ಮಲೆಮಹದೇಶ್ವರ ಕಾವ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಲೆಮಹದೇಶ್ವರ ಕಾವ್ಯ ಕರ್ನಾಟಕದ ಜಾನಪದ ಕಾವ್ಯ.[೧]


ಮಹದೇಶ್ವರ ಹುಟ್ಟಿ ಬೆಳೆದ ಸಾಲು ಜಾನಪದ ಕಥೆಯ ಅನುಸಾರ ಮಹದೇಶ್ವರರ ಪಾಲಕರು ಶ್ರೀ ಚಂದ್ರಶೇಖರ ಮೂರ್ತಿ ಹಾಗೂ ಉತ್ತರಾಜಮ್ಮ ಎಂಬ ದಂಪತಿಗಳು. ಅವರು ಮೂಲತಃ ಆದಿಜಾಂಬವ ಕುಲದವರು, ಮಹದೇಶ್ವರರು ಮೊದಲ ಬಾರಿಗೆ ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿಯ ಸನ್ನಿಧಿಯಲ್ಲಿ ಅದಾದ ನಂತರ ಸುತ್ತೂರು,ಕುಂತೂರು ಮಠಗಳ ಮಾರ್ಗವಾಗಿ ಈಗಿನ ಮಹದೇಶ್ವರ ದೇವಸ್ಥಾನದ ಪ್ರದೇಶಕ್ಕೆ ಬಂದು ತಮ್ಮ ವಾಸಯೋಗ್ಯ ಸ್ಥಳ ಅದೇ ಎಂದು ತೀರ್ಮಾನಿಸಿ ಅಲ್ಲಿ ಬೀಡು ಬಿಟ್ಟರಂತೆ. * ಬಾಲ ಯೋಗಿ ಮಹದೇಶ್ವರರು ಬೆಟ್ಟದಲ್ಲಿ ಸಿಕ್ಕ ಹುಲಿಯನ್ನೇ ವಾಹನವನ್ನಾಗಿ ಮಾಡಿಕೊಂಡು ಬೆಟ್ಟಗಳನ್ನು ಸುತ್ತುತ್ತಾ ಭಕ್ತರನ್ನು ಸಲಹುತ್ತಿದ್ದುದು ಜಾನಪದ ಕಾವ್ಯಗಳಿಂದ ವೇದ್ಯವಾಗಿದೆ. ಲೋಕಕಲ್ಯಾಣಾರ್ಥ ದೇಶ ಸಂಚಾರ ಮಾಡಿ, ಹಲವರ ಸಂಕಷ್ಟ ಪರಿಹರಿಸಿದ ಪವಾಡಪುರುಷ ಮಹದೇಶ್ವರರು ಹರದನಹಳ್ಳಿ ಮಠದ ಮೂರನೇ ಮಠಾಧೀಶರಾಗಿದ್ದರೆಂದೂ ತಿಳಿದುಬರುತ್ತದೆ.ವೈಜ್ಞಾನಿಕವಾಗಿ ಹಾಗು ಭೂಗೋಳಿಕವಾಗಿ ಗಮನಿಸಿದಾಗ ಈ ಸ್ಥಳ ದಟ್ಟ ಕಾಡುಗಳಿಂದ ಆವೃತ್ತವಾಗಿದ್ದು ವಾಸಯೋಗ್ಯವಲ್ಲ. ವಿಪರೀತ ಕಾಡು ಪ್ರಾಣಿಗಳ ಹಾವಳಿಯಿರುವ ಈ ಪ್ರದೇಶದಲ್ಲಿ ಶತಮಾನದ ಹಿಂದೆ ಅನೇಕ ಸಂತರು, ಯೋಗಿಗಳು ತಪಸ್ಸು ಮಾಡಲು ಬೀಡು ಬಿಡುತ್ತಿದ್ದರೆನ್ನಲಾಗಿದೆ. ಮನುಷ್ಯರಿಲ್ಲದ ದಟ್ಟ ಕಾಡು ಅದಾಗಿದ್ದರಿಂದ ಅದು ತಪಸ್ಸಿಗೆ ಯೋಗ್ಯವಾದ ಸ್ಥಳವೆಂದು ದೇಶದ ಅನೇಕ ಯೋಗಿಗಳು ಅಲ್ಲಿ ತಪಸ್ಸಿಗೆಂದು ನೆಲೆಸಿರುತ್ತಾರೆ.ಆದರೆ ಅದೇ ಸ್ಥಳದಲ್ಲಿ ವಾಸವಾಗಿದ್ದ ಮಾಯಾ ವಿದ್ಯೆಗಳನ್ನು ತಂತ್ರವಿದ್ಯೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದ 'ಶ್ರವಣ' ಎಂಬ ರಾಕ್ಷಸ. ತಪಸ್ಸಿನಲ್ಲಿ ತೊಡಗಿಕೊಂಡಿದ್ದ ಸಾಧು ಸಂತರಿಗೆ ತನ್ನ ಮಾಯಾ ಶಕ್ತಿಗಳನ್ನು ಉಪಯೋಗಿಸಿ ತೊಂದರೆ ಮಾಡಿ ಅವರ ತಪಸ್ಸಿಗೆ ಭಂಗವುಂಟು ಮಾಡುತ್ತಿದ್ದುದೇ ಅವನ ಕಾಯಕ.ಮಹದೇಶ್ವರರು ಶ್ರವಣನಿಗೆ ಎದುರಾಗಿ ಆತನ ಮಾಯಾ ತಂತ್ರವಿದ್ಯೆಗಳನ್ನೆಲ್ಲ ನಾಶ ಮಾಡಿ, ಆತನ ವಶದಲ್ಲಿದ್ದ ಸಾಧು ಸನ್ಯಾಸಿಗಳನ್ನು ಸ್ವತಂತ್ರ್ಯಗೊಳಿಸಿದರು ಎನ್ನುವುದು ಜಾನಪದ ಕಾವ್ಯಗಳಿಂದ ತಿಳಿದುಬರುವ ವಿಷಯವಾಗಿದೆ. ಶ್ರವಣನ ಕಪಿಮುಷ್ಠಿಯಲ್ಲಿ ಬಂಧಿಯಾಗಿ ದಿನ ಕಳೆದಿದ್ದ ಅಸಂಖ್ಯಾತ ಮುನಿಗಳಿದ್ದ ಸ್ಥಳವೇ ಇಂದು 'ತಾವಸೆರೆ'ಯಾಗಿದೆ. ರಾಕ್ಷಸ ಶ್ರವಣ ಬದುಕಿದ್ದ ಜಾಗವನ್ನು 'ಶ್ರವಣ ಬೋಲಿ' ಎಂದು ಕರೆಯಲಾಗುತ್ತಿದೆ.ಮಹದೇಶ್ವರರು ಈಗಿನ ಮಹದೇಶ್ವರ ದೇವಸ್ಥಾನವನ್ನು ಹಾಲುಮತದ ಕುರುಬಗೌಡ ಜನಾಂಗದ ಸಾವುಕಾರ ಶ್ರೀ ಜುಂಜೇಗೌಡರು ಕಟ್ಟಿಸಿದ್ದಾರೆ.ಮತ್ತು ಇದೆ ಪ್ರದೇಶದಲ್ಲೂ ಮಠವೊಂದನ್ನು ಸ್ಥಾಪಿಸಿದ್ದುದಾಗಿ ಇತಿಹಾಸದಿಂದ ತಿಳಿದುಬರುತ್ತದೆ. ಅಲ್ಲಿನ ಜನರನ್ನು, ಪ್ರಮುಖವಾಗಿ ಆದಿವಾಸಿ, ಗಿರಿಜನಗಳನ್ನು ಸುಶಿಕ್ಷಿತ, ಸಭ್ಯ ಜನಗಳನ್ನಾಗಿ ಪರಿವರ್ತಿಸುವಂತಹ ಕಾರ್ಯಗಳಿಗಾಗಿ ಮಠ ಸ್ಥಾಪಿಸಿದ್ದರು ಎನ್ನುವುದು ಮಹದೇಶ್ವರರ ಲೋಕ ಕಲ್ಯಾಣಾರ್ಥ ಸೇವೆಯಲ್ಲಿ ಬಹುಮುಖ್ಯವಾದದ್ದು.ಮಹದೇಶ್ವರರ ಕಥಾನಕದಂತೆ ಅಲ್ಲಿನ ಏಳು ಮಲೆ(ಬೆಟ್ಟ)ಗಳನ್ನು ವಿವಿಧ ಜಾನಪದ ಹೆಸರುಗಳಿಂದ ಕರೆಯಲಾಗುತ್ತದೆ. ೭೭ ಬೆಟ್ಟಗಳಲ್ಲಿ- ಆನೆಮಲೆ, ಜೇನುಮಲೆ, ಕಾನುಮಲೆ, ಪಚ್ಚೆಮಲೆ, ಪವಳಮಲೆ, ಪೊನ್ನಾಚಿಮಲೆ,ರುದ್ರಾಕ್ಷಿ ಮಲೆ,ವಿಭೂತಿಮಲೆ, ಕೊಂಗುಮಲೆ ಬೆಟ್ಟಗಳಿಂದ ಸುತ್ತುವರೆದ ಸಂಪೂರ್ಣ ಪ್ರದೇಶವನ್ನು ಮಹದೇಶ್ವರ ಬೆಟ್ಟ ಎಂದು ಕರೆಯಲಾಗುತ್ತದೆ.

  1. "ಜಾನಪದ ಗೀತಗಾಯನ". ಕನ್ನಡ ಪ್ರಭ. Retrieved 15 ಮಾರ್ಚ್ 2014.[ಶಾಶ್ವತವಾಗಿ ಮಡಿದ ಕೊಂಡಿ]