ಹಡಪದ ಅಪ್ಪಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


"ಹಡಪದ ಅಪ್ಪಣ್ಣ" ನವರು ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಇವರು "ಹಡಪದ" ಸಮಾಜದವರಾಗಿದ್ದು ಬಸವಣ್ಣನವರ ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು. ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಇವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ "ಅನುಭವ ಮಂಟಪದಲ್ಲಿ" ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ, ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗುರವಾಗದಂತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರ ಕಾರ್ಯಕ್ಷಮತೆಗೆ ಇಂದಿನವರಿಗೆ ಕನ್ನಡಿಯಾಗಿದೆಯೆಂದರೆ ತಪ್ಪಾಗಲಾರದು. "ಅಂದು ಹಡಪದ ಸಮಾಜದವರು ಬೆಳಿಗ್ಗೆ ಎದರುಗಡೆ ಬಂದರೆ ಏನೋ ಆಗುತ್ತದೆ ಎಂಬ ಮೂಢ ನಂಬಿಕೆಯನ್ನು ಹೋಗಲಾಡಿಸುವುದಕ್ಕಾಗಿಯೆ ಬಸವಣ್ಣನವರು ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ನೊಡಿಕೊಂಡು ಬರಬೇಕೆಂಬ ನಿಯಮವನ್ನೇ ಮಾಡಿದ್ದರೆಂಬ ಪ್ರತೀತಿ ಇದೆ". ಇವರ ಧರ್ಮಪತ್ನಿ ಲಿಂಗಮ್ಮನವರೂ ಸಹ ಮಹಾನ್ ವಚನಗಾರ್ತಿಯಾಗಿದ್ದರು. ಇವರ ಊರು ವಿಜಯಪುರ ಜಿಲ್ಲೆಯ ತಂಗಡಗಿಯಾಗಿರುತ್ತದೆ ಅಲ್ಲಿಯೆ ಇವರ ಸಮಾಧಿಯೂ ಸಹ ಇದೆ. ಇವರು ಸುಮಾರು ೨೫೦ಕ್ಕೂ ಹೆಚ್ಚು ವಚನಗಳನ್ನು ಅಪ್ಪಣ್ಣ ಪ್ರಿಯ ಚನ್ನಬಸವಣ್ಣ ಎಂಬ ಅಂಕಿತನಾಮದಿಂದ ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರಿಗೆ ಅಪ್ಪಣ್ಣನವರು ಪ್ರಾಣವೇ ಆಗಿದ್ದರೆಂಬುದಕ್ಕೆ ಕಲ್ಯಾಣಕ್ರಾಂತಿಯ ಕೊನೆಯ ದಿನಗಳನ್ನು ತಿಳಿದುಕೊಂಡರೆ ಗೊತ್ತಾಗುತ್ತದೆ. ಒಬ್ಬ ಕಾರ್ಯದರ್ಶಿ ಹೇಗೆ ಕಾರ್ಯನಿರ್ವಹಿಸಬೇಕೆಂಬುದಕ್ಕೆ ಹಡಪದ ಆಪ್ಪಣ್ಣನವರು ಒಂದು ಉತ್ತಮ ಉದಾಹರಣೆಯಾಗಿರುತ್ತಾರೆ. ಇವರ ಜೀವನದ ಬಗ್ಗೆ ಇನ್ನೂ ಹೆಚ್ಚಿನ ಸಂಶೋದನೆಯಾಗಬೇಕಾಗಿದೆ.