ಅಂಜಲಿ ಹಳಿಯಾಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂಜಲಿ ಹಳಿಯಾಳ ಕನ್ನಡದ ಗಾಯಕಿಯರಲ್ಲಿ ಒಬ್ಬರು.

ವೈಯಕ್ತಿಕ ಜೀವನ[ಬದಲಾಯಿಸಿ]

ಅಂಜಲಿ ತಂದೆ ಮಧುಕರ್ ಸರ್ನೋಬತ್. ತಾಯಿ ಸುಧಾಸರ್ನೋಬತ್, ಹಾಸ್ಯ ಬರಹಗಾರ್ತಿ. ಪತಿ ವಾಸುದೇವ ಹಳಿಯಾಳ.

ಸಂಗೀತ ವೃತ್ತಿ[ಬದಲಾಯಿಸಿ]

ಹತ್ತನೇ ತರಗತಿ ಓದುತ್ತಿದ್ದಾಗ ಅಂಜಲಿ ಆಕಾಶವಾಣಿಯ ನಾಟಕಗಳಿಗೆ ನಡೆದ ಧ್ವನಿಪರೀಕ್ಷೆಗಳಲ್ಲಿ ಅರ್ಹತೆ ಗಳಿಸಿದರು. ಹಲವಾರು ನಾಟಕಗಳಲ್ಲಿಯೂ ಅಭಿನಯಿಸಿದ್ದ ಅಂಜಲಿ, ‘ಪೇಚು', ‘ಪ್ರತ್ಯಕ್ಷ ಪ್ರಮಾಣ’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದರು. ಬಿ.ಎಸ್.ಎನ್.ಎಲ್ ಸಂಸ್ಥೆಯಲ್ಲಿ ಉದ್ಯೋಗ ದೊರಕಿತು. ಮಂಜುಳಾ ಗುರುರಾಜರ 'ಸಾಧನಾ ಸಂಗೀತ ಶಾಲೆ'ಯಲ್ಲಿ ಕಲಿಯುತ್ತಿರುವ ಸಂದರ್ಭದಲ್ಲಿ ಈಟಿವಿ ವಾಹಿನಿಯ ಪ್ರಸಿದ್ಧ ಕಾರ್ಯಕ್ರಮ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದರು. ಚಂದನ ವಾಹಿನಿಯ ‘ಮಧುರ ಮಧುರವೀ ಮಂಜುಳಗಾನ’ದಲ್ಲಿ ಗಾಯಕಿಯಾಗಿ ಭಾಗವಹಿಸಿದರು. ಇದಲ್ಲದೆ ತಾವು ಕಾರ್ಯನಿರ್ವಹಿಸುತ್ತಿದ್ದ ಬಿ.ಎಸ್.ಎನ್.ಎಲ್ ಸಂಸ್ಥೆಯು ಅಖಿಲ ಭಾರತ ಮಟ್ಟದಲ್ಲಿ ಏರ್ಪಡಿಸುತ್ತಿದ್ದ ಗಾಯನ ಸ್ಪರ್ಧೆಗಳಲ್ಲಿ ಅಹಮದಾಬಾದ್, ಭುವನೇಶ್ವರ್, ಪುಣೆ, ಕಣ್ಣೂರ್ ಮುಂತಾದೆಡೆಗಳಲ್ಲಿ ಭಾಗವಹಿಸಿದ ಅಂಜಲಿ ಹಲವಾರು ಬಹುಮಾನಗಳನ್ನು ಪಡೆದರು. ಮಂಗಳಾ ಹೆಗಡೆ ಅವರಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಅಭ್ಯಾಸವನ್ನು ಪ್ರಾರಂಭಿಸಿದರು. ಮುಂದೆ ಅವರು ಕಾಶೀನಾಥ ಪತ್ತಾರ್ ಮತ್ತು ವಿನಾಯಕ್ ಹೆಗಡೆ ಅವರಲ್ಲಿ ಸಹಾ ಅವರು ತಮ್ಮ ಕಲಿಕೆಯನ್ನು ಮಾಡಿದ್ದಾರೆ. ಆಕಾಶವಾಣಿಯಲ್ಲಿ ಹಲವಾರು ರೂಪಕಗಳನ್ನು ರಚಿಸಿ, ನಿರ್ದೇಶಿಸಿ ಪ್ರಸ್ತುತ ಪಡಿಸಿದ್ದಾರೆ. ಅಪಾರ ವೈವಿಧ್ಯಮಯ ಕವಿತೆಗಳ ಕವಿ ಕೆ.ಎಸ್. ನರಸಿಂಹಸ್ವಾಮಿಗಳ ಬೆಳಕು ಕಾಣದಿದ್ದ ಭವ್ಯಕವಿತೆಗಳ ‘ಅಂಕುರ’ ಎಂಬ ಸೋಲೋ ಆಲ್ಬಮ್ ಕೂಡ ಬಂದಿದೆ.

ಅಂಜಲಿ ಅವರು ನೀಡಿರುವ ನೂರಾರು ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿಗಳ 101ನೇ ಜನ್ಮದಿನದ ಸಂದರ್ಭದಲ್ಲಿ ಏರ್ಪಾಡಾಗಿದ್ದ ‘ಗೀತ ಕಾರ್ಯಕ್ರಮ’, ‘ಮಹಾನ್ ಗಾಯಕಿ ಗೀತಾದತ್ ಅವರಿಗೊಂದು ಗೌರವ’, ಶಾಸ್ತ್ರೀಯ ಸಂಗೀತದ ಆಧಾರದ ಗೀತೆಗಳ ‘ಒನ್ ನೋಟ್ ಮೆನಿ ಮೆಲೋಡೀಸ್’, ‘ಜೂಮೆ ನಾಚೇ ಗಾಯೇ’ ಎಂಬ ಹಳೆಯ ಗೀತೆಗಳ ಗಾನಯಾನ, ಭಕ್ತಿಗೀತೆಗಳ ‘ಭಜನ್ ಸಂಧ್ಯಾ’, ಭಾರತೀಯ ವಿದ್ಯಾಭವನದಲ್ಲಿ ನಡೆದ ‘ಗೀತ್ ಸಂಗೀತ್’, ಪುಣೆ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ‘ಪುರಂದರದಾಸರ ಪುಣ್ಯತಿಥಿ’ ಹಾಗೂ ಯುನೈಟೆಡ್ ಕಿಂಗ್ಡಂನಲ್ಲಿ ಜರುಗಿದ ಮ್ಯಾಂಚೆಸ್ಟರಿನ ಕನ್ನಡ ಬಳಗದ ‘ಯುಗಾದಿ ಸಂಭ್ರಮ’, ಮ್ಯಾಂಚೆಸ್ಟರಿನ ದೀನಬಂಧು ಸಂಸ್ಥೆಯ ಸಹಾಯಾರ್ಥ ‘ಗಝಲ್ಸ್, ಭಜನ್ಸ್ ಹಾಗೂ ಹಳೆಯ ಚಿತ್ರಗೀತೆಗಳ ಗೀತಯಾನ’, ಕಾರ್ಡಿಫ್ (ವೇಲ್ಸ್) ನಲ್ಲಿ ನಡೆಸಿಕೊಟ್ಟ ‘ಹಿಂದೀ ಹಳೆಯ ಚಿತ್ರಗೀತೆಗಳ ಗಾನಲಹರಿ’ ಮುಂತಾದ ಕಾರ್ಯಕ್ರಮಗಳು ಸೇರಿವೆ.<[೧]

ಉಲ್ಲೇಖಗಳು[ಬದಲಾಯಿಸಿ]

  1. >http://www.bfirst.in/category/critcolumns/anjali-haliyal-music-resign-job-211894[ಶಾಶ್ವತವಾಗಿ ಮಡಿದ ಕೊಂಡಿ]