ಅಷ್ಟಪ್ರಧಾನರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿವಾಜಿ ರೂಪಿಸಿದ ರಾಜ್ಯಾಂಗದ ಅತಿ ಪ್ರಧಾನವಾದ ಅಂಶ. ಅಷ್ಟಪ್ರಧಾನರು ಅಂದರೆ ಎಂಟು ಜನ ಮಂತ್ರಿಗಳು. ಅವರ ಕಾರ್ಯಗಳು ಹೀಗಿವೆ : 1. ಪೇಶ್ವೆ ಅಥವಾ ಮುಖ್ಯಪ್ರಧಾನಿ : ರಾಜ್ಯದ ಸಾಧಾರಣ ವ್ಯವಹಾರಗಳು ಮತ್ತು ರಾಷ್ಟ್ರದ ಹಿತ. 2. ಅಮಾತ್ಯ ಅಥವಾ ಅರ್ಥ ಸಚಿವ : ರಾಜ್ಯದ ಹಣಕಾಸಿನ ಲೆಕ್ಕಪತ್ರಗಳು.

3. ಮಂತ್ರಿ ಅಥವಾ ಮಜಿನಾವಿಸ್ : ರಾಜನ ಮತ್ತು ರಾಜಸಭೆಯ ಮುಖ್ಯ ಕಲಾಪಗಳ ಒಕ್ಕಣೆ. 4. ಸಚಿವ ಅಥವಾ ಸುರ್ನಿಸ್ : ರಾಜನ ಪತ್ರವ್ಯವಹಾರಗಳು, ರಾಜ್ಯದ ಆಯವ್ಯಯ. 5. ಸುಮಂತ್ ಅಥವಾ ದಬೀರ್ ಪರದೇಶ ವ್ಯವಹಾರ. 6. ಸೇನಾಪತಿ ಅಥವಾ ಸರ್ನೌಬತ್: ಮುಖ್ಯ ಸೈನ್ಯಾಧಿಕಾರಿ. 7. ಪಂಡಿತರಾವ್ ಅಥವಾ ಧನಾಧ್ಯಕ್ಷ : ಮತವಿಷಯ. 8 ನ್ಯಾಯಾಧೀಶ: ಮುಖ್ಯ ನ್ಯಾಯಾಧಿಪತಿ. ಇವರಲ್ಲಿ ಮೊದಲ ನಾಲ್ಕು ಮಂತ್ರಿಗಳು ರಾಜಸಭೆಯಲ್ಲಿ ಸಿಂಹಾಸನದ ಬಲಭಾಗದಲ್ಲೂ ಉಳಿದವರು ಎಡಭಾಗದಲ್ಲೂ ಕುಳಿತಿರಬೇಕಾಗಿತ್ತು. ನ್ಯಾಯಾಧೀಶ, ಪಂಡಿತರಾವ್ ಇಬ್ಬರ ಹೊರತು ಮಿಕ್ಕ ಮಂತ್ರಿಗಳು ಸೈನ್ಯಾಧಿಕಾರಿಗಳಾಗಿ ಯುದ್ಧಗಳಲ್ಲಿ ಪಾತ್ರವಹಿಸುತ್ತಿದ್ದರು. ಅಷ್ಟಪ್ರಧಾನಿಗಳ ಮಂಡಲದ ವಿಷಯ ಶುಕ್ರನೀತಿಯಲ್ಲಿದೆ.