ಎಂ. ಪಿ. ಗಣೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಂ. ಪಿ. ಗಣೇಶ್
Bornಜುಲೈ ೮, ೧೯೪೬
ಕೊಡಗು
Nationalityಭಾರತೀಯರು
Occupation(s)ಭಾರತದ ಹಾಕಿ ತಂಡದ ಕ್ಯಾಪ್ಟನ್, ಮ್ಯಾನೇಜರ್, ವ್ಯವಸ್ಥಾಪಕ, ಭಾರತೀಯ ಸೈನ್ಯದಲ್ಲಿ ಯೋಧ

ಮುಲ್ಲೇರ ಪೂವಯ್ಯ ಗಣೇಶ್ (ಜುಲೈ ೮, ೧೯೪೬) ಭಾರತೀಯ ಹಾಕಿ ತಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅವರು ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಕಂಚು ಪದಕ ಗೆದ್ದ ಭಾರತೀಯ ತಂಡದ ಸದಸ್ಯರಾಗಿ ಮತ್ತು ಬೆಳ್ಳಿ ಪದಕ ಗೆದ್ದ ಹಾಕಿ ತಂಡದ ನಾಯಕರಾಗಿ ಶ್ರೇಷ್ಠ ಸಾಧನೆಗಳ ಪ್ರತಿನಿಧಿಯಾದವರು. ನಮ್ಮ ಕೊಡಗಿನ ವೀರ ಮೊಲ್ಲೇರ ಪೂವಯ್ಯ ಗಣೇಶ್ ಸೈನ್ಯದ ಯೋಧ. ಇಟಾಲಿಯನ್ ಕ್ಲಬ್ ಪರ ಫುಟ್ಬಾಲ್ ಆಡಿದವರು. ಮುಂದೆ ಬಂದ ದಿನಗಳಲ್ಲಿ ಅವರು ಹಾಕಿ ತಂಡದ ತರಬೇತುದಾರರಾಗಿ, ಕ್ರೀಡಾ ಪ್ರಾದೇಶದ ವ್ಯವಸ್ಥಾಪಕರಾಗಿ ಮಹತ್ವದ ಕೆಲಸ ಮಾಡಿ ಪ್ರಸಿದ್ಧಿ ಪಡೆದಿದ್ದಾರೆ. ಅವರು ಅರ್ಜುನ ಪ್ರಶಸ್ತಿ ವಿಜೇತರೂ ಹೌದು.

ಜೀವನ[ಬದಲಾಯಿಸಿ]

ಎಂ. ಪಿ. ಗಣೇಶ್ ಅವರು ಜುಲೈ ೮, ೧೯೪೬ರಂದು ಕೊಡಗಿನಲ್ಲಿ ಜನಿಸಿದರು. ಮೊದಲು ಅವರು ಫುಟ್ಬಾಲ್ ತಂಡದಲ್ಲಿ ಕೊಡಗು ಜಿಲ್ಲೆಯನ್ನು ೧೯೬೦ - ೬೪ರ ಅವಧಿಯಲ್ಲಿ ಪ್ರತಿನಿಧಿಸುತ್ತಿದ್ದರು. ಮುಂದೆ ಅವರು ಭಾರತೀಯ ಸೇನೆಯನ್ನು ಸೇರಿದಾಗ ೧೯೬೬-೭೩ ಅವಧಿಯಲ್ಲಿ ಹಾಕಿ ಪಟುವಾಗಿ ಮಾರ್ಪಟ್ಟರು. ಗಣೇಶರು ಇಂಗ್ಲಿಷಿನಲ್ಲಿ ಸ್ನಾತಕೋತ್ತರ ಪದವೀಧರರು. ಜೊತೆಗೆ ಪಾಟಿಯಾಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಸಂಸ್ಥೆಯಿಂದ ಕ್ರೀಡಾ ತರಬೇತಿಯಲ್ಲಿ ಡಿಪ್ಲೋಮಾ ಪದವೀಧರರು.

ಹಾಕಿ ಸಾಧನೆ[ಬದಲಾಯಿಸಿ]

೧೯೭೧ರ ಹಾಕಿ ವಿಶ್ವಕಪ್ ಸ್ಪರ್ಧೆಯಲ್ಲಿ, ೧೯೭೨ರ ಹಾಕಿ ಒಲಿಂಪಿಕ್ಸ್ನಲ್ಲಿ ಭಾರತ ಕಂಚು ಗೆದ್ದಾಗ ತಂಡದ ಸದಸ್ಯನಾಗಿ, ೧೯೭೩ರ ವಿಶ್ವಕಪ್ ಹಾಕಿ ಸ್ಪರ್ಧೆಯಲ್ಲಿ ಫೈನಲ್ವರೆಗೆ ತಲುಪಿ ಕಡೆಗಳಿಯ 'ಸಡನ್ ಡೆತ್' ಗಳಿಗೆಯಲ್ಲಿ ನೆದರ್ಲ್ಯಾಂಡ್ ತಂಡಕ್ಕೆ ಸೋತರೂ ಬೆಳ್ಳಿ ಗೆದ್ದ ತಂಡದ ನಾಯಕನಾಗಿ ಅವರು ತೋರಿದ ಪ್ರತಿಭೆ ಮಹತ್ವವಾದದ್ದು. ೧೯೭೨ರಲ್ಲಿ ಅವರು ವಿಶ್ವದ ಹನ್ನೊಂದು ಆಟಗಾರರ ತಂಡದಲ್ಲಿ ಮತ್ತು ೧೯೭೦ರಿಂದ ೧೯೭೪ರಲ್ಲಿ ಏಷ್ಯಾದ ಹನ್ನೊಂದರ ತಂಡದಲ್ಲಿ ಕೂಡಾ ಆಡಿದರು.

ಇಟಾಲಿಯನ್ ಕ್ಲಬ್ಬಿನಲ್ಲಿ ಫುಟ್ಬಾಲ್[ಬದಲಾಯಿಸಿ]

ಫುಟ್ ಬಾಲ್ ಆಟದಲ್ಲಿ ಮಹಾನ್ ಪರಿಣತನಾಗಿದ್ದ ಆತನಿಗೆ ಇಟಾಲಿಯನ್ ಕ್ಲಬ್ ಮಹತ್ವದ ಆಹ್ವಾನ ನೀಡಿತು. ಹಾಗಾಗಿ ಸೈನ್ಯಕ್ಕೆ ಮತ್ತು ಹಾಕಿ ಆಟಕ್ಕೆ ವಿದಾಯ ಹೇಳಿ ಫುಟ್ ಬಾಲ್ ಆಟಕ್ಕೆ ಬಂದರು.

ಅರ್ಜುನ ಪ್ರಶಸ್ತಿ[ಬದಲಾಯಿಸಿ]

೧೯೭೪ರ ನಂತರದಲ್ಲಿ ಹಲವಾರು ಗಾಯಗಳ ಸಮಸ್ಯೆಯಿಂದ ಅವರು ಆಟಕ್ಕೆ ವಿದಾಯ ಹೇಳಬೇಕಾಯ್ತು. ದೇಶ ಅವರನ್ನು ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿತ್ತು.

ಕೆಚ್ಚೆದೆಯ ಕೋಚ್[ಬದಲಾಯಿಸಿ]

ಭಾರತದ ಹಾಕಿ ತಂಡದ ಕೋಚ್ ಆಗಿ ಅವರು ಹಲವು ವರ್ಷ ಕಾರ್ಯ ನಿರ್ವಹಿಸಿದ್ದರು. ೧೯೯೦ರಲ್ಲಿ ಪಾಕಿಸ್ಥಾನದಲ್ಲಿ ನಡೆದ ವಿಶ್ವಕಪ್ ಹಾಕಿ ಸ್ಪರ್ಧೆಗಳ ಸಂದರ್ಭದಲ್ಲಿ, ಅಲ್ಲಿನ ಆಡಳಿತ ಭಾರತೀಯ ತಂಡವನ್ನು ಅತೀ ಕೇವಲವಾಗಿ ನಡೆಸಿಕೊಂಡು ಸ್ಪರ್ಧೆಯ ಸಂದರ್ಭದ ಹೊರತಾಗಿ ಇಡೀ ಹದಿನಾರು ಜನರ ಭಾರತೀಯ ತಂಡವನ್ನು ಹೋಟೆಲಿನ ನಾಲ್ಕು ಗೋಡೆಗಳ ಒಳಗೆ ಇರುವಂತೆ ಮಾಡಿತ್ತು. ಹೋಟೆಲ್ ರೂಮಿನ ಒಳಗೆ ಕೈ ಕಾಲು ಆಡಿಸುವ ಪರಿಸ್ಥಿತಿಯ ಹೊರತಾಗಿ ಹೊರಗೆ ಆಟಕ್ಕಾಗಿ ಸಿದ್ಧತೆ ಮಾಡಿಕೊಳ್ಳುವ ವ್ಯವಸ್ಥೆ ಕೂಡಾ ಒದಗಿಸಲಿಲ್ಲ. "ಬೇಕಿದ್ದರೆ ನೀವು ನಿಮ್ಮ ದೇಶಕ್ಕೆ ಹಿಂದಿರುಗಿ ಹೋಗಿ" ಎಂದು ಅಲ್ಲಿನ ಅಧಿಕಾರಿಗಳೊಬ್ಬರು ನುಡಿದಾಗ ಗಣೇಶ್ ಮರುನುಡಿದರು "ನಾನು ಸೈನ್ಯದಲ್ಲಿ ಜೀವಿಸಿದವ, ಎಂಥದ್ದೇ ಸಂದರ್ಭ ಬರಲಿ ಓಡಿ ಹೋಗುವುದಿಲ್ಲ".

ಕ್ರೀಡಾ ಆಡಳಿತಗಾರ[ಬದಲಾಯಿಸಿ]

ತಾವು ಮಾಡಿದ ಕೆಲಸವನ್ನೆಲ್ಲಾ ಶ್ರದ್ಧೆಯಿಂದ ಮಾಡುತ್ತಿದ್ದ ಎಂ. ಪಿ. ಗಣೇಶ್ ಅವರು ಒಮ್ಮೆ ಜೂನಿಯರ ಕೋಚ್ ಆಗಿದ್ದಾಗ ಇವರ ಸಾಮರ್ಥ್ಯವನ್ನು ಗಮನಿಸಿದ ಅಂದಿನ ಯುವಜನ ಕ್ರೀಡಾ ಸಚಿವ ಗುಂಡೂರಾಯರು ಅವರನ್ನು ಯುವಜನ ಕ್ರೀಡಾ ಇಲಾಖೆಯ ನಿರ್ದೇಶಕರಾಗಿದ್ದ ಜೆ. ಆನಂದನ್ ಅವರ ಸಹಾಯಕ ಕ್ರೀಡಾ ಆಡಳಿತಗಾರರಾಗಿ ನೇಮಿಸಿದರು. . ಇವರ ಪ್ರಾಮಾಣಿಕ ಸೇವೆಯ ಫಲವಾಗಿ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಇವರನ್ನು ಆಡಳಿತ ಅಧಿಕಾರಿಯಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಇಂಫಾಲ್ ಮುಂತಾದ ಕಡೆಗಳಲ್ಲಿ ಕಾರ್ಯ ನಿರ್ವಹಿಸಿದ ನಂತರದಲ್ಲಿ ಬೆಂಗಳೂರಿನಲ್ಲಿರಲು ಇಷ್ಟಪಟ್ಟ ಗಣೇಶ್ ಅವರನ್ನು ದಕ್ಷಿಣ ಭಾರತದ ರಾಷ್ಟ್ರೀಯ ಕ್ರೀಡಾಪ್ರಾಧಿಕಾರದ ಅಧ್ಯಕ್ಷಗಿರಿಗೆ ಆಯ್ಕೆ ಮಾಡಲಾಯಿತು. ೧೯೯೧ರಿಂದ ೨೦೦೧ರ ವರೆಗೆ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿದ ನಂತರದಲ್ಲಿ ಗಣೇಶ್ ಪುನಃ ದೆಹಲಿಯಲ್ಲಿ ಸೇವೆ ಸಲ್ಲಿಸಿದರು. ಗಣೇಶ್ ಕ್ರೀಡಾ ಪ್ರಾಧಿಕಾರದಲ್ಲಿ ಕ್ರೀಡಾಪಟುಗಳ ಅವಶ್ಯಕತೆಗಳನ್ನು ಅರಿತು ಕೆಲಸ ಮಾಡಿದ ಹಲವು ಪರಿಣಾಮಗಳನ್ನು ಭಾರತ ತಂಡ ೨೦೦೪ ಒಲಿಂಪಿಕ್ಸ್, ೨೦೦೬ ಕಾಮನ್ ವೆಲ್ತ್ ಕ್ರೀಡಾ ಕೂಟಗಳಂತ ಸ್ಪರ್ಧೆಗಳ ಫಲಿತಾಂಶದಲ್ಲಿ ಕಂಡಿದೆ. ಮುಂದಿನ ದಿನಗಳಲ್ಲಿ ದೇಶ ಕಂಡ ಉತ್ತಮ ಕ್ರೀಡಾ ಪ್ರಗತಿಗೆ ಅವರಂತಹ ದಕ್ಷರು ಹಾಕಿದ ನೀಲಿ ನಕ್ಷೆ ಸಾಕಷ್ಟು ಫಲ ನೀಡಿದೆ. ೨೦೦೬ರಲ್ಲಿ ರಾಷ್ತ್ರೀಯ ಕ್ರೀಡಾ ಪ್ರಾಧಿಕಾರದ ಸೇವೆಯಿಂದ ನಿವೃತ್ತರಾದ ಗಣೇಶ್ ಬೆಂಗಳೂರಿನಲ್ಲಿ ನೆಲೆಸಿದರು. ಮುಂದೆ 2009ರ ವರ್ಷದಿಂದ ಅವರನ್ನು ಅರಸಿಕೊಂಡು ಬಂದದ್ದು , ಅತ್ಯಂತ ಶ್ರೀಮಂತವಾದ ಕರ್ನಾಟಕ ರಾಜ್ಯದ ಕ್ರಿಕೆಟ್ ಸಂಸ್ಥೆಯ 'ಚೀಫ್ ಎಕ್ಸಿಕ್ಯೂಟಿವ್ ಆಫಿಸರ್' ಹುದ್ದೆ.

ಮಾಹಿತಿ ಕೃಪೆ[ಬದಲಾಯಿಸಿ]

M.P. Ganesh: a man of many hats