ಸಹೃದಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಹೃದಯ : (ಓದುಗ) ಭಾರತೀಯ ಕಾವ್ಯಮೀಮಾಂಸೆಯ ಒಂದು ಪ್ರಮುಖ ಪರಿಕಲ್ಪನೆ.[೧] ಕವಿಹೃದಯಕ್ಕೆ ಸಮಾನವಾದ ಹೃದಯವುಳ್ಳವನು ಸಹೃದಯ. ಕಾವ್ಯವನ್ನು ಓದುವಾಗ, ಕವಿಯ ಹೃದಯದೊಂದಿಗೆ ಇವನ ಹೃದಯವೂ ಸಮಾನವಾಗಿ ಮಿಡಿಯುತ್ತದೆ. ಇವನು ಕವಿಯ ಇಂಗಿತ, ಆಶಯಗಳನ್ನು ಸಹಾನುಭೂತಿಯಿಂದ ಅರಿತು ಕವಿಯ ಅನುಭವಗಳನ್ನು ತನ್ನದಾಗಿಸಿಕೊಳ್ಳುತ್ತಾನೆ.

ಕವಿ-ಸಹೃದಯ ಸಂಬಂಧ[ಬದಲಾಯಿಸಿ]

ಲೋಕ ವ್ಯಾಪಾರದಲ್ಲಿ ಸೌಂದರ್ಯಾನುಭವ ಹೊಂದಿ ತನ್ನ ವಿಶಿಷ್ಟ ಶಕ್ತಿಯಿಂದ ಕವಿಯು ಕೃತಿಯನ್ನು ರಚಿಸಿದರೆ ಅದು ಅರ್ಧ ಭಾಗದ ಕೆಲಸವಷ್ಟೇ ಆಗುತ್ತದೆ. ತೀವ್ರವಾದ ಆತನ ಅನುಭವಗಳು ಅನ್ಯಹೃದಯವೇದ್ಯವಾದಾಗ ಮಾತ್ರ ಅವನ ಕಾರ್ಯ ಪೂರ್ಣರೂಪ ಪಡೆದಂತೆ. ಇದು ಕವಿಯ ಮೂಲಭೂತ ಬಯಕೆ. ಕಾವ್ಯವನ್ನು ಓದಿ ಆ ಅನುಭವದ ಸುಖವನ್ನು ಪಡೆಯುವವರೇ ಇಲ್ಲದಿದ್ದರೆ ಆತನ ಕೃತಿ ವ್ಯರ್ಥ. ಕಟ್ಟಿಯುಮೇನೊ ಮಾಲೆಗಾರನ ಪೊಸಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿಪೋಗದೆ ಎಂದು ಕನ್ನಡ ಕವಿ ಜನ್ನ ಹೇಳಿದ್ದಾನೆ. ಕವಿ ಕಾವ್ಯದಲ್ಲಿ ಒಡಮೂಡಿಸಿದ ಸೌಂದರ್ಯಾನುಭವವನ್ನು ಕಾವ್ಯದ ಮೂಲಕ ಏರಿ ಸಹೃದಯ ಮುಟ್ಟುತ್ತಾನೆ. ಅಭಿನವಗುಪ್ತನ ಪ್ರಕಾರ ಕಾವ್ಯವರ್ತುಲದ ಪೂರ್ಣತೆಯಲ್ಲಿ ಕವಿ ಹೇಗೋಹಾಗೆ ಸಹೃದಯನೂ ಪ್ರಧಾನ ಕೊಂಡಿಯಾಗಿದ್ದಾನೆ. ಕಾವ್ಯಮೀಮಾಂಸಕರು ಕವಿಗೆ ಹೇಳಿರುವಂತೆಯೇ ಸಹೃದಯನಿಗೂ ಕೆಲವು ಲಕ್ಷಣಗಳನ್ನು ಹೇಳಿದ್ದಾರೆ. ಇವುಗಳಲ್ಲಿ ಅತ್ಯಂತ ಗಮನೀಯವಾದದ್ದು ಅಭಿನವಗುಪ್ತನದು: ಯೇಷಾಂ ಕಾವ್ಯಾನುಶೀಲನಾಭ್ಯಾಸವಶಾತ್ ವಿಶದೀಭೂತೇ ಮನೋಮುಕುರೇ ವರ್ಣನೀಯ ತನ್ಮಯೀ ಭವನ ಯೋಗ್ಯತಾ ತೇ ಸ್ವಹೃದಯ ಸಂವಾದಭಾಜಃ ಸಹೃದಯಾಃ. ಅಂದರೆ ಕಾವ್ಯಾಭ್ಯಾಸದಿಂದ ಮನಸ್ಸೆಂಬ ಕನ್ನಡಿಯು ನಿರ್ಮಲವಾಗಿ ವರ್ಣನೀಯ ವಿಷಯದಲ್ಲಿ ತನ್ಮಯವಾಗುವ ಯೋಗ್ಯತೆ ಯಾರಿಗಿದೆಯೋ ಅವರೇ ಕವಿಹೃದಯಕ್ಕೆ ಸಮಾನ ಹೃದಯಸಂವಾದವುಳ್ಳ ಸಹೃದಯರು.

ಕವಿಪ್ರತಿಭೆ ಮತ್ತು ಸಹೃದಯ[ಬದಲಾಯಿಸಿ]

ಹೀಗೆ ಕವಿಪ್ರತಿಭೆ ಸೌಂದರ್ಯಾನುಭವವನ್ನು ಕೃತಿಯಲ್ಲಿ ಮೂರ್ತಗೊಳಿಸಿದ್ದನ್ನು ಕೃತಿಯ ಮೂಲಕ ತನ್ನ ಅನುಭವವಾಗಿಸಿಕೊಳ್ಳುವ ಇವನಿಗೂ (ಸಹೃದಯ) ಪ್ರತಿಭೆ ಅಗತ್ಯ. ಕವಿಯ ಸೂಕ್ಷ್ಮಾನುಭವಗಳು ಸೂಚ್ಯವಾಗಿ ಧ್ವನಿಪೂರ್ಣ ಶಬ್ದಗಳಲ್ಲಿ ಅಡಕಗೊಂಡಿರುತ್ತವೆ. ಆ ಮಾತುಗಳ ಶಕ್ತಿಯಿಂದ ಅನುಭವದ ಅನೇಕ ಪದರುಗಳನ್ನು ಗುರುತಿಸುವ ಇವನ ಆಸ್ವಾದನ ಕ್ರಿಯೆಯೂ ಸೃಷ್ಟಿಕ್ರಿಯೆಯಂತೆ ವಿಶಿಷ್ಟ ಶಕ್ತಿಯಿಂದ ಮಾತ್ರವೇ ಸಾಧ್ಯ ಎಂಬುದನ್ನು ಆನಂದವರ್ಧನ ಒತ್ತಿ ಹೇಳಿದ್ದಾನೆ. ಈ ಶಕ್ತಿಯನ್ನು ಅಭಿನವಗುಪ್ತ ಪ್ರತಿಭಾನ ಎಂದು ಗುರುತಿಸುತ್ತಾನೆ. ಕವಿಪ್ರತಿಭೆಗೆ ಸಮಾನವಲ್ಲದಿದ್ದರೂ ಇದು ಸಹೃದಯನ ಆಸ್ವಾದನ ಸಾಮಥ್ರ್ಯಕ್ಕೆ ಸಹಾಯವಾದ ಅನುಸೃಷ್ಟಿಶೀಲ ಪ್ರತಿಭೆ ಎನಿಸಿಕೊಳ್ಳುತ್ತದೆ. ರಾಜಶೇಖರನೆಂಬ ಕಾವ್ಯ ಮೀಮಾಂಸಕ ಈ ಎರಡೂ ರೀತಿಯ ಪ್ರತಿಭೆಗಳನ್ನು ಗುರುತಿಸಿ ಕವಿಪ್ರತಿಭೆಯನ್ನು ಕಾರಯಿತ್ರೀ ಎಂದೂ ಸಹೃದಯನ ಪ್ರತಿಭೆಯನ್ನು ಭಾವಯಿತ್ರೀ ಎಂದೂ ಕರೆದಿದ್ದಾನೆ. ಪಾಶ್ಚಾತ್ಯ ಮೀಮಾಂಸಕರು ಕೊಡುವ ಓದುಗನ ಪರಿಕಲ್ಪನೆಯೂ ಸಹೃದಯ ಪರಿಕಲ್ಪನೆಗೆ ಸಂವಾದಿಯಾಗಿದೆ. *

ಮೀಮಾಂಸಕರ ಅಭಿಪ್ರಾಯ[ಬದಲಾಯಿಸಿ]

ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯಲ್ಲಿ ಸಹೃದಯನಿಗೆ ಸಂಬಂಧಿಸಿದಂತೆ ಕೆಲವು ವಿವರಣೆಗಳು ಅಲ್ಲಲ್ಲಿ ದೊರೆಯುತ್ತವಾದರೂ ಭಾರತೀಯ ಕಾವ್ಯಮೀಮಾಂಸಕರು ಕೊಟ್ಟಿರುವಂತಹ ವಿಶೇಷ ಅರ್ಥ, ಆಳ, ವಿಸ್ತಾರಗಳು ಅಲ್ಲಿಲ್ಲ. ಜಾನ್‍ಡ್ಯೂಯಿ ಹೇಳಿರುವ ದ ಸೆನ್ಸಿಟೀವ್ ರೀಡರ್ ಈಸ್ ಲೈಕ್ ಹಾರ್ಟ್ ವಿತ್ ದ ಪೊಯೆಟ್ ಎಂಬ ಮಾತಿನಲ್ಲಿ ತನ್ಮಯೀಭವನ ಯೋಗ್ಯತೆಯ ಅಂಶ ಎದ್ದು ಕಾಣುತ್ತದೆ. ದ ರೀಡರ್ ದ ಪೊಯೆಮ್ ಮಸ್ಟ್ ಇನ್ ಟು ಎ ಕಾಂಪ್ಲಿಮೆಂಟರಿ ಟ್ರ್ಯಾನ್ಸ್ ಹಿ ಈಸ್ ಟು ಅಪ್ರಿಷಿಯೇಟ್ ಇಟ್ಸ್ ಫುಲ್ ಮೀನಿಂಗ್ ಎಂದು ಹೇಳುವ ರಾಬರ್ಟ್ ಗ್ರೇವ್ಸ್‍ನ ಮಾತುಗಳಲ್ಲಿ ಅಭಿನವಗುಪ್ತ ಹೇಳಿರುವ ಹೃದಯ ಸಂವಾದದ ಅರ್ಥಕಲ್ಪನೆ ಅಡಗಿರುವಂತಿದೆ. ಈ ರೀತಿಯಲ್ಲಿ ಸಹೃದಯನಿಗೆ ಸಂಬಂಧಿಸಿದ ಕೆಲವು ಪಾಶ್ಚಾತ್ಯ ವಿಚಾರಗಳು ಭಾರತೀಯ ಕಾವ್ಯಮೀಮಾಂಸೆಯ ವಿಚಾರಗಳಿಗೆ ಪೂರಕವಾಗಿರುವುದನ್ನು ಗುರುತಿಸಬಹುದು.

ಉಲ್ಲೇಖ[ಬದಲಾಯಿಸಿ]

  1. ತೀ.ನಂ.ಶ್ರೀಕಂಠಯ್ಯ, ೧೯೫೨. ಭಾರತೀಯ ಕಾವ್ಯ ಮೀಮಾಂಸೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಸಹೃದಯ&oldid=913005" ಇಂದ ಪಡೆಯಲ್ಪಟ್ಟಿದೆ