ಜೀವ ಹವಾವಿಜ್ಞಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀವ ಹವಾವಿಜ್ಞಾನ - ನೈಸರ್ಗಿಕ ವಾತಾವರಣದ ಹವಾ ಪರಿಸ್ಥಿತಿಗಳಿಂದ ಜೀವಿಗಳಲ್ಲಿ ಉಂಟಾಗುವ ಪರಿಣಾಮದ ವ್ಯಾಸಂಗ (ಬಯೋಕ್ಲೈಮೆಟಾಲಜಿ). ಈ ಪರಿಣಾಮ ಪ್ರತ್ಯಕ್ಷವಾಗಿರಬಹುದು. ವಾತಾವರಣದ ಶೈತ್ಯೋಷ್ಣಗಳಿಂದ ಆಗುವ ಪರಿಣಾಮಗಳಂತೆ ; ಇಲ್ಲವೇ ಪರೋಕ್ಷವಾಗಿರಬಹುದು-ವಾತಾವರಣ ಪರಿಸ್ಥಿತಿಯಿಂದ ಆಹಾರೋತ್ಪನ್ನಗಳು ವ್ಯತ್ಯಾಸ ಹೊಂದಿ ಅವುಗಳಿಂದ ಆಗುವ ಪರಿಣಾಮಗಳಂತೆ ಪರೋಕ್ಷ ಪರಿಣಾಮಗಳ ವ್ಯಾಪ್ತಿ ಬಹುವಿಸ್ತಾರ ಹಗೂ ಅನಿರ್ದಿಷ್ಟ. ಪ್ರತ್ಯಕ್ಷ ಪರಿಣಾಮಗಳಿಗೆ ಕಾರಣವಾದವು ಬೆಳಕು, ವಾಯು, ಉಷ್ಣತೆ ಎಂದು ವಿಂಗಡಿಸಿಕೊಂಡು ಜೀವ ಹವಾವಿಜ್ಞಾನವನ್ನು ವ್ಯಾಸಂಗಿಸಲಾಗಿದೆ.

ಪ್ರತ್ಯಕ್ಷ ಪರಿಣಾಮಗಳಿಗೆ ಕಾರಣವಾದವು[ಬದಲಾಯಿಸಿ]

ಬೆಳಕು[ಬದಲಾಯಿಸಿ]

ಬಿಸಿಲಿಗೆ ಮೈ ಒಡ್ಡುವುದರಿಂದ ಚರ್ಮ ಕಪ್ಪಾಗುತ್ತದೆ. ಉಷ್ಣವಲಯದ ಜನ ಕಪ್ಪಾಗಿರುವುದಕ್ಕೂ ಬೇರೆ ವಲಯದ ಜನ ಅಷ್ಟು ಕಪ್ಪಾಗಿಲ್ಲದಿರುವುದಕ್ಕೂ ಇದು ಮುಖ್ಯಕಾರಣ. ಚರ್ಮದ ಬಣ್ಣವನ್ನು ಕಂದಿಸಲು ಅನೇಕರು ಬಿಸಿಲಿನ ಸ್ನಾನದ ಏರ್ಪಾಡನ್ನು ಇಟ್ಟುಕೊಂಡಿರುತ್ತಾರೆ. ಬಿಸಿಲು ಕಡಿಮೆ ಇರುವಸ್ಥಳಗಳಿಂದ ಇದೇ ಕಾರಣಕ್ಕಾಗಿ ಉಷ್ಣವಲಯ ಪ್ರದೇಶಗಳಿಗೆ ಜನ ವಲಸೆ ಹೋಗುವುದೂ ಉಂಟು. ಬಿಸಿಲಿಗೆ ಗುರಿಯಾದ ತರುದಲ್ಲೇ ಕಪ್ಪು ಹುಟ್ಟಬಹುದು. ಇಲ್ಲವೆ ತಡವಾಗಿ ಕಪ್ಪಾಗಬಹುದು. ಬಿಸಿಲಿನಲ್ಲಿನ ಕೆಲವು ಅತಿನೇರಳೆ ಕಿರಣಗಳು ವಿಷಾಣುಗಳಿಗೆ ಮಾರಕ. ಇಂಥ ಕಿರಣಗಳು ದೂಳಿಲ್ಲದ ಎತ್ತರ ಪ್ರದೇಶಗಳಲ್ಲಿನ ಎಳೆಯ ಬಿಸಿಲಿನಲ್ಲಿ ಹೆಚ್ಚು. ಬಿಸಿಲಿನ ಅತಿನೇರಿಳೆ ಕಿರಣಗಳು ಪ್ರಾಣಿಜನ್ಯ ಮತ್ತು ಸಸ್ಯಜನ್ಯ ಆಹಾರಗಳಲ್ಲಿನ ಎರ್ಗೊಸ್ಟಿರಾಲ್ ಎಂಬ ವಸ್ತುವಿನ ಮೇಲೆ ಪ್ರಭಾವಿಸಿ ಅದನ್ನು ಜೀವಸತ್ತ್ವ ಆ ಯನ್ನಾಗಿ ಪರಿವರ್ತಿಸಬಲ್ಲವು. ಮಾನವ ಚರ್ಮದಲ್ಲಿನ ಎರ್ಗೊಸ್ಟಿರಾಲಿನ ಮೇಲೂ ಹೀಗೆಯೇ, ಬಿಸಿಲಿಗೆ ಸಾಕಷ್ಟು ಗುರಿಯಾಗುವವರಲ್ಲಿ ಜೀವಸತ್ತ್ವ ಆ ಯ ಅಭಾವ ಅಪರೂಪ. ಧೂಳು, ಹೊಗೆ, ಮಂಜು ಕವಿದಿರುವ ಕಡೆ ಮತ್ತು ಬಿಸಿಲು ಅಪರೂಪವಾಗಿರುವ ಕಡೆ ಮಾನವ ಚರ್ಮದಲ್ಲಿ ಜೀವಸತ್ತ್ವ ಆ ಉತ್ಪತ್ತಿಯಾಗುವುದಿರಲಿ, ಆಹಾರದಲ್ಲೂ ಅದು ಕಡಿಮೆ ಪ್ರಮಾಣದಲ್ಲಿರುತ್ತದೆ. ಇದರಿಂದ ಹಕ್ಕಿ ಕಡಪು (ರಿಕೆಟ್ಸ್) ಮುಂತಾದ ರೋಗಗಳು ಇಲ್ಲಿಯ ವಾಸಿಗಳಲ್ಲಿ ಕಾಣಬರುತ್ತವೆ. ಗಾಜಿನೊಳಗೆ ತೂರಿ ಬರುವ ಬಿಸಿಲಿನಲ್ಲಿ ಅತಿನೇರಳೆ ಕಿರಣಗಳಿರುವುದಿಲ್ಲ ಎನ್ನುವುದನ್ನು ಗ್ರಹಿಸಬೇಕಾಗಿದೆ. ಬಿಸಿಲಿನಿಂದ ಈ ವಿವಿಧವಾದ ಅನುಕೂಲತೆಗಳಿವೆ ಎಂದು ಅನೇಕರು ಬಿಸಿಲಿನ ಸ್ನಾನದ ಗೀಳನ್ನು ಹಚ್ಚಿಕೊಳ್ಳುವುದೂ ಉಂಟು. ಅದರೆ ಬಿಸಿಲಿಗೆ ಮೈ ಒಡ್ಡಿದಾಗ ಮೈಮೇಲೆ ಬೊಕ್ಕೇಗಳೇಳುವುದು ಚರ್ಮ ಸೀದು ಸುಲಿದು ಹೋಗಿ ವ್ರಣವಾಗುವುದೂ ಬಹುಜನಕ್ಕೆ ತಿಳಿಯದು. ಬಿಸಿಲಿನಿಂದ ಚರ್ಮದಲ್ಲಿ ಹಿಸ್ಟಮಿನ್ ಬಿಡುಗಡೆಯಾಗುವುದು ಈ ಪರಿಣಾಮಗಳಿಗೆ ಕಾರಣವೆನ್ನಲಾಗಿದೆ. ಚರ್ಮದಲ್ಲಿ ಕಪ್ಪು ಹುಟ್ಟಿಸಲು ಬಿಸಿಲಿನ ಸ್ನಾನಮಾಡುವವರಲ್ಲಿ ಅನೇಕರು ಅಜ್ಞಾನದಿಂದ, ಎಚ್ಚರಿಕೆ ಸಾಲದುದರಿಂದ, ಇಂಥ ಪರಿಣಾಮಗಳಿಗೆ ಈಡಾಗುತ್ತಾರೆ. ಬಿಸಿಲಿನಿಂದ ಚರ್ಮದಲ್ಲಿ ಏಡಿಗಂತಿ ಉಂಟಾಗುವ ಸಾಧ್ಯತೆ ಇದೆ. ಅನೇಕರ ಮುಖದ ಚರ್ಮದ ಏಡಿಗಂತಿಗಳು ಅವರು ಅತಿ ಬಿಸಿಲಿಗೆ ಗುರಿಯಾಗಿದ್ದುದರ ಪರಿಣಾಮ.

ಬಿಸಿಲು ನೇರವಾಗಿ ಕಣ್ಣಿನೊಳಗೆ ಹಾಯುವುದು ಅಪರೂಪ. ಕಣ್ಣನ್ನು ಹೋಗುವುದು ಸಾಮಾನ್ಯವಾಗಿ ವಸ್ತುಗಳಿಂದ ಪ್ರತಿಫಲಿಸದ ಬೆಳಕಿನ ಕಿರಣಗಳೇ, ಈ ಕಾರಣದಿಂದ ಕಣ್ಣು ಕ್ಷೇಮವಾಗಿದೆ. ಇಲ್ಲದಿದ್ದರೆ ದೃಷ್ಟಿನಾಶವಾಗುವ ಸಂಭವ ಉಂಟು. ಪ್ರತಿಫಲಿಸಿದ ಕಿರಣಗಳಾದರೂ ನೀರು, ಅರಳೆ, ಮಂಜು (ಸ್ನೊ), ಬರ್ಫ ಬಿಳಿಮೋಡ, ಬಿಳಿ ಮರಳು, ಲೋಹವಸ್ತುಗಳ ಮೇಲ್ಮೈ ಇವುಗಳಿಂದ ಬಂದಂಥವು ದೃಷ್ಟಿಗೆ ಅಪಾಯಕರವೇ. ಕಪ್ಪು ಕನ್ನಡಕವನ್ನು ಧರಿಸುವುದರಿಂದ ಈ ಆಪಾಯಗಳಿಂದ ರಕ್ಷಿಸಿಕೊಳ್ಳಬಹುದು.

ಅತ್ಯುನ್ನತ ವಲಯದ ಕಾಸ್ಮಕ್ ವಿಕಿರಣತೆ, ವಾತಾವರಣದಲ್ಲಿ ಮಾನವೀಕೃತ ಪರಮಾಣು ವಿಕಿರಣತೆ ಇವುಗಳಿಂದ ದೇಹದಲ್ಲಿ ಅಯಾನೀಕರಣ (ಅಯೊನೈಸೇಷನ್) ಉಂಟಾಗಿ ನಾನಾ ತೊಂದರೆಗಳಾಗುವುದನ್ನು ಗಮನದಲ್ಲಿಟ್ಟುಕೊಳ್ಳಬಹುದು. ದಿನದಲ್ಲಿ ಹಗಲು ಪ್ರಮಾಣ ಅನೇಕ ಜೀವಿಗಳ ಸಂತಾನೋತ್ಪದನ ಕಾಲನಿರ್ಣಯ ಮಾಡುತ್ತದೆಂದು ಪ್ರಯೋಗಗಳಿಂದ ನಿರ್ಧರಿಸಲಾಗಿದೆ.

ವಾಯು[ಬದಲಾಯಿಸಿ]

ವಾಯುವಿನಲ್ಲಿ ಆಕ್ಸಿಜನ್ನಿನ ಅಂಶಿಕ ಒತ್ತಡ (ಪಾರ್ಷಿಯಲ್ ಪ್ರೇಷರ್) ಜಲಾಂಶಗಳು ಗಮನಿಸತಕ್ಕವು. ಉನ್ನತ ಪ್ರದೇಶದಗಳಲ್ಲಿ ವಾಯುವಿನ ಒತ್ತಡ ಕಡಿಮೆ. ಅದರಿಂದಾಗಿ ಆಕ್ಸಿಜನ್ನಿನ ಒತ್ತಡವೂ ಕಡಿಮೆಯಾಗಿರುತ್ತದೆ. ಸಮುದ್ರಮಟ್ಟಕ್ಕಿಂತ 3000 ಮೀಟರುಗಳ ಮೇಲಿನ ಸ್ಥಳಗಳಲ್ಲಿ ಇಂಥ ಕಡಿಮೆ ಒತ್ತಡದಿಂದ ದೇಹಕ್ಕೆ ಸಾಕಷ್ಟು ಆಕ್ಸಿಜನ್ ದೊರೆಯದೆ ಅದರ ಕೊರತೆ ಉಂಟಾಗಿ ಮಲೆಬೇನೆ (ಮೌಂಟನ್ ಸಿಕ್‍ನೆಸ್) ಕಾಣಿಸಿಕೊಳ್ಳುತ್ತದೆ. ಗುಂಡಿಗೆ ಶ್ವಾಸಕ್ರಮಗಳ ದರ ಹೆಚ್ಚುವುದು, ಜೀರ್ಣಶಕ್ತಿ ಕುಂದಿ ವಾಕರಿಕೆ ವಮನಗಳಾಗುತ್ತವುದು, ಶ್ರಮಸಹಿಷ್ಣತೆ ಬಹುವಾಗಿ ತಗ್ಗುವುದು, ಚಿತ್ತಚಾಂಚಲ್ಯ, ಮತಿಭ್ರಮಣೆ-ಇವೆಲ್ಲ ಮಲೆಬೇನೆಯ ಲಕ್ಷಣಗಳು. ಆದರೆ ಬಹುಕಾಲ ಕಡಿಮೆ ಒತ್ತಡ ಉಳ್ಳ ಪ್ರದೇಶದಲ್ಲಿ ಇದ್ದರೆ ಜೀವಿಗಳು ಆ ಪರಿಸ್ಥಿತಿಗೆ ಒಗ್ಗಿಕೊಂಡು ಆರೋಗ್ಯ ಸ್ಥಿತಿಯಲ್ಲಿರಬಲ್ಲವು. ವಾಸ್ತವವಾಗಿ 1000 ರಿಂದ 1500 ಮೀಟರುಗಳಷ್ಟು ಉನ್ನತ ಪ್ರದೇಶದಲ್ಲಿ ಸ್ವಲ್ಪ ಕಾಲವಿದ್ದು ಹವಾ ಬದಲಾವಣೆ ಮಾಡಿಕೊಳ್ಳುವುದರಿಂದ ಗುಂಡಿಗೆ ಫುಪ್ಪುಸಗಳ ಕಾರ್ಯಾಚರಣೆಗೆ ಅನುಕೂಲ. ಉನ್ನತ ಪರ್ವತ ಪ್ರದೇಶಗಳ ಮೂಲನಿವಾಸಿಗಳು ಸ್ವಾಭಾವಿಕವಾಗಿಯೇ ಆ ವಾತಾವರಣದ ಪರಿಸ್ಥಿತಿಗೆ ಒಗ್ಗಿಕೊಂಡಿರುತ್ತಾರೆ.

ವಾಯುವಿನ ಉಷ್ಣೆಯನ್ನು ಅವಲಂಬಿಸಿ ಅದರ ಜಲಾಂಶ ಉಂಟು. ಉಷ್ಣತೆ ಕಡಿಮೆ ಆದರೆ ಚಳಿ ಆಗುವುದೊಂದೇ ಅಲ್ಲ. ಆ ಸ್ಥಿತಿಯಲ್ಲಿ ಜಲಾಂಶವೂ ಕಡಿಮೆಯಾಗುವುದರಿಂದ ಚರ್ಮ, ಮೂಗು ಬಾಯಿಗಳು ಒಣಗಿದಂತಾಗುವುದೂ ಸಾಮಾನ್ಯ. ಚಳಿಯಿಂದ ಉಂಟಾಗುತ್ತದೆಂದು ನಂಬಿರುವ ಅನೇಕ ಚರ್ಮ ರೋಗಗಳೂ ಶ್ವಾಸಾಂಗಗಳ ರೋಗಗಳೂ ವಾಸ್ತವವಾಗಿ ಶುಷ್ಕವಾಯುವಿನಿಂದಾದವು. ವಾಯು ಆಡದೆ ಇದ್ದರೆ ಸೆಖೆಯಾಗುವುದೂ ಉಸಿರು ಕಟ್ಟಿದಂತಾಗುವುದೂ ಉಂಟು. ಇದು ವಾಯುವಿನಲ್ಲಿ ಇಂಗಾಲದ ಡೈಆಕ್ಸೈಡ್ ಜಲಾಂಶಗಳು ಸಂಚಯಗೊಳ್ಳುವುದರಿಂದ ಇದರ ಜೊತೆಗೆ ದೈಹಿಕ ದುರ್ಗಂಧ ಸೇರಿ ಪರಿಸ್ಥಿತಿಯನ್ನು ಉಲ್ಬಣಿಸುವುದುಂಟು.

ವಾತಾವರಣದ ಅತಿಮೇಲ್ಮಟ್ಟದಲ್ಲಿ ಓಜೋನ್ ಇದೆ. ಮಿಂಚು ಮತ್ತು ಸೂರ್ಯರಶ್ಮಿಯ ಅತಿನೇರಳೆ ಕಿರಣಗಳು ವಾಯುವಿನಿಂದ ಆಕ್ಸಿಜನ್, ಹೊಗೆ ಮತ್ತು ದೂಳಿನಿಂದ ಕೂಡಿದ ಮಂಜಿನ ಕಣಗಳ ಮೇಲೆ ಪ್ರಭಾವಿಸಿ ಓಜೋನ್ ಉತ್ಪತ್ತಿ ಆಗುತ್ತದೆ. ಈ ಅನಿಲ ನಮ್ಮನ್ನು ಸೂರ್ಯರಶ್ಮಿಯ ಅಪಾಯಕರ ಅತಿನೇರಿಳೆ ಕಿರಣಗಳಿಂದಲೂ ವಿಶ್ವಕಿರಣಗಳಿಂದಲೂ ರಕ್ಷಿಸುವುದು ನಿಜ. ಆದರೆ ಇದು ಉಸಿರಿನೊಡನೆ ದೇಹಗತವೇನಾದರೂ ಆದರೆ ತುಂಬ ಅಪಾಯಕಾರ. 15 ಕಿಲೋಮೀಟರುಗಳಿಗಿಂತ ಹೆಚ್ಚು ಎತ್ತರದಲ್ಲಿ ಆಕಾಶಯಾನ ಮಾಡುವಾಗ ಇಂಥ ಸಂದರ್ಭ ಒದಗುತ್ತದೆ. ಅಮೆರಿಕ ಸಂಯುಕ್ತಸಂಸ್ಥಾನದ ಲಾಸ್ ಆಂಜಲೀಸ್ ಪಟ್ಟಣದ ವಾಯುಮಂಡಲದಲ್ಲಿ ಸ್ಮಾಗ್ (ಹೊಗೆ ಮತ್ತು ದೂಳು ಕೂಡಿದ ಮಂಜು) ಇರುವುದು ಸಾಮಾನ್ಯ ಪರಿಸ್ಥಿತಿ, ಸೂರ್ಯಕಿರಣ ಇದರ ಮೇಲೆ ವರ್ತಿಸಿದಾಗ ಅಪಾಯಕರ ಮಟ್ಟವನ್ನು ಮುಟ್ಟುವಷ್ಟು ಓಜೋನ್ ಅಪರೂಪವಾಗಿ ಉತ್ಪತ್ತಿ ಆಗುವುದುಂಟು. ಇಲ್ಲಿನ ವಾಯುಮುಂಡಲದಲ್ಲಿ ಜಲಾಂಶ ಕಡಿಮೆ ಆಗಿರುವುದೇ ಇದರ ಕಾರಣ ಎಂದು ತೋರುತ್ತದೆ. ಏಕೆಂದರೆ ಅಧಿಕ ಜಲಾಂಶಯುತವಾಗಿರುವ ಲಂಡನ್ನಿನ ಸ್ಮಾಗಿನಲ್ಲಿ ಇಂಥ ಪರಿಸ್ಥಿತಿ ತಲೆದೋರಿಲ್ಲ. ವಾಯುವಿನಲ್ಲಿ ಋಣ ಅಯಾನುಗಳು ಇದ್ದರೆ ಜೀವಾಣುಗಳ ಬೆಳೆವಣಿಗೆಗೂ ಧೂಳಿನ ಜ್ವರದ (ಹೇಫೀವರ್) ಪ್ರತಿರೋಧನಕ್ಕೂ ಅನುಕೂಲವೆಂದು ನಂಬಿಕೆ ಇದೆ.

ಉಷ್ಣತೆ[ಬದಲಾಯಿಸಿ]

ಸಸ್ತನಿ ಪಕ್ಷಿಕುಲಗಳನ್ನುಳಿದು ಮಿಕ್ಕ ಎಲ್ಲ ಪ್ರಾಣಿವರ್ಗಗಳಲ್ಲೂ ದೇಹೋಷ್ಣತೆ ಪರಿಸರದ ಉಷ್ಣತೆಯಷ್ಟೆ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಇರುವುದು. ಇಂತ ಪ್ರಾಣಿಗಳಿಗೆ ಅನಿಯತತಾಪೀ ಪ್ರಾಣಿಗಳೆಂದು (ಕೋಲ್ಡ್ ಬ್ಲಡೆಡ್ ಆ್ಯನಿಮಲ್ಸ್) ಹೆಸರು. ಜೈವಿಕ್ರಿಯೆಗಳೆಲ್ಲ ಸಾಮಾನ್ಯವಾಗಿ 450-500 ಅ ಗೆ ಮೀರಿದ ಉಷ್ಣತೆಯಲ್ಲಿ ಸ್ಥಗಿತಗೊಳ್ಳುವುದರಿಂದ ಪರಿಸರದ ಉಷ್ಣತೆ 500 ಅ ಗೆ ಮೀರಿದಲ್ಲಿ ಈ ಪ್ರಾಣಿಗಳು ಬದುಕಿರಲಾರವು. ಹಾಗೆಯೇ ಪರಿಸರದ ಶೀತಲತೆಯೂ. ಶೀತಲತೆ ಹೆಚ್ಚುತ್ತ ಹೆಚ್ಚುತ್ತ ದೇಹಕ್ರಿಯೆಗಳ ವೇಗವೂ ಕಡಿಮೆ ಆಗಿ 00 ಅ ಯಲ್ಲಿ ಎಲ್ಲ ಕ್ರಿಯೆಗಳೂ ಹೆಚ್ಚುಕಡಿಮೆ ಸ್ಥಗಿತವಾಗುತ್ತವೆ. ಇದು ಕೂಡ ಅನಿಯುತತಾಪೀ ಪ್ರಾಣಿಗಳಿಗೆ ಸಾಮಾನ್ಯವಾಗಿ ಮಾರಕ ಪರಿಸ್ಧಿತಿ. ಆದರೆ ಸ್ವಲ್ಪ ಮಟ್ಟಿಗೆ ಪರಿಸರದ ಉಷ್ಣತೆಗೆ ಇಂಥ ಪ್ರಾಣಿಗಳು ಒಗ್ಗಿಕೊಳ್ಳಬಹುದುದಾಗಿರುವುದರಿಂದ ಬೇರೆಬೇರೆ ಪರಿಸರಗಳಲ್ಲಿರುವ ಒಂದೇ ವರ್ಗದ ಪ್ರಾಣಿಗಳ ಉಷ್ಣ ಹಾಗೂ ಶೈತ್ಯ ಸಹಿಷ್ಣುತೆಯಲ್ಲೂ ವ್ಯತ್ಯಾಸ ಉಂಟು. ಸರಾಸರಿ ಉಷ್ಣತೆ 360 ಅ ಇರುವ ಪರಿಸರದಲ್ಲಿ ವಾಸಿಸುವ ಜಿರಲೆ 9.50 ಅ ಯಷ್ಟು ಶೈತ್ಯವನ್ನು ತಡೆದುಕೊಳ್ಳಬಲ್ಲದು. ಇದು ಇಂಥ ಜಿರಲೆಯ ಮಿತಿ. ಶೈತ್ಯ ಇನ್ನೂ ತೀವ್ರವಾದರೆ ಕ್ರಮೇಣ ಅದರ ಜೀವಕಾರ್ಯಗಳ ವೇಗವೂ ಕಡಿಮೆ ಆಗುತ್ತದೆ. ಆದರೆ 160 ಅ ಪರಿಸರದಲ್ಲಿ ವಾಸವಾಗಿರುವ ಜಿರಲೆ 9.50 ಅ ಯಲ್ಲಿಯೂ ಚಟುವಟಿಕೆಯಾಗಿರುವುದಷ್ಟೆ ಅಲ್ಲ ; ಅದಕ್ಕಿಂತ ತೀವ್ರ ಶೈತ್ಯದಲ್ಲೂ ಚಟುವಟಿಕೆಯಾಗಿರಬಲ್ಲದು. 20 ಅ ಯಷ್ಟು ಶೈತ್ಯ ಈ ಜಿರಲೆಯ ಮಿತಿ.

ಸಸ್ತನಿ ಮತ್ತು ಪಕ್ಷಿಗಳಲ್ಲಿ ದೇಹೋಷ್ಣತೆ ಪರಿಸರದ ಉಷ್ಣತೆಯನ್ನೇ ಅನುಸರಿಸದೆ ಒಂದು ಸಮಸ್ಥಿತಿಯಲ್ಲಿರುತ್ತದೆ. ಇವುಗಳಿಗೆ ನಿಯತತಾಪೀ ಪ್ರಾಣಿಗಳೆಂದು (ವಾರ್ಮ್ ಬ್ಲಡೆಡ್ ಆ್ಯನಿಮಲ್ಸ್) ಹೆಸರು. ಇವುಗಳ ದೇಹೋಷ್ಣತೆಯ ಸಮಸ್ಥಿತಿಯ ಮೇಲೆ ಕೂಡ ಪರಿಸರದ ಉಷ್ಣತೆಯ ಪರಿಣಾಮ ಅಪಾರವಾಗಿಯೇ ಇದೆ. ಚರ್ಮ ಹಾಗೂ ಶ್ವಾಸಾಂಗ ಮತ್ತು ಪರಿಸರ ಇವುಗಳ ನಡುವೆ ಉಷ್ಣವರ್ಗಾವಣೆ ಅವುಗಳಲ್ಲಿನ ಉಷ್ಣತೆಯ ವ್ಯತ್ಯಾಸವನ್ನೇ ಅಲ್ಲದೆ ಚರ್ಮದ ರಕ್ತನಾಳಗಳ ಸ್ಥಿತಿ. ಪರಿಸರದ ಜಲಾಂಶ, ಗಾಳಿ, ಬೀಸುವಿಕೆ, ಬಿಸಿಲಿನ ಉಷ್ಣತೆಗಳನ್ನೂ ಅವಲಂಬಿಸಿದೆ. ಉನ್ನತ ಪ್ರದೇಶದಲ್ಲಿ ಶ್ವಾಸಕ್ರಮದ ದರ ಹೆಚ್ಚುವುದರಿಂದ ಆ ಮೂಲಕ ದೇಹೋಷ್ಣ ನಷ್ಟಗೊಳ್ಳುವುದೂ ಹೆಚ್ಚುತ್ತದೆನ್ನುವುದನ್ನು ಗಮನಿಸಬೇಕು. ಪರಿಸರದ ಉಷ್ಣತೆ ಹೆಚ್ಚಾಗಿದಾಗ ಬೆವರಿ ದೇಹೋಷ್ಣ ನಷ್ಟವಾಗುವುದೂ ಪರಿಸರದ ಉಷ್ಣೆ ಕಡಿಮೆ ಆಗಿದ್ದಾಗ ನಡುಕ ಉಂಟಾಗಿ ದೇಹದಲ್ಲಿ ಉಷ್ನೋತ್ಪತ್ತಿ ಹೆಚ್ಚುವುದೂ ತಾತ್ಕಾಲಿಕ ಪರಿಣಾಮಗಳು. ಅದೂ ಚರ್ಮ ವಾತಾವರಣದ ಬೇಗೆಯಿಂದ ಸೀದುಹೋಗದೆ ತಂಪಿನಿಂದ ಘನೀಭವಿಸದೆ ಇದ್ದರೆ, ಸ್ಥಳೀಯವಾಗಿ ವಾತಾವರಣದ ಉಷ್ಣತೆ ಮುಖ್ಯ ಥಂಡಿಹವದಲ್ಲಿ ಗಾಳಿ ಬೀಸಿದರೆ ದೇಹೋಷ್ನ ನಷ್ಟವಾಗುವುದು ಅಗಾಧ. ಸ್ಥಳೀಯ ಉಷ್ಣತೆ 250 ಅ ಗಿಂತ ಹೆಚ್ಚಾಗಿದ್ದರೆ ಬೆವರುತ್ತದೆ. ಹೀಗೆ ಉತ್ಪತ್ತಿಯಾದ ಬೆವರು ಆವಿಯಾಗಿ ಆರಿಹೋಗಲು ಅನುಕೂಲವಾಗುವಷ್ಟು ಕಡಿಮೆ ಜಲಾಂಶ ಸ್ಥಳೀಯ ವಾತಾವರಣದಲ್ಲಿದ್ದರೆ ಪರಿಸ್ಥಿತಿಯನ್ನು ಸಹಿಸುವುದು ಸಾಧ್ಯ. ಇಬ್ಬನಿ ಬಿಂದು ಮತ್ತು ಸ್ಥಳೀಯ ವಾತಾವರಣದ ಉಷ್ಣತೆಗಳ ಸರಾಸರಿಯಿಂದ ಸಹ್ಯ ಉಷ್ಣತೆಯನ್ನು ಅರಿಯಬಹುದು. ಜಲಾಂಶ ಹೆಚ್ಚಾಗಿರುವ ಮೆಕ್ಸಿಕೋ ಕೊಲ್ಲಿಯಂಥ ಪ್ರದೇಶದಲ್ಲಿ ಸ್ಥಳೀಯ ಉಷ್ಣೆ 260ಅ-270ಅ ಗಿಂತ ಹೆಚ್ಚಾಗಿದ್ದರೆ, ಜಲಾಂಶ ಅಷ್ಟು ಹೆಚ್ಚಾಗಿರುವ ಸೋಮಾಲಿ ತೀರಪ್ರದೇಶದಲ್ಲಿ 290 ಅ-300 ಅ ಗಿಂತ ಹೆಚ್ಚಾಗಿದ್ದರೆ ಪರಿಸರದ ಉಷ್ಣವನ್ನು ಸಹಿಸಲು ಬಹು ಕಷ್ಟವಾಗುತ್ತದೆ. ಬಟ್ಟೆ ಬರೆಗಳ ಉಡುಗೆಯ ಅಭ್ಯಾಸ ವೈಶಿಷ್ಟ್ಯಗಳಿಂದ ಪರಿಸ್ಥಿತಿ ಎಷ್ಟೋ ಸುಧಾರಿಸಿದೆ.

ಹವೆಯ ಉಷ್ಣತೆಯ ವ್ಯತ್ಯಾಸದಿಂದ ರಕ್ತಪರಿಚಲನಾಂಗಗಳ ರೋಗಿಗಳಲ್ಲಿ ಎದೆ ನೋವು ಪಾಶ್ರ್ವವಾಯುಗಳು ಹಠಾತ್ ಸಂಭವಿಸುವುದೂ ಇನ್ನಿತರರಲ್ಲಿ ಮನೋರೋಗ ಅಪಘಾತ, ಮೂತ್ರಪಿಂಡಗಳ ಕಾರ್ಯದ ಆಕ್ರಮ ಉಂಟಾಗುವುದೂ ಸಂಧಿವಾತದ ಉಲ್ಬಣಶಮನಗಳು ಉಂಟಾಗುವುದೂ ಉಲ್ಲೇಖಿತವಾಗಿದ್ದರೂ ಈ ಕಾರ್ಯಕಾರಣಗಳ ಸಂಬಂಧ ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ಬೆಳಕಿನಂತೆಯೇ ದಿನದ ಸರಾಸರಿ ಉಷ್ಣತೆ ಜೀವಿಯ ಸಂತಾನೋತ್ಪಾದನಾ ಕಾಲವನ್ನು ನಿರ್ಣಯಿಸುವಂಥದ್ದಾಗಿದೆ.

ಪರಿಸರಕ್ಕೆ ಒಗ್ಗಿಕೊಳ್ಳುವಿಕೆ[ಬದಲಾಯಿಸಿ]

ಹುಟ್ಟಿಬೆಳೆದ ಸ್ಥಳಗಳ ವಿವಿಧ ವಾತಾವರಣ ಪರಿಸ್ಥಿತಿಗಳಿಗೆ ಒಗಿಕೊಂಡು ಹೆಚ್ಚು ವ್ಯತ್ಯಾಸಗಳಿಲ್ಲದೆ ಜೀವಕಾರ್ಯಗಳನ್ನು ಜರಗಿಸಬಲ್ಲ ಸಾಮರ್ಥ್ಯ ಅನೇಕ ಜೀವಿಗಳಿಗೆ ಉಂಟು. ಎಲ್ಲ ರೀತಿಯ ವಾತಾವರಣ ಪರಿಸ್ಥಿತಿಗಳಲ್ಲಿಯೂ ಬಾಳಬಲ್ಲ ಜೀವಿಗಳು ಬಹಳಿಲ್ಲ. ಕೆಲವು ಪ್ರದೇಶಗಳಲ್ಲಿ ಕೆಲವು ಜೀವಿಗಳು ಇರಲೇ ಆರವು. ಆದರೆ ಮಾನವ ಎಲ್ಲ ವಾತಾವರಣ ಪರಿಸ್ಥಿತಿಗಳಲ್ಲೂ ಬದುಕಿರಬಲ್ಲನೆಂಬುದು ಪ್ರಪಂಚದ ಎಲ್ಲ ಕಡೆಗಳಲ್ಲೂ ಮಾನವರಿರುವುದರಿಂದ ವ್ಯಕ್ತವಾಗುತ್ತದೆ. ಟಿಯರಡ್‍ಲ್ ಫ್ಯೂಗೋ ಎಂಬ ಸ್ಥಳದಲ್ಲಿ ಸುರಿಯುತ್ತಿರುವ ಮಳೆಯಲ್ಲಿ ತೋಯುತ್ತ ನಗ್ನಸ್ಥಿತಿಯಲ್ಲಿ ದೊಡ್ಡವರೂ ಮಕ್ಕಳೂ ಇದ್ದರೆಂದು ಡಾರ್ವಿನ್ನನ ಲೇಖನದಿಂದ ತಿಳಿದುಬರುತ್ತದೆ. ಆಂಡೀಸ್ ಪರ್ವತ ಪ್ರದೇಶಗಳಾದ ಬೊಲಿವಿಯ. ಪೆರುಗಳಲ್ಲಿ ಗಣಿ ಕೆಲಸಗಾರರು ಭಾರತದ ಗಣಿ ಕೆಲಸಗಾರಂತೆಯೇ ಶ್ರಮಸಹಿಷ್ಣುಗಳಾಗಿರುತ್ತಾರೆ. ಶೀತವಲಯದ ವಾಸಿಗಳು ಬಹು ಚಳಿಯನ್ನು ತಡೆಯಬಲ್ಲರು. ಉಷ್ಣವಲಯ ವಾಸಿಗಳಲ್ಲಿ ದೇಹೋಷ್ಣತೆ ತಾತ್ಕಲಿಕವಾಗಿ ಸ್ವಲ್ಪ ಏರಿದ ಮಟ್ಟದಲ್ಲಿದ್ದರು ಬೆವರುವುದಾಗಲಿ, ಕಷ್ಟಸಹಿಷ್ಣತೆಯ ಕೊರತೆಯಾಗಲಿ ಕಂಡುಬರುವುದಿಲ್ಲ. ಕೆಲವು ಸಸ್ತನಿಗಳು ಚಳಿಗಾಲದಲ್ಲಿ ಶಿಶಿರ ನಿದ್ರಾಸ್ಥಿತಿಯಲ್ಲಿದ್ದು (ಹೈಬರ್ನೇಷನ್) ಪ್ರತಿಕೂಲ ಪರಿಸರದಿಂದ ಬಚಾಯಿಸಿಕೊಳ್ಳುತ್ತವೆ. ಪಕ್ಷಿಗಳು ಅನುಕೂಲ ಹವೆ ಇರುವ ಕಡೆ ಕ್ಲುಪ್ತವಾಗಿ ವಲಸೆ ಹೋಗುತ್ತವೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: