ಭೂತನಾಳ ಕೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭೂತನಾಳ ಕೆರೆ
ಭೂತನಾಳ ಕೆರೆ
village

ಭೂತನಾಳ ಕೆರೆಯು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನಲ್ಲಿದೆ.

ಇತಿಹಾಸ[ಬದಲಾಯಿಸಿ]

ಬರದ ನಾಡು, ಬಿಸಿಲು ನಗರಿ ಎಂದೆಲ್ಲ ಕರೆಯಿಸಿಕೊಳ್ಳುವ ಐತಿಹಾಸಿಕ ವಿಜಯಪುರ ನಗರದಲ್ಲಿ ನೂರಾರು ಕೆರೆಗಳಿವೆ. ಕ್ರಿಶ ೧೬ನೇ ಶತಮಾನದಲ್ಲಿ ವಿಜಯಪುರವನ್ನಾಳಿದ ಶಾಹಿ ಸುಲ್ತಾನರು ಅನೇಕ ಬಾವಿ, ಬಾವಡಿ, ಕೆರೆ ಸೇರಿದಂತೆ, ನೂರಾರು ನೆರೆತೊರೆಗಳಿಂದ ನೀರು ಸಂಗ್ರಹಿಸಿ ನೀರನ್ನೇ ಐಶಾರಾಮಿ ವಸ್ತುವನ್ನಾಗಿಸಿಕೊಂಡಿದ್ದರು. ಇಂದು ಆ ಕೆರೆಗಳೆಲ್ಲ ಬಹುತೇಕ ಒತ್ತುವರಿಗೊಂಡಿದ್ದು, ತಮ್ಮ ಕುರುಹು ಕಳೆದುಕೊಂಡಿವೆ. ಆದರೆ, ಸ್ವಾತಂತ್ರ್ಯಾನಂತರ, ಕುಡಿಯುವ ನೀರಿಗಾಗಿ ನಗರವಾಸಿಗಳು ನರಕಯಾತನೆ ಅನುಭವಿಸುತ್ತಿರುವುದನ್ನು ಕಂಡ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರು ವಿಜಯಪುರದ ಕುಡಿಯುವ ನೀರಿಗಾಗಿ ಹಾಕಿದ ಯೋಜನೆ ಇಂದಿಗೂ ನಗರವಾಸಿಗಳ ದಾಹ ತಣಿಸುತ್ತಿದೆ. ಅದೇ, ಇಂದಿನ ಭೂತನಾಳ ಕೆರೆ.

ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಕನಸಿನ ಕೂಸು ಹಾಗೂ ವಚನ ಪಿತಾಮಹ ಡಾ. ಹಳಕಟ್ಟಿ ಅವರ ವಾಸ್ತವಿಕ ನೆಲೆಗಟ್ಟಿನಲ್ಲಿ ೧೯೧೧ರಲ್ಲಿ ನಿರ್ಮಾಣಗೊಂಡ ಭೂತನಾಳ ಕೆರೆಗೆ ಬಹುವರ್ಷಗಳ ನಂತರ ಜಲಸಂಪನ್ಮೂಲ ಇಲಾಖೆ ಕಾಯಕಲ್ಪಕ್ಕೆ ಮುಂದಾಗಿದ್ದು, ಅಪಾಯದಂಚಿನ ಹಲವು ಹಳ್ಳ, ಝರಿ ಹಾಗೂ ನೈಸರ್ಗಿಕ ನಾಲೆಗಳು ಪುನಃಶ್ಚೇತನಗೊಳ್ಳುತ್ತಿವೆ.

1911ರಲ್ಲಿ ನಗರದ ಕುಡಿಯುವ ನೀರಿನ ಬವಣೆ ನೀಗಿಸಲು ಸರ್‌ ಎಂ. ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ಭೂತನಾಳ ಬಳಿ ನಿರ್ಮಾಣಗೊಂಡಿದ್ದ ಈ ಕೆರೆಯಿಂದ ನಗರದಲ್ಲಿ ಅಂದಿನ ಜನಸಂಖ್ಯೆಗೆ ಅಗತ್ಯವಾದ ನೀರು ಹರಿಸಲಾಗುತ್ತಿತ್ತು. ನೀರನ್ನು ಪಂಪ್‌ ಮಾಡಲು ಇಂಗ್ಲೆಂಡ್‌ನಿಂದ ಕಚ್ಚಾ ತೈಲ ಆಧಾರಿತ 24 ಅಶ್ವಶಕ್ತಿಯ ಸಾಮರ್ಥ್ಯದ ಇಂಜಿನ್‌ ತರಿಸಲಾಗಿತ್ತು. 1972ರಲ್ಲಿ ವಿದ್ಯುತ್‌ ಆಧಾರಿತ ವ್ಯವಸ್ಥೆ ರೂಪಿಸಿಕೊಂಡು, ನೀರು ಶುದ್ಧೀಕರಣ ಘಟಕ ಸ್ಥಾಪಿಸಿತ್ತು.

ವಿಸ್ತೀರ್ಣ[ಬದಲಾಯಿಸಿ]

ಒಟ್ಟು ೩೨೨ ಎಕರೆ ವಿಸ್ತೀರ್ಣ ಹೊಂದಿರುವ ಭೂತನಾಳ ಕೆರೆ ಹೂಳು ತುಂಬಿಕೊಂಡು ಹಾಳು ಬೀಳುವ ಹೊತ್ತಿನಲ್ಲೇ ಕಾಯಕಲ್ಪಕ್ಕೆ ಮುಂದಾಗಿರುವುದು ಕೊಂಚ ಸಮಾಧಾನ ತಂದಿದೆ. ಗುಮ್ಮಟ ನಗರಿಯ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾದ ಈ ಕೆರೆ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿತ್ತು. ಇಡೀ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಭೂತನಾಳ ಕೆರೆ ಪ್ರವಾಸಿಗರ ಅಟಾಟೋಪಕ್ಕೆ ಬಲಿಯಾಗಿ ಪ್ಲಾಸ್ಟಿಕ್‌ಮಯವಾಗಿ ರೂಪುಗೊಳ್ಳುತ್ತಿತ್ತು. ಇನ್ನೂ ಸ್ವಲ್ಪ ದಿನ ಕಳೆದಿದ್ದರೆ, ಕೆರೆ ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತಿತ್ತು. ಹೀಗಾಗಿ ಜಲಸಂಪನ್ಮೂಲ ಇಲಾಖೆ ಮುಂಜಾಗೃತೆಯಿಂದಾಗಿ ಐತಿಹಾಸಿಕ ಕೆರೆಯೊಂದು ಮರುಹುಟ್ಟು ಪಡೆದುಕೊಳ್ಳುತ್ತಿದೆ.

ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಕಳಚಿ ವಿಜಯಪುರವನ್ನು ನಿಸರ್ಗ ಸಂಪನ್ಮೂಲಭರಿತ ಜಿಲ್ಲೆಯಾನ್ನಾಗಿಸಲು ಪಣತೊಟ್ಟು 100 ವರ್ಷಗಳ ಇತಿಹಾಸವಿರುವ ಭೂತನಾಳ ಕೆರೆಗೆ ಆಗ ಸ್ವತಃ ಸರ್ ಎಂ. ವಿಶ್ವೇಶ್ವರಯ್ಯನವರು ಭೇಟಿ ನೀಡಿ ನೀಲನಕ್ಷೆಯನ್ನು ಸಿದ್ಧಪಡಿಸಿದ್ದರು. ಹಾಗಾಗಿ ನಗರ ಸಭೆ 100 ವರ್ಷಗಳ ಚರಿತ್ರೆಯುಳ್ಳ ಈ ಕೆರೆಗೆ ವಿಶ್ವೇಶ್ವರಯ್ಯನವರ ಹೆಸರನ್ನಿಟ್ಟು ಮರುನಾಮಕರಣ ಮಾಡಿದೆ.

ಕೆರೆಯ ಅಭಿವೃದ್ಧಿ[ಬದಲಾಯಿಸಿ]

  • ಕೆರೆಯ ಬಳಿಯಿರುವ ಉದ್ಯಾನವನದ ಜೊತೆಗೆ ಸಾರ್ವಜನಿಕರು ಕೆರೆಯ ಸುತ್ತಲೂ ವಾಕಿಂಗ್ ಮಾಡಲು ಅನುಕೂಲವಾಗುವಂತೆ ನಡಿಗೆ ಟ್ರ್ಯಾಕ್ ನಿರ್ಮಾಣ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆರೆಯ ಸುತ್ತಲೂ 3 ಕಿ.ಮೀ. ಉದ್ದದ ಬಂಡ್ ನಿರ್ಮಾಣವಾಗಿದೆ.
  • ಕೃಷ್ಣಾ ನದಿಯಿಂದ 60 ಕಿ.ಮೀ. ದೂರವಿರುವ ಈ ಕೆರೆಯನ್ನು ತುಂಬಿಸಲು ಈಗಾಗಲೇ 53 ಕಿ.ಮೀ. ಉದ್ದದ ಪೈಪ್‍ಲೈನನ್ನು ಅಳವಡಿಸಲಾಗಿದೆ.
  • ಭೂತನಾಳ ಕೆರೆ 322 ಎಕರೆ ವಿಸ್ತೀರ್ಣವಿದೆ.

ಭೂತನಾಳ ಕೆರೆಗೆ ತೊರವಿಯ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಿಂದ ಆರಂಭವಾಗುವ ಹಳ್ಳ, ದರ್ಗ ಹಾಗೂ ರಾಮಲಿಂಗನ ಕೆರೆ ಮಾರ್ಗವಾಗಿ, ಭೂತನಾಳ ಕೆರೆ ಸೇರುವ ಹಳ್ಳ ಹಾಗೂ ಇಟ್ಟಂಗಿಹಾಳ ಉತ್ತರ ಮತ್ತು ದಕ್ಷಿಣ ಹಾಗೂ ಕರಡಿದೊಡ್ಡಿ ಗ್ರಾಮದಿಂದ ಹಾಯ್ದು ಬರುವ ಹಳ್ಳಗಳಿಂದ ಯಥೇಚ್ಚವಾಗಿ ನೀರು ಹರಿದು ಬರುತ್ತಿತ್ತು. ಇದರಿಂದ ಕಡು ಬೇಸಿಗೆಯಲ್ಲೂ ನಗರವಾಸಿಗಳಿಗೆ ನೀರಿನ ಕೊರತೆ ಎದುರಾಗುತ್ತಿರಲಿಲ್ಲ. ಆದರೆ, ಈಚೆಗೆ ಆ ಹಳ್ಳಗಳಲ್ಲಿ ಕೆಲವು ಅತಿಕ್ರಮಣಗೊಂಡರೆ, ಕೆಲವು ಮುಳ್ಳು ಕಂಟಿಗಳಿಂದ, ಹೂಳು ಮಿಶ್ರತವಾಗಿ ಸಂಪೂರ್ಣ ಮರೆಮಾಚಿದ್ದವು. ಆದರೆ, ಇದೀಗ ಆ ಎಲ್ಲ ಹಳ್ಳಗಳನ್ನು ಸ್ವಚ್ಛಗೊಳಿಸಲಾಗಿದೆ. ಮಾತ್ರವಲ್ಲ, ಈ ಹಳ್ಳಗಳಿಂದ ಹರಿದು ಬರುವ ನೀರಿಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಮುಖ್ಯವಾಗಿ ಈ ಹಳ್ಳ ಸೇರುವ ಕೆರೆಯ ದಡದಲ್ಲಿ ಅಡ್ಡಲಾಗಿ ‘ಸಿಲ್ಟ್ ಟ್ರಾಪ್’ಗಳನ್ನು ನಿರ್ಮಿಸಲಾಗಿದ್ದು, ಇದರಿಂದ ಅನಗತ್ಯವಾಗಿ ಕೆರೆಗೆ ಹೂಳು ತುಂಬುವುದನ್ನು ತಡೆಯಬಹುದಾಗಿದೆ.

ಜಲಾನಯನ ಪ್ರದೇಶ ಮತ್ತು ಶೇಖರಣೆ ಸಾಮರ್ಥ್ಯ[ಬದಲಾಯಿಸಿ]

ಭೂತನಾಳ ಕೆರೆ ೫೬೩.೨೫೦ ಮೀಟರ್ ಅತ್ಯುನ್ನತ ನೀರಿನ ಮಟ್ಟ ಹೊಂದಿದ್ದು, ೫೬೧.೯೫೦ ಮೀ. ಪೂರ್ಣ ನೀರಿನ ಮಟ್ಟ ಹೊಂದಿದೆ. ಅಂದಾಜು ೮೭.೩೪ ಚ.ಕಿ.ಮೀ. ಜಲಾನಯನ ಪ್ರದೇಶ ಹೊಂದಿದೆ. ಈ ಕೆರೆಯ ಮಣ್ಣಿನ ಏರಿ ೯೫೦ ಮೀ. ಉದ್ದ, ೬.೦೮ ಮೀ. ಎತ್ತರ ಹಾಗೂ ೩.೫೦ ಮೀ. ಅಗಲ ಹೊಂದಿದೆ. ಕೆರೆಯ ಪುನಶ್ಚೇತನದಿಂದ ೧೩.೯೦ ಮೀ. ಘ.ಅಡಿ ವಿಸ್ತ್ರೀರ್ಣ ಹೆಚ್ಚಾಗಲಿದೆ. ಶೇ.೦.೧೪ ಟಿಎಂಸಿ ನೀರಿನ ಶೇಖರಣೆ ಸಾಮರ್ಥ್ಯ ಹೆಚ್ಚಳವಾಗಲಿದೆ.

ಪ್ರವಾಸಿ ತಾಣ[ಬದಲಾಯಿಸಿ]

ಭೂತನಾಳ ಕೆರೆಯ ಸುತ್ತ ಸುಂದರ ಉದ್ಯಾನ ನಿರ್ಮಾಣ ಮಾಡಲಾಗಿದ್ದು, ನಿತ್ಯ ನೂರಾರು ನಗರವಾಸಿಗಳು ವಾಯು ವಿಹಾರಕ್ಕೆ ಆಗಮಿಸುತ್ತಾರೆ. ಇದೀಗ ಕೋಟಿ ವೃಕ್ಷ ಅಭಿಯಾನದಡಿ ೩೦೦ಕ್ಕೂ ಹೆಚ್ಚು ಸಸಿಗಳನ್ನು ಕೆರೆಯ ಸುತ್ತ ನೆಡಲಾಗುತ್ತಿದೆ. ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಮಾಡಲಾಗುತ್ತಿದ್ದು, ಕೆರೆಯ ಮುಂಭಾಗ ಅರಣ್ಯ ಇಲಾಖೆಯಿಂದ ಅಂದಾಜು ೮ ಎಕರೆ ಜಾಗೆಯಲ್ಲಿ ನೆಡುತೋಪು ನಿರ್ಮಾಣ ಮಾಡಲಾಗಿದೆ.

ಅರಣ್ಯ ಇಲಾಖೆಯ ನರ್ಸರಿ[ಬದಲಾಯಿಸಿ]

ಮೀನುಗಾರಿಕೆ ಸಂಶೋಧನಾ ಕೇಂದ್ರ[ಬದಲಾಯಿಸಿ]

ಬೀದರನ ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಭೂತನಾಳ ಕೆರೆಯ ಸಮೀಪ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರವನ್ನು ಸ್ಥಾಪಿಸಿದೆ.

  • ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರ, ಭೂತನಾಳ, ತಾ||ಜಿ|| ವಿಜಯಪುರ

ಹಾಲು ಉತ್ಪಾದಕ ಘಟಕ[ಬದಲಾಯಿಸಿ]

ಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ ಭೂತನಾಳ ಗ್ರಾಮದಲ್ಲಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಭೂತನಾಳ, ವಿಜಯಪುರ. ಇದನ್ನು ವಿಜಯಪುರ ಡೈರಿಯಂತಲು ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ.