ಸದಸ್ಯ:Kamal558

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚರಕ ಮಹರ್ಷಿ:

ಜೇವನ:[ಬದಲಾಯಿಸಿ]

Aurvedha

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಖ್ಯಾತಿ ಪಡೆದ ಮಹರ್ಷಿಗಳ ಪೈಕಿ ಚರಕ ಕೂಡ ಒಬ್ಬರು. ಕ್ರಿಸ್ತಪೂರ್ವ 300ರಲ್ಲಿ ಜೀವಿಸಿದ್ದ ಅವರನ್ನು ಆಯುರ್ವೇದ ಪಿತಾಮಹ ಎಂದೂ ಕರೆಯುವದುಂಟು. ಔಷಧ, ಚಿಕಿತ್ಸೆ ಮುಂತಾದ ವಿಷಯಗಳನ್ನೊಳಗೊಂಡ ‘ಚರಕ ಸಂಹಿತೆ’ ಎಂಬ ಗ್ರಂಥ ರಚಿಸುವ ಮೂಲಕ ಅವರು ಮಾನವ ಜಗತ್ತಿಗೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ.

ಚರಕ ಸಂಹಿತೆಯಲ್ಲಿ 125 ಬಗೆಯ ಜ್ವರಗಳು, ಪಿತ್ತಕಾಮಾಲೆ, ಮಧುಮೇಹ (ಡಯಾಬಿಟೀಸ್), ಕ್ಷಯ (ಟಿಬಿ), ಕುಷ್ಠರೋಗ, ಸಿಡುಬು (ಮೈಲಿ ಬೇನೆ), ಮಾನಸಿಕ ಕಾಯಿಲೆಯಂತಹ ನೂರಾರು ಕಾಯಿಲೆಗಳ ವಿವರಣೆಗಳನ್ನು ನೀಡಿದ್ದಾರೆ. ಸುಮಾರು 600 ಗಿಡಮೂಲಿಕೆಗಳು, ಪ್ರಾಣಿ ಹಾಗೂ ಖನಿಜಗಳನ್ನು ಬಳಸಿ, ಬೆರೆಸಿ ಔಷಧ ತಯಾರಿಸುವ ವಿಧಾನಗಳನ್ನು ಇದರಲ್ಲಿ ವಿವರಿಸಲಾಗಿದೆ.

ಆಯುರ್ವೇದ ಪದ್ದತಿಯನ್ನು ಅಭಿವೃದ್ಧಿಪಡಿಸಿದ ಕೀರ್ತಿ ಇವರದು. ಆ ಕಾಲದಲ್ಲಿ ಲಭ್ಯವಿದ್ದ ವೈದ್ಯ ಪದ್ಧತಿಗಳನ್ನೆಲ್ಲ ಎಂಟು ಭಾಗಗಳಲ್ಲಿ ವಿಂಗಡಿಸಿ, ಅವನ್ನು ಅಷ್ಟಾಂಗ ಆಯುರ್ವೇದ ಎಂದು ಹೆಸರಿಸಿದರು. ಇದರಲ್ಲಿ ಖಾಯಿಲೆಗಳ ಗುಣಲಕ್ಷಣಗಳು, ಚಿಕಿತ್ಸಾ ವಿಧಾನಗಳು ಮತ್ತು ರೋಗಗಳ ಮುನ್ನೆಚ್ಚರಿಕೆಯ ಕುರಿತು ದೀರ್ಘ ವಿವರಣೆಗಳಿವೆ.

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಚರಕ ಮಹರ್ಷಿ ಕಂಡುಹಿಡಿದಿರುವ ಔಷಧಿಗಳು, ರೋಗಪತ್ತೆ ವಿಧಾನ ಈಗಲೂ ಪ್ರಸ್ತುತ. ಹೀಗಾಗಿ, ಚರಕ ಸಂಹಿತೆ ಗ್ರಂಥ ಇಂಗ್ಲಿಷ್, ಜರ್ಮನ್, ಚೀನಾ, ಅರೇಬಿಕ್ ಭಾಷೆಗಳು ಸೇರಿದಂತೆ ಹಲವಾರು ಭಾಷೆಗಳಿಗೆ ಅನುವಾದಗೊಂಡಿದೆ.

ವೈದ್ಯ ಬದುಕು :[ಬದಲಾಯಿಸಿ]

ಆಯುರ್ವೇದದಲ್ಲಿ ಸುಪ್ರಸಿದ್ಧ ವೈದ್ಯನೊಬ್ಬನ ಹೆಸರು. ಈತ ರಚಿಸಿದ ಶಾಸ್ತ್ರಗ್ರಂಥಕ್ಕೂ ಇವನ ಹೆಸರೇ ಇದೆ. ಅದನ್ನು ಚರಕಸಂಹಿತೆ ಎಂದೂ ಕರೆಯುವುದಂಟು. ಪ್ರಾಚೀನ ಭಾರತದಲ್ಲಿ ಚರಕ ಎಂಬ ಪದ ವೃತ್ತಿಸೂಚಕವಾಗಿದ್ದಿತೆಂದು ತೋರುತ್ತದೆ. ಕೃಷ್ಣ ಯಜುರ್ವೇದ ಶಾಖೆಯ ವೈದಿಕರು, ಸಂಚರಣಶೀಲ ಶಾಸ್ತ್ರ್ರಬೋಧಕರು, ವ್ಯಾಯಾಮ ನಿಪುಣರು, ಗೂಢಚಾರರು ಮುಂತಾದವರನ್ನು ಚರಕರೆಂದು ಕರೆಯಲಾಗುತ್ತಿತ್ತು. ಮುಖ್ಯವಾಗಿ ವ್ಯಾಕರಣ, ಜ್ಯೋತಿಷ್ಯ, ಆಯುರ್ವೇದ, ಧನುರ್ವೇದ ಮುಂತಾದ ಶಾಸ್ತ್ರಗಳಲ್ಲಿ ನಿಷ್ಣಾತರಾಗಿ ಶಿಷ್ಯರಿಗೆ ಅವನ್ನು ಬೋಧಿಸುತ್ತ ಸಂಚರಿಸುತ್ತಿದ್ದ ಋಷಿ, ಮುನಿಗಳನ್ನು ಚರಕಾಚಾರ್ಯರೆಂದೇ ಕರೆದಿದ್ದಿರಬಹುದೆಂದು ಊಹಿಸಲಾಗಿದೆ. ಇಂಥವರಲ್ಲಿ ಆಯುರ್ವೇದ ಶಾಸ್ತ್ರದ ಅತಿಮುಖ್ಯ ಗ್ರಂಥವನ್ನು ರಚಿಸಿದಾತ ಒಬ್ಬ ಚರಕಾಚಾರ್ಯ. ಇವನ ಜನ್ಮಸ್ಥಳ, ವಂಶವೃತ್ತಾಂತ, ಕಾಲ ಮುಂತಾದ ವಿವರಗಳಾವೂವೂ ನಿರ್ದಿಷ್ಟವಾಗಿ ತಿಳಿದಿಲ್ಲ. ಪುರಾಣಗ್ರಂಥಗಳಲ್ಲಿ ಇವನನ್ನು ಆದಿಶೇಷನ ಅವತಾರವೆಂದು ವರ್ಣಿಸಲಾಗಿದೆ. ವಾಗ್ಭಟಾಚಾರ್ಯ ಮತ್ತು ಭಾವಮಿಶ್ರರು ಇವನನ್ನು ಮುನಿ ಎಂದು ತಿಳಿಸುತ್ತಾರೆ. ಪಾಣಿನಿಯ ವ್ಯಾಕರಣದ ಮೇಲಿನ ಮಹಾಭಾಷ್ಯದ ಕರ್ತೃವಾದ ಪತಂಜಲಿ ಋಷಿಯೇ ಚರಕಾಚಾರ್ಯನೆಂದೂ ಪತಂಜಲಿ ಆದಿಶೇಷನ ಅವತಾರವೆಂದೂ ವಿಜ್ಞಾನಭಿಕ್ಷು ಮತ್ತು ಭೋಜ ಎಂಬುವರು ವರ್ಣಿಸಿದ್ದಾರೆ. ಚಕ್ರಪಾಣಿ ದತ್ತನೆಂಬ ವ್ಯಾಖ್ಯಾನಕಾರ ಚರಕ ಸಂಹಿತೆಗೆ ಪತಂಜಲಿಯೇ ಪ್ರಥಮ ಭಾಷ್ಯಕಾರನೆಂದು ಸ್ತುತಿಸಿದ್ದಾನೆ. ಚೀನಾದೇಶದಲ್ಲಿ ದೊರೆತ ಬೌದ್ಧ ತ್ರಿಪಟಿಕ ಗ್ರಂಥಗಳಲ್ಲಿ ಇಂಡೋಸಿಥಿಯನ್ ದೊರೆ ಕಾನಿಷ್ಕನ ಆಸ್ಥಾನದಲ್ಲಿ ಚರಕನೆಂಬ ವೈದ್ಯಾಚಾರ್ಯನಿದ್ದನೆಂದು ತಿಳಿಸಲಾಗಿದೆ. ಚರಕಸಂಹಿತೆಯ ಆಂತರಿಕ ಲಕ್ಷಣ, ಭಾಷಾಶೈಲಿ, ಚಾರಿತ್ರಿಕ ಹಿನ್ನೆಲೆ ಮುಂತಾದ ಆಧಾರಗಳೆಲ್ಲವನ್ನೂ ವಿಮರ್ಶಿಸಿರುವ ಪ್ರಾಚ್ಯವಿದ್ಯಾಸಂಶೋಧಕರ ಅಭಿಪ್ರಾಯದಲ್ಲಿ ಅದರ ಕರ್ತೃವೂ ಮಹಾಭಾಷ್ಯದ ಕರ್ತೃ ಪತಂಜಲಿಯೂ ಭಿನ್ನವ್ಯಕ್ತಿಗಳು; ಕಾನಿಷ್ಕನ ಆಸ್ಥಾನದ ವಸುಮಿತ್ರ ಅಶ್ವಘೋಷ, ನಾಗಾರ್ಜುನ ಮೊದಲಾದವರ ಗ್ರಂಥಗಳಲ್ಲಿ ಕಂಡುಬರುವಂಥ ಬೌದ್ಧಮತೀಯ ವಿಷಯಗಳು ಚರಕಸಂಹಿತೆಯಲ್ಲಿ ಕಾಣದಿರುವುದು ಮತ್ತು ಚರಕ ಸಂಹಿತೆಯ ಶೈಲಿಯ ಭಿನ್ನತೆಗಳು ಚರಕ ಸಂಹಿತೆಯ ಕರ್ತೃವೂ ರಾಜವೈದ್ಯ ಚರಕನೂ ಭಿನ್ನ ವ್ಯಕ್ತಿಗಳೆಂದು ದೃಢಪಡಿಸುತ್ತವೆ. ಮತ್ತು ಚರಕಸಂಹಿತೆಯ ಕಾಲ ಕ್ರಿ.ಪೂ. ಒಂದು ಅಥವಾ ಎರಡನೆಯ ಶತಮಾನಕ್ಕೇ ಸರಿಯಾಗಬಲ್ಲುದು. ಭಾರತದ ವಿಜ್ಞಾನಿಗಳ ರಾಷ್ಟ್ರೀಯ ಸಂಸ್ಥೆ (ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸಸ್ ಆಫ್ ಇಂಡಿಯ) ನಡೆಸಿದ ಸಮೀಕ್ಷೆಯ ಪ್ರಕಾರ ಚರಕ ಸಂಹಿತೆಯ ರಚನೆಯ ಕಾಲ ಕ್ರಿ.ಶ. 100 ಎಂದಿದೆ. ಚರಕ ಸಂಹಿತೆಯ ಕರ್ತೃ ಚರಕಾಚಾರ್ಯ ಕ್ರಿ.ಪೂ. ಎರಡನೆಯ ಶತಮಾನದಲ್ಲಿದ್ದ ಪ್ರಸಿದ್ಧ ಲೋಹಶಾಸ್ತ್ರಜ್ಞ) ಪತಂಜಲಿ ಎಂಬಾತ, ಕನಿಷ್ಕನ (ಕ್ರಿ.ಶ. ಎರಡನೆಯ ಶತಮಾನ) ರಾಜವೈದ್ಯ ಚರಕನ ನಾಮಸಾದೃಶ್ಯವುಳ್ಳ ಅನಂತರಕಾಲೀನ ವ್ಯಕ್ತಿ ಎಂಬ ಅಭಿಪ್ರಾಯ ಈಗ ಮಾನ್ಯತೆ ಪಡೆದಿದೆ.

ಸಾಧನೆ:[ಬದಲಾಯಿಸಿ]

ಚರಕಸಂಹಿತೆ ಚರಕಾಚಾರ್ಯನ ಸ್ವತಂತ್ರಕೃತಿಯಲ್ಲ. ಕ್ರಿ.ಪೂ. ಏಳನೆಯ ಶತಮಾನದ ಮಹರ್ಷಿ ಕೃಷ್ಣಾತ್ರೇಯ ಬೋಧಿಸಿದ ಸಿದ್ಧಾಂತಗಳನ್ನು ಆತನ ಶಿಷ್ಯೋತ್ತಮವಾದ ಅಗ್ನಿವೇಷ ಋಷಿ ಗ್ರಂಥವನ್ನಾಗಿ ರಚಿಸಿದ. ದೇವತೆಗಳಿಂದಲೂ ಶ್ಲಾಘಿಸಲ್ಪಟ್ಟ ಈ ಅಗ್ನಿವೇಶ ಸಂಹಿತೆ ಆಯುರ್ವೇದ ಅಧ್ಯಯನ ಆದ್ಯಾಪನಾದಿಗಳಿಗೆ ಆಧಾರಗ್ರಂಥವಾಗಿ ಮುಂದಿನ ಶತಮಾನಗಳಲ್ಲಿ ಮಾನ್ಯತೆ ಪಡೆಯಿತು. ದೇಶದಲ್ಲಿ ಉಂಟಾದ ರಾಜಕೀಯ ಕ್ಷೋಭೆ, ಪರಕೀಯರ ಆಕ್ರಮಣ ಮುಂತಾದ ಹಲವಾರು ಕಾರಣಗಳಿಂದ ಈ ಅಗ್ನಿವೇಶ ಸಂಹಿತೆ ಕ್ರಿ.ಪೂ. ಎರಡನೆಯ ಶತಮಾನದ ವೇಳೆಗೆ ದುಷ್ಟ್ರಾಷ್ಯವೂ ಅಸಮಗ್ರವೂ ಆಗಿದ್ದುದನ್ನು ಕಂಡು ಅದನ್ನು ಪುನಃ ಸಂಪಾದಿಸಿ ಪರಿಷ್ಕರಿಸಿ ಅಧ್ಯಯನಯೋಗ್ಯವನ್ನಾಗಿ ಮಾಡಿದ ಕೀರ್ತಿ ಚರಕಾಚಾರ್ಯನಿಗೆ ಸಲ್ಲುತ್ತದೆ. ಪ್ರತಿಸಂಸ್ಕಾರಾನಂತರ ಈ ಗ್ರಂಥ ಚರಕಸಂಹಿತೆಯೆಂದೇ ಖ್ಯಾತಿ ಪಡೆಯಿತು. ಮುಂದಿನ ಮೂರು ಶತಮಾನಗಳು ಕಳೆಯುವುದರೊಳಗೆ ಇದು ಕೂಡ ಅಸಂಪೂರ್ಣವಾಗಿ ದೊರೆಯುವಂತಾಯಿತು. ಕಾಶ್ಮೀರದ ಪಂಚನಪುರವೆಂಬಲ್ಲಿ ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿದ್ದ ಕಪಿಲಬಲನೆಂಬವನ ಪುತ್ರನಾದ ದೃಢಬಲನೆಂಬಾತ ಚರಕಸಂಹಿತೆಯನ್ನು ಪುನಃ ಪರಿಷ್ಕರಿಸಿ ಅಂತ್ಯ 41 ಅಧ್ಯಾಯಗಳನ್ನು ತಾನೇ ರಚಿಸಿ ಗ್ರಂಥಕ್ಕೆ ಸೇರಿಸಿ ಅದನ್ನು ಸಂಪೂರ್ಣಗೊಳಿಸಿದ. ಇದೇ ನಮಗೆ ಇಂದು ದೊರೆತಿರುವ ಚರಕಸಂಹಿತೆ-ಮಹರ್ಷಿ ಕೃಷ್ಣಾತ್ರೇಯನ ಬೋಧನೆಗಳುಳ್ಳ, ಅಗ್ನಿವೇಶ ಋಷಿಪ್ರಣೀತವಾದ, ಚರಕಾಚಾರ್ಯನಿಂದ ಪ್ರತಿ ಸಂಸ್ಕøತವಾದ ದೃಢಬಲನಿಂದ ಸಂಪೂರ್ಣಗೊಳಿಸಲ್ಪಟ್ಟ ಆಯುರ್ವೇದ ಶಾಸ್ತ್ರದ ಅತ್ಯಮೂಲ್ಯ ಆಧಾರ ಗ್ರಂಥ.

ಚರಕಸಂಹಿತೆಯಲ್ಲಿ ಅನುಕ್ರಮವಾಗಿ 30 ಅಧ್ಯಾಯಗಳ ಸೂತ್ರಸ್ಥಾನ, ಪ್ರತ್ಯೇಕ 8 ಆಧ್ಯಾಯಗಳ ನಿದಾನ, ವಿಮಾನ ಮತ್ತು ಶಾರೀರಸ್ಥಾನಗಳು, 12 ಅಧ್ಯಾಯಗಳ ಇಂದ್ರಿಯಸ್ಥಾನ, 30 ಅಧ್ಯಾಯಗಳ ಚಿಕಿತ್ಸಾಸ್ಥಾನ, ಪ್ರತ್ಯೇಕ 12 ಅಧ್ಯಾಯಗಳ ಕಲ್ಪ ಮತ್ತು ಸಿದ್ದಿಸ್ಥಾನಗಳು- ಹೀಗೆ 120 ಅಧ್ಯಾಯಗಳುಳ್ಳ ಎಂಟು ಸ್ಥಾನಗಳಿವೆ. ಆಯುರ್ವೇದದ ಮೂಲಸಿದ್ಧಾಂತಗಳು, ಔಷಧ ಹಾಗೂ ಆಹಾರದ್ರವ್ಯಗಳ ಗುಣಧರ್ಮ ಸ್ವಸ್ಥವೃತ್ತ ಮುಂತಾದವು ಸೂತ್ರಸ್ಥಾನದ ವಿಷಯ. ರೋಗಕಾರಣ ಮತ್ತು ಲಕ್ಷಣಗಳನ್ನು ನಿದಾನಸ್ಥಾನವೂ ಷಡ್ರಸಗಳ ಗುಣಕರ್ಮ, ರೋಗಿಪರೀಕ್ಷೆ, ವೈದ್ಯನೀತಿ ಮುಂತಾದವನ್ನು ವಿಮಾನಸ್ಥಾನವೂ ಸಾಂಖ್ಯದರ್ಶನಾನುಸಾರ ವಿಶ್ವಸೃಷ್ಟಿ, ಶರೀರ ರಚನೆ, ಅಂಗಾವಯವಗಳ ವಿವರಣೆಯನ್ನು ಶರೀರ ಸ್ಥಾನವೂ ಮರಣ ಸೂಚಕ ಲಕ್ಷಣಗಳ ವಿವರಣೆಯನ್ನು ಇಂದ್ರಿಯ ಸ್ಥಾನವೂ ಹೊಂದಿವೆ. ರೋಗಗಳ ಚಿಕಿತ್ಸಾಕ್ರಮ ಚಿಕಿತ್ಸಾಸ್ಥಾನದಲ್ಲಿದೆ. ಔಷಧಿಗಳನ್ನು ತಯಾರಿಸುವ ಕ್ರಮ ಕಲ್ಪಸ್ಥಾನದಲ್ಲಿದೆ. ಚಿಕಿತ್ಸಾಕಾಲದಲ್ಲಿ ಉಂಟಾಗಬಹುದಾದ ವೈಪರೀತ್ಯಗಳ ಜ್ಞಾನ ಮತ್ತು ನಿವಾರಣೋಪಾಯಗಳನ್ನು ಸಿದ್ಧಿಸ್ಥಾನದಲ್ಲಿ ವಿವರಿಸಲಾಗಿದೆ.

ಸಮಾರೋಪ:[ಬದಲಾಯಿಸಿ]

ಆಯುರ್ವೇದದ ಅಷ್ಟಾಂಗಗಳಲ್ಲಿ ಮೊದಲನೆಯದಾದ ಕಾಯಚಿಕಿತ್ಸೆ ಎಂಬ ವಿಭಾಗಕ್ಕೆ ಚರಕಸಂಹಿತೆಯೇ ಆಧಾರಗ್ರಂಥ. ಬಾಹ್ಯ ಪ್ರಪಂಚದಲ್ಲಿರುವಂತೆಯೇ ಶರೀರದಲ್ಲಿಯೂ ಅಗ್ನಿ ಉಂಟು. ಉದರದ ಒಳಭಾಗದಲ್ಲಿರುವ ಅಗ್ನಿ (ಇದಕ್ಕೆ ಜಠರಾಗ್ನಿ, ಕೋಷ್ಠಾಗ್ನಿ, ಔದಾರ್ಯ ತೇಜಸ್, ಪಾಚಕಪಿತ್ತ ಎಂಬ ಬೇರೆ ಸಂಕೇತಗಳೂ ಉಂಟು) ನಾವು ಸೇವಿಸಿದ ಆಹಾರವನ್ನು ಪಾಕ ಮಾಡುತ್ತದೆ. ರಸ, ರಕ್ತ ಮೊದಲಾದ ಸಪ್ತಧಾತುಗಳಲ್ಲಿರುವ ವಿಶಿಷ್ಟ ಅಗ್ನಿಗಳು ಜಠರಾಗ್ನಿಯಿಂದ ಬಲವನ್ನು ಪಡೆದು ತಮ್ಮ ಆಹಾರಾಂಶಗಳನ್ನು ಪಾತಮಾಡುತ್ತವೆ. ಕೋಷ್ಟಾಗ್ನಿ ಮತ್ತು ಧಾತ್ವಗ್ನಿಗಳು ಪ್ರಾಕೃತವಾಗಿರುವಾಗ ಶರೀರ ಅನೇಕ ರೋಗಗಳಿಗೆ ತುತ್ತಾಗುತ್ತದೆ. ಆ ಸಮಯದಲ್ಲಿ ಅಗ್ನಿಯನ್ನು ಪ್ರಾಕೃತ ಸ್ಥಿತಿಗೆ ತರುವುದೇ ರೋಗನಿವಾರಣೆಯ ಕ್ರಮ. ಕಾಯಚಿಕಿತ್ಸೆ ಎಂದರೆ ಕಾಯಾಗ್ನಿ ಚಿಕಿತ್ಸೆ ಎಂಬುದೇ ಈ ವಿಭಾಗದ ಮೂಲಸಿದ್ಧಾಂತ. ಚರಕಸಂಹಿತೆಯಲ್ಲಿರುವ ಇತರ ಸಿದ್ಧಾಂತಗಳೆಲ್ಲವೂ ಅಗ್ನಿತತ್ತ್ವವನ್ನೇ ಮುಖ್ಯವಾಗಿಟ್ಟುಕೊಂಡು ಬೆಳೆದಿವೆ. ಜಠರಾಗ್ನಿಯನ್ನು ದೀಪನ ಮಾಡುವುದಕ್ಕಾಗಿ ಬಾಯಿಯ ಮೂಲಕವೇ ಔಷಧಿಗಳ ಪ್ರಯೋಗ. ಔಷಧಿಗಳಲ್ಲಿ ಹೆಚ್ಚಿನವು ಗಿಡಮೂಲಿಕೆಗಳಿಂದ ತಯಾರಾದವು. ನಿರುಪದ್ರವಿಯೂ ಯಶಸ್ವಿಯೂ ಆದ ಕಾಯಚಿಕಿತ್ಸಾ ಕ್ರಮವನ್ನು ವಿವರಿಸುವ ಚರಕಸಂಹಿತೆಗೆ ಆಯುರ್ವೇದ ಸಾಹಿತ್ಯದಲ್ಲಿ ಅಗ್ರಸ್ಥಾನ ಉಂಟು. ಋಷಿಪ್ರಣೀತವಾದ್ದರಿಂದ ಶ್ರೇಷ್ಠತೆಯನ್ನು ಪಡೆದ ಈ ಸಂಹಿತೆ ಸರ್ವಮಾನ್ಯವಾಗಿದ್ದಿತೆಂಬುದಕ್ಕೆ ಇದರ ಸುಮಾರು 30ಕ್ಕೂ ಹೆಚ್ಚು ವಿದ್ವತ್ಪೂರ್ಣ ಸಂಸ್ಕøತ ವ್ಯಾಖ್ಯಾನಗಳೇ ಸಾಕ್ಷಿ. ಕ್ರಿ.ಶ. ಐದನೆಯ ಶತಮಾನದ ಈಶಾನದೇವ, ಭಟ್ಟಾರ ಹರಿಶ್ಚಂದ್ರರಿಂದ ಪ್ರಾರಂಭಿಸಿ ವಾಪ್ಯಚಂದ್ರ, ಬತುಳತರ, ಭೀಮದತ್ತ, ನರದತ್ತ, ಜೇಜ್ಜಟ, ಗುಣಾಕಾರ, ಚಕ್ರಪಾಣಿದತ್ತ, ಸ್ವಾಮಿಕುಮಾರ, ಶಿವದಾಸಸೇನ, ಗಂಗಾಧರರಾಯ ಮತ್ತು ಇಪ್ಪತ್ತನೆಯ ಶತಮಾನದ ಯೋಗೇಂದ್ರನಾಥ ಸೇನರ ವರೆಗೆ ಅನೇಕ ಪಂಡಿತರ ವ್ಯಾಖ್ಯಾನಗಳಿವೆ. ಇವುಗಳ ಪೈಕಿ ಹನ್ನೊಂದನೆಯ ಶತಮಾನದಲ್ಲಿ ಬಂಗಾಳದ ಗೌಡದೇಶದ ರಾಜ ನಯಪಾಲನ ಆಸ್ಥಾನವೈದ್ಯನೂ ಪಾತಶಾಲಾಧ್ಯಕ್ಷನೂ ಆಗಿದ್ದ ಚಕ್ರಪಾಣಿದತ್ತ ರಚಿಸಿರುವ ಆಯುರ್ವೇದದ ದೀಪಿಕಾ ವ್ಯಾಖ್ಯಾನ ಅತ್ಯಂತ ವಿದ್ವತ್ಪೂರ್ಣವಾಗಿದ್ದು ಕರ್ತೃವಿಗೆ ಚರಕ ಚತುರಾನನ ಎಂಬ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಈಗ ಸಮುಗ್ರವಾಗಿ ಲಭ್ಯವಾಗಿರುವ ವ್ಯಾಖ್ಯಾನಗಳಲ್ಲಿ ಇದೇ ಪ್ರಾಚೀನವಾದುದಾಗಿದ್ದುದು ಇದರ ಮಹತ್ತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಚರಕ ಸಂಹಿತೆಯ ಖ್ಯಾತಿ ಅನ್ಯದೇಶಗಳಿಗೂ ಹರಡಿದ್ದು ಎಂಟನೆಯ ಶತಮಾನದಲ್ಲೇ ಇದರ ಅರಬ್ಬೀ ಮತ್ತು ಪರ್ಷಿಯನ್ ಭಾಷಾಂತರಗಳು ದೊರೆಯುತ್ತಿದ್ದುವಂತೆ. ಈಚೆಗೆ ಇದರ ಆಂಗ್ಲಭಾಷಾನುವಾದವೂ ರಚಿತವಾಗಿದೆ. (ಕೆ.ಆರ್.ಎಸ್.)

ಉಲ್ಲೇಖಗಳು:[ಬದಲಾಯಿಸಿ]

1.http://www.understandingnano.com/medicine.html

2.https://www.nanowerk.com/nanotechnology-in-medicine.php

3.https://www.azonano.com/article.aspx?ArticleID=4840