ಪಂಚಭೇದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಂಚಭೇದ ಎಂಬುದು ಮಧ್ವಾಚಾರ್ಯ ಸಂಸ್ಥಾಪಿಸಿದ ದರ್ಶನವಾದ ದ್ವೈತಮತದ ಅಡಿಗಟ್ಟಾಗಿದ್ದು ತತ್ತ್ವಮೀಮಾಂಸೆಯಲ್ಲಿನ ವರ್ಗಗಳ ನಡುವಿನ ವ್ಯತ್ಯಾಸಗಳ ವ್ಯವಸ್ಥೆಯನ್ನು ಸಂಕೇತಿಸುತ್ತದೆ. ಸಂಸ್ಕೃತ ವ್ಯುತ್ಪತ್ತಿಯ ಈ ಶಬ್ದವು ಐದು ವ್ಯತ್ಯಾಸಗಳು ಎಂಬುದನ್ನು ಅಕ್ಷರಶಃ ಸೂಚಿಸುತ್ತದೆ.

ಪಂಚಭೇದ ಸಿದ್ಧಾಂತದ ಪ್ರಕಾರ ಅಸ್ತಿತ್ವದ ಮೂರು ಮೂಲಭೂತ ವರ್ಗಗಳಿವೆ. ಇವುಗಳೇನೆಂದರೆ ಪರಮಾತ್ಮವು, ಜೀವಾತ್ಮಗಳು, ಮತ್ತು ವಸ್ತುಗಳು. ತಮ್ಮ ದಾರ್ಶನಿಕ ಪರಿಭಾಷೆಯಲ್ಲಿ ಮಧ್ವಾಚಾರ್ಯರು ಭೌತಿಕ ವಸ್ತುಗಳ ವರ್ಗವನ್ನು ಜಡವೆಂದು ಹೆಸರಿಸಿದರು. ಈ ಮೂರು ವರ್ಗಗಳ ನಡುವೆ ನಿತ್ಯ ಮತ್ತು ಅಳಿಸಲಾಗದ ವಿಭಜನೆಯಿದೆಯೆಂದು ಮಧ್ವಾಚಾರ್ಯರು ಪ್ರತಿಪಾದಿಸಿದರು. ಇದಲ್ಲದೆ ಒಂದು ಜೀವಾತ್ಮವು ಮತ್ತೊಂದರಿಂದ ಪ್ರತ್ಯೇಕವಾಗಿದೆಯೆಂದು ಮತ್ತು ಒಂದು ವಸ್ತು ಮತ್ತೊಂದರಿಂದ ಪ್ರತ್ಯೇಕವಾಗಿದೆಯೆಂದು ವಾದಿಸಿದರು. ಹಾಗಾಗಿ ಪಂಚಭೇದ ಸಿದ್ಧಾಂತವು ಒಳಗೊಳ್ಳುವ ಐದು ವ್ಯತ್ಯಾಸಗಳೇನೆಂದರೆ:

  1. ಪರಮಾತ್ಮಜೀವ ಭೇದ
  2. ಪರಮಾತ್ಮಜಡ ಭೇದ
  3. ಜೀವಜಡ ಭೇದ
  4. ಜೀವಜೀವ ಭೇದ
  5. ಜಡಜಡ ಭೇದ

ಶಂಕರಾಚಾರ್ಯ ಪುಷ್ಟೀಕರಿಸಿದ ಅದ್ವೈತಮತಕ್ಕೆ ವಿರುದ್ಧವಾಗಿ ಇಂತಹ ವ್ಯತ್ಯಾಸಗಳು ಇಂದ್ರಿಯಗಳಿಗೆ ಪ್ರತ್ಯಕ್ಷವಾಗಿವೆಯಲ್ಲದೆ ನಿತ್ಯ ಮತ್ತು ಸಂಪೂರ್ಣವಾಗಿ ವಾಸ್ತವಿಕವಾಗಿವೆ. ಹಾಗಾಗಿ, ದ್ವೈತಮತದ ಪ್ರಕಾರ, ಪಂಚಭೇದವಿರುವುದರಿಂದ ಅದ್ವೈತಮತ ಭೋದಿಸುವಂತೆ ಬ್ರಹ್ಮದಲ್ಲಿ ಜೀವಾತ್ಮ ಲೀನವಾಗುವುದು ಅಸಂಭವ.

"https://kn.wikipedia.org/w/index.php?title=ಪಂಚಭೇದ&oldid=929226" ಇಂದ ಪಡೆಯಲ್ಪಟ್ಟಿದೆ