ಆದಿನಾಥ ಬಸದಿ ಜಿನ ದೇವರಗದ್ದೆ ಹಿರೇಗುತ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ೧೦೦೮ ಆದಿನಾಥ ಬಸದಿ, ಜಿನ ದೇವರಗದ್ದೆ, ಹಿರೇಗುತ್ತಿ

ಸ್ಥಳ[ಬದಲಾಯಿಸಿ]

ಕುಮಟಾ ತಾಲೂಕು ಹಿರೇಗುತ್ತಿಯ ಕೋಟೆಹಕ್ಕಲು ಬಳಿಯ ಚಿಕ್ಕಗುತ್ತಿಯ ಜಿನದೇವರಗದ್ದೆಯಲ್ಲಿ ಈ ಬಸದಿ ಇದೆ. ಕುಮಟಾ ತಾಲೂಕು ಕೇಂದ್ರದಿಂದ ಇಲ್ಲಿಗೆ ೨೦ ಕಿಲೋಮೀಟರ್ ದೂರ. ಮಂಗಳೂರು ಕಾರವಾರ ರಾಷ್ಟ್ರೀಯ ಹೆದ್ದಾರಿ ೬೬ ರಿಂದ ಅರ್ಧ ಕಿಲೋಮೀಟರ್ ದೂರದಲ್ಲಿದೆ.

ಹಿನ್ನಲೆ[ಬದಲಾಯಿಸಿ]

ಈ ಗದ್ದೆಯು ಸ್ಥಳೀಯರಾದ ಶ್ರೀ ಗೌರೀಶ್ ಬೀರಣ್ಣ ನಾಯಕರಿಗೆ ಸೇರಿದ್ದು, ಅಲ್ಲಿಯವರೆಗೂ ರಸ್ತೆಯಿದೆ. ಗದ್ದೆಯ ಮಧ್ಯದಲ್ಲಿ ದೊಡ್ಡ ಗಾತ್ರದ ಮುರಕಲ್ಲುಗಳಿಂದ ನಿರ್ಮಾಣವಾದ ಇಲ್ಲಿಯ ಒಂದು ದಿನ್ನೆಯ ಮೇಲೆ ಈ ಬಸದಿ ಇದ್ದಿರಬೇಕು. ಆದರೆ ಈಗ ಯಾವುದೇ ಕಟ್ಟಡವಿಲ್ಲ. ಮಧ್ಯದಲ್ಲಿ ಸುಮಾರು ೨ ಅಡಿ ಎತ್ತರದ ಈ ಸುಂದರ ಆದಿನಾಥ ಸ್ವಾಮಿಯ ಪರ್ಯಂಕಾಸನದ ಶಿಲಾವಿಗ್ರಹವಿದೆ. ಕುಳಿತಿರುವ ಸ್ವಾಮಿಯಷ್ಟೇ ಎತ್ತರದ ಚಾಮರಧಾರಿಗಳು ಸ್ವಾಮಿಯ ಎಡಬಲಗಳಲ್ಲಿ ನಿಂತುಕೊಂಡಿದ್ದಾರೆ. ಸ್ವಾಮಿಯ ಜಂಘಗಳ ಬಳಿಯಲ್ಲಿ ಕೆಳಗಡೆ ಎರಡು ಚಿಕ್ಕ ಚಿಕ್ಕ ಬಿಂಬಗಳಿವೆ. ಆದರೆ ಇವರು ಯಾರೆಂದು ತಿಳಿಯುವುದಿಲ್ಲ. ಪದ್ದಪೀಠದ ಕೆಳಗೆ ಯಾವುದೇ ಲಾಂಛನವು ಕಂಡುಬರುವುದಿಲ್ಲ. ಆದರೆ ವರ್ತಮಾನ ಕಾಲದ ೨೪ ತೀರ್ಥಂಕರರ ಪೈಕಿ ಆದಿನಾಥ ಸ್ವಾಮಿಯ ಬಿಂಬದಲ್ಲಿರುವ ಬಿಟ್ಟಿರುವ ತಲೆಕೂದಲ ವಿನ್ಯಾಸ ಇಲ್ಲಿ ಕಂಡು ಬರುವುದರಿಂದ ಇದು ಆದಿನಾಥ ಸ್ವಾಮಿಯ ಬಿಂಬಿವೆಂಬುದರಲ್ಲಿ ಸಂಶಯವಿಲ್ಲ.[೧]

ಇತಿಹಾಸ[ಬದಲಾಯಿಸಿ]

ಲಾಂಛನ ಇರಬೇಕಾದ ಸ್ಥಳದಲ್ಲಿ ಒಂದು ಚಿಕ್ಕ ಶಾಸನವಿದ್ದು ಅದು ಮೂಲ ಸಂಘ, ಕಾಲೂರ್ಗಣದ ಚಿಕ್ಕ ಸೆಟ್ಟಿ, ಅವನ ಮಗ ಬಂಮಿ ಸೆಟ್ಟಿ ಮತ್ತು ನಗರದವರು ಮಾಡಿಸಿದ ಆದಿನಾಥ ಸ್ವಾಮಿ ಎಂಬ ವಿಚಾರವನ್ನು ತಿಳಿಸುತ್ತದೆ. ಈ ಬಿಂಬವು ಚರಸ್ಥಿತಿಯಲ್ಲಿಯೇ ಇದೇ, ಬಳಿಯಲ್ಲಿ ಇದೇ ಸ್ಥಿತಿಯಲ್ಲಿರುವ ಎರಡು ನಿಷಿಧಿಫಲಕಗಳಿವೆ. ಅವುಗಳ ಮೇಲೆಯೂ ಬರಹವಿದೆ. ಈ ಚಾಮರ ಧಾರಿಗಳು ಶಾಸನಗಳ ಅಕ್ಷರಗಳು ಸುಮಾರು ೧೧ ನೇ ಶತಮಾನಕ್ಕೆ ಸಂಬಂಧಪಟ್ಟವುಗಳಾಗಿರುವ ಕಾರಣ ಈ ಬಿಂಬವು ಸಿದ್ಧವಾಗಿ ಹೆಚ್ಚು ಕಡಿಮೆ ಆದೇ ಕಾಲದಲ್ಲಿ ಈ ಬಸದಿಯು ನಿರ್ಮಾಣವೂ ಆಗಿರಬಹುದೆಂದು ಹೇಳಬಹುದು. ಹಿರೇಗುತ್ತಿಯು ವಿಶೇಷವಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಸುಮಾರು ಕ್ರಿ.ಶ. ೫ ನೇ ಶತಮಾನಕ್ಕೆ ಸಂಬಂಧಿಸಿದ ಪ್ರಾಕ್ತನ ಪುರಾವೆಗಳನ್ನು ಇಲ್ಲಿ ಕಾಣಬಹುದು.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರೀ ಪ್ರಿಂಟರ್ಸ್. p. ೪೦೨.