ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೆಫ಼್ಟಿನೆಂಟ್ ಅರುಣ್ ಖೇತ್ರಪಾಲ್
ಜನನ14 October 1950
ಪುಣೆ, ಪುಣೆ, ಮಹಾರಾಷ್ಟ್ರ
ಮರಣ16 December 1971(aged 21)
ಬಸಂತರ್
ವ್ಯಾಪ್ತಿಪ್ರದೇಶಭಾರತ
ಶಾಖೆಭಾರತೀಯ ಸೇನೆ
ಸೇವಾವಧಿ1971-1971 (6 months)[೧]
ಶ್ರೇಣಿ(ದರ್ಜೆ)ದ್ವಿತೀಯ ಲೆಫ಼್ಟಿನೆಂಟ್
ಭಾಗವಹಿಸಿದ ಯುದ್ಧ(ಗಳು)Indo-Pakistani War of 1947
ಪ್ರಶಸ್ತಿ(ಗಳು) Param Vir Chakra

ಪರಮವೀರ ಚಕ್ರ ಪಡೆದ ಕಿರಿಯ ಅಧಿಕಾರಿ ಅರುಣ್ ಖೇತ್ರಪಾಲ್, ೧೯೭೧ರ ಬಾಂಗ್ಲಾ ಯುದ್ಧದಲ್ಲಿ ೨೧ರ ಕಿರಿವಯಸ್ಸಿನಲ್ಲಿಯೇ ವೀರಮರಣ ಅಪ್ಪಿದ ಸೇನಾನಿ. ೧೭ ಪೂನಾ ಹಾರ್ಸ್ ದಳವು ಶಾಕಾರ್‌ಘಡ್ ಸೆಕ್ಟರ್‌ನಲ್ಲಿ ಹೋರಾಡುವಾಗ, ಏಕಾಂಗಿಯಾಗಿ ಪಾಕಿಸ್ತಾನದ ಟ್ಯಾಂಕುಗಳನ್ನು ನುಚ್ಚುನೂರಾಗಿಸಿದ ಧೀರ. ಆ ಹೋರಾಟದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಅರುಣ್‌ರಿಗೆ ಪರಮವೀರ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸೇನೆ ಸೇರಿದ ೬ ತಿಂಗಳಲ್ಲಿಯೇ ಯುದ್ಧಭೂಮಿಯಲ್ಲಿ ವೀರತ್ವ ತೋರಿದ ಅರುಣ್‌ರ ಹೆಸರು ಅವರ ಹುಟ್ಟೂರು ಪುಣೆಯ ಎನ್. ಡಿ. ಏ ದ ಕವಾಯತು ಮೈದಾನ, ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕ್ಯಾಡೆಮಿಯ ಮುಖ್ಯದ್ವಾರ ಮತ್ತಿತರ ಎಡೆಗಳನ್ನು ಅಲಂಕರಿಸಿದೆ.

ಸೇನೆ ಸೇರುವ ಯುವಕರಿಗೆ ಆದರ್ಶಪ್ರಾಯರಾದ ಅರು ಮುನ್ನಡೆಸಿದ ಅವರ ಟ್ಯಾಂಕ್ "ಫ಼ಾಮಗುಸ್ತ ಜೆ ಎಕ್ಸ್ ೨೦೨ "ವನ್ನು ದುರಸ್ತಿಗೊಳಿಸಿ ಅಹ್ಮದಾಬಾದ್‌ನ ಆರ್ಮರ್ಡ್ ಕಾರ್ಪ್ಸ್ ಶಾಲೆಯಲ್ಲಿ ಪ್ರದಶನಕ್ಕೆ ಇಡಲಾಗಿದೆ.

೧೪ ಅಕ್ಟೋಬರ್ ೧೯೫೦ರಂದು ಪುಣೆಯಲ್ಲಿ ಬ್ರಿಗೇಡಿಯರ್ ಎಂ. ಎಲ್. ಖೇತ್ರಪಾಲ್‌ರ ಮಗನಾಗಿ ಜನಿಸಿದ ಅರುಣ್, ಜೂನ್ ೧೯೬೭ರಲ್ಲಿ ಎನ್. ಡಿ. ಏ ಗೆ ಆಯ್ಕೆಯಾದರು.(ಎನ್. ಡಿ. ಏ ಸಂಖ್ಯೆ ೭೪೯೮/ಎಫ಼್/೩೮) ೩೮ನೆ ಕೋರ್ಸ್‌ನ ಸ್ಕ್ವಾಡ್ರನ್ ನ ಕಪ್ತಾನನಾಗಿ ಫ಼ಾ಼ಕ್ಸ್ಟ್ರಾಟ್ ಸ್ಕ್ವಾಡ್ರನ್‌ಅನ್ನು ಮುನ್ನಡೆಸಿದರು. ಇದರ ನಂತರ ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕ್ಯಾಡೆಮಿಗೆ ಆಯ್ಕೆಯಾಗಿ ತರಬೇತಿ ಪಡೆದರು. ಜೂನ್ ೧೯೭೧ರಲ್ಲಿ ೧೭ ಪೂನಾ ಹಾರ್ಸ್ ಘಟಕಕ್ಕೆ ನೇಮಕಗೊಂಡರು. (ಕಮೀಷನ್ ಆಯ್ಕೆ)

೧೯೭೧ರ ಡಿಸೆಂಬರ್‌ನಲ್ಲಿ ಬಾಂಗ್ಲಾ ಯುದ್ಧದಲ್ಲಿ ೧೭ ಪೂನಾ ಹಾರ್ಸ್ ಘಟಕವನ್ನು ೪೭ ಪದಾತಿ ದಳದ ಸಹಾಯಕ್ಕೆ ಎರವಲು ನೀಡಲಾಯಿತು. ಶಾಕಾರ್‌ಘಡ್ ಸೆಕ್ಟರ್‌ನಲ್ಲಿ ಡಿಸೆಂಬರ್‌ ೧೫ರ ದಿನ ಪೂರ್ತಿ, ಬಸಂತರ್ ನದಿಯ ಸೇತುವೆಯನ್ನು ನಿರ್ಮಿಸಿ, ಟ್ಯಾಂಕುಗಳು ನುಗ್ಗಲು ಅನುವು ಮಾಡುವುದು ಮತ್ತು ಅವನ್ನು ಕಾಪಾಡುವುದು ಈ ದಳದ ಗುರಿಯಾಗಿತ್ತು.

ಡಿಸೆಂಬರ್‌ ೧೬ರಂದು ಪಾಕಿಸ್ತಾನದ ಸೇನೆ ದಾಳಿ ಮಾಡಿದಾಗ ’ಏ’ ಸ್ಕ್ವಾಡ್ರನ್ ನಲ್ಲಿದ್ದ ಅರುಣ್, ಲೆಫ಼್ಟಿನೆಂಟ್ ಕರ್ನಲ್ ಹನುತ್ ಸಿಂಗ್‌ರ ಮಾರ್ಗದರ್ಶನದಲ್ಲಿ, ಪಾಕಿಸ್ತಾನದ ಟ್ಯಾಂಕುಗಳನ್ನು ಛಿದ್ರಗೊಳಿಸಿದರು. ಪಾಕಿಸ್ತಾನದ ಫಿರಂಗಿ ದಳದ ಬಲವಾದ ಮರುದಾಳಿ ಮಾಡಿದಾಗ, ಮತ್ತೆ ಟ್ಯಾಂಕುಗಳನ್ನು ಎದುರಿಸಿದರು. ಉಳಿದ ಭಾರತದ ಟ್ಯಾಂಕುಗಳು ಜಖಂಗೊಂಡಾಗ ಏಕಾಂಗಿಯಾಗಿ ತಮ್ಮ "ಫ಼ಾಮಗುಸ್ತ" ಟ್ಯಾಂಕನ್ನು ಮುನ್ನಡೆಸಿ ಎದುರಾಳಿಯನ್ನು ಎದುರಿಸಿದರು.

ಖುದ್ದು ಗಾಯಗೊಂಡರೂ ಸಹಿತ, ಹಿಂಜರೆಯದೆ ತಮ್ಮ ಸಹಚರರ ಟ್ಯಾಂಕುಗಳನ್ನು ಮುನ್ನಡೆಸಲು ಮುಂದಾದರು. ಅರುಣ್‌ರ ಬಲಹೀನ ಸ್ಠಿತಿ ಮತ್ತು ಅವರ ಹೊತ್ತಿ ಉರಿಯುತ್ತಿದ್ದ ಟ್ಯಾಂಕ್‌ನ ದುರವಸ್ಥೆ ಅರಿತ ಅವರ ಮೇಲಾಧಿಕಾರಿ, ಟ್ಯಾಂಕಿನಿಂದ ಹೊರಬಂದು ರಕ್ಷಣೆ ಪಡೆವ ಸಲಹೆ ನೀಡಿದಾಗ, ಶತ್ರುವಿನ ಎಲ್ಲಾ ಟ್ಯಾಂಕುಗಳನ್ನು ಧ್ವಂಸಗೈಯ್ಯದೆ ಹಿಂದೆಗೆಯಲಾರೆ ಎಂದು ಉತ್ತರ ನೀಡಿದರು.

ಕೇವಲ ೧೦೦ ಮೀಟರ್‌ಗಳ ಅಂತರದಲ್ಲಿದ್ದಾಗಲೂ ಸಹ, ಟ್ಯಾಂಕುಗಳನ್ನು ಶೂಟ್ ಮಾಡುತ್ತಿದ್ದ ಅರುಂ‌ರ ಪರಿಯನ್ನು ಕಂಡು, ಪಾಕಿಸ್ತಾನದ ಸೈನಿಕರು ಕಕ್ಕಾವಿಕಿಯಾದರು. ಕ್ಯಾಪ್ಟನ್ ಖ್ವಾಜಾ ಮೊಹಮದ್ ನಾಸಿರ್‌ರ ಟ್ಯಾಂಕನ್ನು ಧ್ವಂಸ ಮಾಡಲು ಮುಂದಾದಾಗ, ನಾಸಿರ್‌ರ ಟ್ಯಾಂಕಿನ ದಾಳಿಗೆ ಅಸು ನೀಗಿದರು.

ಡಿಸೆಂಬರ್ ೧೭ರಂದು ಸಂಬಾ ಜಿಲ್ಲೆಯಲ್ಲಿ ಅವರ ಅಂತಿಮ ಸಂಸ್ಕಾರ ಮಾಡಲಾಯಿತು.

ಯುದ್ಧ ಮುಗಿದ ನಂತರ ಪಾಕಿಸ್ತಾನದ ಸೇನಾ ಕಮಾಂಡರ್ "ಫ಼ಾಮಗುಸ್ತ" ಟ್ಯಾಂಕ್‌ನ ಅಧಿಕಾರಿಯ ಬಗ್ಗೆ ವಿಚಾರಿಸಿ, ಆ ಟ್ಯಾಂಕಿನಿಂದ ತಾವು ಹಿಮ್ಮೆಟ್ಟಿದ್ದಾಗಿ ಭಾರತೀಯ ಸೇನಾ ಕಮಾಂಡರ್‌ಗೆ ತಿಳಿಸಿದರು.

ಟ್ರಿವಿಯಾ[ಬದಲಾಯಿಸಿ]

೨೦೦೧ರಲ್ಲಿ ಅರುಣ್‌ರ ತಂದೆ ಬ್ರಿಗೇಡಿಯರ್ ಎಂ. ಎಲ್. ಖೇತ್ರಪಾಲ್‌ ತಮ್ಮ ಹುಟ್ಟೂರು ಪಾಕಿಸ್ತಾನದ ಸರ್ಘೋಡಾಕ್ಕೆ ಭೇಟಿ ನೀಡಿದಾಗ ಕ್ಯಾಪ್ಟನ್ ಖ್ವಾಜಾ ಮೊಹಮದ್ ನಾಸಿರ್‌, ಖೇತ್ರಪಾಲ್‌‌ರ ಆತಿಥ್ಯ ವಹಿಸಿ ಅರುಣ್‌ರ ಗುಣಗಾನ ಮಾಡಿ, ಅರುಣ್‌ರ ಪ್ರಾಣ ತಮ್ಮ ಟ್ಯಾಂಕಿನಿಂದಾಗಿಯೇ ಹೋದದ್ದಾಗಿಯೂ, ಶತ್ರುವಾದರೂ ಸಹಿತ ಗುಣಕ್ಕೆ ಮತ್ಸರವಿಲ್ಲದೆ ಕೊಂಡಾಡಿದರು. ಸೈನಿಕ ಬದುಕಿನ ಪೌರುಷಕ್ಕೆ ನಿದರ್ಶನ ಅರುಣ್‌ ಎಂದು ಹೊಗಳಿದರು. ಯುದ್ಧದಲ್ಲಿ ಪರಸ್ಪರ ಶತ್ರುಗಳಾದರೂ, ಸೈನಿಕರ ಮನಸ್ಸು ವೀರತ್ವವನ್ನು ಹೇಗೆ ಪೂಜಿಸುತ್ತದೆ ಎಂಬುದಕ್ಕೆ ಇದು ಉದಾಹರಣೆ.

References[ಬದಲಾಯಿಸಿ]

External links[ಬದಲಾಯಿಸಿ]

*

ಟೆಂಪ್ಲೇಟು:1971 Indo-Pak War