ಅರಿಸಿನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತದ ಅರಿಶಿನ
Curcuma longa
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
C. longa
Binomial name
Curcuma longa
Synonyms

Curcurma domestica Valeton

ಅರಿಸಿನ : ಮುಖ್ಯವಾದ ಸಾಂಬಾರ ಬೆಳೆಗಳಲ್ಲೊಂದು. ಜ಼ಿಂಜಿಬರೇಸೀ ಕುಟುಂಬಕ್ಕೆ ಸೇರಿದ ಉಪಯುಕ್ತ ಸಸ್ಯ . ಕರ್ಕ್ಯೂಮ ಲಾಂಗ ಇದರ ವೈಜ್ಞಾನಿಕ ಹೆಸರು. ಟರ್ಮೆರಿಕ್ ಇದರ ಸಾಮಾನ್ಯ ಇಂಗ್ಲಿಷ್ ಹೆಸರು. ಈ ಬೆಳೆಗೆ ಭೂಮಿಯಲ್ಲಿ ಯಾವಾಗಲೂ ತೇವಾಂಶವಿರಬೇಕು. ಅರಿಶಿನವನ್ನು ಆಹಾರ ಪದಾರ್ಥಗಳಿಗೆ ಬಣ್ಣ ಮತ್ತು ಪರಿಮಳ ಬರಿಸಲು, ಸಾಂಬಾರ ಪುಡಿ ತಯಾರಿಸಲು, ಬಟ್ಟೆ ಕಾರ್ಖಾನೆಗಳಲ್ಲಿ ಬಣ್ಣ ಹಾಕಲು, ಆಯುರ್ವೇದ ಔಷಧಿ ಹಾಗೂ ಸುಗಂಧ ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ. ಅಲ್ಲದೆ ಅರಿಶಿನ ಅಡುಗೆ ಮನೆಯ ಸಂಗಾತಿ. ದಕ್ಷಿಣ ಭಾರತದ ಅಡುಗೆಗಳಲ್ಲಂತೂ ಅರಿಶಿನವನ್ನು ಹೆಚ್ಚಾಗಿ ಬಳಸುತ್ತಾರೆ. ಬಹುತೇಕ ಎಲ್ಲಾ ತಿನಿಸುಗಳಲ್ಲೂ ಅರಿಶಿನ ಬಳಕೆ ಸಾಮಾನ್ಯ. [೨]

Botanical view of Curcuma longa.

ಮಣ್ಣು[ಬದಲಾಯಿಸಿ]

ಅರಿಶಿನವನ್ನು ಹಲವಾರು ವಿಧದ ಮಣ್ಣುಗಳಲ್ಲಿ ಬೆಳೆಯಬಹುದು. ಆದರೆ ಚೆನ್ನಾಗಿ ನೀರು ಬಸಿದು ಹೋಗುವಂಥಹ ಸಾವಯವಯುಕ್ತ ಮರುಳು ಮಿಶ್ರಿತ ಗೋಡು ಹಾಗೂ ಕಪ್ಪು ಗೋಡು ಮಣ್ಣುಗಳು ಬೆಳೆಗೆ ಉತ್ತಮ.

ಹವಾಗುಣ[ಬದಲಾಯಿಸಿ]

ಈ ಬೆಳೆಗೆ ಗಾಳಿ ಯಲ್ಲಿ ಹೆಚ್ಚು ತೇವಾಂಶವಿರುವ ಉಷ್ಣಭರಿತ ವಾತಾವರಣ ಬೇಕು. ಸಮುದ್ರಮಟ್ಟದಿಂದ 1500 ಮೀ. ಎತ್ತರದ ಪ್ರದೇಶ, 1500-2250 ಮಿಮೀ ಮಳೆ ಬೀಳುವ ಹಾಗೂ 200 ರಿಂದ 300 ಸೆಂ. ಉಷ್ಣತೆಯಿರುವಲ್ಲಿ ಉತ್ತಮವಾಗಿ ಕೃಷಿ ಮಾಡಬಹುದು. ಹೆಚ್ಚು ಮಳೆ ಬೀಳುವ ಮಲೆನಾಡು ಪ್ರದೇಶಗಳಲ್ಲಿ ಇವನ್ನು ಮಳೆ ಆಶ್ರಯದಲ್ಲಿ ಬೆಳೆಯಲಾಗುತ್ತ್ತದೆ. ಇತರ ನೀರಾವರಿ ಪ್ರದೇಶಗಳಲ್ಲಿ ಬೆಳೆಯಬಹುದು.

ನಾಟಿ ಕಾಲ[ಬದಲಾಯಿಸಿ]

ಮೇ-ಜೂನ್ ತಿಂಗಳುಗಳು ಅತಿ ಸೂಕ್ತ.

ತಳಿಗಳು[ಬದಲಾಯಿಸಿ]

ದಕ್ಷಿಣ ಒಣಪ್ರದೇಶ[ಬದಲಾಯಿಸಿ]

1. ಕಸ್ತೂರಿ : ಗಡ್ಡೆಯ ಒಳಭಾಗ ತೆಳು ಹಳದಿಯಿಂದ ಬಿಳಿ ಬಣ್ಣ. ಈ ತಳಿಯನ್ನು ಹದಮಾಡಿದ ಅನಂತರ ಹೆಚ್ಚು ಸುವಾಸನೆ ಹೊಮ್ಮುತ್ತದೆ. 2. ಮುಂಡಗ : ಈ ತಳಿಯು ದಪ್ಪ ಹಾಗೂ ಅಗಲವಾದ ಕೊಂಬುಗಳನ್ನು ಕೊಡುತ್ತದೆ. 3. ಬಾಳಗ : ಇದು ಸಾಧಾರಣ ಗಾತ್ರದ ಕೊಂಬುಗಳನ್ನು ಕೊಡುತ್ತದೆ. ಮೈದುಕ್ಕೊರ್, ಸಿ.ಬ-1,

ಗುಡ್ಡಗಾಡು ಪ್ರದೇಶ[ಬದಲಾಯಿಸಿ]

1. ಆರ್ಮರ್ : ದೊಡ್ಡ ಗಾತ್ರದ ಕೊಂಬುಗಳನ್ನು ಹೊಂದಿದ್ದು ಮಧ್ಯ ಮ ಗಾತ್ರದ ಇಲುಕುಗಳು ಇರುತ್ತವೆ. 2. ಎಲಚಗ : ಇದು ಚಿಕ್ಕ ಗಾತ್ರದ ಕೊಂಬುಗಳನ್ನು ಹೊಂದಿದ್ದು ಹೇರಳವಾದ ಇಲುಕುಗಳನ್ನು ಬಿಡುತ್ತದೆ.

ಕರಾವಳಿ ಪ್ರದೇಶ[ಬದಲಾಯಿಸಿ]

ಕಸ್ತೂರಿ, ಮುಂಡಗ, ಬಾಳಗ, ಮೂವತುಪುಜ, ಅಲೆಪ್ಪಿ ಮತ್ತು ಟೆಕ್ಕೂರ್‍ಪೆಟ್ ಸ್ಥಳೀಯ ತಳಿಗಳು ಹಾಗೂ ಸುಧಾರಿತ ತಳಿಯಾದ ಸುದರ್ಶನದಿಂದ ಈ ಪ್ರದೇಶದಲ್ಲಿ ಅಧಿಕ ಇಳುವರಿ ಮತ್ತು ಉತ್ತಮ ಗುಣಮಟ್ಟದ ಗಡ್ಡೆಗಳು ಬಂದಿದ್ದು ಈ ಪ್ರದೇಶಕ್ಕೆ ಸೂಕ್ತವೆಂದು ಹೇಳಲಾಗಿದೆ.

ಇವುಗಳಲ್ಲದೆ[ಬದಲಾಯಿಸಿ]

ಅರಿಶಿನ ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿ ಅಲ್ಲಲ್ಲಿ ಇತ್ತೀಚಿನ ಸುಧಾರಿತ ತಳಿಗಳಾದ ರೋಮ, ಸುರೋಮ, ರಂಗ, ರಶ್ಮಿ, ಐ.ಐ.ಎಸ್.ಆರ್. ಅಲೆಪ್ಪಿ ಸುಪ್ರೀಮ್ ಮತ್ತು ಕೇಪಾರಮ್ ತಳಿಗಳು ಸಹ ಅಲ್ಪಮಟ್ಟಿಗೆ ಕೃಷಿಯಲ್ಲಿವೆ.

ಬೇಸಾಯ ಸಾಮಗ್ರಿಗಳು[ಬದಲಾಯಿಸಿ]

ಬೇಸಾಯ ಸಾಮಗ್ರಿಗಳು ಪ್ರತಿ ಹೆಕ್ಟೇರಿಗೆ 1. ಬಿತ್ತನೆಯ ಕೊಂಬುಗಳು 2.25 ಟನ್ 2. ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ 50 ಟನ್ 3. ರಾಸಾಯನಿಕ ಗೊಬ್ಬರಗಳು ಸಾರಜನಕ 150 ಕಿಗ್ರಾಂ ರಂಜಕ 125 ಕಿಗ್ರಾಂ ಪೊಟ್ಯಾಷ್ 250 ಕಿಗ್ರಾ

ಬೇಸಾಯ ಕ್ರಮ[ಬದಲಾಯಿಸಿ]

ನಾಟಿ ಮಾಡುವುದು[ಬದಲಾಯಿಸಿ]

ಭೂಮಿಯನ್ನು ಉಳುವೆ ಮಾಡಿ, ಕುಂಟೆ ಹೊಡೆದು ಹದಕ್ಕೆ ತರಬೇಕು. ಉಳುಮೆ ಮಾಡುವಾಗಲೇ ಸಾವಯವ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಬೇಕು. ನಾಟಿ ಮಾಡುವ ಮೊದಲು ಶೇ. 50 ಸಾರಜನಕ, ಶಿಫಾರಸ್ಸು ಮಾಡಿದ ರಂಜಕ ಮತ್ತು ಪೊಟ್ಯಾಷ್ ಗೊಬ್ಬರಗಳನ್ನು ಸಾಲಿನಲ್ಲಿ ಹಾಕಿ ಮಣ್ಣಿನಲ್ಲಿ ಬೆರೆಸಬೇಕು. ಬೀಜದ ಕೊಂಬುಗ ಳನ್ನು 45 ಸೆಂಮೀ ಸಾಲುಗಳಲ್ಲಿ 30 ಸೆಂಮೀ ಅಂತರದಲ್ಲಿ ನಾಟಿ ಮಾಡಬೇಕು. ಬೀಜದ ಕೊಂಬುಗಳನ್ನು ಶೇ. 0.3 ರ ಮ್ಯಾಂಕೊಜೆಬ್ ಅಥವಾ ಪಾದರಸ ಸಂಯುಕ್ತ ಶಿಲೀಂಧ್ರರ ನಾಶಕದಿಂದ ಉಪಚರಿಸಿ ಬಿತ್ತನೆಗೆ ಬಳಸಿ, ಉಳಿದ ಶೇ. 50 ಸಾರಜನಕಯನ್ನು ನಾಟಿ ಮಾಡಿದ 45 ದಿವಸಗಳ ನಂತರ ಕೊಡಬೇಕು. ನೀರಾವರಿ ಹಾಗೂ ಅಂತರ ಬೇಸಾಯ ಮಣ್ಣಿನ ವಿಧ ಮತ್ತು ಹವಾಗುಣಕ್ಕನುಸಾರವಾಗಿ 6 ರಿಂದ 8 ದಿನಗಳಿಗೊಮ್ಮೆ ನೀರು ಹರಿಸಬೇಕು. ಮಡಿಗಳನ್ನು 2-3 ಬಾರಿ ಕಳೆ ತೆಗೆದು, ಕಳೆಗಳಿಂದ ಮುಕ್ತವಾಗಿಡಬೇಕು. ಹೂಗೊಂಚಲು ಕಂಡಕೂಡಲೆ ಅವುಗಳನ್ನು ತೆಗೆಯಬೇಕು. ಶುಂಠಿಯಲ್ಲಿ ಅಳವಡಿಸಿದಂತೆ ಬೆಳೆ ಪರಿವರ್ತನೆ ಮಾಡಿ.

ಸಸ್ಯ ಸಂರಕ್ಷಣೆ[ಬದಲಾಯಿಸಿ]

ಕೀಟಗಳು : ಶುಲ್ಕ ಕೀಟ, ಎಲೆ ತಯನ್ನುವ ಹುಳು, ಕಾಂಡ ಕೊರೆಯುವ ಹುಳು, ಗೆಡ್ಡೆ ಶಲ್ಕ ಕೀಟಗಳು, ಎಲೆ ಸುತ್ತುವ ಹುಳು. ರೋಗಗಳು : ಎಲೆ ಚುಕ್ಕಿ ರೋಗ, ಎಲೆ ಮಚ್ಚಿರೋಗ, ಕೊಂಬು ಮತ್ತು ಬೇರು ಕೊಳೆಯುವ ರೋಗ, ಚಿಬ್ಬು ರೋಗ.

ಹತೋಟಿ ವಿಧಾನ[ಬದಲಾಯಿಸಿ]

1. ಕೀಟ ಬಾಧೆ ಕಂಡುಬಂದಲ್ಲಿ 2 ಮಿಲೀ ಎಂಡೋಸಲ್ಫಾನ್ ಅಥವಾ 2 ಮಿಲೀ ಕ್ವಿನಾಲ್‍ಫಾಸ್ ಅಥವಾ 2 ಮಿಲೀ ಫೊಸಲೋನ್ ಹಾಗೂ ರೋಗಗಳ ಬಾಧೆ ಕಂಡು ಬಂದಲ್ಲಿ 2 ಗ್ರಾಂ ಮ್ಯಾಂಕೋಜೆಬ್ಯನ್ನು ಪತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. 2. ಕಾಂಡ ಕೊರೆಯುವ ಹುಳುವಿನ ಹತೋಟಿಗೆ ಪ್ರತಿ ಹೆಕ್ಟೇರಿಗೆ 25 ಕಿಗ್ರಾಂ ಕಾರ್ಬೋಪ್ಯುರಾನ್ ಹರಳುಗಳನ್ನು ಮಣ್ಣಿನಲ್ಲಿ ಬೆರೆಸಬೇಕು.


3. ಶುಲ್ಕ ಕೀಟದ ಬಾಧೆಯ ಹತೋಟಿಗೆ 17 ಮೀಲಿ ಡೈಮಿಥೊಯೇಟ್ ಅಥವಾ 5 ಮಿಲೀ ಫಾಸ್ಫಾಮಿಡಾನ್ 10 ಲೀಟರ್ ನೀರಿನಲ್ಲಿ ಬೆರೆಸಿ ಬೀಜೋಪಚಾರ ಮಾಡಿ. 4. ಕೊಂಬು ಕೊಳೆ ರೋಗಕ್ಕೆ, ಏರುಮಡಿಗಳಲ್ಲಿ ಬೆಳೆ ಬೆಳೆಯಬೇಕು. ಶೇಕಡ 1ರ ಬೋರ್ಡೊ ದ್ರಾವಣ ಸಿಂಪಡಿಸಬೇಕು. ಕೊಂಬುಗಳನ್ನು ಕ್ಯಾಪ್ಟಾನ್‍ನಲ್ಲಿ (ಶೇ. 0.3) ಅಥವಾ ರಿಡೋಮಿಲ್ ಎಂ.ಜೆಡ್ ನಲ್ಲಿ ಅದ್ದಿ ನಾಟಿ ಮಾಡಬೇಕು. ಮುಂದೆ ಬೆಳೆಯುವ ಹಂತದಲ್ಲಿ ರೋಗ ಕಂಡಾಗ 3 ಗ್ರಾಂ ತಾಮದ ಆಕ್ಸಿಕ್ಲೋರೈಡ್ ಅಥವಾ ಮೆಟಲಾಕ್ಸಿಲ್ - ಮಾಂಕೊಜೆಬ್ 1 ಲೀಟರ್ ನೀರಿನಲ್ಲಿ ಕರಗಿಸಿ ಭೂಮಿಗೆ ಹಾಕಬೇಕು.

ಕೊಯ್ಲು ಮತ್ತು ಇಳುವರಿ[ಬದಲಾಯಿಸಿ]

ಅರಿಸಿನ ಸುಮಾರು ಏಳರಿಂದ ಒಂಬತ್ತು ತಿಂಗಳುಗಳಲ್ಲಿ ಕೊಯ್ಲಿಗೆ ಬರುತ್ತದೆ. ಕೊಯ್ಲಿಗೆ 4-5 ದಿವಸ ಮೊದಲು ಒಣಗಿದ ಎಲೆ ಮತ್ತು ಕಾಂಡದ ಭಾಗಗಳನ್ನು ತೆಗೆದು ನೀರು ಹರಿಸಬೇಕು. ಗೆಡ್ಡೆಗಳಿಗೆ ಹಾನಿಯಾಗದಂತೆ ಅವುಗಳನ್ನು ಅಗೆದು ತೆಗೆಯಬೇಕು.

ಅರಿಸಿನ ಸಂಸ್ಕರಣೆ[ಬದಲಾಯಿಸಿ]

ದಕ್ಷಿಣ ಏಷಿಯಾದ ದೇಶಗಳ ಆಡುಗೆಗಳಲ್ಲಿ ವ್ಯಾಪಕವಾಗಿ ಉಪಯೋಗವಾಗುವ ಆರಿಶಿನ ಹುಡಿ.

ಅರಿಸಿನದ [೩]ಕೊಂಬುಗಳನ್ನು ತಾಯಿ ಕಾಂಡದಿಂದ ಬೇರ್ಪಡಿಸಬೇಕು. ತಾಯಿ ಕಾಂಡವನ್ನು ಬಿತ್ತನೆ ಬೀಜವಾಗಿ ಉಪಯೋಗಿಸುತ್ತಾರೆ. ಬೇರ್ಪಡಿಸಿದ ಕೊಂಬುಗಳನ್ನು ಒಂದೆರಡು ದಿನ ನೆರಳಿನಲ್ಲಿ ಒಣಗಿಸಬೇಕು. ಇದರಿಂದ ಕೊಂಬುಗಳಿಗೆ ಅಂಟಿಕೊಂಡಿರುವ ಮಣ್ಯನ್ನು ಬೇರ್ಪಡಿಸುವುದು ಸುಲಭವಾಗುತ್ತದೆ.

ಕುದಿಸುವುದು[ಬದಲಾಯಿಸಿ]

ಸ್ವಚ್ಛವಾದ ಅರಿಸಿನದ ಹಸುರು ಕಾಂಡಗಳನ್ನು ತಾಮ್ರದ ಪಾತ್ರೆಯಲ್ಲಿ ಅಥವಾ ಸತು ಲೇಪನ ಮಾಡಿದ ಕಬ್ಬಿಣದ ಕಡಾಯಿಯಲ್ಲಿ ಹಾಕಿ, ಎಲ್ಲ ಕೊಂಬೆಗಳು ಮುಳುಗಿದ ಮೇಲೆ ನೀರು ಹಾಕಿ, 45 ರಿಂದ 60 ನಿಮಿಷಗಳವರೆಗೆ ಕುದಿಸಬೇಕು. ಆ ಹಂತದಲ್ಲಿ ಕಾಯಿ ಮೆತ್ತಗಾಗಿರುವುದನ್ನು ಕೈ ಬೆರಳುಗಳ ಮಧ್ಯೆ ಒತ್ತಿ ಪರೀಕ್ಷಿಸಬೇಕು. ಹೆಚ್ಚಾಗಿ ಬೇಯಿಸುವುದು ಅಂತಿಮವಾಗಿ ಉತ್ತಮ ಬಣ್ಣ ಬರುವುದಿಲ್ಲ. ಬೇಕಾದ್ದಕ್ಕಿಂತ ಕಡಿಮೆ ಬೇಯಿಸುವುದರಿಂದ ಕೊಂಬುಗಳು ಸುಲಭವಾಗಿ ಮುರಿದುಹೋಗುತ್ತ್ತವೆ.

ಒಣಗಿಸುವುದು[ಬದಲಾಯಿಸಿ]

ನೀರಿನಲ್ಲಿ ಬೇಯಿಸಿದ ಕೊಂಬುಗಳನ್ನು ಹೊರತೆಗೆದು ಅಂಗಳ ಒಣಗಿಸಲೆಂದು ಮಾಡಿರುವ ನೆಲದ ಮೇಲೆ ಅಥವಾ ಬಿದಿರಿನ ಚಾಪೆಯ ಮೇಲೆ 5 7 ಸೆಂ.ಮೀ. ದಪ್ಪ ಪದರವಾಗಿ ಹರಡಿರಬೇಕು. ಬಿಸಿಲಿನಲ್ಲಿ ಸರಿಯಾದ ಹಂತಕ್ಕೆ ಒಣಗಿಸಲು 10 ರಿಂದ 15 ದಿನಗಳು ಬೇಕು.

ಹೊಳಪು ಕೊಡುವುದು[ಬದಲಾಯಿಸಿ]

ಒಣ ಅರಿಸಿನವು. ಮೇಲಿನ ಸಿಪ್ಪೆ ಮತ್ತು ಬೇರಿನ ತುಣುಕು ಗಳಿಂದ ಕೂಡಿದ್ದು ನೋಡಲು ಆಕರ್ಷಕವಾಗಿರುವುದಿಲ್ಲ. ಆದ್ದರಿಂದ ಪಾಲಿಷ್ ಮಾಡುವುದು ಅತ್ಯವಶ್ಯಕ. ಕೊಂಬುಗಳನ್ನು ಒರಟಾಗಿರುವ ನೆಲಕ್ಕೆ ತಿಕ್ಕುವ ಮೂಲಕ ಇಲ್ಲವೆ ಗೋಣಿಚೀಲ ದಲ್ಲಿ ತುಂಬಿ ಕಾಲಿನಿಂದ ತುಳಿಯುವ ಮೂಲಕ ಹೊಳಪು ಕೊಡಬಹುದು. ಇದಲ್ಲದೆ ಒರಟಾದ ಒಳಮೇಲ್ಮೈ ಹೊಂದಿದ ತಿರುಗುವ ಡ್ರಮ್ಮಿನ ಸಹಾಯದಿಂದ ಪಾಲಿಷ್ ಮಾಡಬಹುದು. 100 ಕಿಗ್ರಾಂ ಕಚ್ಚಾ ಅರಿಶಿನ ಕೊಂಬುಗಳಿಂದ 15 ರಿಂದ 25 ಕಿಗ್ರಾಂ ಪಾಲಿಷ್ ಮಾಡಿದ ಅರಿಶಿನವನ್ನು ಪಡೆಯಬಹುದು.

ಬಣ್ಣ ಹಾಕುವುದು[ಬದಲಾಯಿಸಿ]

ಅರಿಶಿನಕ್ಕೆ ಆಕರ್ಷಕ ಹಳದಿ ಬಣ್ಣವನ್ನು ಎರಡು ವಿಧವಾಗಿ ಕೊಡಬಹುದು - ಡ್ರಮ್ಮಿನಲ್ಲಿ ಪಾಲಿಶ್ ಮಾಡುತ್ತಿರುವಾಗ, ಕೊನೆಯ ಹತ್ತು ನಿಮಿಷಗಳ ಕಾಲ ಅರಿಶಿನದ ಪುರಿಯನ್ನ ಹಾಕಿ ತಿರುಗಿಸಬೇಕು. ಇಲ್ಲವೆ ಅರಿಶಿನ ಪುಡಿಯ ದ್ರಾವಣ. ಮಾಡಿ ಡ್ರಮ್ಮಿನಲ್ಲಿ ಅರ್ಧ ಪಾಲಿಷ್ ಕೊಂಬುಗಳಿಗೆ ಮಿಶ್ರಮಾಡಿ ತಿರುಗಿಸಬೇಕು. ಅನಂತರ ಸ್ವಲ್ಪ ಕಾಲ ಬಿಸಿಲಿನಲ್ಲಿ ಒಣಗಿಸಬೇಕು 100 ಕಿಗ್ರಾಂ ಒಣ ಅರಿಶಿನ ಕೊಂಬುಗಳಿಗೆ ಬಣ್ಣ ಹಾಕಲು 2 ಕಿಗ್ರಾಂ ಅರಿಶಿನ ಪುಡಿ, 0.04 ಕಿಗ್ರಾಂ ಸ್ಫಟಿಕ, ಹರಳೆಣ್ಣೆ 0.14 ಕಿಗ್ರಾ ಸೋಡಿಯಂ ಬೈಸಲ್ಫೇಟ್ 30 ಗ್ರಾಂ ಮತ್ತು 30 ಮಿಲೀ ಹೈಡೊಕ್ಲೋರಿಕ್ ಆಮ್ಲ ಬಳಸಬೇಕು.(ಡಿ.ಎಂ)

ಮಹತ್ವಗಳು[ಬದಲಾಯಿಸಿ]

ಅರಿಶಿಣಕ್ಕೆ ಸನಾತನ ಸಂಪ್ರದಾಯದಲ್ಲಿ ಬಹಳ ಮಹತ್ವವಿದೆ. ಮಂಗಳ ಕಾರ್ಯಗಳಲ್ಲಿ ಅರಿಶಿಣವೇ ಪ್ರಧಾನ. ಇದು ಗ್ರಹಗಳಲ್ಲಿ ಗುರುವಿಗೆ ಸಂಬಂಧಿಸಿದ್ದು. ಇಡೀ ಕುಂಡಲಿಯಲ್ಲಿ ಯೋಗ ಪ್ರಾಪ್ತಿಯನ್ನೂ, ದುರ್ಯೋಗ ನಿವಾರಣೆಯನ್ನೂ ಮಾಡುವವನೇ ಗುರುಗ್ರಹ. ಇವನು ಹಳದಿ ಬಣ್ಣದ ಕಾರಕ. ಅಂದರೆ ಹಳದಿಯು ಜ್ಞಾನ ಎಂದರ್ಥ. ವೈಜ್ಞಾನಿಕವಾಗಿಯೂ, ವೈದ್ಯಕೀಯವಾಗಿಯೂ ಮಹತ್ವ ಪಡೆದಿದೆ. ಅಂದರೆ ಒಟ್ಟಿನಲ್ಲಿ ಮಾನಸಿಕ ಉದ್ವೇಗಗಳನ್ನು ನಿಂತ್ರಿಸುತ್ತದೆ. ವಿವಾಹಗಳಲ್ಲಿ ಇದರ ಉಪಯೋಗಕ್ಕೆ ಬಹಳ ಮಹತ್ವವಿದೆ.ಅರಿಶಿಣಕ್ಕೆ ಸೋಂಕು ನಿವಾರಕ ಶಕ್ತಿಗಳಿವೆ. ಪೃಥ್ವಿಯ ಮೇಲೆ ಅನೇಕ ಲಹರಿ ಚಲಿಸುತ್ತಾ ಇರುತ್ತದೆ. ಆಧುನಿಕ ವಿಜ್ಞಾನಕ್ಕೂ ನಿಲುಕದ ಲಹರಿಗಳಿವು. ಇದು ಕೆಲವೊಮ್ಮೆ ದುಷ್ಪರಿಣಾಮವನ್ನೂ ಬೀರಬಹುದು. ಅದನ್ನು ನಿಂತ್ರಿಸಲು ಈ ಅರಿಶಿಣ ಕೊಂಬು(ಗಿಣ್ನು)ಗಳು ತುಂಬಾ ಸಹಕರಿಸುತ್ತದೆ. ಸಮಾನ್ಯವಾಗಿ ಅಪರೇಷನ್ ಥಿಯೇಟರ್ ಗಳಲ್ಲಿ ಅಪರೇಷನ್ ಸರ್ಜರಿ ಮಾಡುವಾಗ ಹಳದಿ ಬೆಳಕನ್ನು ಉರಿಸಿ ಪ್ರಜ್ಞೆ ತಪ್ಪಿಸುವ ವಿಧಾನಗಳಿತ್ತು. ಇದರಿಂದ ನೋವಿನ ಅನುಭವ ಬರಬಾರದೆಂದು ಈ ವಿಧಾನವನ್ನು ಬಳಸಲಾಗಿತ್ತು. ಇಲ್ಲಿ ಕೂಡಾ ಬಾಹ್ಯದಿಂದ ಬರುವ ಕೆಲ ಉಗ್ರಸ್ವರೂಪದ ಶಕ್ತಿಗಳಿಂದುಂಟಾಗುವ ನೋವುಗಳು ತಗಲದಿರಲಿ ಎಂಬ ಒಂದು ವಿಧಾನ. ಇದೊಂದು ರೋಗನಿರೋಧಕ ಎಂದರೂ ತಪ್ಪಾಗದು. ಮದುವೆಗೆ ಮುಂಚಿತವಾಗಿ ಪಂಚಗವ್ಯ ಕಲಶಾದಿಗಳೆಲ್ಲಾ ಒಂದೆಡೆ ಸಂಸ್ಕಾರ ಎಂದಾದರೆ ಇನ್ನೊಂದೆಡೆ ಚಿಕಿತ್ಸೆಯೂ ಆಗುತ್ತದೆ. ಕಲಶಗಳಲ್ಲಿ ಹಾಕುವ ತುಳಸಿ, ಅಶ್ವತ್ತದ ಚಿಗುರು, ಮಾವಿನ ತುದಿಗಳು ದ್ರವ ಆಮ್ಲಜನಕಗಳನ್ನು ಉತ್ಪತ್ತಿ ಮಾಡುವಂತದ್ದಾಗಿದೆ.

ಛಾಯಾಂಕಣ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  1. "Curcuma longa information from NPGS/GRIN". ars-grin.gov. Retrieved 2008-03-04.
  2. "ಅರಿಶಿನ ಆರೋಗ್ಯ ಪ್ರಯೋಜನಗಳು". Kannada News Today. kannadanews.today. Retrieved 13 April 2019.
  3. ಅರಿಶಿನ ಪ್ರಯೋಜನಗಳು
"https://kn.wikipedia.org/w/index.php?title=ಅರಿಸಿನ&oldid=1187488" ಇಂದ ಪಡೆಯಲ್ಪಟ್ಟಿದೆ