ಕವಿಸಮಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಮೊಟ್ಟಮೊದಲ ಬಾರಿಗೆ ರಾಜಶೇಖರನು ಕವಿಸಮಯ ಪರಿಕಲ್ಪನೆಯನ್ನು ರೂಪಿಸಿದನು.ಕವಿಗಳು ತಮ್ಮ ಕಲ್ಪನಾ ವಿಲಾಸವನ್ನು ಪ್ರದರ್ಶಿಸುವುದಕ್ಕಾಗಿ ಲೋಕಪ್ರಸಿದ್ಧವೂ ಶಾಸ್ತ್ರಸಂಗತವೂ ಅಲ್ಲದ ಕೆಲವು ವಿಷಯಗಳನ್ನು ಊಹಿಸಿಕೊಂಡು ಪಾರಂಪರ್ಯವಾಗಿ ಪ್ರಯೋಗಿಸುತ್ತ ಬಂದಿದ್ದಾರೆ. ಇದನ್ನೇ ಕವಿಸಮಯ, ಕವಿ ಸಂಪ್ರದಾಯ, ಕವಿಗಳ ಮಾಮೂಲು ಪದ್ಧತಿ ಎನ್ನುವರು.

ಎಲ್ಲ ಬಗೆಯ ಕವಿಸಮಯಗಳೂ ಕವಿಕಲ್ಪನೆಯ ಮೂಸೆಯಲ್ಲಿ ಪುಟಗೊಂಡು ನೂರಾರು ಅಲಂಕಾರಗಳಿಗೆ ಆಶ್ರಯವಾಗಿ ಕಾವ್ಯದಲ್ಲಿ ಸೌಂದರ್ಯದಾಯಕವಾಗುತ್ತವೆ. ಕವಿಯಾದವ ಪೂರ್ವಕವಿ ಪ್ರಯುಕ್ತವಾದ ಈ ಬಗೆಯ ಕವಿ ಸಮಯಗಳನ್ನು ಪರಿಚಯ ಮಾಡಿಕೊಳ್ಳಬೇಕೆಂಬುದೂ ಕವಿಶಿಕ್ಷಣದ ವಿಷಯಗಳಲ್ಲೊಂದು.

ಕವಿಸಮಯಗಳ ಸೂಚನೆ ವಾಮನನ ಗ್ರಂಥದಲ್ಲಿ ಬಂದರೂ ಇದನ್ನು ವಿವರವಾಗಿ ನಿರೂಪಿಸಿದ ಕೀರ್ತಿ ರಾಜಶೇಖರನದು. ಆತನ ಕಾವ್ಯಮೀಮಾಂಸೆಯನ್ನು ಅನುಸರಿಸಿಯೇ ಸಂಸ್ಕೃತದಲ್ಲಿ ಹೇಮಚಂದ್ರ, ಕನ್ನಡದಲ್ಲಿ ನಾಗವರ್ಮ ಮುಂತಾದವರು ತಂತಮ್ಮ ಗ್ರಂಥಗಳಲ್ಲಿ ಕವಿಸಮಯದ ಬಗ್ಗೆ ಬರೆದಿದ್ದಾರೆ. ಆದರೆ ವಾಲ್ಮೀಕಿಯಲ್ಲೇ ಎಷ್ಟೋ ಕವಿ ಸಮಯಗಳನ್ನು ಕಾಣಬಹುದಾಗಿದೆ.

ಕವಿಸಮಯದ ಬಗೆಗಳು[ಬದಲಾಯಿಸಿ]

  1. ಅಸದಾಖ್ಯತಿ.
  2. ಸದಕೀರ್ತನ.
  3. ನಿಯಮ.
  4. ಐಕ್ಯ.

ಅಮೂರ್ತ ಭಾವನೆಗಳಿಗೆ ಮೂರ್ತಸ್ವರೂಪ ಕೊಡುವುದು ಒಂದು ಬಗೆಯ ಕವಿಸಮಯ.
೧. ಅಸದಾಖ್ಯಾತಿ ಉದಾಹರಣೆ_ ಚಕೋರವು ಬೆಳುದಿಂಗಳನ್ನು ಕುಡಿಯುವುದೆಂದೂ. ಕೀರ್ತಿ ಬೆಳ್ಳೂಗೂ ಅಪಕೀರ್ತಿ ಕಪ್ಪಗೂ ಇರುವುದೆಂದೂ. ಚಾತಕ ಪಕ್ಷಿಗಳು ಮಳೆಯ ಹನಿಯನ್ನು ಕುಡಿಯುತ್ತವೆಂಬ ಕಲ್ಪನೆ, ನೀರಿದ್ದ ಕಡೆಯಲ್ಲೆಲ್ಲ ಹಂಸಗಳಿರುತ್ತವೆ. ಸೂಜಿಯಿಂದ ಚುಚ್ಚುಲಾಗದಷ್ಟು ಗೆಟ್ಟಿಯಾಗಿ ಅದು ಹೆಪ್ಪುಗಟ್ಟಿದೆ ಎಂದು ಬಣ್ಣಿಸುವುದು.

೨. ಸದಕೀರ್ತನ ಉದಾಹರಣೆ _ ಅಶೋಕ ವೃಕ್ಷದಲ್ಲಿ ಹಣ್ಣುಗಳಿಲ್ಲ ಎನ್ನುವುದು.ಗಂಧದ ಮರದಲ್ಲಿ ಹೂಹಣ್ಣುಗಳಿಲ್ಲವೆಂದು ಹೇಳುವುದು.ಶುಕ್ಲಪಕ್ಷದಲ್ಲಿ ಕತ್ತಲು ಇಲ್ಲವೇ ಇಲ್ಲವೆನ್ನುವುದು.

೩. ನಿಯಮ ಉದಾಹರಣೆ _ ಮುತ್ತುಗಳು ತಾಮ್ರಪರ್ಣಿಯಲ್ಲಿ ಮಾತ್ರ ದೊರೆಯುವುದೆಂದು. ನದಿಗಳಲ್ಲಿ ಹಂಸಗಳು, ತಾವರೆ, ಕನ್ನೈದಿಲೆ ಹೂಗಳು ಮುಂತಾದವು ಇವೆಯೆಂದು ವರ್ಣಿಸುವುದು. ಬೆಟ್ಟಗಳಲ್ಲಿ ನಾನಾಬಗೆಯ ರತ್ನಗಳಿವೆ ಎಂಬ ಕಲ್ಪನೆ, ಸಮುದ್ರಗಳಲ್ಲಿ ಮುತ್ತು ರತ್ನಗಳಿವೆ ಎಂಬ ವರ್ಣನೆ ಮುಂತಾದುವು ಪ್ರಕೃತಿವರ್ಣನೆಗೆ ಅಲೌಕಿಕ ಸೌಂದರ್ಯವನ್ನು ಚೆಲುವನ್ನು ಕೊಡತಕ್ಕಂಥವು.

ಇದೇ ರೀತಿ ವರ್ಣನಾಸೌಕರ್ಯಕ್ಕಾಗಿ ಮಲಯಪರ್ವತದಲ್ಲಿ ಮಾತ್ರ ಶ್ರೀಗಂಧವಿರುವುದೆಂದೂ, ಕನ್ನೈದಿಲೆ ರಾತ್ರಿ ಮಾತ್ರ ಅರಳುವುದೆಂದೂ, ಕೋಗಿಲೆ ವಸಂತದಲ್ಲಿ ಮಾತ್ರ ಕೂಗುತ್ತವೆನ್ನುವುದು.
೪. ಐಕ್ಯಉದಾಹರಣಿ _ ದೈತ್ಯ-ದಾನವರು ಒಂದೇ ಎಂಬುದು.

ಉಲ್ಲೇಖಗಳು[ಬದಲಾಯಿಸಿ]

*

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕವಿಸಮಯ&oldid=1024372" ಇಂದ ಪಡೆಯಲ್ಪಟ್ಟಿದೆ