ವೀಣಾ ಶಾಂತೇಶ್ವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೀಣಾ ಶಾಂತೇಶ್ವರ ಅವರು ೧೯೪೫ ಫೆಬ್ರುವರಿ ೨೨ ರಂದು ಧಾರವಾಡದಲ್ಲಿ ಜನಿಸಿದರು. ಇವರ ತಾಯಿ ಇಂದಿರಾ; ತಂದೆ ಬಲರಾಮಾಚಾರ್ಯ ಯಲಬುರ್ಗಿಯವರು ರಸಾಯನಶಾಸ್ತ್ರದ ಉಪನ್ಯಾಸಕರು. ಬಾಗಿಲುಕೋಟೆಯ ಬಸವೇಶ್ವರ ಕಾಲೇಜಿನ ಸಂಸ್ಥಾಪಕರಾಗಿ ಹಾಗು ಉಪಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದವರು.

ಶಿಕ್ಷಣ[ಬದಲಾಯಿಸಿ]

ವೀಣಾ ಅವರು ಕರ್ನಾಟಕ ವಿಶ್ವವಿದ್ಯಾಲಯ ದಿಂದ ಎಮ್.ಏ. ಪದವಿ ಪಡೆದ ಬಳಿಕ ಹೈದರಾಬಾದನಲ್ಲಿರುವ [೧] ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷನಿಂದ ' ಡಿಪ್ಲೋಮಾ ಇನ್ ಇಂಗ್ಲಿಷ ಲ್ಯಾಂಗ್ವೇಜ ' ಪಡೆದರು.

ವೃತ್ತಿ, ಪ್ರವೃತ್ತಿ[ಬದಲಾಯಿಸಿ]

ಡಾ| ವೀಣಾ ಶಾಂತೇಶ್ವರ ಅವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಶ್ ಅಧ್ಯಾಪಕಿಯಾಗಿ ೩೯ ವರ್ಷ (ಹಾಗು ಪ್ರಾಚಾರ್ಯೆಯಾಗಿ ೯ ವರ್ಷ) ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅಲ್ಲದೆ ಅನೇಕ ಸಾಹಿತ್ಯಕ, ಶೈಕ್ಷಣಿಕ ಹಾಗು ಸಾಂಸ್ಕೃತಿಕ ಸಂಘಟನೆಗಳಲ್ಲಿ ಭಾಗಿಗಳಾಗಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಮಿತಿ, ಮಹಿಳಾ ಸಲಹಾ ಸಮಿತಿ, ಅಕ್ಯಾಡೆಮಿಕ್ ಕೌನ್ಸಿಲ್, ಉದ್ಯೋಗ ಮಾಹಿತಿ ಕೇಂದ್ರ, ಪರೀಕ್ಷಾ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಇದೀಗ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ [೨] ದ ಮಾರ್ಗದರ್ಶಿಯಾಗಿ, ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟಿನ ಸದಸ್ಯರಾಗಿ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಮಹಿಳಾ ಅಧ್ಯಯನ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.

ಸಾಹಿತ್ಯ[ಬದಲಾಯಿಸಿ]

ವೀಣಾ ಶಾಂತೇಶ್ವರ ಅವರು ೫ ಕಥಾಸಂಕಲನಗಳನ್ನು ಬರೆದಿದ್ದಾರೆ. ಇವರ ಮೊದಲ ಕಥಾಸಂಕಲನ ಮುಳ್ಳುಗಳು. ಇವರ ಕವಲು ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಕಿದ್ದು, ಹಸಿವು ಕಥಾಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿಮಲ್ಲಿಕಾ ಪ್ರಶಸ್ತಿ ಲಭಿಸಿದೆ. ಇವರ ಮತ್ತೊಂದು ಕಥಾಸಂಕಲನ: ಕೊನೆಯ ದಾರಿ. ಕಥೆಗಳನ್ನಲ್ಲದೆ ಗಂಡಸರು ಮೊದಲಾದ ೩ ಕಾದಂಬರಿಗಳನ್ನೂ ಸಹ ವೀಣಾ ಶಾಂತೇಶ್ವರ ಬರೆದಿದ್ದಾರೆ. "ಗಂಡಸರು" ಕಾದಂಬರಿಗೆ ಪ್ರಜಾವಾಣಿ ಬಹುಮಾನ,ಅನುಪಮಾ ಪ್ರಶಸ್ತಿ ಲಭಿಸಿವೆ. "ಅವಳ ಸ್ವಾತಂತ್ರ್ಯ" ಎನ್ನುವ ಇವರ ಕತೆಯು ನ್ಯೂಯಾರ್ಕ್ ಪ್ರೆಸ್ [೩] ಸಂಪಾದಿಸಿದ ,'ವಿಶ್ವದ ಅತ್ಯುತ್ತಮ ಮಹಿಳಾ ಬರಹಗಾರರು' ಶ್ರೇಣಿಯಲ್ಲಿ ಪ್ರಕಟವಾಗಿದೆ. ವೀಣಾ ಅವರ ಅತಿಥಿ ಎಂಬ ಕಥೆಯು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಥಾಸಂಗಮ ಚಿತ್ರದಲ್ಲಿ ಬಳಕೆಯಾಗಿದೆ.

ವೀಣಾ ಅವರು ಅನೇಕ ವೈಚಾರಿಕ ಕೃತಿಗಳನ್ನು ಹಾಗು ವಿಮರ್ಶೆಗಳನ್ನು ಪ್ರಕಟಿಸಿದ್ದಾರೆ. ಮಹಿಳಾ ಸಾಹಿತ್ಯದಲ್ಲಿ ವೈಚಾರಿಕತೆ, ಲೇಖಕಿಯ ಸಮಸ್ಯೆಗಳು, ಕನ್ನಡ ಲೇಖಕಿಯರ ಸಾಧನೆ,ಸಣ್ಣ ಕತೆಗೆ ಮಹಿಳೆಯರ ಕೊಡುಗೆ,ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಣ್ಣ ಕತೆ, ಮಹಿಳೆಯರು ಮತ್ತು ಪೋಲೀಸರು ಮೊದಲಾದವು ಇವರ ಪ್ರಕಟಿತ ಕೃತಿಗಳು.

ವೀಣಾ ಅವರು ಇಂಗ್ಲಿಶ್, ಮರಾಠಿ ಹಾಗು ಹಿಂದಿಯಿಂದ ಕನ್ನಡಕ್ಕೆ ಅನುವಾದಗಳನ್ನು ಸಹ ಮಾಡಿದ್ದಾರೆ. ಆಜ್ಞೇಯರ ಹಿಂದಿಕಾದಂಬರಿ "ನದಿದ್ವೀಪಗಳು","ಕುರಿಗಾಹಿ", "ಬಿಲ್ಲೇಸುರ" ಮೊದಲಾದವುಗಳನ್ನು ಹೆಸರಿಸಬಹುದು. "ನದಿದ್ವೀಪಗಳು" ಅನುವಾದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ವೀಣಾ ಶಾಂತೇಶ್ವರ ಅವರ ಹಲವಾರು ಕಥೆಗಳನ್ನು ಅಜಯ್ ವರ್ಮಾ ಅಲ್ಲೂರಿ ತೆಲುಗಿಗೆ ಅನುವಾದಿಸಿದ್ದಾರೆ.

ಶಿಕ್ಷಣ ಮತ್ತು ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಶಾಶ್ವತೀ ಪ್ರತಿಷ್ಠಾನದ ’ಸದೋದಿತಾ ಪ್ರಶಸ್ತಿ’ ಲಭಿಸಿದೆ. ಅಲ್ಲದೆ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಹಾಗು ರಾಜ್ಯ ಸರಕಾರದ ’ದಾನ ಚಿಂತಾಮಣಿ ಪ್ರಶಸ್ತಿ’ ಸಹ ಇವರಿಗೆ ಲಭಿಸಿವೆ. ೧೯೮೮ರಲ್ಲಿ ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ‍ಯ ಗೌರವ ಪ್ರಶಸ್ತಿ ದೊರೆಯಿತು.

===ಕಥಾ ಸಂಕಲನಗಳು===                                                      * ಮುಳ್ಳುಗಳು.                                                       * ಕೊನೆಯ ದಾರಿ.                                                   * ಕವಲು.                                                           * ಹಸಿವು.                                                                          * ಬಿಡುಗಡೆ.                                                                     * ನಡೆದದ್ದೇ ದಾರಿ.

ಕೌಟುಂಬಿಕ[ಬದಲಾಯಿಸಿ]

ವೀಣಾ ಅವರ ಪತಿ ಶಾಂತೇಶ್ವರ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಇಂಜನಿಯರ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಡಾ|ಮೀರಾ ಹಾಗು ಜ್ಯೊತಿರ್ಲಿಂಗ ಇವರ ಮಕ್ಕಳು.

ಉಲ್ಲೇಖ[ಬದಲಾಯಿಸಿ]