ಸಿಗಂದೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿಗಂದೂರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಇರುವ ಪ್ರಸಿದ್ಧ ಯಾತ್ರಾಸ್ಥಳ. ಚೌಡೇಶ್ವರಿ ಅಮ್ಮನವರ ದೇವಾಲಯ ಇಲ್ಲಿದೆ. ಸಿಗಂದೂರೇಶ್ವರಿ ಎಂದೂ ಈ ಅಮ್ಮನವರನ್ನು ಕರೆಯುತ್ತಾರೆ. ಮಕರ ಸಂಕ್ರಾಂತಿ ವೇಳೆ ಇಲ್ಲಿ ಜಾತ್ರೆ ನಡೆಯುತ್ತದೆ.

ಸ್ಥಳ ವಿಶೇಷ[ಬದಲಾಯಿಸಿ]

ಚೌಡಮ್ಮ ದೇವಿಯು ಕಳ್ಳರ ಭಯವನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದವಳಾಗಿದ್ದಾಳೆ. ಇಲ್ಲಿ ಹರಕೆ ಹೊತ್ತುಕೊಂಡಿರುವ ಭಕ್ತರು ಕಳ್ಳಕಾಕರ ಭಯವಿಲ್ಲದೆ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಹರಕೆ ಹೊತ್ತುಕೊಂಡಿರುವ ಭಕ್ತರ ಮನೆಯಲ್ಲಿ ಕಳ್ಳತನವಾದರೆ ಕಳ್ಳರನ್ನು ದೇವಿ ಭಯಂಕರವಾಗಿ ಶಿಕ್ಷಿಸುತ್ತಾಳೆ ಎಂಬ ಪ್ರತೀತಿ ಇದೆ. ಆದುದರಿಂದ ಈ ಭಾಗದಲ್ಲಿ ಹೆಚ್ಚಿನ ಮನೆ, ಆಸ್ತಿಗಳಲ್ಲಿ ದೇವಿ ಶಿಕ್ಷಿಸುವ ಬಗ್ಗೆ ಬರೆದಿರುವ ಫಲಕಗಳನ್ನು ಹರಕೆ ಹೊತ್ತುಕೊಂಡಿರುವವರು ಹಾಕಿರುತ್ತಾರೆ. ಅಲ್ಲದೆ ಅಮೂಲ್ಯ ವಸ್ತುಗಳು ಕಳೆದು ಹೋದಲ್ಲಿ ದೇವಿಯಲ್ಲಿ ಕೂಡಲೆ ಹರಕೆ ಹೊತ್ತುಕೊಂಡಲ್ಲಿ ವಸ್ತುಗಳು ಸಿಗುತ್ತವೆ ಎಂಬ ನಂಬಿಕೆ ಈ ಭಾಗದ ಭಕ್ತರಲ್ಲಿದೆ. ಇದಕ್ಕೆ ಸಾಕಷ್ಟು ನಿದರ್ಶನಗಳು ಇಲ್ಲಿ ಇವೆ.

ತಲುಪುವದು ಹೇಗೆ[ಬದಲಾಯಿಸಿ]

ಸಿಗಂದೂರು ಸಾಗರದಿಂದ ಸುಮಾರು ೩೨ ಕಿ.ಮಿ. ದೂರದಲ್ಲಿದೆ. ಸಾಗರದಿಂದ ಆವಿನಹಳ್ಳಿ ದಾರಿಯಾಗಿ ಹೊಳೆಬಾಗಿಲುವರೆಗೆ ರಸ್ತೆಯಿದೆ. ಹೊಳೆಬಾಗಿಲಿನಲ್ಲಿ ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರು ಎದುರಾಗುತ್ತದೆ. ಇಲ್ಲಿ ಮುಂದೆ ಸೇತುವೆ ಇಲ್ಲ. ಕಡವನ್ನು (Launch/Barge) ಬಳಸಿಕೊಂಡು ಹಿನ್ನೀರನ್ನು ದಾಟಬೇಕಾಗುತ್ತದೆ. ಈ ದಾರಿಯಾಗಿ ಬರುವ ಎಲ್ಲಾ ವಾಹನಗಳಿಗೂ ಈ ಕಡವನ್ನು ಬಳಸುವುದು ಅನಿವಾರ್ಯ. ಹಿನ್ನೀರು ಸುಮಾರು ೨ ಕಿ.ಮಿ. ಅಗಲವಿದೆ. ಕಡವು ನಿಗದಿತ ಸಮಯಗಳಲ್ಲಿ ಮಾತ್ರ ಲಭ್ಯ. ಇನ್ನೊಂದು ದಡದಲ್ಲಿರುವ ಕಳಸವಳ್ಳಿಯಿಂದ ದೇವಸ್ಥಾನ ಸುಮಾರು ೨ ಕಿ.ಮಿ. ದೂರದಲ್ಲಿದೆ.

ಕೊಲ್ಲೂರು ಇಂದ ಬರುವವರು ನಾಗೋಡಿ ಘಟ್ಟವನ್ನು ಏರಿ ನಾಗೋಡಿಯಿಂದ ತುಮರಿ ಮಾರ್ಗವಾಗಿ ಸಿಗಂದೂರಿಗೆ ಬರಬಹುದು. ಇಲ್ಲಿ ಯಾವುದೇ ಹಿನ್ನೀರು ಸಿಗುವುದಿಲ್ಲ. ಕೊಲ್ಲೂರಿನಿಂದ ಸಿಗಂದೂರು ಸುಮಾರು ೪೫ ಕಿ.ಮಿ. ದೂರವಿದೆ.

ಸಾಗರ, ಶಿವಮೊಗ್ಗ ಮತ್ತು ಭಟ್ಕಳದಿಂದ ಸಿಗಂದೂರಿಗೆ ನೇರ ಬಸ್ ಸೌಲಭ್ಯವಿದೆ. ಹೆಚ್ಛಿನ ಬಸ್ಸುಗಳು ಇಲ್ಲದಿರುವುದರಿಂದ ಖಾಸಗಿ ವಾಹನ ಮಾಡಿಕೊಂಡು ಬರುವುದೊಳ್ಳೆಯದು.