ಆಲಿಭಾಗ್/ಕೊಲಾಬ ಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲಿಭಾಗ್ ಕೋಟೆ/ಕೊಲಾಬ ಕೋಟೆ ಮುಖ್ಯ ದ್ವಾರ

ಮಹಾರಾಷ್ಟ್ರ ರಾಜ್ಯದ ಕೊಂಕಣ ಸೀಮೆಯ ರಾಯಗಡ ಜಿಲ್ಲೆಯಲ್ಲಿ ಪಶ್ಚಿಮ ದಿಕ್ಕಿಗಿರುವ ಅರಬ್ಬೀ ಸಮುದ್ರದ ದಡದಲ್ಲಿರುವ ಐತಿಹಾಸಿಕ ಸ್ಥಳ ಆಲಿಬಾಗ್. ಮರಾಠರ ಪ್ರಸಿದ್ಧ ದೊರೆ ಶಿವಾಜಿ ಮಹಾರಾಜರ ಅಧಿಪತ್ಯದಲ್ಲಿ ಸೇನಾ ದಳಪತಿಯಾಗಿದ್ದ 'ಸರ್ಖೆಲ್ ಕನ್ಹೋಜಿ ಆಂಗ್ರೆ' ೧೭ನೇ ಶತಮಾನದಲ್ಲಿ ಕಟ್ಟಿಸಿದ ಸ್ಥಳವೇ ಈ ಆಲಿಭಾಗ್. ಈ ಸ್ಥಳಕ್ಕೆ ಮೊದಲು ಇದ್ದ ಹೆಸರು ಕುಲಬ, ಆದರಿಂದ ಇಲ್ಲಿನ ಕೋಟೆಯನ್ನು 'ಕೊಲಾಬ ಕೋಟೆ' ಅಥವಾ 'ಕುಲಬ ಕೋಟೆ' ಎಂದು ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಬಹಳ ಹಿಂದೆ ಇಸ್ರೇಲ್ ದೇಶದಿಂದ ವಲಸೆ ಬಂದ ಜನಾಂಗಕ್ಕೆ ಸೇರಿದ 'ಆಲಿ' ಎನ್ನುವ ವ್ಯಕ್ತಿಯೊಬ್ಬನು ವಾಸವಾಗಿದ್ದನು, ಅವನು ಬಹಳ ಶ್ರೀಮಂತನು ಹಾಗು ಆಸ್ತಿವಂತನಾಗಿದ್ದನು. ಅವನ ಮಾವು ಮತ್ತು ತೆಂಗಿನ ತೋಟಗಳು ಇದೇ ಸ್ಥಳದಲ್ಲಿ ಇದ್ದವು. ಸ್ಥಳೀಯ ಮರಾಠಿ ಭಾಷೆಯಲ್ಲಿ 'ಭಾಗ್' ಎಂದರೆ ತೋಟ ಎಂದರ್ಥ.ಹಾಗಾಗಿ ಮರಾಠಿಯ 'ಆಲಿಚಿ ಭಾಗ್'(ಆಲಿಯ ತೋಟ) ಕಾಲ ಕ್ರಮೇಣ ಉಚ್ಚಾರದಲ್ಲಿ ಆಲಿಭಾಗ್ ಆಗಿದೆ.

ರಾಜಕೀಯ/ಇತಿಹಾಸ[ಬದಲಾಯಿಸಿ]

ಮರಾಠರು ರಾಜ್ಯ ವಿಸ್ತರಣೆ ಮಾಡಿಕೊಳ್ಳುತ್ತಿದ್ದಾಗ ದಕ್ಷಿಣ ಕೊಂಕಣ ಪ್ರದೇಶ ಮರಾಠರ ಹಿಡಿತಕ್ಕೆ ಬಂದಾಗ ಆಗಿನ ದೊರೆ ಶಿವಾಜಿ ಮಹಾರಾಜರು ಈ ಪ್ರದೇಶದ ನಿಯಂತ್ರಣ ಸಾಧಿಸಲು ೧೬೬೨ರಲ್ಲಿ ಕಟ್ಟಿಸಿಕೊಂಡ ಕೋಟೆಯೇ ಈ ಆಲಿಭಾಗ್ ಕೋಟೆ. ಅಷ್ಟೇ ಅಲ್ಲದೆ ಈ ಕೋಟೆಯನ್ನು ಮರಾಠ ಸಾಮ್ರಾಜ್ಯದ ಜಲ ಸೇನೆಯ ಅಧೀಕೃತ ಮುಖ್ಯ ಕಚೇರಿಯನ್ನಾಗಿಯೂ ಮಾಡಿಕೊಳ್ಳಲಾಯಿತು. ಈ ಕೋಟೆಯ ಜವಾಬ್ದಾರಿಯನ್ನು ಶಿವಾಜಿ ಮಹಾರಾಜರು ದರ್ಯ ಸಾಗರ ಮತ್ತು ಮಾಣಿಕ್ ಭಂಡಾರಿ ಎನ್ನುವರಿಗೆ ವಹಿಸಿದ್ದರು. ಆ ಸಮಯದಲ್ಲಿ ಈ ಕೋಟೆ ಬ್ರಿಟಿಷ್ ಸರಕು ಸಾಗಣೆಯ ಹಡಗುಗಳ ಮೇಲೆ ದಾಳಿ ಮಾಡುವ ಹಾಗು ಬ್ರಿಟೀಷರ ಜಲ ಮಾರ್ಗದ ಮೇಲೆ ಕಣ್ಗಾವಲು ಇರಿಸುವ ಮುಖ್ಯ ಕೇಂದ್ರವಾಗಿತ್ತು. ೧೭೧೩ರಲ್ಲಿ ಪೇಶ್ವೆಯಾಗಿದ್ದ ಬಾಲಾಜಿ ವಿಶ್ವನಾಥನು ಒಪ್ಪಂದವೊಂದರ ಪ್ರಕಾರ ಆಲಿಭಾಗ್ ಕೋಟೆಯೂ ಸೇರಿದಂತೆ ಇನ್ನು ಕೆಲವು ಸಮುದ್ರ ತೀರ ಪ್ರದೇಶಗಳನ್ನು 'ಕನ್ಹೋಜಿ ಆಂಗ್ರೆ'ಯ ವಸಹಕ್ಕೆ ಕೊಡಲು ಅವನು ಬ್ರಿಟೀಷರ ಮೇಲೆ ಜಲ ಮಾರ್ಗದ ಮೂಲಕ ಸಮರೋಪಾದಿಯಲ್ಲಿ ದಾಳಿ ಮಾಡಲು ಈ ಸ್ಥಳಗಳನ್ನ ಬಳಸಿಕೊಂಡನು. ೧೭೨೨ರಲ್ಲಿ ಬ್ರಿಟೀಷರ ಬಾಂಬೆ ಸರ್ಕಾರ ಆಲಿಭಾಗ್ ನಿಂದ ತಮಗಾಗುತ್ತಿರುವ ಆಪತ್ತುಗಳಿಗೆ ತಕ್ಕ ಪ್ರತೀಕಾರ ತೆಗೆದುಕೊಳ್ಳಲು ನಿರ್ಧರಿಸಿತು. ಅದರಲ್ಲೂ ಕನ್ಹೋಜಿ ಅಂಗ್ರೇ ಯ ಚಟುವಟಿಕೆಗಳಿಂದ ಬ್ರಿಟೀಷ ಆಡಳಿತ ರೋಸಿ ಹೋಗಿತ್ತು. ಆದ ಕಾರಣ ಪೋರ್ಚುಗೀಸರ ಒಡಗೂಡಿ ಆಲಿಭಾಗ್ ಕೋಟೆಯ ಮೇಲೆ ದಾಳಿ ಮಾಡಿತು. ಆದಾಗ್ಯೂ ಅವರು ಅಲ್ಲಿ ಗೆಲ್ಲಲು ಸಾಧ್ಯವಾಗಿರಲಿಲ್ಲ .

ವಿಶೇಷತೆ[ಬದಲಾಯಿಸಿ]

ಕಡಲ ತಡಿಯಲ್ಲಿರುವ ಈ ಕೋಟೆಯೊಳಗೆ ವಿಶೇಷ ವೆಂಬಂತೆ ಶುದ್ಧ ಸಿಹಿನೀರಿನ ಬಾವಿ ಇದೆ. ಈ ಕೋಟೆ ಈಗ ಸರಕಾರೀ ಸಂರಕ್ಷಿತ ಐತಿಹಾಸಿಕ ಸ್ಮಾರಕ.