ತಾತ್ಯಾ ಟೋಪೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಾತ್ಯಾ ಟೋಪೆ
ತಾತ್ಯಾ ಟೋಪೆ 1859ರಲ್ಲಿ ಸೆರೆ ಸಿಕ್ಕಾಗ
ಜನನ
ರಾಮಚಂದ್ರ ಪಾಂಡುರಂಗ ಟೋಪೆ

೧೮೧೪
ಯೆವೋಲಾ, ನಾಸಿಕ್
ಮರಣಏಪ್ರಿಲ್ ೧೮, ೧೮೫೯
ಶಿವಪುರಿ
ಇತರೆ ಹೆಸರುಗಳುತಾಂತ್ಯಾ ಟೋಪೆ
ಚಳುವಳಿಭಾರತದ ಸ್ವಾತಂತ್ರ್ಯ ಸಂಗ್ರಾಮ೧೮೫೭ (ಸಿಪಾಯಿ ದಂಗೆಯಲ್ಲ)

ರಾಮಚಂದ್ರ ಪಾಂಡುರಂಗ ಟೋಪೆ (೧೮೧೪ಏಪ್ರಿಲ್ ೧೮, ೧೮೫೯) ತಾತ್ಯಾ ಟೋಪೆ ಎಂಬ ಹೆಸರಿನಿಂದ ಪ್ರಖ್ಯಾತರಾಗಿದ್ದು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ ಸೇನೆಯ ವಿರುದ್ಧ ಹೋರಾಡಿದ ಮಹಾನ್ ಸೇನಾನಿ.

ಪ್ರಾರಂಭಿಕ ಜೀವನ[ಬದಲಾಯಿಸಿ]

ತಾತ್ಯಾ ಟೋಪೆ ಅವರು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಯೆವೋಲಾ ಗ್ರಾಮದಲ್ಲಿ ೧೮೧೪ರ ವರ್ಷದಲ್ಲಿ ಜನಿಸಿದರು. ಅವರ ತಂದೆ ಪಾಂಡುರಂಗ ರಾವ್ ಜವಳೇಕರ್ ಮತ್ತು ತಾಯಿ ರುಕ್ಮಾಬಾಯಿ.

ತಾತ್ಯಾ ಟೋಪೆ ಪ್ರಾರಂಭದಲ್ಲಿ ಬಿಥುರ್ ಪ್ರಾಂತ್ಯದ ನಾನಾ ಸಾಹೇಬನ ಸೇನಾನಿಯಾಗಿದ್ದರು. ಕಾಲಕ್ರಮೇಣದಲ್ಲಿ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಅವರು ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರ ನೆರವಿಗೆ ಬಂದು ಹೋರಾಡಿದರು.

ಮಹಾನ್ ಸಂಘಟನಾ ಚತುರ[ಬದಲಾಯಿಸಿ]

ಸಿಪಾಯಿ ದಂಗೆ ಎಂದು ಬಣ್ಣಿತವಾದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾನ್ಪುರ, ಕಲ್ಪಿ, ಜಾನ್ಸಿಗಳಲ್ಲಿ ಯುದ್ಧ ಸಂಘಟನೆಗಳನ್ನು ನಡೆಸಿದ ತಾತ್ಯಾ ಟೋಪೆ ಬ್ರಿಟಿಷ್ ಸೇನೆಯನ್ನು ಮಣ್ಣು ಮುಕ್ಕುವಂತೆ ಮಾಡಿದ್ದರು.

ಈ ಪ್ರದೇಶಗಳನ್ನು ಬ್ರಿಟಿಷ್ ಸೇನೆ ಪುನಃ ವಶಪಡಿಸಿಕೊಂಡಿತಾದರೂ, ತಾತ್ಯಾ ಅವರು ದೇಶದ ಇತರೆಡೆಗಳಾದ ಬಂದೆಲ್ಖಾಂಡ್, ಮಧ್ಯಭಾರತ, ರಾಜಾಸ್ಥಾನದ ಭರತ್ಪುರ, ಬಿತುಹರ್ ಮುಂತಾದ ಬಹುತೇಕ ಕಡೆಗಳಲ್ಲಿ ಸೇನೆಯನ್ನು ನಿರಂತರವಾಗಿ ಸಂಘಟಿಸುತ್ತಲೇ ಇದ್ದರು. ನರ್ಮದಾ, ಬೆಟ್ವಾ ನದೀತೀರಗಳಿಂದ ಮೊದಲ್ಗೊಂಡು ದಕ್ಷಿಣದ ಖಾಂಡೇಶ್ ವರೆಗೆ ಅವರು ಕ್ರಾಂತಿಯ ಕಿಡಿಯನ್ನು ಜ್ವಾಜ್ವಲ್ಯಮಾನವಾಗಿ ಉರಿಸಿದ್ದರು. ಅವರ ಸಂಘಟನಾ ಶಕ್ತಿ ಅತ್ಯದ್ಭುತವಾದುದೆಂದು ಚರಿತ್ರೆ ದಾಖಲಿಸಿದೆ. ಈ ಎಲ್ಲಾ ಪ್ರದೇಶದ ಜನರಲ್ಲಿ ಅವರು ಬಹಾದ್ದೂರ್ ತಾತ್ಯಾ ಟೋಪೆ ಎಂದು ಪ್ರಸಿದ್ಧರಾಗಿದ್ದರು.

ನಂಬಿಕೆ ದ್ರೋಹ[ಬದಲಾಯಿಸಿ]

ಎಲ್ಲ ರೀತಿಯಲ್ಲೂ ಬ್ರಿಟಿಷ್ ಸಿಂಹಾಸನಕ್ಕೆ ಸಿಂಹಸ್ವಪ್ನರಾಗಿದ್ದ ತಾತ್ಯಾಟೋಪೆ ಅದ್ಭುತವಾದದ್ದನ್ನು ಸಾಧಿಸುವುದರತ್ತ ಮುನ್ನುಗ್ಗಿದ್ದರು. ಆದರೆ ಮಾನಸಿಂಗನೆಂಬ ಒಬ್ಬ ನಂಬಿಕೆಯ ಗೆಳೆಯ ತಾತ್ಯಾ ಟೋಪೆಯವರಿಗೆ ಮಿತ್ರದ್ರೋಹಿಯಾಗಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅವರ ಸುಳಿವನ್ನು ಕೊಟ್ಟು ಅವರ ಬಂಧನಕ್ಕೆ ಕಾರಣನಾದ. ಮತ್ತೊಂದು ವಿಚಾರವೆಂದರೆ ಗ್ವಾಲಿಯರಿನ ದೊರೆಯಾಗಿ ಜಿವಾಜಿ ರಾವ್ ಸಿಂಧಿಯಾ ಕೂಡಾ ಬ್ರಿಟಿಷರಿಗೆ ತನ್ನ ಸೇನೆಯನ್ನು ನೆರವು ನೀಡಿದ. ಬಹುಶಃ ಅದಿಲ್ಲದಿದ್ದರೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮತ್ತು ತಾತ್ಯಾ ಟೋಪೆಯಂತಹವರ ಸಾಹಸವನ್ನು ಬ್ರಿಟಿಷ್ ಸೇನೆ ತಡೆದುಕೊಳ್ಳಲು ಸಾಧ್ಯವಿರುತ್ತಿರಲಿಲ್ಲ.

ತಾತ್ಯಾ ಟೋಪಿ ತನ್ನ ಗೆರಿಲ್ಲಾ ಯುದ್ಧದಿಂದ ಬ್ರಿಟಿಷರಿಗೆ ಭೀತಿ ಹುಟ್ಟಿಸಿದ್ದರು. ಹಾಗಾಗಿ ಬ್ರಿಟಿಷರು ನಮ್ಮ ಭಾರತೀಯ ಒಡಕುತನವನ್ನೇ ಬಂಡವಾಳವಾಗಿಸಿಕೊಂಡು ತಾತ್ಯಾಟೋಪೆಯವರನ್ನು ಮೋಸದ ಸುಳಿಗೆ ಸಿಲುಕಿಸಿ ತನ್ನ ಚಕ್ರಾಧಿಪತ್ಯವನ್ನು ಮುಂದುವರೆಸಿತು. ತಾತ್ಯಾ ಟೋಪೆಯಂತಹ ಮಹಾವೀರ ಬ್ರಿಟಿಷ್ ಸಾಮ್ರಾಜ್ಯವನ್ನು ಇನ್ನಿಲ್ಲದಂತೆ ಅಲುಗಿಸಿದ್ದರು ಮತ್ತು ಅದಕ್ಕೆ ಈ ನೆಲ ಶಾಶ್ವತವಾಗಿ ದಕ್ಕುವಂತದಲ್ಲ ಎಂಬುದನ್ನು ಮನಮುಟ್ಟುವಂತೆ ಲಿಖಿಸಿದ್ದರು ಎಂಬುದು ಮಾತ್ರ ಅಲ್ಲಗೆಳೆಯಲಾರದ ಸತ್ಯ.

ಏಪ್ರಿಲ್ ೧೮, ೧೮೫೯[ಬದಲಾಯಿಸಿ]

ಏಪ್ರಿಲ್ ೧೮, ಭಾರತ ಸ್ವಾತಂತ್ರ್ಯಸಂಗ್ರಾಮದ ಮಹಾನ್ ಹೋರಾಟಗಾರರಾದ ತಾತ್ಯಾಟೋಪೆ ಅವರು ದೇಶಕ್ಕಾಗಿ ಪ್ರಾಣತೆತ್ತ ದಿನ. ಏಪ್ರಿಲ್ ೧೮, ೧೮೫೯ರ ವರ್ಷದಲ್ಲಿ ಬೃಹತ್ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಅವಿಸ್ಮರಣೀಯವಾಗಿ ಹೋರಾಡಿದ ಈತ ಕೊನೆಗೆ ತಮ್ಮ ಮಿತ್ರದ್ರೋಹಿಯೋಬ್ಬನಿಂದ ಬ್ರಿಟಿಷ್ ಸೇನೆಗೆ ಸೆರೆಸಿಕ್ಕಿ ಮರಣದಂಡನೆಗೆ ಗುರಿಯಾಗಿ ಕೇವಲ ತಮ್ಮ ೪೫ನೆಯ ವಯಸ್ಸಿನಲ್ಲಿ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತೆತ್ತರು. ಅವರೊಡನೆ ಗಲ್ಲಿಗೇರಿಸಲ್ಪಟ್ಟ ಇತರ ನಾಯಕರುಗಳೆಂದರೆ ನಾನಾ ಸಾಹಿಬ್, ಅಜಿಮುಲ್ಲಾ ಖಾನ್, ಅಹಮದುಲ್ಲಾಹ್ ಶಾ, ಕುನ್ವರ್ ಸಿಂಗ್, ಜನರಲ್ ಬಕ್ತ್ ಖಾನ್, ಅಜೀಜನ್, ಬೇಗಂ ಹಜರತ್ ಮಹಲ್ ಮುಂತಾದವರು.