ಪ್ರಸನ್ನ ಸಂತೇಕಡೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಸನ್ನ ಸಂತೇಕಡೂರು

ಡಾ. ಪ್ರಸನ್ನ ಸಂತೇಕಡೂರು ಸಮಕಾಲೀನ ಕನ್ನಡ ಕಥೆಗಾರ ಹಾಗೂ ವಿಜ್ಞಾನಿ. ಇವರು ಮೂಲತಃ ಶಿವಮೊಗ್ಗ ಸಮೀಪದ ಸಂತೇಕಡೂರಿನವರು. ಇವರ ಸು ಕಾದಂಬರಿ ಸಮಕಾಲೀನ ಕನ್ನಡ ಸಾಹಿತ್ಯದಲ್ಲಿ ಒಂದು ಅನನ್ಯ ಕೃತಿ. ಅಪಾರವಾದ ವಿಮರ್ಶೆಗೊಳಪಟ್ಟ ಈ ಕೃತಿ ಅಷ್ಟೇ ಜನಪ್ರಿಯತೆಯನ್ನು ಗಳಿಸಿದೆ. ಇದರಲ್ಲಿ ವಿಜ್ಞಾನ, ತತ್ವಶಾಸ್ತ್ರ, ರಾಜಕೀಯ, ಸಾಮಾಜಿಕ ಆಯಾಮಗಳೆಲ್ಲಾ ಸೇರಿಕೊಂಡಿವೆ. ಜೊತೆಗೆ ಮಾಯಾವಾಸ್ತವತೆ, ಅಸ್ತಿತ್ವವಾದ, ಪ್ರಜ್ಞಾಪ್ರವಾಹ ಪ್ರಕ್ರಿಯೆಯನ್ನು ಒಳಗೊಂಡಿದೆ.  ಇವರು "ಮಾಯಾಪಂಜರ" ಎಂಬ ಕಥಾಸಂಕಲನ ಮತ್ತು "ಎತ್ತಣ ಅಲ್ಲಮ ಎತ್ತಣ ರಮಣ?" ಎಂಬ ಅಲ್ಲಮ ಪ್ರಭು ಮತ್ತು ರಮಣ ಮಹರ್ಷಿಗಳ ಅಧ್ಯಾತ್ಮ ಮತ್ತು ತತ್ವಶಾಸ್ತ್ರದ ಜೀವನವನ್ನ ಕುರಿತು ಒಂದು ಕೃತಿಯನ್ನ ಕೂಡ ಬರೆದಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದವರು ಆಯೋಜಿಸಿದ್ದ ಕಥಾ ಸ್ಪರ್ಧೆಯಲ್ಲಿ(ಸ್ವರ್ಣಸೇತು) ಇವರ "ಹೂಗುಚ್ಛ" ಕತೆಗೆ ಮೊದಲ ಬಹುಮಾನ ಬಂದಿದೆ. ಈ ಕತೆ ಇವರ ಮಾಯಾಪಂಜರ ಕಥಾಸಂಕಲನದಲ್ಲಿ "ಒಲವೇ ಜೀವನ ಸಾಕ್ಷಾತ್ಕಾರ" ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ. ಇವರು ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಜೈವಿಕ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಯನ್ನು ಪಡೆದು ಸುಮಾರು ಹತ್ತು ವರ್ಷಗಳ ಕಾಲ ಅಮೇರಿಕಾದಲ್ಲಿ ನೆಲೆಸಿದ್ದರು. ಮೊದಲು ವರ್ಜಿನೀಯಾ ಸಂಸ್ಥಾನದ ರಿಚ್ಮಂಡ್ ನಗರದ ವರ್ಜಿನೀಯಾ ಕಾಮನ್ ವೆಲ್ತ್ ವಿಶ್ವವಿದ್ಯಾನಿಲಯದಲ್ಲಿ ಪೋಸ್ಟ್ ಡಾಕ್ಟೋರಲ್ ಫೆಲೋ ಆಗಿ ನಂತರ ಅಲ್ಲಿಯೇ  ಹಂಟರ್ ಹೊಲ್ಮ್ ಮ್ಯಾಕ್ವಾಯಿರ್ ಸಂಶೋಧನಾ ಕೇಂದ್ರ ಮತ್ತು ವರ್ಜಿನೀಯಾ ಕಾಮನ್ ವೆಲ್ತ್ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು. ಇತ್ತೀಚೆಗೆ ಇವರು ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯಿಂದ ವಿದೇಶಗಳಲ್ಲಿರುವ ಭಾರತೀಯ ಪ್ರತಿಭಾವಂತ ವಿಜ್ಞಾನಿಗಳಿಗೆ ಕೊಡಲ್ಪಡುವ ಹೆಸರಾಂತ ರಾಮಲಿಂಗಸ್ವಾಮಿ ಫೆಲೋಶಿಪನ್ನು ಪಡೆದು ಮಾತೃಭೂಮಿಗೆ ಹಿಂತಿರುಗಿ ತಮ್ಮ ಸಂಶೋಧನೆಯನ್ನ ಮೈಸೂರಿನ ಜೆ.ಎಸ್.ಎಸ್ ಉನ್ನತ ಶಿಕ್ಷಣ ಸಂಸ್ಥೆಯ ವೈದ್ಯಕೀಯ ಮಹಾವಿದ್ಯಾಲಯದ ಸೆಂಟರ್ ಆಫ್ ಎಕ್ಸೆಲೆನ್ಸ್ ಇನ್ ಮಾಲಿಕ್ಯುಲರ್ ಬಯಾಲಜಿ ಅಂಡ್ ರಿಜೆನೆರೇಟಿವ್ ಮೆಡಿಸಿನ್ (Center of Excellence in Molecular Biology and Regenerative Medicine (CEMR)) ಮತ್ತು ಜೀವರಸಾಯನ ಶಾಸ್ತ್ರ ವಿಭಾಗದಲ್ಲಿ ಸಹ  ಪ್ರಾಧ್ಯಾಪಕರಾಗಿ ಮುಂದುವರೆಸಿದ್ದಾರೆ.

ಕಳೆದ ಹದಿನೈದು ವರ್ಷಗಳಿಂದ ಕ್ಯಾನ್ಸರ್ ಅದರಲ್ಲೂ ಲಿವರ್ ಕ್ಯಾನ್ಸರಿಗೆ ಸಂಬಂಧ ಪಟ್ಟ ಹಲವಾರು ಮಹತ್ತರವಾದ ಲೇಖನಗಳನ್ನ ಪ್ರಕಟಿಸಿ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಕ್ಯಾನ್ಸರ್ ವಿಜ್ಞಾನಿಗಳ ಒಕ್ಕೂಟದಿಂದ ಯುವ ವಿಜ್ಞಾನಿ ಪ್ರಶಸ್ತಿ, ಅಮೆರಿಕಾದ ಕ್ಯಾನ್ಸರ್ ಅಸೋಸಿಯೇಷನಿಂದ ಸ್ಕಾಲರ್ ಇನ್ ಟ್ರೈನಿಂಗ್ ಪ್ರಶಸ್ತಿ, ಮ್ಯಾಸ್ಸಿ ಕ್ಯಾನ್ಸರ್ ಸೆಂಟರಿನಿಂದ ಎಕ್ಸೆಲೆನ್ಸ್ ಇನ್ ಕ್ಯಾನ್ಸರ್ ರಿಸರ್ಚ್ ಅವಾರ್ಡ್ ಪಡೆದಿರುತ್ತಾರೆ.

ಕೃತಿಗಳು

1. ಮಾಯಾಪಂಜರ (ಕಥಾಸಂಕಲನ)

2. ಎತ್ತಣ ಅಲ್ಲಮ ಎತ್ತಣ ರಮಣ?

3. ಸು (ಕಾದಂಬರಿ)


ಉಲ್ಲೇಖಗಳು

1) K B Ganapathy ಪ್ರಸನ್ನ ಸಂತೇಕಡೂರು (June 24th 2019). "ಎತ್ತಣ ಅಲ್ಲಮ ಎತ್ತಣ ರಮಣ?". ಪ್ರಸನ್ನ ಸಂತೇಕಡೂರು. Mysore, India. Mysore Mithra and Star Of Mysore. p. 3. Retrieved 11 ಜುಲೈ 2019.

2) ಪ್ರಜಾವಾಣಿ (June 24 2019). "ಪ್ರಸನ್ನಸಂತೇಕಡೂರು ಅವರ ಮಾಯಾಪಂಜರ". ಮಾಯಾಪಂಜರ. Bangalore. Deccan Herald and Prajaavani. pp. 4–4.

3) ವಿಜಯವಾಣಿ ಜೂನ್ ೨೧, ೨೦೧೯. ಶಿವಮೊಗ್ಗ ಆವೃತ್ತಿ