ಭಾರತದ ಮುಖ್ಯ ವಾಣಿಜ್ಯ ಬೆಳೆ - ಗೇರು ಬೀಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೇರು ಬೀಜ ಭಾರತದ ವಿಖ್ಯಾತ ವಾಣಿಜ್ಯ ಬೆಳೆಗಳಲ್ಲೊಂದಾಗಿದೆ. ಗೇರು ಬೀಜ ಬೆಳೆಯನ್ನು ಭಾರತಕ್ಕೆ ಪರಿಚಯಿಸಿದ ಕೀರ್ತಿ ಪೋರ್ಚುಗೀಸ್ ವ್ಯಾಪಾರಸ್ಥರಿಗೆ ಸಲ್ಲುತ್ತದೆ. ೭೫% ದಷ್ಟು ಉತ್ಪನ್ನಗೊಂಡ ಗೇರು ಬೀಜವನ್ನು ರಫ಼್ತು ಮಾಡಲು ಬಳಸುತ್ತಿದ್ದು, ೨೫% ದಷ್ಟನ್ನು ದೇಶದಲ್ಲೇ ಬಳಕೆ ಮಾಡಲಾಗುತ್ತದೆ. ಭಾರತದಲ್ಲಿ ಪ್ರತೀ ವರ್ಷ ೮೦,೦೦೦ ಟನ್ ಗಳಷ್ಟು ಗೇರು ಬೀಜವನ್ನು ಉತ್ಪತ್ತಿ ಮಾಡಲಾಗುತ್ತದೆ. ಇದು ಭಾರತವನ್ನು ಗೇರುಬೀಜ ಕೈಗಾರಿಕೆಯ ಮುಖ್ಯ ಕೇಂದ್ರವನ್ನಾಗಿ ಮಾಡಿದೆ. ಇದರ ಪರಿಣಾಮವಾಗಿ, ಹೆಚ್ಚು-ಕಡಿಮೆ ೨ ಲಕ್ಷ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಇದರಿಂದ ಉದ್ಯೋಗ ಪ್ರಾಪ್ತಿಯಾಗಿದೆ.

ಪ್ರಸ್ತುತವಾಗಿ ಅತೀ ಹೆಚ್ಚು ಗೇರು ಬೀಜ ಉತ್ಪಾದಿಸುವ ಮುಖ್ಯ ರಾಜ್ಯಗಳೆಂದರೆ - ಕೇರಳ, ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರ. ಹೀಗೆ ಗೇರು ಬೀಜ ವಾಣಿಜ್ಯೋದ್ಯಮ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರತ್ಯೇಕವಾಗಿ ದಕ್ಷಿಣದ ರಾಜ್ಯಗಳಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.

ಗೇರು ಬೀಜವನ್ನು ವಾಣಿಜ್ಯ ಬೆಳೆಯನ್ನಾಗಿ ಮಾರ್ಪಡಿಸುವಲ್ಲಿ ಭಾರತವು ಪ್ರಪ್ರಥಮ ಸ್ಥಾನ ಪಡೆಯತ್ತದೆ. ಈ ಕೈಗಾರಿಕೆ ಮೊತ್ತಮೊದಲಿಗೆ ಆರಂಭವಾದದ್ದು ಮಂಗಳೂರಿನಲ್ಲಿ(ಕರ್ನಾಟಕ) ಎಂದು ಹೇಳಲಾಗಿದೆ. ಆದರೆ ಕೆಲವೇ ಸಮಯದ ಬಳಿಕ ಕೇರಳದ ಕ್ವಿಲೋನಿಗೆ ಇದರ ಕೀರ್ತಿ ಹಬ್ಬಿದೆ. ಆಗಿನಿಂದ ಬೇರೆ ರಾಜ್ಯಗಳಲ್ಲೂ ಹೊಸ ಕೈಗಾರಿಕ ಕ್ಷೇತ್ರಗಳು ಆರಂಭಗೊಂಡಿವೆ. ಭಾರತದಲ್ಲಿ ವಾಣಿಜ್ಯ ಉದ್ಯಮಕ್ಕೋಸ್ಕರ ಗೇರು ಬೀಜ ಬೆಳೆಯ ರಫ಼್ತು ೭೫ ವರ್ಷಗಳ ಮೊದಲೇ ಆರಂಭವಾಗಿತ್ತು. ಪ್ರಸ್ತುತವಾಗಿ ಭಾರತ ಪ್ರಪಂಚದ ಅತೀ ದೊಡ್ಡ ಗೇರು ಬೀಜ ರಫ಼್ತು ಮಾಡುವ ದೇಶವಾಗಿ ಪರಿಣಮಿಸಿದೆ. ಈ ಕಾರಣದಿಂದಾಗಿ ಗೇರು ಬೀಜಗಳ ಗುಣಮಟ್ಟತೆ ಬಗ್ಗೆ ನಿಗಾ ವಹಿಸುವುದು ಕೂಡಾ ಅತೀ ಅಗತ್ಯವೆನಿಸಿದೆ. ಆದುದರಿಂದಲೇ 'ಕ್ಯಾಶು ಎಕ್ಸ್-ಪೊರ್ಟ್ ಪ್ರೊಮೊಶನ್ ಕೌನ್ಸಿಲ್' ೧೯೬೩ ಯಲ್ಲಿ ಒಂದು ವಿಶೇಷ ಯೋಜನೆಯನ್ನು ತಂದಿತು.

ಈ ರೀತಿ ಭಾರತದಿಂದ ಸುಮಾರು ೫೦ ರಾಷ್ಟ್ರಗಳಿಗೆ (ಮುಖ್ಯವಾಗಿ ಅಮೆರಿಕಾ ಹಾಗು ರಷ್ಯಾ) ಗೇರು ಬೀಜಗಳು ರಫ಼್ತಾಗುತ್ತಿವೆ.

ಉಲ್ಲೇಖಗಳು[ಬದಲಾಯಿಸಿ]