ಸದಸ್ಯ:Inchara sp/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾರ್ಲ್ ಮಾರ್ಕ್ಸ್ ರವರು ಆರು ವರ್ಷದವರಿದ್ದಾಗ ಅವರ ಇಡೀ ಕುಟುಂಬವು ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡಿತು. ಅದಕ್ಕೆ ಮುಖ್ಯ ಕಾರಣ ಹೀಗಿರುವುದು. ಕಾರ್ಲ್ ಮಾರ್ಕ್ಸ್ ರವರು ಹುಟ್ಟಿದ ಟ್ರಿಯರ್ ನಗರವು ಒಂದು ಕಾಲದಲ್ಲಿ ರಾಜಕುಮಾರ ಜಾರ್ಚ್ ಬಿಷಪ್ ಆಡಳಿತ ಕೇಂದ್ರವಾಗಿತ್ತು. ಆದರೆ ಹತ್ತೊಂಭತ್ತನೆಯ ಶತಮಾನದ ಆರಂಭದಲ್ಲಿ ಫ್ರೆಂಚರಿಂದ ಆಕ್ರಮಿಸಲ್ಪಟ್ಟಿತ್ತು. ಫ್ರೆಂಚರ ಆಡಳಿತಕ್ಕೆ ಮುಂಚೆ ಯಹೂದಿ ಜನಾಂಗದವರು ನಾಗರಿಕ ಹಕ್ಕುಗಳ ದುರ್ಭರ ದಮನಕ್ಕೆ ಒಳಗಾಗಿದ್ದರು. ಆದರೆ ಫ್ರೆಂಚರ ಆಳ್ವಿಕೆಯಲ್ಲಿ ಯಹೂದಿಗಳೂ ಸಹ ಇತರ ನಾಗರೀಕರಂತೆ ನಾಗರಿಕ ಹಕ್ಕುಗಳನ್ನು ಪಡೆದುಕೊಂಡರು. ಅಲ್ಲಿಯವರೆಗೂ ವ್ಯಾಪಾರ ಮತ್ತು ಉದ್ಯೋಗಗಳ ಬಾಗಿಲುಗಳು ಅವರ ಪಾಲಿಗೆ ಮುಚ್ಚಲ್ಪಟ್ಟಿದ್ದವು. ಆದರೆ ಫ್ರೆಂಚರ ಆಳ್ವಿಕೆಯಲ್ಲಿ ಆ ಮುಚ್ಚಲ್ಪಟ್ಟಿದ್ದ ಬಾಗಿಲುಗಳು ಅವರ ಪಾಲಿಗೂ ತೆರೆಯಲ್ಪಟ್ಟಿದ್ದವು. ಅವರೂ ಸಹ ಮನ ಬಂದ ವ್ಯಾಪಾರ ಇಲ್ಲವೆ ಉದ್ಯೋಗವನ್ನು ಪ್ರವೇಶಿಸಬಹುದಾದ ಮುಕ್ತ ಅವಕಾಶ ದೊರೆಯಿತು. ಆ ರೀತಿಯಲ್ಲಿ ನೆಪೋಲಿಯನ್ನನ ರಾಜ್ಯವು ತಮಗೆ ರಾಜಕೀಯ ಮುಕ್ತಿಯನ್ನು ಒದಗಿಸಿಕೊಟ್ಟಿದ್ದಕ್ಕಾಗಿ, ರೈನ್ ಪ್ರದೇಶದ ಯಹೂದಿ ಜನಾಂಗದ ಜನರು ಆ ರಾಜ್ಯಕ್ಕೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಾನುಭೂತಿಗಳನ್ನು ವ್ಯಕ್ತಪಡಿಸಿದರು. ಆದರೆ ಅವರು, ನೆಪೋಲಿಯನ್ ಸೋತ ನಂತರ, ವಿಯನ್ನಾ ಕಾಂಕ್ರೆಸ್ ರೈನ್ ಲ್ಯಾಂಡನ್ನು ಪ್ರಷ್ಯಾ ಚಕ್ರಾಧಿಪತ್ಯದ ಆಡಳಿತಕ್ಕೆ ಒಳಪಡಿಸಿದ ಮೇಲೆ ಒಂದು ಮಹತ್ತರ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಮತ್ತೆ ಯಹೂದಿಗಳು ತಮ್ಮ ನಾಗರಿಕ ಹಕ್ಕುಗಳಿಂದ ವಂಚಿತರಾದರು. ಅವರ ಪಾಲಿಗೆ ಬಹುತೇಕ ವ್ಯಾಪಾರ ಮತ್ತು ಉದ್ಯೋಗಗಳ ಬಾಗಿಲುಗಳೂ ಮುಚ್ಚಲ್ಪಟ್ಟವು. ಅವುಗಳಲ್ಲಿ ಕಾನೂನು ವೃತಿಯೂ ಒಂದಾಗಿತ್ತು. ಅಂತೆಯೇ ತನ್ನ ವಕೀಲಿ ವೃತ್ತಿಯನ್ನು ಕಳೆದುಕೊಳ್ಳಬಹುದಾದ ಾತಂಕವು ಕಾರ್ಲ್ ಮಾರ್ಕ್ಸ್ ರವರ ತಂದೆಯು ಇಡೀ ಕುಟುಂಬವನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರ ಮಾಡಿಸಿದರು. ಆದರೆ ಧರ್ಮ, ಜಾತಿ ಮತ್ತು ಪಂಗಡಗಳು ಕಾರ್ಲ್ ಮಾರ್ಕ್ಸ್ ರವರ ಮೇಲೆ ಎಂದೂ ಪರಿಣಾಮ ಬೀರಲಿಲ್ಲ. ಮೊದಲಿನಿಂದಲೂ ಭಾವನೆಗಳಿಗಿಂತ ಾಲೋಚನೆಗಳಿಂದ ಬಹಳವಾಗಿ ಪ್ರಭಾವಿತರಾಗುತ್ತಿದ್ದ ಕಾರ್ಲ್ ಮಾರ್ಕ್ಸ್ ಹುಟ್ಟು ಬಂಡಾಯಗಾರರಾಗಿದ್ದರು.

ಯುವಕ ಕಾರ್ಲ್ ಮಾರ್ಕ್ಸ್ ರವರು ತಾವು ಹುಟ್ಟಿ ಬೆಳೆಯುತ್ತಿದ್ದ ಮನೆಯ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ, ಪ್ರಷ್ಯಯನ್ ಸರ್ಕಾರದ ಒಬ್ಬ ಪ್ರತಿಷ್ಠಿತ ಅಧಿಕಾರಿಯಾಗಿದ್ದ ಮತ್ತು ಹಲವಾರು ಭಾಷೆಗಳನ್ನು ಬಲ್ಲವರಾಗಿದ್ದ ಲೂಡ್ ವಿಗ್ ವಾನ್ ವೆಸಟ್ ಪೇಲಿನ್ ಎಂಬುವವರ ಜೊತೆ ನಿಕಟ ಸಹವಾಸವನ್ನಿಟ್ಟುಕೊಂಡಿದ್ದರು. ಸ್ವತ: ವಿದ್ವಾಂಸರಾಗಿದ್ದ ಲೂಡ್ ವಿಗ್ ವಾನ್ ವೆಸ್ಟ್ ಪೇಲಿನ್ ರವರು ಕಾರ್ಲ್ ಮಾರ್ಕ್ಸ್ ರವರ ಆಸಕ್ತಿ ಹಾಗು ಬುದ್ದಿಮತ್ತೆಯನ್ನು ಕಂಡು ಮೆಚ್ಚಿ ಬಹಳವಾಗಿ ಪ್ರೋತ್ಸಾಹಿಸಿದರು. ಅನೇಕ ಪುಸ್ತಕಗಳನ್ನು ಕಾರ್ಲ್ ಮಾರ್ಕ್ಸ್ ರವರಿಗೆ ಕೊಟ್ಟು ಅವುಗಳ ಬಗ್ಗೆ ವಿವರಿಸಿ ಹೇಳಿ ಶ್ರದ್ಧೆಯಿಂದ ವಿವರವಾಗಿ ಓದಲು ಹೇಳಿದರು. ವಯಸ್ಸು ಹಾಗೂ ಪ್ರತಿಷ್ಠಿತ ಅಧಿಕಾರಿ ಸ್ಥಾನಮಾನವನ್ನು ಮರೆತು ಯುವಕ ಕಾರ್ಲ್ ಮಾರ್ಕ್ಸ್ ರವರ ಜೊತೆ ಗಂಟೆಗಟ್ಟಲೆ ಅನೇಕ ಪ್ರಾಚೀನ ಹಾಗೂ ಆಧುನಿಕ ತತ್ವಜ್ಞಾನಿಗಳ ಕೃತಿಗಳ ಬಗ್ಗೆ, ಅದರಲ್ಲಿಯೂ ಮುಖ್ಯ ಸೇಂಟ್ ಸೈಮನ್ ರವರ ಕೃತಿಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸುತ್ತಿದ್ದರು.

ಕಾರ್ಲ್ ಮಾರ್ಕ್ಸ್ ತಮ್ಮ ಬಾಲ್ಯವನ್ನು ತುಂಬಾ ವಾತ್ಸಲ್ಯಪೂರಿತ ವಾತಾವರಣದಲ್ಲಿ ಸಂತೋಷದಾಯಕವಾಗಿ ಕಳೆದರು. ಅವರು ತಮ್ಮ ಜನ್ಮಸ್ಥಳವಾದ ಟ್ರಿಯರ್ ನಗರದಲ್ಲಿಯೇ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಅವರಿಗೆ ಆರಂಭದಿಂದಲೂ ಅರ್ಥಶಾಸ್ತ್ರದ ಬಗ್ಗೆ ಅಪಾರವಾದ ಆಸಕ್ತಿ ಇತ್ತು. ಎಳೆಯ ವಯಸ್ಸಿನಿಂದಲೇ ಹೆಚ್ಚು ಹೆಚ್ಚು ಅವಧಿ ಕುಳಿತು ಓದುವುದು ಮತ್ತು ಬುದ್ದಿವಂತರ ಜೊತೆ ಗಂಟೆಗಟ್ಟಲೇ ಚರ್ಚೆ ಮಾಡುವುದು ಕಾರ್ಲ್ ಮಾರ್ಕ್ಸ್ ರವರಿಗೆ ಬಹಳವಾಗಿ ಅಭ್ಯಾಸವಾಗಿತ್ತು. ಯುವಕ ಕಾರ್ಲ್ ಮಾರ್ಕ್ಸ್ ರವರು ತಮ್ಮ ತಂದೆಯವರ ಸಲಹೆಯ ಮೇರೆಗೆ ಕಾನೂನಿನ ಅಧ್ಯಯನಕ್ಕಾಗಿ ಬಾನ್ ವಿಶ್ವವಿದ್ಯಾನಿಲಯವನ್ನು ಸೇರಿದರು. ಆಗ ಅವರಿಗೆ ಹದಿನೇಳು ವರ್ಷ ವಯಸ್ಸಾಗಿತ್ತು. ಆದರೆ ಅವರು 1836 ರಲ್ಲಿ ಬಾನ್ ವಿಶ್ವ ವಿದ್ಯಾನಿಲಯವನ್ನು ಬಿಟ್ಟು ಬರ್ಲಿನ್ ವಿಶ್ವವಿದ್ಯಾನಿಲಯವನ್ನು ಸೇರಿದರು. ಅವರು ಬರ್ಲಿನ್ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದ್ದು ಅವರ ಜೀವನದಲ್ಲಿ ಒಂದು ಹೊಸ ತಿರುವನ್ನು ಪಡೆಯುವಂತೆ ಮಾಡಿತು. ಅವರು ಅಲ್ಲಿ ಕಾನೂನಿನ ಜೊತೆಗೆ ತತ್ವಶಾಸ್ತ್ರ ಮತ್ತು ಇತಿಹಾಸಗಳನ್ನೂ ಅಧ್ಯಯನ ಮಾಡಿದರು. ಅವರು ಸಾಹಿತ್ಯದ ಬಗ್ಗೆಯೂ ಬಲವುಳ್ಳವರಾಗಿದ್ದು, ಕೆಲವಾರು ಪದ್ಯಗಳ ರಚನೆಯನ್ನೂ ಮಾಡಿದರು.

ಕಾರ್ಲ್ ಮಾರ್ಕ್ಸ್ ರವರು ಬರ್ಲಿನ್ ವಿಶ್ವವಿದ್ಯಾನಿಲಯವನ್ನು ಪ್ರವೇಶಿಸುವು ದರೊಳಗಾಗಿ ಜರ್ಮನಿಯ ಆ ಕಾಲದ ಸುಪ್ರಸಿದ್ಧ ದಾರ್ಶನಿಕರಾದ ಹೆಗಲ್ ರವರು ಮರಣ ಹೊಂದಿದ್ದರು. ಆದರೆ ಅವರ ಪ್ರಭಾವವು ಅಲ್ಲಿ ಇನ್ನೂ ಗಾಢವಾಗಿ ಕಂಡುಬರುತ್ತಿತ್ತು.

ಕಾರ್ಲ್ ಮಾರ್ಕ್ಸ್ ರವರು ಪಂಥದ ತರುಣರ ಸಂಪರ್ಕ ಹಾಗೂ ಸಹವಾಸ ಪಡೆಯಾಗಿ ಬುದ್ಧಿಜೀವಿಗಳಾದ ಅವರಿಂದ ಗಣನೀಯವಾಗಿ ಪ್ರಭಾವಿತರಾದರು. ದಿನಗಳು ಉರುಳಿದಂತೆ ಅವರು ಹೆಗಲ್ ಮತ್ತು ಲುಡ್ ವೈಗ್ ಫೆನರ್ ಬಾಕ್ ಇವರುಗಳ ಬರವಣಿಗೆಗಳಿಂದ ಬಹಳವಾಗಿ ಆಕರ್ಷಿತರಾದರು. ಸಮಾಜದ ಆರ್ಥಿಕ ವ್ಯವಸ್ಥೆಯ ಅರಿವಿನಲ್ಲಿ ಸಮಾಜದ ಆಗುಹೋಗುಗಳು ಅಡಗಿರುವುದನ್ನು ಕಂಡರು.

ಕಾರ್ಲ್ ಮಾರ್ಕಸ್ ರವರ ಮೇಲೆ ಕಾನೂನಿನ ಅಧ್ಯಯನದ ಅವರ ಗುರುಗಳಾದ ನ್ಯಾಯ ತತ್ವಶಾಸ್ತ್ರದ ಐತಿಹಾಸಿಕ ಪಂಥದ ಸಂಸ್ಥಾಪಕರಾದ ಸಾವಿಗ್ನಿ ಮತ್ತು ಗಾನ್ಸ್ ಇವರೂ ಸಹ ಸಾಕಷ್ಟು ಪ್ರಭಾವ ಬೀರಿದರು. ಸಾವಿಗ್ನಿರವರು ತಮ್ಮ ಐತಿಹಾಸಿಕ ಪಾಂಡಿತ್ಯ ಮತ್ತು ಪರಿಣಾಮಕಾರಿಯಾಗಿ ವಾದಿಸುವ ಸಾಮರ್ಥ್ಯಗಳಿಂದ ಕಾರ್ಲ್ ಮಾರ್ಕ್ಸ್ ರವರ ಗಮನ ಸೆಳೆದರು. ಗಾನ್ಸ್ ರವರು ಕಾರ್ಲ್ ಮಾರ್ಕ್ಸ್ ರವರಿಗೆ ಐತಿಹಾಸಿಕ ದರ್ಶನದ ಬೆಳಕಿನಲ್ಲಿ ಸೈದ್ದಾಂತಿಕ ವಿಮರ್ಶೆಯ ವಿಧಾನಗಳನ್ನು ಬೋಧಿಸಿದರು.

ಕಾಲಗತಿಯಲ್ಲಿ ಕಾರ್ಲ್ ರವರು ಬಹಳ ಮಟ್ಟಿಗೆ ಸಂಪ್ರದಾಯ ವಿರೋಧಿಗಳಾಗಿದ್ದು ಧರ್ಮ ವಿರೋಧಿ ಎಡ ಪಂಥದ ಉಗ್ರ ವಿಚಾರಗಳಿಂದ ಕೂಡಿದ ಯುವಕ ದಾರ್ಶನಿಕರುಗಳ ಗುಂಪಿಗೆ ಸೇರಿದರು. ಆ ಗುಂಪಿನಲ್ಲಿ ತೀವ್ರಗಾಮಿ ಮತ್ತು ಸ್ವತಂತ್ರವಾಗಿ ಆಲೋಚಿಸುತ್ತಿದ್ದ ಹೇಗಲಿಯನ್ ಪಂಥಕ್ಕೆ ಸೇರಿದ ಸಹೋದರರಾದ ಬ್ರೂನೋ ಹಾಗು ಎಡಗರ್ ಬಾಯರ್, ವೈಯಕ್ತಿಕ ಅರಾಜಕತಾವಾದಿಯಾದ ಮ್ಯಾಕ್ಸ್ ಸ್ಪಿರ್ನರ್ ಮುಂತಾದವರಿದ್ದರು. ಇಂತಹ ವ್ಯಕ್ತಿಗಳಿಂದ ಪ್ರಭಾವಿತರಾದ ಕಾರ್ಲ್ ರವರು ಕಾನೂನುಶಾಸ್ತ್ರದ ಅಧ್ಯಯನವನ್ನು ಬಿಟ್ಟು ತತ್ವಜ್ಞಾನದ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಆಳವಾಗಿ ಅಭ್ಯಸಿಸತೊಡಗಿದರು. ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವಾಗಲೇ ಕಾರ್ಲ್ ಮಾರ್ಕ್ಸ್ ರವರು ಮುಂದೆ ತಾವೊಬ್ಬ ತತ್ವಜ್ಞಾನದ ಪ್ರಾಧ್ಯಾಪಕರಾಗಬೇಕೆಂಬುದಾಗಿ ಅಪೇಕ್ಷಿಸಿದ್ದರು. ಬಾನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿ ಆಗತಾನೇ ಸೇರಿಕೊಂಡಿದ್ದ ಅವರ ಸ್ನೇಹಿತ ಬ್ರೂನೋರವರು ಕಾರ್ಲ್ ಮಾರ್ಕ್ಸ್ ರವಿಗೂ ಸಹ ಒಂದು ಅಧ್ಯಾಪಕನ ಹುದ್ದೆಯನ್ನು ದೊರಕಿಸಿಕೊಡುವ ಭರವಸೆ ನೀಡಿದ್ದರು. ಆದರೆ ಸ್ವಲ್ಪ ಕಾಲದಲ್ಲಿಯೇ ಬಾನ್ ವಿಶ್ವವಿದ್ಯಾನಿಲಯದಿಂದ ಬ್ರೂನೋರವರು ತಮ್ಮ ಧರ್ಮ ವಿರೋಧಿ ಅಭಿಪ್ರಾಯಗಳಿಗಾಗಿ ಮತ್ತು ಉದಾರವಾದಿ ರಾಜಕೀಯ ತತ್ವಗಳ ಮೇಲೆ ಇರಿಸಿಕೊಂಡಿದ್ದ ನಂಬಿಕೆಗಳಿಗಾಗಿ ಕೆಲಸದಿಂದ ವಜಾ ಮಾಡಲ್ಪಟ್ಟರು. ತತ್ ಪರಿಣಾಮವಾಗಿ ಕಾರ್ಲ್ ಮಾರ್ಕ್ಸ್ ರವರು ಅಲ್ಲಿ ಕೆಲಸ ಪಡೆಯಬಹುದಾದ ಆಸೆಯೂ ಭಗ್ನವಾಯಿತು. ಈ ನಡುವೆ 1838 ರಲ್ಲಿ ಕಾರ್ಲ್ ರವರ ತಂದೆ ಕಾಲವಾದರು.

ಕಾರ್ಲ್ ಮಾರ್ಕ್ಸ್ ರವರು ಬರ್ಲಿನ್ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆಯಲು ಪ್ರಯತ್ನಿಸಿ, ಅವರು ಪ್ರತಿಪಾದಿಸಿದ್ದ ಕೆಲವಾರು ಉಗ್ರ ಎಡಪಂಥೀಯ ವಿಚಾರಗಳಿಂದಾಗಿ ವಿಫಲರಾದರು. ಆದಾಗ್ಯೂ 1841ರಲ್ಲಿ ‘ಜೆನಾ’ ವಿಶ್ವವಿದ್ಯಾನಿಲಯವು ಕಾರ್ಲ್ ಮಾರ್ಕ್ಸ್ ರವರು ಬರೆದ “ಆನ್ ದಿ ಡಿಫರೆನ್ಸ್ ಬಿಟ್ ವೀನ್ ದಿ ನ್ಯಾಚುಲರ್ ಫಿಲಸಫಿ ಆಫ್ ಡೆಮಾಕ್ರಟಿಕ್ ಅಂಡ್ ಎಪಿಕ್ಯುರಸ್” ಎಂಬ ಪ್ರಬಂಧವನ್ನು ಮನ್ನಿಸಿ ಅವರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಿತು. ಆ ವೇಳೆಗಾಗಲೇ ಅವರು 23 ವರ್ಷಗಳ ಯುವಕ ತತ್ವಜ್ಞಾನಿಯಾಗಿ ಉನ್ನತ ವರ್ಗಗಳ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಾ ಸಾಕಷ್ಟು ಪ್ರಮಾಣದಲ್ಲಿ ಪ್ರಭಾವ ಬೀರತೊಡಗಿದರು.

ಈ ಸಂದರ್ಭದಲ್ಲಿ ಕಾರ್ಲ್ ರವರ ಬಗ್ಗೆ ಅಪಾರವಾದ ಮೆಚ್ಚುಗೆ ಬೆಳೆಸಿಕೊಂಡಿದ್ದ ಸಮಾಜವಾದಿಯೂ ಉದ್ರೇಕಕಾರಿಯೂ ಎನಿಸಿದ್ದ ಮೋಸೆಸ್ ಹೆಸ್ ಎಂಬುವವರು ಕಾಲೋಗ್ನೆಯಿಂದ ಪ್ರಕಟವಾಗುತ್ತಿದ್ದ ಉದಾರವಾದಿ ಹಾಗೂ ಉದ್ರೇಕಕಾರಿ ಪತ್ರಿಕೆ ಎಂಬುದಾಗಿ ಹೆಸರುವಾಸಿಯಾಗಿದ್ದು “ಹೀನಿಜ್ ಜ್ಯೂಟಿಂಗ್” ಪತ್ರಿಕೆಗೆ ಲೇಖನಗಳನ್ನು ಬರೆಯಲು ಅವರನ್ನು ಆಹ್ವಾನಿಸಿದರು. ಕ್ರಮೇಣ ಕಾರ್ಲ್ ಮಾರ್ಕ್ಸ್ ರವರು ಆ ಪತ್ರಿಕೆಯ ಪ್ರಧಾನ ಸಂಪಾದಕರಾದರು. ಈ ಅವಧಿಯಲ್ಲಿ ಅವರು ದ್ರಾಕ್ಷಿ ಬೆಳೆಯುವ ರೈತರು ಹಾಗು ಬಡ ಜನರ ಜೀವನದ ಪರಿಸ್ಥಿತಿಗಳು ಹಾಗೂ ಸಮಸ್ಯೆಗಳನ್ನು ಕುರಿತು ಆಕರ್ಷಕ ಲೇಖನ ಮಾಲೆಯನ್ನು ಬರೆದು ಪ್ರಕಟಿಸಿದರು. ಅವರ ಲೇಖನಗಳು ಸಾರ್ವಜನಿಕರನ್ನು ಬಹಳವಾಗಿ ಆಕರ್ಷಿಸಿದವು. ಪತ್ರಿಕೆಯು ದಿನ ದಿನಕ್ಕೆ ಹೆಚ್ಚು ಹೆಚ್ಚು ಜನಪ್ರಿಯವಾಗತೊಡಗಿತು. ಆದರೆ ಕಾರ್ಲ್ ಮಾರ್ಕ್ಸ್ ರವರ ಗಂಭೀರ ಕ್ರಾಂತಿಕಾರಿ ಲೇಖನಗಳಿಂದ ಪತ್ರಿಕೆಯು ಸರ್ಕಾರದ ಅವಕೃಪೆಗೆ ಪಾತ್ರವಾಯಿತು. ಅವರು ರಷ್ಯಾ ದೇಶದ ಸರ್ಕಾರವನ್ನು ಯೂರೋಪ್ ಖಂಡದ ಪ್ರತಿಗಾಮಿಗಳ ಪ್ರಮುಖ ನಿರ್ದೇಶಕನೆಂದು ಹೆಸರಿಸಿ ಅಗ್ರ ಲೇಖನ ಬರೆದಾಗ, ಅವರು ಸರ್ಕಾರದ ಕೋಪಕ್ಕೆ ತುತ್ತಾದರು. ಕಾರ್ಲ್ ರವರ ಈ ಲೇಖನ ರಷ್ಯಾ ದೇಶದ ಚಕ್ರವರ್ತಿಯಾಗಿದ್ದ ಒಂದನೇ ನಿಕೋಲಸ್ ರವರ ಗಮನಕ್ಕೆ ಬಂದಿತು ಮತ್ತು ಆತನು ಈ ಕೂಡಲೇ ಪ್ರಷ್ಯಾ ದೇಶದ ರಾಯಭಾರಿಯ ಮೂಲಕ ತನ್ನ ಪ್ರತಿಭಟನೆಯನ್ನು ಆ ದೇಶಕ್ಕೆ ಕಳಿಸಿಕೊಟ್ಟನು. ತತ್ ಫಲವಾಗಿ “ಹೀನಿಚ್ ಜ್ಯೂಟಿಂಗ್” ತಮ್ಮ ಸಂಪಾದಕತ್ವವನ್ನು ಕಳೆದುಕೊಂಡು ಯಾವ ಸ್ಥಾನವು ಇಲ್ಲದವರಾದರು.

1843ರಲ್ಲಿ ಕಾರ್ಲ್ ಮಾರ್ಕ್ಸ್ ರವರು ತಮ್ಮ ಬಾಲ್ಯ ಸ್ನೇಹಿತೆಯಾದ ಜಿನ್ನಿವಾನ್ ವೆಸ್ಟ್ ಪೆಲೀನ್ ಎಂಬ ಯುವತಿಯನ್ನು ವಿವಾಹವಾದರು. ದಾಂಪತ್ಯ ಜೀವನದ ಆರಂಭದ ಕೆಲವು ತಿಂಗಳುಗಳನ್ನು ಬಾಡ್ ಕ್ರಿಯಾಂಗ್ ಎಂಬ ಸ್ಥಳದಲ್ಲಿ ಕಳೆದರು. ಆ ಅವಧಿಯಲ್ಲಿಯೇ ಕಾರ್ಲ್ ಮಾರ್ಕ್ಸ್ ರವರು ರಾಜಕೀಯ ಮತ್ತು ಸಾಮಾಜಿಕ ಸಿದ್ದಾಂತಕ್ಕೆ ಸಂಬಂದಿಸಿದ ಹಾಗೆ ಮಾಂಟಿಸ್ಕೋರವರ ‘ಸ್ಪಿರಿಟ್ ಆಫ್ ದಿ ಲಾಸ್’ ಮತ್ತು ರೂಸೋರವರ ‘ಸಾಮಾಜಿಕ ಒಡಂಬಡಿಕೆ’ ಗಳನ್ನೂ ಒಳಗೊಂಡಂತೆ ಹಲವಾರು ಉಪಯುಕ್ತ ಗ್ರಂಥಗಳನ್ನು ಓದಿ ಟಿಪ್ಪಣಿ ಬರೆದುಕೊಂಡರು. ಈ ಸಂದರ್ಭದಲ್ಲಿಯೇ ಅವರು ತಮ್ಮ ಸುಪ್ರಸಿದ್ಧ ವಿಮರ್ಶಾತ್ಮಕ ಲೇಖನ “ಹೆಗೇಲಿಯನ್ ಫಿಲಾಸಫಿ ಆಫ್ ದಿ ಸ್ಟೇಟ್” ಅನ್ನು ಬರೆದರು.

1843ನೇ ಇಸವಿ ಇಸವಿ ನವೆಂಬರ್ ತಿಂಗಳಿನಲ್ಲಿ ಕಾರ್ಲ್ ಮಾರ್ಕ್ಸ್ ರವರು ಅತಿ ಹೆಚ್ಚಿನ ಪ್ರತಿಗಾಮಿ ವಾತಾವಣವಿದ್ದ ಜರ್ಮನಿಯಲ್ಲಿ ತಾವು ಯಾವ ಸ್ಥಾನಮಾನವನ್ನೂ ಸಹ ಪಡೆಯಬಹುದಾದ ಆಸೆಯನ್ನು ಸಂಪೂರ್ಣವಾಗಿ ತೊರೆದು ತಮ್ಮ ಪತ್ನಿಯ ಜೊತೆಯಲ್ಲಿ ಫ್ರಾನ್ಸ್ ದೇಶದ ರಾಜಧಾನಿಯಾದ ಪ್ಯಾರಿಸ್ ನಗರಕ್ಕೆ ಹೊರಟರು. ಮೊದಲಿನಿಂದಲೂ ಸಮಾಜವಾದಿ ತತ್ವಗಳಿಂದ ಬಹಳವಾಗಿ ಪ್ರಭಾವಿತರಾಗಿದ್ದ ಕಾರ್ಲ್ ಮಾರ್ಕ್ಸ್ ರವರು ಆ ಕಾಲಕ್ಕೆ ಸಮಾಜವಾದಿ ಚಳವಳಿ ಸಾಕಷ್ಟು ತೀವ್ರವಾಗಿದ್ದ ಪ್ಯಾರಿಸ್ ನಗರಕ್ಕೆ ಸಂಸಾರ ಸಮೇತ ವಲಸೆ ಬಂದರು.