ಸದಸ್ಯ:Mokshith kudekallu 17/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಡೆಕಲ್ಲು ಐನ್ಮನೆ ಸುಳ್ಯ ತಾಲೂಕಿನ ಆಲೇಟ್ಟಿ ಗ್ರಾಮದಲ್ಲಿರುವ ಕುಡೆಕಲ್ಲು ಮನೆತನದ ಈಗಿರುವ ಐನ್ಮನೆಯನ್ನು ತಿಮ್ಮಯ್ಯಮೂರ್ತಿಯವರು ಕಟ್ಟಿಸಿದರು.ಇದೊಂದು ಸಾಂಪ್ರದಾಯಿಕ ನಾಲ್ಕಂಕಣದ ಮನೆ, ಮೊದಲಿಗೆ ಹುಲ್ಲು ಹಾಸಿನ ಮನೆಯಾಗಿತ್ತು. ಈ ಮನೆ ಎರಡು ಬಾರಿ ನವೀಕರಣಗೊಂಡಿದೆ. ೧೯೫೨ರಲ್ಲಿ ಕುಡೆಕಲ್ಲು ಮುತ್ತಣ್ಣ ಗೌಡರ ಆಡಳಿತ ಸಂದರ್ಭದಲ್ಲಿ, ಅವರ ಪರವಾಗಿ ಕುಡೆಕಲ್ಲು ರಾಮಯ್ಯ ಗೌಡರು ಹುಲ್ಲು ಹಾಸಿನ ಮಾಡನ್ನು ಮಂಗಳೂರು ಹಂಚಿನ ಚಾವಣಿಯನ್ನಾಗಿ ಪರಿವರ್ತಿಸಿದರು.

ಪುನರ್ ನಿರ್ಮಾಣ[ಬದಲಾಯಿಸಿ]

ನಂತರ ೧೯೯೭ರಲ್ಲಿ ಅಂದಿನ ಯಜಮಾನರಾಗಿದ್ದ ದಿ। ಕೃಷ್ಣಪ್ಪ ಗೌಡ ಮತ್ತು ಆಡಳಿತದಾರರಾಗಿದ್ದ ದಿ। ದಾಸಪ್ಪ ಗೌಡರ ಅಧಿಕಾರವಧಿಯಲ್ಲಿ ಮನೆಯನ್ನು ಕೆಡವದೆ ತಾಂತ್ರಿಕ ಕೌಶಲ್ಯದಿಂದ ಹಳೆಯ ಮಣ್ಣಿನ ಗೋಡೆಗಳ ಸ್ಥಾನದಲ್ಲಿ ಹೊಸದಾಗಿ ಕಲ್ಲಿನ ಗೋಡೆಗಳ ನಿರ್ಮಾಣ ಮಾಡಲಾಯಿತು.

ದೈವಗಳು[ಬದಲಾಯಿಸಿ]

ಕುಡೆಕಲ್ಲು ಮನೆತನದ ಮೂಲ ವ್ಯಕ್ತಿಯೆಂದು ಹೇಳಲಾಗುವ ಗೌಡಜ್ಜರ ಕಾಲದಿಂದಲೇ ‍ಐನ್ ಮನೆಯು ಧಾರ್ಮಿಕವಾಗಿ ಒಂದು ಆರಾಧನಾ ಕೇಂದ್ರವಾಗಿದೆ. ರುದ್ರಚಾಮುಂಡಿ ಈ ಮನೆತನದ ಧರ್ಮದೈವ.'ಮುಖ್ಯದೈವವಾಗಿ ವಿಷ್ಣುಮೂರ್ತಿ', ಕಾರ್ಣಿಕ ದೈವ ವಾಗಿ ಕಲ್ಲುರ್ಟಿ ಐನ್ ಮನೆಯ ಆವರಣದೊಳಗೆ ಆರಾಧನೆಗೊಳ್ಳುತ್ತಿದೆ. ಇಲ್ಲಿಯ ವಿಷ್ಣುಮೂರ್ತಿ ದೈವದ ಸ್ಥಾನವು ಕಲಾತ್ಮಕತೆಯಿಂದ ಸ್ಥಳಕ್ಕೊಂದು ಭವ್ಯತೆಯನ್ನು ತಂದಿದೆ. ಅನತಿ ದೂರದಲ್ಲಿ ಮನೆತನಕ್ಕೆ ಸೇರಿದ ಸ್ಥಳದಲ್ಲಿ ಬೈನಾಟಿ ದೈವದ ಆರಾಧನೆ ನಡೆಯುತ್ತಿದೆ. ವರ್ಷಂಪ್ರತಿ ಕಳಿಯಾಟ ಮಹೋತ್ಸವವು ಮಾರ್ಚ್ ತಿಂಗಳ ೨೪ ರಿಂದ ೨೭ರ ವರೆಗೆ ನಡೆಯುತ್ತದೆ. ಹರಕೆ ರೂಪದಲ್ಲಿರುವ ಆದಾಯವು ಐನ್ಮನೆಯ ಅಭಿವೃದ್ಧಿಗೆ ಬಹಳಷ್ಟು ಸಹಕಾರಿಯಾಗಿದೆ. ಗೌಡರ ಬಳಿ ಪದ್ದತಿಯ ಪ್ರಕಾರ ಕುಡೆಕಲ್ಲು ಕುಟುಂಬಸ್ತರು ಕಬರು ಬಳಿಯನ್ನು ಹೊಂದಿರುತ್ತಾರೆ.[೧]

ಇತಿಹಾಸ[ಬದಲಾಯಿಸಿ]

ಕ್ರಿ.ಶ.೧೮೩೪ರಲ್ಲಿ ಕೊಡಗು ಅನೀರಿಕ್ಷಿತವಾದ ರಾಜಕೀಯ ಬದಲಾವಣೆ ಕಂಡಿತು. ವಿದ್ರೋಹಕ್ಕೊಳಗಾಗಿ ಮಡಿಕೇರಿ ಪತನವಾಗುತ್ತದೆ. ಸುಳ್ಯ, ಪುತ್ತೂರು ಪ್ರದೇಶಗಳನ್ನು ಅಂದಿನ ಕೆನರಾ ಜಿಲ್ಲೆಗೆ ಸೇರಿಸುತ್ತಾರೆ. ಭತ್ತವನ್ನು ಹಣವನ್ನಾಗಿ ಪರಿವರ್ತಿಸಿ ಕಂದಾಯ ಕಟ್ಟಬೇಕೆನ್ನುವ. ಬ್ರಿಟಿಷರ ಆರ್ಥಿಕ ನೀತಿ ಸುಳ್ಯ ಪರಿಸರದಲ್ಲಿ ಅಸಮಾಧಾನವನ್ನುಂಟು ಮಾಡುತ್ತದೆ. ಇದೆಲ್ಲದರ ಪರಿಣಾಮವಾಗಿ ಬ್ರಿಟಿಷರನ್ನು ಪ್ರತಿರೋದಿಸಿ ಕೊಡವರಸವನ್ನು ಮರು ಸ್ಥಾಪಿಸುವ ಪ್ರಯತ್ನವಾಗಿ ಬಂಡಾಯದ ಪೂರ್ವಸಿದ್ಧತೆ ಕುಡಕಲ್ಲು ಮನೆತನಕ್ಕೆ ಕೌಟುಂಬಿಕವಾಗಿ ಅತಿ ಹತ್ತಿರದ ಸಂಬಂಧಿ ಕೆದಂಬಾಡಿ ರಾಮೇಗೌಡನ ನಾಯಕತ್ವದಲ್ಲಿ ನಡೆಯುತ್ತದೆ.ಈ ಹೋರಟದಲ್ಲಿ ಬೆಂಬಲವಾಗಿ ಈ ಕುಡಕಲ್ಲಿನ ಪುಟ್ಟಗೌಡ ಭಾಗಿಯಾಗಿರುತ್ತಾರೆ.ಪುಟ್ಟಗೌಡ ೭ ವರ್ಷಗಳ ಸೆರೆವಾಸ ಅನುಭವಿಸುವುದಲ್ಲದೆ ಈ ಮನೆತನಕ್ಕೆ ಇದ್ದ ಮುನ್ಷಿ ಪದವಿಯನ್ನು ಕಳೆದುಕೊಳ್ಳಲು ಕಾರಣವಾದರು. ಆದರೆ ಬ್ರಿಟಿಷರ ವಿರುದ್ಧ ಸೆಟೆದು ಹೋರಾಡಿದವೀರರ ಮನೆತನ ಕುಡೇಕಲ್ಲು ಎನ್ನುವ ಪ್ರಶಂಸೆಯ ಮಾತು ಉಳಿದುಕೊಳ್ಳಲು ಪುಟ್ಟಗೌಡರು ಕಾರಣರಾದರು. ಮನೆಯ ಎಲ್ಲಾ ಆಗುಹೋಗುಗಳನ್ನು ಮನೆತನದ ಹಿರಿಯರ ನೇತೃತ್ವದಲ್ಲಿ ನಡೆಯುತ್ತದೆ. [೨]

ಉಲ್ಲೇಖಗಳು[ಬದಲಾಯಿಸಿ]

  1. http://wikimapia.org/1471179/Kudekallu-Daivasthana
  2. ಪೂಕರೆ ಮತ್ತು ಇತರೆ ಜನಪದ ಲೇಖನಗಳು;ಲೇಖಕರು-ಪೂವಪ್ಪ ಕಣಿಯೂರು;ಇಸವಿ-೨೦೦೪;ಪುಟಸಂಖ್ಯೆ ೨೬-೨೮;ಪ್ರಕಾಶಕರು-ರಾಜ್ ಪ್ರಕಾಶ್ ಮೈಸೂರು