ಮಂಗಳೂರು
Wikipedia ಇಂದ
| ಮಂಗಳೂರು | |
| ಮಂಗಳೂರು ಪುರಭವನ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ದಕ್ಷಿಣ ಕನ್ನಡ |
| ನಿರ್ದೇಶಾಂಕಗಳು | |
| ವಿಸ್ತಾರ | 111.18 km² |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2001) - ಸಾಂದ್ರತೆ |
- 3,586.5/ಚದರ ಕಿ.ಮಿ. |
| ಮೇಯರ್ | ಎಂ. ಶಂಕರ ಭಟ್ |
| ಕೋಡ್ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 575001[೧] - +೦824[೨] - KA 19[೩] |
ಮಂಗಳೂರು (ತುಳು: ಕುಡ್ಲ; ಕೊಂಕಣಿ: ಕೊಡಿಯಾಲ್; ಬ್ಯಾರಿ: ಮೈಕಾಲ; ಆಂಗ್ಲ: ಮ್ಯಾಂಗಲೋರ್; ಮಲಯಾಳ೦: ಮ೦ಗಳಾಪುರ೦) ಕರ್ನಾಟಕದ ನೈರುತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ.
ಮಂಗಳೂರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಇದು ಪ್ರಸ್ತುತ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ನೇತ್ರಾವತಿ ಮತ್ತು ಗುರುಪುರ ನದಿಗಳಿಂದುಂಟಾದ ಹಿನ್ನೀರಿನ ತಟದಲ್ಲಿರುವ ಈ ನಗರವು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ.[೪]
ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಭಾಷೆಗಳು ತುಳು, ಕೊಂಕಣಿ, ಕನ್ನಡ ಮತ್ತು ಬ್ಯಾರಿ ಭಾಷೆ. ಈ ಪ್ರದೇಶವು ಇಲ್ಲಿನ ಪ್ರಮುಖ ಗುಣಲಕ್ಷಣವಾದ ತೆಂಗಿನ ಮರಗಳು, ಜೊತೆಗೆ ಹೊರಳುವ ಪರ್ವತಶ್ರೇಣಿಗಳು, ಸಮುದ್ರಕ್ಕೆ ಹರಿಯುವ ನದಿ ಹೊಳೆಗಳು ಹಾಗೂ ಎಲ್ಲೆಲ್ಲೂ ಕಾಣುವ ಇಲ್ಲಿನ ಹಂಚಿನ ಛಾವಣಿಯ ಕಟ್ಟಡಗಳಿಂದ ತನ್ನ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಲ್ಯಾಟರೈಟ್ ಕಲ್ಲಿನಿಂದ ನಿರ್ಮಿತ, ಸ್ಥಳೀಯ ಗಟ್ಟಿ ಕೆಂಪು ಜೇಡಿಮಣ್ಣಿನಿಂದ ತಯಾರಿತ ಮಂಗಳೂರು ಹಂಚುಗಳ ಮನೆಗಳು ಇಲ್ಲಿ ಸಾಮಾನ್ಯ.[೫] ಪುರಾತನ ಮನೆಗಳು ಸಾಮನ್ಯವಾಗಿ ವಿಸ್ತಾರವಾದ ಮರದ ಕೆತ್ತನೆಗಳನ್ನು ಹೊಂದಿರುತ್ತವೆ.
ಪರಿವಿಡಿ |
[ಬದಲಾಯಿಸಿ] ಹೆಸರಿನ ಮೂಲ
ಸ್ಥಳೀಯ ಹಿಂದೂ ದೇವತೆಯಾದ ಮಂಗಳಾದೇವಿಯಿಂದ ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ. ಮತ್ಸ್ಯೇಂದ್ರನಾಥನೆಂಬ ನಾಥ್ ಪಂಥದ ಮುಖ್ಯಪುರುಷ, ಪ್ರೇಮಲಾದೇವಿ ಎಂಬ ಕೇರಳದ ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು "ಮಂಗಳಾದೇವಿ" ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ ಅನಾರೋಗ್ಯದಿಂದ ಮಂಗಳಾದೇವಿಯು ನಿಧನ ಹೊಂದಿದ್ದರಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವಳ ಹೆಸರಿನಲ್ಲಿ ಬೋಳಾರದಲ್ಲಿ ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು. ಅದು ನಂತರ ಕ್ರಿ.ಶ. ೯೬೮ರಲ್ಲಿ ಅಲೂಪ ದೊರೆ ಕುಂದವರ್ಮನಿಂದ ಜೀರ್ಣೋದ್ಧಾರಕ್ಕೆ ಒಳಪಟ್ಟಿತು.
ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ ಒಂದನ್ನು ಪಾಂಡ್ಯ ರಾಜ ಚೆಟ್ಟಿಯನ್ ನೀಡಿದ್ದಾನೆ. ಅವನು ಕ್ರಿ.ಶ. ೭೧೫ರಲ್ಲಿ ಇದನ್ನು ಮಂಗಲಾಪುರಂ ಎಂದು ಕರೆದಿದ್ದ. ೧೧ನೇ ಶತಮಾನದ ಅರಬ್ಬಿ ಪ್ರಯಾಣಿಕ ಇಬ್ನ್ ಬತೂತ ಮಂಗಳೂರನ್ನು ಮಂಜರೂರ್ ಎಂದು ಉಲ್ಲೇಖಿಸಿದ್ದಾನೆ.[೬] ಕ್ರಿ.ಶ. ೧೫೨೬ರಲ್ಲಿ ಪೋರ್ಚುಗೀಸರು ಮಂಗಳೂರನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ ಮ್ಯಾಂಗಲೋರ್ (ಇದು ಮಂಗಳೂರು ಎಂಬುದರ ಅಪಭ್ರಂಷ) ಎಂಬ ಹೆಸರು ಅಧಿಕೃತವಾಯಿತು. ನಂತರ ೧೭೯೯ರಲ್ಲಿ ಇದು ಬ್ರಿಟಿಷರ ಕೈವಶವಾದಾಗ ಈ ಪೋರ್ಚುಗೀಸ್ ಹೆಸರು ಆಂಗ್ಲ ಭಾಷೆಯಲ್ಲಿ ಮಿಳಿತಗೊಂಡಿತು.
ಮಂಗಳೂರು ನಗರದಲ್ಲಿ ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ ಮೂಲನಿವಾಸಿಗಳಾದ ತುಳುವರು ಮಾತನಾಡುವ ತುಳು ಭಾಷೆಯಲ್ಲಿ ಮಂಗಳೂರಿಗೆ ಕುಡ್ಲ ಎಂಬ ಹೆಸರಿದೆ. ಕುಡ್ಲ ಎಂದರೆ ಸಂಗಮ ಎಂದರ್ಥ. ನೇತ್ರಾವತಿ ಮತ್ತು ಫಾಲ್ಗುಣಿ ನದಿಗಳು ಇಲ್ಲಿ ಸಂಗಮಿಸುವುದರಿಂದ ಸ್ಥಳೀಯ ತುಳುವರ ಇದನ್ನು ಕುಡ್ಲ ಎಂದು ಕರೆಯುತ್ತಾರೆ. ಕೊಂಕಣಿಯನ್ನಾಡುವ ಜನರು ಇದನ್ನು ಕೊಡಿಯಾಲ್ ಎನ್ನುತ್ತಾರೆ. ಸ್ಥಳೀಯ ಬ್ಯಾರಿ ಸಮುದಾಯದವರು ಬ್ಯಾರಿ ಭಾಷೆಯಲ್ಲಿ ಮಂಗಳೂರನ್ನು ಮೈಕಾಲ ಎಂದು ಕರೆಯುತ್ತಾರೆ. ಮೈಕಾಲ ಎಂದರೆ ಇದ್ದಿಲು ಎಂದರ್ಥ. ಹಿಂದಿನ ಕಾಲದಲ್ಲಿ ನೇತ್ರಾವತಿ ನದಿಯ ದಡದಲ್ಲಿ ಮರದಿಂದ ಇದ್ದಿಲು ತಯಾರಿಸುವ ರೂಢಿಯಿದ್ದುದರಿಂದ ನಗರಕ್ಕೆ ಈ ಹೆಸರು ಬಂದಿದೆ ಎಂಬುದು ನಂಬಿಕೆ. ಪಕ್ಕದ ಕೇರಳೀಯರು ಮಂಗಳೂರನ್ನು ಮಂಗಲಾಪುರಂ ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ಮಂಗಳೂರನ್ನು ಮ್ಯಾಂಗಲೋರ್ ಎಂದು ಉಚ್ಚರಿಸುತ್ತಾರೆ.ಹವ್ಯಕ ಭಾಷೆಯಲ್ಲಿ ಮಂಗಳೂರನ್ನು ಕೊಡೆಗಾಲ ಎಂದು ಕರೆಯುವುದು ರೂಡಿಯಲ್ಲಿದೆ.
[ಬದಲಾಯಿಸಿ] ಇತಿಹಾಸ
ಹಿಂದೂ ಪುರಾಣಗಳ ಅನುಸಾರ ಈಗಿನ ಮಂಗಳೂರು ಪ್ರದೇಶವು ಪರಶುರಾಮ ಸೃಷ್ಟಿಯ ಒಂದು ಭಾಗವಾಗಿತ್ತು. ಮಹರ್ಷಿ ಶ್ರೀ ಪರಶುರಾಮನು ಸಮುದ್ರದಿಂದ ಹಿಂದಕ್ಕೆ ಪಡೆದುಕೊಂಡ ಕರಾವಳಿ ಪ್ರದೇಶವೇ ಈ ಪರಶುರಾಮ ಸೃಷ್ಟಿ. ನಂತರ ಪರಶುರಾಮನು ಭಾನು ವಿಕ್ರಮನೆಂಬ ರಾಜನನ್ನು ಇಲ್ಲಿಯ ಪಟ್ಟಕ್ಕೇರಿಸಿದನು. ಭಾನುವು ತನ್ನ ಸಹೋದರರಲ್ಲಿ ಒಬ್ಬನಾದ ಉದಯವರ್ಮನಿಗೆ, ದಕ್ಷಿಣದಲ್ಲಿ ಪಯಸ್ವಿನಿ ನದಿ ಹಾಗೂ ಉತ್ತರದಲ್ಲಿ ಗೋಕರ್ಣಗಳ ಮಧ್ಯದಲ್ಲಿರುವ ಈ ಪ್ರದೇಶದ ರಾಜ್ಯಭಾರವನ್ನು ಒಪ್ಪಿಸಿದನು. ಇತರ ಪುರಾಣಗಳ ಅನುಸಾರ, ರಾಮಾಯಣದ ಸಮಯದಲ್ಲಿ ಶ್ರೀ ರಾಮನು ತುಳುನಾಡಿನ ರಾಜನಾಗಿದ್ದನು. ಮಹಾಭಾರತದ ಕಾಲದಲ್ಲಿ ಪಾಂಡವರಲ್ಲಿ ಕಿರಿಯವನಾದ ಸಹದೇವನು ಇಲ್ಲಿಯ ರಾಜ್ಯಪಾಲನಾಗಿದ್ದನು. ಅಜ್ಞಾತ ವಾಸದ ಸಮಯದಲ್ಲಿ ಬನವಾಸಿಯಲ್ಲಿ ವಾಸವಾಗಿದ್ದ ಪಾಂಡವರು, ಮಂಗಳೂರಿನ ಸಮೀಪದ ಸರಪಾಡಿಗೆ ಭೇಟಿಕೊಟ್ಟಿದ್ದರು. ಪಾರ್ಥಸಾರಥಿ ಅರ್ಜುನನು ಗೋಕರ್ಣದಿಂದ ಕಾಸರಗೋಡು ಸಮೀಪದ ಅಡೂರಿಗೆ ಪ್ರಯಾಣಿಸಿದ್ದಾಗ ಈ ಸ್ಥಳವನ್ನು ಸಂದರ್ಶಿಸಿ ಹಾದುಹೋಗಿದ್ದ ಎಂಬುದು ನಂಬಿಕೆ. ಮಹರ್ಷಿಗಳಾದ ಕಣ್ವ, ವ್ಯಾಸ, ವಶಿಷ್ಠ, ವಿಶ್ವಾಮಿತ್ರರು ಇಲ್ಲಿ ಜಪದಲ್ಲಿ ತೊಡಗಿ ತಮ್ಮ ದಿನಗಳನ್ನು ಕಳೆದಿದ್ದರು.
ಈ ನಗರದ ಬಗ್ಗೆ ಹಲವು ಚಾರಿತ್ರಿಕ ಉಲ್ಲೇಖಗಳು ದೊರೆತಿವೆ. ಗ್ರೀಕ್ ಸಂತ ಕೋಸ್ಮಸ್ ಇಂಡಿಕೊಪ್ಲೆಸ್ಟಸ್ ಮಂಗಳೂರು ಬಂದರನ್ನು ಮ್ಯಾಂಗರೌತ್ ಬಂದರು ಎಂದು ಉಲ್ಲೇಖಿಸಿದ್ದಾನೆ. ಪ್ಲೈನಿ ಎಂಬ ರೋಮನ್ ಇತಿಹಾಸಜ್ಞ ನಿತ್ರಿಯಾಸ್ ಎಂಬ ಸ್ಥಳದ ಬಗ್ಗೆ ಉಲ್ಲೇಖಿಸಿದ್ದರೆ ಗ್ರೀಕ್ ಇತಿಹಾಸಕಾರ ಟಾಲೆಮಿಯು ನಿತ್ರೆ ಎಂಬ ಸ್ಥಳದ ಉಲ್ಲೇಖವನ್ನು ಮಾಡಿದ್ದಾನೆ. ಈ ಎರಡೂ ಉಲ್ಲೇಖಗಳು ಬಹುಶಃ ಮಂಗಳೂರಿನ ಮೂಲಕ ಹರಿಯುತ್ತಿರುವ ನೇತ್ರಾವತಿ ನದಿಯ ಬಗ್ಗೆ ಆಗಿರಬಹುದು. ಟಾಲೆಮಿಯು ತನ್ನ ರಚನೆಗಳಲ್ಲಿ ಮಂಗಳೂರನ್ನು ಮಗನೂರ್ ಎಂದೂ ಉಲ್ಲೇಖಿಸಿದ್ದಾನೆ.[೭] ರೋಮನ್ ಲೇಖಕ ಏರಿಯನ್ ಮಂಗಳೂರನ್ನು ಮ್ಯಾಂಡಗೊರಾ ಎಂದು ಕರೆದಿದ್ದಾನೆ. ೭ನೇ ಶತಮಾನದ ಒಂದು ತಾಮ್ರ ಶಾಸನವು ಮಂಗಳೂರನ್ನು ಮಂಗಳಾಪುರ ಎಂದು ಉಲ್ಲೇಖಿಸಿದೆ.
ಕ್ರಿ. ಶ. ೨೦೦ರಿಂದ ೬೦೦ರವರೆಗೆ ಕದಂಬರು ಈ ಪ್ರದೇಶವನ್ನು ಆಳಿದ್ದರು. ೧೪ನೇ ಶತಮಾನದವರೆಗೆ ಮಂಗಳೂರು ಅಲೂಪ ರಾಜವಂಶದ ರಾಜಧಾನಿಯಾಗಿತ್ತು. ಅಲೂಪ ರಾಜ ಕವಿ ಅಲೂಪೇಂದ್ರನ (ಕ್ರಿ.ಶ. ೧೧೧೦ - ಕ್ರಿ.ಶ. ೧೧೬೦) ಸಮಯದಲ್ಲಿ ಆಡೆನ್ನ ವ್ಯಾಪಾರಿ ಬೆನ್ ಯಿಜು ಮಂಗಳೂರಿಗ ಬಂದಿದ್ದ. ೧೪ನೇ ಶತಮಾನದಲ್ಲಿ, ಈ ನಗರವು ಪರ್ಷಿಯಾ ಕೊಲ್ಲಿ ವ್ಯಾಪಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. ಮೊರಾಕ್ಕೊದ ಪ್ರಯಾಣಿಕ ಇಬ್ನ್ ಬತ್ತುತ, ೧೩೪೨ರಲ್ಲಿ ಮಂಗಳೂರಿಗೆ ಬಂದಿದ್ದಾಗ, ಒಂದು ವಿಶಾಲವಾದ ಅಳಿವೆಯ ಮೇಲಿರುವ ನಗರಕ್ಕೆ ತಲುಪಿರುದಾಗಿಯೂ, ಆ ನಗರದ ಹೆಸರು ಮಂಜುರನ್' ಅಥವಾ ಮಡ್ಜೌರ್ ಆಗಿರಬಹುದು ಎಂದು ವಿವರಿಸಿದ್ದಾನೆ. ಅವನು ಆ ನಗರವು ವ್ಯಾಪಾರ ಕೇಂದ್ರವಾಗಿತ್ತು ಮತ್ತು ಪರ್ಷಿಯಾ ಹಾಗೂ ಯೆಮೆನ್ನ ವ್ಯಾಪಾರಿಗಳು ಹಡಗಿನಲ್ಲಿ ಇಲ್ಲಿ ಬಂದು ವ್ಯಾಪಾರವನ್ನು ನಡೆಸುತಿದ್ದರು ಎಂದು ಪ್ರಸ್ತಾಪಿಸಿದ್ದಾನೆ. ೧೪೪೮ರಲ್ಲಿ ಅಬ್ದುಲ್ ರಝಾಕ್ ಎಂಬ ಪರ್ಷಿಯಾದ ರಾಯಭಾರಿ ವಿಜಯನಗರಕ್ಕೆ ಪ್ರಯಾಣಿಸುತ್ತಿದ್ದಾಗ ಇಲ್ಲಿಂದ ಹಾದುಹೋಗಿದ್ದ. ಅವನು ಇಲ್ಲಿ ಒಂದು ಅದ್ಭುತ ದೇವಾಲಯವನ್ನು ನೋಡಿರುವುದಾಗಿ ಹೇಳಿದ್ದಾನೆ. ಮೂಡಬಿದಿರೆಯಲ್ಲಿರುವ ಶಾಸನಗಳು , ವಿಜಯನಗರ ರಾಜವಂಶದ ಎರಡನೆಯ ವೀರ ಹರಿಹರರಾಯನ ಕಾಲದಲ್ಲಿ, ರಾಜ ಮಂಗರಸ ಒಡೆಯ ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದ ಎಂದು ವಿವರಿಸುತ್ತವೆ. ಇನ್ನೊಂದು ಶಾಸನವು ವಿಜಯನಗರದ ರಾಜ ಎರಡನೆಯ ವೀರ ದೇವರಾಯನ ಸಮಯದಲ್ಲಿ, ೧೪೨೯ರಲ್ಲಿ ದೀವ ರಾಜ ಒಡೆಯ ಮಂಗಳೂರು ರಾಜ್ಯವನ್ನು ಆಳಿದ್ದನು ಎಂದು ಉಲ್ಲೇಖಿಸುತ್ತದೆ. ಹಲವು ಬಲಶಾಲಿ ಸಾಮ್ರಾಜ್ಯಗಳು ಮಂಗಳೂರಿನ ಸ್ವಾಧೀನಕ್ಕಾಗಿ ಹೋರಾಟವನ್ನು ನಡೆಸಿವೆ. ಪೋರ್ಚುಗೀಸರ ಆಗಮನಕ್ಕಿಂತ ಮೊದಲು ಮಂಗಳೂರನ್ನು ಆಳಿದ ರಾಜವಂಶಗಳಲ್ಲಿ ಪಶ್ಚಿಮ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಹೊಯ್ಸಳರು ಪ್ರಮುಖರು.
ಮಂಗಳೂರಿನ ಮೇಲೆ ಯುರೋಪಿಯನ್ ಪ್ರಭಾವವನ್ನು ೧೪೯೮ರಿಂದ ಗುರುತಿಸಬಹುದು. ಆ ಸಮಯದಲ್ಲೇ ಪೋರ್ಚಿಗೀಸ್ ನಾವಿಕ ವಾಸ್ಕೋ ಡ ಗಾಮನು ಮಂಗಳೂರಿನ ಸಮೀಪದ ಸೈಂಟ್. ಮೇರಿಸ್ ದ್ವೀಪಗಳಲ್ಲಿ ಬಂದಿಳಿದ್ದಿದ್ದ.[೮] ೧೫೨೦ರಲ್ಲಿ ಪೋರ್ಚುಗೀಸರು ಇದನ್ನು ವಿಜಯನಗರದ ಅರಸರಿಂದ ವಶಪಡಿಸಿಕೊಂಡರು. ೧೫೨೬ ರಲ್ಲಿ ಪೋರ್ಚುಗೀಸ್ ವೈಸರಾಯ್ ಲೋಪೊ ಡೆ ಸಾಂಪಯೋ ಬಂಗಾರ ರಾಜ ಮತ್ತು ಅವನ ಮೈತ್ರಿ ಪಡೆಯನ್ನು ಸೋಲಿಸುವಲ್ಲಿ ಸಫಲನಾದನು. ಇದರಿಂದಾಗಿ ಇಲ್ಲಿನ ವ್ಯಾಪರ ವಹಿವಾಟು ಮುಸ್ಲಿಮರ ಕೈ ತಪ್ಪಿ ಪೋರ್ಚುಗೀಸರ ಕೈವಶವಾಯಿತು. ೧೬ ಮತ್ತು ೧೭ನೇ ಶತಮಾನಗಳಲ್ಲಿ ಪೋರ್ಚುಗೀಸರು ಮಂಗಳೂರು ಬಂದರಿನ ಮೂಲಕ ಅರಬ್ಬೀ ಸಮುದ್ರದ ಅಧಿಪತ್ಯವನ್ನು ಮುಂದುವರೆಸಿದರು. ೧೬ನೇ ಶತಮಾನದಲ್ಲಿ ಮಂಗಳೂರು ಗೋವಾದಿಂದ ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರೋಮನ್ ಕಾಥೊಲಿಕರ ಅಗಾಧವಾದ ಜನಪ್ರವಾಹವನ್ನು ಕಂಡಿತು.[೯] ೧೬೯೫ರಲ್ಲಿ ಅರಬ್ ವ್ಯಾಪಾರದ ಮೇಲೆ ಪೋರ್ಚುಗೀಸರ ನಿರ್ಬಂಧದಿಂದಾಗಿ, ಇದು ಅರಬರಿಂದ ದಹಿಸಲ್ಪಟ್ಟಿತು. ೧೭ನೇ ಶತಮಾನದ ಮಧ್ಯದಲ್ಲಿ ಇಕ್ಕೇರಿ ಮನೆತನದ ವೆಂಕಟಪ್ಪ ನಾಯಕನು ಪೋರ್ಚುಗೀಸರನ್ನು ಸೋಲಿಸಿದನು. ಇವರ ಆಳ್ವಿಕೆಯು ೧೭೬೨ರವರೆಗೆ ಮುಂದುವರೆಯಿತು.[೧೦]
೧೭೬೩ರಲ್ಲಿ ಹೈದರಾಲಿಯು ಮಂಗಳೂರನ್ನು ಜಯಿಸಿದನು. ೧೭೬೮ ಮತ್ತು ೧೭೯೪ರ ಮಧ್ಯ ಬ್ರಿಟಿಷರು ಇದನ್ನು ಕೈವಶ ಪಡಿಸಿಕೊಳ್ಳುವವರೆಗೆ ನಗರವು ಅವನ ಅಧೀನದಲ್ಲಿತ್ತು. ನಂತರ ೧೭೯೪ರಲ್ಲಿ ಹೈದರಾಲಿಯ ಮಗ ಟಿಪ್ಪು ಸುಲ್ತಾನನು ಇನ್ನೊಮ್ಮೆ ಇದನ್ನು ತನ್ನ ಹತೋಟಿಗೆ ತೆಗೆದುಕೊಂಡನು. ಇವನ ಆಳ್ವಿಕೆಯ ಸಮಯದಲ್ಲಿ ನಗರವು ನಿರಂತರವಾಗಿ ಹಲವು ಆಂಗ್ಲೊ-ಮೈಸೂರು ಯುದ್ಧಗಳಿಗೆ ಸಾಕ್ಷಿಯಾಗಿ ನಿಂತಿತು. ಎರಡನೇ ಆಂಗ್ಲೊ-ಮೈಸೂರು ಯುದ್ಧವು ೧೧ ಮಾರ್ಚ್ ೧೭೮೪ರಲ್ಲಿ ಟಿಪ್ಪು ಸುಲ್ತಾನ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಮಧ್ಯದ ಮಂಗಳೂರು ಒಪ್ಪಂದದೊಂದಿಗೆ ಕೊನೆಗೊಂಡಿತು.[೧೧]
೧೭೯೧ರಲ್ಲಿ ಬ್ರಿಟಿಷರು ಇದನ್ನು ಇನ್ನೊಮ್ಮೆ ವಶಪಡಿಸಿಕೊಂಡರು. ಆದರೆ ೧೭೯೩ರಲ್ಲಿ ಟಿಪ್ಪು ಇದರ ಮೇಲೆ ಮುತ್ತುಗೆ ಹಾಕಿದನು. ಇದರಿಂದಾಗಿ ೧೭೯೪ರಲ್ಲಿ ಬ್ರಿಟಿಷರು ನಗರವನ್ನು ಟಿಪ್ಪುವಿಗೆ ಬಿಟ್ಟು ಕೊಟ್ಟರು. ೧೭೯೯ರಲ್ಲಿ ನಾಲಕ್ಕನೇ ಆಂಗ್ಲೊ-ಮೈಸೂರು ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನನ ಮರಣಾನಂತರ ಮತ್ತು ಶ್ರೀರಂಗಪಟ್ಟಣದ ಪತನದ ನಂತರ, ನಗರವು ಶಾಶ್ವತವಾಗಿ ಬ್ರಿಟಿಷರ ಕೈವಶವಾಯಿತು. ನಂತರ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ತನಕ ಇದು ಬ್ರಿಟಿಷರ ಅಧೀನದಲ್ಲಿಯೇ ಇದ್ದಿತು.
ಬ್ರಿಟಿಷ್ ಅಧಿಪತ್ಯದ ಸಮಯದಲ್ಲಿ ನಗರವು ಶಾಂತಿಯುತವಾದ ಆಡಳಿತವನ್ನು ಕಂಡಿತು. ಈ ಸಮಯದಲ್ಲೇ ಶಾಶ್ವತವಾದ ದೃಶ್ಯಮಾನ ಅಭಿವೃದ್ಧಿಗೆ ಮಂಗಳೂರು ಸಾಕ್ಷಿಯಾಯಿತು. ಕ್ರಮೇಣ ಇದು ಶಿಕ್ಷಣ ಮತ್ತು ಉದ್ಯಮದಲ್ಲಿ ಪ್ರವರ್ಧಮಾನವಾಗಿ ಬೆಳೆದು, ಆಮದು ಮತ್ತು ರಫ್ತಿನ ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿತು. ೧೮೩೪ರಲ್ಲಿ ಜರ್ಮನ್ ಬೇಸಲ್ ಮಿಶನ್ನಿನ ಆರಂಭವು ಹತ್ತಿ ನೇಯ್ಗೆ ಮತ್ತು ಹಂಚು ತಯಾರಿಕಾ ಉದ್ಯಮಗಳನ್ನು ನಗರಕ್ಕೆ ತಂದುಕೊಟ್ಟಿತು.[೧೨] ೧೯೦೭ ರಲ್ಲಿ ಮಂಗಳೂರನ್ನು ದಕ್ಷಿಣ ರೈಲ್ವೆಯ ಜೊತೆ ಜೋಡಿಸಿದುದು ಮತ್ತು ನಂತರ ಮೋಟಾರ್ ವಾಹನಗಳ ಆಗಮನವು ನಗರದೊಂದಿಗೆ ವ್ಯಾಪಾರ ಮತ್ತು ಸಂಪರ್ಕವನ್ನು ಇನ್ನೂ ಹೆಚ್ಚಿಸಿತು.[೧೩] ರೋಮನ್ ಕಥೊಲಿಕ್ ಮಿಶನ್ ಗಳು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ತುಂಬಾ ಪ್ರಮುಖವಾದ ಕೆಲಸಗಳನ್ನು ಮಾಡಿದ್ದವು. ೧೮೬೫ರ ಮದ್ರಾಸ್ ನಗರ ಅಭಿವೃದ್ಧಿ ನಿಯಮದ ಅನುಸಾರ ಮಂಗಳೂರು ನಗರಸಭೆ ಆಡಳಿತದ ಅಧೀನದಲ್ಲಿ ಬರುತ್ತದೆ. ಇದರಿಂದಾಗಿ ೨೨ ಮೇ, ೧೮೬೬ರಲ್ಲಿ ನಗರವು ನಗರಸಭೆಯಾಗಿ ಪ್ರತಿಷ್ಟಾಪನೆಗೊಂಡಿತು.
೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಮಂಗಳೂರನ್ನು ೧೯೫೬ದಲ್ಲಿ ಮೈಸೂರು ರಾಜ್ಯದೊಳಗೆ ವಿಲೀನಗೊಳಿಸಲಾಯಿತು. ಮೈಸೂರು ರಾಜ್ಯಕ್ಕೆ ಬಂದರಿನ ಸೌಲಭ್ಯವನ್ನು ಒದಗಿಸುತ್ತಿದ್ದ ಮಂಗಳೂರು, ರಾಜ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆಯಿತು. ೨೦ನೇ ಶತಮಾನದ ಅಂತ್ಯವು ಮಂಗಳೂರು ಉದ್ಯಮ ಮತ್ತು ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುವುದಕ್ಕೆ ಸಾಕ್ಷಿಯಾಯಿತು. ಸತತ ಔದ್ಯೋಗಿಕರಣದ ನಂತರವೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ತೆಂಗಿನ ಮರಗಳ ಜೊತೆಗೆ ಮೇಲೆದ್ದಿರುವ ಕೆಂಪು ಹಂಚಿನ ಕಟ್ಟಡಗಳು, ಸಮುದ್ರ ತೀರದಲ್ಲಿ ಸಾಲಾಗಿ ನಿಲ್ಲಿಸಿರುವ ಮೀನುಗಾರಿಕಾ ದೋಣಿಗಳು ಇವುಗಳಲ್ಲಿ ಕೆಲವು.
[ಬದಲಾಯಿಸಿ] ಭೂಗೋಳ ಮತ್ತು ಹವಾಮಾನ
ಮಂಗಳೂರು ಅಕ್ಷಾಂಶ, ರೇಖಾಂಶವನ್ನು ಹೊಂದಿದ್ದು, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ ೯೯ ಮೀಟರುಗಳಷ್ಟು(೩೨೫ ಅಂಗುಲಗಳು) ಎತ್ತರದಲ್ಲಿದೆ.[೧೪] ಇದು ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಕಾರ್ಯಾಲಯವಾಗಿದ್ದು, ಕರ್ನಾಟಕದ ಅತಿ ದೊಡ್ಡ ಕರಾವಳಿ ನಗರ ಕೇಂದ್ರ ಹಾಗೂ ರಾಜ್ಯದ ೪ನೇ ಅತಿ ದೊಡ್ಡ ನಗರವಾಗಿದೆ.ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ. ಮಂಗಳೂರು ನಗರವು ೧೧೧.೧೮ ಚದರ ಕಿ. ಮೀ. ವಿಸ್ತೀರ್ಣವನ್ನು ಹೊಂದಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಪ್ರದೇಶದ ಒಟ್ಟು ವಿಸ್ತೀರ್ಣ ೧೩೨.೪೫ ಚದರ ಕಿ. ಮೀ.ಆಗಿದೆ. ಇಲ್ಲಿ ದಿನದಲ್ಲಿ ಮಿತವಾದ ಗಾಳಿಯ ಜೊತೆಗೆ ಕೆಲವೊಮ್ಮೆ ಹೊಯ್ಗಾಳಿಯು ಬೀಸಿದರೆ ರಾತ್ರಿಯಲ್ಲಿ ಶಾಂತವಾದ ಗಾಳಿಯು ಬೀಸುತ್ತದೆ. ಇಲ್ಲಿರುವ ಪರ್ವತ ಪ್ರದೇಶಗಳು ಹಾಗೂ ಪ್ರಾಕೃತಿಕ ಕಣಿವೆಗಳೊಂದಿಗೆ ನರರದ ನಕ್ಷೆಯು ಬಯಲು ಪ್ರದೇಶಗಳ ಜೊತೆಗೆ ಉಬ್ಬುತಗ್ಗು ಪ್ರದೇಶಗಳನ್ನೂ ಹೊಂದಿದೆ. ಈ ನಗರದ ಭೂವಿಜ್ಞಾನವು, ಪರ್ವತ ಪ್ರದೇಶಗಳಲ್ಲಿ ಗಟ್ಟಿಯಾದ ಲ್ಯಾಟರೈಟ್ ನಿಂದಲೂ, ಕಡಲತೀರದಲ್ಲಿ ಮರಳು ಮಿಶ್ರಿತ ಮಣ್ಣಿನಿಂದಲೂ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಭಾರತ ಸರಕಾರವು ಮಂಗಳೂರನ್ನು 'ಸಾಧಾರಣವಾದ ಭೂಕಂಪಪ್ರವಣ ನಗರ ಕೇಂದ್ರ' ಎಂದು ಗುರುತಿಸಿದೆ ಮತ್ತು ನಗರವನ್ನು ಸಿಸ್ಮಿಕ್ ೩ನೇ ವಲಯದಲ್ಲಿ ವರ್ಗೀಕರಿಸಿದೆ.[೧೫][೧೬]
ಮಂಗಳೂರು ನಗರವು ನೇತ್ರಾವತಿ ಮತ್ತು ಗುರುಪುರ ನದಿಗಳಿಂದುಂಟಾದ ಹಿನ್ನೀರಿನ ಮೇಲೆ ನೆಲೆಸಿದೆ. ಈ ನದಿಗಳು ಉತ್ತರದಲ್ಲಿ ಹಾಗೂ ದಕ್ಷಿಣದಲ್ಲಿ ಹರಿಯುವುದರ ಮೂಲಕ ಈ ನಗರವನ್ನು ಸುತ್ತುವರಿಯುತ್ತವೆ. ಎರಡೂ ನದಿಗಳು ನಗರದ ದಕ್ಷಿಣದಲ್ಲಿ ಅಳಿವೆಯನ್ನು ಸೃಷ್ಟಿಸಿ ಅರಬ್ಬೀ ಸಮುದ್ರವನ್ನು ಸೇರುತ್ತವೆ. ನಗರದ ಕರಾವಳಿ ತೀರದುದ್ದಕ್ಕೂ ಹಲವು ಕಡಲತೀರ/ಬೀಚ್ ಗಳಿವೆ. ಇವುಗಳಲ್ಲಿ ಪ್ರಮುಖವಾದುವು ಮುಕ್ಕ, ಪಣಂಬೂರು, ತಣ್ಣೀರುಬಾವಿ, ಕೆ.ಆರ್.ಇ.ಸಿ., ಸೋಮೇಶ್ವರ ಹಾಗೂ ಸಮ್ಮರ್ ಸ್ಯಾಂಡ್ ಬೀಚ್ ಗಳು. ಇಲ್ಲಿನ ವೃಕ್ಷಸಮೂಹವು ಪ್ರಮುಖವಾಗಿ ತೆಂಗಿನ ಮರಗಳು, ತಾಳೆ ಜಾತಿಯ ಮರಗಳು, ಅಶೋಕ ವೃಕ್ಷಗಳ ಜೊತೆಗೆ ಇತರ ಕೆಲವು ಮರಗಳನ್ನು ಹೊಂದಿದೆ. ಭಾರತದ ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರು ಇನ್ನೂ ತನ್ನ ಹಸಿರು ಹೊದಿಕೆಯನ್ನು ಉಳಿಸಿಕೊಂಡು ಬಂದಿದೆ.
ಮಂಗಳೂರು ಉಷ್ಣವಲಯದ ವಾಯುಗುಣವನ್ನು ಹೊಂದಿದೆ. ನಗರದಲ್ಲಿ ಬೇಸಿಗೆಕಾಲ ಮತ್ತು ಚಳಿಗಾಲಗಳು ಸಮಾನವಾಗಿದ್ದು, ಎರಡೂ ಋತುಗಳಲ್ಲೂ ತಾಪಮಾನವು ಸರಾಸರಿ ೨೭°C ನಿಂದ ೩೪°Cವರೆಗೆ ಇರುತ್ತದೆ. ತೇವಾಂಶವು ಸರಾಸರಿ ೭೮% ತಲುಪುತ್ತದೆ. ಪರ್-ಹ್ಯೂಮಿಡ್(ಎ)[Per-Humid(A)] ವಲಯಕ್ಕೆ ಸೇರುವ ಈ ನಗರವು ಅರಬ್ಬೀ ಸಮುದ್ರ ಶಾಖೆಯ ನೈರುತ್ಯ ಮಾನ್ಸೂನಿನ ನೇರ ಪ್ರಭಾವಕ್ಕೆ ಒಳಪಡುತ್ತದೆ. ಮೇಯಿಂದ ಆಕ್ಟೋಬರ್ ವರೆಗಿನ ೬ ತಿಂಗಳ ಸಮಯದಲ್ಲಿ ಒಟ್ಟು ವಾರ್ಷಿಕ ಮಳೆಯ ೯೦ ಪ್ರತಿಶತ ಮಳೆಯನ್ನು ಇದು ಪಡೆಯುತ್ತದೆ. ಇತರ ಸಮಯದಲ್ಲಿ ಒಣಹವೆಯಿರುತ್ತದೆ.
ಡಿಸೆಂಬರ್ ನಿಂದ ಫೆಬ್ರವರಿವರೆಗಿನ ಸಮಯದಲ್ಲಿ ಇಲ್ಲಿ ತಾಪಮಾನ ಹಾಗೂ ತೇವಾಂಶಗಳೆರಡೂ ಇತರ ತಿಂಗಳುಗಳಿಂತ ಗಣಣೀಯವಾಗಿ ಕಡಿಮೆಯಿರುತ್ತದೆ. ಆದ್ದರಿಂದ ಈ ಸಮಯವು ಮಂಗಳೂರನ್ನು ಭೇಟಿಕೊಡಲು ಅತಿ ಸೂಕ್ತ. ದಿನದಲ್ಲಿ ತಾಪಮಾನವು ೩೦°C ಗಿಂತ ಕಡಿಮೆಯಿದ್ದರೆ, ರಾತ್ರಿಯಲ್ಲಿ ೨೦°C ಗಿಂತ ಕಡಿಮೆಯಿರುತ್ತದೆ. ಈ ಋತುವಿನ ನಂತರ ಕಾಲಿಡುವುದೇ ಬೇಸಿಗೆಕಾಲ. ಈ ಸಮಯದಲ್ಲಿ ತಾಪಮಾನವು ೩೮°C ಗಳ ತನಕ ಏರುತ್ತದೆ. ಇದರ ನಂತರ ಮಳೆಗಾಲವು ಆರಂಭವಾಗುತ್ತದೆ. ಭಾರತದ ಇತರ ನಗರ ಕೇಂದ್ರಗಳಿಗೆ ಹೋಲಿಸಿದರೆ ಮಂಗಳೂರು ಭಾರಿ ಮಳೆಯನ್ನು ಪಡೆಯುತ್ತದೆ.[೧೭] ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಸಮಯಾವಧಿಯಲ್ಲಿ ನಗರವು ೪೦೦೦ ಮಿಲಿ ಮೀಟರ್ ಗಳಷ್ಟು ವರ್ಷಧಾರೆಯನ್ನು ಪಡೆಯುತ್ತದೆ.
[ಬದಲಾಯಿಸಿ] ಅರ್ಥ ವ್ಯವಸ್ಥೆ
ಮಂಗಳೂರಿನ ಅರ್ಥ ವ್ಯವಸ್ಥೆಯಲ್ಲಿ ವ್ಯಾವಸಾಯಿಕ ಸಂಸ್ಕರಣೆ ಹಾಗೂ ಬಂದರು ಸಂಬಂಧಿತ ಚಟುವಟಿಕೆಗಳು ಪ್ರಮುಖ ಸ್ಥಾನಗಳನ್ನು ಪಡೆದಿವೆ[೧೮]. ನವ ಮಂಗಳೂರು ಬಂದರು ಭಾರತದ ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ. ಇದು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ. ಮಂಗಳೂರು ಹಂಚುಗಳು ಭಾರತದಾದ್ಯಂತ ಪ್ರಸಿದ್ಧವಾಗಿದ್ದು ಈಗಲೂ ನಗರದಲ್ಲಿ ತುಂಬಾ ಬಳಕೆಯಲ್ಲಿದೆ. ಮಂಗಳೂರು, ವಾಹನಗಳ 'ಲೀಫ್ ಸ್ಪ್ರಿಂಗ್' ಉದ್ಯಮದ ತವರು. 'ದ ಕೆನರಾ ವರ್ಕ್ ಶೋಪ್ಸ್ ಲಿಮಿಟೆಡ್' ಮತ್ತು 'ಲ್ಯಾಮಿನ ಸಸ್ಪೆನ್ಶನ್ ಪ್ರೊಡಕ್ಟ್ಸ್ ಲಿಮಿಟೆಡ್' ಗಳು ಚಿರಪರಿಚಿತ ಲೀಫ್ ಸ್ಪ್ರಿಂಗ್ ಉದ್ಯಮಗಳು. ಬೈಕಂಪಾಡಿ ಮತ್ತು ಯೆಯ್ಯಾಡಿ ಕೈಗಾರಿಕಾ ವಲಯಗಳು ಹಲವು ಸಣ್ಣ ಕೈಗಾರಿಕೆಗಳಿಗೆ ಮನೆಯಾಗಿದೆ. ನಗರವು ಆಗ್ನೇಯ ಏಷ್ಯಾದಿಂದ ಮರಮುಟ್ಟುಗಳನ್ನು ಆಮದು ಮಾಡುತ್ತಿದ್ದು, ಇದನ್ನು ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ. ನಗರವು ದಕ್ಷಿಣ ಭಾರತಕ್ಕೆ ಮರಮುಟ್ಟುಗಳ ಪ್ರಮುಖ ಪ್ರವೇಶ ದ್ವಾರವೂ ಆಗಿದೆ. ಬೀಡಿ ತಯಾರಿಕೆ ಇಲ್ಲಿನ ಪ್ರಮುಖ ಗೃಹ ಕೈಗಾರಿಕೆ. 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್', 'ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್', 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್', 'ಬಿ.ಎ.ಎಸ್.ಎಫ್', 'ಇ.ಎಲ್.ಎಫ್ ಗ್ಯಾಸ್' ಇಲ್ಲಿನ ಪ್ರಮುಖ ಉದ್ದಿಮೆಗಳಲ್ಲಿ ಕೆಲವು. ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ ಇನ್ಫೋಸಿಸ್, ವಿಪ್ರೊ, 'ಎಂಫಾಸಿಸ್ ಬಿ.ಪಿ.ಒ' ಹಾಗೂ 'ಫರ್ಸ್ಟ್ ಅಮೇರಿಕನ್ ಕೋರ್ಪೋರೇಷನ್'ಗಳು ನಗರದಲ್ಲಿ ಕೆಲಸವನ್ನು ಆರಂಭಿಸಿವೆ.[೧೯]
ಮೂರು ಮೀಸಲು ಮಾಹಿತಿ ತಂತ್ರಜ್ಞಾನ ಪಾರ್ಕ್ ಗಳು ನಗರಕ್ಕೆ ಕಾಲಿಡುತ್ತಿದ್ದು, ಇವುಗಳಲ್ಲಿ ಎರಡು ಈಗಾಗಲೆ ನಿರ್ಮಾಣದ ಹಂತದಲ್ಲಿವೆ. ಗಂಜಿಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ 'ರಫ್ತು ಉತ್ತೇಜನ ಕೈಗಾರಿಕಾ ವಲಯ' ಮೊದಲನೆಯದಾದರೆ, ಎರಡನೆಯದು ಮಂಗಳೂರು ವಿಶ್ವವಿದ್ಯಾನಿಲಯದ ಸಮೀಪದಲ್ಲಿ ನಿರ್ಮಿತವಾಗುತ್ತಿರುವ 'ಮಾಹಿತಿ ತಂತ್ರಜ್ಞಾನ ವಿಷೇಶ ಆರ್ಥಿಕ ವಲಯ'.[೨೦] ಗಂಜಿಮಠದಲ್ಲಿ ಮೂರನೇ 'ಮಾಹಿತಿ ತಂತ್ರಜ್ಞಾನ ವಿಷೇಶ ಆರ್ಥಿಕ ವಲಯ'ದ ನಿರ್ಮಾಣವನ್ನು ಪ್ರಸ್ಥಾಪಿಸಲಾಗಿದೆ.[೨೧] ಬಿ.ಎ. ಗ್ರೂಪ್ ನವರಿಂದ ೨೦ ಲಕ್ಷ ಚದರ ಫೀಟ್ ಗಳ 'ಮಾಹಿತಿ ತಂತ್ರಜ್ಞಾನ ವಿಷೇಶ ಆರ್ಥಿಕ ವಲಯ'ವು ತುಂಬೆಯಲ್ಲಿ ನಿರ್ಮಾಣ ಹಂತದಲ್ಲಿದೆ.[೨೨] ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮವು (ಒ.ಎನ್.ಜಿ.ಸಿ) 'ಮಂಗಳೂರು ವಿಷೇಶ ಆರ್ಥಿಕ ವಲಯ'ದಲ್ಲಿ ೧೫ ಮಿಲಿಯನ್ ಟನ್ನಿನ ಹೊಸ ಸಂಸ್ಕರಣಾಗಾರ, ಪೆಟ್ರೋಕೆಮಿಕಲ್ ಸ್ಥಾವರ ಹಾಗೂ ಶಕ್ತಿ ಮತ್ತು ಎಲ್.ಎನ್.ಜಿ ಸ್ಥಾವರಗಳ ಮೇಲೆ ೩೫,೦೦೦ ಕೋಟಿ ರೂಪಾಯಿಗಳ ಬಂಡವಾಳ ಹೂಡುವ ಬಗ್ಗೆ ಯೋಜನೆ ರೂಪಿಸಿದೆ. ಇದು ದೇಶದ ಪ್ರಥಮ 'ಪೆಟ್ರೋಲಿಯಮ್, ಕೆಮಿಕಲ್ಸ್, ಪೆಟ್ರೋಕೆಮಿಕಲ್ಸ್ ಇನ್ವೆಸ್ಟ್ ಮೆಂಟ್ ರೀಜನ್'(PCPIR) ಆಗಲಿದೆ. ಇಂತಹ ಇತರ ಪಿ.ಸಿ.ಪಿ.ಐ.ಆರ್. ಗಳು ಪಶ್ಚಿಮ ಬಂಗಾಳದ ನಯಚಾರ್ ನಲ್ಲಿ, ಹರಿಯಾಣದ ಪಾಣಿಪತ್ ನಲ್ಲಿ ಹಾಗೂ ಆಂಧ್ರ ಪ್ರದೇಶದ ಅಚ್ಯುತಪುರಂನಲ್ಲಿವೆ. 'ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಮ್ ರಿಸರ್ವ್ಸ್ ಲಿಮಿಟೆಡ್' ಎಂಬ 'ಆಯಿಲ್ ಇಂಡಸ್ಟ್ರಿ ಡೆವಲಪ್ಮೆಂಟ್ ಬೋರ್ಡ್'ನ ವಿಷೇಶ ಘಟಕವು ಮಂಗಳೂರು ಹಾಗೂ ಭಾರತದ ಇತರ ಎರಡು ಸ್ಥಳಗಳಲ್ಲಿ 'ಕಚ್ಚಾತೈಲ ಸಂಗ್ರಹಣಾ ಸ್ಥಾವರ'ಗಳನ್ನು ನಿರ್ಮಿಸಲು ನಿಶ್ಚಯಿಸಿದೆ.[೨೩][೨೪] ಯೋಜಿತ, ವಾರ್ಷಿಕ ೫ ಮಿಲಿಯನ್ ಮೆಟ್ರಿಕ್ ಟನ್ನು(ಎಮ್.ಎಮ್.ಟಿ.ಪಿ.ಎ) ಸಂಗ್ರಹಣೆಯಲ್ಲಿ ೧.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನಲ್ಲಿಯೂ,[೨೫] ೧.೦ ಎಮ್.ಎಮ್.ಟಿ.ಪಿ.ಎ ವಿಶಾಖಪಟ್ಟಣದಲ್ಲಿಯೂ ಹಾಗೂ ೨.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನ ಸಮೀಪದ ಪಡೂರಿನಲ್ಲಿಯೂ ನಿರ್ವಹಿಸಲಾಗುತ್ತದೆ. 'ಇಂಡಿಯಾ ಟುಡೆ'ಯ ಅಂತರಾಷ್ಟ್ರೀಯ ಸಂಪುಟದ ಅನುಸಾರ ಮಂಗಳೂರು (ಕೊಚ್ಚಿಯ ನಂತರ) ದಕ್ಷಿಣ ಭಾರತದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಾನ್-ಮೆಟ್ರೊ(ಮೆಟ್ರೋವಲ್ಲದ) ನಗರವಾಗಿದೆ.
ಕಾರ್ಪೋರೇಷನ್ ಬ್ಯಾಂಕ್, [೨೬] ಕೆನರಾ ಬ್ಯಾಂಕ್, [೨೭] ಮತ್ತು ವಿಜಯ ಬ್ಯಾಂಕ್, [೨೮] ಗಳು ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಮಂಗಳೂರಿನಲ್ಲಿ ಪ್ರಾರಂಭಗೊಂಡ ಮೂರು ರಾಷ್ಟ್ರೀಕೃತ ಬ್ಯಾಂಕುಗಳು. ಮಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ ಕರ್ಣಾಟಕ ಬ್ಯಾಂಕ್ ಆ ಸಮಯದ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿತ್ತು.[೨೯] ಮಂಗಳೂರು ಕ್ಯಾಥೊಲಿಕ್ ಕೊ-ಓಪರೇಟಿವ್ ಬ್ಯಾಂಕ್ ಲಿಮಿಟೆಡ್, ಕ್ಯಾಥೊಲಿಕ್ ಬ್ಯಾಂಕ್ ಲಿಮಿಟೆಡ್ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕುಗಳು ಮಂಗಳೂರಿನಲ್ಲಿ ಸ್ಥಾಪನೆಗೊಂಡ ವರ್ಗೀಕೃತ ಬ್ಯಾಂಕುಗಳು.
ದೋಣಿ ನಿರ್ಮಾಣ ಹಾಗೂ ಮೀನುಗಾರಿಕೆ ಉದ್ಯಮಗಳು ಪೀಳಿಗೆಗಳಿಂದ ಮಂಗಳೂರಿನ ಪ್ರಮುಖ ಉದ್ಯಮಗಳಾಗಿವೆ. ಮಂಗಳೂರು ಬಂದರಿನ ಸಮೀಪದಲ್ಲಿರುವ 'ಹಳೆ ಮಂಗಳೂರು ಬಂದರು' ಪ್ರಸಿದ್ಧ ಮೀನುಗಾರಿಕಾ ಬಂದರಾಗಿದೆ. ಇಲ್ಲಿ ಮೀನುಗಾರಿಕೆಗಾಗಿ ಬಳಸುವ ಭಾರಿ ಪ್ರಮಾಣದ ಯಾಂತ್ರಿಕೃತ ದೋಣಿಗಳು ಲಂಗರು ಹಾಕಿರುತ್ತವೆ. ಮೀನುಗಾರಿಕಾ ಉದ್ಯಮವು ಸಾವಿರಾರು ಜನರನ್ನು ಈ ಉದ್ಯೋಗದಲ್ಲಿ ಬಳಸಿಕೊಂಡಿದೆ ಹಾಗೂ ಅವರ ಉತ್ಪನ್ನಗಳನ್ನು ಸುತ್ತಮುತ್ತಲ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ. ಹಂಚು, ಬೀಡಿ, ಕಾಫಿ ಮತ್ತು ಗೋಡಂಬಿ ಉದ್ಯಮಗಳಲ್ಲಿ ಮಂಗಳೂರಿನ ವ್ಯಾಪಾರ ಸಂಸ್ಥೆಗಳು ಪ್ರಮುಖವಾದ ಅಸ್ತಿತ್ವವನ್ನು ಪಡೆದುಕೊಂಡು ಬಂದಿದೆ, ಹಾಗಿದ್ದೂ ಆಧುನಿಕ ನಿರ್ಮಾಣದಲ್ಲಿ ಕಾಂಕ್ರೀಟಿನ ಬಳಕೆಯಿಂದಾಗಿ ಹಂಚಿನ ಉದ್ಯಮವು ಅವನತಿಯ ದಾರಿಯಲ್ಲಿ ಸಾಗಿದೆ. 'ಅಲ್ಬುಕರ್ಕ್ ಹಂಚಿನ ಕಾರ್ಖಾನೆ'ಯು ಭಾರತದಲ್ಲೇ ಅತಿ ದೊಡ್ಡ ಹಂಚಿನ ಕರ್ಖಾನೆಯಾಗಿದ್ದು,ಪ್ರಸಿದ್ಧ ಮಂಗಳೂರು ಕೆಂಪು ಹಂಚುಗಳನ್ನು ತಯಾರಿಸುತ್ತದೆ. ಮಂಗಳೂರಿನ ಉಪನಗರವಾದ ಉಳ್ಳಾಲದಲ್ಲಿ ಹೆಣೆದ ಉಡುಪುಗಳು ಹಾಗೂ ತೆಂಗಿನ ನಾರಿನ ದಾರಗಳನ್ನು ತಯಾರಿಸಲಾಗುತ್ತದೆ.
[ಬದಲಾಯಿಸಿ] ಜನಸಂಖ್ಯೆ
೨೦೦೧ರ ಭಾರತದ ಜನಗಣತಿಯ ಪ್ರಕಾರ, ಮಂಗಳೂರು ೩,೯೮,೭೪೫ ಜನಸಂಖ್ಯೆಯನ್ನು ಹೊಂದಿತ್ತು.[೩೦] ಇದೇ ಜನಗಣತಿಯ ಪ್ರಕಾರ ನಗರ ಪ್ರದೇಶದ ಜನಸಂಖ್ಯೆಯು ೫,೩೮,೫೬೦ ಆಗಿದ್ದರೆ,[೩೧] ಮಂಗಳೂರು ನಗರ ಪಾಲಿಕೆಯ ಅಧೀನದಲ್ಲಿರುವ ಪ್ರದೇಶದ ಜನಸಂಖ್ಯೆಯು ೪,೧೯,೩೦೬ ಆಗಿತ್ತು. 'ವರ್ಲ್ಡ್ ಗಾಜೆಟರ್' ನ ಅನುಸಾರ ೨೦೦೮ರಲ್ಲಿ ಮಂಗಳೂರಿನ ಅಂದಾಜು ಜನಸಂಖ್ಯೆಯು ೪,೩೧,೯೭೬ ಆಗಿತ್ತು. ಇದರ ಪ್ರಕಾರ ಮಂಗಳೂರು ಭಾರತದ ೧೦೧ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗುತ್ತದೆ.[೩೨] ಇದೇ ಗಣತಿಯ ಅನುಸಾರ 'ವರ್ಲ್ಡ್ ಗಾಜೆಟರ್' ಮಂಗಳೂರು ನಗರ ಪ್ರದೇಶದ(urban) ಜನಸಂಖ್ಯೆಯು ೬,೦೩,೨೬೯ ಎಂದು ಅಂದಾಜು ಮಾಡಿತ್ತು. ಇದು ಈ ನಗರ ಪ್ರದೇಶವನ್ನು ೬೧ನೇ ಅತಿ ಹೆಚ್ಚು ಜನಸಾಂದ್ರ ಪ್ರದೇಶವನ್ನಾಗಿ ಮಾಡುತ್ತದೆ.[೩೩] ಜನಸಂಖ್ಯೆಯ ೫೦ ಪ್ರತಿಶತ ಭಾಗವು ಪುರುಷರಾಗಿದ್ದು, ಇವರ ಸಂಖ್ಯೆ ೨,೦೦,೨೩೪ ಆಗಿದೆ. ಉಳಿದ ೫೦ ಪ್ರತಿಶತ ಸ್ತ್ರೀಯರಾಗಿದ್ದು, ಇವರ ಸಂಖ್ಯೆ ೧,೯೮,೫೧೧ ಆಗಿದೆ. ಪುರುಷ ಸಾಕ್ಷರತಾ ಪ್ರಮಾಣವು ೮೬ ಪ್ರತಿಶತವಿದ್ದು, ಸ್ತ್ರೀ ಸಾಕ್ಷರತಾ ಪ್ರಮಾಣವು ೭೯ ಪ್ರತಿಶತವಿದೆ. ಜನಸಂಖ್ಯೆಯ ೯ ಪ್ರತಿಶತ ಭಾಗವು ೬ ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಮಂಗಳೂರಿನ ಸರಾಸರಿ ಸಾಕ್ಷರತಾ ಪ್ರಮಾಣವು ೮೩ ಪ್ರತಿಶತವಿದ್ದು ಇದು ರಾಷ್ಟ್ರೀಯ ಸರಾಸರಿ ೫೯.೯ಕ್ಕಿಂತ ಅಧಿಕವಾಗಿದೆ. ಜನನ ಪ್ರಮಾಣವು ೧೩.೭೨ ಪ್ರತಿಶತವಿದ್ದು, ಮರಣ ಪ್ರಮಾಣವು ೩.೭೧ ಪ್ರತಿಶತ ಹಾಗೂ ಶಿಶು ಮರಣ ಪ್ರಮಾಣವು ೧.೨೪ ಪ್ರತಿಶತವಿದೆ. ಕೊಳೆಗೇರಿಗಳ ಏರುತ್ತಿರುವ ಸಂಖ್ಯೆಯು ಇಲ್ಲಿನ ಕಳವಳಕಾರಿಯಾದ ಅಂಶವಾಗಿದೆ. ಮಂಗಳೂರು ನಗರ ಪ್ರದೇಶವು ನಗರ ಪಾಲಿಕೆಯ ಸರಹದ್ದಿನಲ್ಲಿ ೩೨ ಕೊಳೆಗೇರಿಗಳನ್ನು ಗುರುತಿಸಿತ್ತು. ಸುಮಾರು ೨೨,೦೦೦ ವಲಸಿಗ ಕಾರ್ಮಿಕರು ನಗರದ ಸರಹದ್ದಿನಲ್ಲಿರುವ ಈ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ.[೩೪][೩೫]
ಮಂಗಳೂರು ಬಹುಸಂಸ್ಕೃತಿಯ ಹಾಗೂ ಬಹುಭಾಷೀಯ ನಗರವಾಗಿದೆ. ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆಗಳು ಇಲ್ಲಿನ ಮೂರು ಸ್ಥಳೀಯ ಭಾಷೆಗಳಾಗಿದ್ದು, ಕನ್ನಡ, ಹಿಂದಿ, ಆಂಗ್ಲ ಮತ್ತು ಉರ್ದು ಭಾಷೆಗಳೂ ಬಳಕೆಯಲ್ಲಿವೆ. ಕನ್ನಡ ಇಲ್ಲಿನ ದ್ವಿತೀಯ ಭಾಷೆಯಾಗಿದ್ದು, ಇಲ್ಲಿನ ಅಧಿಕೃತ ಭಾಷೆಯಾಗಿದೆ. ಇಲ್ಲಿನ ಜನಸಂಖ್ಯೆಯ ಅಧಿಕ ಭಾಗವು ಹಿಂದೂ ಧರ್ಮೀಯರನ್ನು ಒಳಗೊಂಡಿದೆ. ಮೊಗವೀರರು, ಬಿಲ್ಲವರು ಹಾಗೂ ಬಂಟರು ಇದರಲ್ಲಿ ಪ್ರಮುಖರು. ಕೋಟಾ ಬ್ರಾಹ್ಮಣರು, ಶಿವಳ್ಳಿ ಬ್ರಾಹ್ಮಣರು, ಸ್ಥಾನಿಕ ಬ್ರಾಹ್ಮಣರು, ಹವ್ಯಕ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ದೈವಜ್ಞ ಬ್ರಾಹ್ಮಣರು, ರಾಜಪುರ ಸಾರಸ್ವತ ಬ್ರಾಹ್ಮಣರು ಕೂಡಾ ಹಿಂದು ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. ಜನಸಂಖ್ಯೆಯ ಇನ್ನು ಸ್ವಲ್ಪ ಭಾಗವು ಕ್ರೈಸ್ತ ಧರ್ಮೀಯರನ್ನು ಹೊಂದಿದೆ. ಇವರಲ್ಲಿ ಕೊಂಕಣಿ ಮಾತನಾಡುವ ಕಾಥೋಲಿಕರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರು 'ಮಂಗಳೂರು ಕಾಥೋಲಿಕರು' ಎಂದೇ ಪ್ರಸಿದ್ಧರು. ಮುಸ್ಲಿಮರು ಇಲ್ಲಿನ ಅಲ್ಪಸಂಖ್ಯಾಕ ಜನತೆಯಾಗಿದ್ದು, ಅವರ ಜನಸಂಖ್ಯೆಯಲ್ಲಿ ೮೦ ಪ್ರತಿಶತ ಜನರು ಅವರದೇ ಭಾಷೆಯಾದ ಬ್ಯಾರಿ ಭಾಷೆಯನ್ನು ಮಾತಾಡುತ್ತಾರೆ. ಸಣ್ಣ ಪ್ರಮಾಣದ ಜನಸಂಖ್ಯೆಯು ಜೈನ ಧರ್ಮವನ್ನೂ ಅನುಸರಿಸುತ್ತದೆ.
[ಬದಲಾಯಿಸಿ] ಸಂಸ್ಕೃತಿ
ಮಂಗಳೂರಿನ ನಿವಾಸಿಯೊಬ್ಬರನ್ನು ತುಳುವಿನಲ್ಲಿ ಕುಡ್ಲದಾರ್ ಎಂದೂ, ಕನ್ನಡದಲ್ಲಿ ಮಂಗಳೂರಿನವರು ಎಂದೂ, ಕಾಥೋಲಿಕ್ ಕೊಂಕಣಿಯಲ್ಲಿ ಕೊಡಿಯಾಲ್ ಘರಾನೊ ಎಂದೂ, ಜಿ.ಎಸ್.ಬಿ ಕೊಂಕಣಿಯಲ್ಲಿ ಕೊಡಿಯಾಲ್ಚಿ ಅಥವಾ ಮಂಗ್ಳೂರ್ಚಿ ಎಂದೂ ಆಂಗ್ಲದಲ್ಲಿ ಮ್ಯಾಂಗಲೋರಿಯನ್ ಎಂದೂ ಕರೆಯುತ್ತಾರೆ. ಬಿಜೈ ಸಮೀಪದಲ್ಲಿರುವ ಶ್ರೀಮಂತಿ ಬಾಯಿ ಮ್ಯೂಸಿಯಮ್ ಮಂಗಳೂರಿನಲ್ಲಿರುವ ಏಕೈಕ ವಸ್ತು ಸಂಗ್ರಹಾಲಯ.[೩೬] ಮಣ್ಣಗುಡ್ಡದ ಸಮೀಪವಿರುವ ಬಿಬ್ಲಿಯೋಫೈಲ್ಸ್ ಪಾರಡೈಸ್ ಕಾರ್ಪೋರೇಷನ್ ಬ್ಯಾಂಕಿನಿಂದ ನಡೆಸಲ್ಪಡುತ್ತಿರುವ ಸಾರ್ವಜನಿಕ ವಾಚನಾಲಯವಾಗಿದೆ. ಯಕ್ಷಗಾನವು ಇಲ್ಲಿನ ಪ್ರಸಿದ್ಧ ನೃತ್ಯ ಕಲೆಯಾಗಿದ್ದು, ಕಹಳೆ ಘೋಷಗಳೊಂದಿಗೆ ರಾತ್ರಿಯುದ್ದಕ್ಕೂ ನಡೆಯುತ್ತದೆ.[೩೭] ದಸರಾ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ನಡೆಯುವ ಹುಲಿವೇಶವು ಇಲ್ಲಿನ ವಿಶಿಷ್ಟವಾದ ಜಾನಪದ ನೃತ್ಯ ಕಲೆ.[೩೮] ಇದರಂತೆಯೇ ಕರಡಿವೇಶವೂ ದಸರಾ ಸಮಯದಲ್ಲಿ ನಡೆಯುವಂತಹ ಇಲ್ಲಿನ ಪ್ರಸಿದ್ಧ ನೃತ್ಯ ರೀತಿ.[೩೯] ಭೂತಕೋಲ ಇಲ್ಲಿ ಪ್ರಚಲಿತವಿರುವ, ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಸಾಂಪ್ರದಾಯಿಕ ನೃತ್ಯ ಕಲೆ. ಜನರ ಮನರಂಜನೆಗಾಗಿ ಇರುವ ಕಂಬಳವು ಇಲ್ಲಿನ ಕೆಸರು ಗದ್ದೆಯಲ್ಲಿ ನಡೆಸುವ ಕೋಣ ಹಾಗೂ ಎತ್ತುಗಳ ಓಟ.[೪೦] ಕೋರಿಕಟ್ಟ (ಕೋಳಿ ಅಂಕ) ಇಲ್ಲಿನ ಇನ್ನೊಂದು ಪ್ರಸಿದ್ಧ ಆಟ. ನಾಗದೇವತೆಯನ್ನು ಪೂಜಿಸುವ ಹಬ್ಬವಾದ ನಾಗಾರಾಧನೆಯೂ ಇಲ್ಲಿ ಪ್ರಚಲಿತದಲ್ಲಿದೆ.[೪೧]
ಪಾಡ್ದನಗಳು ವೇಷಧಾರಿ ಸಮುದಾಯದವರಿಂದ ತುಳುವಿನಲ್ಲಿ ಹಾಡಲ್ಪಟ್ಟಿರುವ ಲಾವಣಿಯಂತಹ ಜಾನಪದ ಗೀತೆಗಳು. ಇದು ಸಾಮನ್ಯವಾಗಿ ಡಮರುವಿನ ಲಯಬದ್ಧ ಬಡಿತದೊಂದಿಗೆ ಹಾಡಲ್ಪಡುತ್ತದೆ. ಕೋಲ್ಕೈ (ಕೋಲಾಟದ ಸಮಯದಲ್ಲಿ ಹಾಡಲ್ಪಡುತ್ತದೆ), ಉಂಜಲ್ ಪಾಟ್ (ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ಸಮಯದಲ್ಲಿ), ಮೊಯ್ಲಾಂಜಿ ಪಾಟ್, ಒಪ್ಪುನೆ ಪಾಟ್ (ಮದುವೆಯ ಸಮಯದಲ್ಲಿ ಹಾಡಲ್ಪಡುತ್ತದೆ) ಗಳು ಕೆಲವು ಪ್ರಸಿದ್ಧ ಬ್ಯಾರಿ ಹಾಡುಗಳು.[೪೨]
ದಸರಾ, ದೀಪಾವಳಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಕ್ರಿಸ್ ಮಸ್, ಮಹಾ ಶಿವರಾತ್ರಿ, ಈಸ್ಟರ್, ನವರಾತ್ರಿ, ಗುಡ್ ಫ್ರೈಡೆ, ಈದ್, ಮೊಹರಂ ಹಾಗೂ ಮಹಾವೀರ ಜಯಂತಿ ಇಲ್ಲಿನ ಜನಪ್ರಿಯ ಹಬ್ಬಗಳು. ಗಣೇಶ ಚತುರ್ಥಿ ಹಬ್ಬವನ್ನು ಪ್ರತಿವರ್ಷವೂ ಭಕ್ತಿ ಶ್ರದ್ಧೆಯಿಂದ ಆಚರಿಸಲ್ಪಡುತ್ತದೆ. ಈ ಸಮಯದಲ್ಲಿ ಗಣಪತಿ ದೇವರ ಮೂರ್ತಿಗಳನ್ನು ನಿಲ್ಲಿಸಿ, ಅವುಗಳನ್ನು ವಿದ್ಯುಕ್ತವಾಗಿ ಪೂಜಿಸಿ, ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ಕೊಡಿಯಾಲ್ ತೇರ್ ಅಥವಾ ಮಂಗಳೂರು ರಥೋತ್ಸವ ಇಲ್ಲಿನ ಜಿ.ಎಸ್.ಬಿ ಸಮುದಾಯದ ಪ್ರಮುಖ ಉತ್ಸವಗಳಲ್ಲಿ ಒಂದು. ಈ ಸಮಯದಲ್ಲಿ ಶೀ ವೆಂಕಟರಮಣ ದೇವಸ್ಥಾನದ ರಥೋತ್ಸವವನ್ನು ಆಚರಿಸಲಾಗುತ್ತದೆ.[೪೩][೪೪] ಮೋಂಟಿ ಫೆಸ್ಟ್ ಎಂಬುದು ಕಾಥೋಲಿಕ್ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದು.[೪೫] ಜೈನ್ ಮಿಲನ್ ಎಂಬ ಮಂಗಳೂರಿನ ಜೈನ ಕುಟುಂಬಗಳ ಸಮಿತಿಯು 'ಜೈನ್ ಫುಡ್ ಫೆಸ್ಟಿವಲ್' ಎಂಬ ಕಾರ್ಯಕ್ರಮವನ್ನು ಪ್ರತಿವರ್ಷವೂ ಆಚರಿಸುತ್ತದೆ.[೪೬] ಜೈನ ಸಮುದಾಯದ ಪ್ರತಿಯೊಬ್ಬರೂ ಒಟ್ಟುಗೂಡಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ನಡೆಯುವ ಮೊಸರು ಕುಡಿಕೆ ಹಬ್ಬದಲ್ಲಿ ಎಲ್ಲಾ ನಂಬಿಕೆಯ ಜನರು ಭಾಗವಹಿಸುತ್ತಾರೆ.[೪೭] ಜುಲೈ ೧೭ರಿಂದ ಆಗಸ್ಟ್ ೧೫ರ ವರೆಗೆ ಸಾಗುವ ಆಟಿ ಪರ್ಬ(ಆಟಿ ಹಬ್ಬ)ವನ್ನು ಇಲ್ಲಿ ಕಳಂಜ ಎಂಬ ದೈವವನ್ನು ಪೂಜಿಸುವುದರೊಂದಿಗೆ ಆಚರಿಸಲಾಗುತ್ತದೆ. ಜುಲೈ-ಆಗಸ್ಟಿನ ಮಳೆಗಾಲದ ಸಮಯದಲ್ಲಿ ಕಳಂಜನು ನಗರದ ರಕ್ಷಣೆಯ ಅಧಿಪತಿಯಾಗಿರುತ್ತಾನೆ. ಸ್ಥಳಿಯ ಸಾಂಸ್ಕೃತಿಕ ಘಟನೆ ಹಾಗೂ ಪ್ರಸಂಗಗಳನ್ನು ಪ್ರೋತ್ಸಾಹಿಸಲು ಬೇಸಿಗೆಯ ಸಮಯದಲ್ಲಿ ಕರಾವಳಿ ಉತ್ಸವ ಹಾಗೂ ಕುಡ್ಲೋತ್ಸವಗಳಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುತ್ತದೆ. ೨೦೦೬ರಲ್ಲಿ ತುಳು ಚಲನಚಿತ್ರೋತ್ಸವವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಯಿತು.
ಮಂಗಳೂರಿನ ಖಾದ್ಯವು ಬಹುಮಟ್ಟಿಗೆ ದಕ್ಷಿಣ ಭಾರತದ ಖಾದ್ಯಗಳಿಂದ ಪ್ರಭಾವಿತಗೊಂಡಿವೆ. ಮಂಗಳೂರಿನ ವ್ಯಂಜನವು(curry) ತೆಂಗಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಅಧಿಕವಾಗಿ ಬಳಸಿಕೊಳ್ಳುತ್ತದೆ. ಶುಂಠಿ, ಬೆಳ್ಳುಳ್ಳಿ ಹಾಗೂ ಮೆಣಸನ್ನೂ ಕೂಡಾ ವ್ಯಂಜನದಲ್ಲಿ ಬಳಸಲಾಗುತ್ತದೆ. ಮಂಗಳೂರಿನ ಮೀನಿನ ಕರಿ(curry)ಯು ಕೆನರಾದುದ್ದಕ್ಕೂ ತನ್ನ ರುಚಿಗಾಗಿ ಜನಪ್ರಿಯವಾಗಿದೆ. ಕೋರಿ ರೊಟ್ಟಿ(ಅಕ್ಕಿ ರೊಟ್ಟಿ), ಬಂಗುಡೆ ಪುಳಿಮುಂಚಿ(ಬಾಂಗ್ಡ ಮೀನಿನ ಒಂದು ಖಾದ್ಯ), ಕಡ್ಲೆ ಮನೋಲಿ ಸುಕ್ಕ, ಬೀಜ-ಮನೋಲಿ ಉಪ್ಪುಕರಿ, ನೀರ್ ದೋಸೆ, ಬೂತಯಿ ಗಸಿ, ಪುಂಡಿ(ಕಡುಬು), ಪತ್ರೊಡೆ ತುಳು ಸಮುದಾಯದ ಕೆಲವು ಜನಪ್ರಿಯ ತಿಂಡಿ ತಿನಿಸುಗಳು. ದಾಲಿ ತೊಯ್, ಬೀಬೆ ಉಪ್ಕರಿ, ವಾಲ್ ವಾಲ್, ಅವ್ನಾಸ್ ಅಂಬೆ ಸಾಸಮ್, ಕಡ್ಗಿ ಚಕ್ಕೋ, ಪಾಗಿಲ ಪೋಡಿ ಹಾಗೂ ಚನ ಗಶಿ ಕೊಂಕಣಿ ಸಮುದಾಯದ ಕೆಲವು ವಿಶೇಷ ತಿನಿಸುಗಳು. ಕಾಥೋಲಿಕ್ಕರ ಸನ್ನ ದುಕ್ರಾ ಮಾಸ್, ಪೋರ್ಕ್ ಬಫತ್ , ಸೊರ್ಪೊಟೆಲ್ ಹಾಗೂ ಮುಸ್ಲಿಮರ ಮಟನ್ ಬಿರಿಯಾನಿ ಇತರ ಜನಜನಿತ ಖಾದ್ಯಗಳು. ಹಪ್ಪಳ, ಸಂಡಿಗೆ ಹಾಗೂ ಪುಳಿ ಮುಂಚಿ ಯಂತ ವಿಶೇಷ ತಿನಿಸುಗಳು ಮಂಗಳೂರಿನ ವಿಶಿಷ್ಟತೆಯಾಗಿದೆ. ತೆಂಗಿನ ಮರದ ಹೂವಿನ ರಸ/ಸತ್ವದಿಂದ ತಯಾರಿಸಲಾಗುವ ಶೇಂದಿ (ತುಳುವಿನಲ್ಲಿ ಕಲಿ) ಮಂಗಳೂರಿನ ಜನಪ್ರಿಯ ಸಾರಾಯಿಯಾಗಿದೆ. ಇಲ್ಲಿನ ಸಸ್ಯಾಹಾರಿ ಖಾದ್ಯವು ಉಡುಪಿ ಖಾದ್ಯದಂತೇ ಇರುತ್ತದೆ. ಮಂಗಳೂರು ಕರಾವಳಿ ನಗರವಾಗಿರುವುದರಿಂದ ಮೀನು ಇಲ್ಲಿನ ಅಧಿಕಾಂಶ ಜನರ ಪ್ರಮುಖ ಆಹಾರವಾಗಿದೆ.[೪೮]
[ಬದಲಾಯಿಸಿ] ನಗರಾಡಳಿತ
|
'ಮಂಗಳೂರು ಮಹಾನಗರ ಪಾಲಿಕೆ'ಯು ಇಲ್ಲಿಯ ನಗರ ಹಾಗೂ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸವ ಮಂಡಳಿಯಾಗಿದೆ. ನಗರ ಪಾಲಿಕೆಯ ಸರಹದ್ದು ಉತ್ತರದಲ್ಲಿ ಮುಕ್ಕಾದಿಂದ ಆರಂಭವಾಗಿ ದಕ್ಷಿಣದಲ್ಲಿ ನೇತ್ರಾವತಿ ನದಿ ಸೇತುವೆಯವರೆಗೆ ಹಾಗೂ ಪಶ್ಚಿಮ ಕಡಲತೀರದಿಂದ ಪೂರ್ವದಲ್ಲಿ ವಾಮಂಜೂರಿನ ವರೆಗೆ ಹಬ್ಬಿದೆ. ಮಂಗಳೂರು ಮಹಾನಗರ ಪಾಲಿಕಾ ಸಭೆಯು ಕಾರ್ಪೋರೇಟ್ಗಳೆಂದು ಕರೆಯಲ್ಪಡುವ ೬೦ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತದೆ. ಒಂದು ವಾರ್ಡಿಗೆ ಒಬ್ಬನಂತೆ ೬೦ ವಾರ್ಡುಗಳಿಂದ ಇವರು ಚುನಾಯಿತರಾಗಿರುತ್ತಾರೆ. ೫ ವರ್ಷಗಳಿಗೊಮ್ಮೆ ಈ ಸಭೆಗೆ ಚುನಾವಣೆಯು ನಡೆಯುತ್ತದೆ. ಬಹುಸಂಖ್ಯಾ ಪಕ್ಷದ ಕಾರ್ಪೋರೇಟರುಗಳಲ್ಲಿ ಒಬ್ಬರನ್ನು ಮೇಯರ್ ಆಗಿ ಆರಿಸಲಾಗುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯವು ಲಾಲ್ ಭಾಗ್ ನಲ್ಲಿದೆ. ಸುರತ್ಕಲ್ ಹಾಗೂ ಬಿಕರ್ನಕಟ್ಟೆಯಲ್ಲಿ ಪಾಲಿಕೆಯ ಸಹಕಛೇರಿಗಳಿವೆ.
ಲೋಕ ಸಭೆ ಹಾಗೂ ವಿಧಾನ ಸಭೆ ಕ್ಷೇತ್ರಗಳ ಮರುವಿಂಗಡಣೆಯ ಮೊದಲು ಮಂಗಳೂರು ಲೋಕ ಸಭೆಗೆ ೨ ಸದಸ್ಯರನ್ನು ಒದಗಿಸುತ್ತಿತ್ತು. ಒಂದು ನಗರದ ದಕ್ಷಿಣ ಭಾಗದಿಂದ ಆಗಿದ್ದು ಇದು ಮಂಗಳೂರು ಲೋಕಸಭಾ ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. ಇನ್ನೊಂದು ನಗರದ ಉತ್ತರ ಭಾಗದಿಂದಾಗಿದ್ದು, ಇದು ಉಡುಪಿ ಲೋಕಸಭಾ ಕ್ಷೇತ್ರ ಎಂದು ನಾಮಂಕಿತವಾಗಿತ್ತು. ಮಂಗಳೂರು ಕರ್ನಾಟಕ ವಿಧಾನ ಸಭೆಗೆ ೩ ಸದಸ್ಯರನ್ನು ಕಳುಹಿಸುತ್ತಿತ್ತು. ಆದರೆ ಕ್ಷೇತ್ರ ಮರುವಿಂಗಡಣೆಯ ನಂತರ ಮಂಗಳೂರು ತಾಲೂಕು 'ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ' ಕೆಳಗೆ ಬರುತ್ತಿದ್ದು ಲೋಕ ಸಭೆಗೆ ಕೇವಲ ಒಬ್ಬ ಸದಸ್ಯನನ್ನು ಒದಗಿಸುತ್ತದೆ.[೫೨][೫೩]
ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಮಂಗಳೂರಿನಲ್ಲಿ ಕಾನೂನು ಹಾಗೂ ನ್ಯಾಯಬದ್ಧತೆಗೆ ಜವಾಬ್ದಾರಿಯಾಗಿದೆ. ಈ ಇಲಾಖೆಯನ್ನು ಸೂಪರಿಂಟೆಂಡಂಟ್ ಆಫ್ ಪೋಲಿಸ್(SP) ಅವರು ಮುನ್ನಡೆಸುತ್ತಾರೆ. ಮಂಗಳೂರು 'ಪಶ್ಚಿಮ ವ್ಯಾಪ್ತಿ ಪೋಲಿಸ್' ಇಲಾಖೆಯ ಪ್ರಧಾನ ಕಾರ್ಯಾಲಯವನ್ನೂ ಪಡೆದಿದ್ದು, ಇದು ಕರ್ನಾಟಕದ ಪಶ್ಚಿಮ ಜಿಲ್ಲೆಗಳನ್ನು ಒಳಗೊಂಡಿದೆ.
[ಬದಲಾಯಿಸಿ] ಶಿಕ್ಷಣ ಹಾಗೂ ಕ್ರೀಡೆ
ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ ಕನ್ನಡವಾಗಿದ್ದು, ಇತರ ಸರಕಾರೇತರ ಚಲಾಯಿತ ಶಾಲೆಗಳಲ್ಲಿ ಮಾಧ್ಯಮವು ಆಂಗ್ಲ ಅಥವಾ ಕನ್ನಡ ವಾಗಿವೆ. ಇತರ ಮಾಧ್ಯಮಗಳೂ ಇವುಗಳ ಜೊತೆಗೆ ಅಸ್ತಿತ್ವದಲ್ಲಿವೆ. ಪ್ರೌಢ ಶಾಲೆಯ ನಂತರ ಕಾಲೇಜುಗಳಲ್ಲಿ ಸಾಮಾನ್ಯವಾಗಿ ಆಂಗ್ಲವು ಶಿಕ್ಷಣ ಮಾಧ್ಯಮವಾಗಿದೆ. ಇತ್ತೀಚೆಗೆ 'ತುಳು ಸಾಹಿತ್ಯ ಅಕಾಡೆಮಿ'ಯಿಂದ ರಚಿಸಲ್ಪಟ್ಟ ಒಂದು ಪರಿಣತರ ಸಮಿತಿಯು, ಕನ್ನಡವನ್ನು ಲಿಪಿಯಾಗಿ ಬಳಸುವ ತುಳು ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಸೇರಿಸಬೇಕೆಂದು ಸಲಹೆಯಿತ್ತರು.[೫೪]
ಮಂಗಳೂರಿನಲ್ಲಿರುವ ಶಾಲಾ ಕಾಲೇಜುಗಳು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ನಡೆಸಲ್ಪಡುತ್ತವೆ. ಶಾಲೆಗಳು ಕರ್ನಾಟಕ ರಾಜ್ಯ ನಿಗಮ, ಐ.ಸಿ.ಎಸ್.ಇ. ಅಥವಾ ಸಿ.ಬಿ.ಎಸ್.ಇ. ಬೋರ್ಡುಗಳ ಅಂಗಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತವೆ. ಹತ್ತು ವರ್ಷಗಳ ವಿದ್ಯಾಭ್ಯಾಸದ ನಂತರ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಭರ್ತಿ ಹೊಂದುತ್ತಾರೆ. ಇಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವರ್ಗಗಳಲ್ಲಿ ಒಂದನ್ನು ಆರಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ೧೯೮೦ರಿಂದ ಇಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವಿಜ್ಞಾನ, ಬಿಸಿನೆಸ್ ಮಾನೇಜ್ಮೆಂಟ್ ಹಾಗೂ ಹೋಟೆಲ್ ಮಾನೇಜ್ಮೆಂಟ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಬಹಳಷ್ಟು ವೃತ್ತಿ ಸಂಸ್ಥೆಗಳು ಆರಂಭಗೊಂಡಿವೆ. ತಮ್ಮ ಗುಣಮಟ್ಟದ ಕಾರ್ಯಕ್ರಮಗಳಿಂದಾಗಿ ಈ ಸಂಸ್ಥೆಗಳು ದೇಶದ ವಿವಿಧ ಕೋಣೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. 'ಬೇಸಲ್ ಇವಾಂಜಲಿಕಲ್ ಶಾಲೆ (೧೮೩೮) ಹಾಗೂ 'ಮಿಲಾಗ್ರೆಸ್ ಶಾಲೆ' (೧೮೪೮) ಮಂಗಳೂರಿನಲ್ಲಿ ಸ್ಥಾಪನೆಗೊಂಡ ಅತ್ಯಂತ ಹಳೆಯ ಶಾಲೆಗಳು. ೧೯೫೩ರಲ್ಲಿ ಆರಂಭಗೊಂಡ 'ಕಸ್ತೂರ್ ಬಾ ಮೆಡಿಕಲ್ ಕಾಲೇಜು' ಭಾರತದ ಮೊದಲನೆಯ ಖಾಸಗೀ ವೈದ್ಯಕೀಯ ಕಾಲೇಜಾಗಿದೆ.[೫೫] ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ, ಕೆನರಾ ಕಾಲೇಜು, ಸಂತ ಅಲೋಶಿಯಸ್ ಕಾಲೇಜು ಹಾಗೂ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜುಗಳು ಇಲ್ಲಿನ ಕೆಲವು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು. ಸಪ್ಟಂಬರ್ ೧೦, ೧೯೮೦ರಲ್ಲಿ ಸ್ಥಾಪನೆಗೊಂಡ ಮಂಗಳೂರು ವಿಶ್ವವಿದ್ಯಾನಿಲಯವು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಉನ್ನತ ವ್ಯಾಸಂಗದ ಅಗತ್ಯಗಳನ್ನು ಪೂರೈಸುತ್ತದೆ.[೫೬]
ಕ್ರಿಕೆಟ್ ನಗರದ ಅತ್ಯಂತ ಜನಪ್ರಿಯ ಕ್ರೀಡೆ. ಮಂಗಳಾ ಸ್ಟೇಡಿಯಮ್ ದಕ್ಷಿಣ ಕನ್ನಡದ ಏಕಮಾತ್ರ ಕ್ರೀಡಾಂಗಣವಾಗಿದ್ದು,[೫೭] ಇದು ಮಂಗಳೂರಿನಲ್ಲಿದೆ. ಇದರ ಜೊತೆಗೆ ಫುಟ್ ಬಾಲ್ ಮತ್ತು ಚೆಸ್(ಚದುರಂಗ)ಗಳೂ ಇಲ್ಲಿನ ಇತರ ಜನಪ್ರಿಯ ಕ್ರೀಡೆಗಳಾಗಿವೆ. ಮಂಗಳೂರು 'ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಕೂಟ'ದ ಕೇಂದ್ರಾಲಯವಾಗಿದ್ದು, ಇಲ್ಲಿ ೨ 'ಅಖಿಲ ಭಾರತ ಮುಕ್ತ ಚೆಸ್ ಪಂದ್ಯಾಟ'ಗಳು ನಡೆದಿವೆ.[೫೮][೫೯][೬೦] ಇತರ ಕ್ರೀಡೆಗಳಾದ ಟೆನ್ನಿಸ್, ಬಿಲ್ಲಿಯರ್ಡ್ಸ್,ಸ್ಕ್ವಾಷ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಹಾಗೂ ಗೋಲ್ಫ್ಗಳು ಇಲ್ಲಿನ ಅನೇಕ ಕ್ಲಬ್ ಹಾಗೂ ಜಿಮ್ಖಾನಗಳಲ್ಲಿ ಆಡಲ್ಪಡುತ್ತವೆ.
[ಬದಲಾಯಿಸಿ] ಮಾಧ್ಯಮ
'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ ಆಂಗ್ಲ ದೈನಿಕಗಳು ಮಂಗಳೂರಿನ ಸ್ಥಳೀಯ ಸಂಪುಟಗಳನ್ನು ಪ್ರಕಟಿಸುತ್ತವೆ. ಮಡಿಪು, ಮೊಗವೀರ, ಸಂಪರ್ಕ ಹಾಗೂ ಸಫಲಗಳು ಮಂಗಳೂರಿನ ಜನಪ್ರಿಯ ತುಳು ನಿಯತಕಾಲಿಕೆಗಳು.[೬೧] ರಕ್ನೊ, ಕೊಂಕಣಿ ದಿರ್ವೆಮ್ ಹಾಗೂ ಕನ್ನಿಕ್ಗಳು ನಗರದಿಂದ ಪ್ರಕಟವಾಗುವ ಪ್ರಸಿದ್ಧ ಕೊಂಕಣಿ ಭಾಷೆಯ ಪತ್ರಿಕೆಗಳು. ಬ್ಯಾರಿ ನಿಯತಕಾಲಿಕೆಗಳಾದ ಜ್ಯೋತಿ ಹಾಗೂ ಸ್ವತಂತ್ರ ಭಾರತಗಳು ಕೂಡಾ ಮಂಗಳೂರಿನಿಂದ ಪ್ರಕಟಗೊಳ್ಳುತ್ತವೆ. ಕನ್ನಡ ಪತ್ರಿಕೆಗಳಲ್ಲಿ ಉದಯವಾಣಿ, ವಿಜಯ ಕರ್ನಾಟಕ, ಪ್ರಜಾವಾಣಿ, ಕನ್ನಡ ಪ್ರಭ ಹಾಗೂ ವಾರ್ತಾಭಾರತಿಗಳು ಹೆಚ್ಚು ಜನಪ್ರಿಯ. ಸಂಜೆ ಪತ್ರಿಕೆಗಳಾದ ಕರಾವಳಿ ಅಲೆ, ಮಂಗಳೂರು ಮಿತ್ರ, ಸಂಜೆವಾಣಿ ಹಾಗೂ ಜಯಕಿರಣಗಳು ಕೂಡಾ ನಗರದಲ್ಲಿ ಪ್ರಕಟಗೊಳ್ಳುತ್ತವೆ. ಕನ್ನಡದ ಪ್ರಪ್ರಥಮ ಸಮಾಚಾರ ಪತ್ರಿಕೆಯಾದ ಮಂಗಳೂರು ಸಮಾಚಾರವು ೧೮೪೩ರಲ್ಲಿ ಮಂಗಳೂರಿನಿಂದ ಪ್ರಕಟಿಸಲ್ಪಟ್ಟಿತು.[೬೨]
ರಾಜ್ಯ ಸರಕಾರದಿಂದ ಚಲಾಯಿತ ದೂರದರ್ಶನ ಪ್ರಸಾರವು ರಾಷ್ಟ್ರೀಯ ಹಾಗೂ ಸ್ಥಳೀಯ ವರದಿಗಳರಡನ್ನೂ ಒದಗಿಸುತ್ತದೆ. ಖಾಸಗಿ ಕೇಬಲ್ ಟಿ.ವಿ.ಯ ವಿತರಕರು ಹಲವು ಕೇಬಲ್ ಚಾನೆಲ್ ಗಳನ್ನು ಪ್ರಸಾರ ಮಾಡುತ್ತಾರೆ. ಮಂಗಳೂರು ಪ್ರಸ್ತುತವಾಗಿ 'ಕಂಡೀಷನಲ್ ಆಕ್ಸೆಸ್ ಸಿಸ್ಟಮ್' (CAS) ಕೆಳಗೆ ಬರದಿದ್ದರೂ, ವಿ4 ಮೀಡಿಯಾವು ಮಂಗಳೂರಿನ ದೂರದರ್ಶನ ವೀಕ್ಷಕರಿಗೆ ಸಿ.ಎ.ಎಸ್ ಅನ್ನು ಭವಿಷ್ಯದಲ್ಲಿ ಒದಗಿಸುವ ಯೋಜನೆಯನ್ನು ಈಗಾಗಲೇ ಆರಂಭಿಸಿದೆ.[೬೩] ಹೊಸದಾಗಿದ್ದರೂ 'ಡಿಶ್ ಟಿ.ವಿ' ಹಾಗೂ 'ಟಾಟಾ ಸ್ಕೈ'ಗಳ ಮೂಲಕ 'ಡೈರೆಕ್ಟ್ ಟು ಹೋಮ್'(DTH) ಸೇವೆಗಳು ಮಂಗಳೂರಿನಲ್ಲಿ ಲಭ್ಯವಿವೆ.[೬೪] 'ಆಲ್ ಇಂಡಿಯಾ ರೇಡಿಯೋ'ವು ಕದ್ರಿಯಲ್ಲಿ ಸ್ಟುಡಿಯೋವನ್ನು ಹೊಂದಿದ್ದು, ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ರೇಡಿಯೋ ಮಿರ್ಚಿ ೯೮.೩ ಎಫ್.ಎಮ್, ಬಿಗ್ ೯೨.೭ ಎಫ್.ಎಮ್,[೬೫] ಸುಪರ್ ಹಿಟ್ಸ್ ೯೩.೫ ಎಫ್.ಎಮ್ ಹಾಗೂ ೯೪.೩ ಸೆಂಚುರಿ ಎಫ್. ಎಮ್[೬೬] ಇಲ್ಲಿನ ಖಾಸಗಿ ಎಫ್.ಎಮ್ ಚಾನೆಲ್ಲುಗಳು.
ಮಂಗಳೂರು 'ತುಳು ಚಿತ್ರರಂಗ'ಕ್ಕೆ ತವರಾಗಿದೆ. ೩೧ ಸಿನೆಮಾಗಳ ಸೂಚಿಯನ್ನು ಹೊಂದಿರುವ ಇದು, ವರ್ಷಕ್ಕೆ ಸರಾಸರಿಯಾಗಿ ಒಂದು ಸಿನೆಮಾವನ್ನು ಹೊರತರುತ್ತದೆ. ಕಡಲ ಮಗೆ , ಬಿರ್ಸೆ ಹಾಗೂ ಸುದ್ದ ಇತ್ತೀಚಿಗಿನ ಕೆಲವು ಪ್ರಸಿದ್ಧ ತುಳು ಸಿನೆಮಾಗಳು. ಸಾಮಾನ್ಯವಾಗಿ ಪುರಭವನದಲ್ಲಿ ನಡೆಯುವ ತುಳು ನಾಟಕಗಳು ಕೂಡಾ ಮಂಗಳೂರಿನಲ್ಲಿ ತುಂಬಾ ಜನಪ್ರಿಯವಾಗಿವೆ. ತುಳು ಚಿತ್ರರ೦ಗಕ್ಕೆ ೩೫ ವರ್ಷ ತು೦ಬಿದ ಸ೦ದರ್ಭದಲ್ಲಿ 2006 ರಲ್ಲಿ ಮಂಗಳೂರಿನಲ್ಲಿ ತುಳು ಫಿಲ್ಮ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿತ್ತು.[೬೭] ಮಂಗಳೂರಿನಲ್ಲಿ ಕೆಲವು ಕೊಂಕಣಿ ಸಿನೆಮಾಗಳನ್ನೂ ಚಿತ್ರೀಕರಿಸಲಾಗಿದ್ದು, ಇದು 'ಕೊಂಕಣಿ ಚಿತ್ರರಂಗ'ಕ್ಕೂ ತನ್ನ ಕೊಡುಗೆಯನ್ನು ಸಲ್ಲಿಸಿದೆ.
[ಬದಲಾಯಿಸಿ] ಸಾರಿಗೆ
ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ.
ಮೂರು ರಾಷ್ಟ್ರೀಯ ಹೆದ್ದಾರಿಗಳು ಮಂಗಳೂರಿನ ಮೂಲಕ ಹಾದು ಹೋಗುತ್ತವೆ, ಮಹಾರಾಷ್ಟ್ರದ ಪಣ್ವೇಲ್ ನಿಂದ ಕೇರಳದ ಎಡಪಲ್ಲಿಯ ಹತ್ತಿರವಿರುವ ಕೊಡುಂಗಲ್ಲೂರ್ ಜಂಕ್ಷನ್ ವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ೧೭, ಮಂಗಳೂರಿನ ಮೂಲಕ ಉತ್ತರ-ದಕ್ಷಿಣ ದಿಕ್ಕಿನಲ್ಲಿ ಹಾದು ಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ೪೮ ಪೂರ್ವಕ್ಕೆ ಬೆಂಗಳೂರಿನತ್ತ ಸಾಗಿದರೆ ರಾಷ್ಟ್ರೀಯ ಹೆದ್ದಾರಿ ೧೩ ಈಶಾನ್ಯವಾಗಿ ಸೋಲಾಪುರಕ್ಕೆ ಸಾಗುತ್ತದೆ.[೬೮] 'ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಣ'ವು ನವ ಮಂಗಳೂರು ಬಂದರನ್ನು ಸುರತ್ಕಲ್ಲಿಗೆ ಹಾಗೂ ಬಿ.ಸಿ ರೋಡ್ ಜಂಕ್ಷನ್ ಗೆ ಸೇರಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. 'ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ'ಯ ಬಂದರು ಜೋಡಣೆ ಕಾರ್ಯಕ್ರಮದ ಅಧೀನದಲ್ಲಿ ಈ ಹೆದ್ದಾರಿಗಳ ೩೭.೫ ಕಿ.ಮೀ. ವ್ಯಾಪ್ತಿಯನ್ನು ದ್ವಿಪಥದಿಂದ ಚತುರ್ಪಥಕ್ಕೆ ಅಭಿವೃದ್ಧಿಪಡಿಸಲಾಗುವುದು.[೬೯]
ಮಂಗಳೂರಿನ ಸಿಟಿ ಬಸ್ ಸೇವೆಯನ್ನು ನಗರದ ಬಸ್ ಮಾಲೀಕರು ನಡೆಸುತ್ತಿದ್ದು, ಇದು ನಗರದ ಸರಹದ್ದಿನಲ್ಲಿ ಹಾಗೂ ನಗರದ ಹೊರಗೆಯೂ ಸೇವೆಯನ್ನು ಒದಗಿಸುತ್ತದೆ. ಎರಡು ರೀತಿಯ ಪ್ರತ್ಯೇಕ ಬಸ್ ಪಥಗಳಿದ್ದು, ಸಿಟಿ ಬಸ್ಸುಗಳು ನಗರದಲ್ಲೇ ತಿರುಗಾಡಿದರೆ ಅಂತರ್ ನಗರ ಪಥಗಳಲ್ಲಿ ಸರ್ವಿಸ್ ಹಾಗೂ ವೇಗದೂತ ಬಸ್ಸುಗಳು ಓಡಾಡುತ್ತವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮಂಗಳೂರಿನಿಂದ ರಾಜ್ಯದ ಇತರ ಭಾಗಗಳಿಗೆ ದೀರ್ಘಾವದಿ ಪ್ರಯಾಣದ ಬಸ್ಸುಗಳನ್ನು ನಡೆಸುತ್ತದೆ.[೭೦] ದಕ್ಷಿಣ ಕನ್ನಡ ಬಸ್ ಓಪರೇಟರ್ಸ್ ಅಸೋಸಿಯೇಶನ್ ಹಾಗೂ ಕೆನರಾ ಬಸ್ ಓಪರೇಟರ್ಸ್ ಅಸೋಸಿಯೇಶನ್ಗಳು ಮಂಗಳೂರಿನಿಂದ ಬಸ್ ಸೇವೆಯನ್ನು ನಡೆಸುವ ಇತರ ಪ್ರಮುಖ ಸಂಸ್ಥೆಗಳು.[೭೧] ಈ ಬಸ್ಸುಗಳು ಸಾಮಾನ್ಯವಾಗಿ ಮಂಗಳೂರು ಬಸ್ ನಿಲ್ದಾಣದಿಂದ ಓಡಾಡುತ್ತವೆ. ಬಿಳಿ ಬಣ್ಣದ ಟ್ಯಾಕ್ಸಿಗಳು ಕೂಡಾ ನಗರದ ಬಹುತೇಕ ಭಾಗಗಳನ್ನು ಪಯಣಿಸುತ್ತವೆ. ಆಟೋ ರಿಕ್ಷಾಗಳು ಇನ್ನೊಂದು ರೀತಿಯ ಸ್ಥಳೀಯ ಸಾರಿಗೆಯಾಗಿದೆ.
ರೈಲು ಸಂಪರ್ಕವು ೧೯೦೭ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಮಂಗಳೂರು ಭಾರತದ ಅತ್ಯಂತ ದೀರ್ಘ ರೈಲು ಪಥದ ಆರಂಭ ಸ್ಥಳವೂ ಆಗಿತ್ತು. ನಗರವು ಎರಡು ರೈಲು ನಿಲ್ದಾಣಗಳನ್ನು ಹೊಂದಿದೆ - ಮಂಗಳೂರು ಸೆಂಟ್ರಲ್(ಹಂಪನ್ ಕಟ್ಟೆ) ಹಾಗೂ ಮಂಗಳೂರು ಜಂಕ್ಷನ್(ಕಂಕನಾಡಿ).[೭೨] ಪಶ್ಚಿಮ ಘಟ್ಟಗಳ ಮೂಲಕ ನಿರ್ಮಿಸಿರುವ ಮೀಟರ್ ಗೇಜ್ ರೈಲ್ವೆ ಹಳಿಯು ಮಂಗಳೂರನ್ನು ಹಾಸನದೊಂದಿಗೆ ಜೋಡಿಸುತ್ತದೆ. ಮಂಗಳೂರನ್ನು ಬೆಂಗಳೂರಿಗೆ ಜೋಡಿಸುವ ಬ್ರೋಡ್ ಗೇಜ್ ರೈಲ್ವೆ ಹಳಿಯು ೨೦೦೬ರ ಮೇಯಲ್ಲಿ ಸರಕು ಸಾಗಣೆಗೆ ತೆರಯಲ್ಪಟ್ಟಿತು.[೭೩] ಮಂಗಳೂರು ದಕ್ಷಿಣ ರೈಲ್ವೆಯ ಮೂಲಕ ಚೆನ್ನೈಗೂ, ಕೊಂಕಣ್ ರೈಲ್ವೆಯ ಮೂಲಕ ಮುಂಬಯಿಗೂ ಸಂಪರ್ಕವನ್ನು ಹೊಂದಿದೆ.[೭೪]
'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು ತಟ ರಕ್ಷಣಾ ಪಡೆಯ ನೆಲೆಯೂ ಆಗಿದೆ. ಈ ಕೃತಕ ಬಂದರು ಸರಕು ನಿರ್ವಹಣೆಯಲ್ಲಿ ಭಾರತದ ೯ನೇ ಅತಿ ದೊಡ್ಡ ರೇವಾಗಿದ್ದು, ಕರ್ನಾಟಕದ ಏಕಮಾತ್ರ ಬೃಹತ್ ಬಂದರಾಗಿದೆ.[೭೫]
ಬಜ್ಪೆ ಸಮೀಪದಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನಗರ ಕೇಂದ್ರದಿಂದ ಈಶಾನ್ಯಕ್ಕೆ ೨೦ ಕಿ.ಮೀ. ದೂರದಲ್ಲಿದೆ. ಇದು ಅಂತರಾಷ್ಟ್ರೀಯ ವಿಮಾನಗಳನ್ನು ನಡೆಸುವ ಕರ್ನಾಟಕದ ಎರಡನೇ ವಿಮಾನ ನಿಲ್ದಾಣವಾಗಿದೆ. ದಿನಕ್ಕೆ ಸರಾಸರಿ ೨೦ಕ್ಕಿಂತಲೂ ಹೆಚ್ಚು ವಿಮಾನಗಳು ವಾರಕ್ಕೆ ೭,೪೯೪ ಕ್ಕಿಂತಲೂ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತವೆ.[೭೬]
[ಬದಲಾಯಿಸಿ] ಸೇವಾ ಸೌಲಭ್ಯಗಳು
ಮಂಗಳೂರಿನಲ್ಲಿ ವಿದ್ಯುಚ್ಛಕ್ತಿ ಸೌಲಭ್ಯವನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನಿಯಂತ್ರಿಸುತ್ತಿದ್ದು, ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಇದರ ವಿತರಣೆಯ ಕಾರ್ಯವನ್ನು ನಿರ್ವಹಿಸುತ್ತದೆ.[೭೭][೭೮] ಬೇಸಿಗೆಯಲ್ಲಿ ಅತಿಯಾದ ವಿದ್ಯುತ್ ಬೇಡಿಕೆಯಿಂದಾಗಿ ನಿಗದಿತ ಹಾಗೂ ಅನಿಗದಿತ ವಿದ್ಯುತ್ ವ್ಯತ್ಯಯಗಳು ಮಂಗಳೂರಿನಲ್ಲಿ ಸಾಮನ್ಯವಾಗಿದೆ.[೭೯] ಪ್ರಮುಖ ಉದ್ಯಮಗಳಾದ 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್' ಹಾಗೂ 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್' ತಮ್ಮದೇ ಆದ ಸ್ವಂತ ವಿದ್ಯುತ್ ಸ್ಥಾವರಗಳನ್ನು ಹೊಂದಿವೆ.[೮೦][೮೧]
ಮಂಗಳೂರು ಮಹಾನಗರ ಪಾಲಿಕೆಯು ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತದೆ. ಮಂಗಳೂರಿನ ಸಮೀಪದ ತುಂಬೆಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿಲಾಗಿರುವ ಅಣೆಕಟ್ಟೆಯಿಂದ ನಗರದ ನೀರಿನ ಬೇಡಿಕೆಯನ್ನು ಪೂರೈಸಲಾಗುತ್ತದೆ.[೮೨][೮೩] ಮಂಗಳೂರಿನಲ್ಲಿ ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಸರಕು ವಿತರಣಾ ವ್ಯವಸ್ಥೆಯಲ್ಲಿರುವ ಸೋರಿಕೆ ಹಾಗೂ ಹಾನಿಗಳನ್ನು ಕಡಿಮೆ ಮಾಡಲು ಕರ್ನಾಟಕ ಅರ್ಬನ್ ಡೆವಲಪ್ಮೆಂಟ್ ಆಂಡ್ ಕೋಸ್ಟಲ್ ಎನ್ವೈರ್ನ್ಮೆಂಟ್ ಮ್ಯಾನೇಜ್ಮೆಂಟ್ ಪ್ರೊಜೆಕ್ಟ್ ಗುರಿನಿರತವಾಗಿದೆ. 'ಪಿಲಿಕುಳ ನಿಸರ್ಗಧಾಮ',[೮೪] ಕದ್ರಿಯಲ್ಲಿರುವ 'ಕದ್ರಿ ಉದ್ಯಾನವನ', 'ಟ್ಯಾಗೋರ್ ಪಾರ್ಕ್', ಗಾಂಧಿನಗರದಲ್ಲಿರುವ 'ಗಾಂಧಿ ಪಾರ್ಕ್',[೮೫] ನೆಹರು ಮೈದಾನದ ಸಮೀಪವಿರುವ 'ಕಾರ್ಪೋರೇಷನ್ ಬ್ಯಾಂಕ್ ಪಾರ್ಕ್' ಮಂಗಳೂರಿನಲ್ಲಿರುವ ಪ್ರಮುಖ ಉದ್ಯಾನವನಗಳು.
[ಬದಲಾಯಿಸಿ] ನಗರದ ಸುತ್ತ ಮುತ್ತ
ಮಂಗಳೂರು ನಗರದ ಸುತ್ತ ಮುತ್ತ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳಿವೆ.
- ಮಂಗಳಾದೇವಿ ದೇವಾಲಯ: ನಗರದ ಹೃದಯ ಭಾಗದಲ್ಲಿರುವ ಶ್ರೀ ಮಂಗಳಾದೇವಿ ದೇಗುಲವು ಮಂಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಮಂಗಳೂರಿಗೆ ಆ ಹೆಸರು ಬರಲು ಕಾರಣವೇ ಮಂಗಳಾದೇವಿಯ ದೇವಸ್ಥಾನ ಎಂಬ ನಂಬಿಕೆಯೂ ಇದೆ.
- ಕದ್ರಿ ದೇವಸ್ಥಾನ: ನಗರದ ಮಧ್ಯ ಭಾಗದಿಂದ ಸುಮಾರು ೫ ಕಿ.ಮೀ. ದೂರದಲ್ಲಿದೆ ಮತ್ತೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ, ಅದುವೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಇಲ್ಲಿನ ಗೋಮುಖದಿಂದ ಸದಾಕಾಲವೂ ನೀರು ಹರಿದು ಬರುತ್ತಿರುತ್ತದೆ. ಈ ನೀರಿಗೆ ಔಷಧೀಯ ಗುಣವಿರುವುದಾಗಿ ನಂಬಿಕೆಯಿದೆ. ಅಲ್ಲದೇ ಇಲ್ಲಿ "ಪಾಂಡವ ಗುಹೆ" ಎಂದು ಕರೆಯಲ್ಪಡುವ ಗುಹೆಯೊಂದಿದ್ದಿ ಮಹಾಭಾರತದ ಕಾಲದಲ್ಲಿ ಪಾಂಡವರು ಇಲ್ಲಿ ಕೆಲವು ಕಾಲ ನೆಲೆಸಿದ್ದರು ಎಂಬ ಪ್ರತೀತಿಯೂ ಇದೆ. ದೇವಾಲಯದ ಆವರಣದಲ್ಲಿರುವ ಕಲ್ಯಾಣಿಯು ದೇವಾಲಯದ ಮಟ್ಟಕಿಂತಲೂ ಎತ್ತರದಲ್ಲಿರುವುದು ಈ ದೇವಾಲಯದ ಮತ್ತೊಂದು ವಿಷೇಶವಾಗಿದೆ.
- ಸಂತ ಅಲೋಶಿಯಸ್ ಚರ್ಚ್ ಮತ್ತು ಕಾಲೇಜು: ಸಂತ ಅಲೋಶಿಯಸ್ ಚರ್ಚ್ ಮಂಗಳೂರಿನ ಹಳೆಯ ಹಾಗೂ ಸುಂದರ ಚರ್ಚಗಳಲ್ಲೊಂದು. ಚರ್ಚ್ ನ ಒಳ ಗೋಡೆ ಮತ್ತು ಮೇಲ್ಛಾವಣಿಯ ಮೇಲೆ ಬಿಡಿಸಲಾಗಿರುವ ವರ್ಣಚಿತ್ರಗಳು ಅತ್ಯಾಕರ್ಷಕವಾಗಿದ್ದು ಈ ಚರ್ಚನ್ನು ಇನ್ನಷ್ಟು ಜನಪ್ರಿಯಗೊಳಿಸಿವೆ. ಇದಕ್ಕೆ ಹೊಣ್ದಿಕೊಂಡೇ ಇರುವ ಸಂತ ಅಲೋಶಿಯಸ್ ಕಾಲೇಜು ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದು.ಇಟಲಿಯ ಕಲಾವಿದರು ಸ್ರೃಷ್ಟ್ಸಿಸಿದ ಈ ಕಲಾ ಚಿತ್ರಗಳು ಏಸುಕ್ರಿಸ್ತನ ಜೀವನ ಕಾಲದ ಪ್ರಮುಖ ಘಟನೆಗಳನ್ನು ಬಿಂಬಿಸುತ್ತವೆ.
- ನವ ಮಂಗಳೂರು ಬಂದರು:ಮಂಗಳೂರು ಕರ್ನಾಟಕದ ಪ್ರಮುಖ ಬಂದರು (ರೇವು) ಪಟ್ಟಣ. ೧೯೭೫ ರಲ್ಲಿ ಉದ್ಘಾಟನೆಗೊಂಡ ಈ ಬಂದರು ಇಂದು ಪ್ರಮುಖ ಆಮದು-ರಫ್ತು ಕೇಂದ್ರವಾಗಿ ರೂಪುಗೊಂಡಿದೆ. ದೇಶದ ೯ ನೇ ದೊಡ್ಡ ಬಂದರು ಎಂದೆನಿಸಿಕೊಂಡಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ (LPG), ಅಡಿಗೆ ಎಣ್ಣೆ, ಮರ, ಕಬ್ಬಿಣದ ಅದಿರು, ಗ್ರಾನೈಟ್ ಕಲ್ಲುಗಳು ಇಲ್ಲಿಂದ ಆಮದು-ರಫ್ತುಗೊಳ್ಳೂವ ಪ್ರಮುಖ ಸರಕುಗಳು. ಪ್ರತಿದಿನವೂ ಹಲವಾರು ಹಡಗುಗಳು ಈ ಬಂದರಿಗೆ ಬರುತ್ತವೆ. ಹಾಗಾಗಿ ಮಂಗಳೂರಿನ ನೋಡಲೇ ಬೇಕಾದ ಸ್ಥಳಗಳಲ್ಲಿ ಇದೂ ಕೂಡಾ ಒಂದಾಗಿ ಮಾರ್ಪಟ್ಟಿದೆ.
- ಉಳ್ಳಾಲ ಸಮುದ್ರ ತೀರ:ಮಂಗಳೂರಿನಿಂದ ಅನತಿ ದೂರದಲ್ಲಿರುವ ಉಳ್ಳಾಲ ತನ್ನ ಮನೋಹರ ಸಮುದ್ರ ತೀರದಿಂದಾಗಿ ಹೆಸರುವಾಸಿಯಾಗಿದೆ. ಸೋಮೇಶ್ವರ ಕಡಲ ತೀರವು ಉಲ್ಲಾಳ ದ ಸಮೀಪವೇ ಇದೆ. ಸೋಮೇಶ್ವರ ಎ೦ದು ಇಲ್ಲಿಗೆ ಹೆಸರು ಬ೦ದಿರುವುದು ಇಲ್ಲಿರುವ ಸೋಮೇಶ್ವರ ದೇವಸ್ಥಾನದಿ೦ದ. ಈ ದೇವಸ್ಥಾನದ ಆವರಣದಲ್ಲಿ ದಕ್ಷಿಣ ಕನ್ನಡ ಪ್ರದೇಶದ ಸೃಷ್ಟಿಕರ್ತರೆ೦ದು ನ೦ಬಲಾಗುವ ಪರಶುರಾಮ ಮುನಿಯ ಮೂರ್ತಿಯಿದೆ. ಬೃಹತ್ ಬ೦ಡೆಗಳನ್ನು ಹೊ೦ದಿರುವ ಈ ತೀರ ಚಲನ ಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ಪ್ರಿಯವಾದ ಜಾಗವು ಹೌದು. ಹಲವಾರು ಕನ್ನಡ ಚಿತ್ರಗಳ ಚಿತ್ರೀಕರಣ ಈ ಕಡಲ ಕಿನಾರೆಯಲ್ಲಿ ನಡೆದಿದೆ. ಇದಲ್ಲದೇ ಮಂಗಳೂರಿನ ಇತರ ಪ್ರಮುಖ ಸಮುದ್ರ ತೀರ (ಬೀಚ್) ಗಳು - ತಣ್ಣೀರು ಬಾವಿ ಮತ್ತು ಪಣಂಬೂರು.
- ಗೋಕರ್ಣನಾಥೇಶ್ವರ ದೇವಾಲಯ: ನಗರದ ಮಧ್ಯಭಾಗದಿಂದ ಕೇವಲ ೨ ಕಿ.ಮೀ. ದೂರದಲ್ಲಿರುವ ಶ್ರೀ ಗೋಕರ್ಣನಾಥೇಶರ ದೇವಾಲಯ ಈಗ್ಗೆ ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ದೇವಾಲಯ.
- ಸುರತ್ಕಲ್ ದೀಪಸ್ಥಂಭ
- ಶರವು ಮಹಾ ಗಣಪತಿ ದೇವಾಲಯ
- ಪಿಲಿಕುಲ ನಿಸರ್ಗಧಾಮ: ’ಪಿಲಿಕುಲ’ ಅ೦ದರೆ ತುಳುವಿನಲ್ಲಿ ಹುಲಿಗಳು ಆಟವಾಡುತ್ತಿದ್ದ ಕೊಳ. ಈ ನಿಸರ್ಗಧಾಮವು ಮೂಡುಶೆಡ್ಡೆ ಗ್ರಾಮದಿ೦ದ ೩ ಕಿ ಮೀ ಹಾಗು ಮ೦ಗಳೂರು ನಗರದಿ೦ದ ೧೮ ಕಿ.ಮೀ ದೂರದಲ್ಲಿದೆ. ೩೫೦ ಎಕರೆ ವಿಸ್ತೀರ್ಣದಲ್ಲಿರುವ ಈ ಧಾಮದಲ್ಲಿ ಮೃಗಾಲಯ, ಸಸ್ಯ ತೋಟ, ಮಾನಸ ವಾಟರ್ ಪಾರ್ಕ್ ಪ್ರಮುಖ ಆಕರ್ಷಣೆಗಳಾಗಿವೆ.ಮ೦ಗಳೂರಿನಿ೦ದ ಮೂಡಬಿದರೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ ರಲ್ಲಿ ಈ ತಾಣವಿದೆ.
[ಬದಲಾಯಿಸಿ] ಸಹ ನಗರ
ಮಂಗಳೂರು ಒಂದು ಸಹನಗರ(Sister City)ವನ್ನು ಹೊಂದಿದೆ.
[ಬದಲಾಯಿಸಿ] ಚಿತ್ರಶಾಲೆ
[ಬದಲಾಯಿಸಿ] ಉಲ್ಲೇಖಗಳು
- ↑ Central Excise and Service Tax Location Code (Areas Under the Range West of Mangalore-II DVN (610201). Central Board of Excise & Customs. ಮರುಕಳಿಸಿದ ದಿನಾಂಕ 2008-07-05.
- ↑ STD Codes for cities in Karnataka. Bharat Sanchar Nigam Limited (BSNL). ಮರುಕಳಿಸಿದ ದಿನಾಂಕ 2008-07-06.
- ↑ List of RTOs. AICDA (All India Car Dealers Association). ಮರುಕಳಿಸಿದ ದಿನಾಂಕ 2008-04-08.
- ↑ "CNC India Fund Summary". CNC India Fund I Periodical 1 (1): 2. Retrieved on 2008-07-04.
- ↑ Savitha Suresh Babu. "Tiles for style", The Hindu, 2007-02-17. Retrieved on 2008-04-05.
- ↑ City of Mangalore. Mangalore City Corporation. ಮರುಕಳಿಸಿದ ದಿನಾಂಕ 2007-08-03.
- ↑ Lakshmi Sharath. "Filled with lore", The Hindu, 2008-01-21. Retrieved on 2007-07-21.
- ↑ J. Kamath. "Where rocks tell a tale", The Hindu Business Line, 2002-09-16. Retrieved on 2008-07-08.
- ↑ Maxwell Pereira. "We the Mangaloreans", Indian Express Newspapers (Bombay) Ltd., 1999-05-03. Retrieved on 2008-07-08.
- ↑ Dr. Jyotsna Kamat. Abbakka the Brave Queen (C 1540-1625 CE). Kamat's Potpourri. ಮರುಕಳಿಸಿದ ದಿನಾಂಕ 2008-07-08.
- ↑ Treaty of Mangalore between Tipu Sultan and the East India Company, 11 March 1784. Missouri Southern State University. ಮರುಕಳಿಸಿದ ದಿನಾಂಕ 2008-03-19.
- ↑ John B. Monteiro. Mangalore: Comtrust Carries On Basel’s Mission. Daijiworld Media Pvt Ltd Mangalore. ಮರುಕಳಿಸಿದ ದಿನಾಂಕ 2008-03-21.
- ↑ "Mangalore was once the starting point of India’s longest rail route", The Hindu, 2007-10-29. Retrieved on 2008-03-19.
- ↑ Rainfall Stations in India. Indian Institute of Tropical Meteorology (Pune). ಮರುಕಳಿಸಿದ ದಿನಾಂಕ 2008-07-27.
- ↑ Seismic zoning map of India (GIF). Geological Survey of India. ಮರುಕಳಿಸಿದ ದಿನಾಂಕ 2008-07-20.
- ↑ Seismic Zoning Map. India Meteorological Department. ಮರುಕಳಿಸಿದ ದಿನಾಂಕ 2008-07-20.
- ↑ Western Ghats (sub cluster nomination). UNESCO World Heritage Centre. ಮರುಕಳಿಸಿದ ದಿನಾಂಕ 2008-07-27.
- ↑ South Scan (Mangalore, Karnataka). CMP Media LLC. ಮರುಕಳಿಸಿದ ದಿನಾಂಕ 2008-03-20.
- ↑ "Mangalore takes over as the new SEZ destination", Times Internet Limited, 2008-02-17. Retrieved on 2008-03-20.
- ↑ Neeri. Study Area around SEZ, Mangalore (DOC). Mangalore City Corporation. ಮರುಕಳಿಸಿದ ದಿನಾಂಕ 2008-07-02.
- ↑ Neeri. Proposed MSEZ Site and Existing Industries (DOC). Mangalore City Corporation. ಮರುಕಳಿಸಿದ ದಿನಾಂಕ 2008-04-09.
- ↑ "Two more plans for EPIP cleared", The Hindu, 2006-08-31. Retrieved on 2006-09-29.
- ↑ "Strategic oil reserves to come directly under Govt", The Hindu Business Line, 2006-04-02. Retrieved on 2008-02-20.
- ↑ "Strategic crude reserve gets nod", The Hindu, 2006-01-07. Retrieved on 2008-02-20.
- ↑ "India to form crude oil reserve of 5 mmt", The Economic Times, 2007-06-20. Retrieved on 2008-02-20.
- ↑ History. Corporation Bank. ಮರುಕಳಿಸಿದ ದಿನಾಂಕ 2008-04-18.
- ↑ Cheque truncation process from April, says Leeladhar. The Hindu. ಮರುಕಳಿಸಿದ ದಿನಾಂಕ 2008-04-18.
- ↑ Inception. Vijaya Bank. ಮರುಕಳಿಸಿದ ದಿನಾಂಕ 2008-07-09.
- ↑ History. Karnataka Bank. ಮರುಕಳಿಸಿದ ದಿನಾಂಕ 2008-04-18.
- ↑ Population of Corporation/CMC/TMC/TP (Population 2001 Census). Directorate of Municipal Administration, Bangalore. ಮರುಕಳಿಸಿದ ದಿನಾಂಕ 2008-04-16.
- ↑ Census of India 2001: Data from the 2001 Census, including cities, villages and towns. (Provisional). Census Commission of India. Archived from the original on 2006-12-15. ಮರುಕಳಿಸಿದ ದಿನಾಂಕ 2007-09-03.
- ↑ India: largest cities and towns and statistics of their population. World Gazetteer. ಮರುಕಳಿಸಿದ ದಿನಾಂಕ 2008-01-31.
- ↑ India: metropolitan areas. World Gazetteer. ಮರುಕಳಿಸಿದ ದಿನಾಂಕ 2008-01-16.
- ↑ Growing number of slums in Mangalore a cause for concern. The Hindu (2006-04-08). ಮರುಕಳಿಸಿದ ದಿನಾಂಕ 2008-03-14.
- ↑ Slums mushrooming in port city. The Hindu (2006-01-21). ಮರುಕಳಿಸಿದ ದಿನಾಂಕ 2008-03-14.
- ↑ "Srimanthi Bai Museum is in a shambles", The Hindu, 2006-07-07. Retrieved on 2008-01-21.
- ↑ Ganesh Prabhu. "Enduring art", The Hindu, 2004-01-10. Retrieved on 2008-07-20.
- ↑ "Human `tigers' face threat to health", The Times of India, 2001-10-26. Retrieved on 2007-12-07.
- ↑ Stephen D'Souza. What's in a Name?. Daijiworld Media Pvt Ltd Mangalore. ಮರುಕಳಿಸಿದ ದಿನಾಂಕ 2008-03-04.
- ↑ "Colours of the season", The Hindu, 2006-12-09. Retrieved on 2008-07-09.
- ↑ Nagarapanchami Naadige Doddadu. Mangalorean.Com. ಮರುಕಳಿಸಿದ ದಿನಾಂಕ 2008-01-28.
- ↑ "Beary Sahitya Academy set up", The Hindu, 2007-10-13. Retrieved on 2008-01-15.
- ↑ Shree Venkatramana Temple (Car Street, Mangalore). Shree Venkatramana Temple, Mangalore. ಮರುಕಳಿಸಿದ ದಿನಾಂಕ 2008-07-25.
- ↑ Rajanikanth Shenoy. Colourful Kodial Theru. Mangalorean.Com. ಮರುಕಳಿಸಿದ ದಿನಾಂಕ 2008-07-09.
- ↑ John B. Monteiro. Monti Fest Originated at Farangipet – 240 Years Ago!. Daijiworld Media Pvt Ltd Mangalore. ಮರುಕಳಿಸಿದ ದಿನಾಂಕ 2008-01-11.
- ↑ Amrita Nayak. "Food for thought", The Hindu, 2007-11-24. Retrieved on 2008-01-18.
- ↑ "`Mosaru Kudike' brings in communal harmony", The Hindu, 2005-08-28. Retrieved on 2008-02-22.
- ↑ "Typically home", The Hindu, 2007-08-11. Retrieved on 2008-07-09.
- ↑ "Ganesh Hosabettu is MCC mayor", The New Indian Express, 2008-02-22. Retrieved on 2008-04-08.
- ↑ "Hosabettu is Mangalore Mayor", The Hindu, 2008-02-22. Retrieved on 2008-07-23.
- ↑ "Sathish Kumar takes charge as Dakshina Kannada SP", Deccan Herald, 2007-06-26. Retrieved on 2008-08-13.
- ↑ "New Assembly constituencies", Daijiworld Media Pvt Ltd Mangalore, 2007-07-14. Retrieved on 2007-09-22.
- ↑ "Assembly constituencies proposed by Delimitation Commission", The Hindu, 2006-05-05. Retrieved on 2007-09-22.
- ↑ `Use Kannada script to teach Tulu now'. The Hindu (2005-06-22). ಮರುಕಳಿಸಿದ ದಿನಾಂಕ 2008-01-31.
- ↑ Ronald Anil Fernandes, Naina J A, Bhakti V Hegde, Aabha Raveendran, Sibanthi Padmanabha K V and Sushma P Mayya. "Sixty and still enterprising...", Deccan Herald, 2007-08-15. Retrieved on 2008-07-01.
- ↑ Details of Mangalore University. Mangalore University. ಮರುಕಳಿಸಿದ ದಿನಾಂಕ 2008-03-21.
- ↑ "Minister keen on improving sports infrastructure", The Hindu, 2006-08-07. Retrieved on 2008-02-18.
- ↑ Recent Tournaments. United Karnataka Chess Association. ಮರುಕಳಿಸಿದ ದಿನಾಂಕ 2008-07-22.
- ↑ Mangalore: All India Fide Rated Open Chess Tournament takes off. Mangalorean.Com. ಮರುಕಳಿಸಿದ ದಿನಾಂಕ 2008-07-25.
- ↑ All India chess tourney in Mangalore from July 19. Mangalorean.Com. ಮರುಕಳಿಸಿದ ದಿನಾಂಕ 2008-07-25.
- ↑ "'Madipu' literary competitions", Deccan Herald, 2007-07-19. Retrieved on 2008-01-18.
- ↑ "Herr Kannada", Deccan Herald, 2004-01-18. Retrieved on 2008-01-18.
- ↑ Mangalore: Channel V4 to offer Conditional Access system. Mangalorean.Com. ಮರುಕಳಿಸಿದ ದಿನಾಂಕ 2008-01-24.
- ↑ "Good response for DTH in Mangalore", The Hindu, 2005-03-19. Retrieved on 2008-01-21.
- ↑ "BIG FM Launches Station in Mangalore", Media Newsline, 2007-12-05. Retrieved on 2008-07-05.
- ↑ Govind D. Belgaumkar (2007-11-23). It’s time to swing to hits from FM channels. The Hindu. ಮರುಕಳಿಸಿದ ದಿನಾಂಕ 2008-07-05.
- ↑ "Tulu film festival", The Hindu, 2006-02-23. Retrieved on 2008-01-19.
- ↑ NH wise Details of NH in respect of Stretches entrusted to NHAI (PDF). National Highways Authority of India (NHAI). ಮರುಕಳಿಸಿದ ದಿನಾಂಕ 2008-07-04.
- ↑ "4-lane road project in Mangalore likely to be completed in 30 months", The Hindu Business Line, 2005-10-07. Retrieved on 2006-10-13.
- ↑ Profile of KSRTC. Karnataka State Road Transport Corporation (KSRTC). ಮರುಕಳಿಸಿದ ದಿನಾಂಕ 2008-07-04.
- ↑ "Transport operators in district vie for routes", The Hindu, 2006-03-06. Retrieved on 2008-06-16.
- ↑ "Name changed", The Hindu, 2007-11-08. Retrieved on 2008-07-05.
- ↑ "Mangalore -Hassan rail line open for freight traffic", The Hindu Business Line, 2006-05-06. Retrieved on 2006-10-13.
- ↑ The Beginning (PDF). Konkan Railway Corporation Limited. ಮರುಕಳಿಸಿದ ದಿನಾಂಕ 2008-04-16.
- ↑ New Mangalore Port Trust (NMPT). New Mangalore Port. ಮರುಕಳಿಸಿದ ದಿನಾಂಕ 2006-10-13.
- ↑ "Intl services begin at Mangalore airport", The Hindu Business Line, 2006-10-04. Retrieved on 2008-02-21.
- ↑ About Us. Karnataka Power Transmission Corporation Limited (KPTCL). ಮರುಕಳಿಸಿದ ದಿನಾಂಕ 2008-07-03.
- ↑ About Us. Mangalore Electricity Supply Company (MESCOM). ಮರುಕಳಿಸಿದ ದಿನಾಂಕ 2008-04-03.
- ↑ "Unscheduled load-shedding may be inevitable: Mescom", The Hindu Business Line, 2003-02-05. Retrieved on 2008-07-03.
- ↑ Mangalore Refinery and Petrochemicals Ltd. (A Subsidiary of Oil and Natural gas Corporation Ltd.) (PDF). Mangalore Refinery and Petrochemicals (MRPL). ಮರುಕಳಿಸಿದ ದಿನಾಂಕ 2008-07-03.
- ↑ Infrastructure. Mangalore Chemicals & Fertilizers (MCF). ಮರುಕಳಿಸಿದ ದಿನಾಂಕ 2008-07-03.
- ↑ "No funds crunch to tackle water scarcity in Dakshina Kannada", The Hindu Business Line, 2005-04-21. Retrieved on 2008-04-05.
- ↑ "Karnataka Coastal Project" (October – December 2004): 1. Retrieved on 2008-07-27.
- ↑ About Place. Pilikula Nisargadhama. ಮರುಕಳಿಸಿದ ದಿನಾಂಕ 2008-07-03.
- ↑ "Gandhi Nagar park gets a new lease of life", The Times of India, 2003-09-07. Retrieved on 2008-03-26.
- ↑ Hamilton's Sister Cities. myhamilton.ca — Hamilton, Ontario, Canada. ಮರುಕಳಿಸಿದ ದಿನಾಂಕ 2007-12-07.