ಬುಧಿ ಕುಂದೆರನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Budhi kunderan one.jpg
'ಬುಧಿ ಕುಂದೆರನ್'

(ಜನನ: ಅಕ್ಟೋಬರ್ ೧೬,೧೯೩೯ಮರಣ : ೨೩.ಜೂನ್ ೨೦೦೬)

ಬುಧಿಸಾಗರ ಕೃಷ್ಣಪ್ಪ ಕುಂದೆರನ್ ಹುಟ್ಟಿದ್ದು ಮಂಗಳೂರಿನ ಹತ್ತಿರದ ಮುಲ್ಕಿಯಲ್ಲಿ. ಭಾರತೀಯ ಟೆಸ್ಟ್ ತಂಡಕ್ಕೆ ಕರ್ನಾಟಕದ ಅನೇಕ ಕೊಡುಗೆಗಳಲ್ಲಿ ಕುಂದೆರನ್ ಕೂಡಾ ಒಬ್ಬರು. ವಿಕೆಟ್ ಕೀಪರ್ ಮತ್ತು ಬಲಗೈ ಬ್ಯಾಟ್ಸ್ ಮನ್ .

ಟೆಸ್ಟ್ ಪಂದ್ಯ[ಬದಲಾಯಿಸಿ]

ಚಿತ್ರ:Budhi kunderan two .jpg
'ಬುಧಿ ಕುಂದೆರನ್' ಕಪ್ತಾನ್ ಎಮ್.ಎಲ್.ಜೈಸಿಂಹ ಮತ್ತು ಫರೂಕ್ ಇಂಜಿನಿಯರ್ ಜೊತೆ'

ಕುಂದೆರನ್ ಮೊದಲ ದರ್ಜೆ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದು ೧೯೫೮-೫೯ ರಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯ ಪರವಾಗಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ. ಮರು ವರ್ಷ ಆಸ್ಟ್ರೇಲಿಯ ವಿರುದ್ಧದ ಭಾರತದ ಟೆಸ್ಟ್ ತಂಡಕ್ಕೆ ಆಯ್ಕೆಯಾದಾಗ , ಅವರು ಕೇವಲ ಎರಡು ಮೊದಲ ದರ್ಜೆ ಪಂದ್ಯಗಳನ್ನು ಆಡಿದ್ದರಷ್ಟೇ !. ನರೇನ್ ತಮ್ಹಾಣೆ, ಪ್ರೊಬೀರ್ ಸೇನ್ ಹಾಗೂ ನಾನಾ ಜೋಶಿ , 50ರ ದಶಕದಲ್ಲಿದ್ದ ಇವರ ಸಾಲಿನಲ್ಲಿ ನಿಲ್ಲುವಂಥಹ , ಇತರ ಭಾರತದ ವಿಕೆಟ್ ಕೀಪರ್ ಗಳು. ಜೋಶಿ ಮತ್ತು ತಮ್ಹಾಣೆಗೆ ಇದಕ್ಕೆ ಮೊದಲು ಅವಕಾಶ ಕೊಡಲಾಗಿದ್ದು, ಕುಂದೆರನ್ ಮೂರನೆಯ ಟೆಸ್ಟಿನಲ್ಲಿ ಟೆಸ್ಟ್ ಪ್ರವೇಶಮಾಡಿದರು. ಈ ಟೆಸ್ಟಿನಲ್ಲಿ ಹಿಟ್ ವಿಕೆಟ್ ಆಗಿ ಔಟಾದ ಕುಂದೆರನ್ ಮುಂದಿನ ಟೆಸ್ಟಿನಲ್ಲಿ ೭೧ ಮತ್ತು ೩೩ ರನ್ ಗಳಿಸಿದರು.

ಕುಂದೆರನ್ ಮೊದಲ ರಣಜಿ ಟ್ರೋಫಿ ಪಂದ್ಯವಾಡಿದ್ದು ೧೯೬೦ ರಲ್ಲಿ, ಮೂರು ಟೆಸ್ಟ್ ಪಂದ್ಯ ಆಡಿದ ನಂತರ. ರೈಲ್ವೇಸ್ ಪರವಾಗಿ ಜಮ್ಮು ಮತ್ತು ಕಾಶ್ಮೀರದ ವಿರುದ್ಧ , ಈ ಪಂದ್ಯದಲ್ಲಿ ಕುಂದೆರನ್ 205 ಬಾರಿಸಿದರು. ಅವರ ಮೊದಲ ದರ್ಜೆ ಪಂದ್ಯದ ಎರಡನೆಯ ಶತಕ ಬಂದದ್ದೂ ಅದೇ ವರ್ಷದಲ್ಲಿ ಅದೇ ಎದುರಾಳಿಗಳ ವಿರುದ್ಧ. ಈ ಪಂದ್ಯವನ್ನು ರೈಲ್ವೇಸ್ ತಂಡ ಒಂದೂ ವಿಕೆಟ್ ಕಳೆದುಕೊಳ್ಳದೆ ಗೆದ್ದಿತು.

ಅರವತ್ತರ ದಶಕದ ಮೊದಲಾರ್ಧದಲ್ಲಿ ಫಾರೂಖ್ ಇಂಜಿನಿಯರ್ ವಿಕೆಟ್ ಕೀಪಿಂಗಿನಲ್ಲಿ ಕುಂದೆರನ್ ಗೆ ಸ್ಪರ್ಧಿಯಾದರು. 1961-62ರ ಇಂಗ್ಲೆಂಡ್ ಸರಣಿ ಹಾಗೂ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಇಬ್ಬರೂ ತಂಡದಲ್ಲಿದ್ದರು. 1963 -64 ರ ಭಾರತದಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿಗೆ ಇಂಜಿನಿಯರ್ ಆಯ್ಕೆಯಾದರೂ, ಮೊದಲನೇ ಟೆಸ್ಟಿಗೆ ಮೊದಲು ವೈದ್ಯಕೀಯ ಕಾರಣದ ಮೇಲೆ ಅವರನ್ನು ಕೈಬಿಟ್ಟು, ಅವರ ಜಾಗದಲ್ಲಿ ಕುಂದೆರನ್ ಸೇರ್ಪಡೆ ಮಾಡಲಾಯಿತು. ಇನಿಂಗ್ಸ್ ಪ್ರಾರಂಭಿಸಿದ ಕುಂದೆರನ್ ಮೊದಲ ದಿನವೇ 170 ರನ್ ಹೊಡೆದದ್ದಲ್ಲದೇ, 31 ಬೌಂಡರಿಗಳಿದ್ದ 192 ರನ್ ಹೊಡೆದು ಔಟಾದರು. ದೆಹಲಿಯಲ್ಲಿ ಇನ್ನೊಂದು ಶತಕ ಬಾರಿಸಿದ ಅವರು, ಸರಣಿಯಲ್ಲಿ 525 ರನ್ ಪೇರಿಸಿದರು.

ಆಸ್ಟ್ರೇಲಿಯ ವಿರುದ್ಧದ ಮುಂದಿನ ಸರಣಿಗೆ ಆಯ್ಕೆ ಸಮಿತಿ ,ಕುಂದೆರನ್ ಮತ್ತು ಇಂಜಿನಿಯರ್ ಇಬ್ಬರನ್ನೂ ಕೈಬಿಟ್ಟು ಕೆ.ಎಸ್.ಇಂದ್ರಜಿತ್ ಸಿನ್ಹಜೀಯವರನ್ನು ಚುನಾಯಿಸಿದರು. ನ್ಯೂಜಿಲ್ಯಾಂಡ್ ವಿರುದ್ಧದ ಮುಂದಿನ ಸರಣಿಗೆ ಇಂಜಿನಿಯರ್ ಮರಳಿ ಬಂದರೆ, ಕುಂದೆರನ್ ಗಾಯಗೊಂಡಿದ್ದ ದಿಲೀಪ್ ಸರ್ದೇಸಾಯಿಯ ಸ್ಥಾನದಲ್ಲಿ ಇನಿಂಗ್ಸ್ ಪ್ರಾರಂಭಿಸಿದರು.

1965ರಲ್ಲಿ , ಕುಂದೆರನ್ ರೈಲ್ವೇಸ್ ಕಲಸ ತ್ಯಜಿಸಿ, ಮೈಸೂರು ಮತ್ತು ದಕ್ಷಿಣ ವಲಯವನ್ನು ಪ್ರತಿನಿಧಿಸತೊಡಗಿದರು.ಇದರಿಂದ ಅವರಿಗೆ ಚಂದ್ರಶೇಖರ್, ಪ್ರಸನ್ನ ಮತ್ತು ವೆಂಕಟರಾಘವನ್ ರಂತಹ ಸ್ಪಿನ್ನರುಗಳಿಗೆ ವಿಕೆಟ್ ಕೀಪಿಂಗ್ ಮಾಡುವ ಅವಕಾಶ ದೊರಕಿತು. 1966 - 67ರ ವೆಸ್ಟ್ ಇಂಡೀಸ್ ಸರಣಿಯಲ್ಲಿ ಮತ್ತೆ ಸ್ಥಾನ ಗಿಟ್ಟಿಸಿದ ಕುಂದೆರನ್ ಮುಂಬಯಿ ಪಂದ್ಯದಲ್ಲಿ 92 ನಿಮಿಷದಲ್ಲಿ 79 ರನ್ ಹೊಡೆದರು.

ಈ ಇನಿಂಗ್ಸಿನ ಮೊದಲಲ್ಲಿ , ಗ್ಯಾರಿ ಸೋಬರ್ಸ್ ಕ್ಯಾಚ್ ಹಿಡಿದು ಕುಂದೆರನ್ ಔಟಾದಂತೆ ಕಂಡಿತು. ಪೆವಿಲಿಯನ್ನಿಗೆ ಮರಳುವುದರಲ್ಲಿದ್ದ ಕುಂದೆರನ್ನರಿಗೆ , ಸೋಬರ್ಸ್ ತಾವು ಚೆಂಡನ್ನು ಒಂದು ಪುಟವಾದ ಮೇಲೆ ಹಿಡಿದುದದ್ದಾಗಿ ತಿಳಿಸಿದರು.ಮತ್ತೊಂದು ಟೆಸ್ಟ್ ನಂತರ ಮತ್ತೆ ಕುಂದೆರನ್ ತಂಡದಿಂದ ಹೊರಗುಳಿಯಬೇಕಾಯಿತು.

1967ರ ಇಂಗ್ಲೆಂಡ್ ಸರಣಿಯಲ್ಲಿ ಇಬ್ಬರೂ ಇದ್ದರೂ, ವಿಕೆಟ್ ಕೀಪರ್ ಆಗಿ ಇಂಜಿನಿಯರ್ ಹೆಚ್ಚು ಹೆಚ್ಚಾಗಿ ಕಾಣತೊಡಗಿದರು. ಕುಂದೆರನ್ ಬ್ಯಾಟ್ಸ್ ಮನ್ ಆಗಿ ಎರಡು ಹಾಗೂ ಮೂರನೆಯ ಟೆಸ್ಟಿನಲ್ಲಿ ಆಡಿದರು. ಲಾರ್ಡ್ಸ್ ಟೆಸ್ಟಿನಲ್ಲಿ ಸರ್ದೇಸಾಯಿ ಕೈಪೆಟ್ಟಿನಿಂದ ನಿವೃತ್ತರಾದಾಗ , ಕುಂದೆರನ್ ಇಂಜಿನಿಯರೊಂದಿಗೆ ಇನ್ನಿಂಗ್ಸ್ ಪ್ರಾರಂಭಿಸಿ, ಭಾರತದ ಒಟ್ಟು ಮೊತ್ತವಾದ 110ರಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರಾದ 47 ರನ್ ಗಳಿಸಿದರು. ನಾಲ್ಕು ಸ್ಪಿನ್ನರುಗಳು ಆಡಿದ ಬರ್ಮಿಂಗ್ ಹ್ಯಾಮಿನಲ್ಲಿ, ಅವರು ಆರಂಭದ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡನ್ನೂ ಮಾಡಿದರು. ಇದೇ ಕುಂದೆರನ್ನರ ಕೊನೆಯ ಟೆಸ್ಟ್ ಪಂದ್ಯ .

ನಿವೃತ್ತಿಯ ನಂತರ[ಬದಲಾಯಿಸಿ]

ನಂತರ ಲ್ಯಾಂಕಾಶೈರ್ ಲೀಗಿನಲ್ಲಿ, ಅದರ ನಂತರ ಸ್ಕಾಟ್ಲೆಂಡಿನ ಡ್ರಂಪೆಲ್ಲಿಯರ್ ನಲ್ಲಿ ಆಡಿದರು. 80ರ ದಶಕದ ಮೊದಲ ವರ್ಷಗಳಲ್ಲಿ ಬೆನ್ಸನ್ ಎಂಡ್ ಹೆಜ್ಜಸ್ ಕಪ್ ಪಂದ್ಯಗಳಲ್ಲಿ ಸ್ಕಾಟ್ಲೆಂಡ್ ತಂಡದ ಪರವಾಗಿ ಆಡಿದರು. 70ರ ಸುಮಾರಿನಿಂದ ಸ್ಕಾಟ್ಲೆಂಡಿನಲ್ಲಿ ನೆಲೆಸಿದ ಕುಂದೆರನ್, ತಮ್ಮ ೬೬ ನೆಯ ವಯಸ್ಸಿನಲ್ಲಿ ಶ್ವಾಸಕೋಸದ ಕ್ಯಾನ್ಸರಿನಿಂದ, 'ಗ್ಲಾಸ್ಗೋ ನಗರ'ದಲ್ಲಿ ನಿಧನರಾದರು. ಅವರ ಸೋದರ ಭರತ್, ರವರೂ ವಿಕೆಟ್ ಕೀಪರಾಗಿದ್ದರು, 1970-71 ವಾರ್ಸಿಟಿ ಮಟ್ಟದಲ್ಲಿ ಮೊದಲ ದರ್ಜೆ ಪಂದ್ಯವಾಡಿದರು.

ಟಿಪ್ಪಣಿ[ಬದಲಾಯಿಸಿ]

  • ತಮ್ಮ ಅಡ್ಡಹೆಸರನ್ನು 'ಕುಂದೆರಮ್' ನಿಂದ 'ಕುಂದೆರನ್' ಎಂದು ೧೯೬೪ ರಲ್ಲಿ ಬದಲಾಯಿಸಿಕೊಂಡರು.
  • ರಣಜಿ ಟ್ರೋಫಿ ಪ್ರಾರಂಭವಾದ ಮೇಲೆ ಇಲ್ಲಿಯವರೆಗೆ ಕೇವಲ ಮೂವರು ಆಟಗಾರರು, ರಣಜಿ ಆಡುವುದಕ್ಕಿಂತ ಮೊದಲು ಟೆಸ್ಟ್ ಪಂದ್ಯದಲ್ಲಿ ಆಡಿದ್ದಾರೆ. ಕುಂದೆರನ್ ಅವರಲ್ಲಿ ಮೊದಲನೆಯವರು. ಇನ್ನಿಬ್ಬರು ವಿವೇಕ್ ರಾಜ್ದಾನ್ ಮತ್ತು ಪಾರ್ಥಿವ ಪಟೇಲ್.
  • 'ತಮ್ಮ ಮೊದಲ ರಣಜಿ ಪಂದ್ಯದಲ್ಲಿಯೇ ದ್ವಿಶತಕ ಬಾರಿಸಿದ ಐವರಲ್ಲಿ ಕುಂದೆರನ್ ಒಬ್ಬರು'. ಬಾಕಿ ನಾಲ್ವರು:
  • :ಜಾರ್ಜ್ ಅಬೆಲ್, ೨೧೯, ಉತ್ತರ ಭಾರತ ವಿರುದ್ಧ ಸೈನ್ಯ, ೧೯೩೪-೩೫
  • :ಗುಂಡಪ್ಪ ವಿಶ್ವನಾಥ್, ೨೩೦, ಮೈಸೂರು ವಿರುದ್ಧ ಆಂಧ್ರ, ೧೯೬೬-೬೭
  • :ಅಮೋಲ್ ಮಜುಮ್ದಾರ್, ೨೬೦, ಮುಂಬಯಿ ವಿರುದ್ಧ ಹರಿಯಾನಾ, ೧೯೯೩-೯೪
  • :ಅನ್ಶುಮನ್ ಪಾಂಡೇ, ೨೦೯ *, ಮಧ್ಯಪ್ರದೇಶ ವಿರುದ್ಧ ಉತ್ತರ ಪ್ರದೇಶ , ೧೯೯೫-೯೬
  • ಇವರಲ್ಲಿ ವಿಶ್ವನಾಥ್, ಮಜುಮ್ದಾರ್ ಮತ್ತು ಪಾಂಡೇ ತಮ್ಮ ಚೊಚ್ಚಲ ಮೊದಲ ದರ್ಜೆ ಪಂದ್ಯವನ್ನು ಆಡುತ್ತಿದ್ದರು.
  • ಕುಂದೆರನ್ ಮಾಡಿದ ೫೨೫ ರನ್ನಿನ ನಂತರ, ಇನ್ನಿಬ್ಬರು ವಿಕೆಟ್ ಕೀಪರುಗಳು ಒಂದು ಕ್ರಿಕೆಟ್ ಸರಣಿಯಲ್ಲಿ ೫೦೦ ಕ್ಕಿಂತ ಹೆಚ್ಚು ರನ್ ಮಾಡಿದ್ದಾರೆ.
  • ಡೆನಿಸ್ ಲಿಂಡ್ಸೇ , ೬೦೬ ದಕ್ಷಿಣ ಆಫ್ರಿಕಾ ಪರವಾಗಿ ಆಸ್ಟ್ರೇಲಿಯಾ ವಿರುದ್ಧ ೧೯೬೬-೬೭ ರಲ್ಲಿ,
  • ಆಂಡೀ ಫ್ಲವರ್ , ೫೪೦ ಜಿಂಬಾಬ್ವೆ ಪರವಾಗಿ ಭಾರತದ ವಿರುದ್ಧ ೨೦೦೦-೨೦೦೧ ರಲ್ಲಿ.