ಒಡ್ಡರು / ಭೋವಿ ಜನಾಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

{|ಓಡ್ / ಒಡ್ಡರ್/ವಡ್ಡರ್ , ಒಡೆಯರಾಜುಲು, ಓಡ್_ರಜಪೂತ್ }

ಒಡ್ಡರ ಜನಾಂಗದ ಇತಿಹಾಸ

ಪ್ರಾಚೀನತೆ ಮತ್ತು ಜನ ಬಾಹುಳ್ಯ[ಬದಲಾಯಿಸಿ]

ಭಾರತ ದೇಶ ಹಲವು ಧರ್ಮ, ಜಾತಿ-ಜನಾಂಗ-ಪಂಗಡಗಳನ್ನು ತನ್ನ ತೆಕ್ಕೆಯಲ್ಲಿ ಪೋಷಿಸುತ್ತ ಬಂದಿದೆ. ವಿಭಿನ್ನತೆಯಲ್ಲಿ ಏಕತೆಯನ್ನು ಪಡೆದ ನಮ್ಮ ದೇಶ ’ಸರ್ವಜನಾಂಗದ ಶಾಂತಿಯ ತೋಟ’ವಾಗಿ ಬದುಕಿಗೆ ನೆಮ್ಮದಿಯನ್ನು ನೀಡಿದರೆ ’ರಸಿಕರ ಕಂಗಳನ್ನು ಸೆಳೆದು ಸವಿಯ ಸುಂದರ ನೋಟ’ವನ್ನು ಕೊಟ್ಟು ಮನಸ್ಸಿಗೆ ತೃಪ್ತಿ ಕೊಡುತ್ತದೆ. ಈ ದಿಸೆಯಲ್ಲಿ ಹೊರಟಾಗ ಪ್ರಾಕೃತಿಕ ಸೌಂದರ್ಯದೊಡನೆ ಮಾನವ ನಿರ್ಮಿತ ಅದ್ಭುತ ಕಲಾಪ್ರಪಂಚವು ನಮ್ಮನ್ನು ಕೈಬೀಸಿ ಕರೆಯುತ್ತದೆ. ಇಂಥ ಕಲೆಗಳಲ್ಲಿ ಶಿಲ್ಪಕಲೆಯು ಅಜರಾಮರವಾದುದು. ಸಾವಿರಾರು ವರ್ಷಗಳಿಂದ ಮಾನವ ಇತಿಹಾಸಕ್ಕೆ ಸಾಕ್ಷಿಯಾಗಿ ನಿಲ್ಲುವ ಶಿಲೆ ಮತ್ತು ಶಿಲ್ಪಕಲೆಯ ಜಗತ್ತು ಅನನ್ಯವಾದುದು. ಅನಾಮಧೇಯ ಕೈಗಳ ಕರಾಮತ್ತು, ಅವುಗಳ ಹಿಂದಿನ ಕಥೆಯ ಜೀವನಗಾಥೆಗೆ ಪುರಾವೆ ನೀಡುವವರು ಒಡ್ಡರ/ವಡ್ಡರ ಮೂಲತಃ ಸೂರ್ಯ ವಂಶದ ಕ್ಷತ್ರಿಯ ಜನಾಂಗದವರು. ಯಾವುದೇ ಬುಡಕಟ್ಟು ಜನಾಂಗಕ್ಕೆ ಸೇರಿದವರಲ್ಲ ಈ ಜನಾಂಗವು ಮೂಲತಃ ಕ್ಷತ್ರಿಯರು ಮತ್ತು ಶಿಲ್ಪಿಗಳು. ಸೂರ್ಯ ವಂಶದ ಸಗರ ಚಕ್ರವರ್ತಿಯ ಆರಾಧಕರು ಗಜಪತಿರಾಜರು ಓಡ್_ರಜಪೂತ್, ಒಡೆಯರಾಜರು ಎಂದು ,ಇವರ ಪ್ರಾಚೀನತೆಯು ನಿಖರವಾಗಿ ತಿಳಿಯುತ್ತದೆ . ಡಾ. ಶಿವರಾಮ ಕಾರಂತರು ’ಕಲಾ ಪ್ರಪಂಚ’ದಲ್ಲಿ ಉಲ್ಲೇಖಿಸಿರುವಂತೆ ಒಡ್ಡಾರಿ (ವಡ್ಡರು,ಓಡ್,ಕ್ಷತ್ರಿಯರು) ಶಿಲಾಯುಗದ ನಂತರದ ಒಂದೆರಡು ಶತಮಾನಗಳಲ್ಲಿ ಕಬ್ಬಿಣದ ಆಯುಧ ಹಿಡಿದು, ವಾಸ್ತುಶಿಲ್ಪ ನಿರ್ಮಿಸಲು ಆರಂಭಿಸಿದರು. ಸಾವಿರಾರು ವರ್ಷಗಳ ಪ್ರಾಚೀನ ಪರಂಪರೆಯನ್ನು ಹೊಂದಿರುವ ಈ ಜನಾಂಗವು ಸೂರ್ಯ ವಂಶದ ಕ್ಷತ್ರಿಯರು ಎನ್ನುವುದನ್ನು ಮರೆತು ಕಾಲಕ್ರಮೇಣ ವಿವಿಧ ವೃತ್ತಿಯಲ್ಲಿ ತೊಡಗಿದ್ದಾರೆ ಮತ್ತು ಹಲವಾರು ಬದಲಾವಣೆಗಳನ್ನು ಕಾಣುತ್ತ ಶೂತ ಪುತ್ರ ಕರ್ಣ ರೀತಿ ಶೂದ್ರರಂತೆ ಜೀವನ ಸಾಗಿಸುತ್ತಿದ್ದಾರೆ

ಇತಿಹಾಸ[ಬದಲಾಯಿಸಿ]

ಈ ಜನಾಂಗದ ಪ್ರಾಚೀನತೆಯನ್ನು ತಿಳಿಸುವ ಹಲವಾರು ಉಲ್ಲೇಖಗಳು ಈ ಕೆಳಗಿನಂತಿವೆ. ಸಾಕ್ರೆಟೀಸನು ತನ್ನ ಜೀವನ ಚರಿತ್ರೆಯಲ್ಲಿ ಹೇಳಿಕೊಂಡಂತೆ, ಅವನ ತಂದೆ ಕಲ್ಲುಕುಟಿಗ (ಒಡ್ಡ)ನಾಗಿದ್ದನು. ಸುತ್ತಿಗೆ ಹಾಗೂ ಚಾಣವನ್ನು ತನಗೆ ಕೊಟ್ಟಿದ್ದನೆಂದು ತಿಳಿಸಿದ್ದಾನೆ. ಜಗತ್ಪ್ರಸಿದ್ಧ ಕಲಾವಿದ (ಪೈಂಟರ್ ಮತ್ತು ಆರ್ಟಿಸ್ಟ್) ಮೈಕಲ್ ಎಂಜೆಲೋ ಬಾಲಕನಾಗಿದ್ದಾಗ ಅವನಿಗೆ ಒಡ್ಡರ ಮಹಿಳೆಯೋರ್ವಳು ಎದೆ ಹಾಲು ಕುಡಿಸಿದ್ದಳು. ಅದರ ಪ್ರೇರಣೆಯಿಂದಲೇ ತಾನು ವಿಶ್ವವಿಖ್ಯಾತ ಕಲಾವಿದನಾಗಲು ಸಾಧ್ಯವಾಯಿತು ಎಂದು ತನ್ನ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾನೆ. ಗ್ರೀಕ್ ದೇಶದ ಪ್ರಾಚೀನ ಶಿಲ್ಪಕಲಾ ವೈಭವದ ಕರ್ತೃಗಳು ವಡ್ಡರೆಂಬುದು ಮೈಕೆಲ್ ಎಂಜಲೋನ ಹೇಳಿಕೆಯಿಂದ ಗ್ರಹಿಸಬಹುದಾಗಿದೆ. ಸದೃಢವಾದ ಗ್ರೀಕ್‍ನ ಕೋಟೆ, ಸುಂದರ ದೇವಾಲಯಗಳು ವಡ್ಡರು ನಿರ್ಮಿಸಿದ ಇತಿಹಾಸಕ್ಕೆ ಸಾಕ್ಷಿಯಾಗಿವೆ. ಲಂಡನ್ ನಗರದ ಲಂಡನ್ ಟವರ್, ಸೇತುವೆಗಳು, ಕಾಲುವೆಗಳು, ಒಳಚರಂಡಿಗಳು ಇತ್ಯಾದಿ ನಾಗರಿಕ ಸೌಲಭ್ಯಗಳನ್ನು ಆಶ್ಚರ್ಯಕರ ರೀತಿಯಲ್ಲಿ ನಿರ್ಮಿಸಿದವರು ವಡ್ಡರು. ಇವರ ಶಕ್ತಿ ಸಾಮರ್ಥ್ಯವನ್ನರಿತು ಮಹಮ್ಮದ ಘಜನಿ ಮತ್ತು ಮಹಮ್ಮದ ಘೋರಿ ಇಬ್ಬರೂ ೧೦೨೦ರಲ್ಲಿ ಭಾರತಕ್ಕೆ ಬಂದಿದ್ದಾಗ ೧೭೦೦ ಸಮರ್ಥ ವಡ್ಡರನ್ನು ತಮ್ಮೊಂದಿಗೆ ಕರೆದೊಯ್ದರೆಂದು ತಿಳಿದು ಬರುತ್ತದೆ.

ಪೌರಾಣಿಕ ಐತಿಹ್ಯದ ಪ್ರಕಾರ[ಬದಲಾಯಿಸಿ]

ಹಿಂದೂ ಪೌರಾಣಿಕ ಐತಿಹ್ಯದ ಪ್ರಕಾರ ಸೃಷ್ಟಿಕರ್ತ ಬ್ರಹ್ಮನು ಜಗತ್ತನ್ನು ಸೃಷ್ಟಿ ಮಾಡುವಾಗ ಐದು ಜನರ ಸಹಾಯ ಪಡೆದನಂತೆ ಆ ಐವರಲ್ಲಿ ಒಬ್ಬನು ಪಂಚರಂಗಿಣಿ ಒಡ್ಡರವನು. ಉಳಿದವರಲ್ಲಿ ಪಾಂಚಾಳ (ವಿಶ್ವಕರ್ಮ), ಕುಂಬಾರ, ಬಡಿತ ಮೊದಲಾದ ವರಿದ್ದರು. ಕೆಲವು ವಿದ್ವಾಂಸರು ಈ ಜನಾಂಗವನ್ನು ಮೊಹೆಂಜೊದಾರೋ ಸಂಸ್ಕೃತಿಯೊಂದಿಗೆ ತಳುಕು ಹಾಕುತ್ತ ಅಲ್ಲಿಯ ನಗರ, ಚರಂಡಿ ವ್ಯವಸ್ಥೆಯಲ್ಲಿ ಇವರ ಪಾತ್ರವಿದೆ ಎನ್ನುತ್ತಾರೆ. ಶಿಲಾಯುಗದ ಮಾನವನ ಬದುಕಿನಲ್ಲಿ ಆರಂಭವಾದ ಕಲ್ಲಿನ ಉಪಕರಣಗಳ ಬಳಕೆಯು ಕ್ರಮೇಣವಾಗಿ ವಾಸಿಸುವ ಮನೆ ಕಟ್ಟುವಿಕೆ ಹಾಗೂ ಹೊಟ್ಟೆಗೆ ಹಿಟ್ಟನ್ನು ತಯಾರಿಸಲು ಬೀಸುವ ಕಲ್ಲಿನ ನಿರ್ಮಾಣ ಮಾಡುವವರೆಗೆ ಮುಂದುವರೆಯಿತು. ಮಾನವ ಹಸಿವನ್ನು ನೀಗಿಸುವಲ್ಲಿ ಪ್ರಮುಖ ಪಾತ್ರವಹಿಸುವ ಹಿಟ್ಟಿನ ಹುಟ್ಟಿಗೆ ಕಾರಣವಾದ ಬೀಸುವ ಕಲ್ಲನ್ನು ಆವಿಷ್ಕರಿಸಿದ ಕೀರ್ತಿ ಒಡ್ಡರಿಗೆ ಸಲ್ಲುತ್ತದೆ. ವಿಶ್ವಕರ್ಮ ಪುರಾಣದಲ್ಲಿ ಒಡ್ಡರನ್ನು ಶಿಲ್ಪಿಗಳೆಂದು ಕರೆದಿದ್ದಾರೆ. ತೇತ್ರಾಯುಗದಲ್ಲಿ ಸೇತುಬಂಧದಲ್ಲಿ ಒಡ್ಡರ ಪಾತ್ರ ಪ್ರಮುಖವಾಗಿದೆ. ಸೇವಾ ಮನೋಧರ್ಮದ ಇವರು ರಾಮನಿಗೆ ಸಹಾಯ ನೀಡಿದ ಸಂದರ್ಭ ರಾಮಾಯಣದಲ್ಲಿದೆ. ನಳ-ನೀಳ (ನಲ-ನೀಲ) ರು ವಿಶೇಷವಾದ ಕಲ್ಲನ್ನು ಕಂಡುಹಿಡಿದು ಸಮುದ್ರದಲ್ಲಿ ಲಂಕೆಯವರೆಗೆ ದಾರಿ ನಿರ್ಮಿಸಿದರೆಂದು ನಂಬಲಾಗಿದೆ.

ವಿಶೇಷತೆ[ಬದಲಾಯಿಸಿ]

ಗುರು ಸ್ಥಾನದಲ್ಲಿರುವ ಅಮರಶಿಲ್ಪಿ ಜಕ್ಕಣಾಚಾರಿ, ಕರ್ಮಯೋಗಿ ಸಿದ್ಧರಾಮ ಈ ಜನಾಂಗದವರಿಗೆ ಪೂಜ್ಯನೀಯರಾಗಿದ್ದಾರೆ.

ಒಡ್ಡ ಪದದ ನಿಷ್ಪತ್ತಿ[ಬದಲಾಯಿಸಿ]

ಓಡ್,ಒಡ್ಡ/ವಡ್ಡ,ಒಡ್ಡರು/ವಡ್ಡರು, ಒಡ್ಡರ್/ವಡ್ಡರ್, ಒಡೆಯರ್/ವೊಡೆಯರ್ ಓಡ್_ರಜಪೂತ್ ,ಒಡೆಯರಾಜುಲು/ವಡ್ಡೆರಾಜು ,ರಾಜ್_ವಡ್ಡರ್, ವಿಶ್ವಶಿಲ್ಪಿ/ಲೋಕಶಿಲ್ಪಿ, ಈ ಮೊದಲಾದ ಹೆಸರುಗಳಿಂದ ಗುರುತಿಸಲ್ಪಡುವ ಈ ಜನಾಂಗವು ಓಡ್ರ/ಒಡಿಸ್ಸಾ ಮೂಲದಿಂದ ಬಂದಿದ್ದಾರೆ . ನಾಮಬಲದಿಂದಾಗಿ ಇವರ ಆರಂಭಿಕ ನೆಲೆ (ಭಾರತದಲ್ಲಿ) ಒಡಿಸ್ಸಾ ರಾಜ್ಯವಾಗಿದೆ. ಶಾಬ್ದಿಕ ಅರ್ಥದ ಜಾಡನ್ನು ಹಿಡಿದು ಹೊರಟರೆ ಕಿಟಲ್ ಕೋಶದ ಪ್ರಕಾರ ಒಡ್ಡೆವಾಣು ಎಂದರೆ ಕೆರೆಕೊರೆಯುವ ಆಳುಗಳೆಂದು ಅರ್ಥ ಪುಷ್ಪಿ ನೀಡಲಾಗಿದೆ. ವಡ್ಡ/ಭೋವಿ/ಬೋವ್ಹಿ ಎಂಬ ಶಬ್ದವು ಇತ್ತೀಚಿನದಾಗಿದೆ. ಸರ್ಕಾರದ ಸವಲತ್ತುಗಳನ್ನು ಪಡೆಯಲು ಒಡ್ಡರ ವಿವಿಧ ವರ್ಗಗಳು (ಪಂಗಡಗಳು) ಸೇರಿಕೊಂಡು ವಡ್ಡರು ಎಂಬ ನಾಮವನ್ನಿರಿಸಿಕೊಂಡರೆಂದು ತಿಳಿದು ಬರುತ್ತದೆ. ವಡ್ಡರ ಪದದ ಅರ್ಥ ಬಂಡಿ ಹೊಡೆಯುವವ ಎಂದಾಗುತ್ತದೆ. ಇದುವೇ ’ವಡ್ಡರ ’ಯಾಗಿರಬಹುದು. ಒಡ್ಡುಗಳು ನಿರ್ಮಿಸುವುದರಿಂದ ಒಡ್ಡರು, ಬಂಡಿ ಹೊಡೆಯುವುದರಿಂದ (ಓಡಿಸುವುದರಿಂದ) ವಡ್ಡರ ಎಂಬ ಹೆಸರು ಬಂದಿದೆ. ಎಂದರೆ ತಪ್ಪಾಗದು. ಒಡ್ಡ (ವಡ್ಡ)ವನ್ನು ಬೈರಂಗಲೇರು ಭೋಜ, ಬೋಯೋ, ದುಂಡಿಕಲ್ಲೋರು, ಹಾಲೆ, ಹುಲ್ಲಕಂಚಿ, ಬೆಡಗು, ಜಂಗಲೆಪಟ್ಟೆ ಬರಸು, ಜರುಪಾ, ಕರವೆಜಾತಿ, ಉಪ್ಪು, ಉರು, ತೆಲುಗು, ಮಣ್ಣು, ಇತ್ಯಾದಿ (ಬೆಡಗು) ಹೆಸರುಗಳಿಂದ ಕರೆಯುತ್ತಾರೆ.

ಬೋವಿ/ವಡ್ಡರ ಜನಾಂಗದ ಭೌಗೋಳಿಕತೆ ಮತ್ತು ಜನಸಂಖ್ಯೆ[ಬದಲಾಯಿಸಿ]

ಭಾರತ ದೇಶದಲ್ಲಿ ಈ ಜನಾಂಗ ವಾಸಿಸುವ ರಾಜ್ಯಗಳೆಂದರೆ, ಓರಿಸ್ಸಾ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಇತ್ಯಾದಿ. ಓರಿಸ್ಸಾದಲ್ಲಿ ಇವರಿಗೆ ಒಡ್ಡ ಅಥವಾ ಒಡ್ಡಿ ಎಂದು ಕರೆದರೆ, ತಮಿಳುನಾಡಿನಲ್ಲಿ ಬೋವಿಗಳೆಂದು ಗುರುತಿಸುತ್ತಾರೆ. ಆಂಧ್ರದಲ್ಲಿ ಒಡ್ಡಲು ಅಥವಾ ಒಡಿಯರಾಜು ಎನ್ನುತ್ತಾರೆ. ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದಲ್ಲಿ ಮಸ್ತರಿ (ಮಾಸ್ತರಿ) ಎಂತಲೂ ಕರ್ನಾಟಕದಲ್ಲಿ ಭೋವಿ/ವಡ್ಡರ ಎಂದೂ ಕರೆಯಲಾಗುತ್ತದೆ. ದೃಢಕಾಯವುಳ್ಳ ಈ ಜನಾಂಗದವರು ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಪ್ರಮುಖ ಪಟ್ಟಣಗಳಲ್ಲಿ ದೊಡ್ಡ ಹಳ್ಳಿಗಳಲ್ಲಿ ಇವರು ವಾಸವಾಗಿದ್ದಾರೆ.

ಕರ್ನಾಟಕದಲ್ಲಿ[ಬದಲಾಯಿಸಿ]

ಕರ್ನಾಟಕದಲ್ಲಿ ಕೋಲಾರ-ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೊಪ್ಪಳ, ರಾಯಚೂರು, ಸಿಂಧನೂರು ಹಾಗೂ ಗುಲ್ಬರ್ಗಾ,ವಿಜಯಪುರ ಜಿಲ್ಲೆಯಾದ್ಯಂತ ವಿಶೇಷವಾಗಿ ಶಹಬಾದ ಮತ್ತು ವಿಜಯಪುರ ಪಟ್ಟಣದಲ್ಲಿ ಇವರು ದಟ್ಟವಾಗಿ ಕಂಡು ಬರುತ್ತಾರೆ. ಕರ್ನಾಟಕದಲ್ಲಿ ಈ ಜನರು ಸುಮಾರ ,30,ರಿಂದ,35 ಲಕ್ಷ ಜನಸಂಖ್ಯೆ ಇರಬಹುದು!? ಇತರ ರಾಜ್ಯಗಳಲ್ಲಿ ಹೋಲಿಸಿದರೆ ಕನ್ನಡನಾಡಿನಲ್ಲಿ ಇವರ ಉದ್ಯೋಗಕ್ಕೆ ಬೇಕಾದ ವೈವಿಧ್ಯಮಯವಾದ ಕಲ್ಲುಗಳು ಹೇರಳವಾಗಿ ದೊರೆಯುತ್ತವೆ. ಇವರ ವೃತ್ತಿ ಪ್ರವೃತ್ತಿಗಳೆರಡು ಕಲ್ಲಿನಲ್ಲಿ ಮಣ್ಣಿನಲ್ಲಿ ಹುದುಗಿವೆ.ಈದೀಗ ರಾಜಕೀಯ ಕ್ಷೇತ್ರದಲ್ಲಿ ಮತ್ತು ವ್ಯಾಪಾರದಲ್ಲಿ ಮುಂದುವರೆದಿದ್ದಾರೆ.

ವಿಭಾಗ ಕ್ರಮ[ಬದಲಾಯಿಸಿ]

ಒಡ್ಡರನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಬಹುದು: ರಾಜಭೋವಿ, ಮಣ್ಣುವಡ್ಡರು, ಬಂಡೀ ಒಡ್ಡರು, ಕಲ್ಲು ಒಡ್ಡರು ಮತ್ತು ಗಿರಣಿ ಒಡ್ಡರು.

ರಾಜಭೋವಿ[ಬದಲಾಯಿಸಿ]

ರಾಜಭೋವಿಗಳು ಕೊಂತಪ್ಪ ಎಂಬ ಒಬ್ಬ ಗುರುವಿನ ಆದೇಶದ ಮೇರೆಗೆ ರಾಜ್ಯದ ಆಡಳಿತವನ್ನು ನೆರವೇರಿಸುತ್ತಿದ್ದರು, ಇವರುಗಳು ಸೈನ್ಯದಲ್ಲಿ ಸೇರಲು ಅವಕಾಶವಿತ್ತು. ಇವರುಗಳು ಅಪ್ರತಿಮ ವೀರರಾಗಿದ್ದರು. ಇವರಿಗೂ ಮೈಸೂರಿನ ಮಹಾರಾಜರಿಗೂ ಅವಿನಾಭಾವ ಸಂಬಂಧವಿತ್ತು ಎಂಬ ಪ್ರತೀತಿ ಇದೆ. ಇವರಿಗೂ ಮತ್ತು ಕಲ್ಲು ಒಡ್ಡರು ಸಹೋದರ ಸಂಭದ ಹೊಂದಿದ್ದಾರೆ. ಇವರಲ್ಲಿ ಒಳ್ಳೆಪರ್, ಕೊಬ್ಬರಿಬಟ್ಟಲು, ಹಾಲುಗುಂಟೆ, ಉಪ್ಪಿನಕೋಳಗ ಮತ್ತು ಗಂಗೆಪೂಜಾ ಎಂಬ ಬೆಡಗುಗಳಿವೆ.

ಮಣ್ಣು ವಡ್ಡರು[ಬದಲಾಯಿಸಿ]

ಕೆರೆ, ಬಾವಿ, ಹೊಲಗಳಲ್ಲಿಯ ಮಣ್ಣು ತೆಗೆದು, ಕತ್ತೆಗಳ ಮೇಲೆ ಸಾಗಿಸುವುದು, ಒಡ್ಡು ನಿರ್ಮಿಸುವುದು ಇವರ ಕೆಲಸ. ದೃಢಕಾಯರಾದ ಇವರು ಬೌದ್ಧಿಕವಾಗಿ ಅಷ್ಟೇನೂ ಚತುರರಲ್ಲ. ಇವರಲ್ಲಿ ಮಂಟ್ಲೋರು, ಬತ್ತಳೋರು, ಸಾತಳೋರು, ಛಂದಿ, ಬೊಟ್ಸೋರ ಎಂಬ ಗೋತ್ರಗಳಿವೆ (ಬೆಡಗುಗಳಿವೆ)

ಬಂಡೀ ಒಡ್ಡರು[ಬದಲಾಯಿಸಿ]

ಶಕ್ತಿಶಾಲಿಗಳಿಂದ ಇವರು ದೊಡ್ಡ ದೊಡ್ಡ ಕಲ್ಲುಗಳನ್ನು ಬಂಡೆಗಲ್ಲುಗಳನ್ನು ಗುಡ್ಡದಿಂದ ತೆಗೆಯುವುದು, ಕೆಲಸದ ಜಾಗಕ್ಕೆ ಸಾಗಿಸುವುದು, ಭೂಮಿಯಲ್ಲಿರುವ ವಿವಿಧ ಬಗೆಯ ಕಲ್ಲುಗಳನ್ನು ಗುರುತಿಸುವುದು, ಹಾರೆ ಹಾಗೂ ಭಾರವಾದ ಸುತ್ತಿಗೆಗಳಿಂದ ತಮಗೆ ಬೇಕಾದ ಕಲ್ಲುಗಳನ್ನು ಚಾಣಾಕ್ಷತನದಿಂದ ಹೊರತೆಗೆಯುವುದರಲ್ಲಿ ಇವರು ಸಿದ್ದ ಹಸ್ತರು. ಇವರಲ್ಲಿ ಬಂಡ್ಲಾವೋರ್, ರ‍್ಯಾಫನೋರ, ಕುಂಚಾಪೋರ, ದ್ಯಾರಂಗಲೋರ, ಮುದ್ದುಗಲೋರ, ದಂಡುಗಲೋರ ಎಂಬ ಗೋತ್ರಗಳಿವೆ.

ಕಲ್ಲು ಒಡ್ಡರು[ಬದಲಾಯಿಸಿ]

ಇವರಿಗೆ ಕಲ್ಲುಕಟಿಗರು /ಕಲ್ಕುಟಿಗ[೧] ಎಂತಲೂ ಕರೆಯುವುದುಂಟು. ಇವರುಗಳಲ್ಲಿ ಇರಗಾದಿಂ, ಇಡಚೋರ, ಫಂದಿ ಬೋಟ್ಸೋರ ಇತ್ಯಾದಿ ಗೋತ್ರಗಳಿವೆ. ಇವರು ವಿಗ್ರಹ ಮೂರ್ತಿಗಳನ್ನು, ಕಂಬಗಳನ್ನು ಕಮಾನುಗಳನ್ನು ಇನ್ನಿತರ ವಾಸ್ತುಶಿಲ್ಪ, ಮೂರ್ತಿ ಶಿಲ್ಪದಂಥ ಕಲ್ಲುಕೊರೆಯುವ / ಕಟೆಯುವ ಕೆಲಸದಲ್ಲಿ ನಿಪುಣರು. ಕಲ್ಲಿಗೆ ಕಲ್ಪನೆಯ ರೂಪ ನೀಡಿ ಸಾಕಾರಗೊಳಿಸುವ ಇವರು ಬೌದ್ಧಿಕವಾಗಿ ಅತ್ಯಂತ ಕುಶಲಮತಿಗಳು. ಇವರಿಗೆ ರೂವಾರಿ, ಶಿಲ್ಪಿ ಎಂತಲೂ ಕರೆಯುತ್ತಾರೆ.

ಗಿರಣಿ ಒಡ್ಡರು[ಬದಲಾಯಿಸಿ]

ಬೀಸುವ ಕಲ್ಲು, ಕಲಬತ್ತು, ಒರಳು, ವಿದ್ಯುತ್ ಹಿಟ್ಟಿನ ಗಿರಣಿಯಲ್ಲಿ ಬಳಸುವ ಬೀಸುಕಲ್ಲುಗಳನ್ನು ನಿರ್ಮಿಸುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಪಟ್ಟಣಗಳಲ್ಲಿ ಹೆಚ್ಚಾಗಿ ವಾಸಿಸುತ್ತಾರೆ. ವಡ್ಡರ ವಿವಿಧ, ಪಂಗಡ ಮತ್ತು ಗೋತ್ರಗಳಲ್ಲಿ ಪರಸ್ಪರ ಆಂತರಿಕ ವೈವಾಹಿಕ ಸಂಬಂಧ ಏರ್ಪಡುತ್ತಿರಲಿಲ್ಲ. ಇತ್ತೀಚೆಗೆ ನಿರ್ಬಂಧದಲ್ಲಿ ಸಡಿಲಿಕೆಯುಂಟಾಗಿದೆ.

ಒಡ್ಡರ ಜನಾಂಗದ ಸ್ವರೂಪ[ಬದಲಾಯಿಸಿ]

ಇವರು ವಾಸಿಸುವುದು ಸಾಮಾನ್ಯವಾಗಿ ತಮ್ಮ ಜನರ ಪ್ರತ್ಯೇಕ ಓಣಿಗಳಲ್ಲಿ ಈ ಓಣಿಗಳು ಊರ ಹೊರಗೆ ಶಾಶ್ವತವಲ್ಲದ ಮನೆಗಳಿಂದ ನಿರ್ಮಾಣವಾಗಿರುತ್ತದೆ. ಒಡ್ಡರ ಮನೆಯೆಂದರೆ ಹುಲ್ಲಿನ ಗುಡಿಸಲಿನ ಆಯತಾಕಾರದ / ಗೂಡಿನ ರೂಪದಲ್ಲಿರುತ್ತದೆ. ಅಥವಾ ಒಣಕಲ್ಲುಗಳ ಗೋಡೆಯ ಮೇಲೆ ತಗಡನ್ನು ಹಾಕಿರುತ್ತಾರೆ. ಗಟ್ಟಿ ಛಾವಣಿಯಿಲ್ಲದ ಮನೆಗಳೇ ಇವರ ಆಸ್ತಿ. ಇವರ ಓಣಿಗೆ ಒಡ್ಡರ ಓಣೀ, ವಡ್ರೋಣೀ, ಒಡ್ಡರ ಹಟ್ಟಿ, ಒಡ್ಡರ ಗಲ್ಲಿ ಇತ್ಯಾದಿ ಹೆಸರುಗಳಿವೆ. ಇವರ ತಾತ್ಕಾಲಿಕ ಮನೆಗಳಿಗೆ ಕಾರಣ ಇವರು ಮೇಲಿಂದ ಮೇಲೆ ವಲಸೆ ಹೋಗುವ ಅಲೆಮಾರಿ ಜೀವನವೆಂದು ಹೇಳಬಹುದು.

ಸಸ್ಯಾಹಾರ ಹಾಗು ಮಾಂಸಾಹಾರ ಪದ್ಧತಿಗಳೆರಡೂ ಈ ಸಮಾಜದಲ್ಲಿ ಕಂಡುಬರುತ್ತದೆ.ಕುರಿ, ಕೋಳಿ, ಮೀನು, ಮೊಟ್ಟೆ, ಮೊಲ, ಏಡಿ ಇವುಗಳನ್ನ ಸೇವಿಸುತ್ತಾರೆ. ಕೆಲವು ಜನ ಉಡವನ್ನ ಕೂಡಾ ತಿನ್ನುತ್ತಾರೆ.[ಬದಲಾಯಿಸಿ]

ೆ.

ಒಡ್ಡ ಜನಾಂಗದವರ ಗುಣ-ಸ್ವಭಾವಗಳು[ಬದಲಾಯಿಸಿ]

ಮುಗ್ಧತೆಯೊಂದಿಗೆ ಈ ಜನರಲ್ಲಿ ಎದ್ದು ಕಾಣುವ ಪ್ರಮುಖ ಗುಣವೆಂದರೆ ಪ್ರಾಮಾಣಿಕತೆ. ಇವರು ತೆರೆದ ಹೃದಯಿಗಳು. ತಮ್ಮ ಮಾಲೀಕರನ್ನು ಅತ್ಯಂತ ನಂಬುಗೆಯಿಂದ ಕಾಣುವರು. ಅದೆಷ್ಟು ಮುಗ್ಧರೆಂದರೆ ತಾವು ಮಾಡಿದ ಕೆಲಸ ಎಷ್ಟೆಂಬುದಾಗಲಿ, ಅದಕ್ಕೆ ಎಷ್ಟು ಪ್ರತಿಫಲ ಪಡೆಯಬೇಕೆಂಬುದಾಗಲಿ, ಇವರಿಗೆ ತಿಳಿಯದು. ಲೆಕ್ಕ ಮಾಡಲು ಬಾರದು. ಒಡೆಯರು ತಿಳಿದು ಕೊಟ್ಟಷ್ಟು ಪಡೆಯುವ ಸಹೃದಯರು. ಒಳ್ಳೆಯ ಸ್ವಭಾವ, ನೈತಿಕತೆ, ಇವುಗಳಿಂದಾಗಿ ಹೊಟ್ಟೆ ಪಾಡಿನ ದುಡಿಮೆಯನ್ನು ಪಡೆಯಬಲ್ಲವರು. ಅತ್ಯಲ್ಪ ಗಳಿಕೆಯಲ್ಲೂ ತೃಪ್ತಿ ಹೊಂದುವರು. ಸಹಕಾರ ಬಾಳ್ವೆ : ಈ ಜನರಲ್ಲಿ ಕೂಡಿ ಬಾಳುವ ಪ್ರವೃತ್ತಿಯಿದ್ದು, ಒಗ್ಗಟ್ಟು, ಸಾಮಾಜಿಕ ಜವಾಬ್ದಾರಿ ಹಾಗೂ ಸಹಕಾರ ಮನೋಭಾವವನ್ನು ಕಾಣಬಹುದಾಗಿದೆ. ದೈಹಿಕ ಪರಿಶ್ರಮಕ್ಕೆ ಹಿಂಜರಿಯದೆ, ದುಡಿಯುವ ಪ್ರವೃತ್ತಿಯು ಅವರ ಕಾರ್ಯದಕ್ಷತೆಯನ್ನು ಕಷ್ಟ ಸಹಿಷ್ಣುತೆಯನ್ನು ಪ್ರದರ್ಶಿಸುತ್ತದೆ. ಒಡ್ಡ ಪುರುಷರು ತಮ್ಮ ಹೆಂಡತಿ ಗರ್ಭಿಣಿ ಇರುವಾಗ ಕೆರೆ ಕೊರೆಯುವ ಅಥವಾ ಹಣ ಹೊರುವ ಕೆಲಸದಲ್ಲಿ ತೊಡಗುವುದಿಲ್ಲ.

ಜೀವನ ವಿಧಾನ[ಬದಲಾಯಿಸಿ]

ಒಡ್ಡ / ಬೋವಿ ಜನಾಂಗದ ಭಾಷೆ: ಈ ಜನರು ದಕ್ಷಿಣ ಭಾರತದ ಯಾವ ರಾಜ್ಯದಲ್ಲಿದ್ದರೂ ಸಾಮಾನ್ಯವಾಗಿ ತೆಲುಗು ಭಾಷೆಯನ್ನಾಡುತ್ತಾರೆ. ಶಿ‌ಷ್ಟ ತೆಲುಗು ಭಾಷೆಗಿಂತ ಭಿನ್ನವಾಗಿರುವ, ಆದರೆ ತೆಲುಗಿಗೆ ಹತ್ತಿರವಿರುವ ’ವಡಾರಿ’ ಭಾಷೆಯನ್ನು ಸಾಮಾನ್ಯವಾಗಿ ಬಳಸುತ್ತಾರೆ. ಉತ್ತರ ಭಾರತದಲ್ಲಿ ಆಯಾ ಪ್ರಾಂತೀಯ ಭಾಷೆಯನ್ನು ಬಳಸುತ್ತಾರೆಂದು ತಿಳಿದುಬರುತ್ತದೆ. ಆಂಧ್ರಪ್ರದೇಶ ಗೆಜೆಟಿಯರ್ ನ ಪ್ರಕಾರ ಅಲ್ಲಿಯ ಒಡ್ಡ ಜನರು ಆಡುವ ಭಾಷೆ ’ವಡಾರಿ’ ಎಂದು ಉಲ್ಲೇಖಿಸಲ್ಪಟ್ಟಿದೆ. ಕಾಲಕ್ರಮೇಣ ಈ ಭಾಷೆಯು ತೆಲುಗಿನಲ್ಲಿ ವಿಲೀನವಾಗಿದೆಯೆಂದು ತಿಳಿದು ಬರುತ್ತದೆ. ಈ ಜನರು ವಡಾರಿ ಭಾಷೆಯನ್ನಾಡಲು ಕಾರಣ ಇವರ ಮೂಲ ಸ್ಥಳವು ಓಡಿಸಾ, ಆಂದ್ರ, ಓಡ್ರಾ ಪ್ರದೇಶಗಳಾಗಿರುವುದೇ ಇರಬಹುದು. ಯಾವುದೇ ಒಂದು ಭಾಷೆಯು ಅಭಿವ್ಯಕ್ತಿ ಮಾಧ್ಯಮವಾಗಿ, ಸಂಪರ್ಕ ಸಾಧನವಾಗಿ ಮಹತ್ವ ಪಡೆಯುವುದರ ಜೊತೆಗೆ ಅದು ಆ ಭಾಷೆ ಮಾತನಾಡುವವರ ಚಿಂತನೆ, ನಂಬಿಕೆ, ಆಚರಣೆ, ಜೀವನದ ರೀತಿ-ನೀತಿ ದೃಷ್ಟಿಕೋನ ಮೊದಲಾದ ಅಂಶಗಳನ್ನು ಅವಲಂಬಿಸಿರುತ್ತದೆ. ಆಯಾ ಜನ ಸಂಸ್ಕೃತಿಯ ಅರಿವನ್ನು ಅರಹುವ ಭಾಷೆಯು ಅದನ್ನಾಡುವ ಜನರ ಬಾಹುಳ್ಯದ (ಜನಸಂಖ್ಯೆಯ) ಆಧಾರದ ಮೇಲೆ ನಿಂತಿರುತ್ತದೆ. ಬದುಕಿ ಬಾಳುತ್ತದೆ.

ಭಾಷೆ[ಬದಲಾಯಿಸಿ]

ಜಾಗತೀಕರಣದ ಪ್ರಭಾವ, ಇಂಗ್ಲಿಷ್ ಕಪಿಮುಷ್ಠಿಯ ಹಿಡಿತದಲ್ಲಿ ಸಿಲುಕಿ ನಲುಗುತ್ತಿರುವ ಸಾವಿರಾರು ಭಾಷೆಗಳಲ್ಲಿ ಈ ಒಡ್ಡರ ’ವಾಡಿ’ ಭಾಷೆಯೂ ಒಂದಾಗಿದೆ. ನಡಾರಿ ಭಾಷೆಗೆ ಲಿಪಿ ಇಲ್ಲ. ಲಿಪಿಯಿರುವ ಭಾಷೆಗಳೇ ಇವತ್ತು ತನ್ನ ಉಳಿವಿಗಾಗಿ ಹೆಣಗಾಡುತ್ತಿರುವಾಗ ವಡಾರಿ ಭಾಷೆಯು ತೆಲುಗಿನಲ್ಲಿ ವಿಲೀನಗೊಂಡಿರುವುದು ಸ್ವಾಭಾವಿಕವೆನ್ನದೆ ದಾರಿಯಿಲ್ಲ. ಲಿಪಿಯಿಲ್ಲದ ಮತ್ತು ಅವಿದ್ಯಾವಂತ ಜನರೇ ಅಧಿಕವಾಗಿರುವ ಜನಾಂಗದ ಬಾಯಲ್ಲಿ ಉಲಿಯಲ್ಪಡುವ ಈ ಭಾಷೆಗೆ ಒರಟುತನ ಜಾಸ್ತಿ.

ವೇಷಭೂಷಣ[ಬದಲಾಯಿಸಿ]

ಪ್ರಾಚೀನಕಾಲದಲ್ಲಿ ಒಡ್ಡರ ಪುರುಷರು ಲಂಗೋಟಿ ಧರಿಸುತ್ತಿದ್ದರು. ಕಾಲಕ್ಕೆ ತಕ್ಕಂತೆ ಆಯಾ ಪ್ರಾದೇಶಿಕ ಉಡುಗೆಗಳನ್ನು ತೊಡುತ್ತಿದ್ದಾರೆ. ತಲೆ ಮೇಲೆ ರುಮಾಲು, ಸಡಿಲಕಸಿಯ ಅಂಗಿ, ಗಂಧಿ ಟೊಪ್ಪಿಗೆ ತೊಡುತ್ತಾರೆ. ಬಯಲಿನಲ್ಲಿ ಬಿಸಿಲಿನಲ್ಲಿ ಕೆಲಸ ಮಾಡುವ ಇವರು ಸಾಮಾನ್ಯವಾಗಿ ಮೇಲಂಗಿಯನ್ನು ತೆಗೆದಿಟ್ಟು ಒಳುಡುಪು (ಬನಿಯನ್) ಧರಿಸುತ್ತಾರೆ. ಒಡ್ಡ ಪುರುಷರು ತಲೆ ಗೂದಲು – ಗಡ್ಡವನ್ನು ಬೋಳಿಸುತ್ತಿರಲಿಲ್ಲ. ಇತ್ತೀಚೆಗೆ ಆಧುನಿಕತೆಗೆ ಹೊಂದಿಕೊಂಡಿದ್ದಾರೆ. ಈಗ ತೊಡುತ್ತಾರೆ. ನೂಲಿನ ದಪ್ಪ ಸೀರೆ / ಪಾಲಿಯೆಸ್ಟರ್ ಸೀರೆ ಚಾಲ್ತಿಯಲ್ಲಿವೆ.9

ಒಡವೆ[ಬದಲಾಯಿಸಿ]

ಕಲ್ಲು ಖಣಿಯ ಒಡೆಯುವ ಕೆಲಸದಲ್ಲಿ ಬಳೆಯಿಂದ ಅಡಚಣೆಯಾಗುವ ಕಾರಣದಿಂದಲೇ ಏನೋ ಬಲಗೈಯಲ್ಲಿ ಬಳೆ ಹಾಕುವುದಿಲ್ಲ. ಹಾಕಿದರೂ ಬೆಳ್ಳಿಯ ಕಡೆ (ಕಡಗ) ಅಥವಾ ಆರ್ಥಿಕ ಅನುಕೂಲತೆಗೆ ತಕ್ಕಂತೆ. ಅಲ್ಯುಮಿನಿಯಂ ಬಿಳಿಯ ಬಳೆಯನ್ನು ಹಾಕಿರುತ್ತಾರೆ. ಕೈ ಮತ್ತು ಕೆನ್ನೆ ಮೇಲೆ ಹಚ್ಚೆ ಹಾಕಿಸಿಕೊಂಡಿರುತ್ತಾರೆ. ಸೊಂಟಕ್ಕೆ ಡಾಬು, ಮೂಗಿಗೆ ನೆತ್ತು, ತೋಳಿಗೆ ತೋಳಬಂದಿ ಮೊದಲಾದ ಆಭರಣಗಳನ್ನು ಧರಿಸುವ ಸಂಪ್ರದಾಯವಿದೆ. ಕೆಲವು ಪ್ರದೇಶಗಳಲ್ಲಿ ಎಡಗೈಗೆ ಗಾಜಿನ ಬಳೆ ಹಾಗೂ ಬಲಗೈಗೆ ತಾಮ್ರದ / ಅಲ್ಯುಮಿನಿಯಂ (ಲೋಹದ) ಬಳೆ ಇರುತ್ತದೆ. ವಿವಾಹಿತ ಮಹಿಳೆ ಕಾಲಿನ ಬೆರಳಿಗೆ ಕಾಲುಂಗರ, ಪಿಲ್ಲೆ ತೊಡುತ್ತಾಳೆ. ದೊಡ್ಡಗಾತ್ರದ ಮೂಗು ಬೊಟ್ಟು (ನತ್ತು) ಹಾಕುವ ಪದ್ದತಿ ಹಲವೆಡೆ ಕಂಡು ಬರುತ್ತದೆ. ಬಿಳಿ -ಕರಿ ಮಣಿಗಳ ಹಲವು ಎಳೆಗಳ ಸರವನ್ನು ಕೊರಳಲ್ಲಿ ಧರಿಸುತ್ತಾರೆ. ಮೊದಮೊದಲು ತಲೆಗೂದಲಿಗೆ ಎಣ್ಣೆಯನ್ನು ಮುಟ್ಟಿಸದೆ, ಕೂದಲು ಗಂಟನ್ನು ಸಹ ಕಟ್ಟದೆ ಇರುತ್ತಿದ್ದ ಈ ಮಹಿಳೆಯರು ಈಗ ಎಣ್ಣೆ ಹಚ್ಚಿ, ಬಾಚಿಕೊಂಡು ನೀಟಾಗಿರುತ್ತಾರೆ.

ವೃತ್ತಿ[ಬದಲಾಯಿಸಿ]

ಒಡ್ಡರು ತಮ್ಮ ತಮ್ಮ ಪಂಗಡಗಳಿಗೆ ಅನುಸಾರವಾಗಿ ಕಲ್ಲು – ಮಣ್ಣುಗಳ ಕೆಲಸದಲ್ಲಿ ನಿರತರಾದ ನಿಪುಣರು. ಕೆರೆ-ಬಾವಿಗಳಲ್ಲಿಯ ಮಣ್ಣು ತೆಗೆಯುವ, ಹೊಲಗಳಲ್ಲಿ ಒಡ್ಡು ಕಟ್ಟುವ, ಗಣಿ/ಖನಿಗಳಿಂದ ಕಲ್ಲು ತೆಗೆಯುವ, ಒಡೆಯುವ, ಕಟೆಯುವ, ಕಲ್ಲನ್ನು ಸಂಸ್ಕರಿಸಿ ಸಾಕಾರಗೊಳಿಸುವ ವೃತ್ತಿ ಇದರದಾಗಿದೆ. ೧೯೭೧ನೆಯ ಜನಗಣತಿ ಪ್ರಕಾರ ೩೮,೦೦೦ ಕೆರೆಗಳನ್ನು ೨೫,೦೦೦ ಹಳ್ಳಿಗಳಲ್ಲಿ ನಿರ್ಮಿಸಿದವರು. ಒಡ್ಡರು ೨೫,೦೦೦ ಶಿಲಾಶಾನಗಳ ರಚನಾಕಾರರು. ವಿಶ್ವದಾದ್ಯಂತ ಜನರ ಮನಕ್ಕೆ ಮುದ ನೀಡುವ ಐತಿಹಾಸಿಕ ಸ್ಮಾರಕಗಳನ್ನು ಶಿಲೆಯಲ್ಲಿ ರೂಪಿಸಿದವರು. ಬೀಸುವ ಕಲ್ಲಿನಿಂದ ಆರಂಭವಾಗಿ ಬೃಹತ್ ಗಾತ್ರದ ಅಣೆಕಟ್ಟು, ಕಟ್ಟಡ, ಶಿಲ್ಪಗಳಿಗೆ ಅವಶ್ಯಕವಾದ ಕಲ್ಲನ್ನು ಹಂತಹಂತವಾಗಿ ಪರಿಷ್ಕರಿಸಿ ರೂಪ ಕೊಡುವುದು ಇವರ ವೃತ್ತಿ ಹಾಗೂ ಪ್ರವೃತ್ತಿಯಾಗಿದೆ. ಅರಮನೆ, ಕೋಟಿಕೊತ್ತಲಗಳು, ಗುಡಿಗೋಪುರಗಳು, ಕಟ್ಟಡದ ಛಾವಣಿಗಳು, ಬಾಗಿಲು ಚೌಕಟ್ಟುಗಳು, ಒರಳು, ಹಾಸು ಬಂಡೆ, ಗಚ್ಚು ಅರೆಯುವ ಗಾಣದಕಲ್ಲು, ರುಬ್ಬುಗುಂಡುಗಳು, ಮೂಲೆಕಲ್ಲು, ಖಾಂಡಕಿ, ಗಲತೆ, ಗದಿಗೆ, ದಿಂಡು ಪರಕಿ, ಹೈದರು, ಕಂಭ, ಮಾಲುಗಂಬ, ಗೂಟದಕಲ್ಲು ಇತ್ಯಾದಿಗಳನ್ನು ನಿರ್ಮಿಸುವ ಜಾಣರು. ದೈತ್ಯ ಗಾತ್ರದ ವಿಗ್ರಹ, ಕಟ್ಟಡ, ಸ್ಮಾರಕಗಳು ಇವರ ಪ್ರತಿಭೆಗೆ ಸಾಕ್ಷಿಯಾಗಿವೆ. ಭಾರತದಾದ್ಯಂತ ನಿರ್ಮಿಸಿದ ಅಣೆಕಟ್ಟುಗಳು, ವಿಶ್ವವಿದ್ಯಾಲಯದ ಕಟ್ಟಡಗಳು, ವಿಧಾನ ಸೌಧಗಳು, ದೇವಾಲಯಗಳು, ಅದರೊಳಗಿನ ವಿವಿಧ ದೇವತೆಗಳ ಪ್ರತಿರೂಪಗಳು, ಇವೆಲ್ಲ ಇವರ ಸುತ್ತಿಗೆ ಮತ್ತು ಚಾಣಗಳ ಕೌಶಲ್ಯಪೂರ್ಣ ಬಳಕೆಗೆ ನಿದರ್ಶನವಾಗಿ ನಿಂತಿವೆ. ಎಲ್.ಕೆ.ಎ. ಅಯ್ಯರ್ ಹೇಳುವಂತೆ ಒಡ್ಡರು ಕಲ್ಲು ಮಣ್ಣಿನ ಕೆಲಸದೊಂದಿಗೆ ಉಪ್ಪು ತಯಾರಿಕೆಯಲ್ಲಿ ಉಪ್ಪು ಹೊರುವುದನ್ನು ಮಾಡುತ್ತಾರೆ. ಉಪ್ಪು ವಡ್ಡರು, ಬೇರೆ ಬೇರೆ ಪ್ರದೇಶಗಳಲ್ಲಿ ಹರಿದು ಹಂಚಿಹೋಗಿದ್ದು ಬೆಂಗಳೂರು, ಕೋಲಾರ ಇನ್ನಿತರ ಪಟ್ಟಣಗಳಲ್ಲಿ ರಸ್ತೆ ಗುಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇವರನ್ನು ಅದೇ ಜನಾಂಗದವರು ಅತ್ಯಂತ ಕೀಳಾಗಿ ಕಾಣುತ್ತಾರೆ. ಇವರಲ್ಲಿ ಕೆಲವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಜಮೀನು ಹೊಂದಿದ್ದು ಕೃಷಿಕರಾಗಿದ್ದಾರೆ. (The Mysore Tribles and Castes Vo. 4 page 674)

ಕಲ್ಲಿನ ಸ್ವರೂಪ, ಗುಣಮಟ್ಟವನ್ನು ತಿಳಿದುಕೊಳ್ಳುವ ಪರೀಕ್ಷಕರು[ಬದಲಾಯಿಸಿ]

ಒಡ್ಡರು ತಮ್ಮ ವೃತ್ತಿಯಲ್ಲಿ ಅತ್ಯಂತ ನಿಪುಣರು. ಭೂಮಿಯ ಒಳಗಿರುವ ಕಲ್ಲಿನ ಸ್ವರೂಪ, ಗುಣಮಟ್ಟವನ್ನು ತಿಳಿದುಕೊಳ್ಳುವ ಪರೀಕ್ಷಕರು, ಆ ಕಲ್ಲು ಹಾಳಾಗದಂತೆ ಒಡೆದು ತೆಗೆಯುವ ಕಲೆ ಇವರಿಗೆ ಕರಗತ. ಬಂಡೆಯ ಮೇಲೆ ಸಣ್ಣ ರಂಧ್ರ ಕೊರೆದು ಅದರೊಳಗಿಂದ ಹಾರೆಯನ್ನು ನೆಟ್ಟು, ಹಾರೆ ತುದಿಗೆ ತಾಗಿದ ಕಲ್ಲಿನ ಜಾತಿಯನ್ನು ಅರಿತುಕೊಂಡು, ಅದರ ಆಯುಷ್ಯವನ್ನೂ ತಿಳಿಯ ಬಲ್ಲವರು. ದೊಡ್ಡಬಂಡೆಯ ಮೇಲೆ ಹಸಿ ಕಳ್ಳಿ ಗಿಡದ ಕಟ್ಟಿಗೆ, ಎಕ್ಕೆಯ ಎಲೆ, ಮುತ್ತಿನೆಲೆಯ ಗಿಡ ಇವನ್ನೆಲ್ಲ ಒಟ್ಟಿ ಬೆಂಕಿಹಚ್ಚಿ, ಬಂಡ ಬಿಸಿಯಾದಾಗ ಸುಣ್ಣದ ನೀರನ್ನು ಬೆಂಕಿಯಲ್ಲಿ ಹಾಕಿ ಆ ಕಲ್ಲು ಒಡೆದು ಚೂರು ಚೂರಾಗುವಂತೆ ಮಾಡುತ್ತಾರೆ. ಹೀಗೆ ಸೀಳಿಸಿದ ಕಲ್ಲನ್ನು ಮತ್ತು ಅದರಿಂದ ಕಟ್ಟಿದ ಮೂರ್ತಿಗಳನ್ನು ನುಣುಪುಗೊಳಿಸಲು ಕೆಟ್ಟ ಬಾಳೆಹಣ್ಣು, ತ್ರಿಪುಳ ಚೂರ್ಣದ ನೀರು, ಮುಳ್ಳಿನಕಳ್ಳಿಯ ರಸ, ಇವನ್ನೆಲ್ಲ ಸೇರಿಸಿ ಅದರಲ್ಲಿ ಹತ್ತಿಯನ್ನು ಅದ್ದಿ ಕೈಯಿಂದ ಮೂರ್ತಿಗಳಿಗೆ ಹಚ್ಚಿ ತಿಕ್ಕುತ್ತಾರೆ. ಇದರಿಂದಾಗಿ ಆ ಕಲ್ಲಿನ ಮೂರ್ತಿಗಳು ಫಲಫಳನೆ ಹೊಳೆಯುತ್ತವೆ.

ವೈವಿಧ್ಯಮಯತೆ[ಬದಲಾಯಿಸಿ]

ಯಾವ ತಂತ್ರಜ್ಞಾನವೂ ಇಲ್ಲದೆ, ತಮ್ಮ ಬುದ್ಧಿಮತ್ತೆಯಿಂದ ದೇಸಿ ಪರಂಪರೆಯನ್ನು ಬಳಸಿಕೊಂಡು, ಉಳಿಸಿಕೊಂಡು ಬಂದಿದ್ದಾರೆ. ಆಧುನಿಕ ಎಲೆಕ್ಟ್ರಾನಿಕ್ ಯುಗದಲ್ಲಿ ಇವರ ಕಲೆಗೆ ಬೇಡಿಕೆ ಕಡಿಮೆಯಾಗಿದೆ. ಆದರೆ ಅವರ ಬೌದ್ಧಿಕ ಜಾಣ್ಮೆಗೆ ಬೆಲೆ ಕಡಿಮೆಯಾಗಿಲ್ಲ. ರಸ್ತೆಗಳೆಲ್ಲ ಕೂಡಿಕೊಳ್ಳುವ ಸರ್ಕಲ್ (ವೃತ್ತ)ಗಳಲ್ಲಿ ಹೈ ಮಾಸ್ಕ್ ದೀಪಸ್ತಂಭಗಳನ್ನು ನಿಲ್ಲಿಸುವಾಗ ಇವರ ಕೌಶಲ್ಯವನ್ನು ಈಗಲೂ ಬಳಸಿಕೊಳ್ಳಲಾಗುತ್ತದೆ. ದೇವಸ್ಥಾನಗಳ ಮುಂದಿನ ಪ್ರಾಂಗಣದಲ್ಲಿ ನಿಲ್ಲಿಸಿವ ಮಾಲಗಂಭಗಳನ್ನು ವೈವಿಧ್ಯಮಯವಾಗಿ ರೂಪಿಸುವಲ್ಲಿ ಇವರು ಸಿದ್ಧಹಸ್ತರು. ಉರಿಯುವ ಮಾಲಗಂಬ, ತಿರುಗುವ ಮಾಲಗಂಬ ಹಾಗೂ ತೂಗುವ ಮಾಲಗಂಬಗಳನ್ನು ನಿರ್ಮಿಸುತ್ತಾರೆ. ಇದಲ್ಲದೆ ಇಂಥ ಮಾಲುಗಂಬದ ಮೇಲೆ ಐನೂರು ಜನರು ಏಕಕಾಲಕ್ಕೆ ಕುಳಿತುಕೊಳ್ಳುವಂಥ ಆಸನಗಳನ್ನು ನಿರ್ಮಿಸಿ ರಚಿಸಿದ ಮಾಲುಗಂಬಗಳೂ ನಿದರ್ಶನಕ್ಕಿವೆ. ಉದಾ : ಮುಗುಳಖೋಡ ಯಲ್ಲಾಲಿಂಗ ಮಠದಲ್ಲಿದೆ. ಗುಹಾಂತರ ದೇವಾಲಯಗಳಲ್ಲಿ ಕೆತ್ತನೆಗೊಂಡಿರುವ ದಶಾವತಾರದ ಮೂರ್ತಿಗಳು, ಕಲ್ಲಿನ ರಥ, ಸಿಲಾಬಾಲಿಕೆಯವರು, ಅದರ ಕೈಯಲ್ಲಿಯ ಅಖಂಡ ಬಳೆಗಳು, ಸೂಕ್ಷ್ಮ ಕುಸುರಿ ಕೆಲಸದಿಂದ ಕಂಗೊಳಿಸುವ ಹೂ ಬಳ್ಳಿಗಳು, ಪ್ರಾಣಿಗಳ ಸಾಲುಗಳು, ನಮ್ಮ ಪುರಾಣ ಕಥೆಗಳನ್ನು, ರಾಮಾಯಣ ಮಹಾಭಾರತದ ಘಟನಾವಳಿಗಳನ್ನು ಪರಿಚಯಿಸುವ ದೇಗುಲದ ಭಿತ್ತಿಗಳು, ಕನ್ನಂಬಾಡಿ, ಕೊಯ್ನಾದಂಥ ಅಣೆಕಟ್ಟೆಗಳು ಇವೆಲ್ಲ ಕಲ್ಲನ್ನು ಮೇಣವಾಗಿಸಿ ರಚಿಸಿದ ಶಿಲ್ಪಿಗಳ ಪ್ರತಿಭೆಗೆ ನಿದರ್ಶನಗಳು. ದೈತ್ಯಾಕಾರದ ಏಕಶಿಲಾ ಗೊಮ್ಮಟ ಸಹಸ್ರಾರು ವರ್ಷಗಳಿಂದ ಈ ಕಲೆ ಮತ್ತು ಕಲಾವಿದರ ಕೊಡುಗೆಯಾಗಿ ನಿಂತಿದ್ದಾನೆ. ಗೇಟ್ವೇ ಆಫ್ ಇಂಡಿಯಾ ಕೂಡ ಈ ಸಾಲಿಗೆ ಸೇರುವ ಮತ್ತೊಂದು ಕಾಲ ಘಟ್ಟದ ಕೃತಿರೂಪ. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ನಿರ್ಮಿಸಲ್ಪಟ್ಟ ಕನ್ನಂಬಾಡಿ ಅಣೆಕಟ್ಟು (ಕೃಷ್ಣರಾಜ ಮಹಾಸಾಗರ) ವಿಶ್ವಮಾನ್ಯತೆ ಪಡೆದ ನಿಮಿತಿ, ಇದರ ನಿರ್ಮಾತೃ ಬೋವಿ ಜನಾಂಗ ಎಂದರಿತ ಅರಸರು ಬೋವಿ ಜನಾಂಗವು ಅಲೆಮಾರಿಗಳಂತೆ ನಿರ್ಗತಿಕರಾಗಿ ಬದುಕುವುದನ್ನು ತಪ್ಪಿಸಲು ಇವರನ್ನು ಪರಿಶಿಷ್ಟ ಜನಾಂಗದಲ್ಲಿ ಸೇರಿಸಿದರು. ಅಮರ ಶಿಲ್ಪ ಜಕ್ಕಣಾಚಾರಿ, ಢಕ್ಕಣ, ನಾಗಾರ್ಜುನ ಕೊಂಡದ ನಾಗಾಡ್ಯಾಮ್, ಸಿಂಗೋಜ, ಆನಂದ, ಚಕ್ರಕೋಟಯ್ಯ, ಬೀರೋಜ, ದಾಸೋಜ, ಚೌವಣ, ಇಕ್ಕುಡಾಚಾರಿ, ಮಲ್ಲಿ ತಮ್ಮ, ಹೊಯ್ಸಳಾಚಾರಿ, ಇನ್ನೂ ಅನೇಕರು ರಾಜಮರ್ಯಾದೆ ಪಡೆದ ಕಲ್ಕುಟಿಗರು, ಇವರ ದುಡಿಮೆ ಅಜರಾಮರವಾದುದು. ಆದ್ದರಿಂದಲೇ ಇವರ ಕೆಲಸವನ್ನು “ನೀರೋಳಿಟ್ಟಕ್ಕರವಲ್ಲ, ಶಿಲೆಯಲ್ಲಿರಟ್ಟಕ್ಕರ’ ಎಂದು ವರ್ಣಿಸಲಾಗಿದೆ.

ಮೂಲಭೂತ ಸೌಕರ್ಯ[ಬದಲಾಯಿಸಿ]

ನಾಗರಿಕ ಸಮಾಜದ ಬೆಳವಣಿಗೆಗೆ ಅತ್ಯಂತ ಅವಶ್ಯಕವಾದ ಮೂಲಭೂತ ಸೌಕರ್ಯವೆಂದರೆ, ರಸ್ತೆಗಳು ಮತ್ತು ಸೇತುವೆಗಳು. ಈ ಎರಡು ಸಂಪರ್ಕ ಸಾಧನಗಳನ್ನು ಪ್ರಾಚೀನ ಕಾಲದಿಂದಲೂ ನಿರ್ಮಿಸುತ್ತ ಬಂದವರು ಒಡ್ಡರು. ರಸ್ತೆ ನಿರ್ಮಾಣಕ್ಕೆ ಬೇಕಾಗುವ ವಿವಿಧ ಬಗೆಯ ಕಲ್ಲುಗಳನ್ನು ಒಡೆದು, ಸೇತುವೆಗೆ ಬೇಕಾಗುವ ಬೃಹದಾಕಾರದ ಬಂಡೆಗಳನ್ನು ಕತ್ತರಿಸಿ, ಸಾಗಿಸಿ, ಕಬ್ಬಿಣ ಸಿಮೆಂಟಿನ ಸಹಾಯವಿಲ್ಲದೆ ಸಂಪರ್ಕ ಮಾರ್ಗ ಕಲ್ಪಿಸುವ ಶಕ್ತಿ ಇವರಲ್ಲಿದೆ. ಹಾಗೆ ಅವರು ಮಾರ್ಗಗಳನ್ನು ಆರಂಭಿಸದೇ ಹೋಗಿದ್ದರೆ ವ್ಯಾಪಾರ – ಉದ್ದಿಮೆಗಳು ಇಷ್ಟು ತೀವ್ರಗತಿಯಲ್ಲಿ ಬೆಳೆಯುತ್ತಿರಲಿಲ್ಲ ಎಂದೆನಿಸುತ್ತದೆ. ನಗರಗಳು ದಟ್ಟವಾಗಿಯೂ ವಿಸ್ತ್ರತವಾಗಿಯೂ ಹಬ್ಬಿಕೊಳ್ಳಲು ರಸ್ತೆಗಳೇ ಮುಖ್ಯ ಕಾರಣವೆನ್ನಬಹುದು. ಇಂದಿನ ಬಹು ಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಇಟ್ಟಂಗಿ, ಕಬ್ಬಿಣ, ಸಿಮೆಂಟು ಅಧಿಕ ಬಳಕೆಯಾಗುತ್ತಿದ್ದು, ಕಲ್ಲಿನ ಬಳಕೆ ತೀರ ಕಡಿಮೆಯಾಗಿದೆ. ಆದಾಗ್ಯೂ ಈ ಸಾಮಗ್ರಿಗಳ ಸಾಗಾಣಿಕೆಗೆ ಇವರು ನಿರ್ಮಿಸಿದ ರಸ್ತೆಗಳು ಸಹಕಾರಿಯಾಗಿವೆ. ಇವತ್ತು ಅತ್ಯಧಿಕವಾಗಿ ಗ್ರಾನೈಟ್ / ಮಾರ್ಬಲ್ ಇತ್ಯಾದಿ ನೆಲಹಾಸುಗಳಾಗಿ ಬಳಕೆಯಾಗುತ್ತಿವೆ. ಇವುಗಳನ್ನು ಕಂಡು ಹಿಡಿದವರು ಒಡ್ಡರು. ಈಗಲೂ ಇವುಗಳನ್ನು ವಿವಿಧ ಚಿತ್ತಾರದಲ್ಲಿ ಹಾಸುವ ಕಲೆಯಲ್ಲಿ ನಿಪುಣರಾಗಿದ್ದಾರೆ. ಕಲ್ಲನ್ನು ನೆಲದಿಂದ ಮೇಲೆತ್ತುವ, ಕತ್ತರಿಸುವ, ಸಾಗಿಸುವ ಹಂತಗಳಲ್ಲಿ ಆಧುನಿಕ ಯಂತ್ರಗಳು / ತಂತ್ರಜ್ಞಾನ ಮುನ್ನುಗ್ಗಿ ಇವರ ಕೈಯಿಂದ ಕೆಲಸವನ್ನು ಕಿತ್ತುಕೊಂಡಿದೆ. ’ಕಾಲಾಯ ತಸ್ಮೈನಮಃ’; ಎನ್ನದೆ ಗತಿಯಿಲ್ಲವಾಗಿದೆ. ಮನುಷ್ಯ ಕುಲದ ಮನ ಶಾಂತಿಗೆ ಗುಡಿ ಗೋಪುರಗಳ ನಿರ್ಮಾಣದಲ್ಲಿ ತೊಡಗಿದ ಒಡ್ಡರು ಯಾವುದೇ ಧರ್ಮ, ಜಾತಿ, ಪಂಗಡಗಳ ಭೇದವಿಲ್ಲದೆ, ಮಸೀದಿ, ಇಗರ್ಜಿ, ದೇಗುಲ, ಸ್ತೂಪ, ಬಸದಿ, ವಿಹಾರ, ಎಂಬ ಭೇದವಿಲ್ಲದೆ ಮಠ ಮಾನ್ಯಗಳನ್ನು ವೃಂದಾವನ, ಇತ್ಯಾದಿಗಳನ್ನು ರಚಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ.

ವಡ್ಡರ ಸಂಸ್ಕೃತಿ[ಬದಲಾಯಿಸಿ]

ಯಾವುದೇ ಜನಾಂಗದ ಜೀವನ ವಿಧಾನವೇ ಅವರ ಸಂಸ್ಕೃತಿಯಾಗಿರುತ್ತದೆ. ಸಂಸ್ಕಾರ ಮೂಲದಿಂದ ಬಂದ ಸಂಸ್ಕೃತಿಯು ಮಾನವ ಜನನದಿಂದ ಆರಂಭಗೊಂಡು ಮರಣದವರೆಗಿನ ಸರ್ವ ಸಂಪ್ರದಾಯಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಜನಸಮುದಾಯವು ತನ್ನದೇ ಆದ ವಿಶಿಷ್ಟ ಲಕ್ಷಣಗಳನ್ನು ರೀತಿ-ನೀತಿಗಳನ್ನು ರೂಢಿಯಲ್ಲಿರಿಸಿಕೊಂಡಿರುತ್ತದೆ.

ಸಂಪ್ರದಾಯಗಳು ಮತ್ತು ಜನನ ಕಾಲದಲ್ಲಿ[ಬದಲಾಯಿಸಿ]

ಬೋವಿ / ಒಡ್ಡ ಜನಾಂಗ[೨]ದ ಮಹಿಳೆಯು ಗರ್ಭಿಣಿಯಾಗಿದ್ದಾಗ ವಿಶ್ರಾಂತಿಯಲ್ಲಿರದೆ, ಸತತವಾಗಿ ಕೆಲಸದಲ್ಲಿ ತೊಡಗಿರುತ್ತಾಳೆ. ಕಲ್ಲು ಒಡೆಯುವುದು, ತಾವು ಸಾಕಿದ ಪ್ರಾಣಿಗಳಿಗೆ ಮೇವು ತರುವುದು, ಮನೆಯ ಒಲೆಗೆ ಉರುವಲು ತರುವುದು ಇಂಥ ದೈನಂದಿನ ಕೆಲಸಗಳಲ್ಲಿ ನಿರಂತರವಾಗಿ ತೊಡಗಿರುತ್ತಾಳೆ. ಹೀಗೆ ಕೆಲಸ ಮಾಡುತ್ತಿರುವಾಗಲೇ ಹೆರಿಗೆಯಾಗಿರುವ ಸಂದರ್ಭಗಳು ಉಂಟು. ಸಾಮಾನ್ಯವಾಗಿ ಇವರು ಮನೆಯಲ್ಲಿಯೇ ಅನುಭವಿ ಸೂಲಗಿತ್ತಿಯಿಂದ ಹೆರಿಗೆ ಮಾಡಿಸಿಕೊಳ್ಳುವರು. ಇತ್ತೀಚೆಗೆ ಆಧುನಿಕ ಜೀವನ ಶೈಲಿಗೆ ಅನುಗುಣವಾಗಿ ಕೆಲವರು ವೈದ್ಯರಿಂದ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುತ್ತಿದ್ದಾರೆ. ಹೆರಿಗೆಯಾದ ಮನೆಯಲ್ಲಿ ಆ ಮನೆಯ ಅಂಗಳದಲ್ಲಿ ಮೂರು ಅಡಿ ಆಳದ ತಗ್ಗನ್ನು ತೋಡಿ, ಅದರಲ್ಲಿಯೇ ೧ ಅಡಿ ಆಳದ ಇನ್ನೊಂದು ತಗ್ಗನ್ನು ಅಗೆಯುವರು. ಇದು ಬಾಣಂತಿಯ ಬಚ್ಚಲು ಎನಿಸಿಕೊಳ್ಳುತ್ತದೆ. ಈ ಒಂದಡಿ ಆಳದ ಗುಂಡಿಯಲ್ಲಿ ಬಾಣಂತಿಯ ಮಾಸು ಅದರೊಂದಿಗೆ ಒಂದಷ್ಟು ಕಾಳು/ ಧಾನ್ಯವನ್ನು ಹಾಕಿ ಮುಚ್ಚುತ್ತಾರೆ. ಬಾಣಂತಿಗೆ ನೀರೆರೆಯುವಾಗ ತಮ್ಮ ಓಣಿಯ ಹೆಣ್ಣು ಮಕ್ಕಳನ್ನು ಕೂಗಿ ಕರೆಯುತ್ತಾರೆ. ಆಗ ನೆರೆ ಹೊರೆಯ ಮಹಿಳೆಯರು ಬಿಸಿ ನೀರಿನ ಪಾತ್ರೆಗಳನ್ನು ತಂದು ಬಾಣಂತಿಗೆ ನೀರೆರೆಯುತ್ತಾರೆ. ಅನಂತರ ಅವಳಿಗೆ ಅವಶ್ಯಕವಾದ ಸಂಪೂರ್ಣ ಶಕ್ತಿಯುತವಾದ ಆಹಾರವನ್ನು ಪೂರೈಸುತ್ತಾರೆ. ಐದು ದಿನಗಳಾದ ನಂತರ ಬಾಣಂತಿಯ ಎಚ್ಚು, ಹಲ್ಲುಪುಡಿ, ಕಾಳು ಕಡಿಯನ್ನೆಲ್ಲ ಹಾಕಿ ಬಾಣಂತಿಯ ಬಚ್ಚಲಿಗೆ ಪೂಜೆ ಸಲ್ಲಿಸಿ ಅದನ್ನು (ಗುಂಡಿ) ಮುಚ್ಚುತ್ತಾರೆ. ಐದು ದಿನಗಳವರೆಗೆ ಬಾಣಂತಿಯ ಹತ್ತಿರ ಕುಡುಕೋಲನ್ನು ಕಬ್ಬಿಣದ ತುಂಡನ್ನು ಇಟ್ಟಿರುತ್ತಾರೆ. ಮಗು ಹುಟ್ಟಿದ ಐದನೇ ದಿನದಂದು ಐದೇಸಿ (ಐದೇಶಲ್ ನಾಮಕರಣ) ಕಾರ್ಯಕ್ರಮ ಮಾಡುತ್ತಾರೆ. ಗಂಡು ಮಗುವಿದ್ದರೆ ಅದರ ಸೊಂಟಕ್ಕೆ ಉಡಿದಾರವನ್ನು ಕಟ್ಟುತ್ತಾರೆ. ಹೆಣ್ಣು ಮಗುವಿದ್ದರೆ ಹನುಮಂತನ ಚಿತ್ರವಿರುವ ಕಪ್ಪುಮಣಿಗಳ ಸರವನ್ನು ಕೊರಳಲ್ಲಿ ಹಾಕುತ್ತಾರೆ. ಸಾಮಾನ್ಯವಾಗಿ ಸೀರೆಯ ಜೋಳಿಗೆಯೇ, ಇವರಿಗೆ ತೊಟ್ಟಿಲು. ಆ ತೊಟ್ಟಿಲಲ್ಲಿ ಹಾಕಿ ಮಗುವಿಗೆ ಹೆಸರಿಡುತ್ತಾರೆ. ಮಗುವಿನ ಸೋದರತ್ತೆಯು ಈ ಸಮಾರಂಭದ ನಾಯಕಿಯಾಗಿರುತ್ತಾಳೆ. ನಾಮಕರಣಕ್ಕೆ ಮುಂಚೆ ಅಂದರೆ ಬಾಣಂತಿಯ ಬಚ್ಚಲನ್ನು ಮುಚ್ಚಿದ ನಂತರ ಮನೆಯನ್ನು ಶುದ್ಧೀಕರಿಸಿ, ಸೂಲಗಿತ್ತಿ, ಬಾಣಂತಿ ಹಾಗು ಅವಳ ಮನೆಯ ಹೆಣ್ಣುಮಕ್ಕಳೂ ಕೈಯಲ್ಲಿಯ ಬಳೆಗಳನ್ನು ತೆಗೆದು ಹೊಸ ಬಳೆ ಹಾಕಿಸಿಕೊಳ್ಳುತ್ತಾರೆ (ಮುಡಚಟ್ಟು) ಮೈಲಿಗೆ ತೆಗೆದು ಹೊಸತನ್ನು ತಳೆದಂತೆ ಎಂದು ಭಾವಿಸುತ್ತಾರೆ. ಈ ದಿನದಂದು ಮಾಂಸದ ಅಡುಗೆಯ ಊಟ ಮಾಡಿ ಮದ್ಯ ಸೇವಿಸುತ್ತಾರೆ. ಐದೇಶಿಯ ನಂತರ ಬಾಣಂತಿಯು ಮನೆಗೆಲಸಕ್ಕೆ ಅಣಿಯಾಗುತ್ತಾಳೆ. ಇನ್ನೆಂಟು ದಿನ ಬಿಟ್ಟು ಅಂದ್ರೆ ಹದಿಮೂರನೆಯ ದಿನ ಎದುರು ಕೊಡ ತೆಗೆದುಕೊಳ್ಳುವ ಸಂಪ್ರದಾಯ ಇರುತ್ತದೆ. ಎದುರು ಕೊಡವೆಂದರೆ ಓಣಿಯ ಯಾರಾದರೂ ಮಹಿಳೆಯು ನದಿ / ಕೆರೆ/ ಬಾವಿ/ ನಲ್ಲಿಯಿಂದ ನೀರಿನ ಕೊಡ ಹೊತ್ತು ತರುತ್ತಾರೆ. ಮನೆಯ ಹತ್ತಿರಕ್ಕೆ ಬಂದಾಗ ಬಾಣಂತಿಯು ಅಲ್ಲಿಗೆ ಹೋಗಿ ನೀರಿನ ಕೊಡ ಹೊತ್ತು ತರುತ್ತಾಳೆ. ಹೆರಿಗೆಯಾದ ಹೆಣ್ಣುಮಕ್ಕಳು ಆದಷ್ಟು ಬೇಗ ದುಡಿಮೆಗೆ ಸಿದ್ಧವಾಗುವ ಈ ಪ್ರಕ್ರಿಯೆಯು ಈ ಜನರ ದುಡಿಯುವ ಸಂಸ್ಕೃತಿಗೆ ಪ್ರತೀಕವಾಗಿದೆ. ಮಗುವಿನ ಹೊಟ್ಟೆಯ ಮೇಲೆ ಬರೆ ಹಾಕುವ ಪದ್ಧತಿ ಚಾಲ್ತಿಯಲ್ಲಿದೆ. ಸೂಜಿಯನ್ನು ಕಾಯಿಸಿ ಬರೆ ಹಾಕುವುದರಿಂದ ಮಗುವಿಗೆ ಸಾಂಕ್ರಾಮಿಕ ರೋಗಗಳು ಬರುವುದಿಲ್ಲವೆಂಬ ನಂಬಿಕೆಯಿದೆ. ಇದಲ್ಲದೆ, ಕೆಲವರು ಕ್ಯಾರ ಬೀಜದ ಎಣ್ಣೆಯನ್ನು ವೀಳೆದೆಲೆಗೆ ಹಚ್ಚಿ ಆ ಎಲೆಯನ್ನು ಹೊಟ್ಟೆಯ ಎಡ ಹಾಗೂ ಬಲ ಭಾಗಕ್ಕೆ ಅಂಟಿಸಿ ತೆಗೆಯುತ್ತಾರೆ. ಹೆಣ್ಣು ಮಕ್ಕಳು ಮೈನೆರೆದಾಗ (ಋತುಮತಿ) ಇವರು ಸಹ ಬುಡಕಟ್ಟು ಜನಾಂಗದವರಂತೆ ಮನೆ ಹೊರಗೆ ಗುಡಿಸಲು ನಿರ್ಮಿಸಿ ಅಲ್ಲಿಯೇ ನೀರೆರೆದು ಮೂರು ದಿನ / ೯ ದಿನ ಹೊರಗಿನ ಜನರ ಕಣ್ಣಿಗೆ ಬೀಳದ ಹಾಗೆ ಕಾಪಾಡುವ ಸಂಪ್ರದಾಯವಿದೆ. ಒಂಭತ್ತು ದಿನಗಳವರೆಗೆ ಯಾರ ಕಣ್ಣಿಗೂ ಕಾಣದಂತೆ ಹಾಗೂ ಯಾರಿಗೂ ವಿಷಯ ಗೊತ್ತಾಗದಂತೆ ನೋಡಿಕೊಳ್ಳುತ್ತಿದ್ದರು. ತಾತ್ಕಾಲಿಕವಾಗಿ ನಿರ್ಮಿಸಿದ ಲಕ್ಕಿಯ ಕಟ್ಟಿಗೆ ಅಥವಾ ಅವರ ಕಟ್ಟಿಗೆಯ ಗುಡಿಸಲನ್ನು ೩ ದಿನಗಳ ನಂತರ ನಸುಕಿನಲ್ಲಿದ್ದು ದೂರಕ್ಕೊಯ್ದು ಸುಟ್ಟು ಹಾಕುವ ಪದ್ಧತಿಯಿತ್ತು. ಆಧುನಿಕತೆಯ ಗಾಳಿ ಸೋಂಕಿನ ನಂತರ ಇವರಲ್ಲಿಯೂ ಸಾಕಷ್ಟು ಬದಲಾವಣೆಯಾಗಿದೆ. ಋತುಮತಿಯಾದ ಹುಡುಗಿಯನ್ನು ಕೂಡಿಸಿ ಹಾಡುವ ಸಂಪ್ರದಾಯ ರೂಢಿಯಲ್ಲಿದೆ. ಅವರವರ ಅಂತಸ್ತಿಗೆ ತಕ್ಕಂತೆ ಹನ್ನೊಂದು ದಿನಗಳವರೆಗೆ ಕೂಡಿಸುತ್ತಾರೆ. ೨೧ ಅಥವಾ ೪೧ ದಿನಗಳು ಕೂಡಿಸುವ ಪದ್ಧತಿಯೂ ಇದೆ. ದೆವ್ವ – ಭೂತಗಳು ಮೈನೆರೆದ ಹೆಣ್ಣಿಗೆ ಕಾಡಬಾರದೆಂದು ಹಲವು ಉಪಾಯಗಳನ್ನು ಕಂಡುಕೊಂಡಿದ್ದಾರೆ. ಮಾಂಸಾಹಾರ ನಿಷೇಧ, ಏಳು ದಿನಗಳ ನಂತರ ಕೋಳಿಯ ಬಲಿ ಕೊಡುವುದು, ಅದರ ರಕ್ತವನ್ನು ಅವಳ ಅಂಗಾಲಿಗೆ ಹಚ್ಚಿ, ಜೊತೆಗೆ ಕಬ್ಬಿಣ ಇಟ್ಟುಕೊಳ್ಳವಂತೆ ನೋಡಿಕೊಳ್ಳುವುದು. ಇವೆಲ್ಲ ದುಷ್ಟಶಕ್ತಿಯನ್ನು ದೂರವಿರಿಸುವ ಪ್ರಯತ್ನಗಳು. ಗುಡಿಸಲು ಸುಟ್ಟು ಹಾಕಿದ ತರುವಾಯ ಬಂಧು-ಬಾಂಧವರಿಗೆಲ್ಲ ವಿಷಯ ತಿಳಿಸಿ ಹೊಸ ಬಟ್ಟೆ ಧರಿಸಿ ಹುಡುಗಿಗೆ ಅಲಂಕರಿಸಿ ಹಬ್ಬದಡಿಗೆ ಮಾಡಿ ಉಣ್ಣುತ್ತಾರೆ. ಮಾಂಸಾಹಾರ ಮತ್ತು ಸಿಹಿ ತಿಂಡಿ ಮಾಡುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. http://www.kannadaprabha.com/columns/%E0%B2%95%E0%B2%B2%E0%B3%8D%E0%B2%B2%E0%B2%B0%E0%B2%B3%E0%B2%BF%E0%B2%B8%E0%B3%81%E0%B2%B5-%E0%B2%95%E0%B2%B2%E0%B3%86%E0%B2%AF-%E0%B2%B9%E0%B2%BF%E0%B2%82%E0%B2%A6%E0%B2%BF%E0%B2%A6%E0%B3%86-%E0%B2%AC%E0%B3%8B%E0%B2%B5%E0%B2%BF-%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF%E0%B2%A6-%E0%B2%B6%E0%B3%8D%E0%B2%B0%E0%B2%AE/105740.html[ಶಾಶ್ವತವಾಗಿ ಮಡಿದ ಕೊಂಡಿ]
  2. http://kanaja.in/archives/17908[ಶಾಶ್ವತವಾಗಿ ಮಡಿದ ಕೊಂಡಿ]