ಜೈವಿಕ ಕೀಟನಾಶಕ: ಏನಿದರ ಮಹತ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೈವಿಕ ಕೀಟನಾಶಕ: ಏನಿದರ ಮಹತ್ವ?

ನಮ್ಮ ದೇಶದಲ್ಲಿ ಬೇಸಾದ ಬೆಳೆಗಳಲ್ಲಿ ರೋಗ ಬಾಧೆಯನ್ನು ತಪ್ಪಿಸಲು ರಾಸಾಯನಿಕ ಕೀಟನಾಶಕಗಳಿಗಾಗಿ ವರ್ಷಕ್ಕೆ ೬೦೦೦ ಕೋಟಿ ರೂಪಾಯಿಗಳು ವೆಚ್ಚವಾಗುತ್ತಿದೆ. ಇವುಗಳಿಂದ ಆಗುವ ಪರಿಸರ ಮಾಲಿನ್ಯ ಹಣದ ಖರ್ಚು ಮಾನವ ಮತ್ತು ಪ್ರಾಣಿಗಳಲ್ಲಾಗುವ ದುಷ್ಪರಿಣಾಮಗಳನ್ನು ಅವಲೋಕಿಸಿದರೆ ಜೈವಿಕ ಕೀಟನಾಶಕಗಳಿಗೇ ಮೊರೆಹೋಗುವುದು ಹೆಚ್ಚು ಸೂಕ್ತವೆಂಬುದು ಅರಿವಾಗುತ್ತದೆ

ನಮ್ಮ ದೇಶದಲ್ಲಿ ಸುಮಾರು ಶೇಕಡಾ ೬೦ ಬೇಸಾಯ ಆಧಾರಿತ ಕುಟುಂಬಗಳಿವೆ; ಪ್ರಪಂಚದಲ್ಲಿನ ರೈತರಲ್ಲಿ ಶೇಕಡ ೨೫ ರಷ್ಟು. ೧೯೬೦ ದಶಕದ ನಂತರ ಆಹಾರ ಬೆಳೆಯುವ ಗತಿಯೇ ಬದಲಾಗಿದೆ. ಕಡಿಮೆ ಕಾಲದಲ್ಲಿ ಹೆಚ್ಚು ಬೆಳೆ ಬೆಳೆಯುವ ಅಪ್ರಾಕೃತಿಕ ಕ್ರಿಯೆಯಿಂದಾಗಿ, ಪರಿಸರದ ಸಮತೋಲನ ಏರುಪೇರಾಗಿ ಇವು ತಂದೊಡ್ಡಿರುವ ಸಮಸ್ಯೆಗಳು ಹತ್ತಾರು. ಬೇಸಾಯದಲ್ಲಿ ನೀರಿನ ಸೂಕ್ತ ಬಳಕೆಯಾಗದೆ ಫಲವತ್ತು ಭೂಮಿಯ ಮೇಲ್ಪದರ ಕಳಚಿಕೊಂಡು ಸವಕಳಿ ಉಂಟಾಗುತ್ತಿದೆ. ಇದರ ಜೊತೆಗೆ ರಾಸಾಯನಿಕ ಗೊಬ್ಬರಗಳು, ರಾಸಾಯನಿಕ ಕ್ರಿಮಿನಾಶಕಗಳು ಯಥೇಚ್ಛವಾಗಿ ಬಳಕೆಯಾಗಿ ಪರಿಸರ ಮಲಿನವಾಗುತ್ತಿದೆ. ಈ ರಾಸಾಯನಿಕ ಕ್ರಿಮಿನಾಶಕಗಳು ಆಹಾರದ ಸರಪಳಿಯನ್ನು ಸೇರುತ್ತವೆ. ಆಹಾರ ಸರಪಳಿಯಲ್ಲಿ ಸಹಜವಾಗಿ ಒಂದು ಜೀವಿ ಇನ್ನೊಂದು ಜೀವಿಯ ಆಹಾರವಾಗುತ್ತದೆ. ಆಹಾರ ಸರಪಳಿಯ ಕೊನೆಯ ಹಂತದಲ್ಲಿರುವ ಜೀವಿ ಅಥವಾ ಮನುಷ್ಯನಲ್ಲಿ ರೋಗನಾಶಕಗಳು ಶೇಖರವಾಗಿ ರೋಗವನ್ನುಂಟುಮಾಡುತ್ತವೆ.


ಜೈವಿಕ ನಿಯಂತ್ರಣೆ:

ರೋಗಕಾರಕ ಜೀವಿಗಳನ್ನು ಇತರ ಪ್ರಕೃತಿ ಸಹಜ ಜೀವಿಗಳಿಂದ ನಿಯಂತ್ರಿಸುವುದಕ್ಕೆ ’ಜೈವಿಕ ನಿಯಂತ್ರಣೆ’ ಎಂದು ಕರೆಯುತ್ತಾರೆ. ಹೀಗೆ ನಿಯಂತ್ರಿಸಲು ಬಳಸುವ ಜೀವಿಗಳು, ಪರೋಪಜೀವಿಗಳಾಗಿತ್ತವೆ ಅಥವಾ ರೋಗಕಾರಕ ಜೀವಿಗಳಲ್ಲಿ ರೋಗವನ್ನುಂಟುಮಾಡುತ್ತವೆ. ಕ್ರಿ.ಪೂ. ೭೦೦೦ ದಲ್ಲಿಯೇ ಕೃಷಿಯಲ್ಲಿ ಜೈವಿಕ ರೋಗನಾಶಕಗಳ ಬಳಕೆ ಇತ್ತೆಂದು ತಿಳಿಯುತ್ತದೆ. ಅಂದು ರೈತರು ಸಸ್ಯಗಳ ವಿವಿಧ ಪ್ರಬೇಧಗಳನ್ನು ಬಳಸಿ ಕೀಟಗಳನ್ನು ನಿಯಂತ್ರಿಸುತ್ತಿದ್ದರೆಂದು ತಿಳಿದುಬರುತ್ತದೆ.

ಜೈವಿಕ ಕೀಟನಾಶಕಗಳಾಗಿ ಸಸ್ಯಗಳ ಬಳಕೆ:

ಸುಮಾರು ಆರುನೂರಕ್ಕೂ ಹೆಚ್ಚು ಸಸ್ಯಪ್ರಬೇಧಗಳನ್ನು ಬಳಸಿ ರೋಗಕಾರಕ ಜೀವಿಗಳನ್ನು ನಿಯಂತ್ರಣದಲ್ಲಿಡಬಹುದು. ಇಂತಹ ಜೈವಿಕ ಕ್ರಿಮಿನಾಶಕಗಳಲ್ಲಿ ಬೇವಿನ ಸಸ್ಯಕ್ಕೆ ಅಗ್ರಸ್ಥಾನ: ಇದೊಂದು ಪರಿಸರ ಸ್ನೇಹಿ. ಬೇವಿನ ಸಸ್ಯದಿಂದ ಅನೇಕ ಕೀಟನಾಶಕಗಳನ್ನು ಈಗಾಗಲೇ ತಯಾರಿಸಲಾಗುತ್ತಿದೆ. ಅವುಗಳಲ್ಲಿ ಅಜೆಡೆರಿಕ್ಟಿನ್ ಕೂಡ ಒಂದು. ಇತರ ರಾಸಾಯನಿಕ ವಸ್ತುಗಳೆಂದರೆ ನಿಂಬಿನ್, ಸಲಾನಿನ್ ಮತ್ತು ಮೆಯಂಟ್ರಿಯಾಲ್ ಮುಂತಾದವುಗಳು. ಬೇವಿನ ಸಸ್ಯದಿಂದ ಸುಮಾರು ಇನ್ನೂರಕ್ಕೂ ಹೆಚ್ಚು ಬೇಸಾಯ ಬೆಳೆಗಳಲ್ಲಿನ ರೋಗಗಳನ್ನು ನಿಯಂತ್ರಿಸಬಹುದಾಗಿದೆ. ಅವುಗಳಲ್ಲಿ ಕಡಲೆಕಾಯಿಯ ಬೇರು ಕೊಳೆಯುವ ರೋಗ, ಸೆಣಬಿನ ಕಾಂಡ ಕೊಳೆಯುವ ರೋಗ, ಬದನೆಯ ಬೇರು ಕೊಳೆಯುವ ರೋಗ, ಈರುಳ್ಳಿ ಕೊಳೆಯುವ ರೋಗ, ಮೆಣಸಿನಕಾಯಿ ಮತ್ತು ಟೊಮ್ಯಾಟೋಗಳ ಎಲೆಸುತ್ತು ರೋಗಗಳನ್ನು ಸಂಪೂರ್ಣವಾಗಿ ಹತೋಟಿಯಲ್ಲಿಡಬಹುದೆಂದು ಈಗಾಗಲೇ ಸಾಬೀತಾಗಿದೆ. ನಮ್ಮ ದೇಶದಲ್ಲಿ ಸುಮಾರು ೧೬ ದಶಲಕ್ಷ ಬೇವಿನ ಮರಗಳಿವೆಯೆಂದು ಅಂದಾಜು; ಬೇವಿನ ಎಲೆ, ಬೀಜ, ತೊಗಟೆಯನ್ನು ಕೀಟನಾಶಕಗಳನ್ನಾಗಿ ಬಳಸಲಾಗುತ್ತಿದೆ.

ಚಂಡುಮಲ್ಲಿಗೆ ಸಸ್ಯಗಳು ಅನೇಕ ಕೀಟಗಳನ್ನು ದೂರವಿಡುತ್ತವೆ. ಬೇಸಾಯದ ಬೆಳೆಗಳ ಜತೆಯಲ್ಲಿ ಚಂಡುಮಲ್ಲಿಗೆ ಬೆಳೆದು ಬೇಸಾಯದ ಬೆಳೆಗೆ ಬರುವ ರೋಗಗಳನ್ನು ನಿವಾರಿಸಬಹುದು. ಬಟಾಣಿ,ಆಲೂಗಡ್ಡೆ ಮತ್ತು ಟೊಮ್ಯಾಟೋಗಳಲ್ಲಿನ ಎಲೆಸುತ್ತು ಕಂದು ಬೂದು ರೋಗವನ್ನು, ಬೆಂಡೆಕಾಯಿ, ಪಪಾಯ, ದತ್ತುರ, ಕಣಗಿಲೆ, ಪುದೀನ, ಮತ್ತು ಮುಳ್ಳಿನದಂಟು ಎಲೆಗಳ ರಸದಿಂದ ಹತೋಟಿಯಲ್ಲಿಡಬಹುದು. ಭತ್ತಕ್ಕೆ ಬರುವ ಕಂದುಚುಕ್ಕೆ ರೋಗವನ್ನು ಸಾಸಿವೆ ಗಿಡ, ಕ್ರೊಟನ್ ಗಿಡ ಮತ್ತು ಗೆಣಸು ಎಲೆಗಳ ರಸವನ್ನು ಬಳಸಿ ನಿವಾರಿಸಬಹುದು. ತುಳಸಿ ಎಲೆಯ ರಸದಿಂದ ಟೊಮ್ಯಾಟೋ ಮತ್ತು ಹಸಿಮೆಣಸಿನಕಾಯಿ ಗಿಡದ ರೋಗವನ್ನು ನಿಯಂತ್ರಿಸಬಹುದೆಂದು ಕೃಷಿ ತಜ್ಞರ ಸಂಶೋಧನೆಗಳು ದೃಢಪಡಿಸಿವೆ.

ತೆಂಗಿನ ಎಲೆಯ ರಸದಿಂದ ಬಾಳೆ ಎಲೆಸುತ್ತು ರೋಗವನ್ನು ಮತ್ತು ನುಗ್ಗೆ, ಮಧುಕ ಇಂಡಿಕ ವಿಂಕಾ ರೋಜಿಯಾ, ಸಿಟ್ರೋನೆಲ್ಲಾ ಹುಲ್ಲು, ಹೊಗೆಸೊಪ್ಪು ಎಲೆಗಳ ರಸದಿಂದ ಅನೇಕ ಹಣ್ಣು ಮತ್ತು ತರಕಾರಿ ಸಸ್ಯಗಳ ರೋಗಗಳನ್ನು ತಹಬಂದಿಗೆ ತರಬಹುದಾಗಿದೆ. ಜೋಳ ಮತ್ತು ಹತ್ತಿ ಬೆಳೆಯ ಎರಡು ಸಾಲುಗಳ ಮಧ್ಯೆ ಗೆಣಸನ್ನು ಬೆಳೆಯುವುದರಿಂದ ಗೆಣಸು ಕೀಟಗಳನ್ನು ಆಕರ್ಷಿಸಿ ಜೋಳ ಮತ್ತು ಹತ್ತಿಗೆ ಯಾವ ರೋಗಗಳೂ ಬರದಂತೆ ಕಾಪಾಡುತ್ತವೆ.

ಸೂಕ್ಷ್ಮಜೀವಿಗಳಿಂದ ರೋಗನಿಯಂತ್ರಣೆ:

ಸುಮಾರು ೧೧,೦೦೦ ವಿವಿಧ ಪ್ರಬೇಧದ ಕೀಟ, ವೈರಸ್ಸು, ಬ್ಯಾಕ್ಟೀರಿಯಾ, ಬೂಷ್ಟು, ಪ್ರೊಟೋಜೀವಿ, ರಿಕೇಟ್ಸಿಯಾ (ಒಂದು ವಿಧದ ಬ್ಯಾಕ್ಟೀರಿಯಾ) ಮತ್ತು ನೆಮಟೋಡುಗಳು ರೋಗ ನಿಯಂತ್ರಣೆ ಕಾರ್ಯದಲ್ಲಿ ನೆರವಿಗೆ ಬರುತ್ತವೆ. ಇವು ಸಾಮಾನ್ಯವಾಗಿ ಪರಾವಲಂಬಿಗಳು. ಕಪ್ಪೆ ಮತ್ತು ಜೇಡಗಳು ಸಹ ಕೀಟ ನಿಯಂತ್ರಣೆಯಲ್ಲಿ ಮುಖ್ಯಪಾತ್ರವನ್ನು ವಹಿಸುತ್ತವೆ. ಈ ಜೇಡಗಳಿಗೆ ಸುಮಾರು ೯೦ರಷ್ಟು ರೋಗಕಾರಕ ಕೀಟಗಳನ್ನು ನಿಯಂತ್ರಿಸುವ ಶಕ್ತಿಯಿದೆಯೆಂದು ಹೇಳುತ್ತಾರೆ. ಜೇಡಗಳನ್ನು ಬೇಸಾಯ ಭೂಮಿಯಲ್ಲಿ ಸಣ್ಣ ಸಣ್ಣ ಹಳ್ಳಗಳನ್ನು ಮಾಡಿ ವೃದ್ಧಿಸಬಹುದು. ಈ ಜೇಡಗಳನ್ನು ಬಳಸಿ ಹತ್ತಿ ಬೆಳೆಯಲ್ಲಿ ಕೀಟಗಳನ್ನು ನಿಯಂತ್ರಿಸಲಾಗುತ್ತಿದೆ. ಇದರಿಂದ ರಾಸಾಯನಿಕ ಕೀಟನಾಶಕಗಳ ಬಳಕೆಯಲ್ಲಿ ಶೇಕಡ ೬೦ರಷ್ಟು ಉಳಿಸಲು ಸಾಧ್ಯವೆಂದು ಕಂಡುಬಂದಿದೆ. ಒಂದು ತೋಳ ಜೇಡವು ಒಮ್ಮೆಗೆ ೧೦ ರಿಂದ ೧೨ ಕಂದು ಬಣ್ಣದ ಜಿಗಿಯುವ ಕೀಟಗಳನ್ನು ತಿಂದು ಜೀರ್ಣಿಸಿಕೊಳ್ಳುತ್ತದೆ. ಈ ಕಂದು ಬಣ್ಣದ ಜಿಗಿಯುವ ಕೀಟಗಳು ಏಷ್ಯಾದ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.

ಹತ್ತಿ, ಮೆಕ್ಕೆಜೋಳ, ಸೇಬು ಮತ್ತು ಅವೋಕಾಡೋ ಸಸ್ಯಗಳಲ್ಲಿನ ಮಿಡತೆಗಳನ್ನು ಹತೋಟಿಯಲ್ಲಿಡಲು ಟ್ರೈಕೋಗಾಮ ಎಂಬ ಕಣಜಹುಳುವಿನ ಪ್ರಬೇಧವನ್ನು ಬಳಸುತ್ತಾರೆ. ಟ್ರೈಕೋಗಾಮ ಕಿಲೋನಿನ್ ಎಂಬ ಪ್ರಬೇಧವನ್ನು ಕಬ್ಬನ್ನು ಕೊರೆಯುವ ಕೀಟವನ್ನು ನಿಯಂತ್ರಿಸಲು ಬಳಸುತ್ತಾರೆ. ಹತ್ತಿ ಹಣ್ಣು ಮತ್ತು ಬಾದಾಮಿಗಳನ್ನು ತಿಂದು ನಾಶಗೊಳಿಸುವ ಕಾರ್ಪೆಂಟರ್ ನೊಣಗಳನ್ನು ನಿಯಂತ್ರಿಸಲು ನ್ಯೂಪ್ಲೇಟಿನಾ ಕಾರ್ಪೊಕ್ಯಾಪ್ಸೆ ಕೀಟವನ್ನು ಬಳಸಬಹುದಾಗಿದೆ. ಈ ನ್ಯೂಪ್ಲೇಟಿನಾ ಕೀಟವು ಕಾರ್ಪೆಂಟರ್ ನೊಣದ ಮೇಲೆ ಪರಾವಲಂಬಿಯಾಗಿ ಬದುಕುತ್ತದೆ.

ಜೈವಿಕ ತಂತ್ರಜ್ಞಾನದಿಂದ ಕೀಟ ನಿಯಂತ್ರಣೆ:

ಅನೇಕ ಸೂಕ್ಷ್ಮಜೀವಿಗಳು ನಿರ್ದಿಷ್ಟ ಕೀಟಗಳನ್ನು ಮಾತ್ರ ಕೊಲ್ಲುತ್ತವೆ. ಇಂತಹ ಸೂಕ್ಷ್ಮಜೀವಿಗಳನ್ನು ಜೈವಿಕ ತಂತ್ರಜ್ಞಾನದಿಂದ ವೃದ್ಧಿಸಿ, ಶೇಖರಿಸಿಟ್ಟು, ಬೇಕಾದಾಗ ಬಳಸಬಹುದು. ಹಲವಾರು ಬ್ಯಾಕ್ಟೀರಿಯಾ, ವೈರಸ್ಸು ಮತ್ತು ಬೂಷ್ಟುಗಳನ್ನು ಜೈವಿಕ ನಿಯಂತ್ರಕಗಳಾಗಿ ಬಳಸುತ್ತಾರೆ. ಬ್ಯಾಸಿಲಸ್ ಥುರಿಂಜಿಯೆನ್ಸಿಸ್ ಎಂಬ ಬ್ಯಾಕ್ಟೀರಿಯಾ ಒಂದು ವಿಷಕಾರಕ ಪ್ರೊಟೀನನ್ನು ಅದರ ಕೋಶದಲ್ಲಿ ತಯಾರಿಸುತ್ತದೆ. ಇಂತಹ ವಿಷವುಳ್ಳ ಕೋಶಗಳನ್ನು ತಿಂದ ಕೀಟವು ಸಾಯುತ್ತದೆ. ಇದನ್ನು ಸಾಮಾನ್ಯವಾಗಿ ಬಿಟಿಯೆಂದು ಕರೆಯುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ ಈ ಬಿಟಿಯನ್ನು ಹಲವಾರು ದಶಕಗಳಿಂದಲೇ ಬಳಸುತ್ತಾ ಬಂದಿದ್ದಾರೆ. ಈ ಬಿಟಿಗಳನ್ನು ರೇಷ್ಮೆ ಬೆಳೆಗೆ ತೊಂದರೆ ಕೊಡಬಹುದೆಂದು ೧೯೯೧ರವರೆಗೆ ಕೀಟನಾಶವಾಗಿ ಬಳಸಲು ಅನುಮತಿ ಕೊಟ್ಟಿರಲಿಲ್ಲ. ನಮ್ಮ ದೇಶದಲ್ಲಿ ಈ ಬಿಟಿಯ ಅನೇಕ ತಳಿಗಳನ್ನು ತಯಾರಿಸಿದ್ದಾರೆ. ಇದನ್ನು ವ್ಯಾವಹಾರಿಕವಾಗಿ ಥುರಿಸೈಡ್ ಹೆಚ್ ಪಿ, ಬಯೋಟ್ರಾಲ್ ಬಿಟಿಬಿ, ಎಂಬ ವಿವಿಧ ಹೆಸರುಗಳಲ್ಲಿ ಕರೆಯುತ್ತಾರೆ.

ಜೈವಿಕ ಕೀಟನಾಶಕಗಳ ಮಹತ್ವ ?

ನಮ್ಮ ದೇಶದಲ್ಲಿ ಬೇಸಾಯದ ಬೆಳೆಗಳಲ್ಲಿ ರೋಗ ಬಾಧೆಯನ್ನು ತಪ್ಪಿಸಲು ರಾಸಾಯನಿಕ ಕೀಟನಾಶಕಗಳಿಗಾಗಿ ವರ್ಷಕ್ಕೆ ೬೦೦೦ ಕೋಟಿ ರೂಪಾಯಿಗಳು ವೆಚ್ಚವಾಗುತ್ತಿದೆ. ಇವುಗಳಿಂದ ಆಗುವ ಪರಿಸರ ಮಾಲಿನ್ಯ, ಹಣದ ಖರ್ಚು, ಮಾನವ ಮತ್ತು ಪ್ರಾಣಿಗಳಲ್ಲಾಗುವ ದುಷ್ಪರಿಣಾಮಗಳನ್ನು ಅವಲೋಕಿಸಿದರೆ ಜೈವಿಕ ಕೀಟನಾಶಕಗಳಿಗೇ ಮೊರೆಹೋಗುವುದು ಹೆಚ್ಚು ಸೂಕ್ತವೆಂಬುದು ಅರಿವಾಗುತ್ತದೆ.

ರಾಸಾಯನಿಕ ಕೀಟನಾಶಕಗಳನ್ನು ಸಂಯೋಜಿಸಿ, ಪರೀಕ್ಷೆಗೆ ಒಳಪಡಿಸಿ ಬಳಕೆಗೆ ಬಿಡುಗಡೆ ಮಾಡಲು ಸುಮಾರು ೮ರಿಂದ ೧೨ ವರ್ಷಗಳು ಬೇಕಾಗುತ್ತದೆ. ಆದರೆ ಜೈವಿಕ ಕೀಟನಾಶಕಗಳ ತಯಾರಿ ಮತ್ತು ಬಳಕೆಗೆ ಮೂರು ವರ್ಷಗಳು ಸಾಕು. ಈ ರಾಸಾಯನಿಕ ಕೀಟನಾಶಕಗಳ ಪರಿಣಾಮ ಕಡಿಮೆಯಾಗಿ ಮತ್ತೆ ಮತ್ತೆ ಬಳಸಬೇಕಾಗುತ್ತದೆ. ಆದರೆ ಜೈವಿಕ ಕೀಟನಾಶಕಗಳು ಒಮ್ಮೆ ಸಿಂಪಡಿಸಿದರೆ ಸಾಕು ಮತ್ತೊಮ್ಮೆ ಬಳಸುವ ಅಗತ್ಯವಿರುವುದಿಲ್ಲ.

ಅಂತರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರ, ಫಿಲಿಫೈನ್ಸ್‌ನಿಂದ ಹೊರಡಿಸಿದ ಕಿರು ಪ್ರಕಟಣೆಯ ಪ್ರಕಾರ ಸುಮಾರು ೮೦೦ ವಿವಿಧ ಪ್ರಭೇದದ ಸ್ನೇಹಮಯಿ ಕೀಟಗಳನ್ನು ಭತ್ತ ಬೆಳೆಯುವ ಭೂಮಿಯಲ್ಲಿ ಅಳವಡಿಸಬಹುದು. ಅಂತರಾಷ್ಟ್ರೀಯ ಆಹಾರ ಮತ್ತು ವ್ಯವಹಾರ ಸಂಸ್ಥೆಯ(FAO) ಪ್ರಕಟಣೆಯ ಪ್ರಕಾರ ಸುಮಾರು ೫೦೪ ವಿವಿಧ ಕೀಟ ಪ್ರಭೇದಗಳು ರಾಸಾಯನಿಕ ಕೀಟನಾಶಕಗಳಿಗೆ ನಿರೋಧಕ ಶಕ್ತಿಯನ್ನು ಪಡೆದುಕೊಂಡಿವೆ. ರೋಗಬಾಧೆಗಳನ್ನು ತಪ್ಪಿಸಲು ಸೂಕ್ತವಾದ ಎರಡು ಅಥವಾ ಮೂರು ವಿಧಾನಗಳನ್ನು ಬಳಸುವುದು ಒಳ್ಳೆಯದೆಂದು ರೈತರಲ್ಲಿ ಮನವರಿಕೆ ಮಾಡಬೇಕಾಗಿದೆ.