ಮಡೆಮಡೆಸ್ನಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಡೆಮಡೆಸ್ನಾನ[ಬದಲಾಯಿಸಿ]

ಕರ್ನಾಟಕ ರಾಜ್ಯದ ಮುಜುರಾಯಿ ಇಲಾಖೆಗೊಳಪಟ್ಟ ಅತ್ಯಂತ ಶ್ರೀಮಂತ ದೇವಸ್ಥಾನ ಎಂದು ಪ್ರಸಿದ್ದಿಪಡೆದಿರುವುದು ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ. ದೇಶದ ವಿವಿಧ ಭಾಗಗಳಿಂದ ಯಾತ್ರಿಕರು ಭೇಟಿ ನೀಡುತ್ತಿರುವ ಈ ದೇವಸ್ಥಾನದಲ್ಲಿ ನಡೆಸುವ ವಿಶಿಷ್ಟ ಸೇವೆ ಮಡೆ ಮಡೆಸ್ನಾನ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಸಮುದ್ರ ಮಟ್ಟದಿಂದ ೫೬೨೬ ಅಡಿ ಎತ್ತರದಲ್ಲಿದ್ದು, ಶೇಷ ಪರ್ವತ ಹಾಗೂ ಕುಮಾರ ಪರ್ವತದ ತಪ್ಪಲಿನಲ್ಲಿ ಕುಮಾರಧಾರ ನದಿಯ ದಡದಲ್ಲಿದೆ. ಸ್ಕಂದ ಪುರಾಣದಲ್ಲಿ ಈ ಕ್ಷೇತ್ರದ ವರ್ಣನೆಯಿದೆ. ಕುಮಾರಸ್ಕಂದನು ತಾರಾಕಾಸುರನನ್ನು ಸಂಹರಿಸಿ, ತನ್ನ ಶಕ್ತ್ಯಾಯುಧವನ್ನು ಈ ನದಿಯಲ್ಲಿ ತೊಳೆದುದರಿಂದ ನದಿಗೆ ಕುಮಾರಧಾರ ಎಂಬ ಹೆಸರು ಬಂತೆಂದೂ, ಅದೊಂದು ಪುಣ್ಯತೀರ್ಥವಾಯಿತೆಂದು ವಿವರಣೆಯಿದೆ. ಭರತಖಂಡದ ೧೦೮ ಶೈವ ಕ್ಷೇತ್ರಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯವು ಒಂದು. ಸುಬ್ರಹ್ಮಣ್ಯ ಎನ್ನುವುದು ಈ ಕ್ಷೇತ್ರದ ಪ್ರಾಚೀನ ಹೆಸರಲ್ಲ. ಪ್ರಾಚೀನ ಗ್ರಂಥಗಳು ಶಾಸನಗಳಲ್ಲಿ ‘ಕುಕ್ಕೆ’ ಕುಕ್ಕೆಪುರ, ಕುಕ್ಕೆಪಟ್ಟಣ ಎನ್ನುವ ಹೆಸರಿದೆ. ಸುಬ್ರಹ್ಮಣ್ಯ ಎನ್ನವ ಹೆಸರು ೨೦ನೇ ಶತಮಾನದ ಆದಿಯಲ್ಲಿ ಹುಟ್ಟಿಕೊಂಡಿತೆಂದು ದಾಖಲೆಗಳಿಂದ ತಿಳಿದು ಬರುತ್ತದೆ. ಪ್ರಾಚೀನ ಅರ್ವಾಚೀನ ಎರಡು ಹೆಸರುಗಳನ್ನು ಕೂಡಿಸಿ ಕುಕ್ಕೆ ಸುಬ್ರಹ್ಮಣ್ಯ ಎಂದು ಕರೆಯುವುದೂ ಇದೆ. ಕುಕ್ಕೆ ಕ್ಷೇತ್ರವು ಪ್ರಾಚೀನ ಕಾಲದಲ್ಲಿಒಂದು ದೊಡ್ಡ ಪಟ್ಟಯ್ವಾಗಿತ್ತು. ವಿಜಯ ನಗರ ಅರಸರಕಾಲದಲ್ಲಿ ವೈಭವದಿಂದ ಮೆರೆಯುತ್ತಿತ್ತು. ನಂತರ ಪಾಳೇಗಾರರ ಆಳ್ವಕೆಗೆ ಒಳಪಟ್ಟಿತ್ತು. ಬಂಗರಸರಕಾಲದಲ್ಲಿ ಶ್ರೀ ಕ್ಷೇತ್ರದ ಆಡಳಿತವು ಅಲ್ಲಿಯ ಶಿವ ಸ್ಥಾನಿಕ ಬ್ರಾಹ್ಮಣರ ಕೈಗೆ ಬಂದು, ಬಲ್ಲಾಳರ ಕಾಲದಲ್ಲಿ ಜೀರ್ಣೋದ್ಧಾರ ಪಡೆಯಿತು. ಸ್ಕಂದನ ಆರಾಧನೆ, ನಾಗಾರಾಧನೆಯೊಂದಿಗೆ ಬೆರೆತುಕೊಂಡಿರುವುದು ಈ ಕ್ಷೇತ್ರದ ವಿಶೇಷ. ಹಿಂದೆ ಗೊಂಡಾರಣ್ಯದಿಂದ ಸುತ್ತುವರೆದಿದ್ದ ಈ ಕ್ಷೇತ್ರಕ್ಕೆ ಈಗ ದೇಶದ ನಾನಾ ಭಾಗಗಳಿಂದ ಜಾತಿ, ಧರ್ಮಗಳ ಬೇಧವಿಲ್ಲದೆ ಯಾತ್ರಿಗಳು ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ.

ಮಡೆಸ್ನಾನದ ವಿಧಗಳು[ಬದಲಾಯಿಸಿ]

ಶ್ರೀ ಕ್ಷೇತ್ರದಲ್ಲಿ ಭಕ್ತಾಧಿಗಳು ನಡೆಸುವ ಒಂದು ವಿಶಿಷ್ಟವಾದ ಸೇವೆ ಮಡೆಮಡೆಸ್ನಾನ ಇದು ಮಡೆಸ್ನಾನದ ಒಂದು ವಿಧ. ಮಡೆಸ್ನಾನದಲ್ಲಿ ಬೀದಿ ಮಡೆಸ್ನಾನ ಮೂಲೆಮಡೆಸ್ನಾನ, ಅಂಗಣ ಮಡೆಸ್ನಾನ ಮತ್ತು ಮಡೆ ಮಡೆಸ್ನಾನಗಳೆಂಬ ವಿಧಗಳಿವೆ. ಬೀದಿ ಮಡೆಸ್ನಾನ ಮತ್ತು ಮಡೆ ಮಡೆಸ್ನಾನ ಶ್ರೀ ದೇವರಜಾತ್ರ ಮಹೋತ್ಸವ ಸಂದರ್ಭದಲ್ಲಿ ಮಾತ್ರ ನಡೆಯುತ್ತದೆ. ಮಡೆಮಡೆಸ್ನಾನ ಎಂದರೆ ದೇವಳದ ಹೊರಾಂಗಣದಲ್ಲಿ ಬ್ರಾಹ್ಮಣರ ಅನ್ನ ಸಂತರ್ಪಣೆಯ ಎಲೆಯ ಮೇಲೆ ಭಕ್ತಾಧಿಗಳು ಉರುಳುಸೇವೆ ಮಾಡುವುದು. ಇದೊಂದು ಸ್ವಯಂ ಪ್ರೇರಿತ ರಶೀದಿ ರಹಿತ ಸೇವೆ ಭಕ್ತಾಧಿಗಳು ಸ್ವಯಂಇಚ್ಚೆಯಿಂದ ಶ್ರೀ ಕ್ಷೇತ್ರದ ಸನ್ನಿಧಿಯಲ್ಲಿ ಹರಕೆ ಮಾಡಿಕೊಂಡು ಸೇವೆ ಸಲ್ಲಿಸುವುದು ಸಂಪ್ರದಾಯ ಬದ್ದವಾಗಿ ಪಡೆದುಕೊಂಡು ಬಂದ ಪದ್ಧತಿ. ನಾಗಸ್ವರೂಪ ಶ್ರೀ ಸುಬ್ರಹ್ಮಣ್ಯದೇವರಿಗೆ ಮಡೆಮಡೆಸ್ನಾನ ಅತೀಪ್ರಿಯವಾದ ಸೇವೆ. ಮತು ಭಕ್ತರ ಇಷ್ಟಾರ್ಥಗಳಿಗೆ ಶ್ರೀಘ್ರ ಫಲದಾಯಕ ಎಂಬ ನಂಬಿಕೆಯಿಂದ ಭಕ್ತರು ಈ ಮಡೆಮಡೆಸ್ನಾನ ಸೇವೆಯನ್ನು ನಡೆಸುತ್ತಾರೆ.

ಸ್ವಇಚ್ಚೆಯ ಸೇವೆ[ಬದಲಾಯಿಸಿ]

ಇದು ಭಕ್ತಾಧಿಗಳು ಸ್ವಇಚ್ಚೆಯಿಂದ ಮಾಡುವ ಸೇವೆ ಈ ಸೇವೆಯಿಂದ ಅವರಿಗೆ ಒಳ್ಳೆಯಾದಾಗಿದೆ. ಸುಬ್ರಹ್ಮಣ್ಯ ಶ್ರೀ ಅನಂತ ನಲ್ಲೂರಾಯರ ಅಭಿಪ್ರಾಯದಂತೆ “ಇದು ಯಾವೂದೋ ಒಂದು ಕಾಲದಲ್ಲಿ ಬೆಳೆದು ಬಂತು ದೇವರ ಧಾರ್ಮಿಕ ವಿಶ್ವಾಸ ಮತ್ತು ನಂಬಿಕೆಯ ಮೇಲೆ ಇದು ಅವಲಂಬಿತವಾಗಿದೆ” ಜನರಿಗೆ ಕಷ್ಟ ಬಂದಾಗ ಇಂತಹ ಹರಕೆ ಹೇಳಿಕೊಳ್ಳುತ್ತಾರೆ ಹರಕೆ ಸಲ್ಲಿಸುತ್ತಾರೆ. ೨೦೧೧ರ ಚಂಪಾಷಷ್ಠಿ ಜಾತ್ರೋತ್ಸವದ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮಡೆಮಡೆಸ್ನಾನವನ್ನು ಸರಕಾರ ನಿಷೇಧಿಸಿತ್ತು. ನಂತರ ಇದು ಹೈಕೋರ್ಟ್ ಮೆಟ್ಟಿಲೇರಿತು. ನಂತರ ಎಡೆಸ್ನಾನ ಬಂತು ಓರ್ವ ಭಕ್ತಾರ ಸೇವಾ ಆಪೇಕ್ಷೆಯಂತೆ ಇದು ಸುಪ್ರೀಂಕೋರ್ಟ್ನ ಮೆಟ್ಟಿಲನ್ನು ಏರಿದೆ. ಹೀಗೆ ಪರ ವಿರೋಧಗಳ ನಡುವೆ ಇದೆ. ಮಡೆಸ್ನಾನ, ಮಡೆಮಡೆಸ್ನಾನ ಅಥವಾ ದೇವರಿಗೆ ನೆರವೇರಿಸುವ ಯಾವುದೇ ಸೇವೆ ಭಕ್ತಾಧಿಗಳ ನಂಬಿಕೆಯ ಮೇಲೆ ನಿಂತಿದೆ.

ಉಲ್ಲೇಖಗಳು[ಬದಲಾಯಿಸಿ]

ಪ್ರತಿಭಾ ವಾರ್ಷಿಕ ಸಂಚಿಕೆ ೨೦೧೭-೨೦೧೮ ಸಂಪಾದಕರು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ.ಪುಟ ಸಂಖ್ಯೆ-೩೯