ಬಿ.ಆರ್.ನಾಡಗೌಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿ.ಆರ್.ನಾಡಗೌಡ ಅವರು ೧-೭-೧೯೩೩ರಂದು ದೇವರ ಹಿಪ್ಪರಗಿ ಬಿಜಾಪುರ ಜಿಲ್ಲೆಯಲ್ಲಿ ಜನಿಸಿದರು. ತಂದೆ ಡಾ.ರಾಮರಾವ ಮಲ್ಹಾರಿರಾವ ನಾಡಗೌಡ.ತಾಯಿ ಶ್ರೀಮತಿ ಗೀತಾಬಾಯಿ ನಾಡಗೌಡ.ವೃತ್ತಿ ವೈದ್ಯಕೀಯ ಮತ್ತು ಸಾಹಿತಿಗಳು . ಡಾ. ಬಿ. ಆರ್. ನಾಡಗೌಡರ ಸಂಪೂರ್ಣ ಹೆಸರು ಡಾ. ಬಾಪುರಾವ ರಾಮರಾವ ನಾಡಗೌಡ. ಅವರು ಮೇ .೭ ೧೯೩೩ ರಲ್ಲಿ ಸುಸಂಕೃತ ಅವಿಭಕ್ತ ಕುಟುಂಬ ದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ದೇವರಹಿಪ್ಪರಗಿಯಲ್ಲಿ ಪೂರೈಸಿ ,ಮಾಧ್ಯಮಿಕ ಶಿಕ್ಷಣವನ್ನು ಬಿಜಾಪುರದ ಪಿ.ಡಿ.ಜೆ.ಹಾಯಸ್ಕೂಲಿನಲ್ಲಿ . ಆಯುರ್ವೇದ ಮಹಾವಿದ್ಯಾಲಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದರು. ಇವರು ತಂದೆಯವರಂತೆ ಮಕ್ಕಳ ತಜ್ಞ ರೆಂದೇ ಸಿಂದಗಿ ತಾಲೂಕಿನಲ್ಲಿ ಪ್ರಖ್ಯಾತರಾಗಿ ವೈದ್ಯರೆಂದೇ ಪರಿಗಣಿಸಲ್ಪಟ್ಟವರು. ವೃತ್ತಿಯಿಂದ ವೈದ್ಯರು ಪ್ರವೃತ್ತಿಯಿಂದ ಲೇಖಕರು, ಸಾಹಿತಿಗಳು, ಉಪನ್ಯಾಸಕಾರರು.ಇತ್ತೀಚಿಗೆ ಸಹಸ್ರ ಚಂದ್ರ ದರ್ಶನವನ್ನು ಮಾಡಿದರು. ಸಹಸ್ರ ಚಂದ್ರ ದರ್ಶನ ಸಂದರ್ಭದಲ್ಲಿ ಅವರ ಆತ್ಮೀಯರು,ಲೇಖಕರು "ಅತ್ರೇಯ " ಅಭಿನಂದನ ಗ್ರಂಥವನ್ನು ಪ್ರಕಟಿಸಿ ಅವರಿಗೆ ಗೌರವ ತೋರಿಸಿದ್ದಾರೆ. ಅಂದರೆ ಅವರು ೮೧ ರ ಗಡಿಯಲ್ಲಿದ್ದರೂ ವೃದ್ದಾಪ್ಯ ಅವರನ್ನು ಆವರಿಸಿಲ್ಲ . ಈಗಲೂ ಬೆಳಿಗ್ಗೆ ಯಿಂದ ಮಧ್ಯಾನ್ಹ ದವರೆಗೂ ರೋಗಿಗಳನ್ನು ಪರಿಶೀಲಿಸಿ ಔಷಧೋಪಚಾರ ಬರೆದು ಕೊಡುತ್ತಾರೆ. ಪರಿಚಿತ ಮುಖಗಳೆ ಇರುವುದರಿಂದ ಅವರ ಸಂಬಂಧಿಕರ ಯೋಗಕ್ಷೇಮ ವಿಚಾರಿಸುವುದಲ್ಲದೆ ಹಾಸ್ಯ ಚಟಾಕಿ ಹಾರಿಸಿ ಅವರ ನಗುವಿನೊ೦ದಿಗೆ ತಮ್ಮ ನಗುವನ್ನೂ ಬೆರೆಸುತ್ತಾರೆ. ಅವರಿದ್ದೆಡೆ ರೋಗಿಗಳಷ್ಟೆ ಅಲ್ಲದೆ ಪ್ರಜ್ಞಾವಂತರು, ತರುಣರು,ಲೇಖಕರ ಬಳಗವೇ ಸೇರಿರುತ್ತದೆ. ರೋಗಿಗಳ ಆರೋಗ್ಯದ ಜತೆಗೆ ಸಮಾಜದ ಆರೋಗ್ಯಕ್ಕೂ ಗಮನ ಕೊಡುವುದರಿಂದ ಒಮ್ಮೊಮ್ಮೆ ದವಾಖಾನೆಯು ಸಹ ಚಿಂತಕರ ಚಾವಡಿಯಾಗಿ ಪರಿಣಮಿಸುತ್ತದೆ.

ವೈದ್ಯಕೀಯ ವೃತ್ತಿ ಅಸ್ಕಿಹಳ್ಳಿಯಿಂದ[ಬದಲಾಯಿಸಿ]

ಅಸ್ಕಿ ಸಿಂದಗಿ ತಾಲೂಕಿನ ಕಟ್ಟ ಕಡೆ ಸೌಲಭ್ಯ ವಂಚಿತ ಹಳ್ಳಿ , ಆ ಹಳ್ಳಿಗೆ ಒಂದೇ ಒಂದು ಮುಕ್ಕಾಮ ಬಸ್ಸು. ಅಂದರೆ ನೈಟ ಹಾಲ್ಟ . ಅಸ್ಕಿ ಗ್ರಾಮಸ್ಥರ ವಿನಂತಿಯ ಮೇರೆಗೆ ತಮ್ಮ ಆಯುರ್ವೇದ ಶಿಕ್ಷಣ ನಂತರ ಅಸ್ಕಿಯಲ್ಲಿ "ಆರೋಗ್ಯ ಕೇಂದ್ರ " ೧೯೬೦ ಯಲ್ಲಿ ಪ್ರಾರಂಭಿಸಿದರು. ಮುಗ್ಧ ಹಳ್ಳಿಯ ಹೃದಯವಂತರಾದ ಜನರ ಜತೆ ಬೆರೆತು ನಾಟಕವಾಡಿ ಜನರ ನಾಡಿ ಮಿಡಿತವನ್ನು ಬಲ್ಲವರಾಗಿ ಗ್ರಾಮಸ್ಥರ ಮನಸ್ಸನ್ನು ಅರಿತರು. ಆ ಹಳ್ಳಿಯಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡಲು ಕಾರಣೀಭೂತರಾದರು. ಕರ್ನಾಟಕ ವಿಶ್ವ ವಿದ್ಯಾಲಯದೊಂದಿಗೆ ಸಂಪರ್ಕಿಸಿ ಪ್ರಸಾರಾಂಗ ವಿಭಾಗದಲ್ಲಿ ಶ್ರೀ ಚೆನ್ನವೀರ ಕಣವಿ ,ಶ್ರೀ ವ್ಹಿ.ಬಿ. ನಾಯಕ , ಗಣಿತದ ಪ್ರೊಫೆಸರ್ ಜಂಬೂನಾಥನ್ , ಕೃಷಿ ವಿಶ್ವವಿದ್ಯಾಲಯದ ಪ್ರೊ. ಜಿ.ಆರ್.ಕುಲಕರ್ಣಿ ಮುಂತಾದವರು ಭಾಗವಹಿಸುವುದರಿಂದ ಹಳ್ಳಿಯ ಸುತ್ತಲಿನ ಹಿರಿಯರು ,ಗ್ರಾಮಸ್ಥರು,ರೈತರು ಉನ್ನತ ಲಾಭ ಪಡೆಯುವಂತಾದರು. ಶ್ರೀಯುತರು ೧೯೬೨ ರಲ್ಲಿ ಚಿ.ಸೌ.ಸಾವಿತ್ರಿ ಅವರ ಜೊತೆ ವಿವಾಹ ಬಂಧನಕ್ಕೊಳಗಾದರು. ಅವರಿಗೆ ಎರಡು ಗಂಡು, ಒಂದು ಹೆಣ್ಣು ಮಕ್ಕಳು. ಮಕ್ಕಳ ವಿದ್ಯಾಭ್ಯಾಸ ಸಲುವಾಗಿ ತಾಲೂಕ ಕೇಂದ್ರವಾದ ಸಿಂದಗಿಗೆ ಸ್ಥಳಾಂತರ ಮಾಡಿದರು.

ಸಿಂದಗಿ ಜಿಂದಗಿ[ಬದಲಾಯಿಸಿ]

ಸಿಂದಗಿಗೆ ಬಂದ ನಂತರ ಶ್ರೀ ಕೆ ಬಿ ಕುಲಕರ್ಣಿ,ಶ್ರೀ ರೇ.ಚ. ರೇವಡಿಗಾರ, ಶಿಕ್ಷಕರಾದ ಶ್ರೀ ಜಂಬಗಿ ಮತ್ತು ರಾಯಚೂರ ಜೊತೆ ಸೇರಿ "ಭಾರತೀಯ ಸಂಸ್ಕೃತಿ ಪ್ರಸಾರ ಮಂಡಳಿ "ಸಭೆ ಪ್ರಾರಂಭಿಸಿದರು. ಇದು ಧಾರ್ಮಿಕ ,ಸಾಂಸ್ಕೃತಿಕ, ಸಾಹಿತ್ಯಕ , ಸಂಗೀತದ ಗೋಷ್ಠಿಗಳಿಗೆ ನಾಂದಿಯಾಯ್ತು ಎನ್ನಬಹುದು. ಭಾರತೀಯ ಸಂಸ್ಕೃತಿ ಪ್ರಸಾರ ಮಂಡಳಿ ಆಶ್ರಯದಲ್ಲಿ ಮೃತ್ಯುಂಜಯ ಸ್ವಾಮಿಗಳು, ಶ್ರೀ ಎನ್.ಕೆ.ಕುಲಕರ್ಣಿ (ಹಾಸ್ಯ ಸಾಹಿತಿಗಳು )ಡಾ. ದ ರಾ ಬೇಂದ್ರೆ ಯವರು, ಡಾ. ಶಿವರಾಮ ಕಾರಂತರು, ಶ್ರೀ ಬೀಚಿ, ಶ್ರೀ ಕೃಷ್ಣಮೂರ್ತಿ ಪುರಾಣಿಕರು , ಶ್ರೀ ರಾವಬಹಾದ್ದೂರ, ಶ್ರ್ರೀ ತವಗ ಭೀಮಸೇನರಾವ, ಅವರುಗಳು ಉಪನ್ಯಾಸ ನೀಡಿರುವುದರಿಂದ ಸಿಂದಗಿಯ ಜನತೆಗೆ ಧಾರ್ಮಿಕ, ಸಾಹಿತ್ಯದ ರಸದೌತಣವನ್ನು ಉಣಬಡಿಸಿದರು. ಡಾ.ಬಿ ಆರ್ ನಾಡಗೌಡರು ಸಾಹಿತ್ಯದ ಅಗ್ರಗಣ್ಯರೆಂದರೆ ಬಹುಶ‌: ತಪ್ಪಾಗಲಾರದು. ಸಂದರ್ಶನ ವಾರಪತ್ರಿಕೆಯಲ್ಲಿ, " ಆ ಹುಚ್ಚ " ಕರ್ಮವೀರ ವಾರಪತ್ರಿಕೆಯಲ್ಲಿ ಸಂದರ್ಶನ ವಾರಪತ್ರಿಕೆಯ ಸಂಪಾದಕರು ಮತ್ತು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಉಪಸಂಪಾದಕ ರು, ಭಾಷಣಕಾರರೂ ಆಗಿದ್ದ ಶ್ರೀ ವ್ಹಿ,ಬಿ,ನಾಯಕರ ವ್ಯಕ್ತಿಚಿತ್ರ, ರಂಗಭೂಮಿಯ ಮೇರು ನಟ ಹಂದಿಗನೂರ ಸಿದ್ರಾಮಪ್ಪ ಕುರಿತು "ನಟಸಾರ್ವಭೌಮ ಹಂದಿಗನೂರು ಸಿದ್ರಾಮಪ್ಪ "ನಟ, ನಾಟಕಕಾರ,ಅಭಿನಯ ಕೇಸರಿ " ಗರೂಡ ಸದಾಶಿವರಾಯರು " ಆಲೂರ್ ವೆಂಕಟರಾಯ ಅವರನ್ನು ಕುರಿತು "ಕನ್ನಡ ಕುಲಪುರೋಹಿತ ದರ್ಶನ "ಈ ಲೇಖನಗಳು ವ್ಯಕ್ತಿ ಚಿತ್ರಣಕ್ಕೆ ಮಾದರಿಯಾಗಬಲ್ಲವು. "ಖೌಚ್ ಪೌಂಚ ","ಬೇಂದ್ರೆ ಮೋಡಿ ಸೋಲಾಪುರಕ್ಕೆ ಓಡಿ", " ಬೀಚಿ ಅತ್ತರು " ಕಸ್ತೂರಿ ಮಾಸಪತ್ರಿಕೆಯ ಬರಹಗಳು. ಧಾರವಾಡ ಮತ್ತು ಗುಲಬರ್ಗ ಆಕಾಶವಾಣಿ ಕೇಂದ್ರಗಳಿಂದ ಧಾರ್ಮಿಕ ,ಸಾಂಸ್ಕೃತಿಕ, ಸಾಮಾಜಿಕ ಪಿಡುಗು ,ಸ್ವಾಸ್ಥ್ಯ , ವಿದ್ಯೆ ,ಅಪರಿಗ್ರಹ, ಮಕ್ಕಳ ಶಿಕ್ಷಣ ಕುರಿತು "ಅಕ್ಷರ ಬಿತ್ತೋಣ " ವೃದ್ದರ ಸಮಸ್ಯೆಗಳನ್ನು ಕುರಿತು ಔಚಿತ್ಯವಾದ ಚಿಂತನ ಲೇಖನಗಳನ್ನು ಬರೆದು ಪ್ರಕಟಿಸಿ ಸಮಾಜದ ಶ್ರೇಯೋಭಿವೃಧ್ಧಿಗೆ ಶ್ರಮಿಸಿದ್ದಾರೆ. ಇದಲ್ಲದೆ ಖಾದಿ ಗ್ರಾಮೋದ್ಯೋಗದಲ್ಲಿ ಸಕ್ರೀಯ ಸದಸ್ಯರಾಗಿ ಹಳ್ಳಿಯ ಬಡವರ ಉದ್ದಾರಕ್ಕೆ ಶ್ರಮಿಸಿದ್ದಾರೆ. ಜ್ಞಾನ ವೃದ್ದರು ಹಾಗೂ ವಯೋವೃದ್ದರೂ ಆದ ಡಾ ಬಿ ಆರ್ ನಾಡಗೌಡರನ್ನು ಕಂಡು ಮಾತನಾಡಿಸಿದಾಗ ಅವರ ವ್ಯಕ್ತಿತ್ವದ ಪೂರ್ಣ ಪರಿಚಯ ವಾಗದೆ ಇರಲಾರದು. ಬಿಜಾಪುರ ಜಿಲ್ಲೆಯು ಯಾವಾಗಲೂ ಬರ ಪೀಡಿತ ಜಿಲ್ಲೆ ಎಂದೇ ಕರೆಯಬಹುದು. ೧೯೭೩ ರಲ್ಲಿ ಭೀಕರ ಬರಗಾಲ ಬಿಜಾಪುರ ಜಿಲ್ಲೆಯನ್ನು ಅಲುಗಾಡಿಸಿತು. ಆ ಸಮಯದಲ್ಲಿ ಶ್ರೀ ಪೇಜಾವರ ಸ್ವಾಮಿಜಿಗಳ ಸಹಾಯ ಹಸ್ತದಿಂದ ಅಲಮೇಲ ಗ್ರಾಮದಲ್ಲಿ 'ಗಂಜಿ ಕೇಂದ್ರ' ಪ್ರಾರಂಭಿಸಿ ತುತ್ತಿನ ಚೀಲಕ್ಕೆ ತುತ್ತು ನೀಡುವುದರ ಮೂಲಕ ಬಡವರಿಗೆ ಆಶಾಕಿರಣವಾದರು. ಅದೇ ಸಮಯಕ್ಕೆ ಶ್ರೀ ಬೀಚಿಯವರು ಡಾ .ನಾಡಗೌಡ ರ ಮನೆಗೆ ಬಂದು ಸಿಂದಗಿಯ ಕೆಲವು ಹಳ್ಳಿಗಳನ್ನು ಸಂದರ್ಶಿಸಿ ಭೀಕರ ಬರಗಾಲದ ಚಿತ್ರಣವನ್ನು ಪ್ರಜಾಮತ ವಾರ ಪತ್ರಿಕೆ ಯಲ್ಲಿ "ಅನ್ನ ದೇವರು ಬರಲಿಲ್ಲ" ಲೇಖನವನ್ನು ಸಚಿತ್ರವಾಗಿ ಪ್ರಕಟಿಸಿದರು. ಅಪ್ರತ್ಯಕ್ಷವಾಗಿ ಸರಕಾರವನ್ನು ಎಚ್ಚರಿಸುವಲ್ಲಿ ಶ್ರೀಯುತರ ಪಾತ್ರ ಹಿರಿದಾದುದು.

ಅಂಬಿಕಾತನಯ ದತ್ತ ವೇದಿಕೆ (ನೊಂದಣಿ) ದ ರಾ ಬೇಂದ್ರೆ ಪ್ರತಿಷ್ಠಾನ[ಬದಲಾಯಿಸಿ]

ಡಾ ಬಿ ಆರ್ ನಾಡಗೌಡರು ಮತ್ತು ಅವರ ಕುಟುಂಬ ವರ್ಗದವರೆಲ್ಲರೂ ಸೇರಿ ಡಾ.ದ.ರಾ.ಬೇಂದ್ರೆ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಹೇಗೆ ಆಚರಿಸುವರೊ ಹಾಗೆ. ಕರ್ನಾಟಕದಲ್ಲಿ ವಿಜೃಂಭಣೆಯಿಂದ ಬೇಂದ್ರೆ ಜಯಂತಿಯನ್ನು ಆಚರಿಸುವಂತೆ ಬೇರೆಲ್ಲೂ ಕಂಡು ಬರುವುದಿಲ್ಲ .ಬೇಂದ್ರೆ ಅವರನ್ನು ತೊಟ್ಟಿಲಲ್ಲಿ ತೂಗಿ ಲಾಲಿಸಿ ,ಪಾಡಿಸಿ, ನಲಿದಾಡಿಸಿ ಕುಟುಂಬ ವರ್ಗದವರು ಮತ್ತು ಬೇಂದ್ರೆ ಅಭಿಮಾನಿಗಳು ಸಂಭ್ರಮಿಸುತ್ತಾರೆ. ದ.ರಾ. ಬೇಂದ್ರೆ ಪ್ರತಿಷ್ಠಾನ ೧೯೯೬ ರಲ್ಲಿ ಸ್ಥಾಪಿಸಿದ್ದಾರೆ. ಪ್ರತಿ ವರ್ಷ ಅದರವತಿ ಯಿಂದ ಗ್ರಂಥಗಳನ್ನು ಆಹ್ವಾನಿಸಿ, ಓರ್ವ ಸಾಹಿತಿಗೆ 'ಬೇಂದ್ರೆ ಪ್ರಶಸ್ತಿ' ನಗದು ಪುರಸ್ಕಾರ ನೀಡಿ ಸನ್ಮಾನ ಮಾಡುತ್ತಾರೆ. ಇಲ್ಲಿಯವರೆಗೆ ಹದಿನಾಲ್ಕು ಜನ ಸಾಹಿತಿ ಗಳಿಗೆ ಬೇಂದ್ರೆ ಪ್ರಶಸ್ತಿ ಯನ್ನು ನೀಡಿ ಗೌರವಿಸಿದ್ದಾರೆ.

ಕೃತಿಗಳು[ಬದಲಾಯಿಸಿ]

  • ರಂಗಭೂಮಿಯ ನಟ ಸಾರ್ವಭೌಮ ಸಿದ್ರಾಮಪ್ಪ ಹಂದಿಗನೂರ -ಕರ್ನಾಟಕ ವಿಶ್ವವಿದ್ಯಾಲಯ ಉಪನ್ಯಾ ಸ ಮಾಲೆ (೧೯೮೦)
  • ಅಮೃತ - ಧಾರ್ಮಿಕ ಗ್ರಂಥಗಳ ಸ್ಮರಣ ಸಂಚಿಕೆ (ಶ್ರೀ ಕೆ ಬಿ ಕುಲಕರ್ಣಿ ಸಭಾಗಿತ್ವ) ೧೯೮೦
  • ಸಾನಿಧ್ಯ - ಆದರಣೀಯ ವ್ಯಕ್ತಿಗಳು
  • ವೋಹರೆ ಹನುಮಂತ ರಾಯರು - ಜೀವನ ಚರಿತ್ರೆ -೨೦೦೧
  • ಮಡಿವಾಳ ಮಾಚಿದೇವ - ಬಾನುಲಿ ನಾಟಕ
  • ಬಂತಿದೋ ಆರಾಧನಾ - ಸಿಂದಗಿ ಭೀಮಾಶಂಕರ ಮಠದ ಕುರಿತು ಹಾಡುಗಳ ಧ್ವನಿ ಸುರುಳಿ
  • ಬೇಂದ್ರೆ ಉಯ್ಯಾಲೆ ಮತ್ತು ಕೆಲವು ಪ್ರಸಂಗಗಳು.- ಕನ್ನಡ ಸಾಹಿತ್ಯ ಪರಿಷತ್ತು
  • ಸಾಹಿತ್ಯ ಮತ್ತು ಸಂಸ್ಕೃತಿ ಪ್ರಬಂಧ ಬಿಜಾಪುರ ಜಿಲ್ಲಾ ಸಹಿತ್ಯ ಸಮ್ಮೇಳನ ಜಮಖಂಡಿಯಲ್ಲಿ ಮಂಡಿಸಿದ್ದು
  • ಲಕ್ಷ್ಮಿ ಕಟಾಕ್ಷ -ನಾಟಕ
  • ಅತ್ರೇಯ - ಡಾ.ಬಿ.ಆರ್. ನಾಡಗೌಡ ರ ಅಭಿನಂದನ ಗ್ರಂಥ -ಡಾ.ಎಂ.ಎಂ. ಪಡಶೆಟ್ಟಿ ಮತ್ತು ಡಾ ಚನ್ನಪ್ಪ ಕಟ್ಟಿ