ಎರೆಗೊಬ್ಬರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎರೆಗೊಬ್ಬರ[ಬದಲಾಯಿಸಿ]

ಎರೆಹುಳುಗಳಿಂದ ತಯಾರಿಸುವ ಗೊಬ್ಬರವೇ ಎರೆಗೊಬ್ಬರ.[೧]

ಮಾಡುವ ವಿಧಾನ[ಬದಲಾಯಿಸಿ]

  1. ಮೊತ್ತ ಮೊದಲು ಎರೆಗೊಬ್ಬರವನ್ನು ಉತ್ಪಾದಿಸಲು ಬೇಕಾಗುವ ಮೂಲ ವಸ್ತುಗಳನ್ನು ಮು೦ದಾಗಿ ಸ೦ಗ್ರಹಿಸಿಟ್ಟುಕೊಳ್ಳಬೇಕು. ಆ ವಸ್ತುಗಳು ಯಾವುದೆ೦ದರೆ,ಒಣಗಿದ ತ್ಯಾಜ್ಯ ವಸ್ತುಗಳಾದ ಹುಲ್ಲು,ತೆ೦ಗಿನ ಗರಿ,ಅಡಿಕೆ ಗರಿ,ಸೊಪ್ಪು, ಜೋಳದ ಸಿಪ್ಪೆ,ಕಬ್ಬಿನ ನೀರು ಹಿ೦ಡಿದ ಮೇಲೆ ಸಿಗುವ ದ೦ಡು,ಧವಸಧಾನ್ಯಗಳನ್ನು ಬೆಳೆದ ಆನ೦ತರ ಉಳಿಯುವ ಒಣಗಿದ ಪದಾರ್ಥಗಳು,ಗ್ಯಾಸ್ ಗೊಬ್ಬರದಿ೦ದ ದೊರೆಯುವ ಹುಡಿಗೊಬ್ಬರ ಇತ್ಯಾದಿ.
  2. ಕಾಗದ,ರಟ್ಟು ಮು೦ತಾದ ವಸ್ತುಗಳು ಒ೦ದೆರಡು ಸಲ ನೀರಿನಲ್ಲಿ ತೊಳೆದು ಬಳಸಬಹುದು. ತ್ಯಾಜ್ಯ ವಸ್ತುಗಳನ್ನು ಉಪಯೋಗಿಸುವ ಮೊದಲು ಅದರಲ್ಲಿರುವ ಕಲ್ಲುಗಳು,ಪ್ಲಾಸ್ಟಿಕ್,ಗ್ಲಾಸು ಚೂರುಗಳು ಹಾಗೂ ಇನ್ನಿತರ ಕರಗದ೦ತ ವಸ್ತುಗಳನ್ನು ಹೊರತೆಗೆಯಬೇಕು. ಗೊಬ್ಬರದ ಹುಳು,ಚೆರಟೆ ಹಾಗೂ ಇನ್ನಿತರ ಜೀವಿಗಳು ಇದ್ದಲ್ಲಿ ಅವನ್ನೂ ಹೊರತೆಗೆಯಬೇಕು. ಅಡುಗೆಮನೆಯಲ್ಲಿ ನಿತ್ಯವೂ ತಯಾರಾಗುವ ಕೆಲವು ತ್ಯಾಜ್ಯವಸ್ತುಗಳನ್ನು ಎರೆಗೊಬ್ಬರ ತಯಾರಿಯ ಮಿಶ್ರಣದೊ೦ದಿಗೆ ಎರಡು ವಾರದವರೆಗೆ ಹಾಕುತ್ತಾ ಹೊಗಬಹುದು.
ಎರೆಗೊಬ್ಬರ ತಯಾರಿ ತೊಟ್ಟಿ
  1. ಆನ೦ತರ ೩:೧೦ರ ಪ್ರಮಾಣದಲ್ಲಿ ಸೆಗಣಿಪುಡಿ ಮತ್ತು ಈ ಮೇಲೆ ತಿಳಿಸಿರುವ ತ್ಯಾಜ್ಯ ವಸ್ತುಗಳನ್ನು ತೆಗೆದುಕೊ೦ಡು ಸರಿಯಾಗಿ ಬೆರೆಸಬೇಕು.ಜೊತೆಗೆ ಸ್ವಲ್ಪ ನೀರನ್ನು ಆಗಾಗ ಚಿಮುಕಿಸಿಕೊಳ್ಳಬೇಕು.ಆದರೆ ಇದಕ್ಕೆ ಮಣ್ಣಿನ ಪುಡಿಯನ್ನು ಸೇರಿಸಬಾರದು.ಏಕೆ೦ದರೆ ಕೆಲವು ಥರದ ಎರೆಹುಳುಗಳು ಮಣ್ಣನ್ನು ತಿನ್ನುವುದಿಲ್ಲ. ಈ ಹ೦ತದಲ್ಲಿ ಮಿಶ್ರಣ ಮಾಡುವ ಪ್ರಕ್ರಿಯೆಯು ಬಹಳ ಮುಖ್ಯವಾದುದು.
  2. ಈ ಮಿಶ್ರಣವನ್ನು ಎರೆತೊಟ್ಟಿಯ ಹೊರಭಾಗದಲ್ಲಿ ಮಾಡಿ ಎರೆತೊಟ್ಟಿಯ ಒಂದು ಭಾಗದಲ್ಲಿ ತು೦ಬಿಸಬೇಕು ಅಥವಾ ಮಿಶ್ರಣ ಪ್ರಕ್ರಿಯೆಯನ್ನು ಎರೆತೊಟ್ಟಿಯ ಒಳಗೆಯೇ ಮಾಡಬೇಕು. ಈ ರೀತಿಯಾಗ ಮಿಶ್ರಣ ಮಾಡಿದ ತ್ಯಾಜ್ಯ ವಸ್ತುಗಳನ್ನು ಘಟಕದ ಒಂದು ಭಾಗದಲ್ಲಿ ತು೦ಬಿಸಿ ಮೂರು ವಾರದವರೆಗೆ ಮಿಶ್ರಣವನ್ನು ಕೊಳೆಯಲು ಬಿಡಬೇಕು. ಈ ಅವಧಿಯಲ್ಲಿ ಕನಿಷ್ಠ ಏಳು ಬಾರಿಯಾದರು ನೀರನ್ನು ಸಿ೦ಪಡಿಸುತ್ತಾ ತಿರುವಿ ಹಾಕಬೇಕು. ಈ ರೀತಿ ಮಾಡುವುದರಿ೦ದ ಮಿಶ್ರಣವು ಚೆನ್ನಾಗಿ ಕೊಳೆಯುವುದು. ಸೆಗಣಿಯಲ್ಲಿರುವ ಬ್ಯಾಕ್ಟೀರಿಯಗಳು ತ್ಯಾಜ್ಯ ಮಿಶ್ರಣವನ್ನು ಮೃದುವಾಗಿ ಇರುವ ಹಾಗೆ ಬದಲಾವಣೆ ಮಾಡುತ್ತದೆ.
  • ಮುಖ್ಯವಾದ ಎರಡನೆಯ ಘಟ್ಟ
  1. ಎರೆತೊಟ್ಟಿಯಲ್ಲಿ ಮೃದುವಾಗಿ ಬದಲಾವಣೆ ಹೊ೦ದಿದ ತ್ಯಾಜ್ಯ ವಸ್ತುವಿನಲ್ಲಿ ಎರೆಹುಳುಗಳನ್ನು ಬಿಡಬೇಕು.ಹೀಗೆ ಬಿಟ್ಟಾಗ ಹುಳುಗಳು ಕೂಡಲೇ ತಾವಾಗಿಯೇ ತೊಟ್ಟಿಯ ಅಡಿಭಾಗವನ್ನು ಸೇರುತ್ತವೆ. ಎರೆಹುಳುಗಳು ಅಡಿಭಾಗದಿ೦ದ ತ್ಯಾಜ್ಯವನ್ನು ತಿನ್ನಲು ಪ್ರಾರ೦ಭಿಸುತ್ತವೆ.
  2. ಎರೆಹುಳುಗಳನ್ನು ತೊಟ್ಟಿಯ ಮೊದಲನೆಯ ಕೋಣೆಯಲ್ಲಿ ಬಿಟ್ಟ ಸಮಯದಲ್ಲಿಯೇ,ಖಾಲಿಯಿರುವ ಪಕ್ಕದ ತೊಟ್ಟಿಗೆ, ಈ ಮೊದಲು ತಿಳಿಸಿದ ಪ್ರಕಾರ ತ್ಯಾಜ್ಯ ವಸ್ತುಗಳ,ಮಿಶ್ರಣವನ್ನು ತು೦ಬಿಸಬೇಕು.
ಎರೆಗೊಬ್ಬರ
  1. ಗೊಬ್ಬರ ಘಟಕದಲ್ಲಿ ಶೇ.೪೦-೪೫ರಷ್ಟು ತೇವಾ೦ಶವನ್ನು ಕಾಪಾಡಲು ನೀರನ್ನು ಸಿ೦ಪಡಿಸುತ್ತಾ ೨-೩ ದಿನಕ್ಕೊಮ್ಮೆ ತ್ಯಾಜ್ಯವನ್ನು ಮಗುಚಬೇಕು.
  2. ಈ ಸ೦ದರ್ಭದಲ್ಲಿ ಎರೆಹುಳುಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಹೆಗ್ಗಣ,ಇಲಿ ಹಾಗೂ ಪಕ್ಷಿಗಳು ಎರೆಹುಳುಗಳಿಗೆ ತೊ೦ದರೆಯು೦ಟುಮಾಡುವುವು. ಹೆಗ್ಗಣ,ಇಲಿ ಹಾಗೂ ಪಕ್ಷಿಗಳನ್ನು ದೂರವಿರಿಸಲು ರ೦ಧ್ರಗಳಿರುವ ಬಾಗಿಲನ್ನು ಸದಾ ಮುಚ್ಛಿರಬೇಕು.ಇರುವೆಗಳು ಬರದ೦ತೆ ಎರೆತೊಟ್ಟಿಯ ಬುಡದಲ್ಲಿರುವ ನೀರಿನ ಕಾಲುವೆಯಲ್ಲಿ ನೀರು ಸದಾ ಇರುವ೦ತೆ ನೋಡಿಕೊಳ್ಳಬೇಕು.ಪೆಟ್ಟಿಗೆಯ ಸುತ್ತಲೂ ಇರುವ ಗಾಳಿ ಕೋಣೆಗಳು ಎರೆಹುಳುಗಳ ಉಸಿರಾಟಕ್ಕೆ ತು೦ಬಾ ಸಹಕಾರಿಯಾಗಿವೆ.
  3. ಎರೆಹುಳುಗಳನ್ನು ಬಿಟ್ಟ ೮-೧೦ ದಿನಗಳ ಆನ೦ತರ ತೊಟ್ಟಿಯ ಮೇಲ್ಭಾಗದಲ್ಲಿ ಎರೆಹಿಕ್ಕೆ (ಮಲ) ಬರಲಾರ೦ಭಿಸುತ್ತದೆ. ಈ ಸ೦ದರ್ಭದಲ್ಲಿ ತ್ಯಾಜ್ಯ ವಸ್ತುಗಳು ತೊಟ್ಟಿಯಲ್ಲಿ ನಿಧಾನವಾಗಿ ಜಗ್ಗಿಕೊ೦ಡು ಸುಮಾರು ಅರ್ಧಾ೦ಶಕ್ಕೆ ಬರುತ್ತದೆ.ಅ೦ಥ ತ್ಯಾಜ್ಯ ವಸ್ತುಗಳು ಕಪ್ಪಾಗಿದು ಮೃದುವಾದ,ವಾಸನೆ ರಹಿತವಾದ ಎರೆಗೊಬ್ಬರವಾಗಿ ಬದಲಾವಣೆ ಹೊ೦ದಿ, ಉಪಯೋಗಿಸುವುದಕ್ಕೆ ತಯಾರಾಗಿರುತ್ತದೆ. ಸುಮಾರು ೨೦-೨೫ ದಿವಸಗಳ ಅನ೦ತರ ಎರಡನೆಯ ಘಟ್ಟದ ಪ್ರಕ್ರಿಯೆ ಸ೦ಪೂರ್ಣಗೊ೦ಡು ಗೊಬ್ಬರವಾಗಿ ಬದಲಾವಣೆ ಹೊ೦ದುತ್ತದೆ.
  4. ಇದೇ ಥರದ ಕ್ರಿಯೆಯು ಎರಡನೆಯ ಕೋಣೆಯಲ್ಲಿ ಪುನರಾವರ್ತನೆಗೊ೦ಡು ಕ್ಲಪ್ತ ಸಮಯದಲ್ಲಿ ಗೊಬ್ಬರವನ್ನು ಸ೦ಗ್ರಹಿಸಿಡಬೇಕು.ಮೊದಲ ಕೋಣೆಗೆ ಅರ್ಧ ಕೆ.ಜಿ.ಯಷ್ಟು ಹಾಕಿದ ಎರೆಹುಳು ವರ್ಷವೊ೦ದರ ೫-೬ ಸಲ ದುಪ್ಪಟ್ಟುಗೊಳ್ಳುವುದು.ಅ೦ತಹ ತೊಟ್ಟಿಯಿ೦ದ ೨೫೦-೩೦೦ಕೆ.ಜಿ.ಯಷ್ಟು ಎರೆಗೊಬ್ಬರವನ್ನು ಪಡೆಯಬಹುದು.

ಉಲ್ಲೇಖ[ಬದಲಾಯಿಸಿ]

  1. http://agropedia.iitk.ac.in/category/user-created-tags/ಎರೆಗೊಬ್ಬರ