ಭಾರತದ ರಾಷ್ಟ್ರಗೀತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ರಾಷ್ಟ್ರಗೀತೆ - ನೊಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ ಠಾಗೋರ್ ಬರೆದ ಗೀತೆ. ಅವರು ಸಂಸ್ಕೃತ ಮಿಶ್ರಿತ ಬಂಗಾಳಿಯಲ್ಲಿ ಬರೆದ ಬ್ರಹ್ಮೋ ಮಂತ್ರದ ಮೊದಲ ೫ ಪ್ಯಾರಾಗಳನ್ನೇ ನಾವೀಗ ಹಾಡುತ್ತಿರುವುದು.ಈ ಗೀತೆಯನ್ನು ಜನವರಿ ೨೪, ೧೯೫೦ರಲ್ಲಿ ಭಾರತ ಸರಕಾರವು ರಾಷ್ಟ್ರಗೀತೆ ಎಂದು ಘೋಷಿಸಿತು. ಇದಕ್ಕೆ ಸಂಗೀತ ಅಳವಡಿಸಿದ್ದು ರಾಮ್ ಸಿಂಗ್ ರಾಕೂರ್[೧]. ರಾಷ್ಟ್ರಗೀತೆಯನ್ನು ರಾಷ್ಟ್ರ ಧ್ವಜವನ್ನು ಹಾರಿಸಿದ ನಂತರ ೫೨ ಸೆಕೆಂಡುಗಳಿಗೆ ಮೀರದಂತೆ ಹಾಡಿ ಮುಗಿಸಬೇಕು. ರಾಷ್ಟ್ರಗೀತೆ ಹಾಡುವಾಗ ಎಲ್ಲರೂ ಎದ್ದು ನಿಂತು ಭಾರತ ಮಾತೆಗೆ ವಂದಿಸಬೇಕು. ರಾಷ್ಟ್ರಗೀತೆ ಹಾಡುವುದನ್ನು ಅಡ್ಡಿಪಡಿಸಿದರೆ ನಮ್ಮ ಕಾನೂನಿನಲ್ಲಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲ್ಪಡುತ್ತದೆ.

ಭಾರತದ ರಾಷ್ಟ್ರಗೀತೆ "ಜನ ಗಣ ಮನ" ಕನ್ನಡದಲ್ಲಿ ಈ ಮುಂದಿನಂತಿದೆ:

ಕನ್ನಡದಲ್ಲಿ "ಜನ ಗಣ ಮನ" ಕನ್ನಡದಲ್ಲಿ ಭಾವಾನುವಾದ
ಜನಗಣಮನ-ಅಧಿನಾಯಕ ಜಯ ಹೇ ಭಾರತಭಾಗ್ಯವಿಧಾತಾ!

ಪಂಜಾಬ ಸಿಂಧು ಗುಜರಾತ ಮರಾಠಾ ದ್ರಾವಿಡ ಉತ್ಕಲ ವಂಗ

ವಿಂಧ್ಯ ಹಿಮಾಚಲ ಯಮುನಾ ಗಂಗಾ ಉಚ್ಛಲಜಲಧಿತರಂಗ

ತವ ಶುಭ ನಾಮೇ ಜಾಗೇ, ತವ ಶುಭ ಆಶಿಷ ಮಾಗೇ,

ಗಾಹೇ ತವ ಜಯಗಾಥಾ.

ಜನಗಣಮಂಗಳದಾಯಕ ಜಯ ಹೇ ಭಾರತಭಾಗ್ಯವಿಧಾತಾ!

ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ ಜಯ ಹೇ.

ಜನ ಸಮೂಹದ ಮನಸ್ಸಿಗೆ ಒಡೆಯನಾದ ಸರ್ವೋಚ್ಚನಾಯಕನೇ

ಭಾರತದ ಅದೃಷ್ಟವನ್ನು ದಯಪಾಲಿಸುವವನೇ ನಿನಗೆ ಜಯವಾಗಲಿ!

ಪಂಜಾಬ, ಸಿಂಧು, ಗುಜರಾತ, ಮಹಾರಾಷ್ಟ್ರ

ದ್ರಾವಿಡ (ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ) ಒಡಿಶಾ, ಬಂಗಾಳ

ವಿಂದ್ಯ, ಹಿಮಾಚಲ ಪರ್ವತಗಳು ಹಾಗೇ ಗಂಗಾ-ಯಮುನೆಯಂತಹ ಜೀವನದಿಗಳು

ಶ್ರೇಷ್ಠವಾದ ಸಮುದ್ರದ ನೀರಿನ ಅಲೆಗಳು ನಿನ್ನ ಮಂಗಳಕರವಾದ ಹೆಸರನ್ನು ಕೇಳಿ ಜಾಗೃತಗೊಳ್ಳುತ್ತವೆ

ನಿನ್ನ ಮಂಗಳಕರವಾದ ಆಶೀರ್ವಚನವನ್ನು ಕೇಳಿಕೊಳ್ಳುತ್ತಾ,

ನಿನ್ನ ಗೆಲುವಿನ ಗೀತೆಯನ್ನು ಹಾಡುತ್ತಿವೆ

ಜನ ಸಮೂಹಕ್ಕೆ ಒಳ್ಳೆಯದನ್ನು ಅನುಗ್ರಹಿಸವವನೇ ನಿನಗೆ ಜಯವಾಗಲಿ

ಭಾರತದ ಭಾಗ್ಯವನ್ನು ಕರುಣಿಸುವವನೇ ನಿನಗೆ ಜಯವಾಗಲಿ!

ಜಯವಾಗಲಿ.

[೨] [೩]

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದಲ್ಲಿರುವ ವಿವರ[ಬದಲಾಯಿಸಿ]

ಭಾರತದ ರಾಷ್ಟ್ರಗೀತೆ - ಜನಗಣಮನ ಅಧಿನಾಯಕ ಜಯಹೇ ಭಾರತದ ರಾಷ್ಟ್ರಗೀತೆ. ರವೀಂದ್ರನಾಥ ಠಾಕೂರ್ ಅವರು 1911ರಲ್ಲಿ ಬಂಗಾಲಿ ಭಾಷೆಯಲ್ಲಿ ರಚಿಸಿದ ದೀರ್ಘಗೀತೆಯ ಐದುಪದ್ಯಗಳಲ್ಲಿ ಮೊದಲ ಪದ್ಯದ ಸಾಲುಗಳನ್ನು ಮಾತ್ರ ಆಯ್ದಕೊಂಡು ಈ ರಾಷ್ಟ್ರಗೀತೆಯನ್ನು ರೂಪಿಸಲಾಯಿತು. ಸ್ವತಂತ್ರ ಭಾರತದ ಸಂವಿಧಾನ ರಚನಾಸಭೆ 1950 ಜನವರಿ 24ರಂದು ಇದನ್ನು ರಾಷ್ಟ್ರಗೀತೆ ಎಂದು ಅಂಗೀಕರಿಸಿತು. ಠಾಕೂರ್ ಸಂಪಾದಕರಾಗಿದ್ದ ತತ್ತ್ವಬೋಧಿನಿ ಪತ್ರಿಕಾ ಎಂಬ ಪತ್ರಿಕೆಯಲ್ಲಿ ಇದು 1912ರಲ್ಲಿ ಮೊದಲಿಗೆ ಪ್ರಕಟವಾಗಿತ್ತು. ಪ್ರಕಟಣೆಗೆ ಮೊದಲು ಈ ಗೀತೆಯನ್ನು 27 ಡಿಸೆಂಬರ್ 1911ರಂದು ಕಲ್ಕತ್ತದಲ್ಲಿ ನೆರೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಗಿತ್ತು. ಠಾಕೂರ್ ಅವರು ಇದನ್ನು 'ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ 1919ರಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದರು. ಇದು ಭಾರತ ಇಬ್ಬಾಗವಾಗುವುದಕ್ಕೆ ಮೊದಲು ಬರೆದ ಗೀತೆಯಾದರೂ ಇದರಲ್ಲಿ ಬರುವ ರಾಷ್ಟ್ರದ ವಿವಿಧ ಪ್ರದೇಶಗಳ ಹೆಸರುಗಳನ್ನು ಬದಲಾಯಿಸಿಲ್ಲ; ಈ ಹೆಸರುಗಳು ವಿವಿಧ ಭಾರತೀಯ ಜನಾಂಗಗಳನ್ನು ಸೂಚಿಸುತ್ತವೆ. ಹಾಗಾಗಿ ಈ ಗೀತೆಯನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಿದಾಗ ಮೂಲಗೀತೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಯಥಾವತ್ತಾಗಿ ಉಳಿಸಿಕೊಳ್ಳಲಾಯಿತು. ರಾಷ್ಟ್ರಗೀತೆಗೆ ಗೌರವಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಅಗೌರವ ಸೂಚಿಸುವುದು, ಅದರ ಹಾಡುವಿಕೆಗೆ ಅಡ್ಡಿಪಡಿಸುವುದು ಶಾಸನದ ಪ್ರಕಾರ ಶಿಕ್ಷಾರ್ಹ ಅಪರಾಧ. ವೈವಿಧ್ಯದಲ್ಲಿ ಏಕತೆ ಭಾರತೀಯ ಸಂಸ್ಕ್ರತಿಯ ವೈಶಿಷ್ಟ್ಯ ಎಂಬುದಕ್ಕೆ ಈ ಗೀತೆ ಸಂಕೇತವಾಗಿದೆ. ಗೀತೆಯನ್ನು ಹಾಡಲು ಬೇಕಾಗುವ ಕಾಲಾವಧಿ ಸುಮಾರು 52 ಸೆಕೆಂಡುಗಳು.

ಉಲ್ಲೇಖ[ಬದಲಾಯಿಸಿ]

  1. https://thedarjeelingchronicle.com/special-article-capt-ram-singh-thakuri/
  2. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತದ ರಾಷ್ಟ್ರಗೀತೆ
  3. ಭಾರತದ ಸಂವಿಧಾನ