ವಿಷಯಕ್ಕೆ ಹೋಗು

ಮಲ್ಲಿಕಾರ್ಜುನ ಹಿರೇಮಠ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕನ್ನಡದ ಕಥೆಗಾರ, ಕಾದಂಬರಿಕಾರ, ಪ್ರಬಂಧಕಾರ, ವಿಮರ್ಶಕ, ಪ್ರವಾಸಕಥನಕಾರ ಹಾಗೂ ಕವಿ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ಇನ್ನಿತರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]

ಜೀವನ[ಬದಲಾಯಿಸಿ]

ಪ್ರೊ. ಮಲ್ಲಿಕಾರ್ಜುನ ಹಿರೇಮಠ
ಚಿತ್ರ:ಪ್ರೊ. ಮಲ್ಲಿಕಾರ್ಜುನ ಹಿರೇಮಠ
ಸಂಗಾತಿಲಲಿತಾ ಹಿರೇಮಠ (ನಿವೃತ್ತ ಶಿಕ್ಷಕಿ)
ಮಕ್ಕಳುಗೀತಾ, ಮುಕ್ತಾ, ರಾಜೇಶ್ವರಿ, ಚೈತನ್ಯ
Familyಚೇತನಾ (ಸೊಸೆ)

ಕೊಪ್ಪಳ ಜಿಲ್ಲೆ/ತಾಲೂಕಿನ ಬಿಸರಹಳ್ಳಿ ಗ್ರಾಮದಲ್ಲಿ ೦೫-೦೬-೧೯೪೬ರಂದು ಜನಿಸಿದರು. ಇವರ ತಂದೆ ವೀರಭದ್ರಯ್ಯ ಗಾಂವಟಿ ಶಾಲಾ ಶಿಕ್ಷಕರಾಗಿದ್ದರು. ತಾಯಿ ಪಾರ್ವತಿದೇವಿ. ಪ್ರಾಥಮಿಕ ಶಿಕ್ಷಣವನ್ನು ಬಿಸರಹಳ್ಳಿ ಮತ್ತು ಕೊಪ್ಪಳದಲ್ಲಿ ಪೂರೈಸಿದರು. ಮಾಧ್ಯಮಿಕ ಶಿಕ್ಷಣವನ್ನು ದಾರವಾಡದ ಆರ್. ಎಲ್. ಎಸ್ ಹೈಸ್ಕೂಲಿನಲ್ಲಿ, ಪದವಿ ಶಿಕ್ಷಣವನ್ನು ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ, ಎಂ.ಎ ಇಂಗ್ಲಿಷ್ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ದಾರವಾಡದಿಂದ ಪಡೆದಿರುತ್ತಾರೆ.

೧೯೬೭ ರಿಂದ ಬಾಗಲಕೋಟ ಜಿಲ್ಲೆಯ ಹುನುಗುಂದದ ವಿ.ಎಂ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ನಂತರ ಅಲ್ಲಿಯೇ ಮಾರ್ಚ್ ೨೦೦೧ ರಿಂದ ಜೂನ್ ೨೦೦೪ರ ವರೆಗೆ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ದಾರವಾಡದಲ್ಲಿ ವಾಸವಾಗಿದ್ದಾರೆ.

ಕೃತಿಗಳು ಹಾಗೂ ಅವುಗಳ ಕುರಿತು ವಿಮರ್ಶಕರ ಅಭಿಪ್ರಾಯಗಳು[ಬದಲಾಯಿಸಿ]

ಅಕ್ವೇರಿಯಂ ಮೀನು- ಕವನ ಸಂಕಲನ[ಬದಲಾಯಿಸಿ]

ಮುದ್ರಣ: 1 (1974), 2 (2018)

“ಅಕ್ವೇರಿಯಂ ಮೀನು” ಹಿರೇಮಠರ ಮೊದಲ ಕವನ ಸಂಕಲನ. ಮೊದಲ ಸಂಕಲನ ಎಂಬ ಮಾತು ಕೆಲವರಿಗೆ ಡಿಸಕ್ವಾಲಿ‍ಫಿಕೇಸನ್ನಾಗಿ, ಲೇಖಕರು ಜಾರಿಬಿದ್ದ ಪ್ರಸಂಗಗಳಲ್ಲಿ ಎತ್ತಿ ಹಿಡಿಯುವ ಊರುಗೋಲಾಗಿ, ದೌರ್ಬಲ್ಯಗಳಿಗೆಲ್ಲಾ ರಕ್ಷಣೆಯಾಗಿ ಬಂದರೆ, ಕೆಲವರಿಗೆ ಮೊದಲ ಪ್ರಯತ್ನದಲ್ಲೆ ಇಷ್ಟು ಚೆನ್ನಾಗಿ ಬರೆದಿದ್ದಾರಲ್ಲ ಎನ್ನುವ ವಿಸ್ಮಯವಾಗಿ ಬರಹಗಾರನಿಗೆ ಒಂದು ಅಪೂರ್ವ ಕ್ವಾಲಿ‍ಫಿಕೇಶನ್ನಾಗಿ ಬರುತ್ತದೆ. ಮಲ್ಲಿಕಾರ್ಜುನ ಹಿರೇಮಠರು ಎರಡನೆಯ ಗುಂಪಿಗೆ ಸೇರಿದವರು. ಸಣ್ಣ ಸಣ್ಣ ಕವಿತೆಗಳು: ಸಣ್ಣ ಸಣ್ಣ ಸಾಲುಗಳು: ಸಣ್ಣ ಸಣ್ಣ ಶಬ್ದಗಳು: ಆದರೆ ಸಾಸಿವೆಯೊಳಗೆ ಕುಂಬಳ ತುಂಬಿಸುವಂತಹ ಅರ್ಥ ವಿಸ್ತಾರ. - ಬನ್ನಂಜೆ ಗೋವಿಂದಾಚಾರ್ಯ


ಅಮೀನಪುರದ ಸಂತೆ- ಕಥೆಗಳು[ಬದಲಾಯಿಸಿ]

ಮುದ್ರಣ- 1 (1990), 2 (1991), 3 (1997), 4 (2003)

ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಎಸ್.ಸಿ. 1 ಹಾಗೂ ಕ.ವಿ.ವಿ. ಬಿ.ಎ. 1 ಕ್ಕೆ ಅವಶ್ಯಕ ಪಠ್ಯ. ‘ಅಮೀನಪುರದ ಸಂತೆ’- ಎಸ್. ದಿವಾಕರ ಸಂಪಾದಿಸಿದ  “ಶತಮಾನದ ಸಣ್ಣ ಕಥೆಗಳು’ ಸಂಕಲನದಲ್ಲಿ ಹಾಗೂ “ಬಸ್ಸು ಹೊರಟುಹೋಯಿತು”- ‘ಸುವರ್ಣ ಕಥಾ ಸಂಪುಟ’ದಲ್ಲಿ ಸೇರ್ಪಡೆ. ಹಲವಾರು ಆ್ಯಂಥಾಲಜಿಗಳಲ್ಲಿ ಪ್ರಕಟವಾಗಿವೆ.

‘ಅಮೀನಪುರದ ಸಂತೆ’ ಮಲ್ಲಿಕಾರ್ಜುನರನ್ನು ಕನ್ನಡದ ಶ್ರೇಷ್ಠ ಕತೆಗಾರರ ಸಾಲಿನಲ್ಲಿ ಸೇರಿಸಬಲ್ಲಂತಹ ಹಲವು ಕಥೆಗಳನ್ನೊಳಗೊಂಡ ಸಂಕಲನ… ‘ಅಮೀನಪುರದ ಸಂತೆ’ ಮತ್ತು ‘ಲಕ್ಕವ್ವನ ಮಂದಿ’ ಜಾಗತಿಕ ಸ್ತರದಲ್ಲಿಯ ಉತ್ತಮ ಸಣ್ಣಕತೆಗಳೊಡನೆ ಸರಿಸಾಟಿಯಾಗಿ ನಿಲ್ಲಬಲ್ಲ ಸತ್ವವುಳ್ಳದ್ದೆಂದು ನಾನು ಭಾವಿಸಿದ್ದೇನೆ. ಇವೆರಡು ಕತೆಗಳಾದರೂ ಶೀಘ್ರ ಇಂಗ್ಲೀಷಿಗೆ ಭಾಷಾಂತರಗೊಂಡು ಕನ್ನಡೇತರರಿಗೆ ಮಲ್ಲಿಕಾರ್ಜುನರ ಪರಿಚಯವಾಗುವುದು ಅವಶ್ಯ.- ಡಾ. ಸಿ.ವಿ. ವೇಣುಗೋಪಾಲ

‘ಲಕ್ಕವ್ವನ ಮಂದಿ’ ಮತ್ತು ‘ಅಮೀನಪುರದ ಸಂತೆ’ ಕತೆಗಳು ಕನ್ನಡ ಸಣ್ಣಕತೆಗಳ ಕ್ಷೇತ್ರಕ್ಕೆ ಹಿರೇಮಠರು ನೀಡಿದ ಮೌಲಿಕ ಕೊಡುಗೆಗಳಾಗಿವೆ. ಬಂಡಾಯದ ಜನಪರತೆ ಮತ್ತು ನವ್ಯದ ಆಕೃತಿ ಸೂಕ್ಷ್ಮಗಳನ್ನು ಅವರು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ. - ಡಾ. ಪುರುಷೋತ್ತಮ ಬಿಳಿಮಲೆ


ಜ್ಞಾನೇಶ್ವರನ ನಾಡಿನಲ್ಲಿ- ಪ್ರವಾಸ ಕಥನ[ಬದಲಾಯಿಸಿ]

ಮುದ್ರಣ- 1 (1997), 2 (2018)

ಈ ಪುಸ್ತಕದ ಬರವಣಿಗೆಯಲ್ಲಿ ನೀವು ನೇರ ನಿರೂಪಣೆಯ ಜತೆಗೆ ದಿನಚರಿಯ ತಂತ್ರವನ್ನು ಬಳಸಿದ್ದು ನಿಮ್ಮ ಅನುಭವಗಳ ದಾಖಲೆಗೆ ಹೆಚ್ಚಿನ ಅಥೆಂಟಿಸಿಟಿ ಬಂದು ಸಹಾಯಕಾರಿಯಾಗಿದೆ. ಕೆಲವೆಡೆ ಲಲಿತಪ್ರಬಂಧವಾಗಿ, ಕೆಲವೆಡೆ ರಸವಿಮರ್ಶೆಯಾಗಿ, ಕೆಲವೆಡೆ ವ್ಯಕ್ತಿಚಿತ್ರಗಳಾಗಿ, ಕೆಲವೆಡೆ ಕಥನರೂಪವಾಗಿ ಹಾಗೂ ಕೆಲವೆಡೆ ವೈಯಕ್ತಿಕ ಚಿಂತನೆಯ ಅಭಿವ್ಯಕ್ತಿಯಾಗಿ ನಿಮ್ಮ ಬರವಣಿಗೆ ವಾಚಕರನ್ನು ತನ್ನೊಡನೆ ಸೆಳೆದೊಯ್ಯುವಂತಾಗಿದೆ. ಮರಾಟಿ ಸಾಹಿತ್ಯದ ಪರಿಚಯ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಲೇ ಕನ್ನಡ ಮತ್ತು ಮರಾಟಿಗರ ನಡುವೆ ಬಹುಕಾಲದಿಂದ ಬೆಳೆದುಬಂದಿರುವ ಸಾಂಸ್ಕ್ರತಿಕ ಸಾಮರಸ್ಯದ ನೆಲೆಗಳನ್ನೂ ಗುರುತಿಸಿದ್ದು ಮಹತ್ವದ ಅಂಶವಾಗಿದೆ. ಮುಖ್ಯವಾಗಿ ಮರಾಟಿ ನಾಟಕ ಸಾಹಿತ್ಯದ ಬಗ್ಗೆ ನಿಮಗೆ ತುಂಬಾ ಕುತೂಹಲವಿದ್ದಂತೆ ಕಂಡುಬರುತ್ತದೆ. ಒಟ್ಟಿನ ಮೇಲೆ ನಿಮ್ಮ ಸಾಹಿತ್ಯ ಯಾತ್ರೆಯ ಸಾಫಲ್ಯಕ್ಕೆ ಕನ್ನಡಿ ಹಿಡಿದಂತಾಗಿದೆ. ನಿಮ್ಮ ಪ್ರಾಮಾಣಿಕ ಪ್ರಯತ್ನದಿಂದ ಕಲೆ ಹಾಕಿದ ಸಾಹಿತ್ಯದ ವಿವರಗಳನ್ನು ಒಂದು ಲಾಲಿತ್ಯಪೂರ್ಣ ಕಥನರೂಪಕ್ಕೆ ಅಳವಡಿಸಿದ ನಿಮಗೆ ಧನ್ಯವಾದಗಳು. - ಬಿ. ಎ. ಸನದಿ


ಅಂತರ್ಗತ – ವಿಮರ್ಶೆ[ಬದಲಾಯಿಸಿ]

ಮುದ್ರಣ- 1 (2000)

ಕಳೆದ 2-3 ದಶಕಗಳಿಂದ ನಾನು ಕಾಲಕಾಲಕ್ಕೆ ಬರೆದ ವಿಮರ್ಶಾ ಲೇಖನಗಳು ‘ಸಾಕ್ಷಿ’ ಮತ್ತು ಇತರ ಪತ್ರಿಕೆಗಳಲ್ಲಿ ಹಾಗೂ ಹಲವು ಬೇರೆ ಬೇರೆ ಲೇಖನಗಳ ಸಂಕಲನಗಳಲ್ಲಿ ಬಿಡಿಬಿಡಿಯಾಗಿ ಚದುರಿ ಹೋಗಿದ್ದವು. ಈಗ ಅವುಗಳನ್ನೆಲ್ಲ ಒಟ್ಟಿಗೆ ಸೇರಿಸಿ ಆಯಾಕಾಲದ ನನ್ನ ವೈಚಾರಿಕ ಅಂತರ್ಗತದ ದಾಖಲೆಗಳನ್ನು ಈ ಸಂಕಲನದ ಮೂಲಕ ಕೊಡುತ್ತಿದ್ದೇನೆ. ಕೃತಿಕಾರನ ಹಾಗೂ ಕೃತಿಯ ಅಂತರ್ಗತವನ್ನು ಅರಿಯುವ, ಅನ್ವೇಷಿಸುವ ಪ್ರಯತ್ನ ಯಾವತ್ತೂ ನಡೆಯಬೇಕಾದುದೆ.- ಲೇಖಕ


ಹವನ – ಕಾದಂಬರಿ[ಬದಲಾಯಿಸಿ]

ಮುದ್ರಣ- 1 (2001), 2 (2012), 3 (2019)

ತೆಲುಗು (2004) ಹಾಗೂ ಇಂಗ್ಲಿಷ್ (2019) ಭಾಷೆಗಳಿಗೆ ಅನುವಾದಿತವಾಗಿದೆ. ಲೇಖಕರು ಲಂಬಾಣಿಗಳ ಜೀವನವನ್ನು ತುಂಬಾ ಸಹಾನುಭೂತಿಯಿಂದ ಚಿತ್ರಿಸುತ್ತಾರೆ. ಆದರೆ ಅವರ ಮಿತಿಗಳನ್ನೂ, ದೌರ್ಬಲ್ಯಗಳನ್ನೂ, ಆ ಸಮುದಾಯದೊಳಗೇ ಇರುವ ಹಲವು ಅಂತರ್ ವಿರೋಧಗಳನ್ನೂ, ಪೀಳಿಗೆಗಳ ಸಂಘರ್ಷವನ್ನೂ ವಿಮರ್ಶಾತ್ಮಕವಾಗಿ ಮಂಡಿಸಿ ಕಾದಂಬರಿ ನಿಷ್ಠುರತೆಯನ್ನೂ, ಪ್ರಬುಧ್ದತೆಯನ್ನೂ ಕಾಯ್ದುಕೊಳ್ಳುತ್ತದೆ. ಸಾಹಿತ್ಯದ ವಿದ್ಯಾರ್ಥಿಗಳಿಂದ ಇನ್ನೂ ವಿವರವಾದ, ಸೂಕ್ಷ್ಮವಾದ ಓದನ್ನು ಒತ್ತಾಯಿಸುವ ಈ ಕಾದಂಬರಿ ಸಮಕಾಲೀನ ಕಥಾಸಾಹಿತ್ಯಕ್ಕೆ ಒಂದು ಮೌಲಿಕ ಸೇರ್ಪಡೆಯಾಗಿದೆ. - ಟಿ.ಪಿ. ಅಶೋಕ


ಅಭಿಮುಖ – ವಿಮರ್ಶೆ[ಬದಲಾಯಿಸಿ]

ಮುದ್ರಣ- 1 (2012)

ಮುಖ್ಯವಾಗಿ ಕತೆಗಾರಿಕೆಯಲ್ಲಿ ತೊಡಗಿರುವ ಇವರು, ಸಾಹಿತ್ಯದ ಅಧ್ಯಾಪಕನಾಗಿ, ಪುಸ್ತಕ ಸಂಸ್ಕ್ರತಿಯ ಪ್ರವರ್ತಕನಾಗಿ ಮಾತು-ಭಾಷಣ, ಪ್ರಬಂಧ ಮಂಡನೆಗಳನ್ನು ರೂಢಿಸಿಕೊಂಡಿರುವುದು ವಿಶೇಷ ಸಾಧನೆ. ‘ಅಂತರ್ಗತ’ದ ಮೂಲಕ ಹದಿಮೂರು ಸಾಹಿತ್ಯ ಪ್ರಬಂಧಗಳನ್ನು 2000ರಲ್ಲಿ ಪ್ರಕಟಿಸಿದ ನಂತರ, ‘ಅಭಿಮುಖ’ದ ಹತ್ತೊಂಬತ್ತು ಪ್ರಬಂಧಗಳ ಈ ಸಂಕಲನ ಬರುತ್ತಿದೆ. ಹಿರೇಮಠರ ಓದಿನ ಹರವು ದೊಡ್ಡದೇ. ವಿಷಯ ವೈವಿಧ್ಯವೂ ಸಾಕಷ್ಟು.

- ಶ್ಯಾಮಸುಂದರ ಬಿದರಕುಂದಿ


ಮೊಲೆವಾಲು ನಂಜಾಗಿ – ಕಥೆಗಳು[ಬದಲಾಯಿಸಿ]

ಮುದ್ರಣ- 1 (2010), 2 (2016)

ಪ್ರೊ. ಮಲ್ಲಿಕಾರ್ಜುನ ಹಿರೇಮಠರು ಕನ್ನಡದ ಗಟ್ಟಿ ಕಥೆಗಾರರಲ್ಲಿ ಒಬ್ಬರು. ಅನುಭವದ ಘನತೆ ಮತ್ತು ವಿಸ್ತಾರದಿಂದ ಅವರ ಕಥೆಗಳು ನಮ್ಮ ಗಮನ ಸೆಳೆಯುತ್ತವೆ. ಕತೆ ಕಟ್ಟುವ ಕುಶಲತೆ ಅವರಿಗೆ ಸಹಜವಾಗಿ ದಕ್ಕಿರುವಂಥದ್ದೇ ಹೊರತು ಪ್ರಜ್ಞಾಪೂರ್ವಕ ಕ್ರಿಯೆಯ ಫಲವಾಗಿ ಅಲ್ಲ. ಕಥೆ ಹೇಳುವಲ್ಲಿ ನಂಬಿಕೆಯುಳ್ಳ ಹಿರೇಮಠರು ಮಾಸ್ತಿ ಸಂಪ್ರದಾಯಕ್ಕೆ ಸೇರಿದ ನಮ್ಮ ಮುಖ್ಯ ವಾಸ್ತವವಾದಿ ಕಥೆಗಾರರಾಗಿದ್ದಾರೆ.- ಡಾ. ಎಚ್.ಎಸ್. ವೆಂಕಟೇಶಮೂರ್ತಿ

ನಿಮ್ಮಲ್ಲಿ ಒಳ್ಳೆಯ ಕಥೆಗಳಿವೆ ಅಷ್ಟೇ ಅಲ್ಲದೆ ಅವುಗಳನ್ನು ಚೆನ್ನಾಗಿ ಹೇಳಬಲ್ಲ ಕಲೆಯನ್ನು ನೀವು ಸಾಧಿಸಿದ್ದೀರಿ... 'ಮೊಲೆವಾಲು ನಂಜಾಗಿ', 'ಒಂದು ಊರಿನ ವೃತ್ತಾಂತ' ಹಾಗೂ 'ಮಾಗಿ' ಶ್ರೇಷ್ಠ ಕಥೆಗಳು. ಮತ್ತೆ ಮತ್ತೆ ಓದಿಸಿಕೊಳ್ಳುವ ಗುಣ ಇದ್ದ ಕೃತಿಗಳು. - ಡಾ .ಜಿ ಎಸ್ ಆಮೂರ

ಈ ಸಂಕಲನದಲ್ಲಿಯೂ ಮನುಷ್ಯನ ಸಂಬಂಧಗಳ ತೊಡಕುಗಳೆ ಮುಖ್ಯವಾಗಿವೆ. ಅವುಗಳನ್ನು ಚಿತ್ರಿಸುವುದರಲ್ಲಿ ಹಿರೇಮಠರ ಬರವಣಿಗೆ ಹೆಚ್ಚು ಸಂಕೀರ್ಣವೂ ಪ್ರಭುದ್ಧವೂ ಆಗಿದೆ.- ಡಾ. ಗಿರಡ್ಡಿ ಗೋವಿಂದರಾಜ


ಮೂರು ಸಂಜಿ ಮುಂದ ಧಾರವಾಡ- ಲಲಿತ ಪ್ರಬಂಧಗಳು[ಬದಲಾಯಿಸಿ]

ಮುದ್ರಣ-1 (2016), 2 (2020)

ಪ್ರಕಾಶನ: ಅಂಕಿತ ಪುಸ್ತಕ, ಬೆಂಗಳೂರು.

ಡಾ ಪು.ತಿ.ನ ಪ್ರಬಂಧ ಪುರಸ್ಕೃತ-2019.

‘ಮೂರು ಸಂಜಿ ಮುಂದ ಧಾರವಾಡ” – ಈ ಲಲಿತ ಪ್ರಬಂಧಗಳ ವಿನ್ಯಾಸದಲ್ಲಿ ಕಥನವಿದೆ, ಕಾವ್ಯದ ಲಯವಿದೆ, ನವಿರು ಹಾಸ್ಯದ ಜೊತೆಗೆ ಹರಿತ ವಿಚಾರವೂ ಇದೆ.... ಹಿರೇಮಠರ ಈ ಬರಹಗಳ ಓದು ಒಂದು ಹಿತವಾದ ಅನುಭವ. - ನರಹಳ್ಳಿ ಬಾಲಸುಬ್ರಹ್ಮಣ್ಯ


ಗಿರಡ್ಡಿ ಗೋವಿಂದರಾಜ : ವ್ಯಕ್ತಿ-ಅಭಿವ್ಯಕ್ತಿ  - ವಿಮರ್ಶೆ[ಬದಲಾಯಿಸಿ]

ಮುದ್ರಣ- 1 (2016)

ಪ್ರ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು


ಹಾವಳಿ -ಕಾದಂಬರಿ[ಬದಲಾಯಿಸಿ]

ಮುದ್ರಣ -1 (2021), 2 (2024)

ಪ್ರ: ಮನೋಹರ ಗ್ರಂಥಮಾಲಾ, ಧಾರವಾಡ

ಮಾಸ್ತಿ ಕಾದಂಬರಿ ಪುರಸ್ಕಾರ ಮತ್ತು ಶ್ರೀಮತಿ ರಾಜೇಶ್ವರಿ ಬರಗೂರು ಪುಸ್ತಕ ಪ್ರಶಸ್ತಿ.

'ಹಾವಳಿ'ಗೆ ಕನ್ನಡ ಕಾದಂಬರಿ ಪರಂಪರೆಯಲ್ಲಿ ಒಂದು ಮಹತ್ವದ ಸ್ಥಾನ ಖಂಡಿತ ಇದೆ. - ಟಿ.ಪಿ ಅಶೋಕ

ಪ್ರಾದೇಶಿಕ ಪರಿಸರ, ಭಾಷೆ ಹಾಗೂ ಸಮಸ್ಯೆಗಳನ್ನು ಹಿಡಿದಿಟ್ಟ ಈ ಭಾಗದ ಬಹುಮುಖ್ಯ ಕಾದಂಬರಿಗಳ ಸಾಲಿನಲ್ಲಿ ಈ ಕೃತಿಗೆ ಒಂದು ಮುಖ್ಯ ಸ್ಥಾನ ಸಲ್ಲುತ್ತದೆ. - ಡಾ. ಬಸವರಾಜ ಕಲ್ಗುಡಿ

ರಜಾಕಾರರ ಹಾವಳಿಯ ನೆನಪುಗಳನ್ನು ಒಂದು ಸಶಕ್ತವಾದ ಕಾದಂಬರಿಯ ಮೂಲಕ ಮತ್ತೆ ಕರ್ನಾಟಕದ imagination ಭಾಗವಾಗಿ ಮಾಡಿರುವ ಹಿರೇಮಠರ ಬರಹಕ್ಕೆ ಒಂದು ನೈತಿಕ ಆಯಾಮವು ಇದೆ. - ಡಾ.ರಾಜೇಂದ್ರ ಚೆನ್ನಿ


ಜೀವಶ್ರುತಿ- ವ್ಯಕ್ತಿ ಚಿತ್ರಗಳು[ಬದಲಾಯಿಸಿ]

ಮೊದಲ ಮುದ್ರಣ: 2022

ಪ್ರ: ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ ಕಲಬುರಗಿ

'ವ್ಯಕ್ತಿಗಳ ಬದುಕಿನ ವಿವಿಧ ಸ್ವರಗಳ ಮಿಡಿತ ಇಲ್ಲಿದೆ' -ಡಾ. ಶ್ರೀಶೈಲ ನಾಗರಾಳ

ಸಂಪಾದನೆ[ಬದಲಾಯಿಸಿ]

1. ತಿರುಳ್ಗನ್ನಡ[ಬದಲಾಯಿಸಿ]

ಅಖಿಲ ಭಾರತ 62 ನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಕೊಪ್ಪಳ- 1993

2. ಬಾಗಿಲು[ಬದಲಾಯಿಸಿ]

ಪ್ರಧಾನ ಸಂಪಾದಕರು

ಸ್ವಾಗತ ಸಮಿತಿ, ಅಖಿಲಭಾರತ 68 ನೆಯ ಕನ್ನಡ ಸಾಹಿತ್ಯ ಸಮ್ಮೇಳನ- 2000

ಬಾಗಲಕೋಟೆ ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಪರಂಪರೆ ಕುರಿತ ಆಕರಗ್ರಂಥ.

3. ಸತ್ಯಾಶ್ರಯ[ಬದಲಾಯಿಸಿ]

ಪ್ರಧಾನ ಸಂಪಾದಕರು

ಚಾಲುಕ್ಯ ಉತ್ಸವ ಸಮಿತಿ- 2003

4. ಹಿಡಿಯದ ಹಾದಿ- ಸಮೀಕ್ಷೆ[ಬದಲಾಯಿಸಿ]

ಮುದ್ರಣ- 1 (2006)

ಪ್ರ: ಮನೋಹರ ಗ್ರಂಥಮಾಲಾ, ಧಾರವಾಡ

5. ಮರೆಯಲಾಗದ ಕಥೆಗಳು- ರಾಜಶೇಖರ ನೀರಮಾನ್ವಿ[ಬದಲಾಯಿಸಿ]

ಸಂಪಾದಕರು

ಮುದ್ರಣ: 1 (2012)

6. ಬಸವರಾಜ ಕಟ್ಟಿಮನಿಯವರ ಕಾದಂಬರಿಗಳ ಸಮೀಕ್ಷೆ[ಬದಲಾಯಿಸಿ]

ನಾಲ್ಕು ಸಂಪುಟಗಳು- ಪ್ರಧಾನ ಸಂಪಾದಕ

(ಸಂಪಾದಕರು: ಡಾ. ಬಸವರಾಜ ಸಾದರ, ಡಾ ಕೆ .ಆರ್.  ದುರ್ಗಾದಾಸ, ಡಾ. ರಾಮಕೃಷ್ಣ ಮರಾಠೆ, ಡಾ. ಬಾಳಾ ಸಾಹೇಬ ಲೋಕಾಪುರ)

7. ಕಿತ್ತೂರು ಸಂಸ್ಥಾನ ದಾಖಲೆಗಳು[ಬದಲಾಯಿಸಿ]

-ಪ್ರಧಾನ ಸಂಪಾದಕ (ಸಂಪುಟ ೧,೨) (ಸಂಪಾದಕ: ಡಾ. ಎ.ಬಿ ವಗ್ಗರ)

ಅನುವಾದ[ಬದಲಾಯಿಸಿ]

  • ಅಸ್ಸಾಮಿ ಗದ್ಯ ಮತ್ತು ಬಂಗಾಲಿ ಗದ್ಯ ಸಮೀಕ್ಷೆಯ ಲೇಖನಗಳು (ಭಾರತೀಯ ಸಾಹಿತ್ಯ ಸಮೀಕ್ಷೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು)
  • ಆ್ಯಂಟನ್ ಚೆಕಾಫನ ಕಥೆಗಳು (ಬಿಡಿಯಾಗಿ)

ಮಲ್ಲಿಕಾರ್ಜುನ ಹಿರೇಮಠರ ಕುರಿತ ಕೃತಿ[ಬದಲಾಯಿಸಿ]

ಮಲ್ಲಿಕಾರ್ಜುನ ಹಿರೇಮಠರ ಕೃತಿಗಳ ಅವಲೋಕನ[ಬದಲಾಯಿಸಿ]

ಸಂಪಾದನೆ: ಎಚ್.ಎಸ್. ಪಾಟೀಲ,

ಮುದ್ರಣ- 1 (2010), ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ, ಕಲಬುರಗಿ


ಮಲ್ಲಿಕಾರ್ಜುನ ಹಿರೇಮಠರ ಅಭಿನಂದನ ಗ್ರಂಥ[ಬದಲಾಯಿಸಿ]

ಸಂಬಂಧ: ಮಲ್ಲಿಕಾರ್ಜುನ ಹಿರೇಮಠರ ವ್ಯಕ್ತಿತ್ವ ಮತ್ತು ಸಾಹಿತ್ಯ

ಪ್ರಧಾನ ಸಂಪಾದಕರು: ಗಿರಡ್ಡಿ ಗೋವಿಂದರಾಜ

ಸಂಪಾದಕರು: ಎಚ್. ಎಸ್. ವೆಂಕಟೇಶಮೂರ್ತಿ, ರಾಘವೇಂದ್ರ ಪಾಟೀಲ

ಪ್ರಕಾಶಕರು: ಸಂಗಾತ

ಪ್ರಶಸ್ತಿಗಳು/ ಗೌರವಗಳು[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

  • ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ- 2008
  • ಕ ಸಾ ಪ ಗೌರವ ಪ್ರಶಸ್ತಿ - 2023
  • ಮಾಸ್ತಿ ಕಾದಂಬರಿ ಪುರಸ್ಕಾರ - 2022
  • ಶ್ರೀಮತಿ ರಾಜೇಶ್ವರಿ ಬರಗೂರು ಪುಸ್ತಕ ಪ್ರಶಸ್ತಿ – 2021
  • ಡಾ. ಪು.ತಿ.ನ ಪ್ರಬಂಧ ಪುರಸ್ಕಾರ - 2019
  • ‘ಹವನ’ ಕಾದಂಬರಿಗೆ ಪ್ರಶಸ್ತಿಗಳು
  1. ಮುದ್ದಣ ದತ್ತಿನಿಧಿ ಪ್ರಶಸ್ತಿ, ‘ವರ್ಷದ ಅತ್ಯುತ್ತಮ ಗದ್ಯಕೃತಿ’, ಕ.ಸಾ.ಪ. ಬೆಂಗಳೂರು- 2002
  2. ಹಾವೇರಿಯ ಹಾವನೂರು ಪ್ರತಿಷ್ಠಾನ ಪ್ರಶಸ್ತಿ- 2002
  3. ಸಮೀರವಾಡಿ ಪ್ರಶಸ್ತಿ- 2002
  4. ಸಂಗಮ ಪ್ರಶಸ್ತಿ- 2014
  • ಕನ್ನಡ ಪುಸ್ತಕ ಪರಿಷತ್ತು, ಬಾಗಲಕೋಟ ಜಿಲ್ಲಾ ಆರನೆಯ ಸಮ್ಮೇಳನದ ಅಧ್ಯಕ್ಷ- 2003
  • ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ, ಜಿಲ್ಲಾ ಕಲಾವಿಕಾಸ ಪರಿಷತ್, ಕೊಪ್ಪಳ- 2007
  • “ಕನ್ನಡ ಸಾಹಿತ್ಯಕಾರ” ಪ್ರಶಸ್ತಿ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಮದ್ರಾಸ- 2009
  • ಗಳಗನಾಥ – ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನ ಪ್ರಶಸ್ತಿ- 2012
  • ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಸಂಸ್ಥಾನಮಠ ಇಲಕಲ್ಲ, ಸನ್ಮಾನ ಪತ್ರ
  • ನೀರಾವರಿ ಟ್ರಸ್ಟ್ ಪ್ರಶಸ್ತಿ- 2016
  • ಧಾರವಾಡ ತಾಲೂಕು ಆರನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ- 2018
  • ಧಾರವಾಡದಲ್ಲಿ ನಡೆದ 68ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ- 2018
  • ‘ಲಕ್ಕವ್ವನ ಮಂದಿ’ ಮತ್ತು ‘ಅಮೀನಪುರದ ಸಂತೆ’ ಕಥೆಗಳು ಆಕಾಶವಾಣಿ ಧಾರವಾಡ ಹಾಗೂ ದೂರದರ್ಶನ (ಚಂದನ) ದಲ್ಲಿ ನಾಟಕಗಳಾಗಿ ಪ್ರಸಾರಗೊಂಡಿವೆ.
  • 'ಹವನ' ರಂಗ ಪ್ರಯೋಗ ಸ್ನೇಹರಂಗ ಇಳಕಲ್ಲ.
  • ಆಕಾಶವಾಣಿಯಲ್ಲಿ ಚಿಂತನಗಳು, ಕಾವ್ಯವಾಚನ, ಸಂದರ್ಶನ
  • ಹಲವಾರು ವಿಚಾರಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಹಾಗೂ ಅಧ್ಯಕ್ಷತೆ.
  • ಅಕಾಡೆಮಿಯ ವಿಮರ್ಶಾ ಕಮ್ಮಟದ ಸಹ ನಿರ್ದೇಶಕ
  • ಕನ್ನಡ ಸಾಹಿತ್ಯ ಪರಿಷತ್ ಕಥಾ ಕಮ್ಮಟದಲ್ಲಿ ನಿರ್ದೇಶಕ
  • ಹಲವಾರು ಸಾಹಿತ್ಯ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿ

ಸಂಘಟನೆ[ಬದಲಾಯಿಸಿ]

  • ಅಧ್ಯಕ್ಷ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ.
  • ‘ಸಮಾಹಿತ’ ಸಾಹಿತ್ಯ ಪತ್ರಿಕೆ, ಸಹಸಂಪಾದಕ
  • ಧಾರವಾಡ ಸಾಹಿತ್ಯ ಸಂಭ್ರಮ, ಸಲಹೆಗಾರ
  • ಸಾಹಿತ್ಯ ಸಂಸ್ಕ್ರತಿಗೆ ಸಂಬಂಧಪಟ್ಟಂತೆ ಹಲವಾರು ಕಮ್ಮಟಗಳು, ವಿಚಾರ ಸಂಕಿರಣಗಳ ಸಂಘಟನೆ
  • ಚೇತನ ಕಲಾಕ್ಷೇತ್ರದ ಸಂಸ್ಥಾಪಕ
  • ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಸಂಚಾಲಕ- 1994
  • ಅಧ್ಯಕ್ಷ, ಗಿರಡ್ಡಿ ಗೋವಿಂದರಾಜ ಫೌಂಡೇಶನ
  • ಅಧ್ಯಕ್ಷ, ಎಸ್.ಎಸ್. ಭೂಸನೂರಮಠ ಪ್ರತಿಷ್ಠಾನ