶ್ವನ ದೇಹದಲ್ಲಿ ಮಾಂಧಾತ ಜನ್ಮ ತಾಳುತ್ತಾನೆ. ನೂರು ವರ್ಷಗಳ ನಂತರ ಯುವನಾಶ್ವನ ಬಲಪಾರ್ಶ್ವವನ್ನು ದೇವತೆಗಳು ತೆರೆದಾಗ, ಕೂಸು ಮಾಂಧಾತ ಹೊರಬರುತ್ತಾನೆ. ದೇವರಾಜ ಇಂದ್ರನು, ಕೂಸು ಮಾಂಧಾತನು, ತನ್ನ (ಇಂದ್ರನ) ಬಲದಿಂದ ಬಲು ಬೇಗ ಬೆಳೆಯಲಿ ಎಂದು ಹರಸುತ್ತಾನೆ. ಹನ್ನೆರಡು ದಿನಗಳಲ್ಲಿ ಹನ್ನೆರಡು ವರ್ಷದ ಬೆಳವಣಿಗೆ ಮಾಂಧಾತನಿಗೆ ಆಗುತ್ತದೆ. ಮಾಂಧಾತನ ಎತ್ತರ ಹದಿಮೂರು ಅಂಗೈಯಷ್ಟಾಗುತ್ತದೆ. ಮಾಂಧಾತನು ತನ್ನ ಶ್ರದ್ಧೆಯಿಂದ ವೇದಗಳು ಮತ್ತು ಅಸ್ತ್ರವಿದ್ಯೆಯನ್ನು ಉತ್ತಮವಾಗಿ ಕಲಿತು, ಮುಗಿಯಲಾರದಷ್ಟು ಬಾಣಗಳಿರುವ ಬತ್ತಳಿಕೆಯನ್ನೂ, ಶಿವನ ಒಲವಿನಿಂದ ಅಜಗವ ಎಂಬ ಬಿಲ್ಲನ್ನೂ ಆಕಾಶದಿಂದ ಪಡೆಯುತ್ತಾನೆ. ಸಕಲವಿದ್ಯಾಪಾರಂಗತನಾದ ಬಳಿಕ ಅಯೋಧ್ಯೆಯ ಪಟ್ಟಕ್ಕೆ ಏರುತ್ತಾನೆ.

ಆಡಳಿತ[ಬದಲಾಯಿಸಿ]

ಮಳೆ ಮತ್ತು ಸಿರಿಯನ್ನು ತನ್ನ ಮುಷ್ಠಿಯಲ್ಲಿ ಇಡಬಲ್ಲ ವಿದ್ಯೆ, ಮಾಂಧಾತನಿಗೆ ಸಿದ್ಧಿಯಾಗಿರುತ್ತದೆ. ಇದನ್ನು ಬಳಸಿ, ಮಾಂಧಾತನು ಎಲ್ಲಾ ತೆರಿಗೆಗಳನ್ನು ನಿಲ್ಲಿಸುತ್ತಾನೆ. ತನ್ನ ಸುತ್ತಲಿನ ಮಾರುತ್ತ, ಅಸಿತ, ಅಂಗಾರ, ನೃಗ, ಬೃಹದ್ರಥ, ಶೂಣ, ಜಯ, ಜನಏಜಯ, ಸುಧನ್ವನ, ಗಯ, ಗಾಂಧಾರರಾಜ ಇವರನ್ನೆಲ್ಲಾ ಗೆದ್ದು ,ಇಡೀ ಭೂಮಿಯನ್ನು ತನ್ನ ಸಂಕಲ್ಪಬಲದಿಂದಲೇ ಒಂದು ದಿನದಲ್ಲಿ ಮಾಂಧಾತನು ಗೆದ್ದನು ಎಂಬುದು ಐತಿಹ್ಯ.

ಬಿರುದುಗಳು[ಬದಲಾಯಿಸಿ]

  • ಪಾತಾಳಲೋಕ (ಪಶ್ಚಿಮದ ಎಲ್ಲೆ), ಮೃತ್ಯುಲೋಕ (ಮಧ್ಯದ ಎಲ್ಲೆ) ಮತ್ತು ಅರ್ಧ ಭಾಗ ಸ್ವರ್ಗ( ಪೂರ್ವದ ಎಲ್ಲೆ)ಯನ್ನು ಗೆದ್ದು ಮೂರುಲೋಕದ ರಾಜ ಎಂದೂ ಮಾಂಧಾತನು ಖ್ಯಾತನಾಗುತ್ತಾನೆ.
  • ೧೦೦ ಅಶ್ವಮೇಧ ಯಾಗ ಮಾಡಿ ಶತಕೃತು ಎಂಬ ಬಿರುದನ್ನೂ, ೧೦೦೦ ಪದ್ಮ ಲೆಕ್ಕದ (ಒಂದರ ನಂತರ ೧೮ ಸೊನ್ನೆ) ಉತ್ತಮ ಗೋವುಗಳನ್ನೂ, ಚಿನ್ನದಿಂದ ತಯಾರಿಸಿದ ರೋಹಿತ ಮೀನಿನ ಪ್ರತಿಮೆಗಳನ್ನು ದಾನಗೈದು ದಾನಚಕ್ರವರ್ತಿ ಎಂಬ ಬಿರುದನ್ನೂ ಮಾಂಧಾತನು ಪಡೆಯುತ್ತಾನೆ.
  • ಯುವನಾಶ್ವನಿಗೆ ತಕ್ಕ ಮಗನಾದ್ದರಿಂದ ಯುವನಾಶ್ವಿನ್ ಎಂದೂ, ದುಷ್ಟಸಂಹಾರ ಮಾಡಿ ತ್ರಸ್ಸದಸ್ಯು(ದುಷ್ಟರ ನಿಗ್ರಹ ಮಾಡಿದವ) ಎಂದೂ ಮಾಂಧಾತನು ಖ್ಯಾತನಾಗುತ್ತಾನೆ.

ಅಂತ್ಯ[ಬದಲಾಯಿಸಿ]

ಮುದಿತನದಲ್ಲಿ ತನ್ನ ಬಲದ ಬಗ್ಗೆ ಅಹಂಕಾರ ಪಡುವ ಮಾಂಧಾತನು, ಸ್ವರ್ಗಲೋಕವನ್ನು ಪೂರ್ತಿ ಗೆಲ್ಲುವ ಛಲಹೊಂದಿ ಇಂದ್ರನ ಮೇಲೆ ದಾಳಿ ನಡೆಸುತ್ತಾನೆ. ಭೂಮಿಯನ್ನೇ ಪೂರ್ಣವಾಗಿ ಗೆದ್ದು, ನಂತರ ಸ್ವರ್ಗಕ್ಕೆ ಲಗ್ಗೆ ಇಡುವಂತೆ ಇಂದ್ರನು ಅವಹೇಳನ ಮಾಡುತ್ತಾನೆ. ಮಧುರಾಕ್ಷಸನ ಮಗ ಲವಣಾಸುರನನ್ನು ಗೆದ್ದಿಲ್ಲದ ವಿಷಯ ಮಾಂಧಾತನಿಗೆ ಆಗ ಮನವರಿಕೆಯಾಗುತ್ತದೆ. ಲವಣಾಸುರನ ರಾಜಧಾನಿ ಮಧುಪುರಿಯನ್ನು ಗೆಲ್ಲಲು ಹೊರಡುವ ಮಾಂಧಾತನಿಗೆ ಹಿನ್ನಡೆಯಾಗುತ್ತದೆ. ಶಿವನ ತ್ರಿಶೂಲವನ್ನು ಅರಮನೆಯಲ್ಲಿ ಇಟ್ಟೂ ಪೂಜಿಸುವ ಲವಣಾಸುರನು ಮಾಂಧಾತನನ್ನು ಸುಟ್ಟು ಬೂದಿಯಾಗಿಸುತ್ತಾನೆ. ಮಾಂಧಾತನ ವಂಶದಲ್ಲಿ ಬಹುವರ್ಷಗಳ ನಂತರ ಹುಟ್ಟುವ ಶತೃಷ್ನ, ತ್ರಿಶೂಲ ಲವಣಾಸುರನ ಬಳಿ ಇಲ್ಲದ ಸಮಯ ನೋಡಿ, ಲವಣಾಸುರನನ್ನು ಕೊಲ್ಲುತ್ತಾನೆ.

ಮಾಂಧಾತನ ನಂತರ ಅವನ ಮಗ ಸುಸಂಧಿ, ಅಯೋಧ್ಯೆಯನ್ನು ಆಳುತ್ತಾನೆ. [೫]

ರಾಮಾಯಣದಲ್ಲಿ ಮಾಂಧಾತ[ಬದಲಾಯಿಸಿ]

ಒಂದು ಐತಿಹ್ಯದ ಪ್ರಕಾರ ರಾವಣನೊಡನೆ ಮಲ್ಲಯುದ್ಧಗೈವ ಮಾಂಧಾತನು, ರಾವಣನ ಮೇಲೆ ಸಮಪೈಪೋಟಿಯಾಗಿ ಯಾರೂ ಗೆಲ್ಲದೆಯೇ, ಕದನ ನಿಂತುಹೋಗುತ್ತದೆ. ಮಾಂಧಾತನ ವಂಶದಲ್ಲಿ ಮಹಾವಿಷ್ಣು ರಾಮನ ಅವತಾರದಲ್ಲಿ ರಾವಣನನ್ನು ಕೊಲ್ಲುತ್ತಾನೆ.

ಹೊರಗಿನ ಕೊಂಡಿಗಳು[ಬದಲಾಯಿಸಿ]

  • Pargiter, F.E. (1972) [1922], Ancient Indian Historical Tradition, Delhi: Motilal Banarsidass

[೬] [೭]

  1. John Dowson (1870), A classical dictionary of Hindu mythology and religion, geography, history, and literature, Trübner & Co., pp. 197–8
  2. Pargiter 1972, p. 150.
  3. Pargiter 1972, pp. 102–4.
  4. Mahabharata, III.126
  5. Pargiter 1972, p. 93.
  6. https://archive.org/details/ancientindianhis00parguoft
  7. https://www.jstor.org/stable/25209949
"https://kn.wikipedia.org/w/index.php?title=ಮಾಂಧಾತ&oldid=739517" ಇಂದ ಪಡೆಯಲ್ಪಟ್ಟಿದೆ