ಕುರಿ ಸಾಕಾಣಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟಾರಸ್ ಪರ್ವತಗಳಲ್ಲಿ ಯೊರುಕ್ ಕುರುಬ
ಜರ್ಮನಿಯ ಕಲೋನ್ ಮೂಲಕ ರಜೆ ಬೆಳಿಗ್ಗೆ ಪ್ರಾರಂಭವಾಗುವ ಕುರಿಗಳ ಹಿಂಡು

ನಾನು ಹೊಸದಾಗಿ ಇದನ್ನು ಪ್ರಾರಂಭ ಮಾಡಲು ಇಚ್ಚಿಸಿದ್ದು ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮಿಂದ ಸಹಾಯ ಕೊರುತ್ತಿರುವೆ.[೧]

ಪರಿಚಯ[ಬದಲಾಯಿಸಿ]

ಗ್ರಾಮಾಂತರ ಪ್ರದೇಶದ ಆರ್ಥಿಕ ಸುಧಾರಣೆಯಲ್ಲಿ ಕುರಿ ಮಹತ್ವದ ಪಾತ್ರವಹಿಸುತ್ತದೆ. ಕುರಿಯನ್ನು ಬಡವರ ಸಣ್ಣ ಮತ್ತು ಅತಿ ಸಣ್ಣ ರೈತರ ‘ಕಿರುಕಾಮಧೇನು’ ಎಂದು ಕರೆಯಬಹುದು. ಉಣ್ಣೆ, ಮಾಂಸ, ಚರ್ಮ, ಗೊಬ್ಬರ ಇತ್ಯಾದಿ ಉಪಯುಕ್ತ ವಸ್ತುಗಳಿಂದ ದೇಶದ ಆರ್ಥಿಕ ಸುಧಾರಣೆಯಲ್ಲಿ ಕುರಿ ಉತ್ತಮ ಪಾತ್ರವನ್ನು ವಹಿಸಿದೆ. ಕುರಿ ಸಾಕಾಣಿಕೆ ಸಣ್ಣ, ಅತಿ ಸಣ್ಣ ರೈತರ ಮತ್ತು ಕೃಷಿ ಕಾರ್ಮಿಕರ ಮುಖ್ಯ ಕಸುಬಾಗಿದೆ. ಕರ್ನಾಟಕ ರಾಜ್ಯವು ೧,೯೧,೭೯೧ ಚ.ಕಿ.ಮೀ, ವಿಸ್ತಾರವನ್ನು ಹೊಂದಿದ್ದು, ದೇಶದಲ್ಲಿ ೬ನೇ ಅತಿ ದೊಡ್ಡ ರಾಜ್ಯವಾಗಿದೆ. ೨೦೦೩ನೇ ಜಾನುವಾರು ಗಣತಿಯ ಪ್ರಕಾರ ಕನಾಟಕ ರಾಜ್ಯದಲ್ಲಿ ೭೨.೫೫ ಲಕ್ಷ ಕುರಿಗಳು ಮತ್ತು ೪೪.೮೩ ಲಕ್ಷ ಮೇಕೆಗಳು ಇವೆ. ಕರ್ನಾಟಕದಲ್ಲಿರುವ ೨೭ ಜಿಲ್ಲೆಗಳಲ್ಲಿ ೯.೦೨ ಲಕ್ಷ ಕುರಿಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ತುಮಕೂರು ೮.೮೪ ಲಕ್ಷ, ಚಿತ್ರದುರ್ಗ ೭.೧೫ ಲಕ್ಷ ಮತ್ತು ಕೋಲಾರ ೬.೩೩ ಲಕ್ಷ ಸಂಖ್ಯೆ ಹೊಂದಿದ್ದು, ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದಿರುತ್ತವೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಕುರಿಗಳ ಸಾಂದ್ರತೆ ಅತ್ಯಂತ ವಿರಳವಾಗಿದೆ. ರಾಜ್ಯದಲ್ಲಿ ಕುರಿ ಸಾಕಾಣಿಕೆಗೆ ಒಣ ವಾತಾವರಣವಿರುವ ಮತ್ತು ೧೫ ರಿಂದ ೨೦ ಅಂಗುಲ ಮಳೆ ಬೀಳುವ ಭಾಗಗಳು ಉತ್ತಮವಾಗಿವೆ. ಹೆಚ್ಚು ಮಳೆ ಬೀಳುವ ಶೀತ ವಾಯುಗುಣದ ಅರಣ್ಯ ಪ್ರದೇಶವು ಕುರಿ ಸಾಕಾಣೆಕೆಗೆ ಯೋಗ್ಯವಲ್ಲ. ನಮ್ಮ ರಾಜ್ಯದಲ್ಲಿ ಕುರಿಗಳನ್ನು ಮುಖ್ಯವಾಗಿ ಮಾಂಸ, ಉಣ್ಣೆ, ಚರ್ಮ ಮತ್ತು ಗೊಬ್ಬರಗಳಿಗಾಗಿ ಸಾಕುತ್ತಾರೆ. ಕುರಿ ಸಾಕಾಣಿಕೆ ಸುಲಭ ಹಾಗೂ ಲಾಭದಾಯಕ. ಕುರಿಗಳು ಎಂತಹ ಸಂಕಷ್ಟ ಸಮಯದಲ್ಲೂ ಬದುಕಿ ಉಳಿಯಬಲ್ಲವು. ಕುರಿಗಳಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ. ಆಧುನಿಕ ತಂತ್ರಜ್ಞಾನ, ಮೇವು ವಿಜ್ಞಾನ ಹಾಗೂ ತಳಿಯ ಅಭಿವೃದ್ಧಿ ಜ್ಞಾನವನ್ನು ಅಳವಡಿಸಿ ಕುರಿಗಳನ್ನು ಸಾಕಿದರೆ ಹೆಚ್ಚಿನ ಲಾಭ ಗಳಿಸಬಹುದು. ಇಂದು ಕುರಿ ಸಾಕಾಣಿಕೆಯು ಅಲೆಮಾರಿ ಜನರಿಗೆ, ಕೃಷಿ ಕೂಲಿಗಾರರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಎಲ್ಲಾ ವರ್ಗದವರಿಗೆ ಜೀವಂತ ಚಲಿಸುವ ನಿಧಿಗೆ ಸಮಾನವಾಗಿದೆ.

ಕರ್ನಾಟಕದಲ್ಲಿ ಕುರಿ ಅಭಿವೃಧಿಯ ಕಾರ್ಯಕ್ರಮಗಳು[ಬದಲಾಯಿಸಿ]

  1. ಕರ್ನಾಟಕ ಸರ್ಕಾರವು ರಾಜ್ಯದಲ್ಲಿನ ಕುರಿಗಾರರ ಹಿತರಕ್ಷಣೆ ಕಾಯುವ ಸಲುವಾಗಿ ೧೯೭೫ನೇ ಇಸವಿಯಲ್ಲಿ ಕರ್ನಾಟಕ ಕುರಿ ಮತ್ತು ಕುರಿ ಉತ್ಪನ್ನಗಳ ಅಭಿವೃಧಿ ಮಂಡಳಿಯನ್ನು ಸ್ಥಾಪಿಸಿದ್ದು, ಸದರಿ ಮಂಡಳಿಯ ಚಟುವಟಿಕೆಗಳನ್ನು ಬಲಪಡಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರವು ದಿನಾಂಕ ೧.೪.೨೦೦೨ ರಿಂದ ಜಾರಿಗೆ ಬರುವಂತೆ ಮಂಡಳಿಯನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃಧಿ ನಿಗಮ ನಿಯಮಿತವನ್ನಾಗಿ ಪರಿವರ್ತಿಸಿದೆ.
  2. ಈ ಹಿಂದೆ ಪಟ್ಟಿ ಮಾಡಿ ತಿಳಿಸಿದ ತಳಿಗಳು ಸ್ಥಳೀಯ ತಳಿಗಳಾಗಿದ್ದು ಇವುಗಳ ಉಣ್ಣೆ ಒರಟಾಗಿದ್ದು ಉಪಯುಕ್ತತೆ ಕಡಿಮೆಯಿರುತ್ತದೆ. ಇವುಗಳ ಸರಾಸರಿ ದೇಹ ತೂಕ ಕಡಿಮೆಯಾಗಿರುವುದರಿಂದ ಮಾಂಸದ ಗುಣಮಟ್ಟ ಹಾಗೂ ಇಳುವರಿಯನ್ನು ಹೆಚ್ಚಿಸುವ ಸಲುವಾಗಿ ಮಿಶ್ರ ತಳಿ ಸಂವರ್ಧನೆ ಅತಿ ಅವಶ್ಯಕವಿರುತ್ತದೆ. ಈ ಬಗ್ಗೆ ಸರಕಾರ ಹಮ್ಮಿಕೊಂಡಿರುವ ಪ್ರಮುಖ ಪ್ರಯತ್ನವೆಂದರೆ ನಮ್ಮ ರಾಜ್ಯದ ತಳಿಗಳನ್ನು ವಿದೇಶಿ ತಳಿಗಳೊಂದಿಗೆ ಸಂಕರಗೊಳಿಸಿ ಮಿಶ್ರ ತಳಿ ಅಭಿವೃದ್ಧಿಪಡಿಸುವುದು. ಆದರೆ ಈ ಕಾರ್ಯಕ್ರಮಕ್ಕೆ ಅನೇಕ ಅಡಚಣೆಗಳಿವೆ.

ಪ್ರಮುಖ ಸಮಸ್ಯೆಯೆಂದರೆ ರಾಜ್ಯದ ಹೆಚ್ಚಿನ ಸಂಖ್ಯೆ ಕುರಿಗಳಿಗೆ ಬೇಕಾಗಿರುವ ಸಂಖ್ಯೆಯ ಟಗರುಗಳನ್ನು ಒದಗಿಸಬೇಕಾಗಿರುವುದು. ಈ ಟಗರನ್ನು ಒದಗಿಸುವ ಕೇಂದ್ರಗಳೆಂದರೆ ರಾಜ್ಯದಲ್ಲಿರುವ ೬ ಕುರಿ ಸಂವರ್ದ್ಧನಾ ಕ್ಷೇತ್ರಗಳು. ಈ ಕ್ಷೇತ್ರಗಳಲ್ಲಿ ಉತ್ಪಾದಿಸಲಾಗುವ ಒಟ್ಟು ಟಗರುಗಳ ಉತ್ಪಾದನೆ ರಾಜ್ಯಾದ್ಯಂತ ಇರುವ ಅವಶ್ಯಕತೆಗೆ ಏನೇನೂ ಸಾಲದು. ಜಾನುವಾರುಗಳಲ್ಲಿ ಕೃತಕ ಗರ್ಭಧಾರಣೆ ಪ್ರಮುಖ ತಳಿ ಸಂವರ್ಧನಾ ಅಂಗವಾಗಿರುವುದು ಸಾಬೀತಾಗಿದೆ. ಈ ಮಹತ್ವದ ವಿಜ್ಞಾನವನ್ನು ಕುರಿಗಳು ಸಂವರ್ಧನೆಯಲ್ಲೂ ಅಳವಡಿಸಬೇಕಾಗಿದೆ. ಈ ಬಗ್ಗೆ ರಾಜ್ಯದ ಹಲವೆಡೆ ನಡೆದ ಪ್ರಯೋಗಗಳು ಉತ್ತಮ ಪ್ರೋತ್ಸಾಹಕ ಫಲಿತಾಂಶ ತಂದು ಕೊಟ್ಟಿವೆ. ಆದರೂ ಕುರಿಗಳಲ್ಲಿ ಕೃತಕ ಗರ್ಭಧಾರಣಾ ವಿಧಾನವನ್ನು ತೀವ್ರಗತಿಯಲ್ಲಿ ನಡೆಸಲು ಸಾಧ್ಯವಿಲ್ಲದ್ದಕ್ಕೆ ಹಲವು ಕಾರಣಗಳಿವೆ. ಪ್ರಮುಖವಾಗಿ ಕುರಿಗಳು ವಿಪುಲ ಸಂಖ್ಯೆಯಲ್ಲಿರುತ್ತವೆ. ಹಾಗೂ ಮಂದೆಗಳಲ್ಲಿ ಊರಿಂದ ಊರಿಗೆ ವಲಸೆ ಹೋಗುವ ಅಭ್ಯಾಸವಿರುತ್ತದೆ. ಈ ವೈಜ್ಞಾನಿಕ ವಿಧಾನವನ್ನು ಸ್ಥಳದಲ್ಲೇ ನೆಲೆಯಾಗಿರುವ ಸಣ್ಣ ಮಂದೆಗಳಲ್ಲಿ ಯಶಸ್ವಿಯಾಗಿ ಪ್ರಯೋಗಿಸಬಹುದು. ಈ ಒಂದು ವಿಧಾನದಿಂದ ಹೆಚ್ಚಿನ ಸಂಖ್ಯೆಯ ಮಿಶ್ರ ತಳಿ ಟಗರನ್ನು ಉತ್ಪಾದಿಸಬಹುದು. ಈ ಮಿಶ್ರ ತಳಿ ಸಂವರ್ಧನಾ ಕ್ರಿಯೆಯಿಂದ ಉತ್ತಮ ಗುಣವುಳ್ಳ ಹಾಗೂ ಹೆಚ್ಚಿನ ಪ್ರಮಾಣದ ಮಾಂಸ ಹಾಗೂ ಉಣ್ಣೆಯನ್ನು ಉತ್ಪತ್ತಿ ಮಾಡಬಹುದು. ಈ ಮಿಶ್ರ ತಳಿಯ ಉಣ್ಣೆಯನ್ನು ಸಂಸ್ಕರಿಸುವ ವಿಧಾನ ನಮ್ಮ ಬಳಕೆಯಲ್ಲಿರುವ ಪದ್ಧತಿಗಿಂತ ಹೊರತಾಗಿದೆ. ಕರ್ನಾಟಕ ರಾಜ್ಯವು ಮಿಶ್ರ ತಳಿ ಟಗರನ್ನು ೬ ಕುರಿ ಸಂವರ್ಧನಾ ಕೇಂದ್ರಗಳಲ್ಲಿ ಉತ್ಪಾದಿಸುತ್ತದೆ:

  • ಕುರಿ ಸಂವರ್ಧನಾ ಕೇಂದ್ರ ಚಳ್ಳಕೆರೆ

ಸುಮಾರು ೯೮೦೦ ಎಕರೆ ವಿಸ್ತಾರವನ್ನು ಹೊಂದಿರುವ ಈ ಕೇಂದ್ರದಲ್ಲಿ ಡೆಕ್ಕನಿ ತಳಿಯ ಕುರಿಗಳನ್ನು ವಿದೇಶಿ ತಳಿಯಾದ ರ್ಯಾಂಬುಲೆ ತಳಿಯೊಡನೆ ಸಂಕರಣಗೊಳಿಸಿ ಮಿಶ್ರ ತಳಿ ಟಗರುಗಳನ್ನು ಉತ್ಪಾದಿಸಿ ರೈತರಿಗೆ ವಿತರಿಸಲಾಗುವುದು.

  • ವಿದೇಶಿ ಕುರಿ ತಳಿ ಸಂವರ್ಧನಾ ಕೇಂದ್ರ ವಿಳ್ಳೆವರ್ತಿ

ಸುಮಾರು ೨೦೦೦ ಎಕರೆ ವಿಸ್ತಾರ ಹೊಂದಿರುವ ಈ ಕೇಂದ್ರದಲ್ಲಿ ವಿದೇಶಿ ಶುದ್ಧ ತಳಿಯ ಕುರಿಗಳನ್ನು ಸಾಕಲಾಗುತ್ತಿದ್ದು, ಈ ಕೇಂದ್ರದಲ್ಲಿ ಉತ್ಪಾದನೆಯಾದ ಶುದ್ಧ ತಳಿ ರ್ಯಾಂಬುಲೆ ಟಗರುಗಳನ್ನು ಬೀಜಕ್ಕಾಗಿ ಇತರೆ ಕುರಿ ಸಂವರ್ಧನಾ ಕೇಂದ್ರಗಳಿಗೆ ಒದಗಿಸುವ ಗುರಿಯನ್ನು ಹೊಂದಲಾಗಿದೆ.

  • ಕುರಿ ಸಂವರ್ಧನಾ ಕೇಂದ್ರ ಸುತ್ತಟ್ಟಿ

ಸುಮಾರು ೧೮೭ ಎಕರೆ ವಿಸ್ತಾರ ಹೊಂದಿರುವ ಈ ಕೇಂದ್ರದಲ್ಲಿ ಡೆಕ್ಕನಿ ಕುರಿಗಳ ಹಾಗೂ ರ್ಯಾಂಬುಲೆ ಕುರಿಗಳ ಮಿಶ್ರ ತಳಿ ಸಂಕರಣ ಕಾರ್ಯವನ್ನು ಕೈಗೊಳ್ಳಲಾಗಿದೆ. ಅಲ್ಲದೆ ರೈತರಿಗೆ ಕುರಿ ಸಾಕಾಣಿಕೆಯಲ್ಲಿ ತರಬೇತಿ ಮತ್ತು ಉಣ್ಣೆ ಉತ್ಪಾದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

  • ಕುರಿ ಸಂವರ್ಧನಾ ಕೇಂದ್ರ ಗುತ್ತೇಲು

ಸುಮಾರು ೨೯೪ ಎಕರೆ ವಿಸ್ತಾರ ಹೊಂದಿರುವ ಈ ಕೇಂದ್ರದಲ್ಲಿ ಮಿಶ್ರ ತಳಿ ಸಂಕರಣ ಉತ್ಪಾದನೆ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

  • ಕುರಿ ಸಂವರ್ಧನಾ ಕೇಂದ್ರ ಧನಗೂರು

ಸುಮಾರು ೬೦೦ ಎಕರೆ ವಿಸ್ತಾರ ಹೊಂದಿರುವ ಈ ಕೇಂದ್ರದಲ್ಲಿ ಜಗತ್ಪ್ರಸಿದ್ಧವಾದ ಬನ್ನೂರು ಮಾಂಸದ ತಳಿಯನ್ನು ಶುದ್ಧ ತಳಿ ರೂಪದಲ್ಲಿ ಉಳಿಸಿಕೊಳ್ಳುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

  • ಕುರಿ ಸಂವರ್ಧನಾ ಕೇಂದ್ರ ಅನಗವಾಡಿ

ಕೆಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದಾಗಿ ಸದರಿ ಕೇಂದ್ರವು ಮಂಡಳಿಗೆ ಈವರೆಗೆ ಹಸ್ತಾಂತರಗೂಂಡಿರುವುದಿಲ್ಲ. ಕುರಿ ಸಾಕಣೆ ಮತ್ತು ಉಣ್ಣೆ ಉತ್ಪಾದನೆ ಹಾಗೂ ಕುರಿಗಳ ಸಂವರ್ಧನೆಗಾಗಿ ಶಾಖೆಯು ಅನೇಕ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕುರಿಗಳ ಅಭಿವೃದ್ಧಿಗಾಗಿ ಆರು ಕುರಿ ಸಂವರ್ಧನಾ ಕ್ಷೇತ್ರ ಮತ್ತು ಹತ್ತು ಕುರಿ ಸಾಕಾಣಿಕೆದಾರರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯಾದ್ಯಂತ ಏಳು ಕುರಿ ಮತ್ತು ಉಣ್ಣೆ ಅಭಿವ್ರುದ್ಧಿ ಯೋಜನೆಗಳನ್ನು ಅನುಷ್ಠಾನಗುಳಿಸಲಾಗಿದೆ. ಕುರಿ ಸಾಕಣೆ ಸಾಕಾಣಿಕೆಯಲ್ಲಿ ತರಬೇತಿ ನೀಡುವುದರ ಮೂಲಕ ಕುರಿ ಸಂವರ್ಧನೆ ನಡೆದಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರೈತರಿಗೆ ವಿದೇಶಿ ರ್ಯಾಂಬುಲೆ ಟಗರುಗಳನ್ನು ವಿತರಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಚಿತ್ರದುರ್ಗ ಜಿಲ್ಲೆಯ ಉಳ್ಳ ಕ್ಷೇತ್ರದಲ್ಲಿ ವಿದೇಶಿ ತಳಿ ಕುರಿಗಳ ಪೋಷಣೆಗಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ಇಲ್ಲಿ ಬಂಡೂರು ತಳಿ ಕುರಿ ಅಭಿವೃದ್ಧಿ ನಡೆಸಲಾಗುತ್ತಿದ್ದು, ಜಮುನಾ ಪಾರಿ ಆಡು ತಳಿಗಳ ಮೂಲಕ ರಾಜ್ಯದ ದೇಶೀ ಮೇಕೆಗಳನ್ನು ಉತ್ತಮಗೊಳಿಸುಮಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ.

ಸರ್ಕಾರದ ಪ್ರೊತ್ಸಾಹ ಮತ್ತು ವಿಫಲತೆ ಹಾಗೂ ಅದನ್ನು ಸರಿಪಡಿಸಲು ಸಲಹೆಗಳು[ಬದಲಾಯಿಸಿ]

ಕುರಿಗಾರರು ತಮ್ಮ ಕುರಿ ಹಿಂಡನ್ನು ಮೇಯಿಸಲು ಸಾಮಾನ್ಯವಾಗಿ ಬೆಟ್ಟ ಗುಡ್ಡ ಪ್ರದೇಶಗಳು, ಕಾಡುಗಳು, ಕೆರೆ ಮೈದಾನಗಳನ್ನು ಅವಲಂಬಿಸಿರುತ್ತಾರೆ. ಬೆಳೆ ಕಟಾವು ಮಾಡಿದ ನಂತರ ಖುಷ್ಕಿ ಜಮೀನುಗಳಲ್ಲಿ ಮೇಯಿಸುವುದು ಬಹಳ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ. ಏಕೆಂದರೆ ಇವುಗಳನ್ನು ಕಟ್ಟಿ ಮೇಯಿಸುವುದಾಗಲಿ ಹಟ್ಟಿಗಳಲ್ಲಿ ಕೂಡಿ ಮೇಯಿಸುವುದಾಗಲಿ ಸಾಧ್ಯವಾಗುವುದಿಲ್ಲ. ಮಳೆಗಾಲದಲ್ಲಿ ಅಂದರೆ ಜೂನ್ ತಿಂಗಳಿಂದ ಸೆಪ್ಟೆಂಬರ‍್ವರೆಗೆ ಬೆಟ್ಟ ಗುಡ್ಡಗಳಲ್ಲಿ ಹಸಿರು ಹುಲ್ಲು ದೊರೆಯುವುದರಿಂದ ನಂತರ ಖುಷ್ಕಿ ಜಮೀನುಗಳಲ್ಲಿ ಪೈರುಗಳ ಉಳಿಕೆಗಳನ್ನು ಹಾಗೂ ಹೀಗೂ ಡಿಸೆಂಬರ್ ತಿಂಗಳವರೆಗೂ ಮೇಯಿಸಲು ಸಾಧ್ಯವಾಗಬಹುದು. ಕುರಿಗಾರನ ನಿಜವಾದ ಕಷ್ಟದ ದಿನಗಳು ಜನವರಿಯಿಂದ ಪ್ರಾರಂಭವಾಗಿ ಮೇ ತಿಂಗಳವರೆಗೆ ಮುಂದುವರೆದು ಕುರಿಗಳ ಹೊಟ್ಟೆ ತುಂಬಿಸುವುದಕ್ಕಾಗಿ ಪಡಬಾರದ ಕಷ್ಟ ಪಡಬೇಕಾಗುತ್ತದೆ. ಇಂತಹ ದಿನಗಳಲ್ಲೇ ಕುರಿಗಾರರು ತಮ್ಮ ಹಿಂಡಿನೊಂದಿಗೆ ಜಿಲ್ಲೆಯಿಂದ ಜಿಲ್ಲೆಗೆ ವಲಸೆ ಹೋಗುತ್ತಾರೆ. ಮಾರ್ಗಗಳ ಬದಿಯ ಮೇವಿನ ಮರಗಳ ಟೊಂಗೆಗಳನ್ನು ಕಡಿದು ಹಾಕಿ ಅವುಗಳನ್ನು ಬರಡುಗೊಳೆಸುತ್ತಾರೆ. ಮಲೆನಾಡಿನ ಕಾಡುಗಳಿಗೆ ಲಗ್ಗೆ ಇಡುತ್ತಾರೆ ಇಂತಹ ಸಂದರ್ಭಗಳಲ್ಲೇ ಕುರಿಗಳು ಕುಡಿಯಲು ಸಾಕಷ್ಟು ಮತ್ತು ಯೋಗ್ಯವಾದ ನೀರಿನ ಕೊರತೆಯಿಂದಾಗಿ ಜಂತು ಹುಳುವಿನ ಬಾಧೆ ಮತ್ತು ರೋಗ ರುಜಿನಗಳಿಗೆ ತುತ್ತಾಗುತ್ತವೆ. ನೂರಾರು ವರ್ಷಗಳಿಂದ ಕುರಿಗಳು ಗೋಮಾಳಗಳಲ್ಲಿ, ಗುಡ್ಡ, ಬೆಟ್ಟ ಮತ್ತು ಅರಣ್ಯ ಪ್ರದೇಶಗಳಲ್ಲಿ ನಿರಂತರವಾಗಿ ಮೇದು ಅವುಗಳಲ್ಲಿ ಉಪಯುಕ್ತವಾದ ಮೇವಿನ ಮರಗಳು, ಹಸಿರು ಹುಲ್ಲಿನ ತಳಿಗಳು ಉಳಿಯದೆ ಭೂಮಿಯು ಬರಡಾಗಿ ಬರೀ ಮುಳ್ಳು ಕಂಟಿಗಳಿಂದಲೂ ಜಾನುವಾರುಗಳಿಗೆ ಉಪಯುಕ್ತವಲ್ಲದ ಸಸ್ಯಗಳಿಂದಲೂ ತುಂಬಿರುವುದಲ್ಲದೆ ಮಣ್ಣಿನ ಕೊರತಕ್ಕೆ ಎಡೆಕೊಟ್ಟು ಭೂಮಿಯ ಸಾರವು ನಿಸ್ಸಾರವಾಗುತ್ತಿದೆ. ಇದರ ಜೊತೆಗೆ ಮಳೆಯು ಕಡಿಮೆ ಆಗುತ್ತಿದ್ದು, ಹಸಿರು ಹುಲ್ಲಿನ ಮತ್ತು ಗಿಡಮರಗಳ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ಇಂತಹ ಪ್ರದೇಶಗಳನ್ನು ಗುರುತಿಸಿ ಅಭಿವೃದ್ಧಿ ಪಡೆಸುವುದು ಸರ್ಕಾರದ ಹಾಗೂ ಸ್ಥಳೀಯ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ. ಇತ್ತೀಚೆಗೆ ಸರ್ಕಾರ ಹಮ್ಮಿಕೊಂಡಿರುವ ಜಲಾನಯನ ಪ್ರದೇಶ ಅಭಿವೃದ್ಧಿ ಅಡಿಯಲ್ಲಿ ಕೆಲವು ಪ್ರದೇಶಗಳು ಅಭಿವೃದ್ಧಿಗೊಂಡಿದ್ದರೂ ಈ ದಿಸೆಯಲ್ಲಿ ಇನ್ನೂ ಬಹಳಷ್ಟು ಕೆಲಸವಾಗಬೇಕಿದೆ. ಸಂರಕ್ಷಿತ ಅರಣ್ಯ ಪ್ರದೇಶಗಳು ಸಾಮಾಜಿಕ ಅರಣ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಸ್ಥಳಗಳಲ್ಲಿ ಜಾನುವಾರು, ಕುರಿ, ಮೇಕೆಗಳನ್ನು ಮೇಯಿಸುಲು ಬಿಡುವುದಿಲ್ಲ. ಜಾನುವಾರುಗಳನ್ನು ಕಟ್ಟಿ ಮೇಯಿಸಬಹುದಾದರು ಕುರಿಗಳನ್ನು ಅರಣ್ಯಗಳ ಅಂಚು ಪ್ರದೇಶಗಳಲ್ಲಾದರೂ ಮೇಯಿಸಲು ಅವಕಾಶವಿರಬೇಕು. ತ್ವರಿತವಾಗಿ ಬೆಳೆಯುವ ಮೇವಿನ ಮರಗಳಾದ ಸುಬಾಬುಲ್, ಬ್ರಿಜ ಬಾಬುಲ್, ಬೋರೆ ಮರ, ಗೊಬ್ಬರದ ಗಿಡ, ಗಾಳಿ ಮರ, ಹಾಲವಾಣ, ಕ್ಯಾಲಿಯೊಂಡ್ರ, ಅಗಸೆ, ಸೇವರಿ, ಸರ್ವೆ, ಹೂವರಸೆ, ನುಗ್ಗೆ, ಹೆಬ್ಬೇವು, ಬಳ್ಳಾರಿ ಜಾಲಿ, ಬೆಂಗಾಲ ಜಾಲಿ ಹಾಗೂ ಲಂಟಾನಾ ಮತ್ತು ಹಿಪ್ಪುನೇರಳೆ ಇತ್ಯಾದಿ ಮರಗಳನ್ನು ಹೊಲಗಳ ಬದುಗಳು, ಕೆರೆಕುಂಟೆಗಳ ಅಕ್ಕಪಕ್ಕ ಪಾಳು ಭೂಮಿಯಲ್ಲಿ ಬೆಳೆಯಬೇಕು, ಈ ಮರಗಳಿಂದ ಎಲೆ ಚಿಗುರನ್ನು ತಂದು ಬಾಡಿಸಿ ಕುರಿಗಳಿಗೆ ಕೊಡಬಹುದು. ಸರ್ಕಾರದವರು ರೈತರ ಜಮೀನುಗಳಲ್ಲಿ ಒಡ್ಡುಗಳನ್ನು ನಿರ್ಮಿಸುತ್ತಿದ್ದು, ಈ ಒಡ್ಡುಗಳ ಮೇಲೆ ಹಾಗೂ ಬದಿಯಲ್ಲಿ ಹುಲ್ಲು ಹಾಗೂ ಮೇವಿನ ಮರಗಳನ್ನು ನೆಡುವುದರಿಂದ ಭೂಮಿಯ ಕೊರೆತ ತಪ್ಪುವುದಲ್ಲದೆ ಭೂಮಿಯ ಸಾರಜನಕದ ಅಂಶ ಸಹ ಹೆಚ್ಚುವುದು. ಆಹಾರ ಧಾನ್ಯಗಳ ಬೆಳೆಗಳನ್ನು ಕಟಾವು ಮಾಡಿದ ನಂತರ ಪರ್ಯಾಯ ಬೆಳೆಯಾಗಿ ಮೇವಿನ ಬೆಳೆಗಳನ್ನು ಬೆಳೆಯಬಹುದು. ಸರ್ಕಾರವು ಈಗಾಗಲೇ ಹಮ್ಮಿಕೊಂಡಿರುವಂತೆ ಜಲಾನಯನ ಪ್ರದೇಶ ಅಭಿವೃದ್ಧಿ ಅಡಿಯಲ್ಲಿ ಸುಧಾರಿಸಿದ ಹುಲ್ಲು ಹಾಗೂ ಮೇವಿನ ಮರಗಿಡಗಳನ್ನು ಬೆಳೆಸುವುದು; ಈ ಮರಗಿಡಗಳಿಂದ ಹಸಿರೆಲೆಗಳನ್ನು ತಂದು ಒಣಗಿಸಿ ಹದ ಮಾಡಿ ಕೂಡಿಟ್ಟು ಕೊಂಡು ಮೇವಾಗಿ ಕೊಡುವುದು; ಹುಲ್ಲುಗಾವಲು ಪುನಶ್ಚೇತನ ಹಾಗೂ ವಿಕಾಸಗೊಳಿಸುವ ಯೋಜನೆ, ವೀವು ತಳಿಗಳ ಬೀಜೋತ್ಪತ್ತಿ ಸಂಸ್ಕರಣೆ ಹಾಗೂ ಬೀಜಾಭಿವೃದ್ಧಿ ಯೋಜನೆ, ಮೇವು ನಿಧಿ, ಪೌಂಡರ್ ಮಿನಿಕಿಟ್ ವಿತರಣೆ ಯೋಜನೆ; ಮೇವು ಮರಗಳ ಸಸಿ ಬೆಳೆಸುವಿಕೆ ಸಂರಕ್ಷಣೆ ಹಾಗೂ ವಿತರಣೆ ಯೋಜನೆಗಳನ್ನು ಕ್ರಿಯಾತ್ಮಕಗೊಳಿಸುವುದು. ಪ್ರಚಲಿತ ವ್ಯವಸ್ಥೆಯಲ್ಲಿ ಹೆಚ್ಚುವರಿ ಕುರಿಗಳನ್ನು ರೈತರು ಸ್ಥಳಕ್ಕೆ ಬಂದು ಕೊಂಡುಕೊಳ್ಳುವ ಕಟುಕ ವ್ಯಾಪಾರಸ್ಥರಿಗೆ ಮಾರುತ್ತಿದ್ದಾರೆ. ಗ್ರಾಮಗಳಿಗೆ ಭೇಟಿ ನೀಡಿ ಕೊಂಡ ಕಟುಕರು ಗ್ರಾಮಸ್ಥರ ಮಾಂಸದ ಬೇಡಿಕೆಯನುಸಾರ ಅಲ್ಲಿಯೇ ಕಟಾವು ಮಾಡಬಹುದು. ಹತ್ತಿರದ ಪಟ್ಟಣಗಳಿಗೆ ಸಾಗಿಸಬಹುದು ಅಥವಾ ಅಲ್ಲಿಯೇ ವಧಾಗಾರಗಳಿಗೆ ಒದಗಿಸಬಹುದು ಅಥವಾ ಗುತ್ತಿಗೆದಾರರು ದಲ್ಲಾಳಿಗಳಿಗೆ ಮಾರಲೂಬಹುದು. ಗ್ರಾಹಕರ ಮಧ್ಯೆ ೩-೪ ದಲ್ಲಾಳಿಗಳಿರುತ್ತಾರೆ. ಕುರಿಗಳ ಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಸಹ ಕುರಿ ಮತ್ತು ಆಡುಗಳ ಸಂಘಟಿತ, ಸುವ್ಯವಸ್ಥಿತ ಮಾರುಕಟ್ಟೆ ಇಲ್ಲ. ಈ ಪದ್ಧತಿಯಲ್ಲಿ ಉತ್ಪತ್ತಿದಾರರಿಗೂ ಲಾಭವಿಲ್ಲ ಮತ್ತು ಉಪಯೋಗಿಸುವ ಗ್ರಾಹಕರಿಗೆ ಉತ್ತಮ ಮಾಂಸ ಸರಿಯಾದ ಬೆಲೆಗೆ ದೊರಕುತ್ತಿಲ್ಲ. ಹೆಚ್ಚು ಲಾಭಾಂಶ ಮಧ್ಯವರ್ತಿ ದಲ್ಲಾಳಿಗಳಿಗೆ ದಕ್ಕುತ್ತದೆ. ಕುರಿಗಳನ್ನು ವೈಜ್ಞಾನಿಕವಾಗಿ ಶರೀರ ತೂಕದ ಮಾಂಸದ ಇಳುವರಿ ಆಧಾರಿತವಲ್ಲದ ಬರೀ ಮೇಲ್ನೋಟದ ಶರೀರ ಪ್ರಮಾಣದ ಕಣ್ಣಳತೆಯ ಮೇಲೆ ಕೊಳ್ಳಲಾಗುತ್ತದೆ. ಮಧ್ಯವರ್ತಿಗಳ ಹಿಡಿತದಿಂದ ಕುರಿ ಮತ್ತು ಆಡುಗಳ ಉತ್ಪಾದಕನನ್ನು ಮುಕ್ತಗೊಳಿಸಿ ಅವರಿಗೆ ನ್ಯಾಯವಾದ ಬೆಲೆ ದಕ್ಕುವಂತೆ ಮಾಡಬೇಕಾದರೆ ಸುವ್ಯವಸ್ಥಿತ ಮಾರುಕಟ್ಟೆಯನ್ನು ಕುರಿ ಉತ್ಪಾದಕರ ಸಂಘಗಳ ಮೂಲಕ ಏರ್ಪಾಡು ಮಾಡಬೇಕಾದ ಅಗತ್ಯವಿದೆ.

ಗ್ರಾಮೀಣ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಹೇಗೆ ಸಹಕಾರಿ[ಬದಲಾಯಿಸಿ]

ಕುರಿ ಮತ್ತು ಕುರಿ ಉತ್ಪನ್ನಗಳು ರಾಜ್ಯದ ಆರ್ಥಿಕ ವಹಿವಾಟಿನಲ್ಲಿ ಬಹುಮುಖ್ಯ ಸ್ಥಾನವನ್ನು ಪಡೆದಿದ್ದು, ರಾಜ್ಯದ ವರಮಾನಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡುತ್ತಿದೆ. ರಾಜ್ಯದಲ್ಲಿ ೨೦೦೬-೦೭ನೇ ಸಾಲಿನಲ್ಲಿ ಒಟ್ಟು ಅಂದಾಜು ೩೦.೮೩ ಟನ್ ಕುರಿ ಮಾಂಸದ ಉತ್ಪಾದನೆಯಾಗಿದ್ದು, ಇದರ ಮೌಲ್ಯ ರೂ. ೪೮.೦೪ ಲಕ್ಷಗಳಾಗಿರುತ್ತದೆ. ಕುರಿಗಳ ಮಾಂಸವು ಉತ್ತಮ ಗುಣಮಟ್ಟದಾಗಿದ್ದು, ದೇಶದ ಬಹು ದೊಡ್ಡ ಮಾಂಸಹಾರಿ ವರ್ಗದ ಆಹಾರದ ಮುಖ್ಯ ಅಂಶವಾಗಿದ್ದು, ಅಪೌಷ್ಟಿಕತೆಯನ್ನು ನಿವಾರಿಸುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದೆ. ಇದೇ ಅವಧಿಯಲ್ಲಿ ಒಟ್ಟು ೫೫೮೫ ಟನ್ ಉಣ್ಣೆ ಉತ್ಪಾದಿಸಲಾಗಿದ್ದು, ಇದರ ಮೌಲ್ಯ ಪ್ರಸ್ತುತ ಮಾರುಕಟ್ಟೆ ದರದಲ್ಲಿ ೫.೫೮ ಕೋಟಿ ರೂಪಾಯಿಗಳಾಗಿರುತ್ತದೆ. ಈ ಉಣ್ಣೆಯನ್ನು ಕಂಬಳಿ, ರತ್ನಗಂಬಳಿ, ಉಣ್ಣೆ ಶಾಲು, ಡ್ರಗೇಟ್ ಟೋಪಿ ಮುಂತಾದ ಉಣ್ಣೆ ವಸ್ತುಗಳನ್ನು ತಯಾರಿಸಲು ಬಳಸಲಾಗುತ್ತದೆ. ಕುರಿಗಳನ್ನು ಚಲಿಸುವ ಬ್ಯಾಂಕುಗಳೆಂದು ಅಥವಾ ನಿಧಿಯೆಂದು ಕರೆಯಲಾಗುತ್ತದೆ. ಏಕೆಂದರೆ, ರೈತ ಬೇಕೆಂದಾಗ ಕುರಿಗಳನ್ನು ಮಾರಿ ತಕ್ಷಣ ಹಣ ಪಡೆಯಬಹುದು. ಆದರೆ ವ್ಯವಸಾಯದಿಂದಾಗಲಿ ಅಥವಾ ತೋಟಗಾರಿಕೆಯಿಂದಾಗಲಿ ಈ ರೇತಿ ದಿಢೀರನೆ ಹಣ ಗಳಿಸಲಾಗುವುದಿಲ್ಲ. ನಿರುದ್ಯೋಗ ನಿವಾರಣೆ ಹಾಗೂ ರೈತರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸಲು ಕೈಗೊಂಡ ಕಾರ್ಯಕ್ರಮಗಳಲ್ಲಿ ಕುರಿ ಘಟಕ ಸ್ಥಾಪನೆಯೂ ಸಹ ಒಂದು ಇದಕ್ಕೆ ಮುಖ್ಯ ಕಾರಣವೆಂದರೆ ಕಡಿಮೆ ಬಂಡವಾಳವನ್ನು ಬಳಸಿಕೊಂಡು ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸಲು ಮತ್ತು ಲಾಭವನ್ನು ಪಡೆಯಲು ಸಹಾಯವಾಗುವುದು. ಇದರಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಜನಾಂಗಗಳಲ್ಲೂ ಲಾಭದಾಯಕ ಕುರಿ ಸಾಕಾಣಿಕೆಯ ಮುಖಾಂತರ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ೨೦ ಕುರಿ ಮತ್ತು ಒಂದು ಟಗರಿನ ಘಟಕ ಹಮ್ಮಿಕೊಳ್ಳಲು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳ ಮುಖಾಂತರ ಸಾಲದ ವ್ಯವಸ್ಥೆಯನ್ನು ಸಹ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಮತ್ತು ಕ್ಷೇತ್ರಾಭಿವೃದ್ಧಿ ಅಧಿಕಾರಿಗಳ ಮೂಲಕ ಮಾಡಲಾಗಿದೆ. ಕುರಿ ಸಾಕಾಣಿಕೆ ಉದ್ಯಮವನ್ನು ಸಹಕಾರ ತತ್ವದ ಮೇಲೆ ಮಾಡಲು ಸಾಧ್ಯವೇ? ರಾಜ್ಯ ಸರ್ಕಾರವು ಕುರಿ ಅಭಿವೃದ್ಧಿಗಾಗಿ ಕರ್ನಾಟಕ ಕುರಿ ಮತ್ತು ಕುರಿ ಉತ್ಪನ್ನಗಳ ಅಭಿವೃದ್ಧಿ ಮಂಡಳಿ ಹಮ್ಮಿಕೊಂಡಿರುವ ಆರು ಅಂಶಗಳ ಕಾರ್ಯಕ್ರಮಗಳಲ್ಲಿ ಒಂದಾದ ಕುರಿ ಸಾಕಾಣಿಕೆದಾರರ ಸಹಕಾರ ಸಂಘಗಳ ಸ್ಥಾಪನೆ ಯೋಜನೆಗೆ ಮಂಜೂರಾತಿ ನೀಡಿದೆ ಹಾಗೂ ಪ್ರತಿ ಸಂಘಕ್ಕೆ ರೂ. ೧೦,೦೦೦/- ಷೇರು ಬಂಡವಾಳವಾಗಿ ಮಾರುಕಟ್ಟೆ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ನೀಡಲು ಮಂಜೂರಾತಿ ನೀಡಿದೆ. ಅದರಂತೆ ಸದರಿ ಕುರಿ ಸಾಕಾಣಿಕೆದಾರರ ಸಹಕಾರ ಸಂಘಗಳನ್ನು ಸ್ಥಾಪಿಸಲು ಸೂಕ್ತ ಕ್ರಮಗಳನ್ನು ಕೈಗೊಳಲು ಆಯಾ ಜಿಲ್ಲೆಗಳ ಸಹಕಾರ ಸಂಘಗಳ ಇಲಾಖೆಯ ಉಪ ನಿಬಂಧಕರಿಗೆ ಹಾಗೂ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರುಗಳನ್ನು ಕೋರಲಾಗಿದೆ. ಈ ಸಂಘಗಳ ಮುಖ್ಯ ಉದ್ದೇಶ ಕುರಿ ಉಣ್ಣೆಯ ಮಾರುಕಟ್ಟೆಯನ್ನು ವ್ಯವಸ್ಥಿತಗೊಳಿಸುವುದು, ಕುರಿಗಾರರಿಗೆ ತಾಂತ್ರಿಕತೆ ಹಾಗೂ ಆರ್ಥಿಕ ಸವಲತ್ತುಗಳನ್ನು ಒದಗಿಸುವುದು, ಯಾಂತ್ರೀಕೃತ ಉಣ್ಣೆ ಕಟಾವು ಸೌಲಭ್ಯಗಳನ್ನು ಕಲ್ಪಿಸುವುದು.

ಬಾಗಕೋಟ ಕುರಿ ಮತ್ತು ಉಣ್ಣೆ ನಿಗಮ ಸಹಕಾರಿ ಸಂಘ[ಬದಲಾಯಿಸಿ]

ಗಳು[ಬದಲಾಯಿಸಿ]