ಅರಣ್ಯಗಳು ಮತ್ತು ಅರಣ್ಯಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಿಡಮರಗಳಿಂದ ಕೂಡಿ ಒಂದು ಯಾಜಮಾನ್ಯಕ್ಕೆ ಅಥವಾ ಆಡಳಿತಕ್ಕೆ ಸೇರಿರುವ ಅಥವಾ ವನಖಂಡಗಳಿಂದ ಕೂಡಿರುವ ಪ್ರದೇಶ ಅರಣ್ಯ (ಫಾರೆಸ್ಟ್). ಅರಣ್ಯಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸಿ, ಬೆಳೆಸಿ ಅವುಗಳಿಂದ ಪರಮಾವಧಿ ಉಪಯೋಗ ಹೊಂದುವ ವಿಧಾನ ಅರಣ್ಯಶಾಸ್ತ್ರ (ಫಾರೆಸ್ಟ್ರಿ). ಸಂಯುಕ್ತರಾಷ್ಟ್ರಗಳ (ಯು.ಎನ್.) ಆಹಾರ ಮತ್ತು ಕೃಷಿ ವಿಭಾಗ (ಫುಡ್ ಅಂಡ್ ಅಗ್ರಿಕಲ್ಚರಲ್ ಆರ್ಗನೈಜೇಷನ್, ಎಫ್.ಎ.ಓ.) ನೀಡಿರುವ ವ್ಯಾಖ್ಯೆಯ ಪ್ರಕಾರ ಸಸ್ಯಸಮುದಾಯದಿಂದ ವ್ಯಾಪ್ತವಾಗಿರುವ, ಎಲ್ಲ ಗಾತ್ರದ ಗಿಡಮರಗಳು ಪ್ರಧಾನವಾಗಿರುವ, ಕಡಿಯಲಿ ಬಿಡಲಿ ಮರಮುಟ್ಟು, ಸೌದೆ ಒದಗಿಸಲು ಸಮರ್ಥವಾಗಿರುವ ಅಥವಾ ಸ್ಥಳೀಯ ಹವೆಯ ಮೇಲೆ ಅಥವಾ ಜಲಸಂಪತ್ತಿನ ಮೇಲೆ ಪ್ರಭಾವ ಬೀರಲು ಶಕ್ತವಾಗಿರುವ, ಎಲ್ಲ ನೆಲೆಗಳಿಗೂ ಅರಣ್ಯ ಎಂಬ ಹೆಸರಿದೆ. ಕಾಡು, ಅಡವಿ ಪರ್ಯಾಯ ಪದಗಳು. ಕಾಡನ್ನು ಈಚೆಗೆ ಕಡಿದುಳಿಸಿರುವ ಆದರೆ ಬೇಗನೆ ಹೊಸಕಾಡನ್ನು ಬೆಳೆಸಲು ಉದ್ದೇಶಿಸಿರುವ ನೆಲವೂ ಅರಣ್ಯವೇ. ಉದ್ಯಾನವನಗಳು, ದಾರಿಕರೆ ಮರಸಾಲುಗಳು, ವ್ಯಾವಸಾಯಿಕೋತ್ಪನ್ನಕ್ಕಾಗಿ ನೆಟ್ಟು ಬೆಳೆಸಿದ ತೋಟಗಳು ಅರಣ್ಯ ಪದದ ವ್ಯಾಪ್ತಿಯಲ್ಲಿಲ್ಲ.[೧]

ಅರಣ್ಯ[ಬದಲಾಯಿಸಿ]

ಕೇವಲ ಗಿಡಮರ ಮುಂತಾದ ಸಸ್ಯಸಮುದಾಯಕ್ಕೆ ಮಾತ್ರ ಈ ಪದ ಸೀಮಿತವಲ್ಲ; ಆ ಪ್ರದೇಶದಲ್ಲಿ ಇರುವ ಕ್ರಿಮಿಕೀಟಗಳು, ಪ್ರಾಣಿಗಳು ಅರಣ್ಯೋತ್ಪತ್ತಿಗಳು ಇವೆಲ್ಲವನ್ನೂ ಅರಣ್ಯಪದ ಒಳಗೊಂಡಿದೆ.

ಬೆಳೆವಣಿಗೆ[ಬದಲಾಯಿಸಿ]

ಅರಣ್ಯಗಳ ಬೆಳೆವಣಿಗೆಯ ಮೇಲೆ ಪ್ರಭಾವಬೀರುವ ನೈಸರ್ಗಿಕ ಬಲಗಳು ನಾಲ್ಕು. 1 ಭೂಲಕ್ಷಣ-ಬೆಟ್ಟ ಕಣಿವೆಗಳು, ಮಟ್ಟಸಪ್ರದೇಶಗಳು, ಕೊರಕಲುಗಳು, ಮರುಭೂಮಿ ಮುಂತಾದುವು. 2 ಮಣ್ಣಿನ ಗುಣ-ಮಣ್ಣಿನ ರಾಸಾಯನಿಕ ರಚನೆ, ಮರಳು ಜೇಡಿಮಣ್ಣು, ಜೌಗುನೆಲ, ಒಣನೆಲ ಮುಂತಾದವುಗಳಿಂದ ನಿರ್ಧರಿತವಾಗುವುದು. 3 ವಾಯುಗುಣ-ಹವೆಯ ಮೇಲೆ ಇದರ ಪ್ರಭಾವವಿದೆ. ಒಂದು ಪ್ರದೇಶದ ವಾಯು ಗುಣ ಆ ಪ್ರದೇಶದ ಭೌಗೋಳಿಕ ಸ್ಥಾನವನ್ನೂ ಋತುಭೇದಗಳನ್ನೂ ವಿಶೇಷವಾಗಿ ಅವಲಂಬಿಸಿದೆ. 4 ತೇವಕಾರಕ ಗುಣ-ಆಯಾ ಸ್ಥಳದ ಸಸ್ಯವರ್ಗದ ನಮೂನೆಯನ್ನು ಆಯಾ ಭೂಮಿಯ ಹಿಂದಿನ ಸಂಸ್ಕಾರ ಬಹುವಾಗಿ ಪ್ರಭಾವಿಸುತ್ತದೆ. ಹೊರಗಿನ ಕಾರಕಗಳ ಪ್ರದೇಶವಿಲ್ಲದೆ ಯಾವ ಅಡವಿಯೂ ಬೆಳೆಯುವುದಿಲ್ಲ. ದೊಡ್ಡ ದೊಡ್ಡ ಮೃಗಗಳ ಅದರಲ್ಲೂ ಮನುಷ್ಯ ಮತ್ತು ಅವನು ಸಾಕುವ ಮೃಗಗಳ ನೇರವಾಗಿಯೋ ಪರೋಕ್ಷವಾಗಿಯೋ ಕಾಡಿನ ಬೆಳೆವಣಿಗೆಯ ಮೇಲೆ ಪ್ರಭಾವಬೀರುತ್ತವೆ.

ಉಷ್ಣ, ಸಮಶೀತೋಷ್ ವಲಯದ ಕಾಡುಗಳು[ಬದಲಾಯಿಸಿ]

ಉಷ್ಣ, ಸಮಶೀತೋಷ್ಣ ಮುಂತಾದ ಯಾವುದೇ ಒಂದು ವಲಯದಲ್ಲಿ ಬೆಳೆಯುವ ಕಾಡುಗಳು ಬೇರೆ ಒಂದು ವಲಯದಲ್ಲಿ ಬೆಳೆಯುವ ಕಾಡುಗಳಿಗಿಂತ ಭಿನ್ನವಾಗಿರುತ್ತವೆ. ಒಂದೇ ಹವೆಯ ವಲಯದಲ್ಲಿಯೇ ನೆಲದ ಏರು ತಗ್ಗು ಗಾಳಿಯ ಹೊಡೆತದ ದಿಕ್ಕು, ಮಳೆ, ಹವೆಯ ಮಣ್ಣಿನ ಗುಣ ಮುಂತಾದುವನ್ನು ಅನುಸರಿಸಿ ಭಿನ್ನತೆ ತಲೆದೋರುವುದು. ಒಂದು ಪ್ರದೇಶದ ಸಸ್ಯವರ್ಗವನ್ನು ಪರೀಕ್ಷಿಸಿ ಆ ಸ್ಥಳದ ವಾಯುಗುಣವನ್ನೂ ವಿಲೋಮವಾಗಿ ವಾಯುಗುಣವನ್ನು ಪರೀಶೀಲಿಸಿ ಅಲ್ಲಿನ ಸಸ್ಯವರ್ಗವನ್ನೂ ವಿವರಿಸುವುದು ಸಾಧ್ಯವಿದೆ. ವಾಯು ಗುಣ ಸ್ಥೂಲವಾಗಿ ಸಸ್ಯಗಳ ನಮೂನೆಯನ್ನು ನಿರ್ಧರಿಸಿದರೆ ಮಣ್ಣಿನ ಗುಣ ಸಸ್ಯಗಳ ಸೂಕ್ಷ್ಮ ವಿವರಗಳನ್ನು ನಿರ್ದಿಷ್ಟಗೊಳಿಸುವುದು. ಭೂಲಕ್ಷಣದ ಮೇಲೆ ನೀರಿನ ಅಭಿಮುಖತೆ (ಡ್ರೈನೇಜ್), ಮುಖ (ಆ್ಯಸ್‍ಪೆಕ್ಟ್) ಮತ್ತು ಎತ್ತರ (ಆಲ್‍ಟಿಟ್ಯೂಡ್) ಇವುಗಳ ಪ್ರಭಾವ ವಿಶೇಷವಾಗಿದೆ. ಇಳಿಜಾರು ಪ್ರದೇಶದಲ್ಲಿ ನೀರಿನ ಬಸಿತದಿಂದ ಮಣ್ಣುತೊಳೆದು ಹೋಗಬಹುದು; ಸಮತಟ್ಟು ಪ್ರದೇಶದಲ್ಲಿ ನೀರು ನಿಂತು ಜೌಗುನೆಲವಾಗಬಹುದು; ಎತ್ತರದಿಂದ ತಗ್ಗಿನ ಕಣಿವೆಗಳಿಗೆ ಮಣ್ಣು ಯಾಂತ್ರಿಕವಾಗಿ ಜರುಗುವುದರಿಂದ ಎತ್ತರ ಸ್ಥಳಗಳಲ್ಲಿ ಮಣ್ಣಿನ ಸಾರ ಕಡಿಮೆಯೂ ತಗ್ಗು ಸ್ಥಳಗಳಲ್ಲಿ ಹೆಚ್ಚೂ ಆಗಬಹುದು; ಆಗ್ನೇಯ ಮತ್ತು ಪೂರ್ಣದಿಕ್ಕಿಗೆ ಮುಖಮಾಡಿರುವ ಪ್ರದೇಶ ದಕ್ಷಿಣ ಮತ್ತು ಮಶ್ಚಿಮ ದಿಕ್ಕುಗಳಿಗೆ ಮುಖಮಾಡಿರುವ ಪ್ರದೇಶಗಳಿಗಿಂತ ತಂಪಾಗಿರುವುದು.ಅರಣ್ಯ ಒಂದು ಪುಟ್ಟ ಪ್ರಪಂಚ. ಅಲ್ಲಿ ನಿರಂತರ ಹುಟ್ಟು, ಬೆಳವಣಿಗೆ, ಸಾವು ಎಂಬ ಆವರ್ತನೆ ನಡೆದೇ ಇದೆ. ಸಾಮಾನ್ಯವಾಗಿ ಉಷ್ಣವಲಯದಲ್ಲಿ ಮುಂಗಾರು ಮಳೆ ಪ್ರಾರಂಭವಾಗುತ್ತಲೇ ಬೀಜೋತ್ಪತ್ತಿ ಪ್ರಾಂಭವಾದರೆ, ಸಮಶೀತೋಷ್ಣ ವಲಯದಲ್ಲಿ ಮಾಗಿ ಕಾಲದಲ್ಲಿ ಬೀಜೋತ್ಪತ್ತಿ ಆಗುವುದು. ಫಲಗಳೂ ಬೀಜಗಳೂ ತಾಯಿಮರದಿಂದ ದೂರಪ್ರದೇಶಗಳಿಗೆ ತೆರಳಿ ಅಲ್ಲಿ ನೆಲೆಸಲು ತಕ್ಕ ಉಪಾಯಗಳನ್ನು ನಿಸರ್ಗವೇ ನಿರ್ಮಿಸಿದೆ. ಹಣ್ಣು ಬಿರಿದು ಬೀಜ ದೂರಕ್ಕೆ ಸಿಡಿಯಬಹುದು; ಗಾಳಿ, ನೀರು, ಹಕ್ಕಿ, ಮೃಗ, ಮನುಷ್ಯರ ಮೂಲಕ ಬೀಜಗಳು ಬಲುದೂರ ಒಯ್ಯಲ್ಪಡುವುವು. ಇಂಥ ಬೀಜಗಳು ಅನುಕೂಲ ಸನ್ನಿವೇಶದಲ್ಲಿ ಮೊಳೆತು ಗಿಡಗಳಾಗುತ್ತವೆ. ಹೊಸ ಪರಿಸರಕ್ಕೆ ಹೊಂದಿಕೊಂಡು ಮರುಹುಟ್ಟಿನಿಂದ ಒಂದು ನೂತನ ವನಸ್ಪತಿ ಕೇಂದ್ರವನ್ನೇ ಸ್ಥಾಪಿಸುತ್ತವೆ. ಇಂಥ ಬೆಳವಣಿಗೆಯಲ್ಲಿ ಬೆಳಕು, ಗೊಬ್ಬರ, ಗಾಳಿ, ನೀರು ಇವುಗಳಿಗಾಗಿ ಸ್ಪರ್ಧೆ ಇದ್ದೇ ಇದೆ.

ಪ್ರಯೋಜನಗಳು[ಬದಲಾಯಿಸಿ]

(1) ಸೌದೆ, ದಿಮ್ಮಿ, ಮರಮುಟ್ಟುಗಳ ಪೂರೈಕೆ ಮತ್ತು ಅರಣ್ಯಜನ್ಯವಸ್ತುಗಳು ಮನುಷ್ಯ ಜೀವನಕ್ಕೆ ಅತ್ಯಾವಶ್ಯಕ. (2) ನಿಸರ್ಗದ ಸಮತೋಲವನ್ನು ಕಾಪಾಡುವ ಮನುಷ್ಯನಿಗೆ ವಿನೋದ ಮತ್ತು ಆಹಾರ ಒದಗಿಸುವ ವನ್ಯಮೃಗಗಳ ನಿವಾಸ ಅರಣ್ಯ. (3) ನೀರಿನ ಸವೆತದಿಂದ, ಗಾಳಿಯ ಹೊಡೆತದಿಂದ ಮಣ್ಣಿನ ಫಲವತ್ತಾದ ಹೊರಪದರ ಸವೆದು ಹೋಗದಂತೆ ರಕ್ಷಿಸುವ ಕವಚ ಅರಣ್ಯ. ಅಲ್ಲದೆ ಮಣ್ಣಿನ ಫಲವಂತಿಕೆಯನ್ನು ಅರಣ್ಯ ವರ್ಧಿಸುತ್ತದೆ. (4) ಮಳೆ ನೀರಿನ ಹರಿವನ್ನು ತಡೆಯುವುದರ ಮೂಲಕ ತೋಡುಹೊಳೆಗಳಲ್ಲಿ ಒಂದೇ ಸಲ ಪ್ರವಾಹವೇರಿ ಊರು, ಜನ ನಾಶವಾಗದಂತೆ ಅರಣ್ಯ ರಕ್ಷಣೆ ನೀಡುತ್ತದೆ. (5) ಮಳೆ ಬೀಳುವುದಕ್ಕೂ ಅಡವಿಗೂ ಏನು ಸಂಬಂಧವಿದೆ ಎಂಬ ಸಮಸ್ಯೆ ಇನ್ನೂ ತಿಳಿವಿಗೆಟುಕದೆ ಉಳಿದಿದೆ. ಆದರೆ ಅಡವಿ ಸಂಪೂರ್ಣವಾಗಿ ನಾಶವಾದಾಗ ಆ ಪ್ರದೇಶದಲ್ಲಿ ಮಳೆಯ ಪ್ರಮಾಣ ಬದಲಾಯಿಸಿದ ಪ್ರಸಂಗಗಳು ಉಲ್ಲೇಖಿತವಾಗಿವೆ. ಪರಿಸರದ ಹವೆಯ ಮೇಲೆ ಅಡವಿಯ ಸ್ಪಷ್ಟ ಪ್ರಭಾವ ಇದೆ. (6) ನೆಲದಲ್ಲಿ ನೀರಿನ ಪಸೆ ಉಳಿದಿರಲು ಅಡವಿಗಳ ನೆರವು ಅಗತ್ಯ. ಅಲ್ಲದೆ, ಮಳೆನೀರು ನೆಲದಲ್ಲಿ ಇಂಗಿ ಆಸರೆಗಳಿಗೆ ಪೂರೈಕೆಯಾಗಿ ಮುಂದೆ ಒರತೆಗಳಾಗಿ ಉಗಮಿಸಿ ಜನಜೀವನವನ್ನು ಹಸನುಗೊಳಿಸುವುದರಲ್ಲಿ ಅರಣ್ಯಗಳ ಪಾತ್ರ ಹಿರಿದು, ಜಲಾಶಯ ಪ್ರದೇಶಗಳಲ್ಲಿ ಅರಣ್ಯ ಸಂವರ್ಧನೆ ಮಾಡುವುದು ಈ ಕಾರಣದಿಂದ. (7) ಹಲವಾರು ಭೌಗೋಳಿಕ ಕಾರಣಗಳಿಂದ ನೆಲದಡಿಯಲ್ಲಿ ಹುದುಗಿಹೋದ ಕಾಡುಗಳು ಕಾಲಾಂತರದಲ್ಲಿ ಕಲ್ಲಿದ್ದಲು, ಕಲ್ಲೆಣ್ಣೆ ಮುಂತಾದ ಇಂಧನಗಳ ಉಗಮಗಳಾಗುತ್ತವೆ.

ಪ್ರಪಂಚದ ಕಾಡುಗಳು[ಬದಲಾಯಿಸಿ]

ಭೂಮಿಯ ಹೊರಮೈ ಲಕ್ಷಣದಲ್ಲಿ ಕಾಡುಗಳಿಗೆ ಒಂದು ಮುಖ್ಯಸ್ಥಾನವಿದೆ. ತೀವೃತೆ ಅತಿಯಾಗದ ಮತ್ತು ಧೀರ್ಘಕಾಲ ವ್ಯಾಪಿಸಿದ ಚಳಿಗಾಲವಿರುವ ಪ್ರದೇಶಗಳಲ್ಲಿ ಅರಣ್ಯಗಳು ಸ್ವಾಭಾವಿಕವಾಗಿ ಬೆಳೆಯುತ್ತವೆ. 20ನೆಯ ಶತಮಾನದ ದ್ವಿತಿಯಾರ್ಧದಲ್ಲಿ ಪ್ರಪಂಚದ ನೆಲದ 33% ಭಾಗ ಅರಣ್ಯಾವೃತವಾಗಿತ್ತು. ಇನ್ನೂ 25% ಭಾಗ ಒಂದು ಕಾಲದಲ್ಲಿ ಅರಣ್ಯವಾಗಿದ್ದರೂ ಇಂದು ಅದು ವ್ಯವಸಾಯ ಪ್ರದೇಶವಾಗಿದೆ. ಉಳಿದ 42% ಭಾಗ ಪೇಟೆ-ಪಟ್ಟಣಗಳು, ಬೋಳುಬೆಟ್ಟಗಳು, ರಸ್ತೆಗಳು, ಮರುಭೂಮಿಗಳು ಮುಂತಾದವುಗಳಿಂದ ಕೂಡಿದೆ. ಎಫ್. ಎ. ಓ., ವರದಿಯ 1960 ಈ ಕೆಳಗಿನ ವಿವರ ನೋಡಬಹುದು.

ಪ್ರಾದೇಶಿಕವಾಗಿ ಅರಣ್ಯಗಳ ವಿತರಣೆ ಪ್ರದೇಶ ಪ್ರಪಂಚದ ಅರಣ್ಯ ಪ್ರದೇಶದ % ಅರಣ್ಯಗಳು ವ್ಯಾಪಿಸಿರುವ ಪ್ರದೇಶದ %

ಯೂರೋಪ್ (3) (30) ಯು.ಎಸ್.ಎಸ್.ಆರ್. (26) (51) ಉತ್ತರ ಅಮೆರಿಕ (17) (39) ಲ್ಯಾಟಿನ್ ಅಮೆರಿಕ (23) (46) ಆಫ್ರಿಕ (17) (25) ಏಷ್ಯ (12) (19) ಪೆಸಿಫಿಕ್ ಪ್ರದೇಶ (2) (11) ಪ್ರಪಂಚದಲ್ಲಿ (100) (33) ಪ್ರಪಂಚದ ಸೌದೆ, ಯಂತ್ರ ಕಾರ್ಖಾನೆಗಳ ಸಮಗ್ರ ಆವಶ್ಯಕತೆ ನೆಲದ (33%) ಅಂಶ ಮಾತ್ರ ವ್ಯಾಪಿಸಿರುವ ಕಾಡುಗಳಿಂದಲೇ ಪೂರೈಕೆಯಾಗಬೇಕು. ಕಾಡುಗಳ ಮೇಲೆ ಬಿದ್ದಿರುವ ಒತ್ತಡದ ತೀವ್ರತೆ ಎಷ್ಟು ಎಂದೂ ಕ್ರಮರಹಿತ ಅರಣ್ಯನಾಶ ಎಂಥ ಗಂಡಾಂತರ ತಂದೊಡ್ಡಬಹುದೆಂದೂ ಸುಲಭವಾಗಿ ಊಹಿಸಬಹುದು. ರಚನೆಯ ದೃಷ್ಟಿಯಿಂದ ಪ್ರಪಂಚದ ಕಾಡುಗಳನ್ನು ಎರಡು ಮುಖ್ಯ ಭಾಗಗಳಾಗಿ ವಿಭಾಗಿಸಲಾಗಿದೆ-ಕೋನೊಫರಸ್ (ಶಂಕಾಕಾರದ ಕಾಯಿ ಬಿಡುವ ನಿತ್ಯ ಹಸುರು ಮರಗಳು) ಅಥವಾ ಮಿದುಮರಗಳು ; ಮತ್ತು ಅಗಲ ಎಲೆ ಮರಗಳು ಅಥವಾ ಗಡಸು ಮರಗಳು. ಗಡಸುಮರ ಎಂಬ ಹೆಸರು ಅಷ್ಟೊಂದು ನಿಖರವಲ್ಲ-ಇದರಲ್ಲಿ ಎಷ್ಟೋ ಪ್ರಭೇದಗಳ ಕಾಂಡ ಮಿದುಮರಕ್ಕಿಂತಲೂ ಮಿದುವಾಗಿರುವುದು ಕಂಡುಬಂದಿದೆ.

ಕರ್ನಾಟಕ ರಾಜ್ಯದ ಕಾಡುಗಳ ಮುಖ್ಯ ನಮೂನೆಗಳು[ಬದಲಾಯಿಸಿ]

1 ಉಷ್ಣವಲಯದ ತೇವಪೂರಿತ ನಿತ್ಯಹರಿದ್ವರ್ಣ ಅರಣ್ಯಗಳು (ಟ್ರಾಪಿಕಲ್ ಎವರ್‍ಗ್ರೀನ್ ಫಾರೆಸ್ಟ್ಸ್)-ವಾರ್ಷಿಕ ಮಳೆ 250 ಸೆಂ.ಮೀ. ಗಿಂತ ಹೆಚ್ಚು; 375-800 ಸೆಂ.ಮೀ. ವರೆಗೆ ಇರಬಹುದು. ಕಾಡು 150-1500 ಮೀ. ಎತ್ತರಪ್ರದೇಶದವರೆಗೆ ಹಬ್ಬಿದೆ. ನಿತ್ಯ ಹಸಿರಾಗಿರುವ ಎಲೆಗಳು ಮೇಲ್ಕಟ್ಟು ಇದರ ಲಕ್ಷಣ. ಇಂಥ ಹೇರಡವಿಗಳ ಭೌತಕಾರಣ ವಿಫುಲ ಆದ್ರ್ರತೆ. ಬೆಳಕಿಗಾಗಿ ಸ್ಪರ್ಧೆ, ಜಾಗಕ್ಕಾಗಿ ಸೆಣೆಸಿಕೆ, ಸತ್ತುಮಣ್ಣಾಗುತ್ತಿರುವ ಸಸ್ಯಾವಶೇಷಗಳು ಸಮೃದ್ಧಿ ಇವು ಇಂಥಹ ಸಂಪನ್ನ ಸಸ್ಯೋತ್ಪತ್ತಿಗೆ ಇತರ ಕಾರಣಗಳು. ಮರಗಳ ಎತ್ತರ 50 ಮೀ. ಗಿಂತಲೂ ಹೆಚ್ಚು. ತಳದಲ್ಲಿ ಬೆಳೆಯುವ ಸಸ್ಯಗಳು ಇಲ್ಲವೇ ಇಲ್ಲ ಎನ್ನಬಹುದು. ಬಳ್ಳಿಗಳ ಪ್ರಾಬಲ್ಯ ಬಲು ಕಡಿಮೆ.2 ಉಷ್ಣವಲಯದ ಭಾಗಶಃ ನಿತ್ಯ ಹರಿದ್ವರ್ಣ ಅರಣ್ಯಗಳು (ಟ್ರಾಪಿಕಲ್ ಸೆಮಿ ಎವರ್‍ಗ್ರೀನ್ ಫಾರೆಸ್ಟ್ಸ್)-ವಾರ್ಷಿಕ ಮಳೆ 150-250 ಸೆಂ.ಮೀ. ವರೆಗೆ, ನಿತ್ಯಹಸುರು ಮರಗಳೂ ಎಲೆ ಉದುರಿಸುವ ಮರಗಳೂ ಇಲ್ಲಿವೆ. ಆದರೆ ಈ ಉದುರುವಿಕೆ ಬೇಸಿಗೆಯ ಕೊನೆಯ ದಿವಸಗಳಲ್ಲಿ ತಡವಾಗಿ ಆರಂಭವಾಗುವುದು. ಮುಂದೆ ಬಲುಬೇಗ ಹಸುರೆಲೆಗಳು ಚಿಗುರೊಡೆಯುವುವು. ಮೊದಲನೆಯ ಜಾತಿಯ ಅರಣ್ಯಗಳಲ್ಲಿ ಕಂಡುಬರುವ ಮಹಾವೃಕ್ಷಗಳು ಇಲ್ಲಿಲ್ಲ. ಬಳ್ಳಿಗಳು ಸ್ವಲ್ಪ ಮಾತ್ರ ಇವೆ.3 ಉಷ್ಣವಲಯದ ತೇವ ಪರ್ಣಪಾತಿ ಅರಣ್ಯಗಳು (ಟ್ರಾಪಿಕಲ್ ಮಾಯಿಸ್ಟ್ ಡೆಸಿಡ್ಯೂಅಸ್ ಫಾರೆಸ್ಟ್ಸ್)-ವಾರ್ಷಿಕ ಮಳೆ 100-160 ಸೆಂ.ಮೀ. ವರೆಗೆ. ಇಲ್ಲಿ ಹೆಬ್ಬಿದಿರು, ಕಿರುಬಿದಿರು ಸಾಕಷ್ಟು ಬೆಳೆಯುತ್ತವೆ. ತೇವಗೊಂಡಿರುವ ನೆರಳಿನ ಜಾಗಗಳಲ್ಲಿ ಅಪ್ಪು ಗಿಡಗಳೂ (ಎಪಿ ಫೈಟ್ಸ್) ಬಳ್ಳಿಗಳೂ ದಟ್ಟವಾಗಿವೆ.4 ಉಷ್ಣವಲಯದ ಶುಷ್ಕ ಪರ್ಣಪಾತಿ ಅರಣ್ಯಗಳು (ಟ್ರಾಪಿಕಲ್ ಡ್ರೈ ಡೆಸಿಡ್ಯೂಅಸ್ ಫಾರೆಸ್ಟ್ಸ್-ವಾರ್ಷಿಕ ಮಳೆ 50-100 ಸೆಂ.ಮೀ. ವರೆಗೆ. ಮರಗಳ ಎತ್ತರ ಸಾಮಾನ್ಯವಾಗಿ 15-20 ಮೀ. ವರೆಗೆ. ಇದೇ ಈ ಕಾಡುಗಳ ಲಕ್ಷಣ. ಮೂರನೆಯ ಮತ್ತು ಈ ಜಾತಿಯ ಕಾಡುಗಳನ್ನು ಒಟ್ಟಾಗಿ ಕಾರ್ಗಾಲದ ಕಾಡುಗಳೆಂದು ಕರೆಯುವುದುಂಟು. ಮೈಸೂರು ರಾಜ್ಯದಲ್ಲಿ ಇವೇ ಪ್ರಧಾನ. ವರ್ಷದ ನಾಲ್ಕಾರು ತಿಂಗಳ ಕಾಲ ಮಳೆಯಿಲ್ಲದಿದ್ದಾಗ ಒಣಗಿ ಬಿದ್ದ ತರಗೆಲೆಗಳು, ಟೊಂಗೆಗಳು ಕಾಡುಬೆಂಕಿಗೆ ಒಳ್ಳೆ ಗ್ರಾಸ. ಪ್ರತಿ ವರ್ಷವೂ ಕಾಡ್ಗಿಚ್ಚು ಹುಟ್ಟುವುದು ಕಾರ್ಗಾಲದ ಕಾಡುಗಳ ಇನ್ನೊಂದು ಲಕ್ಷಣ. 5 ಕಳ್ಳಿ ಕುರುಚಲು ಗಿಡಗಳಿರುವ ಒಣಕಾಡುಗಳು (ಟ್ರಾಪಿಕಲ್ ಡ್ರೈಥಾರ್ನ್ ಫಾರೆಸ್ಟ್ಸ್)-ವಾರ್ಷಿಕ ಮಳೆ 50 ಸೆಂ.ಮೀ. ವರೆಗೆ. ಮುಳ್ಳಿಡಿದ ಗಟ್ಟಿ ಜಾತಿಯ ಗಿಡ್ಡಮರಗಳು ಹೆಚ್ಚಾಗಿ ಇರುವ ಕಾಡುಗಳು. ನೆಲದ ಶುಷ್ಕತೆಯ ಪರಿಣಾಮವಾಗಿ ಬಳ್ಳಿಗಳು ಕಡಿಮೆ.

  • ಕರ್ನಾಟಕ
  • ಒಟ್ಟು ಭೂಪ್ರದೇಶ 191791 ಚ.ಕಿ.ಮೀ.
  • ಒಟ್ಟು ಅರಣ್ಯ ಪ್ರದೇಶ 38724 ಚ.ಕಿ.ಮೀ.
  • ಕಾಯ್ದಿಟ್ಟ ಅರಣ್ಯ ಪ್ರದೇಶ 28671 ಚ.ಕಿ.ಮೀ.
  • ಸಂರಕ್ಷಿತ ಅರಣ್ಯ ಪ್ರದೇಶ 3932 ಚ.ಕಿ.ಮೀ.
  • ಅವರ್ಗೀಕೃತ ಅರಣ್ಯ ಪ್ರದೇಶ 6181 ಚ.ಕಿ.ಮೀ.
  • ಕರ್ನಾಟಕದ ಭೂ ಪ್ರದೇಶದ ಶೇಕಡಾ 20.19 ಭಾಗದಲ್ಲಿ ಅರಣ್ಯಗಳಿವೆ
  • (ಫಾರೆಸ್ಟ್ ಸರ್ವೇ ಆಫ್ ಇಂಡಿಯಾ 2001)

ಭಾರತದ ಅರಣ್ಯಗಳು[ಬದಲಾಯಿಸಿ]

ಭಾರತದಲ್ಲಿ ಅರಣ್ಯಾವೃತ ಪ್ರದೇಶ ಒಟ್ಟು ನೆಲದ 20.55% ಇದೆ. ಇದು ಪ್ರಪಂಚದ ಮಿತಿಗಿಂತ (33%) ಕಡಿಮೆ. ಈ ಪ್ರಮಾಣವನ್ನು 33.3%ಗೆ ಏರಿಸಬೇಕೆಂದು 1952 ರಲ್ಲಿ ರಾಷ್ಟ್ರೀಯ ಅರಣ್ಯಧೋರಣೆ ಠರಾವು ಸರ್ಕಾರಕ್ಕೆ ಸೂಚಿಸಿದೆ. ಭಾರತದ ಅರಣ್ಯಗಳನ್ನು ಐದು ಭಾಗಗಳಾಗಿ ವರ್ಗೀಕರಿಸಲಾಗಿದೆ-1 ನಿತ್ಯಹರಿದ್ವರ್ಣ: 2 ತೇವ ಪರ್ಣಪಾತಿ ಅಥವಾ ಕಾಲಕಾಲಕ್ಕೆ ಎಲೆ ಉದುರುವ ಅರಣ್ಯ: 3 ಶುಷ್ಕ ಪರ್ಣಪಾತಿ 4. ಬೆಟ್ಟ ಪ್ರದೇಶದ ಉಪುಷ್ಣವಲಯದ ಅರಣ್ಯ-ಮಾಂಟೇನ್ ಸಬ್ ಟ್ರಾಪಿಕಲ್ 5. ನದೀಮುಖದ ಅರಣ್ಯ.

ಅರಣ್ಯಶಾಸ್ತ್ರ[ಬದಲಾಯಿಸಿ]

ಇದರ ಬೆಳವಣಿಗೆ ಈಚಿನದು. ಜನಸಂಖ್ಯೆ ಏರಿದಂತೆ ನೈಸರ್ಗಿಕವಾಗಿಯೊ ಮನುಷ್ಯಕೃತವಾಗಿಯೊ ಅರಣ್ಯಗಳ ಅವ್ಯಾಹತ ನಾಶ ಮುಂದುವರಿದಿದೆ. ತತ್ವರಿಣಾಮವಾಗಿ ಘೋರ ವಿಪತ್ತುಗಳು ತಲೆದೋರಿದವು. ಇದರಿಂದಾಗಿ ಅರಣ್ಯಗಳ ಶಾಸ್ತ್ರೀಯ ಅಧ್ಯಯನ ಆವಶ್ಯಕ ಮತ್ತು ಅನಿವಾರ್ಯವಾಯಿತು. ಆಧುನಿಕ ಅರಣ್ಯ ಶಾಸ್ತ್ರವನ್ನು ಕುರಿತು ಇರುವ ಹಲವಾರು ವ್ಯಾಖ್ಯೆಗಳ ಸಾರ ಹೀಗಿದೆ-ಆರ್ಥಿಕ ಮತ್ತು ಸಾಮಾಜಿಕ ಕಾರಣಗಳನ್ನು ಅವಲಂಬಿಸಿ ವೈಜ್ಞಾನಿಕ ವಿವರಗಳ ತಳಹದಿಯ ಮೇಲೆ ರಚಿಸಿರುವ ಒಂದು ಕಲೆ ಅರಣ್ಯಶಾಸ್ತ್ರ. ಇಂಥ ಕಲೆಯ ಯಶಸ್ವೀ ಪ್ರಯೋಗದ ಮೇಲೆ ವಿಜ್ಞಾನದ ವಿವಿಧ ಅಂಗಗಳಾದ ರಸಾಯನ, ಪ್ರಾಣಿ, ಸಸ್ಯ, ಜೀವವಿಜ್ಞಾನ, ಗಣಿತ, ಭೌತ ಮುಂತಾದ ಎಲ್ಲ ಶಾಸ್ತ್ರಗಳನ್ನೂ ಅನ್ವಯಿಸುವುದು ಅವಶ್ಯಕವಾಗುತ್ತದೆ. ಅರಣ್ಯಶಾಸ್ತ್ರದಲ್ಲಿ ಅರಣ್ಯಗಳ ವೈಜ್ಞಾನಿಕ ಅಭ್ಯಾಸ, ವರ್ಧನೆ, ಪೋಷಣೆ, ಸಂರಕ್ಷಣೆ ಮತ್ತು ಅವುಗಳಿಂದ ಪರಮಾವಧಿ ಉಪಯೋಗಗಳನ್ನು ಇಂದೂ ಮುಂದೂ ಹೊಂದುವ ವಿಧಾನಗಳು ಮತ್ತು ಅವುಗಳ ವೈಜ್ಞಾನಿಕ ಆಡಳಿತೆಯ ಏರ್ಪಾಡು ಅಡಕವಾಗಿವೆ. ಮರಗಳು ಬೆಳೆದು ಉಪಯೋಗಕಾರಿಯಾಗಲು ಹಲವಾರು ವರ್ಷಗಳೇ ಬೇಕಾದುದರಿಂದ ಅರಣ್ಯಗಳ ಪ್ರಶ್ನೆ ದೀರ್ಘಕಾಲದ್ದು. ಆದ್ದರಿಂದ ಅರಣ್ಯಗಳನ್ನು ಕುರಿತು ದೀರ್ಘಕಾಲದ ಯೋಜನೆ ಆವಶ್ಯಕ. ಬೆಳೆಸಬೇಕಾದ ಮರಗಳ ಜಾತಿ ಪರಿಸರದ ಹವೆ, ಮಣ್ಣಿನ ಗುಣ, ಮರಗಳ ಪೋಷಣೆಗೆ ಮಾಡಬೇಕಾದ ಉಪಚಾರ ಇವೆಲ್ಲವನ್ನೂ ಕ್ರಮಬದ್ಧವಾಗಿ ಅಭ್ಯಸಿಸಿ, ಪ್ರಯೋಗಗಳಿಂದ ಪರೀಕ್ಷಿಸಿ ಮುಂದುವರಿಯಬೇಕು.

ಅರಣ್ಯನಾಶ, ಸಂರಕ್ಷಣೆ[ಬದಲಾಯಿಸಿ]

ಅರಣ್ಯನಾಶದ ಕಾರಣಗಳು-1 ಮನುಷ್ಯ ಅರಣ್ಯದ ಅರ್ಥ

ಪ್ರಪಂಚದ ಪ್ರವೇಶ್ಯ ಮತ್ತು ಅಪ್ರವೇಶ್ಯ ಅರಣ್ಯ ಪ್ರದೇಶಗಳು[ಬದಲಾಯಿಸಿ]

ಪ್ರದೇಶ ಒಟ್ಟು ಮಿಲಿಯನ್ ಹೆಕ್ಟೇರ್ ಗಳಲ್ಲ ಪ್ರವೇಶ್ಯ ಮಿಲಿಯನ್ ಒಟ್ಟಿನ ಹೆಕ್ಟೇರ್‍ಗಳು  % ಉಪಯೋಗದಲ್ಲಿ ಮಿಲಿಯನ್ ಒಟ್ಟಿನ ಹೆಕ್ಟೇರ್‍ಗಳು  %

ಅಪ್ರವೇಶ್ಯ 

ಮಿಒಟ್ಟಿನ ಹೆ%

ಯೂರೋಪ್ ...... ಯು.ಎಸ್‍ಎಸ್.ಆರ್. ...... ಉತ್ತರ ಅಮೇರಿಕ ....... ಲ್ಯಾಟಿನ್ ಅಮೇರಿಕ ...... ಆಫ್ರಿಕ ......... ಏಷ್ಯ ........ ಪೆಸಿಪಿಕ್ ಪ್ರದೇಶ .......

141 1,131 733 1,031 753 520 90 138 98 1,131 100 400 55 332 32 380 50 326 63 26 27

135 96 459 41 400 55 90 9 125 17 236 45 20 21 3 2 - - 333 45 699 68 373 50 194 37 70 73

ಪ್ರಪಂಚದಲ್ಲಿ ...... 4,405 2,733 62 1,465 33 1,672 38


ಪ್ರಪಂಚದಲ್ಲಿ ಕೋನಿಫರಸ್ ಮತ್ತು ಅಗಲ ಎಲೆ ಕಾಡುಗಳ ವಿತರಣೆ[ಬದಲಾಯಿಸಿ]

ಪ್ರದೇಶ

ಶಂಕುಪರ್ಣಿ

ಕಾಡುಗಳು

  ಅಗಲ

ಎಲೆ

ಕಾಡುಗಳು

ಮಿಲಿಯನ್ ಹೆಕ್ಟೇರುಗಳು ಪ್ರದೇಶದ ಪ್ರಪಂಚದ ಮಿಲಿಯನ್ ಹೆಕ್ಟೇರುಗಳು ಪ್ರದೇಶದ ಪ್ರಪಂಚದ

ಯೂರೋಪ್ ಯು.ಎಸ್‍ಎಸ್.ಆರ್. ಉತ್ತರ ಅಮೆರಿಕ ಲ್ಯಾಟಿನ್ ಅಮೆರಿಕ ಆಫ್ರಿಕ ಏಷ್ಯ ಪೆಸಿಫಿಕ್ ಪ್ರದೇಶ

84 896 497 28 3 110 81

59.6 79.2 67.8 2.7 0.4 21.1 8.3 5.2 55.1 30.5 1.7 0.2 6.8 0.5 57 235 236 1003 750 410 88 40.4 20.8 32.2 97.3 99.6 78.9 91.7 2.0 8.4 8.5 36.1 27.0 14.8 3.2

ಪ್ರಪಂಚದಲ್ಲಿ 1,626 36.9 100.0 2779 63.1 100.0 ಮನುಷ್ಯ ತನ್ನ ತಾತ್ಕಾಲಿಕ ಸೌಕರ್ಯ, ಲಾಭಗಳಿಗಾಗಿ ಉಂಟುಮಾಡುವ ಹಾನಿ ಅಪಾರವಾಗಿದೆ. ಇಂಥ ಹಾನಿಯಿಂದ ಅರಣ್ಯ ಸಂರಕ್ಷಣೆ ಮಾಡಲು ಸರ್ಕಾರ ಕಾನೂನು ಕಾಯಿದೆ ಮಾಡಿ, ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸುವುದು. ಆದರೆ ಮನುಷ್ಯನಿಂದೊದಗುವ ಪ್ರತ್ಯಕ್ಷ ಪರೋಕ್ಷಹಾನಿ ಪೂರ್ಣ ನಿವಾರ್ಯವಲ್ಲ.

ಬೆಂಕಿ ಮನುಷ್ಯನ ಅಜಾಗರೂಕತೆ[ಬದಲಾಯಿಸಿ]

ಬೆಂಕಿ ಮನುಷ್ಯನ ಅಜಾಗರೂಕತೆಯಿಂದ ಅಥವಾ ವಿನಾಶಕಾರೀ ಭಾವನೆಯಿಂದ ಉಂಟಾಗಬಹುದು ; ಅಥವಾ ಕಾಡ್ಗಿಚ್ಚಾಗಿ ತೊಡಗಬಹುದು. ಕಾಡ್ಗಿಚ್ಚುಗಳಲ್ಲಿ ಎರಡು ವಿಧ-ತಳದ ಕಿಚ್ಚು, ತಲೆಯ ಕಿಚ್ಚು. ಮೊದಲಿನವೇ ಹೆಚ್ಚು. ನೆಲದಲ್ಲಿ ಹರಡಿದ ತರಗೆಲೆ, ಹುಲ್ಲು, ಹೊದರುಗಳನ್ನು ದಹಿಸಿ ಬೇಗನೆ ಹರಡಿದ ಈ ಕಿಚ್ಚು ಮರಗಳ ತಳಕ್ಕೆ ಗಾಸಿ ಉಂಟುಮಾಡುತ್ತದೆ. ಆದರೆ ಸ್ವಲ್ಪಕಾಲದಲ್ಲಿಯೇ ಶಾಂತವಾಗುವುದು. ತಳದ ಕಿಚ್ಚು ಸುಲಭವಾಗಿ ಹತೋಟಿಗೆ ಒಳಪಡುವುದು. ತಲೆಯ ಕಿಚ್ಚುಗಳು ಮರಗಳ ಮೇಲುಭಾಗವನ್ನೆಲ್ಲ ಉರಿಸಿ ಮರಗಳನ್ನು ನಾಶ ಮಾಡುತ್ತವೆ. ಗಾಳಿ ಬೀಸಿದಂತೆ ಸರ್ವವ್ಯಾಪಿಯಾಗುವ ಈ ಕಿಚ್ಚುಗಳನ್ನು ಹತೋಟಿಗೆ ತರುವುದು ಕಷ್ಟ. ಇಂಥ ಕಿಚ್ಚುಗಳಿಂದ ಅರಣ್ಯಕ್ಕೆ ತುಂಬ ಹಾನಿಯಾಗುವುದು. ಬೆಂಕಿ ಒಳ್ಳೆ ಆಳು, ಆದರೆ ಕೆಟ್ಟ ಯಜಮಾನ ಎನ್ನುವುದಕ್ಕೆ ಕಾಡ್ಗಿಚ್ಚು ಉತ್ತಮ ನಿದರ್ಶನ. ಕಾಡ್ಗಿಚ್ಚುಗಳಿಂದ ಅರಣ್ಯ ಸಂರಕ್ಷಣೆ ಮಾಡಲು ಅನುಸರಿಸುವ ಕ್ರಮಗಳು-(1) ಶಿಕ್ಷಣದಿಂದ, ಶಿಕ್ಷೆಯಿಂದ ಮನುಷ್ಯಕೃತ ಅಪರಾಧಗಳನ್ನು ಕಡಿಮೆ ಮಾಡುವುದು; (2) ಕಾಡುಗಳ, ತೋಪುಗಳ ಸುತ್ತ ಒಳಗೊ ಹೊರಗೊ ಕಿಚ್ಚನ್ನು ತಡೆಯುವ ಅಷ್ಟಿಷ್ಟಗಲದ ಪಾಕುಸಾಲುಗಳನ್ನು (ಬೆಂಕ್ರೋಟು) ಮಾಡಿ ಅವು ಮುಚ್ಚಿಹೋಗದಂತೆ ಎಚ್ಚರ ವಹಿಸುವುದು. ಹೊರಗಿನಿಂದ ಹರಡಿಬಂದ ಬೆಂಕಿ ಈ ಸಾಲಿನಲ್ಲಿ ಗ್ರಾಸ ದೊರೆಯದೆ ನಂದಿಹೋಗುವುದು ಅಥವಾ ಅಲ್ಲಿ ಅದನ್ನು ಹತೋಟಿಗೆ ತರಬಹುದು. ಅಡವಿಯಲ್ಲಿನ ರಸ್ತೆಗಳ ಅಕ್ಕಪಕ್ಕಗಳಲ್ಲೂ ಪಾಕುಮಾಡಿ ಅಲ್ಲಿ ಸಸ್ಯಗಳು ಇರದಂತೆ ನಿರ್ಮೂಲಿಸುತ್ತಾರೆ. ಇದರಿಂದ ಬೆಂಕಿಯ ಹರಡುವಿಕೆಗೆ ತಡೆ ಉಂಟಾಗುತ್ತದೆ. ಕಾಡ್ಗಿಚ್ಚನ್ನು ತಡೆಯಲು ಇನ್ನೊಂದು ವಿಧಾನವೂ ಇದೆ-ಬೆಂಕಿ ಹಿಡಿಯಬಹುದಾದ ಪ್ರದೇಶಗಳನ್ನು ಮೊದಲೇ ಗುರುತಿಸಿ ಅಲ್ಲಿ ನಿಯಂತ್ರಿತವಾದ ಬೆಂಕಿ ಹಾಕುವುದು. ಇದರಿಂದ ನೈಸರ್ಗಿಕವಾಗಿ ಅಕಸ್ಮಾತಾಗಿ ಸಂಭವಿಸಬಹುದಾದ ಅಪಘಾತ ಇಲ್ಲದಾಗುತ್ತದೆ. ವಿಧಾನ ಏನೇ ಇರಲಿ, ಅರಣ್ಯ ಸಿಬ್ಬಂದಿಯವರ ನಿರಂತರ ಜಾಗರೂಕತೆ ಅತ್ಯಾವಶ್ಯಕ. ಹೆಲಿಕಾಪ್ಟರ್ ಸಹಾಯದಿಂದ ರಾಸಾಯನಿಕಗಳನ್ನು ಕಾಡ್ಗಿಚ್ಚಿನಮೇಲೆ ಮಳೆಗೆರೆದು ಶಮನಗೊಳಿಸುವುದೂ ಸಾಧ್ಯವಿದೆ.

ಪ್ರಾಣಿಗಳು, ಕೀಟಗಳು ಮತ್ತು ರೋಗಗಳು[ಬದಲಾಯಿಸಿ]

ಅಡವಿಯ ಉತ್ಪನ್ನಗಳಿಗೆ ಘಾತುಂಟುಮಾಡುವ ಪ್ರಾಣಿಗಳು, ಕೀಟಗಳು, ರೋಗಗಳು ಯಾವುವು; ಅವುಗಳಿಂದಾಗುವ ಘಾತದ ಸ್ವರೂಪವೇನು ಎಂಬುದರ ತಿಳಿವಳಿಕೆಯ ಮೇಲೆ ರಕ್ಷಣೋಪಾಯ ಅವಲಂಬಿಸಿದೆ. ಸಾಕುಪ್ರಾಣಿಗಳಾದ ದನ, ಆಡುಗಳಿಂದ, ಕಾಡುಪ್ರಾಣಿಗಳಾದ ಆನೆ, ಕಾಡ್ಕೋಣ, ಕಾಡುಹಂದಿ ಮುಂತಾದವುಗಳಿಂದ ಸಾಕಷ್ಟು ನಾಶ ಉಂಟಾಗುವುದು. ಮಿಡತೆಗಳು ಮುಂತಾದ ಕೀಟಗಳು ಮಹಾರಣ್ಯಗಳನ್ನೇ ನಿರ್ಮೂಲ ಮಾಡಿದುದಕ್ಕೆ ನಿದರ್ಶನಗಳಿವೆ. ಸೂಕ್ಷ್ಮಾಣುಗಳಿಂದ ಶಿಲೀಂಧ್ರ್ರಗಳಿಂದ ಹರಡುವ ರೋಗಗಳು-ಅರಣ್ಯಗಳಿಗೆ ಮಾರಕ. ಇವುಗಳಲ್ಲಿ ಪ್ರತಿಯೊಂದರಿಂದ ಆಗುವ ಹಾನಿಯನ್ನು ಪ್ರತ್ಯೇಕವಾಗಿ ಅಭ್ಯಸಿಸಿ ಅದಕ್ಕೆ ಪರಿಹಾರ ಹುಡುಕಬೇಕು. ಅರಣ್ಯಶಾಸ್ತ್ರ ಸಂಶೋಧನಾಗಾರದಲ್ಲಿ ನಿರಂತರವಾಗಿ ನಡೆಯುವ ಕೆಲಸವಿದು.

ಇತರ ನೈಸರ್ಗಿಕ ಕಾರಣಗಳು[ಬದಲಾಯಿಸಿ]

ಮಳೆ ಗಾಳಿಯಿಂದ ಸಾಕಷ್ಟು ನಾಶ ಸಂಭವಿಸುವುದಿದೆ. ನೆಲ ಜರಿದು ಅರಣ್ಯದ ಸ್ವರೂಪ ಬದಲಾಗುವುದಿದೆ. ಕಡು ಬೇಸಿಗೆಯಿಂದ ತಂಪಿಲ್ಲದೆ ಕಾಡು ಒಣಗಬಹುದು. ನೆಲ ಸವೆದು ಕುಸಿಯದಂತೆ ಕಾಪಾಡುವುದರ ಮೂಲಕ ಗಾಳಿಯ ಸಂಚಾರ ಸರಾಗವಾಗಿರುವಂತೆ ಮರಗಳ ಇರವನ್ನು ನಿಯಂತ್ರಿಸುವುದರ ಮೂಲಕ ಕಾಡಿನ ಝರಿಗಳನ್ನು ಸಂರಕ್ಷಿಸಿಕೊಂಡು ಬರುವುದರ ಮೂಲಕ ಇಂಥ ಅಪಾಯಗಳಿಂದ ಅರಣ್ಯಗಳನ್ನು ರಕ್ಷಿಸಬಹುದು.

ಅರಣ್ಯ ಇಲಾಖೆಯಲ್ಲಿ ಜಾರಿಯಲ್ಲಿರುವ ಹತೋಟಿ ಕ್ರಮಗಳು[ಬದಲಾಯಿಸಿ]

(1) ನೆಲದ ಸದುಪಯೋಗ ; (2) ಎಲ್ಲೆಕಟ್ಟನ್ನು ಹಾಕುವುದು ; (3) ಎಲ್ಲೆಯ ಸುತ್ತ ಅಗಳನ್ನು ತೋಡುವುದು ; (4) ವಾಟ್ ಕಟ್ಟೆಯನ್ನು ಹಾಕುವುದು (ಭೂಮಿಯ ಎಲ್ಲ ಕಡೆಗಳಲ್ಲೂ ಮಣ್ಣನ್ನು ಎಲ್ಲೆಗಳಲ್ಲಿ ರಾಶಿಹಾಕಿ ಯಾವ ರೂಪದಲ್ಲೇ ಆಗಲಿ ಕಟ್ಟೆಗಳನ್ನೋ ಏಣುಗಳನ್ನೋ ಕಟ್ಟುವ ವಿಧಾನ. ಕೊಚ್ಚಿ ಹೋಗುವ ನೀರನ್ನು ತಡೆದಿಡುವುದು ಇವುಗಳ ಉದ್ದೇಶ): 5 ಸೋಪಾನಸ್ತರಗಳನ್ನು ಮಾಡುವುದು; 6 ಕೊರಕಲುಗಳನ್ನು ಮುಚ್ಚುವುದು; 7 ತಡೆಗಟ್ಟುಗಳನ್ನು ಹಾಕುವುದು; 8 ಪ್ರವಾಹಗಳನ್ನೂ ಹುಚ್ಚು ಹೊಳೆಗಳನ್ನೂ ಸರಿಯದ ಕಡೆಗೆ ಹರಿಯುವಂತೆ ಮಾಡುವುದು; 9 ಹುಲ್ಲುಗಾವಲುಗಳನ್ನು ವ್ಯವಸ್ಥೆಯಿಂದ ನೋಡಿಕೊಳ್ಳುವುದು; ಮತ್ತು 10 ಅಡವಿಗಳನ್ನು ಬೆಳೆಸುವುದು.

ಅರಣ್ಯದ ಲಘು ಫಸಲುಗಳು[ಬದಲಾಯಿಸಿ]

ಅರಣ್ಯದ ಪ್ರಧಾನ ಫಸಲುಗಳು ಚೌಬೀನೆ (ನಾಟಾ), ಸೌದೆ (ಉರಿಸುವ ಕಟ್ಟಿಗೆ ಮತ್ತು ಇದ್ದಲು). ಉಳಿದವುಗಳ ಹೆಸರು ಲಘು ಫಸಲುಗಳು, ಅರಣ್ಯ ಸಂಪತ್ತಿನಲ್ಲಿರುವ ಸಸ್ಯ, ಪ್ರಾಣಿ ಮತ್ತು ಖನಿಜ ಸಂಬಂಧ ಉತ್ಪನ್ನಗಳೆಲ್ಲ ಲಘು ಫಸಲುಗಳೇ, ಇವುಗಳ ವಿಂಗಡನೆ ಈ ಕೆಳಗಿನಂತಿದೆ. 1. ಸಸ್ಯ ಸಂಬಂಧ ಫಸಲುಗಳು( 1 ಕಾಡುಹುಲ್ಲು, ಬಿದಿರು ಬೆತ್ತ, 2 ಮರದ ಎಲೆಗಳು (ಮೇವಿನ ಎಲೆ, ಗೊಬ್ಬರದ ಎಲೆ). 3 ನಾರುಗಳು ಮತ್ತು ಮಡ್ಡಿ ರೇಷ್ಮೆ. 4 ಎಣ್ಣೆ ಬೀಜಗಳು. 5 ಧರ್ಮ ಹದಮಾಡುವ ಟ್ಯನ್ ಮತ್ತು ಬಣ್ಣಗಳು. 6 ಅಂಟು, ರಾಳ ತೈಲರಾಳ, 7 ಔಷಧಿ, ಸಾಂಬಾರ ಪದಾರ್ಥಗಳು, ತಿನಿಸು ಪದಾರ್ಥಗಳು ಮತ್ತು ವಿಷಪೂರಿತ ವಸ್ತುಗಳು. 8 ಬಟ್ಟಿ ಇಳಿಸಿ ಅಥವಾ ಕಷಾಯದಿಂದ ಬರುವ ಉತ್ಪನ್ನಗಳು. 9 ಇನ್ನುಳಿದ ವಿವಿಧ ಉತ್ಪನ್ನಗಳು.2 ಪ್ರಾಣಿ ಸಂಬಂಧ ಫಸಲುಗಳು(1 ಅರಗು. 2 ಜೇನುತುಪ್ಪ. ಮೇಣ 3 ರೇಷ್ಮೆ, 4 ಧರ್ಮ, 5 ದಂತ, 6 ಹಕ್ಕಿಗಳ ಗೂಡು, 7 ಮೀನು, 8 ಷಿಕಾರಿಯ ಸಂಗ್ರಹಗಳು.3 ಖನಿಜ ಸಂಬಂಧ ಉತ್ಪನ್ನಗಳು(1 ಆಭ್ರಕ, ಮ್ಯಂಗನೀಸ್, ಕಬ್ಬಿಣದ ಅದುರು. 2 ಸುಣ್ಣಕಲ್ಲು, 3 ಬಳಪದಕಲ್ಲು, 4 ಕಟ್ಟಡದ ಕಲ್ಲು ಇತ್ಯಾದಿ.

ಅರಣ್ಯ ಕೈಗಾರಿಕೆಗಳು[ಬದಲಾಯಿಸಿ]

ಇವುಗಳ ವಿಭಾಗಗಳು ಈ ಕೆಳಗಿನಂತಿವೆ. 1 ಚೌಬೀನೆ ತಯಾರಿಕೆ (ಲಾಗಿಂಗ್), ಹದಮಾಡುವಿಕೆ ಮತ್ತು ಮರ ಸಂಸ್ಕರಣ, 2 ಮರಕೊಯ್ತು ಮತ್ತು ಪೀಠೋಪಕರಣ. 3 ಪದರ ಹಲಗೆ (ಪ್ಲೈವುಡ್) ಹಲಗೆ ಮತ್ತು ಗಟ್ಟಿ (ಹಾರ್ಡ್) ಹಲಗೆ. 5 ಕಾಗದದ ಪಲ್ಟ್ ಮತ್ತು ರೇಯಾನ್. 6 ಬೆಂಕಿಕಡ್ಡಿ, 7 ಸೌದೆ, ಇದ್ದಲು, 8 ಗಂಧದ ಎಣ್ಣೆ, 9 ಕಾಚು (ಛಿuಣಛಿh). ರೋಸಿನ್, ಟರ್ಪೆಂಟೈನ್, ಅರಗು, ಕರ್ಪೂರ, ಹುಲ್ಲು ಸರಬರಾಜು ಇತ್ಯಾದಿ. ಭಾರತದಲ್ಲಿ ಕೈಗಾರಿಕೆಯ ದೃಷ್ಟಿಯಿಂದ ಚೌಬೀನೆಯ ಅವಶ್ಯಕತೆಯ ಅಂದಾಜು ಕೆಳಗೆ ಕೊಟ್ಟಿದೆ. 1966 1975 1 ಕಟ್ಟಡ 2,150 2,750 ಹಡಗು 420 720 ರೈಲ್ವೆ 825 765 ಪೀಠೋಪಕರಣ ಇತ್ಯಾದಿ 456 595 2 ಪದರ ಹಲಗೆ 180 570 3 ಭಾಂಗಿ ಪೆಟ್ಟಿಗೆ 490 710 4 ಕಾಗದ, ಪಲ್ಪ್ 120 1,100 5 ರೇಯಾನ್ 400 800 6 ಬೆಂಕಿಕಡ್ಡಿ 190 260

ಅರಣ್ಯ ಮೃಗ ಸಂರಕ್ಷಣೆ[ಬದಲಾಯಿಸಿ]

ಜನಸಂಖ್ಯೆಯ ಬೆಳೆವಣಿಗೆ, ಕಾಡುಗಳ ನಿರ್ಮೂಲನ, ಮೃಗ ಪಕ್ಷಿಗಳ ನಿರಾಶ್ರಿತತ್ವ, ನಾಶ(ಈ ಸಮಸ್ಯೆಗಳು ಕ್ರಮೇಣ ಬೃಹತ್ಪ್ರಮಾಣ ತಾಳಿವೆ. ಅರಣ್ಯಮೃಗಸಂರಕ್ಷಣೆ ಅರಣ್ಯಶಾಸ್ತ್ರದ ಬಹು ಮುಖ್ಯ ಅಂಗ, ನಿಸರ್ಗದ ಸಮತೋಲ ಕಾದಿಡುವುದರಲ್ಲಿ ಆ ಮೂಲಕ ಮನುಷ್ಯ ಜೀವನ ಸುಗಮಗೊಳಿಸುವುದರಲ್ಲಿ ಇದರ ಪಾತ್ರ ಹಿರಿದು. ಇದಕ್ಕಾಗಿ ರಕ್ಷಿತ ಅರಣ್ಯಗಳು, ಬೇಟೆ ನಿಷೇಧಿಸಿರುವ ಪ್ರದೇಶಗಳು, ಮೃಗಪಕ್ಷಿಗಳಿಗೇ ಮೀಸಲಾಗಿರುವ ಉದ್ಯಾನಗಳು, ಅಭಯಾರಣ್ಯಗಳು ಎಂದು ಮುಂತಾಗಿ ಸರಕಾರಗಳು ವಿಧಿಸಿವೆ. ಮುಖ್ಯ ಉದೇಶವಿಷ್ಟು(ಪ್ರಾಣಿಗಳು ಸಹಜ ಪರಿಸರದಲ್ಲಿ ವಿಕಾಸ ಹೊಂದಲು ಅವಕಾಶ ಒದಗಿಸಬೇಕು; ಇದರಿಂದ ಮನುಷ್ಯನ ಜ್ಞಾನಾಭಿವೃದ್ಧಿಯಾಗುವುದರ ಜೊತೆಗೆ ರಸಾನುಭವವೂ ಇದೆ.ಮೈಸೂರು ರಾಜ್ಯದಲ್ಲಿ 1907ರಲ್ಲಿ ಬೇಟೆ ಕಾನೂನು ಜಾರಿಗೆ ಬಂದಿತು. ಇದರ ಪ್ರಕಾರ ಆಗ ಪ್ರಚಾರವಾಗಿದ್ದ ಮೃಗಯಾನಿಯಮಗಳಿಗೆ ಅನುಸಾರವಾಗಿ ವನ್ಯಜೀವಿಗಳು ಹೇರಳವಾಗಿದ್ದ ಅನೇಕ ಕಾಡುಗಳಲ್ಲಿ ಬೇಟೆಯನ್ನು ನಿಷೇಧಿಸಲಾಗಿತ್ತು. 1941ರಲ್ಲಿ ನೀಲಗಿರಿಗೂ ವೈನಾಡಿಗೂ ಹೊಂದಿಕೊಂಡಿರುವ ಸುಮಾರು 321 ಚ.ಮೈ. ಪ್ರದೇಶದ ವೇಣುಗೋಪಾಲ ವನ್ಯಮೃಗ ಅಭಯಾರಣ್ಯ ಇದರಲ್ಲಿದೆ. ಬಂಡೀಪುರದ ವಿಸ್ತೀರ್ಣವನ್ನು ಹೆಚ್ಚಿಸಲು ಮತ್ತು ಇದನ್ನು ರಾಷ್ಟ್ರೀಯ ಮೃಗೋದ್ಯಾನವಾಗಿ ರೂಪಿಸಲು ಪ್ರಯತ್ನಗಳು ನಡೆದಿವೆ. ಕರ್ನಾಟಕದ ಇತರ ಪ್ರಸಿದ್ಧ ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನಗಳೆಂದರೆ ನಾಗರಹೊಳೆ (573 ಚ.ಕಿ.ಮೀ.), ಬಂಡೀಪುರ (690 ಚ.ಕಿ.ಮೀ.), ಭದ್ರಾ (490 ಚ.ಕಿ.ಮೀ.) ಇತ್ಯಾದಿ.

ಅರಣ್ಯ ಕಾಯಿದೆಗಳು[ಬದಲಾಯಿಸಿ]

ಅರಣ್ಯ ಪದದ ವ್ಯಾಖ್ಯೆ ಆಯಾದೇಶದ ಸಂವಿಧಾನಕ್ಕೆ ಅನುಗುಣವಾಗಿದೆ. ಇಂಥ ವ್ಯಾಖ್ಯೆ ಕಾಲಾನುಸಾರ ಬದಲಾವಣೆಗೊಂಡಿದೆ. ಈಗ ಸರಕಾರ ಅರಣ್ಯ ಎಂದು ವಿಧಿಸುವ ಪ್ರದೇಶಗಳ ಆಡಳಿತಕ್ಕಾಗಿ ರೂಪಿಸುವ ನಿಯಮಗಳಿಗೆ ಅರಣ್ಯ ಕಾಯಿದೆಗಳೆಂದು ಹೆಸರು. ಅರಣ್ಯಕ್ಕೆ ಸೇರದ ಭೂಮಿಯ ಒಡೆತನ ಯಾರದ್ದಾಗಿದ್ದರೂ ಕಾಯಿದೆಗಳಿಗೆ ಸರ್ವವ್ಯಾಪ್ತಿಯಿದ್ದೇ ಇದೆ. ಅರಣ್ಯ ರಾಷ್ಟ್ರದ ಸಂಪತ್ತು. ಅದರ ಏಳ್ಗೆ, ನಾಶಗಳೊಡನೆ ದೇಶದ ಏಳ್ಗೆ ನಾಶಗಳು ನಿಕಟವಾಗಿ ಹೊಂದಿಕೊಂಡಿವೆ(ಇದು ಒಂದು ರಾಷ್ಟ್ರದ ಅರಣ್ಯ ನೀತಿ.ಭಾರತಸರ್ಕಾರ ಮೊದಲಿನಿಂದಲೂ ಇದ್ದ ಕಾಯಿದೆಗಳನ್ನು ಕ್ರೋಡೀಕರಿಸಿ 1927ರಲ್ಲಿ ಹೊಸ ಕಾಯಿದೆ ಪ್ರಕಟಿಸಿತು. ಮೈಸೂರ 1900ರಲ್ಲಿ ಪ್ರಕಟಿಸಿದ ಕಾಯಿದೆ 1901ರ ಜನವರಿ ಒಂದನೆಯ ತಾರೀಕಿನಿಂದ ಜಾರಿಗೆ ಬಂದಿತು. ಇಂಥ ಕಾಯಿದೆಗಳಿಗೆ ಕಾಲಕಾಲಕ್ಕೆ ತಿದ್ದುಪಡಿಗಳೂ ಬಂದಿವೆ.ವನಮಹೋತ್ಸವ: ಭಾರತ ದೇಶದ ಜನತೆಗೆ ಅರಣ್ಯಗಳ ಆವಶ್ಯಕತೆ, ಉಪಯೋಗ ಇವುಗಳ ವಿಷಯ ಹೆಚ್ಚಿನ ಅರಿವು ಮೂಡುವಂತೆ ಮಾಡಲು ದೇಶದ ಅರಣ್ಯ ಸಂಪತ್ತನ್ನು ಕ್ರಮಬದ್ಧವಾಗಿ ವರ್ಧಿಸಲು ವನಮಹೋತ್ಸವ ಎಂಬ ರಾಷ್ಟ್ರೀಯ ಸಪ್ತಾಹವನ್ನು 1950ರಿಂದ ಆಚರಿಸಲಾಗುತ್ತಿದೆ.

ಭಾರತದಲ್ಲಿ ಅರಣ್ಯ ಸಂಶೋಧನ ಸಂಸ್ಥೆಗಳು[ಬದಲಾಯಿಸಿ]

ಡೆಹರಾಡೂನಿನಲ್ಲಿರುವ ಫಾರೆಸ್ಟ ರಿಸರ್ಚ್ ಇನ್‍ಸ್ಟಿಟ್ಯೂಟ್ ಪ್ರಧಾನವಾದದ್ದು. ಇದು 1878ರಲ್ಲಿ ಅರಣ್ಯ ಶಾಖೆ ಎಂಬ ಹೆಸರಿನಿಂದ ರೂಪ ತಳೆಯಿತು. ಅರಣ್ಯ ಶಾಸ್ತ್ರದ ಅಭ್ಯಾಸ, ಅರಣ್ಯಾಧಿಕಾರಿಗಳ ತರಪೇತು ಮುಖ್ಯೋದ್ಧೇಶಗಳು. 1906ರಲ್ಲಿ ಶಾಲೆ ವಿಸ್ತರಿಸಿ ಅಧ್ಯಯನದ ವ್ಯಾಪ್ತಿ ಬೆಳೆಯಿತು. ಸುಮಾರು 1300 ಎಕರೆ ಪ್ರದೇಶದಲ್ಲಿ ಸಂಸ್ಥೆಯ ಆಡಳಿತ ಕಛೇರಿ, ಸಂಶೋಧನಾಲಯಗಳು, ವಸ್ತು ಸಂಗ್ರಹಾಲಯಗಳು ಮುಂತಾದುವುಗಳನ್ನು ರಚಿಸಲಾಗಿದೆ (1920). ಆಧುನಿಕ ವೈಜ್ಞಾನಿಕ ತಳಹದಿಯ ಮೇಲೆ ನಿಂತ ಅರಣ್ಯದ ಶಾಸ್ತದ ವಿಶಿಷ್ಟ ವಿಭಾಗಗಳಲ್ಲೂ ಸಂಶೋಧನೆ ನಡೆಸುತ್ತಿರುವ, ಶಿಕ್ಷಣ ನೀಡುತ್ತಿರುವ ಈ ಸಂಸ್ಥೆ ದೇಶದ ಪ್ರಗತಿಯ ಒಂದು ಭವ್ಯ ಸಂಕೇತ.ಭಾರತದಲ್ಲಿ ಇತರ ಅರಣ್ಯ ಸಂಶೋಧನ ಸಂಸ್ಥೆಗಳು ಕೊಯಂಬತ್ತೂರು, ಬೆಂಗಳೂರುಗಳಲ್ಲಿವೆ. ಜಬ್ಬಲ್‍ಪುರದಲ್ಲಿ ಒಂದನ್ನು ಸ್ಥಾಪಿಸಲು ಪ್ರಯತ್ನ ನಡೆದಿದೆ.

ಬೆಂಗಳೂರಿನಲ್ಲಿರುವ ಅರಣ್ಯ ಸಂಶೋಧನ ಪ್ರಯೋಗಾಲಯ[ಬದಲಾಯಿಸಿ]

ಇದು 2-1-1936ರಲ್ಲಿ ಅಸ್ತಿತ್ವಕ್ಕೆ ಬಂದಿತು. ಮುಂದೆ (17-10-1938) ಇದೊಂದು ಬೃಹತ್ ಅರಣ್ಯ ಸಂಶೋಧನ ಪ್ರಯೋಗಾಲಯವಾಗಿ ಮಾರ್ಪಾಟು ಹೊಂದಿತು ಇದನ್ನು ಜರ್ಮನಿ ಮ್ಯೂನಿಕ್ (ಒuಟಿiಛಿh) ಅರಣ್ಯ ಸಂಶೋಧನ ಪ್ರಯೋಗಾಲಯದ ಮಾದರಿಯಲ್ಲಿ ಸ್ಥಾಪಿಸಲಾಗಿದೆ. 1940 ರಿಂದೀಚೆಗೆ ಅರಣ್ಯಾಧಿಕಾರಿಗಳ ಶಿಕ್ಷಣವೂ ಈ ಸಂಸ್ಥೆಯಲ್ಲಿ ನಡೆಯುತ್ತಿದೆ. ಬಿದಿರನ್ನು ರೇಯನ್ ಪಲ್ಟ್ ಆಗಿ ಉಪಯೋಗಿಸಲು ಮೊದಲು ಭಾರತಕ್ಕೆ ತೋರಿಸಿಕೊಟ್ಟ ಹಿರಿಮೆ ಈ ಸಂಸ್ಥೆಯದು. ಅರಗಿನ ಕೀಟ ಸಾಕಲು ವಿವಿಧ ವೃಕ್ಷಗಳ ಬಳಕೆಯನ್ನು (ಎಲಚಿ, ಜಾಲರಿ ಮುಂಥಾದವು) ಜನಸಾಮಾನ್ಯರಿಗೆ ಪರಿಚಯ ಮಾಡಿಸಿ ಅರಗಿನ ತಯಾರಿಕೆ ಹೆಚ್ಚು ಮಾಡಿರುವ ಹಿರಿಮೆ ಈ ಸಂಸ್ಥೆಗೇ ಸಲ್ಲುತ್ತದೆ. ಈ ಸಂಸ್ಥೆ ಮಾಡಿರುವ ಮತ್ತೊಂದು ಕೆಲಸವೆಂದರೆ ಔಷಧಿ ಸಸ್ಯಗಳ ಕನ್ನಡದ ಹೆಸರುಗಳನ್ನೆಲ್ಲ ಕಲೆ ಹಾಕಿ ಅವಕ್ಕೆ ಲ್ಯಾಟಿನ್ ನಾಮಗಳನ್ನು ನಿರ್ಧರಿಸಿ ಆಯುರ್ವೇದೀಯ ವೈದ್ಯರಿಗೆ ಸಹಾಯ ಮಾಡಿರುವುದು. ಸುಗಂಧದ ಎಣ್ಣೆಗಳ ತಯಾರಿಕೆ, ಕಾಗದದ ತಯಾರಿಕೆ, ಗಂಧದ ಎಣ್ಣೆ ಕೈಗಾರಿಕೆ, ಪ್ಲೈವುಡ್ ಕೈಗಾರಿಕೆ ಮುಂತಾದುವಕ್ಕೆಲ್ಲ ಈ ಸಂಸ್ಥೆ ಗಮನಾರ್ಹಸೇವೆ ಸಲ್ಲಿಸಿದೆ. ಗಂಧದ ಮರಕ್ಕೆ ಪಿಡುಗಾಗಿರುವ ಸ್ಟೈಕ್ ಕಾಯಿಲೆಯ ವಿಷಯವಾಗಿ ಇಲ್ಲಿ 1938ನೇ ಇಸವಿಯಿಂದಲೂ ಸಂಶೋಧನೆಗಳು ನಡೆಯುತ್ತಿವೆ. ಇವನ್ನು ಕುರಿತು ಈಚೆಗೆ ಎಫ್.ಎ.ಓ. ಸರ್ಕಾರದೊಂದಿಗೆ ಕೆಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಈ ಕಾಯಿಲೆಯ ಬಗ್ಗೆ ಇನ್ನೂ ಸಾಕಷ್ಟು ವಿವರ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. 26-10-1956ರಲ್ಲಿ ಈ ಸಂಸ್ಥೆಯನ್ನು ಕೇಂದ್ರ ಸರ್ಕಾರಕ್ಕೆ ವಹಿಸಿಕೊಡಲಾಯಿತು.

ಪ್ರಾಚೀನ ಭಾರತದಲ್ಲಿ ಅರಣ್ಯಶಾಸ್ತ್ರ[ಬದಲಾಯಿಸಿ]

ಭಾರತದ ಪ್ರಚೀನ ಸಾಹಿತ್ಯದಲ್ಲಿ ಅರಣ್ಯ, ವೃಕ್ಷ, ಮತ್ತು ಮೂಲಿಕೆಗಳ ಉಲ್ಲೇಖಗಳು ಅನೇಕ ಕಡೆ ಇವೆ. ವೇದಗಳಲ್ಲಿ ಅರಣ್ಯವೃಕ್ಷಗಳ ಬಗ್ಗೆ ಪ್ರಸ್ತಾಪವಿದೆ. ಪಾಣಿನಿಯ (ಕ್ರಿ.ಪೂ. 5ನೆಯ ಶತಮಾನ)ಸೂತ್ರಗಳಲ್ಲಂತೂ ವಿವಿಧ ಅರಣ್ಯ ವೃಕ್ಷಗಳು, ಅರಣ್ಯಗಳ ವರ್ಗೀಕರಣ, ಪ್ರಾಮುಖ್ಯ ಇವುಗಳ ಬಗ್ಗೆ ಮಾಹಿತಿ ಇದೆ. ಪಾಣಿನಿ, ಪ್ರಾಕೃತಿಕ ಅರಣ್ಯಗಳಾದ ಪುರಾಗವನ, ಮಿಸ್ರಕವನ ಮತ್ತು ಉದ್ಯಾನಗಳಾದ ಅಮರವನ, ಖದಿರವನ, ಇಕ್ಷುವನ ಇವುಗಳ ಬಗ್ಗೆ ವಿವರ ನೀಡಿದ್ದಾನೆ, ಅರಣ್ಯಶಾಸ್ತ್ರದ ಬಗ್ಗೆ ಪಾಣಿನಿಗಿಂತ ಹಿಂದೆಯೂ ಭಾರತೀಯರಿಗೆ ಸ್ಪಷ್ಟ ಜ್ಞಾನವಿತ್ತು ಎಂದು ಅನೇಕ ವಿದ್ವಾಂಸರು ವಾದಿಸುತ್ತಾರೆ (ಮುಜುಂದಾರ್.1946). ನಮ್ಮಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳಲ್ಲಂತೂ ವೃಕ್ಷಗಳ ಮತ್ತು ಅರಣ್ಯಗಳ ವರ್ಣನೆ ಹೇರಳವಾಗಿ ಬರುತ್ತÀದೆ. ಈ ವರ್ಣನೆಗಳಲ್ಲಿ ಪ್ರಾಚೀನ ಬೌದ್ಧ ಮತ್ತು ಜೈನಸಾಹಿತ್ಯಗಳೇನೂ ಕಡಿಮೆ ಇಲ್ಲ. ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ಅಂದಿನ ಅರಣ್ಯ ಶಾಸ್ತ್ರ ಬಗ್ಗೆ ಕೆಲವು ರೂಪರೇಖೆಗಳನ್ನು, ವಿವರಗಳನ್ನು ಕೊಟ್ಟಿದ್ದಾನೆ, ಆಗಿನ ಕಾಲದಲ್ಲಿ ಅರಣ್ಯಗಳಿಗೆ ಎಷ್ಟು ಪ್ರಾಮುಖ್ಯ ಕೊಡಲಾಗುತ್ತಿತ್ತು, ಅರಣ್ಯಗಳನ್ನು ಮತ್ತು ಅರಣ್ಯೋತ್ಪನ್ನಗಳನ್ನು ಹಾಳು ಮಾಡುವವರಿಗೆ ಯಾವ ಶಿಕ್ಷೆ ಕೊಡಲಾಗುತ್ತಿತ್ತು ಎಂಬ ಬಗ್ಗೆ ಅತ ವಿವರಿಸಿದ್ದಾನೆ. ಆತನೇ ಹೇಳಿಕೊಂಡಿರುವಂತೆ ಅಂದು ಅರಣ್ಯಗಳ ರಕ್ಷಣೆಗೆಂದೇ ಒಬ್ಬ ರಕ್ಷಣಾಧಿಕಾರಿ ಇರುತ್ತಿದ್ದ. ಅವನನ್ನು ಕುಪ್ಯಾಧ್ಯಕ್ಷ ಎಂದು ಕರೆಯಲಾಗುತ್ತಿತ್ತು. ಈತ ಅಂದಿನ ಅರಣ್ಯ ಇಲಾಖೆಯ ಮುಖ್ಯಸ್ಥನಾಗಿದ್ದ. ಇವನ ಕೆಲಸ ಅರಣ್ಯಗಳಿಂದ ಬರುವ ಆದಾಯ ಮತ್ತು ಅರಣ್ಯಗಳ ರಕ್ಷಣೆಗೆ ಗಮನಕೊಡುವುದು ಸಾರ್ವಜನಿಕರಿಗೆ ಅರಣ್ಯಗಳ ಬಗ್ಗೆ ತಿಳಿವಳಿಕೆ ನೀಡುವುದೂ ಆಗಿತ್ತು. ಕುಪ್ಯಾಧ್ಯಕ್ಷನಿಗೆ ಸಹಾಯಕವಾಗಿರಲು ಅನೇಕ ಕೆಳದರ್ಜೆಯ ಅರಣ್ಯ ಸಂರಕ್ಷಕರಿದ್ದರು. ಹಡಗುಗಳು, ಮನೆಗಳು, ರಥಗಳು, ವ್ಯವಸಾಯದ ಉಪಕರಣಗಳು ಮುಂತಾದುವಕ್ಕೆಲ್ಲ ಯಾವ ಯಾವ ಮರಗಳು ಒಳ್ಳೆಯ ಬಾಳಿಕೆ ಬರುವಂಥವುಗಳು ಎಂಬುದರ ಬಗ್ಗೆ ಕೌಟಿಲ್ಯನ ಕಾಲದಲ್ಲೇ ಜನರಿಗೆ ಸ್ಪಷ್ಟ ಪರಿಜ್ಞಾನವಿತ್ತು.ಶುಕ್ರನೀತಿಸಾರದಲ್ಲೂ ಅರಣ್ಯಶಾಸ್ತ್ರದ ಪ್ರಸ್ತಾಪ ಬರುತ್ತದೆ. ಅರಣ್ಯಗಳ ಮೇಲ್ವಿಚಾರಣೆಗೆ ವನಸ್ಪತಿಶಾಸ್ತ್ರ ಕೋವಿದನಾದ ಒಬ್ಬ ಮುಖ್ಯಾಧಿಕಾರಿ ಇರುತ್ತಿದ. ಆತ ಅರಣ್ಯಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ, ಆತನ ಕಾಲದಲ್ಲಿ ಪ್ರತಿ ಆರು ಯೋಜನ ಸುತ್ತಳತೆಯುಳ್ಳ ಎಲ್ಲ ಅರಣ್ಯಗಳೂ ಒಂದೊಂದು ರಾಜಮಾರ್ಗವನ್ನು ಹೊಂದಿರಬೇಕು ಎಂಬ ನಿಯಮವಿತ್ತು. ಸುಮಂತ್ರ (ಅರ್ಥಸಚಿವ) ರಾಜನಿಗೆ ರಾಜ್ಯದ ಅರಣ್ಯಗಳ ಬಗ್ಗೆ, ರಾಜಮಾರ್ಗಗಳು, ವ್ಯವಸಾಯ ಯೋಗ್ಯ ಭೂಮಿ ಇವುಗಳ ವಿಷಯವಾಗಿ ವಿವರಗಳನ್ನು ಒದಗಿಸಬೇಕಾಗಿತ್ತು. ಉಪಯುಕ್ತ ಮರಗಳನ್ನೇ ಅರಣ್ಯಗಳಲ್ಲಿ ಹೆಚ್ಚಾಗಿ ರಕ್ಷಿಸಲು, ಬೆಳೆಸಲು ಪ್ರೋತ್ಸಾಹಿಸಲಾಗುತ್ತಿತ್ತು. ಶುಕ್ರಾಚಾರ್ಯರು ಈ ಕೆಲಸಕ್ಕೆ ಸಸ್ಯಜ್ಞಾನದಲ್ಲಿ ಚೆನ್ನಾಗಿ ಪರಿಜ್ಞಾನ, ಪರಿಶ್ರಮಗಳಿರುವ ವ್ಯಕ್ತಿಗಳು ಬೇಕು ಎಂಬ ಬಗ್ಗೆ ಅಂದೇ ಹೇಳಿರುವುದು ಮೆಚ್ಚಬೇಕಾದ ವಿಷಯ.

ಉಲ್ಲೇಖಗಳು[ಬದಲಾಯಿಸಿ]

  1. https://sampada.net/event/42700[ಶಾಶ್ವತವಾಗಿ ಮಡಿದ ಕೊಂಡಿ]