ಭಾರತೀಯ ಶಿಕ್ಷಣ ಮಂಡಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತೀಯ ಶಿಕ್ಷಣ ಮಂಡಲ
ಸ್ಥಾಪನೆ27 ಆಗಸ್ಟ 1969
ಶೈಲಿಶೈಕ್ಷಣಿಕ ಮತ್ತು ಸಾಂಸ್ಕೃತಿಕ
ಪ್ರಧಾನ ಕಚೇರಿನಾಗಪುರ

1969 ರಲ್ಲಿ ರಾಮನವಮಿಯ ದಿನದಂದು ಭಾರತೀಯ ಶಿಕ್ಷಣ ಮಂಡಲವನ್ನು ಸ್ಥಾಪಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಪುನರುತ್ಥಾನದ ಉದ್ದೇಶದಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಇದು ಸಮಗ್ರ ಭಾರತೀಯ ದೃಷ್ಟಿಕೋನದ ಆಧಾರದ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿ, ಪಠ್ಯಕ್ರಮ, ವ್ಯವಸ್ಥೆ ಮತ್ತು ವಿಧಾನಗಳನ್ನು ವಿಕಸಿಸುವ ಗುರಿಯನ್ನು ಹೊಂದಿದೆ. ದೇಶದ ಎಲ್ಲಾ ಭಾಗಗಳಲ್ಲಿ ಹಲವಾರು ಶೈಕ್ಷಣಿಕ, ಬೌದ್ಧಿಕ ಮತ್ತು ಪ್ರಾಯೋಗಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಈ ಮೂಲಕ ರಾಷ್ಟ್ರದ ಒಟ್ಟಾರೆ ಅಭಿವೃದ್ಧಿಯತ್ತ ಗಮನವನ್ನು ಕೇಂದ್ರೀಕರಿಸಿದೆ. ಇದರ ಕೇಂದ್ರ ಕಚೇರಿ ನಾಗಪುರದಲ್ಲಿದೆ.

ಧ್ಯೇಯೋದ್ದೇಶಗಳು[ಬದಲಾಯಿಸಿ]

ಶಿಕ್ಷಣದ ಗುರಿ -'ರಾಷ್ಟ್ರೀಯ ಪುನರುತ್ಥಾನದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಯಾಗಿರಬೇಕು. ಭಾರತೀಯ ಸಂಸ್ಕೃತಿಯು ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಪ್ರತಿಬಿಂಬಿತವಾಗಬೇಕು. ಶಿಕ್ಷಣ ಕ್ಷೇತ್ರದ ಪಾಲುದಾರರಾದ ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರು ಈ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು.

ಇತಿಹಾಸ ಮತ್ತು ಚಟುವಟಿಕೆಗಳು[ಬದಲಾಯಿಸಿ]

  • ಭಾರತೀಯ ಶಿಕ್ಷಣ ಮಂಡಲವು ಆಗಸ್ಟ 27, 1969 ರಂದು ರಾಮನವಮಿಯ ದಿನ ಮುಂಬೈನ ಶ್ರೀ ಶ್ರೀರಾಮ್ ಮಂತ್ರಿಯವರ ಮನೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಸ್ಥಾಪಿತವಾಯಿತು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರನೆಯ ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್ ದೇವರಸ್ ಮತ್ತು 25 ಶಿಕ್ಷಣ ತಜ್ಞರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
  • ನೈತಿಕ ಶಿಕ್ಷಣದ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣವನ್ನು 1974 ರಲ್ಲಿ ಪುಣೆಯಲ್ಲಿ ಆಯೋಜಿಸಲಾಗಿತ್ತು. ಆ ಸೆಮಿನಾರ್‌ನ ಪರಿಣಾಮವಾಗಿ ನೈತಿಕ ಶಿಕ್ಷಣಕ್ಕೆ ಸಂಬಂಧಿಸಿದ ಸಾರ್ವತ್ರಿಕವಾಗಿ ಅನ್ವಯವಾಗುವ ಯೋಜನೆಯನ್ನು ರೂಪಿಸಲಾಯಿತು ಮತ್ತು ಅದರ ಪ್ರತಿಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ರವಾನಿಸಲಾಯಿತು. ಈ ಪಠ್ಯಕ್ರಮವನ್ನು ಕೆಲವು ರಾಜ್ಯಗಳ ಶಾಲೆಗಳಲ್ಲಿ ಜಾರಿಗೆ ತರಲಾಯಿತು.
  • ಎನ್‌ಸಿಇಆರ್‌ಟಿಯಿಂದ 10 + 2 + 3 ಮಾದರಿಯಲ್ಲಿ ರಾಷ್ಟ್ರೀಯ ಸೆಮಿನಾರ್‌ನ್ನು 1977 ರಲ್ಲಿ ದೆಹಲಿಯಲ್ಲಿ ಕರೆಯಲಾಯಿತು. ಭಾರತೀಯ ಶಿಕ್ಷಣ ಮಂಡಲದ 10 ರಾಜ್ಯ ಘಟಕಗಳ ಪ್ರತಿನಿಧಿಗಳು ಇದರಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದರು. ಮಂಡಲದ ಹಲವಾರು ಅಮೂಲ್ಯ ಸಲಹೆಗಳನ್ನು ಅಂಗೀಕರಿಸಲಾಯಿತು.
  • ನಮ್ಮ ಶಿಕ್ಷಣ ಮಾದರಿಯಲ್ಲಿ ಅಗತ್ಯವಾದ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವ ಬೃಹತ್ ಯೋಜನೆಯನ್ನು ಭಾರತೀಯ ಶಿಕ್ಷಣ ಮಂಡಲ ಕೈಗೆತ್ತಿಕೊಂಡಿದೆ. 1977 ರಲ್ಲಿ ನಾಗ್ಪುರದಲ್ಲಿ ನಡೆದ ಕಾರ್ಯಕರ್ತರ 3 ದಿನಗಳ ಅಖಿಲ ಭಾರತ ಸಭೆಯಲ್ಲಿ ಈ ಯೋಜನೆಯನ್ನು ಮೊದಲು ಪ್ರಾರಂಭಿಸಲಾಯಿತು. ಈ ಸಭೆಯಲ್ಲಿ ಬಾಳಾಸಾಹೇಬ್ ದೇವರಸ್ ಮತ್ತು ರಜ್ಜು ಭೈಯ್ಯಾ ಅವರು ಹಾಜರಿದ್ದರು. ಈ ಸಭೆಯಲ್ಲಿ ನೀಲನಕ್ಷೆಯನ್ನು ರೂಪಿಸಲಾಯಿತು ಮತ್ತು ಅದರ ಆಧಾರದ ಮೇಲೆ ಪ್ರಶ್ನಾವಳಿಯನ್ನು ತಯಾರಿಸಲಾಯಿತು. ರಾಜ್ಯದ ವಿವಿಧ ಭಾಷೆಗಳಿಗೆ ಅನುವಾದಿಸಿದ ನಂತರ ಅದನ್ನು ಶಿಕ್ಷಣ ತಜ್ಞರು ಮತ್ತು ಶಿಕ್ಷಕರಿಗೆ ಕಳುಹಿಸಲಾಯಿತು. ಪ್ರಶ್ನಾವಳಿ ಸುಮಾರು 3000 ಜನರನ್ನು ತಲುಪಿತು. ಈ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣವನ್ನು 1971 ರಲ್ಲಿ ದೆಹಲಿಯಲ್ಲಿ ಕರೆಯಲಾಯಿತು ಮತ್ತು ಇದಕ್ಕೆ ಆಗಿನ ಉಪರಾಷ್ಟ್ರಪತಿಗಳಾಗಿದ್ದ ಶ್ರೀ ಬಿ.ಡಿ. ಜತ್ತಿ, ಕೇಂದ್ರ ಶಿಕ್ಷಣ ಸಚಿವರಾಗಿದ್ದ ಪಿ.ಸಿ.ಸುಂದರ್, ಬಾಪುರಾವಜೀ ಮೊಘೆ, ಕೇದಾರನಾಥ ಸಹಾನಿ ಮತ್ತು ಇತರ ಹಲವಾರು ಪ್ರಖ್ಯಾತ ವ್ಯಕ್ತಿಗಳಿಂದ ಮಾರ್ಗದರ್ಶನ ದೊರಕಿತು. ಪ್ರಾಥಮಿಕ ಯೋಜನೆ ಮತ್ತು ಸಿದ್ಧಪಡಿಸಿದ ಪ್ರಶ್ನಾವಳಿಯ ಪ್ರತಿಕ್ರಿಯೆಯ ಆಧಾರದ ಮೇಲೆ ರಚಿತವಾದ ಕಿರುಪುಸ್ತಕದ ಬಗ್ಗೆ ವಿವರವಾದ ಚರ್ಚೆಯನ್ನು ನಡೆಸಲಾಯಿತು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯು ಅದರ ಅಂತಿಮ ಸ್ವರೂಪವನ್ನು ಪಡೆದುಕೊಂಡಿತು.
  • 1980 ರಲ್ಲಿ ಪುಣೆಯ ಅಭ್ಯಾಸ ವರ್ಗದಲ್ಲಿ 'ಶಿಕ್ಷಣದಲ್ಲಿ ಭಾರತೀಯತೆ' ಎಂಬ ಯೋಜನೆಯನ್ನು ಪ್ರಾರಂಭಿಸಲಾಯಿತು. ಭಾರತದ ಎಲ್ಲಾ ರಾಜ್ಯಗಳ ಶಿಕ್ಷಣ ತಜ್ಞರು ಮತ್ತು ಶಿಕ್ಷಕರಿಗಾಗಿ ಪ್ರಶ್ನಾವಳಿಯನ್ನು ತಯಾರಿಸಿ ವಿತರಿಸಲಾಯಿತು. ಇದರೊಂದಿಗೆ ಸುಮಾರು 100 ಜಿಲ್ಲೆಗಳಲ್ಲಿ ಸುಮಾರು 200 ಸೆಮಿನಾರ್‌ಗಳು ಮತ್ತು ವಿಚಾರ ಸಂಕಿರಣಗಳು ನಡೆದವು. ಈ ವಿಷಯದ ಬಗ್ಗೆ ಸೆಮಿನಾರ್‌ಗಳು 1983 ರಲ್ಲಿ ಉತ್ತರದ ರಾಜ್ಯಗಳಿಗೆ ಗ್ವಾಲಿಯರ್‌ನಲ್ಲಿ ಮತ್ತು ದಕ್ಷಿಣ ರಾಜ್ಯಗಳಿಗೆ ಹೈದರಾಬಾದ್‌ನಲ್ಲಿ ನಡೆದವು. ಪದ್ಮಶ್ರೀ ಡಾ.ವಕಂಕರ್, ಕೇಂದ್ರ ಸಚಿವ ಶ್ರೀ ಪಿ.ಶಿವಶಂಕರ್, ಸ್ವಾಮಿ ರಂಗನಾಥಾನಂದ, ರಜ್ಜು ಭೈಯ್ಯಾ, ದತ್ತೋಪಂತ್ ಠೇಂಗಡಿಯವರು ಸಭೆಯಲ್ಲಿದ್ದರು.
  • ಮೊದಲ ಅಖಿಲ ಭಾರತೀಯ ಅಭ್ಯಾಸ ವರ್ಗವನ್ನು 1980 ರಲ್ಲಿ ಪುಣೆಯಲ್ಲಿ ನಡೆಸಲಾಯಿತು. 12 ರಾಜ್ಯಗಳ 150 ಕಾರ್ಯಕರ್ತರು ಈ 5 ದಿನಗಳ ಅಭ್ಯಾಸ ವರ್ಗದಲ್ಲಿ ಚರ್ಚಿಸಿದರು. ವಿಧಾನ ಪರಿಷತ್ ಸದಸ್ಯ ಶ್ರೀ ವಿ.ಎಸ್. ಪೇಜ್, ಶಿಕ್ಷಣ ನಿಯಂತ್ರಕ ಶ್ರೀ ವಿ.ವಿ.ಚಿಪ್ಲುಂಕರ್ ಮತ್ತು ಪ್ರಖ್ಯಾತ ಶಿಕ್ಷಣ ತಜ್ಞರಾದ ಶ್ರೀಮತಿ ಚಿತ್ರ ನಾಯಕ್ ಅವರು ವರ್ಗದಲ್ಲಿ ಮಾರ್ಗದರ್ಶನ ನೀಡಿದರು.
  • ಹೊಸ ಶಿಕ್ಷಣ ನೀತಿ 1986: ಭಾರತೀಯ ಶಿಕ್ಷಣ ಮಂಡಲವು ಹೊಸ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ವಿವಿಧ ಹಂತಗಳಲ್ಲಿ ಸಕ್ರಿಯವಾಗಿ ಚರ್ಚೆಗೆ ಇಳಿಯಿತು. ಕೇಂದ್ರ ಸರ್ಕಾರಕ್ಕೆ ದೊರೆತ 12000 ಸಲಹೆಗಳಲ್ಲಿ 3000 ಭಾರತೀಯ ಶಿಕ್ಷಣ ಮಂಡಲದ ಸಲಹೆಗಳಾಗಿದ್ದು, ಚರ್ಚೆಗಳು, ವಿಚಾರ ಸಂಕಿರಣಗಳು ಮತ್ತು ಭಾಷಣಗಳ ಮೂಲಕ ದೇಶಾದ್ಯಂತ ವಿವಿಧ ಹಂತಗಳಲ್ಲಿ ಸಿದ್ಧಪಡಿಸಲಾಗಿದೆ. ದೆಹಲಿಯಲ್ಲಿ ಅದರ ವಿಧಾನದ ಬಗ್ಗೆ ಒಂದು ವಿಚಾರ ಸಂಕಿರಣ ನಡೆಯಿತು ಇದರಲ್ಲಿ ಡಾ.ಮುರಳಿ ಮನೋಹರ್ ಜೋಶಿ, ಪ್ರೊ. ಜೆ.ವಿ.ರಾಘವನ್, ಡಾ.ಎಸ್.ಕೆ.ಮಿತ್ರಾ, ಡಾ.ಪ್ರೇಮ್‌ಕ್ರಿಪಾಲ್ಜಿ, ಶ್ರೀ ಕಿಶೋರಿಲಾಲ್ ದಂಡಾನಿಯಾ, ರಜ್ಜು ಭೈಯ್ಯಾ ಪಾಲ್ಗೊಂಡಿದ್ದರು.
  • ಭಾರತೀಯ ಶಿಕ್ಷಣ ಮಂಡಲದ ಪೋಷಕರ ಸಮಿತಿಯನ್ನು ರಚಿಸಲಾಯಿತು. ಸ್ವಾಮಿ ಚಿನ್ಮಯಾನಂದ [ಮುಂಬೈ], ಸ್ವಾಮಿ ರಂಗನಾಥಾನಂದ, ಡಾ.ಕೆ.ಯ್ಯಂಗಾರ್ [ಮದ್ರಾಸ್], ಮನನೇಯ ಶ್ರೀ ಎಂ.ಪಿ.ಪಂಡಿತ್ [ಪಾಂಡಿಚೆರಿ] ಆರಂಭದಲ್ಲಿ ಅದರ ಸದಸ್ಯರಾಗಿದ್ದರು. ನಂತರ ಶ್ರೀ ಟಿ.ಎನ್.ಶೇಷನ್, ಪ್ರೊ. ಕಿರೀಟ್ ಜೋಶಿ, ಪ್ರೊ.ವಿ.ಕೆ.ಆರ್.ರಾವ್ [ಶಿಕ್ಷಾ ಮಂತ್ರಿ] ಅವರು ಭಾರತೀಯ ಶಿಕ್ಷಣ ಮಂಡಲಕ್ಕೆ ತಮ್ಮ ಅಮೂಲ್ಯ ಮಾರ್ಗದರ್ಶನವನ್ನು ನೀಡಿದರು.
  • ಎರಡನೇ ಅಖಿಲ ಭಾರತೀಯ ಅಭ್ಯಾಸ ವರ್ಗವನ್ನು 1985 ರಲ್ಲಿ ಬೆಂಗಳೂರಿನಲ್ಲಿ ನಡೆಸಲಾಯಿತು. ಭಾರತದ 15 ರಾಜ್ಯಗಳಿಂದ ಸುಮಾರು 200 ಕಾರ್ಯಕರ್ತರು ಅದರಲ್ಲಿ ಭಾಗವಹಿಸಿದ್ದರು. ಶಿಕ್ಷಣದ ರಾಷ್ಟ್ರೀಯ ರೂಪರೇಖೆ, ವೇದಗಳು ಮತ್ತು ಉಪನಿಷತ್ತುಗಳ ಜ್ಞಾನದ ನಿಧಿ, ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಒದಗಿಸಲಾದ ಆರಕ್ಷಣೆಯ ದುಷ್ಪರಿಣಾಮಗಳು ಮತ್ತು ಇತರ ಹಲವಾರು ವಿಷಯಗಳ ಕುರಿತು ಚರ್ಚೆಗಳೊಂದಿಗೆ ಕಾರ್ಯಕರ್ತರಿಗೆ ತರಬೇತಿ ನೀಡಲಾಯಿತು. ಸ್ವಾಮಿ ಚಿದಾನಂದ, ಡಾ.ವಿ.ಕೆ.ಆರ್.ವಿ.ರಾವ್, ದತ್ತೋಪಂತ್ ಠೇಂಗಡಿ, ಜಾರ್ಜ್ ಮೆನ್ಜೆಸ್, ಡಾ.ನಾಗೇಂದ್ರ ಮತ್ತು ಇತರರು ಮಾರ್ಗದರ್ಶನ ನೀಡಿದರು.
  • 1987 ರಲ್ಲಿ ಸಾರ್ವಜನಿಕರಿಗೆ ಸ್ಫೂರ್ತಿ ನೀಡುವ ಉದ್ದೇಶದಿಂದ 6 ಅಂಶಗಳ ಕಾರ್ಯಕ್ರಮವನ್ನು ನಡೆಸಲು ಭಾರತೀಯ ಶಿಕ್ಷಣ ಮಂಡಲ ನಿರ್ಧರಿಸಿತು. ಮಾರ್ಚ್ 28, 1989 ರಂದು 2000 ಸ್ಥಳಗಳಲ್ಲಿ ಸಭೆಗಳನ್ನು ಆಯೋಜಿಸಲಾಯಿತು. ಆ 6 ಅಂಶಗಳಿಗೆ ಸಂಬಂಧಿಸಿದ ನಿರ್ಣಯವನ್ನು ಅಂಗೀಕರಿಸಲಾಯಿತು ಮತ್ತು ಅದರ ಪ್ರತಿಗಳನ್ನು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಮತ್ತು ಪ್ರಧಾನ ಮಂತ್ರಿಗೆ ಕಳುಹಿಸಲಾಗಿದೆ. ರಾಜಸ್ಥಾನ ಮತ್ತು ಮಹಾರಾಷ್ಟ್ರದ ಶಿಕ್ಷಣ ಮಂತ್ರಿಗಳು ಇದಕ್ಕೆ ಲಿಖಿತ ಅನುಮೋದನೆ ನೀಡಿದರು.
  • 'ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಮತ್ತು ರಾಷ್ಟ್ರೀಯ ಏಕತೆ' ಎಂಬ ವಿಷಯದ ಕುರಿತು ಭಾರತೀಯ ಶಿಕ್ಷಣ ಮಂಡಲವು ದತ್ತೋಪಂತ್ ಠೇಂಗಡಿಯವರ ಭಾಷಣವನ್ನು ಆಯೋಜಿಸಿತು. ಅದರ ಕೆಲವು ಭಾಗಗಳನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಯಿತು. ಈ ಭಾಷಣವನ್ನು ಆಧರಿಸಿದ ಕಿರುಪುಸ್ತಕವನ್ನು ಪೂರ್ವ ಉತ್ತರ ಪ್ರದೇಶದ ಲಕ್ನೋದಲ್ಲಿ ಪ್ರಕಟಿಸಲಾಗಿದೆ.
  • ರಾಮ್ ಮೂರ್ತಿ ಆಯೋಗವು ಭಾರತೀಯ ಶಿಕ್ಷಣ ನೀತಿಯ ನೀಲನಕ್ಷೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಭಾರತೀಯ ಶಿಕ್ಷಣ ಮಂಡಲವನ್ನು ಆಹ್ವಾನಿಸಿತ್ತು. ಅದಕ್ಕೆ ಭಾರತೀಯ ಶಿಕ್ಷಣ ಮಂಡಲವು ತನ್ನ ಸಂಪೂರ್ಣ ನೆರವು ನೀಡಿತು.
  • ಮಹಿಳೆಯರ ವೇದಿಕೆ 1993 ರಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಪ್ರಾರಂಭಿಸಿತು. ಮೊದಲ ರಾಷ್ಟ್ರೀಯ ಅಧಿವೇಶನ 2000 ರಲ್ಲಿ ಕಾನ್ಪುರದಲ್ಲಿ ನಡೆಯಿತು. 20 ರಾಜ್ಯಗಳಿಂದ ಒಟ್ಟು ಹಾಜರಾತಿ 500 ರಷ್ಟಿತ್ತು. ಅವರಲ್ಲಿ ಸುಮಾರು 125 ಮಹಿಳೆಯರು ಇದ್ದರು.
  • ಭಾರತೀಯ ಶಿಕ್ಷಣ ಮಂಡಲದ ಮಹಾರಾಷ್ಟ್ರ ಘಟಕವು 'ವಿಜ್ಞಾನಕ್ಕೆ ಭಾರತದ ಕೊಡುಗೆ' [ಪ್ರಾಚೀನ ಮತ್ತು ಆಧುನಿಕ] ಎಂಬ ವಿಷಯದ ಕುರಿತು ಪ್ರದರ್ಶನವನ್ನು ಆಯೋಜಿಸಿ ಅದರ ಆಧಾರದ ಮೇಲೆ ಪುಸ್ತಕವನ್ನು ಪ್ರಕಟಿಸಿತು.
  • ಭಾರತೀಯ ಶಿಕ್ಷಣ ಮಂಡಲದ ಎರಡನೇ ರಾಷ್ಟ್ರೀಯ ಅಧಿವೇಶನವನ್ನು 2007 ರ ಜನವರಿಯಲ್ಲಿ ವಿಶಾಖಪಟ್ಟಣಂನಲ್ಲಿ ಆಯೋಜಿಸಲಾಗಿತ್ತು. ಅಧಿವೇಶನ ಮುಖ್ಯ ವಿಷಯವೆಂದರೆ 'ಶಿಕ್ಷಣದ ಭಾರತೀಯೀಕರಣ'. ರಾಷ್ಟ್ರದಾದ್ಯಂತ 22 ರಾಜ್ಯಗಳ 700 ಪ್ರತಿನಿಧಿಗಳು ಭಾಗವಹಿಸಿದ್ದರು. ಶ್ರೀ ಸುದರ್ಶನಜಿ, ಶ್ರೀ ಸುರೇಶ ಸೋನಿ, ಶ್ರೀ ಗುರುಮೂರ್ತಿ, ಶ್ರೀ ವೆಂಕಟೇಶ್ವರಂ, ಡಾ.ಮೋಹನ್ ಲಾಲ್ ಚೀಪ ಇದರ ಕಾರ್ಯಚಟುವಟಿಕೆಗೆ ಮಾರ್ಗದರ್ಶನ ನೀಡಿದರು.
  • ಕಳೆದ 6 ರಿಂದ 7 ವರ್ಷಗಳಲ್ಲಿ ಸುಮಾರು 40 ವಿಷಯಗಳ ಕುರಿತು ಸೆಮಿನಾರ್‌ಗಳನ್ನು ಆಯೋಜಿಸಲಾಗಿದೆ.
  • ಮಹಾರಾಷ್ಟ್ರದ ವಿವಿಧ ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ಸನ್ಮಾನಿಸುವ ವಿಶೇಷ ಕಾರ್ಯಕ್ರಮವನ್ನು ಸೆಪ್ಟೆಂಬರ್ 2012 ರಲ್ಲಿ ನಾಗ್ಪುರದಲ್ಲಿ ಆಯೋಜಿಸಲಾಗಿತ್ತು.
  • ಮೂರನೆಯ ರಾಷ್ಟ್ರೀಯ ಅಧಿವೇಶನವನ್ನು ನವೆಂಬರ್-ಡಿಸೆಂಬರ್ 2012 ರಲ್ಲಿ ನಾಗಪುರದಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ 20 ರಾಜ್ಯಗಳ 168 ಜಿಲ್ಲೆಗಳ 1124 ಪ್ರತಿನಿಧಿಗಳು ಭಾಗವಹಿಸಿದ್ದರು. ಮುಖ್ಯ ವಿಷಯವೆಂದರೆ 'ಸುಸ್ಥಿರ ಅಭಿವೃದ್ಧಿಗೆ ಶಿಕ್ಷಣ'. ಶ್ರೀ ಸುರೇಶ್ ಸೋನಿ, ಡಾ.ಜೆ.ಎಸ್.ರಾಜಪೂತ್, ಶ್ರೀ ಮೋಹನ್ ಭಾಗವತ್, ಶ್ರೀಮತಿ ಅರ್ಚನಾ ಚಿಟ್ನಿಸ್, ಮತ್ತು ಶ್ರೀ ಇಟ್ಮುದ್ದೀನ್ ಕಾಟಧರೆ ಮಾರ್ಗದರ್ಶನ ನೀಡಿದರು.
  • ಸ್ವಾಮಿ ವಿವೇಕಾನಂದರ 150 ನೇ ಜನ್ಮ ದಿನಾಚರಣೆಯ ನೆನಪಿಗಾಗಿ ರಾಷ್ಟ್ರದಾದ್ಯಂತ ಸೆಮಿನಾರ್‌ಗಳು, ಭಾಷಣಗಳು, ಕಾರ್ಯಾಗಾರಗಳು ಮತ್ತು ಸ್ಪರ್ಧೆಗಳಂತಹ ವಿವಿಧ ಕಾರ್ಯಕ್ರಮಗಳು ನಡೆದವು. 16-17 ನವೆಂಬರ್ 2013 ರಂದು ದೆಹಲಿಯಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ರಾಷ್ಟ್ರೀಯ ಸಮ್ಮೇಳನ ನಡೆಯಿತು. ಇದರಲ್ಲಿ 89 ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಮತ್ತು ಡೀನ್‌ಗಳು ಸೇರಿದಂತೆ 247 ಪ್ರತಿನಿಧಿಗಳು ಭಾಗವಹಿಸಿದ್ದರು.

ಕಾರ್ಯ ಪದ್ಧತಿ[ಬದಲಾಯಿಸಿ]

ಇದು ಐದು ಹಂತಗಳನ್ನು ಹೊಂದಿದೆ - ಸಂಶೋಧನೆ, ತರಬೇತಿ, ಮೇಲ್ವಿಚಾರಣೆ, ಪ್ರಕಟಣೆ, ಸಂಘಟನೆ.

ಹೊರಕೊಂಡಿಗಳು[ಬದಲಾಯಿಸಿ]

  1. ಸಂಘಟನೆಯ ಅಧಿಕೃತ ವೆಬ್‌ ಸೈಟ್ Archived 2020-07-21 ವೇಬ್ಯಾಕ್ ಮೆಷಿನ್ ನಲ್ಲಿ.
  2. ಉದಯವಾಣಿಯಲ್ಲಿ ಪ್ರಕಟಿತ
  3. ವಿಜಯ ಕರ್ನಾಟಕದಲ್ಲಿ ಪ್ರಕಟಿತ[ಶಾಶ್ವತವಾಗಿ ಮಡಿದ ಕೊಂಡಿ]

ಉಲ್ಲೇಖಗಳು[ಬದಲಾಯಿಸಿ]