ಪುಷ್ಪದಂತ ಸ್ವಾಮಿ ಬಸದಿ, ಬಿಜಿಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುಷ್ಪದಂತ ಸ್ವಾಮಿ ಬಸದಿ, ಬಿಜಿಲ

ಸ್ಥಳ[ಬದಲಾಯಿಸಿ]

ಶ್ರೀ ಪುಷ್ಪದಂತ ಬಸದಿಯು ದಕ್ಷಿಣ ಕನ್ನಡ ಜಿಲ್ಲೆಯ ಬೆಳತಂಗಡಿ ತಾಲೂಕಿನ ಬಿಜಿಲ ಗ್ರಾಮದಲ್ಲಿದೆ.

ಮಾರ್ಗ[ಬದಲಾಯಿಸಿ]

ಈ ಬಸದಿಗೆ ಬೆಳ್ತಂಗಡಿಯಿಂದ ಮಡಂತ್ಯಾರಿಗ, ಪಾಂಡವರಕಲ್ಲು ಮಾರ್ಗದ ಮೂಲಕ ಸಾಗಬೇಕು. ಬಿಜಿಲ ಎಂಬ ಊರಿನ ಅಡಿಕೆ ತೋಟ ಮತ್ತು ವನ ಪ್ರದೇಶ ಮಧ್ಯದಲ್ಲಿ ಬಸಿದೆ ಇದೆ. ಬೆಳ್ತಂಗಡಿಯಿಂದ ಸುಮಾರು ೩೦ ಕಿಲೋಮೀಟರ್ ದೂರದಲ್ಲಿದೆ.

ಒಳಾಂಗಣ ಶಿಲಾನ್ಯಾಸ[ಬದಲಾಯಿಸಿ]

ಬಿಜಿಲದ ಈ ಬಸದಿಯಲ್ಲಿ ಪೂಜೆಗೊಳ್ಳುವ ತೀರ್ಥಂಕರರು ಒಂಭತ್ತನೇ ತೀರ್ಥಂಕರರಾದ ಪುಷ್ಪದಂತ ಸ್ವಾಮೀಜಿಯವರು. ಈ ತೀರ್ಥಂಕರರ ಮೂರ್ತಿಯು ಶಿಲೆಯದ್ದಾಗಿದ್ದು ಪ್ರಭಾವಲಯವು ಅರ್ಧ ವೃತ್ತಾಕಾರದಲ್ಲಿದೆ. ತೀರ್ಥಂಕರರ ಮೂರ್ತಿಯು ಪದ್ಮಾಸನ ಭಂಗಿಯಲ್ಲಿದೆ. ಸ್ವಾಮಿಯ ಎಡಬದಿಯಲ್ಲಿ ಅಜಿತ ಯಕ್ಷ ಬಲಬದಿಯಲ್ಲಿ ಮಹಾಕಾಳಿ ಯಕ್ಷಿ ಇದ್ದಾರೆ. ಮೂರ್ತಿಯ ಕೆಳಗೆ ಮಕರ ಲಾಂಛನವಿದೆ. .ಈ ಬಸದಿಯು ಸುಮಾರು ಕ್ರಿ.ಶ ೧೭೪೦ರಲ್ಲಿ ಇತ್ತೆಂದು ನಮಗೆ ಬಸದಿ ಪ್ರಾಂಗಣದ ಉತ್ತರ ದಿಕ್ಕಿನ ಬಾಗಿಲಿನ ಮೇಲೆ ಬರೆದಿರುವ ಶಾಸನದಿಂದ ತಿಳಿದುಬರುತ್ತದೆ.ಬಸದಿಯ ಮೂಲ ನಾಯಕ ತೀರ್ಥಂಕರರ ಚಾಮರ ಮುಕ್ಕೊಡೆ, ಪುಷ್ಪವೃಷ್ಟಿ ದಿವ್ಯ ಧ್ವನಿ ಮುಂತಾದ ಅಷ್ಟಮಹಾಪ್ರಾತಿಹಾರ್ಯಗಳನ್ನು ತೋರಿಸಲಾಗಿದೆ. ಬಸದಿಯ ಗಂಧಕುಟಿಯಲ್ಲಿ ಭಗವಾನ್ ಬಾಹುಬಲಿ, ಯಕ್ಷ ಮತ್ತು ೨೪ನೇ ತೀರ್ಥಂಕರ ಶ್ರೀ ಮಹಾವೀರ ಸ್ವಾಮಿ ಹಾಗೂ ಬೇರೆ ಬೇರೆ ಸಣ್ಣ ಮೂರ್ತಿಗಳು ಇವೆ. ಬಸದಿಯಲ್ಲಿ ಬ್ರಹ್ಮ ದೇವರ ಮೂರ್ತಿಯಿದೆ. ಈ ಬ್ರಹ್ಮ ದೇವರ ಮೂರ್ತಿಯು ಕುದುರೆಯ ಮೇಲೆ ಕುಳಿತುಕೊಂಡಿರುವ ಭಂಗಿಯಲ್ಲಿದೆ. ಇಲ್ಲಿಯ ಗೋಡೆಗಳ ಮೇಲೆ ಮತ್ತು ಹೊರಗೆ ದ್ವಾರಪಾಲಕರ ಚಿತ್ರಗಳಿವೆ. ಘಂಟಾಮಂಟಪದ ಬಾಗಿಲ ಮೇಲೆ ದ್ವಾರಬಂಧದಲ್ಲಿ ಗಂಡಭೇರುಂಡ ಪಕ್ಷಿಯ ಚಿತ್ರವಿದೆ. ಅದರ ಕೆಳಗೆ ಪರ್ಯಂಕಾಸನದಲ್ಲಿ ಕುಳಿತಿರುವ ಜಿನೇಶ್ವರರ ಶಿಲ್ಪ ಹಾಗೂ ಬಸದಿಯ ಎದುರಿಗೆ ಗೋಪುರವಿದೆ. ಇಲ್ಲಿಯ ಕಂಬಗಳು ಶಿಲೆಯದ್ದಾಗಿದ್ದು, ಇಲ್ಲಿ ಈ ಬಸದಿಯ ಗೋಪುರದ ದಕ್ಷಿಣ ದಿಕ್ಕಿನಲ್ಲಿ ಪಂಜುರ್ಲಿ ದೈವದ ಕೋಣೆ ಇದೆ.ಘಂಟಾಮಂಟಪವಿದೆ ಮತ್ತು ಪಾರ್ಥನಾ ಮಂಟಪವಿದೆ. ಗರ್ಭಗೃಹದ ಮೇಲೆ ಮೇಗಿನ ನೆಲೆಯಿದೆ. ಗರ್ಭಗೃಹದ ಸುತ್ತಲೂ ಅಂಗಳ ಇದ್ದು ಕ್ಷೇತ್ರ ಪಾಲನ ಸನ್ನಿಧಾನವಿದೆ. ಅದರ ಪಕ್ಕ ಗುಂಡುಕಲ್ಲು ಮತ್ತು ತ್ರಿಶೂಲಗಳಿವೆ. ಬಲಿ ಕಲ್ಲುಗಳು ಇವೆ ದಶದಿಕ್ಕು ಪಾಲಕರ ಕಲ್ಲುಗಳಿವೆ. ಉತ್ತರ ದಿಕ್ಕಿನ ಬಾಗಿಲ ದಾರಂದದ ಮೇಲಿನ ಬರವಣಿಗೆ ಹಾಗೂ ಎದುರಿಗಿರುವ ಗಂಡಬೇರುಂಡ ಕೃತಿಯಿಂದಾಗಿ ಈ ಬಸದಿಯು ಕಿ.ಶ ೧೭೬೩ ಕ್ಕಿಂತ ಮೊದಲು ನಿರ್ಮಾಣವಾಗಿರಬೇಕು ಎಂದು ಹೇಳಬಹುದು.[೧]

ಪೂಜಾ ವಿಧಾನ[ಬದಲಾಯಿಸಿ]

ದಿನಕ್ಕೆ ಎರಡು ಬಾರಿ ಅಂದರೆ ಬೆಳಗ್ಗೆ ಮತ್ತು ಸಂಜೆ ಅಭಿಷೇಕ ಪೂಜೆಗಳು ನಡೆಯುತ್ತದೆ. ಹೆಚ್ಚಿನವು ಗಂಧಕುಟಿಯಲ್ಲಿವೆ. ಅವುಗಳ ಮೇಲೆ ಲಾಂಛನ. ಇಲ್ಲಿ ಈ ಮೂರ್ತಿಗಳ ಪೈಕಿ ತೀರ್ಥಂಕರರ ಮೂರ್ತಿಗೆ ಅಭಿಷೇಕ ಮಾಡಲಾಗುತ್ತದೆ. ಗಂಧಕುಟಿಯು ತುಂಬ ಶೋಭಾಯಮಾನವಾಗಿದೆ.ಶ್ರೀ ಪುಷ್ಪದಂತ ಸ್ವಾಮಿಯವರಿಗೆ ಜಲ, ನಾರಿಕೇಳ, ಕ್ಷೀರ, ಗಂಧಗಳೆಂಬ ಪವಿತ್ರ ತೀರ್ಥಗಳಿಂದ ಅಭಿಷೇಕವನ್ನು ಮಾಡಲಾಗುತ್ತದೆ. ಈ ಬಸದಿಯಲ್ಲಿ ಪದ್ಮಾವತಿ ಅಮ್ಮನವರ ಶಿಲಾಮೂರ್ತಿ ಇದ್ದು ಅದನ್ನು ದೇವಕೋಷ್ಠದಲ್ಲಿ ಇಡಲಾಗಿದೆ. ಇದು ಉತ್ತರ ದಿಕ್ಕಿಗೆ ಮುಖ ಮಾಡಿಕೊಂಡಿದೆ. ಈ ಮೂರ್ತಿಗೆ ಸೀರೆ ಉಡಿಸಿ ಬಳೆ ಇತ್ಯಾದಿಗಳನ್ನು ಹಾಕಲಾಗಿದೆ. ಇಲ್ಲಿ ಶುಕ್ರವಾರ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ. ಈ ಸಮಯದಲ್ಲಿ ಚಕ್ಕುಲಿ, ಅಪ್ಪ ಮುಂತಾದ ವಸ್ತುಗಳನ್ನು ಅಮ್ಮನವರಿಗೆ ಸಮರ್ಪಿಸಲಾಗುತ್ತದೆ. ಆ ಸಮಯದಲ್ಲಿ ಹೂವು ಹಾಕಿ ನೋಡುವ ಕ್ರಮ ಇದೆ. ಪದ್ಮಾವತಿ ದೇವಿಗೆ ಕುಂಕುಮ ಅರ್ಚನೆ, ಹೂವಿನ ಪೂಜೆ, ಮತ್ತಿತರ ಪೂಜೆಗಳು ಹರಕೆಯಾಗಿ ಮಾಡಲ್ಪಡುತ್ತದೆ.

ಉಲ್ಲೇಖ[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್‌. p. ೨೩೨-೨೩೪.