ವಿಷಯಕ್ಕೆ ಹೋಗು

ಎಂ. ಎಸ್. ಉಮೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಂ. ಎಸ್. ಉಮೇಶ್
ಮೈಸೂರು ಶ್ರೀಕಂಠಯ್ಯ ಉಮೇಶ್
ಎಂ. ಎಸ್. ಉಮೇಶ್, ೨೦೨೩
ಜನನ(೧೯೪೫-೦೪-೨೪)೨೪ ಏಪ್ರಿಲ್ ೧೯೪೫
ಮರಣ30 November 2025(2025-11-30) (aged 80)
ಬೆಂಗಳೂರು
ವೃತ್ತಿ
  • ರಂಗಭೂಮಿ
  • ಚಲನಚಿತ್ರ ನಟ
ಸಕ್ರಿಯರಾಗಿದ್ದ ವರ್ಷಗಳು೧೯೬೦-೨೦೨೩
ಸಂಗಾತಿಸುಧಾ
ಮಕ್ಕಳು
  • ಚಂದ್ರಶೇಖರ
  • ಜಯಲಕ್ಷ್ಮಿ

ಎಂ. ಎಸ್. ಉಮೇಶ್ (24 ಏಪ್ರಿಲ್ 1945 – 30 ನವೆಂಬರ್ 2025) ಕನ್ನಡ ವೃತ್ತಿ ರಂಗಭೂಮಿ ಮತ್ತು ಚಲನಚಿತ್ರರಂಗದ ಜನಪ್ರಿಯ ಹಾಸ್ಯ ಕಲಾವಿದರು.

“ಅಯ್ಯಯ್ಯೋ ಇವ್ರೂ ನನ್ನ ಅಪಾರ್ಥ ಮಾಡ್ಕೊಂಬಿಟ್ರಲ್ಲ. ನಾನೇನೂ ಬೇಕೂ ಅಂತ ಹೀಗ್ ಮಾಡ್ಲಿಲ್ಲ..... ಹೇಳ್ಕೊಳ್ಳೋಣ ಅಂದ್ರೆ ನನ್ಹೆಂಡ್ತಿ ಕೂಡಾ ಊರಲ್ಲಿಲ್ವೆ..” ಹೀಗೆ ತಮ್ಮ ಅಸಾಮಾನ್ಯ ರೀತಿಯ ಸಂಭಾಷಣೆ, ಅಭಿನಯ, ಅಭಿವ್ಯಕ್ತಿಗಳಿಂದ ಕನ್ನಡ ಚಿತ್ರರಸಿಕರ ಮನವನ್ನು ಇನ್ನಿಲ್ಲದಂತೆ ಗೆದ್ದವರು ಎಂ. ಎಸ್. ಉಮೇಶ್.

ಉಮೇಶ್‌ರವರು ಏಪ್ರಿಲ್ ೨೨, ೧೯೪೫ರ ವರ್ಷದಂದು ಮೈಸೂರಿನಲ್ಲಿ ಜನಿಸಿದರು. ಅವರ ತಂದೆ ಎ.ಎಲ್. ಶ್ರೀಕಂಠಯ್ಯ, ತಾಯಿ ನಂಜಮ್ಮ. ತೊಟ್ಟಿಲು ಕೂಸಾಗಿದ್ದಾಗಲೇ ರಂಗಪ್ರವೇಶಿಸಿದ್ದರಿಂದ ರಂಗಭೂಮಿಯತ್ತ ಒಲವು ಅವರಿಗೆ ಹುಟ್ಟಿನಿಂದಲೇ ಬಂತು. ಬಾಲ ಪಾತ್ರಗಳಲ್ಲಿ ತನ್ಮಯತೆಯಿಂದ ಅಭಿನಯಿಸಿದವರು ಉಮೇಶ್. ದೃಶ್ಯಕ್ಕೆ ತಕ್ಕಂತೆ ಮೂಡ್ ಬರಿಸಲು ಕಲ್ಲು ಸಕ್ಕರೆ ಆಸೆ ತೋರಿಸಿ ಬಾಲಪಾತ್ರಗಳಲ್ಲಿ ಅವರಿಗೆ ಅಭಿನಯಿಸಲು ಪ್ರಚೋದನೆ ನೀಡಲಾಗುತ್ತಿತ್ತಂತೆ.

ನಾಟಕ ರಂಗದಲ್ಲಿ

[ಬದಲಾಯಿಸಿ]

ಕೆ. ಹಿರಣ್ಣಯ್ಯ ಮಿತ್ರ ಮಂಡಲಿಯಲ್ಲಿ ಅ.ನ.ಕೃ. ರವರು ಬರೆದ ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಬಿಜ್ಜಳನ ಮಗನ ಪಾತ್ರ ಉಮೇಶ್ ಅವರಿಗೆ ಬುದ್ಧಿ ಬಂದ ನಂತರದ ಮೊದಲ ಅನುಭವದ ಪಾತ್ರ. ಇದಕ್ಕೆ ಮೊದಲೇ ಅವರು ಹಲವಾರು ನಾಟಕಗಳಲ್ಲಿ ಬಾಲನಟನ ಪಾತ್ರವಹಿಸಿದ್ದರು. ಗುಬ್ಬಿ ವೀರಣ್ಣನವರ ಕಂಪನಿಯಲ್ಲೂ ಅವರಿಗೆ ಬಾಲನಟನ ಪಾತ್ರಗಳು ದೊರಕಿದವು. ದಶಾವತಾರ ನಾಟಕದಲ್ಲಿ ಇವರ ಪ್ರಹ್ಲಾದನ ಪಾತ್ರದ ಅಭಿನಯವನ್ನು ಮೆಚ್ಚಿದ ಮಾಸ್ತಿಯವರು ಹತ್ತು ರೂಪಾಯಿ ಸಂಭಾವನೆ ನೀಡಿದ್ದರು. ಗುಬ್ಬಿ ವೀರಣ್ಣನವರು ಇವರು ಬಾಲ್ಯದಲ್ಲಿದ್ದಾಗ ರಂಗ ಶಿಕ್ಷಣ ಕೊಡುತ್ತ ಅಭಿನಯವನ್ನು ಕಲಿಸಿದ ಗುರುಗಳು. ಎಂ.ಸಿ.ಮಹಾದೇವ ಸ್ವಾಮಿಯವರ ಕನ್ನಡ ಥಿಯೇಟರ್ಸ್ ಕಂಪನಿಯಲ್ಲೂ ಉಮೇಶ್ ಬಾಲನಟನಾಗಿ ಪಾತ್ರವಹಿಸಿದ್ದರು.

ಉಮೇಶರಿಗೆ ನಟನೆಯ ಜೊತೆಗೆ ಹಲವಾರು ವಾದನ ಕಲೆಗಳೂ ಕರಗತವಾಗಿವೆ. ಮಾಸ್ಟರ್‌ ಹಿರಣ್ಣಯ್ಯನವರ ಕಂಪನಿಯಲ್ಲಿ ಪಿಯಾನೋ ವಾದಕರಾಗಿ, ಕುಂಚಕಲಾವಿದರಾಗಿ, ಎನ್. ಶ್ರೀಕಂಠ ಮೂರ್ತಿಗಳ ನಾಟಕ ಕಂಪನಿಯಲ್ಲಿ ಹಾರ್ಮೋನಿಯಂ ವಾದಕರಾಗಿ ಉಮೇಶ್ ಖ್ಯಾತಿ ಗಳಿಸಿದ್ದರು. ಅವರು ಹಾಡಬಲ್ಲವರು ಕೂಡಾ.

'ಮಕ್ಕಳರಾಜ್ಯ'ದಲ್ಲಿ

[ಬದಲಾಯಿಸಿ]

೧೯೫೯ರಲ್ಲಿ ಅಭಿನಯಿಸಿದ್ದ ಇವರ ಚಂದ್ರಹಾಸನ ಪಾತ್ರ ಪಡೆದ ಜನಮೆಚ್ಚುಗೆಯಿಂದ ಬಿ. ಆರ್‌.ಪಂತುಲು ಅವರ ‘ಮಕ್ಕಳ ರಾಜ್ಯ’ ಚಲನ ಚಿತ್ರಕ್ಕಾಗಿ ಪ್ರಧಾನ ಪಾತ್ರಕ್ಕೆ ಆಯ್ಕೆಯಾದರು. ಇವರನ್ನು ಹೀಗೆ ಆಯ್ಕೆಮಾಡಿದ್ದವರು ಅಂದಿನ ದಿನದಲ್ಲಿ ಪಂತುಲು ಅವರ ಸಹಾಯಕರಾಗಿದ್ದ ಎಸ್. ಆರ್ ಪುಟ್ಟಣ್ಣ ಕಣಗಾಲರು. ಈ ಮಧ್ಯೆ ನಾಟಕಕಾರ ಎಚ್.ಕೆ. ಯೋಗಣ್ಣವರ ಉದಯ ಕಲಾ ನಾಟಕ ಮಂಡಲಿಯಲ್ಲಿ ಇವರು ಕೆಲ ಕಾಲ ನಟನಾ ವೃತ್ತಿಯಲ್ಲಿದ್ದರು.

ಚಿತ್ರರಂಗದಲ್ಲಿ ಹಾಸ್ಯನಟರಾಗಿ

[ಬದಲಾಯಿಸಿ]

ಮುಂದೆ ೧೯೭೪ರಲ್ಲಿ ಉಮೇಶ್, ಪುಟ್ಟಣ್ಣ ಕಣಗಾಲರ ‘ಕಥಾ ಸಂಗಮ’ ಚಲನ ಚಿತ್ರದ ತಿಮ್ಮರಾಯಿ ಪಾತ್ರಕ್ಕಾಗಿ ಉಮೇಶ್ ಆಯ್ಕೆಯಾದರು. ಇದಾದ ನಂತರ ಅವರ ಚಿತ್ರರಂಗದ ನಂಟು ಬೆಳೆಯುತ್ತಾ ಬಂದಿತು. ಗೋಲ್ ಮಾಲ್ ರಾಧಾಕೃಷ್ಣ, ಗುರು ಶಿಷ್ಯರು ಮುಂತಾದ ಚಿತ್ರಗಳಿಂದ ಕೊನೆಯ 'ಡೇರ್ ಡೆವಿಲ್ ಮುಸ್ತಫಾ' ವರೆಗಿನ ಅವರ ಪಾತ್ರಗಳನ್ನು ಮೆಚ್ಚದಿರುವವರೇ ಇಲ್ಲ. ಇದುವರೆಗೂ ೩೫೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ ಕೀರ್ತಿ ಉಮೇಶರದ್ದು.

ಚಿತ್ರಗಳು

[ಬದಲಾಯಿಸಿ]
  • ಮಕ್ಕಳ ರಾಜ್ಯ (1960)
  • ಕಥಾ ಸಂಗಮ (1976)...ತಿಮ್ಮರಾಯ
  • ನಾಗರಹೊಳೆ (1977)
  • ಭಾಗ್ಯವಂತರು (1977)
  • ಸವಳಿಗೆ ಸವಾಲ್ (1978)
  • ವಸಂತ ಲಕ್ಷ್ಮಿ (1978)
  • ತಪ್ಪಿದ ತಾಲಾ (1978)
  • ಕಿಲಾಡಿ ಜೋಡಿ (1978)
  • ಪುಟಾನಿ ಏಜೆಂಟ್ 123 (1979)
  • ಮುತ್ತು ಒಂದು ಮುತ್ತು (1979)
  • ಮಧು ಚಂದ್ರ (1979)...ಹನುಮ
  • ಪ್ರೇಮಾ ಅನುರಾಗ (1980)
  • ಹಾವಿನ ಹೆಡೆ (1981)
  • ಗುರು ಶಿಷ್ಯರು (1981)
  • ಭೂಮಿಗೆ ಬಂದ ಭಗವಂತ (1981)
  • ಬಂಗಾರದ ಮನೆ (1981)
  • ಅನುಪಮಾ (1981)
  • ಅಂಥ (1981)
  • ಸುವರ್ಣ ಸೇತುವೆ (1982)
  • ಪ್ರೇಮ ಮತ್ಸರ (1982)
  • ನನ್ನ ದೇವರು (1982)
  • ಹಾಲು ಜೇನು (1982)
  • ಸಿಂಹ ಗರ್ಜನೆ (1983)
  • ಕಲ್ಲುವೀನೆ ನುಡಿಯಿತು (1983)
  • ಕಾಮನ ಬಿಲ್ಲು (1983)
  • ಇಬ್ಬನಿ ಕರಗಿತು (1983)
  • ಹಸಿದಾ ಹೆಬ್ಬುಲಿ (1983)
  • ಗಂಧರ್ವ ಗಿರಿ (1983)
  • ಎರಡು ನಕ್ಷತ್ರಗಳು (1983)
  • ಭಕ್ತ ಪ್ರಹ್ಲಾದ (1983)
  • ಅವಳ ನೇರಳು (1983)
  • ಪ್ರಳಯಾಂತಕ (1984)
  • ಪ್ರಚಂಡ ಕುಳ್ಳ (1984)
  • ಗಂಡ ಭೇರುಂಡ (1984)
  • ಶ್ರಾವಣ ಬಂತು (1984)
  • ಬೆಂಕಿ ಬಿರುಗಾಳಿ (1984)
  • ಅಪೂರ್ವ ಸಂಗಮ (1984)
  • ನನ್ನ ಪ್ರತಿಜ್ಞೆ (1985)...ಚೆನ್ನ
  • ಮಲಯ ಮಾರುತ (1986)
  • ಶ್ರುತಿ ಸೇರಿದಾಗ (1987)
  • ಚಾಲೆಂಜ್ ಗೋಪಾಲಕೃಷ್ಣ (1990)
  • ಗೋಲ್ಮಾಲ್ ರಾಧಾಕೃಷ್ಣ (1990)...ಸೀತಾಪತಿ
  • ರಾಣಿ ಮಹಾರಾಣಿ (1990)
  • ರಾಜ ಕೆಂಪು ರೋಜಾ (1990)
  • ಪೋಲೀಸನ ಹೆಂಡ್ತಿ (1990)
  • ನೀನು ನಕ್ಕರೆ ಹಾಲು ಸಕ್ಕರೆ (1991)
  • ಗೋಲ್ಮಾಲ್ ಭಾಗ 2 (1991)...ಸೀತಾಪತಿ
  • ಗೌರಿ ಗಣೇಶ (1991)
  • ಕೊಲ್ಲೂರು ಕಲಾ (1991)
  • ಹತ್ಯಕಾಂಡ (1991)
  • ಬನ್ನಿ ಒಂದ್‍ಸಲಾ ನೋಡಿ (1992)
  • ಕ್ಷೀರ ಸಾಗರ (1992)
  • ಗೃಹಲಕ್ಷ್ಮಿ (1992)
  • ಮೇಘ ಮಂದಾರ (1992)
  • ಸಾಹಸಿ (1992)
  • ಕಲಿಯುಗ ಸೀತೆ (1992)
  • ಪ್ರೇಮ ಸಂಗಮ (1992)
  • ತರ್ಲೆ ನಾನ್ ಮಗ (1992)
  • ಸಪ್ತಪದಿ (1992)...ಕೃಷ್ಣಮೂರ್ತಿ
  • ಒಂದು ಸಿನಿಮಾ ಕಥೆ (1992)
  • ಬೆಳ್ಳಿಯಪ್ಪ ಬಂಗಾರಪ್ಪ (1992)
  • ಮಲ್ಲಿಗೆ ಹೂವು (1992)
  • ಉಂಡು ಹೋದ ಕೊಂಡು ಹೋದ (1992)
  • ಅಕಸ್ಮಿಕ (1993)...ಶ್ರೀಧರ್
  • ಸರ್ವರ್ ಸೋಮಣ್ಣ (1993)
  • ಕಲ್ಯಾಣ ರೇಖೆ (1993)
  • ಟೈಮ್ ಬಾಂಬ್ (1994)
  • ಚಿನ್ನದ ಪದಕ (1994)...'ಬುದ್ಧಿವಂತ'
  • ಮೇಘ ಮಾಲೆ (1994)
  • ಹಲೋ ಸಿಸ್ಟರ್ (1995)
  • ಹಿಮಪಥ (1995)
  • ಗೆಲುವಿನ ಸರದಾರ (1996)
  • ಹಲೋ ಯಮಾ (1998)
  • ನನ್ನಸೆಯ ಹೂವೆ (1999)
  • ಹಗಲು ವೇಷ (2000)
  • ಸುಂದರ ಪುರುಷ (2000)
  • ಅಸ್ತ್ರ (2000)
  • ಬಲಗಲಿಟ್ಟು ಓಳಗೆ ಬಾ (2002)
  • ಜೋಕ್‌ಫಾಲ್ಸ್ (2004)
  • ಪಾಂಡು ರಂಗ ವಿಟ್ಟಲ (2005)
  • ಸೆವೆನ್ ಓ ಕ್ಲಾಕ್ (2006)
  • ಸಾವಿರ ಮೆಟ್ಟಿಲು (2006)
  • ಸಜನಿ (2007)
  • ಗಣೇಶ ಮತ್ತೆ ಬಂದ (2008)
  • ಮುಸ್ಸಂಜೆಮಾತು (2008)
  • ಸಂಕಟದಲ್ಲಿ ವೆಂಕಟ (2009)
  • ಕ್ರೇಜಿ ಕುಟುಂಬ (2010)
  • ಐತಲಕ್ಕಡಿ (2010)
  • ಜಾಕಿ (2010)
  • ಮತ್ತೊಂದ್ ಮದುವೇನ? (2011)
  • ಗನ್ (2011)
  • ರಾಂಬೊ (2012)
  • ಲಕ್ಕಿ (2012)
  • ಚೆಲ್ಲಾ ಪಿಲ್ಲಿ (2013)
  • ನವರಂಗಿ (2014)
  • ಗಾಂಧೀಜಿ ಕನಸು (2014)
  • ಪುಂಗಿ ದಾಸ (2014)
  • ಸಿದ್ಧಾರ್ಥ (2015)
  • ಒಂದ್ ಚಾನ್ಸ್ ಕೊಡಿ (2015)
  • ಚಾರ್ಲಿ (2015)
  • ಮುಮ್ತಾಜ್ (2015)
  • ಸಿಬಿಐ ಸತ್ಯ (2016)
  • ಮಹಾವೀರ ಮಾಚಿದೇವ (2016)
  • ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ (2016)
  • ಬದ್ಮಾಶ್ (2016)
  • ಪ್ರವೇಶವಿಲ್ಲ (2016)
  • ಜಾನ್ ಜಾನಿ ಜನಾರ್ಧನ (2016)
  • ಶ್ರೀ ಓಂಕಾರ ಅಯ್ಯಪ್ಪನೇ (2016)
  • ಒನ್ಸ್ ಮೋರ್ ಕೌರವ (2017)
  • ಭೂತಯ್ಯನ ಮೊಮ್ಮಗ ಅಯ್ಯು (2018)
  • ಕುಮಾರಿ 21F (2018)
  • ಪರದೇಸಿ C/o ಲಂಡನ್ (2018)
  • ಡೇರ್‌ಡೆವಿಲ್ ಮುಸ್ತಫಾ (2023)

ಪ್ರಶಸ್ತಿ ಗೌರವಗಳು

[ಬದಲಾಯಿಸಿ]

'ಕಥಾಸಂಗಮದ' ಎಂಬ ಮೂರು ಕಥಾನಕಗಳ ಚಿತ್ರವಾದ ಮುನಿತಾಯಿಯಲ್ಲಿ 'ತಿಮ್ಮರಾಯಿ' ಪಾತ್ರಕ್ಕೆ ಉತ್ತಮ ಪೋಷಕನಟ ಪ್ರಶಸ್ತಿ, ೧೯೯೪ರಲ್ಲಿ ನಾಟಕ ಅಕಾಡಮಿ ಪ್ರಶಸ್ತಿ, ೧೯೯೭ರಲ್ಲಿ ಮಹಾನಗರ ಪಾಲಿಕೆ ಪ್ರಶಸ್ತಿ. ಆತ್ಮಚರಿತ್ರೆ ‘ಬಣ್ಣದ ಘಂಟೆ’ಗೆ ವಿಶ್ವೇಶ್ವರಯ್ಯ ಪ್ರತಿಷ್ಠಾನ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಉಮೇಶರನ್ನು ಅರಸಿಬಂದಿವೆ. ಉಮೇಶರ ಐದು ದಶಕಗಳ ಚಿತ್ರರಂಗದಲ್ಲಿನ ಕಾಯಕವನ್ನು ಚಿತ್ರರಂಗವು ಗೌರವಿಸಿತು.

ಬಹುಮುಖ ಪ್ರತಿಭೆ

[ಬದಲಾಯಿಸಿ]

ಉಮೇಶರು ಹಲವಾರು ಪತ್ರಿಕೆಗಳ ಅಂಕಣ ಬರಹಗಾರರೂ ಹೌದು. ಅಮ್ಮಾವರ ಆಜ್ಞೆ, ಎಲ್ಲರೂ ನಮ್ಮವರೇ ಉಮೇಶರು ರಚಿಸಿದ ನಾಟಕಗಳು. ಕಿರುತೆರೆಗೆ ಬರೆದು ನಿರ್ದೇಶಿಸಿದ್ದು ನಮ್ಮೂರಲ್ಲೊಂದು ನಾಟಕ, ಸಮಸ್ಯೆಯ ಸರಮಾಲೆ, ರಿಜಿಸ್ಟರ್‌ ಫೋಸ್ಟ್, ಅಂಚು-ಸಂಚು, ಗೌಡತಿ ಗೌರಮ್ಮ, ಸಂಸಾರದಲ್ಲಿ SOMEಕ್ರಾಂತಿ, ಜೋಕ್ಸ್‌ಫಾಲ್ಸ್, ಗಲಿಬಿಲಿ ಸಂಸಾರ ಮುಂತಾದುವು.

ಉಮೇಶ್ ಎಂದರೆ ಹಿರಿಯರಿಗೂ ಗೌರವ

[ಬದಲಾಯಿಸಿ]

ಉಮೇಶ್ ಎಂದರೆ ಹಿರಿಯ ನಟರಿಗೂ ಗೌರವ. ರಾಜಕುಮಾರ್ ಅವರ ಕಟ್ಟ ಕಡೆಯ ಚಿತ್ರಗಳವರೆಗೆ ಬಹುತೇಕ ಚಿತ್ರಗಳಲ್ಲಿ ಉಮೇಶ್ ನಟಿಸಿದ್ದರು. ಒಮ್ಮೆ ಉಮೇಶರ ಹುಟ್ಟು ಹಬ್ಬ ಎಂದು ಅರಿತ ವಿಷ್ಣುವರ್ಧನ ಅವರು ಸಿನಿಮಾ ಸೆಟ್ಟಿನಲ್ಲೇ ಅವರ ಹುಟ್ಟುಹಬ್ಬ ಆಚರಿಸುವ ಏರ್ಪಾಡು ಮಾಡಿ ಈ ನಟನಿಗೆ ಗೌರವ ಸಲ್ಲುವಂತೆ ನಡೆದುಕೊಂಡರು. “ಅಂದಿನ ಕಪ್ಪು ಬಿಳುಪು ಜಗತ್ತಿನಿಂದ ಇಲ್ಲಿಯವರೆಗಿನ ಕನ್ನಡ ಚಿತ್ರರಂಗದ ಯಾತ್ರೆ ಅದ್ಬುತ. ಈ ಯಶಸ್ಸಿನ ಹಾದಿಯನ್ನು ನೋಡಿರುವ ನಾನೇ ಪುಣ್ಯವಂತ” ಎಂಬುದು ಉಮೇಶರ ಮಾತು.

ಉಮೇಶ್ ಅವರು ೮೦ನೇ ವಯಸ್ಸಿನಲ್ಲಿ 30 ನವೆಂಬರ್ 2025 ರಂದು ಕ್ಯಾನ್ಸರ್‌ನಿಂದ, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ನಿಧನರಾದರು.[] []

ಬಾಹ್ಯಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ಡೆಸ್ಕ್‌, ಪ್ರಜಾವಾಣಿ ವೆಬ್‌. "'ಅಪಾರ್ಥ ಮಾಡ್ಕೋಬೇಡಿ' ಎನ್ನುತ್ತಾ ರಂಜಿಸಿದ್ದ ನಟ ಉಮೇಶ್". Prajavani. Retrieved 2025-11-30.
  2. Veteran Kannada actor Umesh passes away