ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಭೈರವ ಪದ್ಮಾವತಿ ಅಮ್ಮನವರ ಬಸದಿ, ಮಂಕಿ, ಹೊನ್ನಾವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಥಳ[ಬದಲಾಯಿಸಿ]

ಶ್ರೀ ಶಾಂತಿನಾಥ ಸ್ವಾಮಿ ಬಸದಿಯು ಹಿಂದೆ ಮಾಣಿಕ್ಯ ಪುರವೆಂದು ಕರೆಯಲ್ಪಡುತ್ತಿದ್ದ ಈ ಮಂಕಿ ಗ್ರಾಮದ ಕೇಂದ್ರದಲ್ಲಿದೆ. ಇದು ಭಟ್ಕಳದಿಂದ ಹೊನ್ನಾವರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಮುಖ್ಯರಸ್ತೆಯಿಂದ ಒಂದು ಕಿ.ಮೀ. ದೂರದಲ್ಲಿದೆ. ಅಲ್ಲಿಯವರೆಗೆ ಮಣ್ಣಿನ ರಸ್ತೆಯಿದೆ. ಇಲ್ಲಿಗೆ ಹೊನ್ನಾವರದಿಂದ 11 ಕಿಲೋ ಮೀಟರ್ ದೂರ. ಇಲ್ಲಿಯ ನಾಮಫಲಕದಲ್ಲಿ ಬರೆದಿರುವಂತೆ ಇದು ಭಗವಾನ್ ಶಾಂತಿನಾಥ ಸ್ವಾಮಿ ಮತ್ತು ಭೈರವ ಪದ್ಮಾವತಿ ಅಮ್ಮನವರ ಬಸದಿ. ಸಮೀಪದಲ್ಲಿ ಒಂದು ಶಿವ ದೇವಸ್ಥಾನವಿದೆ.

ಇತಿಹಾಸ[ಬದಲಾಯಿಸಿ]

ಬನವಾಸೀ ಕದಂಬರಾಜವಂಶದ ಒಂದು ಶಾಖೆ ಯವರು ಈ ಬಸದಿಯನ್ನು ಸುಮಾರು 12ನೇ ಶತಮಾನದಲ್ಲಿ ನಿರ್ಮಿಸಿದ್ದರು ಎಂದು ಹೇಳಲಾಗುತ್ತದೆ. ಅವರ ಆಳಿಕೆಯ ಬಳಿಕ ಇದನ್ನು ಮೂಡಬಿದಿರೆಯ ಅರಸರು ಜೀರ್ಣೋದ್ಧಾರ ಮಾಡಿದ್ದರು. ತದನಂತರ ಈ ಪ್ರದೇಶವು ಸ್ವಾದಿ ಮರಕ್ಕೆ ಸೇರಿದುದರಿಂದ ಸ್ವಲ್ಪ ಸಮಯ ಮಠದ ಆಡಳಿತಕ್ಕೆ ಒಳಪಟ್ಟಿತ್ತು. ಹಿಂದೆ ಈ ಪರಿಸರದಲ್ಲಿ ಐದು ಬಸದಿಗಳಿದ್ದವು. ಅವು ಯಾವುದೆಂದರೆ ತ್ರಿಕೂಟ ಜಿನ ಚೈತ್ಯಾಲಯ, ಪಾಶ್ರ್ವನಾಥ ಸ್ವಾಮಿ ಬಸದಿ, ಶಾಂತಿನಾಥ ಸ್ವಾಮಿ ಬಸದಿ ಮತ್ತು ಬೋಲೇ ಬಸದಿ, ಇನ್ನುಳಿದ ಒಂದು ಬಸದಿಯ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ. ಇಲ್ಲಿ ಯಾವುದೇ ಆಡಳಿತ ಅಥವಾ ವ್ಯವಸ್ಥಾಪಕ ಮಂಡಳಿ ಇರುವುದಿಲ್ಲ, 1991 - 92ರಲ್ಲಿ ಬಸದಿಯ ಮೇಲ್ಯಾವಣಿಯನ್ನು ಬದಲಿಸಿ ಈಗಿನ ಹಂಚಿನ ಮಾಡನ್ನು ಮಾಡಿದ್ದಾರೆ. ಪ್ರಾಚೀನ ಕಾಲದಲ್ಲಿ ಈ ಪ್ರದೇಶದ ಹೆಂಗಸೊಬ್ಬಳು ಎಲ್ಲರನ್ನು ಸೇರಿಸಿ ಜೈನ ರಾಮಾಯಣದ ಕಥೆಯನ್ನು ಹೇಳುತ್ತಿದ್ದಳಂತೆ. ಅವಳ ನೆನಪಿಗಾಗಿ ಈ ಸ್ತಂಭವನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಹೇಳುತ್ತಾರೆ. ಆದುದರಿಂದ ಇದನ್ನು ಬಾಣಂತಿ ಕಲ್ಲು ಎಂದು ಕರೆಯುತ್ತಾರೆ. ಇದರಲ್ಲಿ ಜೈನ ರಾಮಾಯಣಕ್ಕೆ ಸಂಬಂಧಿಸಿದ ಹಲವಾರು ಘಟನೆಗಳನ್ನು ಶಿಲ್ಪ ಕಲಾಕೃತಿಗಳ ಮೂಲಕ ವಿವರಿಸಲಾಗಿದೆ. ಕಥೆ ಹಾಗೂ ಕಲೆಯ ದೃಷ್ಟಿಯಿಂದ ಇದು ಅಧ್ಯಯನೀಯವಾದುದು.[೧]

ವಿದಿವಿಧಾನ[ಬದಲಾಯಿಸಿ]

ಇಲ್ಲಿಯ ಕಾರ್ಯಕ್ರಮಗಳಲ್ಲಿ ಊರಿನ ಸಮಸ್ತರು ಸೇರಿಕೊಳ್ಳುತ್ತಾರೆ. ಹತ್ತು ಸಮಸ್ತರು ಸೇರಿ ಇಲ್ಲಿ ನವರಾತ್ರಿ, ಸಂಕ್ರಾಂತಿ, ಚಂಪಾಷಷ್ಠಿ, ಕಾರ್ತಿಕ ದೀಪೋತ್ಸವ, ನೂಲ ಶ್ರಾವಣ, ಯುಗಾದಿ ಇತ್ಯಾದಿಯನ್ನು ಆಚರಿಸುತ್ತಾರೆ. ಇಲ್ಲಿಯ ಕ್ಷೇತ್ರಪಾಲನನ್ನು ಮಣಿಭದ್ರ ಕ್ಷೇತ್ರಪಾಲ ಎಂದು ಕರೆಯುತ್ತಾರೆ. ಆತನಿಗೆ ತೆಂಗಿನಕಾಯಿಯನ್ನು ಅರ್ಪಿಸಿ ಹೂವಿನ ಪೂಜೆಯನ್ನು ಮಾಡುವುದು ಇಲ್ಲಿನ ವಿಶೇಷ ಪದ್ದತಿ, ಕುಂಬಾರರು, ಮಡಿವಾಳರು, ಕ್ಷೌರಿಕರು ಮುಂತಾದ ಸಮಾಜದವರು ಮನೆಯಲ್ಲಿ ಮದುವೆ ಆದ ತಕ್ಷಣ ಇಲ್ಲಿಯ ಸನ್ನಿಧಾನಕ್ಕೆ ಬಂದು ಪೂಜೆ ಮಾಡಿಸಿ ತಮ್ಮ ಮನೆಗೆ ಹೋಗುವ ಸಂಪ್ರದಾಯ ಇಲ್ಲಿ ರೂಡಿಯಲ್ಲಿದೆ. ಜೈನ ಸಮಾಜದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಇಲ್ಲಿ ನಡೆಸುತ್ತಾರೆ. ಇಲ್ಲಿನ ಪುರೋಹಿತರು ಯಂತ್ರ ಮಂತ್ರ ಇತ್ಯಾದಿ ವಿದ್ಯೆಗಳನ್ನು ಬಲ್ಲವರಾಗಿರುವುದರಿಂದ ಬಸದಿಯಲ್ಲಿ ಇದಕ್ಕೆ ಸಂಬಂಧಿಸಿದ ಶಾಂತಿ ಮತ್ತಿತರ ಪರಿಹಾರ ಕ್ರಿಯೆಗಳು ನಡೆಯುತ್ತವೆ.

ವಿನ್ಯಾಸ[ಬದಲಾಯಿಸಿ]

ಬಸದಿಯ ಗರ್ಭಗೃಹದಲ್ಲಿ ಶಾಂತಿನಾಥ ಸ್ವಾಮಿ ಅಲ್ಲದೆ ಶ್ರೀ ಪದ್ಮಾವತಿ ದೇವಿ, ಬ್ರಹ್ಮದೇವರು, ತೀಥರ್ಂಕರರು ಇತ್ಯಾದಿ ಜಿನಬಿಂಬಗಳಿವೆ. ಪರಿಸರದಲ್ಲಿ ಪ್ರಾಕಾರಗೋಡೆಗೆ ತಾಗಿಕೊಂಡು ಪಾರಿಜಾತ ಮತ್ತು ಇತರ ಹೂವಿನ ಗಿಡಗಳು ಇವೆ. ಚಂದ್ರ ಶಾಲೆಯನ್ನು ಯಾತ್ರಿಕರು, ಬಂದು ಹೋಗುವ ಶ್ರಾವಕರು ಹಾಗೂ ಇಲ್ಲಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಉಪಯೋಗಿಸುತ್ತಾರೆ. ಇದರ ಹೊರಗಡೆ ಇದೇ ರೀತಿಯ ಚಾವಡಿಗಳು ಇವೆ. ಒಳಗಿನ ಪ್ರಾರ್ಥನಾ ಮಂಟಪದಲ್ಲಿ ಘಂಟೆ, ಜಾಗಟೆ ಮತ್ತು ಶಂಖವನ್ನು ತೂಗು ಹಾಕಲಾಗಿದೆ. ಇನ್ನೂ ಮುಂದಕ್ಕೆ ತೀರ್ಥ ಮಂಟಪವಿದೆ. ಒಳಗಿರುವ ಶ್ರೀ ಪದ್ಮಾವತಿಯ ಬಿಂಬವು ಪೂರ್ವಕ್ಕೆ ಮುಖಮಾಡಿಕೊಂಡಿದೆ. ಕಾಲಬಳಿಯಲ್ಲಿ ಕುಕ್ಕುಟ ಸರ್ಪವಿದೆ. ಇಲ್ಲಿ ಅಮ್ಮನವರ ಪ್ರಸಾದ ನೋಡುವ ಕ್ರಮ ಇದ್ದರೂ ತುಂಬಾ ಬೇಡಿಕೆ ಮತ್ತು ಒತ್ತಾಯವಿದ್ದಾಗ ಮಾತ್ರ ಅದನ್ನು ನಡೆಸಲಾಗುತ್ತದೆ.

ಒಳವಿನ್ಯಾಸ[ಬದಲಾಯಿಸಿ]

ಗರ್ಭಗೃಹದಲ್ಲಿ ವಿರಾಜಮಾನವಾಗಿರುವ ಶ್ರೀ ಶಾಂತಿನಾಥ ಸ್ವಾಮಿಯ ಬಿಂಬವು ಸುಮಾರು 3 ಅಡಿ ಎತ್ತರವಿದೆ. ಖಡ್ಡಾಸನ ಭಂಗಿಯಲ್ಲಿದ್ದು ಸುತ್ತಲೂ ಮಕರ ತೋರಣದ ಪ್ರಭಾವಳಿಯನ್ನು ಹೊಂದಿದೆ ಇದನ್ನು ಮತ್ತು ಜಿನಬಿಂಬವನ್ನು ಪರೀಕ್ಷಿಸಿ ನೋಡಿದರೆ ಇವೆರಡೂ ಪೂರ್ವ ಹೊಯ್ಸಳ ಕಾಲದ ರಚನೆಗಳೆಂದು ಧಾರಾಳವಾಗಿ ಹೇಳಬಹುದು.

ಹೊರವಿನ್ಯಾಸ[ಬದಲಾಯಿಸಿ]

ಈ ಬಸದಿಯ ಎದುರಿನ ಪ್ರಾಂಗಣದಲ್ಲಿ ಸುಮಾರು 5 ಅಡಿ ಎತ್ತರದ ಶಿಲ್ಪಕಲಾಕೃತಿಗಳನ್ನು ಮತ್ತು ಬರವಣಿಗೆಯನ್ನು ಹೊಂದಿರುವ ನಾಲ್ಕು ಮೈಗಳ (ಚೌಕಾಕಾರದ) ಒಂದು ಶಿಲಾ ಸ್ತಂಭವನ್ನು ಕಾಣಬಹುದು.ಬಸದಿಗೆ ಮುರಕಲ್ಲಿನ ಪ್ರಾಕಾರಗೋಡೆ ಇದ್ದು, ಹೊರಗಡೆಯಲ್ಲಿ ಸುಮಾರು ಆರು ವೀರಕಲ್ಲುಗಳು ಹಾಗೂ ಹತ್ತು ಶಿಲಾಶಾಸನಗಳು ಇವೆ.

ಪೂಜಾ ವಿಧಾನ[ಬದಲಾಯಿಸಿ]

ಪ್ರತಿ ದಿನ ತ್ರಿಕಾಲಗಳಲ್ಲಿಯೂ ಪೂಜೆ ನಡೆಯುತ್ತದೆ. ಕಾರ್ತಿಕ ದೀಪೋತ್ಸವದ ದಿವಸ ವಾರ್ಷಿಕೋತ್ಸವವು ನಡೆಯುತ್ತದೆ. ರಥೋತ್ಸವವೂ ನಡೆಯುತ್ತದೆ. ಇಲ್ಲಿಯ ಇನ್ನೊಂದು ಪ್ರಧಾನ ಶಕ್ತಿ ಎಂದರೆ ಶ್ರೀ ಭೈರವ ಪದ್ಮಾವತಿ ಅಮ್ಮನವರು. ಜೈನ ಹಾಗೂ ಜೈನೇತರ ಸಮಾಜದವರು ಅಮ್ಮನವರಿಗೆ ಬಹಳ ಭಯ, ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ವಿಶೇಷ ಹರಕೆಗಳನ್ನು ಹೇಳಿ ತಮ್ಮ ಅಭೀಷ್ಟಗಳನ್ನು ಈಡೇರಿಸಿಕೊಂಡು ಬಂದ ಸಾಕಷ್ಟು ಉದಾಹರಣೆಗಳಿವೆ. ಸಾಮಾನ್ಯವಾಗಿ ದೇವಿಗೆ ದಿನವೂ ಹರಕೆಯನ್ನು ಸಮರ್ಪಿಸುವ ಕಾರ್ಯಕ್ರಮ ಇರುತ್ತದೆ.

ಉಲ್ಲೇಖ[ಬದಲಾಯಿಸಿ]

  1. ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳು. ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೮೪.