ಬಿಂಬಿಸಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿಂಬಿಸಾರನು ಬುದ್ಧನನ್ನು ಸ್ವಾಗತಿಸುತ್ತಿದ್ದಾನೆ

ಬಿಂಬಿಸಾರ (ಸು. ಕ್ರಿ.ಪೂ. 558 - ಸು. ಕ್ರಿ.ಪೂ. 491)[೧][೨] ಅಥವಾ ಜೈನ ಧರ್ಮದಲ್ಲಿ ರಾಜ ಶ್ರೇಣಿಕ ಮಗಧದ ಒಬ್ಬ ರಾಜನಾಗಿದ್ದನು ಮತ್ತು ಹರ್ಯಂಕ ರಾಜವಂಶಕ್ಕೆ ಸೇರಿದ್ದನು. ಇವನು ಭಟ್ಟೀಯನ ಮಗನಾಗಿದ್ದನು. ತನ್ನ ರಾಜ್ಯದ ವಿಸ್ತಾರ, ವಿಶೇಷವಾಗಿ ಪೂರ್ವದಲ್ಲಿ ಅಂಗ ರಾಜ್ಯದ ಸ್ವಾಧೀನಪಡಿಸಿಕೊಳ್ಳುವಿಕೆಯು ಮೌರ್ಯ ಸಾಮ್ರಾಜ್ಯದ ನಂತರದ ವಿಸ್ತರಣೆಗೆ ಅಡಿಪಾಯ ಹಾಕಿಕೊಟ್ಟಿತೆಂದು ಪರಿಗಣಿಸಲಾಗಿದೆ.

ಇವನು ತನ್ನ ಸಾಂಸ್ಕೃತಿಕ ಸಾಧನೆಗಳಿಗಾಗಿ ಪರಿಚಿತನಾಗಿದ್ದಾನೆ ಮತ್ತು ಬುದ್ಧನ ಮುಖ್ಯ ಮಿತ್ರ ಮತ್ತು ಸಂರಕ್ಷಕನಾಗಿದ್ದನು. ಬಿಂಬಿಸಾರನು ಬೌದ್ಧ ಬರಹಗಳಲ್ಲಿ ಪ್ರಸಿದ್ಧವಾದ ರಾಜಗೃಹ ನಗರವನ್ನು ನಿರ್ಮಿಸಿದನು. ಇವನ ನಂತರ ಇವನ ಮಗ ಅಜಾತಶತ್ರು ಉತ್ತರಾಧಿಕಾರಿಯಾದನು.

ಇವನು ಅಂಗ ರಾಜ್ಯದ ವಿರುದ್ಧದ ಸೇನಾ ಕಾರ್ಯಾಚರಣೆಯ ನೇತೃತ್ವ ವಹಿಸಿದನು, ಬಹುಶಃ ಅದರ ರಾಜ ಬ್ರಹ್ಮದತ್ತನ ಕೈಯಲ್ಲಿ ತನ್ನ ತಂದೆಯ ಮುಂಚಿನ ಸೋಲಿನ ಸೇಡು ತೀರಿಸಿಕೊಳ್ಳಲು. ಕಾರ್ಯಾಚರಣೆಯು ಯಶಸ್ವಿಯಾಯಿತು, ಅಂಗವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು, ಮತ್ತು ರಾಜಕುಮಾರ ಕುನಿಕನನ್ನು (ಅಜಾತಶತ್ರು) ಚಂಪಾದ ರಾಜ್ಯಪಾಲನಾಗಿ ನೇಮಿಸಲಾಯಿತು.

ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳಲು ಬಿಂಬಿಸಾರನು ವಿವಾಹ ಮೈತ್ರಿಗಳನ್ನು ಬಳಸಿದನು. ಕೋಸಲದ ರಾಜನಾದ ಮಹಾ ಕೋಸಲನ ಮಗಳು ಮತ್ತು ಪಸೇನದಿಯ ಸೋದರಿ ಕೋಸಲಾ ದೇವಿ ಇವನ ಮೊದಲ ಹೆಂಡತಿಯಾಗಿದ್ದಳು. ವರದಕ್ಷಿಣೆಯಾಗಿ ಆಗ ಕೇವಲ ಒಂದು ಹಳ್ಳಿಯಾಗಿದ್ದ ಕಾಶಿ ಸಿಕ್ಕಿತು. ಈ ವಿವಾಹವು ಮಗಧ ಮತ್ತು ಕೋಸಲದ ನಡುವಿನ ಹಗೆತನವನ್ನೂ ಕೊನೆಗೊಳಿಸಿತು ಮತ್ತು ಇತರ ರಾಜ್ಯಗಳನ್ನು ನಿಭಾಯಿಸಲು ಇವನಿಗೆ ಸ್ವಾತಂತ್ರ್ಯ ನೀಡಿತು. ಇವನ ಎರಡನೇ ಹೆಂಡತಿ ಚೆಲ್ಲನಾ ವೈಶಾಲಿಯ ಒಬ್ಬ ಲಿಚ್ಛವಿ ರಾಜಕುಮಾರಿಯಾಗಿದ್ದಳು ಮತ್ತು ರಾಜ ಚೇತಕನ ಮಗಳಾಗಿದ್ದಳು. ಇವನ ಮೂರನೇ ಹೆಂಡತಿ ಕ್ಷೇಮಾ ಪಂಜಾಬ್‍ನ ಮದ್ರ ಕುಲದ ಮುಖಂಡನ ಮಗಳಾಗಿದ್ದಳು. ಈ ವಿವಾಹ ಮೈತ್ರಿಗಳು ಪಶ್ಚಿಮಕ್ಕೆ ಮತ್ತು ಪೂರ್ವಕ್ಕೆ ಮಗಧ ಸಾಮ್ರಾಜ್ಯದ ವಿಸ್ತರಣೆಗೆ ದಾರಿ ಮಾಡಿಕೊಟ್ಟವು.

ಬಿಂಬಿಸಾರನು ತನ್ನ ಅರಮನೆಯ ಸ್ತ್ರೀಯರಿಗೆ ಸಂಜೆ ಬುದ್ಧನನ್ನು ಅವನ ವಿಹಾರದಲ್ಲಿ ಭೇಟಿಮಾಡಲು ಅವಕಾಶ ಕೊಟ್ಟಿದ್ದನಾದರೂ; ಸ್ತ್ರೀಯರಿಗೆ ಯಾವುದೇ ಸಮಯದಲ್ಲಿ ಬುದ್ಧನನ್ನು ಪೂಜಿಸುವುದಕ್ಕಾಗಿ ಬಳಸಲು ಕೂದಲು-ಮತ್ತು-ಉಗುರು ಸ್ತೂಪ ಬೇಕಿತ್ತು. ಬಿಂಬಿಸಾರನು ಬುದ್ಧನೊಂದಿಗೆ ಮಾತನಾಡಿದಾಗ ಬುದ್ಧನು ಅವರ ವಿನಂತಿಗೆ ಸಮ್ಮತಿಸಿದನು.

ಉಲ್ಲೇಖಗಳು[ಬದಲಾಯಿಸಿ]

  1. Rawlinson, Hugh George. (1950) A Concise History of the Indian People, Oxford University Press. p. 46.
  2. Muller, F. Max. (2001) The Dhammapada And Sutta-nipata, Routledge (UK). p. xlvii. ISBN 0-7007-1548-7.