ಕಾರ್ಖಾನೆಯ ಸಂಘಟನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಂದು ಕಾರ್ಖಾನೆಯ ಉತ್ಪಾದನ ಕಾರ್ಯ ಸಮರ್ಪಕವಾಗಿ ನಡೆಯಬೇಕೆಂಬ ಉದ್ದೇಶದಿಂದ ಕೆಲಸ ಮಾಡುವ ಎಲ್ಲ ವ್ಯಕ್ತಿಗಳ ಕೌಶಲ ಮತ್ತು ಸಾಮಥ್ರ್ಯಗಳು ಸಂಪೂರ್ಣವಾಗಿ ಉಪಯೋಗಕ್ಕೆ ಬರುವಂತೆ ಮತ್ತು ಅವರ ದುಡಿಮೆಯಲ್ಲಿ ಸುಸಂಘಟಿತವಾಗಿ ಮತ್ತು ಸುಗಮವಾಗಿ ಕ್ರೋಡೀಕೃತವಾಗುವಂತೆ ಏರ್ಪಡಿಸಿದ ಸುವ್ಯವಸ್ಥೆ (ಫ್ಯಾಕ್ಟರಿ ಆರ್ಗನೈಸೇóಷನ್). ಬಂಡವಾಳದ ಸದ್ವಿನಿಯೋಗ, ಉದ್ಯೋಗನಿರ್ಮಾಣ, ಬಹಿರಂಗ ಪೇಟೆಯಲ್ಲಿ ಮಾರಾಟ ಮಾಡಬೇಕಾಗಿರುವ ಪದಾರ್ಥಗಳ ತಯಾರಿಕೆ-ಎಲ್ಲಕ್ಕೂ ಇಂದು ತಾಂತ್ರಿಕ ಪರಿಣತಿ ಇರುವುದು ಅವಶ್ಯ. ತಯಾರಿಸಬೇಕಾದ ಪದಾರ್ಥಗಳ ಸ್ವರೂಪದ ನಿಷ್ಕರ್ಷೆಯಷ್ಟಕ್ಕೇ ಈ ಪರಿಣತಿ ಸೀಮಿತವಲ್ಲ. ಅವುಗಳ ತಯಾರಿಕೆಗೆ ಅವಶ್ಯವಾದ ಉಪಕರಣಗಳನ್ನೂ ವ್ಯಕ್ತಿಗಳನ್ನೂ ಹೊಂದಿಸುವುದೂ ಅವಶ್ಯ. ಕೆಲವು ದಶಕಗಳ ಹಿಂದೆ ಅನುಸರಣೆಯಲ್ಲಿದ್ದ ಸ್ಥೂಲ ಸರಳ ವಿಧಾನಗಳು ಅತ್ಯಂತ ಸಂಕೀರ್ಣವಾದ ಮತ್ತು ಸ್ಪರ್ಧಾತ್ಮಕವಾದ ಆಧುನಿಕ ಕೈಗಾರಿಕೆಗಳಿಗೆ ಪ್ರಯೋಜನಕ್ಕೆ ಬರುವುದಿಲ್ಲ. ಇಂದಿನ ಕೈಗಾರಿಕೆಗಳಿಗೆ ಸೂಕ್ತವಾದ ಸಂಘಟನೆ ವಿಧಾನಗಳ ಬಗ್ಗೆ ಶಾಸ್ತ್ರಿಯ ವಿವೇಚನೆ ವಿಪುಲವಾಗಿ ನಡೆದಿದೆ.

ಕಾರ್ಖಾನೆಯ ಸಂಘಟನೆ[ಬದಲಾಯಿಸಿ]

ಪ್ರತಿಯೊಂದು ಕಾರ್ಖಾನೆಯ ಸಂಘಟನೆಯೂ ಸರಕು ತಯಾರಿಕಾ ವಿಧಾನ, ಹಣಕಾಸು ವ್ಯವಹಾರ, ಆಡಳಿತ ವಿಧಾನ, ಸಂಸ್ಥೆಯ ಮಾಲೀಕರ ಧ್ಯೇಯ ಧೋರಣೆಗಳು- ಇವನ್ನು ಅನುಸರಿಸಿರುತ್ತದೆ. ಆದರೂ ಮುಖ್ಯವಾಗಿ ಕಾರ್ಖಾನೆಯ ಸಂಘಟನ ವಿಧಾನ ಹೆಚ್ಚು ಖರ್ಚಿಲ್ಲದ್ದಾಗಿ, ಕಾರ್ಖಾನೆ ದಕ್ಷತೆಯಿಂದ ಕೂಡಿ, ಸಂಸ್ಥೆಯ ಮೂಲ ತತ್ತ್ವಗಳನ್ನೂ ಧ್ಯೇಯಧೋರಣೆಗಳನ್ನೂ ಎಡಬಿಡದೆ ಪಾಲಿಸಿ, ಹೊಸ ವಿಚಾರಗಳಿಗೆ ಮತ್ತು ತತ್ತ್ವಗಳಿಗೆ ಆಸ್ಪದ ಕೊಟ್ಟು ಕಾರ್ಯ ಸಾಧಕವಾಗುತ್ತಿರಬೇಕು.

ಯಶಸ್ವಿ ಸಂಘಟನೆಗೆ ಸಂಬಂದಿಸಿದ ಮುಖ್ಯ ಅಂಶಗಳು[ಬದಲಾಯಿಸಿ]

1 ಕಾರ್ಖಾನೆಯ ಹಣಕಾಸು ವ್ಯವಹಾರ, ತಯಾರಿಕೆ ವಿಧಾನ, ಗುಣಮಟ್ಟ, ವ್ಯಾಪಾರ ಮತ್ತು ನಿತ್ಯದ ಆಡಳಿತ-ಇವಕ್ಕೆ ಸಂಬಂಧಿಸಿದ ರೀತಿನೀತಿಗಳ ರೂಪಣ. ಇದು ಕಾರ್ಖಾನೆಯ ಒಡೆಯರ ಕಾರ್ಯಭಾರ. 2 ಕಾರ್ಖಾನೆಯ ಒಡೆಯರು ರೂಪಿಸಿದ ರೀತಿನೀತಿಗಳನ್ನು ಆಡಳಿತ ವರ್ಗಕ್ಕೆ ಸಂಬಂಧಿಸಿದ ಅಧಿಕಾರಿಗಳು ಉತ್ಪಾದನಕಾರ್ಯದ ಪ್ರತಿ ಘಟ್ಟದಲ್ಲಿಯೂ ಪ್ರತಿ ಕಾರ್ಯಕ್ಷೇತ್ರದಲ್ಲಿಯೂ ಅಳವಡಿಸಿಕೊಂಡು ಅದನ್ನು ಉತ್ತಮಪಡಿಸಲು ಸದಾ ಪ್ರಯತ್ನಿಸಬೇಕು. 3 ಅಧಿಕಾರವರ್ಗದವರು ಅನುಷ್ಠಾನಕ್ಕೆ ತಂದ ರೀತಿನೀತಿಗಳನ್ನೂ ಅವುಗಳ ಸಾಧಕಬಾಧಕಗಳನ್ನೂ ಒಳಗೊಂಡ ವರದಿಗಳು ಒಡೆಯರಿಗೆ ತಲುಪುತ್ತಿರಬೇಕು. 4 ಪ್ರತಿಯೊಂದು ಕಾರ್ಯಕ್ಷೇತ್ರಕ್ಕೂ ಕಾರ್ಯವಿಧಾನಕ್ಕೂ ಒಬ್ಬ ಅಧಿಕಾರಿಯನ್ನು ಜವಾಬ್ದಾರನನ್ನಾಗಿ ಮಾಡಿ, ಅವನ ಹಕ್ಕುಬಾದ್ಯತೆಗಳನ್ನೂ ನಿರ್ದಿಷ್ಟವಾಗಿ ಗೊತ್ತುಪಡಿಸಬೇಕು. ಒಬ್ಬನ ಹಕ್ಕುಬಾಧ್ಯತೆಗಳಿಂದ ಇನ್ನೊಬ್ಬನ ಹಕ್ಕುಬಾಧ್ಯತೆಗೆ ಅಡಚಣೆಯುಂಟಾಗದಂತಿರಬೇಕು. 5 ಒಂದು ಕಾರ್ಯಕ್ಷೇತ್ರದ ಜವಾಬ್ದಾರಿಯನ್ನು ಒಬ್ಬ ಅಧಿಕಾರಿಗೆ ವಹಿಸಿಕೊಟ್ಟ ಮೇಲೆ, ಕಾರ್ಯನಿರ್ವಹಣೆ ಸಮರ್ಪಕವಾಗಿದೆಯೆ ಇಲ್ಲವೆ ಎಂಬುದನ್ನು ಪರಿಶೀಲಿಸಲು, ಸೂಕ್ತವಾದ ಮೇಲ್ವಿಚಾರಣೆ ವಿಮರ್ಶೆಗಳನ್ನು ಎಲ್ಲ ಕಾರ್ಯಕ್ಷೇತ್ರಗಳಲ್ಲೂ ಆಗಿಂದಾಗ್ಗೆ ನಡೆಸುತ್ತಿರಬೇಕು. 6 ಕಾರ್ಖಾನೆಯಲ್ಲಿ ಪದಾರ್ಥಗಳ ಉತ್ಪಾದನೆ ಸಮಂಜಸವಾಗಿರಬೇಕಾದರೆ ಅದಕ್ಕೆ ಅಗತ್ಯವಾದ ಸಾಮಗ್ರಿಯನ್ನು ಕೊಳ್ಳುವುದಕ್ಕೂ ಹೆಚ್ಚಿನ ಗಮನ ಕೊಡಬೇಕು. ಇದಕ್ಕಾಗಿ ಸ್ಥಾಪಿಸಲಾದ ಕೊಳ್ಳಿಕೆ ಇಲಾಖೆ ಅನುಸರಿಸಬೇಕಾದ ಮೂಲ ತತ್ತ್ವಗಳನ್ನೂ ನೀತಿನಿಯಮಗಳನ್ನೂ ರೂಪಿಸಬೇಕು. 7 ಕಾರ್ಖಾನೆಯಲ್ಲಿ ತಯಾರಾದ ಪದಾರ್ಥಗಳು ಗ್ರಾಹಕರಿಗೆ ತಲಪಿ, ಅವರ ಮನಮೊಪ್ಪುವಂತಿರಲು, ದಕ್ಷತೆಯಿಂದ ಕೂಡಿದ ಮಾರಾಟ ಮತ್ತು ವಿತರಣ ವಿಭಾಗಗಳಿರಬೇಕು. ಮಾರಾಟ ಮತ್ತು ವಿತರಣೆಯಲ್ಲಿ ಸೂಕ್ತ ನೀತಿನಿಯಮಗಳನ್ನು ಪಾಲಿಸುವುದು ಅವಶ್ಯ. 8 ವಿವಿಧ ಕಾರ್ಯಕ್ಷೇತ್ರಗಳಿಗೆ ಬೇಕಾಗುವ ಬಗೆಬಗೆಯ ತಜ್ಞರನ್ನೂ ಕೆಲಸಗಾರರನ್ನೂ ಕಾರ್ಖಾನೆಗೆ ನೇಮಿಸಿಕೊಳ್ಳುವಾಗ ಅನುಸರಿಸಬೇಕಾದ ನೀತಿ ಮತ್ತು ವಿಧಾನಗಳ ನಿಷ್ಕರ್ಷೆಯಾಗಬೇಕು. 9 ವಿವಿಧ ಕಾರ್ಯಕ್ಷೇತ್ರಗಳಿಗೆ ಸಂಬಂಧಿಸಿದ ಅಧಿಕಾರವರ್ಗದವರ ಹೊಣೆಗಾರಿಕೆಯನ್ನು ತೋರಿಸುವ ನಕ್ಷೆಯೊಂದನ್ನು ತಯಾರಿಸಿ ಅದನ್ನು ಸೂಕ್ತ ಸ್ಥಳದಲ್ಲಿ ಪ್ರಕಟಿಸಬೇಕು. 10 ಕಾರ್ಖಾನೆಯಲ್ಲಿ ತಯಾರಾಗುವ ಪದಾರ್ಥದ ಉತ್ಪಾದನ ವಿಧಾನ, ಕಾರ್ಖಾನೆಗೆ ಬೇಕಾಗುವ ಸಾಮಗ್ರಿಯ ಕೊಳ್ಳಿಕೆ, ಪದಾರ್ಥಗಳ ಮಾರಾಟ-ಇವನ್ನು ಮೊದಲೇ ಆಲೋಚಿಸಿ ಸೂಕ್ತ ಸಲಹೆ ನೀಡುವ ಯೋಜನಾವಿಭಾಗವಿರಬೇಕು. 11 ಹಣಕಾಸು ಇಲಾಖೆ, ವೆಚ್ಚನಿರ್ಣಯ ಇಲಾಖೆ ಮತ್ತು ಅಂಕಿ-ಅಂಶ ಇಲಾಖೆಗಳು ಇದ್ದು, ಇವು ಕಾರ್ಯನಿರ್ವಹಣೆಯ ವರದಿಗಳನ್ನು ಮಾಲೀಕರಿಗೆ ಆಗಿಂದಾಗ್ಗೆ ಒದಗಿಸುತ್ತಿರಬೇಕು.[೧]

ಸಂಘಟನೆಯ ಪ್ರರೂಪಗಳು[ಬದಲಾಯಿಸಿ]

ಕಾರ್ಖಾನೆ ಸಂಘಟನೆಯ ಅತ್ಯಂತ ಹಳೆಯ ಪ್ರರೂಪವೆಂದರೆ ಸೇನಾ ಅಥವಾ ಶ್ರೇಣಿ ಸಂಘಟನೆ. ಇದು ಸೇನಾವ್ಯವಸ್ಥೆಯ ಮುಖ್ಯ ಲಕ್ಷಣವೆಂಬ ಕಾರಣದಿಂದ ಇದಕ್ಕೆ ಈ ಹೆಸರು ಬಂದಿದೆ. ಆದರೆ ಈಗ ಇದೊಂದು ಅಪಪ್ರಯೋಗ. ಏಕೆಂದರೆ ಕೈಗಾರಿಕೆ ಮತ್ತು ಇತರ ಸಂಘಟನೆಗಳಲ್ಲಿ ಆಗಿರುವಂಥ ಮಾರ್ಪಾಡುಗಳು ಸೈನ್ಯವ್ಯವಸ್ಥೆಗಳಲ್ಲಿ ಕೂಡ ಸಂಭವಿಸಿವೆ.

ಕಾರ್ಖಾನೆಯ ಮಹಾ ವ್ಯವಸ್ಥಾಪಕ[ಬದಲಾಯಿಸಿ]

ಕಾರ್ಖಾನೆಯ ಮಹಾ ವ್ಯವಸ್ಥಾಪಕನ (ಜನರಲ್ ಮ್ಯಾನೇಜರ್) ಹೊಣೆಗಳೂ ಕರ್ತವ್ಯಗಳೂ ಅತಿ ಭಾರವಾಗಿ ಸಂಭವಿಸಿದಾಗ ಅವನ ಕೈಕೆಳಗೆ ಮೇಲ್ವಿಚಾರಕನೊಬ್ಬನನ್ನು (ಸೂಪರಿಂಟೆಂಡೆಂಟ್) ನೇಮಿಸಲಾಯಿತು. ಮಹಾ ವ್ಯವಸ್ಥಾಪಕನ ಕೆಲವು ಕರ್ತವ್ಯಗಳನ್ನು ಅವನಿಗೆ ವಹಿಸಿಕೊಡಲಾಯಿತು. ಕಾರ್ಖಾನೆ ಇನ್ನೂ ಬೆಳೆದು, ಅದರ ಹೊಣೆಗಳೂ ಕರ್ತವ್ಯಗಳೂ ಮೇಲ್ವಿಚಾರಕನ ದೈಹಿಕ ಸಾಮಥ್ರ್ಯವನ್ನೂ ಮೀರಿ ಹೋದಾಗ, ಅವನ ಕೈಕೆಳಗೆ ಕಾರ್ಯಪ್ರಮುಖರನ್ನು (ಫೋರ್‍ಮೆನ್) ನೇಮಿಸಲಾಯಿತು. ವಿವಿಧ ಇಲಾಖೆಗಳ ನಿರ್ವಹಣೆಯ ಕೆಲಸದಲ್ಲಿ ಮೇಲ್ವಿಚಾರಕನಿಗೆ ನೆರವಾಗುವುದು ಇವರ ಕೆಲಸ. ಕೆಲಸಗಾರರು ಕಾರ್ಯಪ್ರಮುಖರಿಗೂ ಕಾರ್ಯಪ್ರಮುಖರು ಮೇಲ್ವಿಚಾರಕನಿಗೂ ಅವನು ಮಹಾ ವ್ಯವಸ್ಥಾಪಕರಿಗೂ ಹೊಣೆ. ಕಾರ್ಖಾನೆಯ ಕಾರ್ಯವನ್ನು ಎರಕ (ಫೌಂಡ್ರಿ), ಕುಲುವೆ (ಫೋರ್ಜ್), ಯಂತ್ರ ಶಾಲೆ (ಮಷೀನ್ ಷಾಪ್) ಮುಂತಾಗಿ ನಾನಾ ಘಟಕಗಳಾಗಿ ವಿಂಗಡಿಸಿ, ಒಂದೊಂದು ಘಟಕಕ್ಕೂ ಒಬ್ಬೊಬ್ಬ ಕಾರ್ಯಪ್ರಮುಖನನ್ನು ನೇಮಿಸುವುದರಿಂದ ಶಿಸ್ತಿಗೇನೂ ಭಂಗ ಬರುವುದಿಲ್ಲ. ಏಕೆಂದರೆ ಎಲ್ಲ ನಿರ್ದೇಶಗಳೂ ಸೂಚನೆಗಳೂ ಬರುವುದು ಮೇಲಿನಿಂದ. ಒಂದೊಂದು ಹಂತದಲ್ಲಿರುವ ಎಲ್ಲರೂ ಸಮಾನರು. ಅವರು ಪರಸ್ಪರವಾಗಿ ಯಾವ ನಿರ್ದೇಶವನ್ನೂ ನೀಡುವುದೂ ಎಲ್ಲ, ಪಡೆಯುವುದೂ ಇಲ್ಲ. ಅವನವನ ಕೈಕೆಳಗಿನ ಕೆಲಸಗಾರರಿಗೆ ಅವನವನು ನಿರ್ದೇಶ ನೀಡುತ್ತಾನೆ. ಮಾನಸಿಕ ಮತ್ತು ಶಾರೀರಿಕ ಕಾಯಾಗಳು ಪ್ರತ್ಯೇಕಿಸಲ್ಪಟ್ಟಿರುತ್ತದೆ. ಆಡಳಿತಕ್ಕೆ ಸಂಬಂಧಿಸಿದ ಮಾನಸಿಕ ಕಾರ್ಯ ಬಹುತೇಕ ನಡೆಯುವುದು ಮೇಲಣ ಮಟ್ಟಗಳಲ್ಲಿ. ಈ ಬಗೆಯ ವಿಂಗಡಣೆಯಾಗಿರುವುದು ಕೇವಲ ಆಕಸ್ಮಿಕವೇ ಹೊರತು ಇದು ಯಾವ ತಾರ್ಕಿಕ ಅಧ್ಯಯನದ ಪರಿಣಾಮವೂ ಅಲ್ಲ. ಪ್ರತಿಯೊಬ್ಬನೂ, ಅವನ ಅಧಿಕಾರದ ಮಟ್ಟ ಯಾವುದೇ ಇರಲಿ, ತನ್ನ ಸ್ಥಾನಕ್ಕೆ ಅನುಗುಣವಾಗಿ ದತ್ತವಾದ ಕರ್ತವ್ಯಗಳನ್ನು ನಿರ್ವಹಿಸಲು ಅವನಿಗೆ ಸಂಪೂರ್ಣ ಅಧಿಕಾರವುಂಟು. ಪ್ರತಿಯೊಬ್ಬನ ಹೊಣೆ, ಅಧಿಕಾರ ಮತ್ತು ಕರ್ತವ್ಯಗಳ ನಿಷ್ಕರ್ಷೆಯಾಗಿರುವುದರಿಂದ ಯಾವ ಬಗೆಯ ಭಿನ್ನಾಭಿಪ್ರಾಯಗಳಿಗೂ ಅವಕಾಶವಿಲ್ಲ. ಆದರೆ ಈ ಬಗೆಯ ಸಂಘಟನೆಯ ಇತಿಮಿತಿಗಳು ಅನೇಕ. ಕಾರ್ಖಾನೆಯ ಗಾತ್ರ ಬೆಳೆದಂತೆಲ್ಲ ಒಬ್ಬೊಬ್ಬ ಅಧಿಕಾರಿಯ ಮೇಲೂ ಬಗೆಬಗೆಯ ಕರ್ತವ್ಯಗಳ ಹೊರೆಯೇ ಬೀಳುತ್ತದೆ. ಮೇಲ್ವಿಚಾರಕನಾದವನು ಮೊದಲಿನಂತೆಯೇ ಆಡಳಿತ ಮತ್ತು ನಕಾಸೆಯ ಕಾರ್ಯಗಳನ್ನು ಏಕಪ್ರಕಾರವಾಗಿ ನಿರ್ವಹಿಸಲಾರ. ಏಕೆಂದರೆ ಇವೆರಡೂ ಭಿನ್ನರೀತಿಯವು. ಕೆಲಸಗಾರರಿಗೆ ನೀಡಬಹುದಾದ ಸೂಚನೆಗಳು ಕೂಡ ತೀರ ಸಂಗ್ರಹವಾಗಿರಬೇಕಾಗುತ್ತದೆ. ಅವನ್ನು ಅರ್ಥಮಾಡಿಕೊಂಡು ಯಥೋಚಿತವಾಗಿ ಕಾರ್ಯಪ್ರವೃತ್ತನಾಗಬೇಕಾದ ಕೆಲಸಗಾರನ ಜ್ಞಾನ, ಅನುಭವ ಮತ್ತು ಕುಶಲತೆಗಳನ್ನೇ ಕೆಲಸದ ಯಶಸ್ಸು ಅವಲಂಬಿಸಿರುತ್ತದೆ. ಈ ವಿಧಾನದಲ್ಲಿ ಇಡೀ ಸಂಘಟನೆ ನಿಂತಿರುವುದು ಕೆಲವೇ ಮಂದಿ ಸಮರ್ಥರ ಮೇಲೆ. ಅವರಲ್ಲಿ ಯಾರೊಬ್ಬರು ಹೋದರೂ ಇಡೀ ಉತ್ಪಾದನೆಯ ಭವನವೇ ಕುಸಿದು ಬೀಳಬಹುದು. ಆದ್ದರಿಂದ ಸೇನಾ ಅಥವಾ ಶ್ರೇಣಿ ಸಂಘಟನೆ ವಿಧಾನ ತನ್ನ ಶುದ್ಧ ರೂಪದಲ್ಲಿ ಜಾರಿಯಲ್ಲಿರುವುದು ಬಲು ವಿರಳ. ಉತ್ಪಾದನೆಯ ಗಾತ್ರ ಕಡಿಮೆಯಿದ್ದು, ಅದಕ್ಕೆ ವ್ಯಾಪಕವಾದ ವ್ಶೆಜ್ಞಾನಿಕ ತಳಹದಿ ಇಲ್ಲದಲ್ಲಿ ಮಾತ್ರ ಈ ವಿಧಾನವನ್ನು ಅನುಸರಿಸಲಾಗುತ್ತದೆ.[೨]

ಮೇಲೆ ಹೇಳಿದಂತೆ ಈ ವಿಧಾನದಲ್ಲಿ ನಿರ್ದೇಶ ಅಥವಾ ಸೂಚನೆಗಳ ಹರಿವು ಉದಗ್ರ (ವರ್ಟಿಕಲ್) ರೀತಿಯದು[ಬದಲಾಯಿಸಿ]

ಅದು ಹೀಗೆ :

 

ಪ್ರರೂಪ ಶ್ರೇಣಿ ಮತ್ತು ಸಿಬ್ಬಂದಿ ಸಂಘಟನೆ[ಬದಲಾಯಿಸಿ]

ಸಂಘಟನೆಯ ಎರಡನೆಯ ಪ್ರರೂಪ ಶ್ರೇಣಿ ಮತ್ತು ಸಿಬ್ಬಂದಿ ಸಂಘಟನೆ. ಕಾರ್ಖಾನೆಯ ಗಾತ್ರವೂ ವ್ಶೆಜ್ಞಾನಿಕ ತಳಹದಿಯೂ ಬೆಳೆದಂತೆ ವ್ಯವಸ್ಥಾಪಕನ ನೆರವಿಗೆ ಅನೇಕ ಮಂದಿ ತಜ್ಞರು ಆಗಮಿಸಿದರು. ಎಂಜಿನಿಯರುಗಳು, ರಸಾಯನಶಾಸ್ತ್ರಜ್ಞರು, ಸಾಮಗ್ರಿ ಕ್ರ್ರಯ ನಿಷ್ಣಾತರು, ಉಪಕರಣ ತಜ್ಞರು, ಉತ್ಪಾದನ ಪರಿಣತರು ಮುಂತಾದ ಅನೇಕರನ್ನು ಆಧುನಿಕ ಕಾರ್ಖಾನೆಗಳಲ್ಲಿ ಕಾಣಬಹುದು. ಇವರ ಆಗಮನದಿಂದ ಹೊಸ ಬಗೆಯ ಸಮಸ್ಯೆಗಳು ಹುಟ್ಟುಕೊಂಡುವು. ಈ ಸಮಸ್ಯೆಗಳನ್ನು ಪರಿಹರಿಸಲು ಅನುಸರಿಸಲಾಗಿರುವ ವಿಧಾನಗಳು ಎರಡು ಬಗೆ: ತಜ್ಞರನ್ನು ಕೇವಲ ಸಲಹೆಗಾರನನ್ನಾಗಿ ನೇಮಿಸಿಕೊಳ್ಳುವುದು ಮೊದಲನೆಯ ಬಗೆ. ಅವರಿಗೆ ವ್ಯಕ್ತವಾದ ಯಾವ ಅಧಿಕಾರಗಳೂ ಇರುವುದಿಲ್ಲ. ತಮಗೆ ಸಂಬಂಧಿಸಿದ ವಿಚಾರಗಳಲ್ಲಿ ಕೂಡ ಅವರು ಕೆಲಸಗಾರರಿಗೆ ಯಾವ ನಿರ್ದೇಶಗಳನ್ನೂ ನೀಡಲಾರರು. ಕಾರ್ಯನಿರ್ವಹಣೆಗೆ ಸಂಬಂಧಿಸಿದ ಯಾವ ಆದೇಶವೇ ಆಗಲಿ ಬರಬೇಕಾದರೆ ಶ್ರೇಣಿಯ ಯಾರಾದರೊಬ್ಬ ಅಧಿಕಾರಿಯ ಮುಖೇನ. ಅದು ಹೀಗಿದೆ :

ಯಂತ್ರಶಾಲೆಯ ತಾಂತ್ರಿಕ ವಿಧಾನ[ಬದಲಾಯಿಸಿ]

ಯಂತ್ರಶಾಲೆಯ ತಾಂತ್ರಿಕ ವಿಧಾನಗಳ ಬಗ್ಗೆ ಕಾರ್ಯಪ್ರಮುಖನಿಗೆ ಸಲಹೆಗಳನ್ನು ನೀಡಲು ಒಬ್ಬ ವಿಧಾನಜ್ಞನನ್ನೂ (ಪ್ರೋಸೆಸ್ ಸ್ಪೆಷಲಿಸ್ಟ್) ಉತ್ಪಾದನೆಯ ಬಗ್ಗೆ ಸಲಹೆಗಳನ್ನು ನೀಡಲು ಒಬ್ಬ ಉತ್ಪಾದನ ತಜ್ಞನನ್ನೂ (ಪ್ರೊಡಕ್ಷನ್ ಸ್ಟೆಷಲಿಸ್ಟ್) ನೇಮಿಸಬಹುದು. ಇದೇ ರೀತಿ ರಸಾಯನ ವಿಜ್ಞಾನಿ, ಎಂಜಿನಿಯರ್ ಮುಂತಾಗಿ ಅನೇಕ ತಜ್ಞರ ನೇಮಕಕ್ಕೆ ಅವಕಾಶವುಂಟು, ಇವರೆಲ್ಲರೂ ಮೇಲ್ವಿಚಾರಕನಿಗೆ ಅವನಿಗೆ ಪರಿಚಯವಿಲ್ಲದ ಕ್ಷೇತ್ರಗಳಲ್ಲಿ ಸಲಹೆ ನೀಡುತ್ತಾರೆ. ಈ ಬಗೆಯ ಸಂಘಟನೆಯನ್ನು ಶ್ರೇಣಿ ಮತ್ತು ಸಿಬ್ಬಂದಿ ಸಂಘಟನೆ ಎನ್ನುತ್ತಾರೆ. ಇದು ಬಹಳ ವ್ಯಾಪಕವಾಗಿ ಬಳಕೆಯಲ್ಲಿದೆ.ಇಲ್ಲಿ ಸಂಘಟನೆ ರಚಿತವಾಗಿರುವುದು ಮೇಲಿನಿಂದ ತಳದ ವರೆಗೆ ಹರಿಯುವ ಭದ್ರವಾದ ಕೇಂದ್ರಿಯ ಶ್ರೇಣಿಯ ಸುತ್ತ. ಈ ಶ್ರೇಣಿ ಮೇಲಿನಿಂದ ಕೆಳಗಿನ ವರೆಗೆ ಎಲ್ಲ ಆದೇಶಗಳನ್ನೂ ಸೂಚನೆಗಳನ್ನೂ ನಿಖರವಾಗಿ ತಲುಪಿಸುತ್ತದೆ. ಆದರೆ ಪ್ರತಿಯೊಬ್ಬ ಮುಖ್ಯ ಆಡಳಿತಾಧಿಕಾರಿಯ ಸುತ್ತಲೂ ಆತನಿಗೆ ವಿಪುಲವಾಗಿ ವಿಶೇಷ ಸಲಹೆ ನೀಡುವ ಸಿಬ್ಬಂದಿಯ ವ್ಯೂಹವನ್ನೇ ರಚಿಸಲಾಗಿದೆ. ಖಜಾಂಚಿ ಮತ್ತು ಕಾರ್ಯದರ್ಶಿ-ಇವರು ನೇರವಾಗಿ ಅಧ್ಯಕ್ಷನಿಗೆ ಸಲಹೆ ನೀಡುತ್ತಾರೆ. ಕಾರ್ಖಾನೆ ವ್ಯವಸ್ಥಾಪಕನಿಗೆ ಮುಖ್ಯ ಎಂಜಿನಿಯರ್, ಕೈಗಾರಿಕಾ ಸಂಬಂಧಗಳ ನಿರ್ದೇಶಕ ಮುಂತಾದವರು ಸಲಹೆ ಸೂಚನೆಗಳನ್ನು ನೀಡಬಲ್ಲರು. ಕಾರ್ಖಾನೆ ವ್ಯವಸ್ಥಾಪಕನ ಅಡಿಯಲ್ಲಿ ಅನೇಕ ಸಿಬ್ಬಂದಿ ಅಧಿಕಾರಗಳು (ಸ್ಟಾಫ್ ಆಫೀಸರ್ಸ್) ಇರುತ್ತಾರೆ. ಇವರ ಸುತ್ತಲೂ ಅವರವರ ಹಂತಗಳಲ್ಲಿ ಸಲಹೆಗಾರ ತಜ್ಞರ ಬಲೆಯನ್ನೆ ನೇಯಬಹುದು. ಮೇಲಿನಿಂದ ಕೆಳಮುಖವಾಗಿ ಹರಿಯುವ ಸಲಹೆಗಾರ ಇಲಾಖೆಗಳಲ್ಲಿ ಕೆಲವು ಇಡೀ ಕಾರ್ಖಾನೆಯ ಕೆಳಗಿನ ಹಂತದ ವರೆಗೂ ಹರಿಯಬಹುದು (ಉದಾ; ಕಾರ್ಮಿಕ ಕಲ್ಯಾಣ, ವೈದ್ಯಕ, ರಕ್ಷಣೆ).

ಸಿಬ್ಬಂದಿ ಇಲಾಖೆಗಳ ಕಾರ್ಯ[ಬದಲಾಯಿಸಿ]

ಮೇಲಣ ವ್ಯವಸ್ಥೆಯಲ್ಲಿಯ ನಾನಾ ಸಿಬ್ಬಂದಿ ಇಲಾಖೆಗಳ ಕಾರ್ಯ ಸ್ವರೂಪ ವಿಶಿಷ್ಟವಾದ್ದು. ಸಿಬ್ಬಂದಿ ಅಧಿಕಾರಿಗಳ ಕಾರ್ಯಭಾರ ಸಲಹಾತ್ಮಕವಾದ್ದು. ಕಾರ್ಯದರ್ಶಿಯ ಹುದ್ದೆ ಇದಕ್ಕೊಂದು ಉದಾಹರಣೆ. ಸಿಬ್ಬಂದಿ ಅಧಿಕಾರಿಗಳು ಆಡಳಿತ ಶ್ರೇಣಿಯಲ್ಲಿ ಯಾರಿಗೂ ಕಾರ್ಯನಿರ್ವಹಣೆಯ ಬಗ್ಗೆ ಆದೇಶಗಳನ್ನು ನೀಡಲಾರರೆಂಬುದು ತತ್ತ್ವಶಃ ನಿಜ. ಆದರೂ ಅವರು ನೀಡುವ ಸಲಹೆ ಅನೇಕ ವೇಳೆ ವಾಸ್ತವವಾಗಿ ಆಜ್ಞೆಯೇ ಆಗಿರುತ್ತದೆ. ಉದಾಹರಣೆಗೆ, ಎಂಜಿನಿಯರಿಂಗ್ ಇಲಾಖೆ ನೀಡುವ ನಕಾಸೆಯನ್ನಾಗಲೆ, ರಸಾಯನ ಇಲಾಖೆಯಿಂದ ಬರುವ ಒಂದು ಸೂತ್ರವನ್ನಾಗಲಿ ಉತ್ಪಾದನ ಇಲಾಖೆಯಲ್ಲಿ ಯಾರೂ ಚಾಚೂ ಬದಲಾಯಿಸುವ ಹಾಗಿಲ್ಲ. ಆ ಇಲಾಖೆಗಳಿಂದ ಬಂದ ಸೂಚನೆಗಳಲ್ಲಿ ಒಂದು ವೇಳೆ ತಪ್ಪೇ ಇದ್ದರೂ ಉತ್ಪಾದನ ಇಲಾಖೆ ಮಾಡಬಹುದಾದ್ದು ಇಷ್ಟೆ; ಅವನ್ನು ಸಂಬಂಧಪಟ್ಟ ಸಿಬ್ಬಂದಿ ಇಲಾಖೆಗಳಿಗೆ ಪುನಃಪರಿಶೀಲನೆಗಾಗಿ ಹಿಂದಿರುಗಿಸುವುದು.

ಶ್ರೇಣಿ ಮತ್ತು ಸಿಬ್ಬಂದಿ ಸಂಘಟನ ವಿಧಾನದ ಮಾದರಿ ನಕ್ಷೆಯೊಂದನ್ನು ಎಂ.ಎ. ಲೀ ರಚಿಸಿದ್ದಾನೆ. ಅದು ಹೀಗಿದೆ[ಬದಲಾಯಿಸಿ]

ತಜ್ಞರ ಕೌಶಲ ಮತ್ತು ಜ್ಞಾನಗಳನ್ನು ಉತ್ಪಾನದ ವ್ಯವಸ್ಥೆಯಲ್ಲಿ ಸಮಾವೇಶಗೊಳಿಸಲು ಅನುಸರಿಸಲಾಗುವ ಇನ್ನೊಂದು ವಿಧಾನ ವೆಂದರೆ ಶ್ರೇಣಿ ಮತ್ತು ಕಾರ್ಯಾತಕ್ಮ ಸಂಘಟನೆ (ಲೈನ್ ಅಂಡರ ಫಂಕ್ಷನಲ್ ಆರ್ಗನೈಸೇಷನ್). ಮೇಲಣ ಉದಾಹರಣೆಯಲ್ಲಿ ತೋರಿಸಿರುವ ಕಾರ್ಯಾತ್ಮಕ ತಜ್ಞರು ಇಬ್ಬರು; ವಿಧಾತಜ್ಞ ಮತ್ತು ಉತ್ಪಾದನ ತಜ್ಞ. ಇವರಿಬ್ಬರ ಸ್ಥಾನಗಳೂ ಕಾರ್ಯನಿರ್ವಾಹಕ ಪ್ರಮುಖ ಸ್ಥಾನಕ್ಕೆ ಸರಿಸಮನಾದವು. ಈ ಮೂವರೂ ತಂತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೆಲಸಗಾರರಿಗೆ ಸಲಹೆಗಳನ್ನೂ ಸೂಚನೆಗಳನ್ನೂ ನೀಡುತ್ತಾರೆ. ಇದು ಕ್ರಿಯಾತ್ಮಕ ಸಂಘಟನೆಯ ಸರಳ ರೂಪ. ನಿರ್ದೇಶನ ಇಲ್ಲಿ ಅಧಿಕಾರಾನುಗುಣವಾದ್ದಲ್ಲ. ಅದನ್ನು ಕಾರ್ಯಾನುಗುಣವಾಗಿ ವಿಂಗಡಿಸಲಾಗಿದೆ. ಕಾರ್ಯಾತ್ಮಕ ಸಂಘಟನೆ ಎಂಬ ಶಬ್ದವನ್ನು ಮೊದಲು ಪ್ರಯೋಗಿಸಿದವನು ಎಫ್.ಡಬ್ಲ್ಯು. ಟೇಲರ್. ಲೋಹಗೆಲಸದ ಕಾರ್ಖಾನೆಯೊಂದಕ್ಕೆ ಸಂಬಂಧಿಸಿದಂತೆ ಅವನು ಈ ರೀತಿಯ ವಿಭಜನೆ ಮಾಡಿ ತೋರಿಸಿದ. ವಿಶೇಷಜ್ಞರಾದ ಕಾರ್ಯಪ್ರಮುಖರನ್ನು ಕಾರ್ಯಾತ್ಮಕ ಪ್ರಮುಖರೆಂದು (ಫಂಕ್ಷನಲ್ ಫೋರ್ ಮೆನ್) ಈತ ಕರೆದಿದ್ದಾನೆ.ಟೇಲರ ಪ್ರೇಷಿತವಾದ ಈ ವಿಧಾನವನ್ನಾಧರಿಸಿ ವಿಸ್ತøತವಾದ ಸಂಘಟನೆಯ ವಿನ್ಯಾಸವನ್ನೇ ರಚಿಸುವುದು ಇಂದು ಸಾಧ್ಯವಾಗಿದೆ.ಆಧುನಿಕ ಕಾರ್ಖಾನೆಯೊಂದರ ಕ್ರಿಯಾತ್ಮಕ ಸಂಘಟನೆ ಸ್ಥೂಲವಾಗಿ ಹೇಗಿರುತ್ತದೆಂಬುದನ್ನು ಚಿತ್ರ 5ರಲ್ಲಿ ಕೊಟ್ಟಿದೆ.ಈ ವ್ಯವಸ್ಥೆಯಲ್ಲಿ ಎಂಜಿನಿಯರ್, ಉತ್ಪಾದನೆಯ ಮೇಲ್ವಿಚಾರಕ, ರಸಾಯನ ವಿಜ್ಞಾನಿ ಈ ಮೂವರೂ ಸಮಾನಸ್ಕಂಧರು. ಪ್ರತಿಯೊಬ್ಬನೂ ಪ್ರತಿಯೊಬ್ಬ ಕಾರ್ಯಪ್ರಮುಖನಿಗೂ ನೇರವಾಗಿ ಆದೇಶಗಳನ್ನೂ ಸಲಹೆಗಳನ್ನೂ ನೀಡುವ ಅಧಿಕಾರ ಉಳ್ಳವನು. ಹೀಗೆ ಪ್ರತಿಯೊಬ್ಬ ಕಾರ್ಯಪ್ರಮುಖನಿಗೂ ಮೂರು ದಿಕ್ಕುಗಳಿಂದಲೂ ಆದೇಶಗಳೂ ಸಲಹೆಗಳೂ ಬರುತ್ತದೆ. ಈ ಮೂವರಲ್ಲಿ ಪ್ರತಿಯೊಬ್ಬ ತಜ್ಞನ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳಲ್ಲೂ ಆ ತಜ್ಞನಿಗೆ ಪ್ರತಿಯೊಬ್ಬ ಕಾಯಾಪ್ರಮುಖನೂ ಉತ್ತರವಾದಿಯಾಗಿರಬೇಕಾಗುತ್ತದೆ.

 

ಕಾರ್ಯಪ್ರಮುಖನ ಕರ್ತವ್ಯ[ಬದಲಾಯಿಸಿ]

ಚಿತ್ರ 5 ರಲ್ಲಿ ತೋರಿಸುವಂತೆ ಪ್ರತಿಯೊಬ್ಬ ಕಾರ್ಯಪ್ರಮುಖನ ಕರ್ತವ್ಯಗಳೂ ಒಂದೇ ತೆರನಾಗಿಲ್ಲದೆ, ಒಬ್ಬೊಬ್ಬನೂ ಕೆಲಸಗಾರನ ಕರ್ತವ್ಯಗಳಲ್ಲಿ ಒಂದೊಂದು ಮುಖದ ಮೇಲ್ವಿಚಾರಣೆಯನ್ನು ಮಾತ್ರ ನಡೆಸಲು ಬಾಧ್ಯನಾಗಿರಬಹುರು. ಚಿತ್ರದಲ್ಲಿ ತೋರಿಸಿರುವ ನಾಲ್ವರು ಕಾರ್ಯಪ್ರಮುಖರಲ್ಲಿ ಪ್ರತಿಯೊಬ್ಬನೂ ತನ್ನ ಮೇಲ್ಪಟ್ಟವರಿಂದ ಪಡೆಯುವ ಸೂಚನೆಗಳು ಉಳಿದ ಮೂವರು ಕಾರ್ಯಪ್ರಮುಖರು ಪಡೆಯುವ ಸೂಚನೆಗಳಿಂದ ಭಿನ್ನವಾಗಿರಬಹುದು. ಆಗ ಪ್ರತಿಯೊಬ್ಬ ಕೆಲಸಗಾರನಿಗೂ ನಾಲ್ವರು ಕಾರ್ಯಪ್ರಮುಖರಿಂದಲೂ ಪ್ರತ್ಯೇಕ ಸೂಚನೆಗಳು ಬರುತ್ತದೆ. ಮಾಡಬೇಕಾದ ಕೆಲಸದ ವಿವಿಧ ಮುಖಗಳಲ್ಲಿ ಒಂದೊಂದಕ್ಕೂ ಒಬ್ಬೊಬ್ಬ ಕಾರ್ಯಪ್ರಮುಖನಿಂದ ಚತುರ ಮಾರ್ಗದರ್ಶನ ಲಭ್ಯವಾಗುತ್ತದೆ ಕಾರ್ಯಾತ್ಮಕ ಸಂಘಟನೆಯ ವೈಶಿಷ್ಟ್ಯವಿದು. ಬೃಹತ್ ಸಂಸ್ಥೆಗಳಲ್ಲಿ ಈ ವಿಧಾನ ಸಾಮಾನ್ಯವಾಗಿ ಜಾರಿಯಲ್ಲಿರುತ್ತದೆ.ಉತ್ಪಾದನ ಪ್ರಕ್ರಿಯೆಗಳಿಗೆ ಕಾರ್ಯಾತ್ಮಕ ಸಂಘಟನೆಯನ್ನು ವಿಸ್ತರಿಸಿ ಅನ್ವಯಿಸುವ ಗಮನಾರ್ಹ ಪ್ರಯತ್ನ ಮಾಡಿದವನು ಎಫ್. ಡಬ್ಲ್ಯು. ಟೇಲರ್, ಈ ಅನ್ವಯ ವಿಧಾನಕ್ಕೆ ವೈಜ್ಞಾನಿಕ ವ್ಯವಸ್ಥಾಪನ (ಸೈಂಟಿಫಿಕ್ ಮ್ಮಾನ್ಭೆಜ್‍ಮೆಂಟ್) ಎಂದು ಹೆಸರು ಬಂದಿದೆ.

ಕ್ರಿಯಾತ್ಮಕ ಸಂಘಟನೆಯ ಅನುಕೂಲಗಳು[ಬದಲಾಯಿಸಿ]

ಕ್ರಿಯಾತ್ಮಕ ಸಂಘಟನೆಯ ಅನುಕೂಲಗಳು ಅನೇಕ. ಪ್ರತಿಯೊಬ್ಬ ಕೆಲಸಗಾರನೂ ನಾನಾ ಕ್ಷೇತ್ರಗಳಲ್ಲಿ ಅರೆಬರೆ ಜ್ಞಾನವುಳ್ಳ ಕಾಂiÀರ್iಪ್ರಮುಖನ ಆದೇಶದಂತೆ ಕೆಲಸ ಮಾಡುವ ಬದಲು ತಜ್ಞರ ನಿರ್ದೇಶನದಲ್ಲಿ ಕೆಲಸ ಮಾಡುತ್ತಾನೆ. ಮಾನಸಿಕ ಮತ್ತು ದೈಹಿಕ ದುಡಿಮೆಗಳ ನಡುವಣ ವಿಭಜನೆಗೆ ಆಯಾ ಕ್ರಿಯೆಯ ಸ್ವರೂಪವೇ ಆಧಾರವಾಗಿರುತ್ತದೆ. ಶ್ರಮವಿಭಜನೆಯ ತತ್ತ್ವದ ಅನುಸರಣೆ ಸಾಧ್ಯವಾಗುತ್ತದೆ. ಪ್ರತಿಯೊಬ್ಬನೂ ತಾನು ಮಾಡಬೇಕಾದ್ದೇನೆಂಬುದು ಖಚಿತವಾಗಿರುತ್ತದೆ. ಇವೆಲ್ಲದರ ಪರಿಣಾಮವಾಗಿ ಪ್ರತಿಯೊಬ್ಬನಿಗೂ ಕ್ರಿಯಾತ್ಮಕ ದಕ್ಷತೆ ಸಾಧ್ಯವಾಗುತ್ತದೆ.ಕ್ರಿಯಾತ್ಮಕ ಸಂಘಟನೆಯ ದೊಡ್ಡ ದೋಷವೆಂದರೆ ಶಿಸ್ತಿನ ಶಿಥಿಲತೆ. ಶ್ರೇಣಿಯ ನಿಯಂತ್ರಣ ಅತ್ಯಲ್ಪ. ವಿವಿಧ ಇಲಾಖೆಗಳ ಮತ್ತು ಕೆಲಸಗಳ ಸಂಯೋಜನೆಯಾಗದಿದ್ದರೆ ದಕ್ಷತೆ ಕುಗ್ಗಬಹುದು. ಮಾನಸಿಕ ಮತ್ತು ದೈಹಿಕ ಕ್ರಿಯೆಗಳ ಪ್ರತ್ಯೇಕತೆಯ ತತ್ತ್ವವನ್ನು ಅತ್ಯಂತ ಕೆಳಗಿನ ಹಂತದ ವರೆಗೂ ಕೊಂಡೊಯ್ಯುವುದರಿಂದ ಅತಿ ಕೆಳ ದರ್ಜೆಯ ಕೆಲಸಗಾರರು ಯಂತ್ರದ ಭಾಗಗಳಂತೆ ಸತ್ತ್ವಹೀನರಾಗುವರೆಂಬುದು ಇದರ ಬಗ್ಗೆ ಬಂದಿರುವ ದೊಡ್ಡ ಟೀಕೆ. ಆದರೆ ಈ ವಿಧಾನದಿಂದ ಎಲ್ಲರಿಗೂ ಅವರವರ ಶಕ್ತಿಸಾಮಥ್ರ್ಯಾನುಗುಣವಾಗಿ ಕೆಲಸ ನೀಡುವುದು ಸಾಧ್ಯವಾಗಿದೆ. ಇದು ಕಾರ್ಖಾನೆ ಸಂಘಟನೆಯ ಒಂದು ಮುಖ್ಯ ಸೂತ್ರ.ಶ್ರೇಣಿ ಸಿಬ್ಬಂದಿ ಮತ್ತು ಕ್ರಿಯಾತ್ಮಕ -ಈ ಮೂರನ್ನೂ ಕೂಡಿಸಿದ ವಿಧಾನವನ್ನು ಅತ್ಯಂತ ಪುರೋಗಾಮಿ ಕಾರ್ಖಾನೆಗಳಲ್ಲಿ ಅನುಸರಿಸಲಾಗುತ್ತದೆ. ಈ ಸಂಘಟನೆಯ ಬೆನ್ನಮೂಳೆಯಂತೆ ಅಧಿಕಾರಶ್ರೇಣಿ ಉದಗ್ರವಾಗಿ ಸಾಗುತ್ತದೆ. ಕಾರ್ಖಾನೆಯ ಮೇಲ್ವಿಚಾರಕನ ಕೆಳಗೆ ಸಂಪೂರ್ಣ ಕ್ರಿಯಾತ್ಮಕವಾದ ಸಂಘಟನೆಯ ನಿರ್ಮಾಣವಾಗಿರುತ್ತದೆ. ಇಡೀ ವ್ಯವಸ್ಥೆ ಸ್ಥೂಲವಾಗಿ ಹೀಗಿರುತ್ತದೆ :

ಉತ್ಪಾದನೆಯ ಕ್ರಮ[ಬದಲಾಯಿಸಿ]

ಇಲ್ಲಿ ಉತ್ಪಾದನೆಯ ಕ್ರಮವನ್ನು ನಿರ್ಧರಿಸುವುದು ಆದೇಶ ಇಲಾಖೆಯ ಹೊಣೆ. ಉತ್ಪಾದನೆಗೆ ಅವಶ್ಯವಾದ ಎಲ್ಲ ಉಪಕರಣಗಳನ್ನೂ ಸಲಕರಣೆಗಳನ್ನೂ ಒದಗಿಸುವುದು ಉಪಕರಣ ನಕಾಶೆ ಇಲಾಖೆಯ ಕೆಲಸ. ಪರೀಕ್ಷಣ ಇಲಾಖೆಯ ಅಧಿಕಾರ ವ್ಯಾಪಕವಾದ್ದು. ಮೇಲ್ವಿಚಾರಕನಿಗಿಂತ ಕೆಳದರ್ಜೆಯ ಯಾವ ಅಧಿಕಾರಿಯ ಅಧೀನಕ್ಕೂ ಅದು ಒಳಪಟ್ಟಿರುವುದಿಲ್ಲ. ಆದ್ದರಿಂದ ಅದು ಉತ್ಪಾದನೆಯ ಗುಣ ನಿಯಂತ್ರಣ ಮಾಡುವ ಅಧಿಕಾರ ಪಡೆದಿರುತ್ತದೆ. ಉತ್ಪಾದನಾ ವಿಧಾನಗಳ ಬಗ್ಗೆಯೂ ಅದು ಕೆಲವು ಸೂಚನೆಗಳನ್ನು ನೀಡಬಹುದು. ಕಾರ್ಯಪ್ರಮುಖನ ಹಂತದಿಂದ ಕೆಳಗಿನ ಸಂಘಟನೆ ಸಂಪೂರ್ಣವಾಗಿ ಸೇನಾ ಅಥವಾ ಶ್ರೇಣಿ ಸ್ವರೂಪದ್ದು. ಹೀಗೆ ಶ್ರೇಣಿ, ಸಿಬ್ಬಂದಿ ಕ್ರಿಯಾತ್ಮಕ-ಈ ಮೂರೂ ವಿಧಾನಗಳ ಸೂಕ್ತ ಸಂಯೋಜನೆಯಿಂದ ಸಮರ್ಪಕವಾದ ಸಂಘಟನೆಯ ವ್ಯವಸ್ಥೆಯನ್ನು ಸಾಧಿಸಿಕೊಳ್ಳಬಹುದು. ಇವು ಮೂರೂ ಯಾವ ಯಾವ ಪ್ರಮಾಣದಲ್ಲಿರಬೇಕೆಂಬುದು ಆಯಾ ಕಾರ್ಖಾನೆಯ ಸ್ವರೂಪಕ್ಕೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ಪ್ರತಿಯೊಬ್ಬ ಕೆಲಸಗಾರನ ಕಾರ್ಯದಕ್ಷತೆ, ಬುದ್ಧಿಯ ಮಟ್ಟ, ಅನುಭವ ಮತ್ತು ಸಾಮ್ಮಥ್ರ್ಯಗಳಿಗೆ ಅನುಗುಣವಾಗಿ ಶ್ರಮವನ್ನು ವಿಭಜಿಸುವುದೂ ಅವನಿಂದ ಪರಮಾವಧಿ ಪ್ರಯೋಜನ ಪಡೆಯುವುದೂ ಸುಸಂಘಟಿತ ವ್ಯವಸ್ಥೆಯ ಉದ್ದೇಶ. ಆಡಳಿತ ಸೂತ್ರಗಳು ಯಾವೊಬ್ಬನ ಪ್ರತಿಭೆಯನ್ನೂ ಕ್ರಿಯಾಶೀಲತೆಯನ್ನೂ ಮೊಟಕು ಮಾಡಬಾರದು. ಯಂತ್ರವಾಗಲಿ ವಿಧಾನಗಳಾಗಲಿ ಮಾನವನಿಗಿಂತ ಮುಖ್ಯವಲ್ಲ. 

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: