ಮಿರ್ಜಾ ಇಸ್ಮಾಯಿಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಿವಾನ್ ಮಿರ್ಜಾ ಇಸ್ಮಾಯಿಲ್

ಮಿರ್ಜಾ ಇಸ್ಮಾಯಿಲ್ (೧೮೮೩ - ಜನವರಿ ೮, ೧೯೫೯) ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ, ಮೈಸೂರಿನ ದಿವಾನರಾಗಿದ್ದರು. ಕಾಗದದ ಕಾರ್ಖಾನೆ, ಸಕ್ಕರೆ ಕಾರ್ಖಾನೆ, ಮೊದಲಾದ ಕಾರ್ಖಾನೆಗಳನ್ನು ಸ್ಥಾಪಿಸಲು ಕಾರಣಕರ್ತರಾದವರು. ವೃಂದಾವನ ಉದ್ಯಾನವನ್ನು ನಿರ್ಮಿಸಿದವರು ಮಿರ್ಜಾರವರು. ಸಂಸ್ಥಾನದ ಸಮೃದ್ಧಿ ಮತ್ತು ಸೊಬಗುಗಳಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಅವರು ಹಿಂದೂ ಮುಸ್ಲಿಮ್ ಸೌಹಾರ್ದತೆಗೂ ಕಾರಣರಾಗಿದ್ದರು[೧].

ಬಾಲ್ಯ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

  • ಇವರು ಪರ್ಷಿಯಾದ ಒಬ್ಬ ಶ್ರೀಮಂತ ಮನೆತನದಿಂದ ಬಂದಿದ್ದವರು . ಆಲಿ ಅಸ್ಗರ್, ಅವರ ಅಜ್ಜ. ತಮ್ಮ ೧೬ ನೆಯ ವಯಸ್ಸಿನಲ್ಲೇ ಬೆಂಗಳೂರಿಗೆ ಬಂದಿದ್ದರು. ಓದು ಬರಹ ಬರದಿದ್ದರೂ, ವ್ಯಾಪಾರದಲ್ಲಿ ನಿಪುಣರು, ಬುದ್ಧಿವಂತರು ಮತ್ತು ನಂಬಿಕೆಗೆ ಅರ್ಹರು. ಮಹಾರಾಜರ ವಿಶ್ವಾಸ ಮತ್ತು ನಂಬಿಕೆಯನ್ನು ಸಂಪಾದಿಸಿದರು. ಈಗಲೂ ಅವರ ಹೆಸರಿನ ರಸ್ತೆ ಬೆಂಗಳೂರಿನಲ್ಲಿದೆ. ಮಿರ್ಜಾರವರ ತಂದೆ ಆಗಾಖಾನ್, ಚಾಮರಾಜ ಒಡೆಯರ, ಅಂಗರಕ್ಷಕರಾಗಿದ್ದರು. ಈ ಮನೆತನ ಹೀಗೆ, ಮಹಾರಾಜರ ವಿಶ್ವಾಸ, ನಂಬಿಕೆಗೆ ಅರ್ಹರಾದರು[೨].
  • ಮಿರ್ಜಾ ಇಸ್ಮಾಯಿಲ್‍ರು ೧೮೮೩ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಸೆಂಟ್ ಪ್ಯಾಟ್ರಿಕ್ ಸ್ಕೂಲ್, ಮತ್ತು ವೆಸ್ಲಿಯನ್ ಮಿಶನ್ ಹೈಸ್ಕೂಲ್ ನಲ್ಲಿ, ವಿಧ್ಯಾಭ್ಯಾಸ. ಚಾಮರಾಜ ಒಡೆಯರು ೧೮೯೪ ರಲ್ಲಿ, ತೀರಿಕೊಂಡರು. ಅವರ ಹಿರಿಯ ಮಗ, ಕೃಷ್ಣರಾಜ ಒಡೆಯರಿಗೆ ಕೇವಲ ೧೦ ವರ್ಷವಯಸ್ಸು. ಅರಮನೆಯ, "ರಾಯಲ್ ಸ್ಕೂಲ್," ನಲ್ಲಿ ಅವರ ವಿದ್ಯಾಭ್ಯಾಸ ನಡೆಯಿತು. ಒಟ್ಟು ೯ ಜನ ವಿದ್ಯಾರ್ಥಿಗಳಿದ್ದ ಆ ವಿಶೇಷ ಶಾಲೆಯಲ್ಲಿ, ಮಹಾರಾಜರ ಜೊತೆಯಲ್ಲಿಯೆ ಮಿರ್ಜಾರವರು ಓದುತ್ತಿದ್ದರು.
  • ೧೯೦೧ರಲ್ಲಿ, ಮಿರ್ಜಾ, ಬೆಂಗಳೂರಿನ ಸೆಂಟ್ರೆಲ್ ಕಾಲೇಜಿಗೆ ಸೇರಿದರು. ಅವರು ಆರಿಸಿಕೊಂಡ ವಿಷಯ ಭೂವಿಜ್ಞಾನ. ಮಿರ್ಜಾ, ಶಿಸ್ತಿನ ವಿದ್ಯಾರ್ಥಿ. ತಮ್ಮ ವಿದ್ಯಾಭ್ಯಾಸ ಮುಗಿದ ನಂತರವೂ ಗುರುಗಳನ್ನು ಕಂಡಾಗಲೆಲ್ಲಾ ನಮಸ್ಕರಿಸುತ್ತಿದ್ದರು. ೧೯೦೫ ರಲ್ಲಿ ಪದವಿ ಮುಗಿಸಿದರು. ಅವರಿಗೆ ಸಿಕ್ಕಿದ್ದು ಪೋಲೀಸ್ ಕೆಲಸ. ಮಹಾರಾಜರು ಮಿರ್ಜಾಇಸ್ಮಾಯಿಲ್ ರವರನ್ನು, ಡೆಪ್ಯುಟಿ ಕಾರ್ಯದರ್ಶಿಯಾಗಿ ನೇಮಿಸಿಕೊಂಡರು.
  • ಆಗಿನ ಬ್ರಿಟಿಷ್ ರೆಡೇಂಟ್ ಗಳು ಸರ್ವಾಧಿಕಾರಿಗಳಾಗಿದ್ದು, ತಮಗೆ ಬೇಕಾದ ಕೆಲವರನ್ನು ಸೇರಿಸಿಕೊಳ್ಳಿ ಎಂದು ಒತ್ತಾಯಿಸುತ್ತಿದ್ದರು. ಆಪ್ತ-ಕಾರ್ಯದರ್ಶಿಯ ಸ್ಥಾನಕ್ಕೆ ಒಬ್ಬ ಬ್ರಿಟಿಷ್ ಅಧಿಕಾರಿಯಿದ್ದನು. ಸ್ಥಳೀಯ ಜನರಿಗೆ ಸಹಾಯವಾಗುವಂತೆ, ಹುಜೂರ್ ಕಾರ್ಯದರ್ಶಿ ಎನ್ನುವ ಒಂದು ಹೊಸ ಹುದ್ದೆಯ ನಿರ್ಮಾಣವಾಯಿತು.

ಹುಜೂರ್ ಕಾರ್ಯದರ್ಶಿಯಿಂದ, ಮೈಸೂರಿನ ದಿವಾನರಾಗಿ[ಬದಲಾಯಿಸಿ]

೧೯೧೩ ರಲ್ಲಿ ಅದು ತೆರವಾದಾಗ, ಮಹಾರಾಜರು ಮಿರ್ಜಾರವರಿಗೆ ಕರೆ ಕಳಿಸಿ ಸೇರಿಸಿ ಕೊಂಡರು. ಮಹಾರಾಜರ ಬಳಿ ಅಧಿಕಾರಕ್ಕಿದ್ದವರು ೩ ಜನ. ದಿವಾನರು ಮತ್ತಿಬ್ಬರು ಪರ್ಸನಲ್ ಸೆಕ್ರೆಟರಿ, ಹೆಚ್ಚು ಕಡಿಮೆ ದಿವಾನರಷ್ಟೇ ಮುಖ್ಯರಾದವರು. ಮಿರ್ಜಾರವರ ಬುದ್ಧಿ ಮತ್ತು ಅಲ್ಲಿನ ದೇಸಿ ಜನರ ಮಧ್ಯೆ, ಅವರು ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದರಿಂದ ಪರಂಗಿ ಅಧಿಕಾರಿಗಳಿಗೆ ಸ್ಥಳೀಯ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಎಲ್ಲಕ್ಕೂ ಮಿರ್ಜರವರನ್ನು, ವಿಚಾರಿಸುತ್ತಿದ್ದರು. ೧೯ ವರ್ಷ ಉಪಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ೧೯೨೯ರಲ್ಲಿ ಅವರನ್ನು ದಿವಾನರನ್ನಾಗಿ ನೇಮಿಸಲಾಯಿತು. ರಾಜಾಶ್ರಯದಲ್ಲಿ ಒಟ್ಟು ೪೩ ವರ್ಷ ಕೆಲಸಮಾಡಿದರು. ೧೯೪೧ ರಲ್ಲಿ 'ಸಮರ್ಥ ದಿವಾನ'ರೆಂಬ ಹೆಸರು ಬಂತು.

ಅನೇಕ ಜನ-ಹಿತ ಕಾರ್ಯಕ್ರಮಗಳ ರುವಾರಿಯಾಗಿ[ಬದಲಾಯಿಸಿ]

  • ೧೯೧೮ ರವರೆಗೆ, ದಿವಾನ್ ಸರ್. ಎಂ. ವಿಶ್ವೇಶ್ವರಯ್ಯನವರ ಕಾಲದಲ್ಲಿ ಮೈಸೂರು ರಾಜ್ಯ, ಆಧುನಿಕತೆಯ ಕಡೆಗೆ ದಾಪುಗಾಲು ಹಾಕುತ್ತಾ ನಡೆದಿತ್ತು. ಮಿರ್ಜಾ ಇಸ್ಮಾಯಿಲ್ ರವರು ಅದನ್ನು ಮುಂದುವರೆಸಿಕೊಂಡು ಹೋದರು. ಮಂಡ್ಯದ ಸಕ್ಕರೆ ಕಾರ್ಖಾನೆ, ಭದ್ರಾವತಿಯ ಕಬ್ಬಿಣದ ಕಾರ್ಖಾನೆ ಮತ್ತು ಕಾಗದದ ಕಾರ್ಖಾನೆಗಳನ್ನು ಪ್ರಾರಂಭಿಸಿದರು. ದಿನನಿತ್ಯದ ಬಳಕೆಗೆ ಬರುವ ಸಿಮೆಂಟ್, ರಾಸಾಯನಿಕ ಗೊಬ್ಬರ, ಗಾಜು, ಪಿಂಗಾಣಿ ಪದಾರ್ಥಗಳು ಇತ್ಯಾದಿ. ಕೃತಕ ರೇಷ್ಮೆ, ವಿದ್ಯುತ್ ಬಲ್ಬುಗಳ ಉದ್ಯಮಗಳು. ಎಚ್. ಎ. ಎಲ್ ಕಾರ್ಖಾನೆಯ ಸ್ಥಾಪನೆ. ಭಾರತದ ೬೦% ಕಾಫಿ ಬೆಳೆ, ಮೈಸೂರಿನಲ್ಲಿ ಬೆಳೆದರೂ, ಪರಿಷ್ಕರಿಸಲು ಹೊರ ರಾಜ್ಯಕ್ಕೆ ಕಳಿಸಬೇಕಾಗಿತ್ತು.
  • ಅದನ್ನು ತಪ್ಪಿಸಿ ಇಸ್ಮಾಯಿಲ್ ರವರು, "ದ ಮೈಸೂರ್ ಕಾಫಿ ಕ್ಯೂರಿಂಗ್ ವರ್ಕ್ಸ್,"ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರಿಂದ, ಸ್ಥಳೀಯರಿಗೆ ಅನುಕೂಲವಾಯಿತು. ಕಾರ್ಖಾನೆಗಳನ್ನೆಲ್ಲಾ, ಒಂದೇ ಕಡೆ ಕೆಂದ್ರೀಕರಿಸಿ ಪರಿಸರದ ಮೇಲೆ ಒತ್ತಡ ಹೇರುವ ಬದಲಾಗಿ, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸ್ಥಾಪಿಸಿದರು.ಇದು ಒಂದು ಉತ್ತಮ ಪ್ರಯತ್ನ. ಶಿವನ ಸಮುದ್ರದಲ್ಲಿ ವಿದ್ಯುತ್ ಆಗಲೇ ಒದಗುತ್ತಿತ್ತು. ಶಿಂಷಾ ಮತ್ತು ಜೋಗ್ ಜಲಪಾತಗಳ ನೀರನ್ನೂ ಉಪಯೋಗಿಸಿಕೊಂಡು, ವಿದ್ಯುತ್ ಉತ್ಪಾದನೆ ಪ್ರಾರಂಭಿಸಿದರು.
  • ಶಿವನಸಮುದ್ರ ವಿದ್ಯುತ್ ಕೇಂದ್ರಕ್ಕೆ ಸಿಡಿಲು ಹೊಡೆದು ಕೆಲ ಕಾಲ ಕಾರ್ಯ ನಿಷ್ಕ್ರಿಯಗೊಂಡಿತ್ತು. ೧೯೨೬ ರಲ್ಲಿ ಬೆಂಗಳೂರು, ಮೈಸೂರು ಮತ್ತು ಕೋಲಾರಗಳಿಗೆ ವಿದ್ಯುತ್ ಪೂರೈಕೆಯಾಯಿತು. ೧೯೪೦ ರಲ್ಲಿ ಮೈಸೂರು ರಾಜ್ಯದ ಸುಮಾರು ೧೮೦ ಹಳ್ಳಿಗಳಿಗೂ ವಿದ್ಯುತ್ ಸರಬರಾಜು ಮಾಡಲಾಯಿತು. ಪ್ರತಿಯೊಂದು ಹಳ್ಳಿಯ ಪ್ರಮುಖ ದ್ವಾರವನ್ನು ಸುಂದರವಾಗಿ ಕಟ್ಟಲಾಯಿತು. ಚೊಕ್ಕಟ, ಅಂದಕ್ಕೆ, ಪ್ರಾತಿನಿಧ್ಯ. ಸಾರ್ವಜನಿಕ ಉದ್ಯಾನ, ಕಾರಂಜಿ, ನಗರಸಭಾ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ, ಆಟದ ಮೈದಾನ, ಊರಿನ ದೊಡ್ಡಮೈದಾನ, ಇದು ಮಿರ್ಜಾರವರ ಕಲ್ಪನೆ. ಇದನ್ನು ಬಹುತೇಕ ಸಾಕಾರಗೊಳಿಸಿದರು ಕೂಡ. ವೃಂದಾವನ ಉದ್ಯಾನವನದ ಅಂದ-ಚೆಂದಕ್ಕೂ ಅವರು ಬಹಳವಾಗಿ ಶ್ರಮಿಸಿದರು.
  • ಬೆಂಗಳೂರಿನಲ್ಲಿ ಸ್ಥಾಪಿಸಿದ್ದ, ಮಾನಸಿಕ ರೋಗಿಗಳ ಅಸ್ಪತ್ರೆಯ ಹೊರ -ಪರಿಸರವನ್ನು ಅತ್ಯಂತ ಎಚ್ಚರಿಕೆ ವಹಿಸಿ, ಅದರ ವನಸಂಪತ್ತನ್ನು ಹೆಚ್ಚಿಸಿದರು. ಎಲ್ಲರೂ ಆಸ್ಪತ್ರೆಯ ಪರಿಸರವನ್ನು, ವಿಹಾರ ಸ್ಥಳಕ್ಕೆ ಹೋಲಿಸುತ್ತಾರೆ. ರೋಗಿಗಳ ಮನಸ್ಸನ್ನು ಉಲ್ಲಾಸಗೊಳಿಸಿ ಕ್ಷಣಕಾಲವಾದರು ಅವರ ಉದ್ವಿಜ್ಞತೆಯನ್ನು ಕಡಿಮೆ ಮಾಡುವ ವಿಚಾರ ಮಿರ್ಜಾರವರದು. ೧೯೪೦ ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣವನ್ನು ಪ್ರಾರಂಭಿಸಿದರು. ಅದಕ್ಕೆ ತಗುಲಿದ ಖರ್ಚು ೧ ಲಕ್ಷ ೩೦ ಸಾವಿರ ರೂಪಾಯಿಗಳು.
  • ಅಂಜೂರದ ಹಣ್ಣುಗಳು ಮೈಸೂರಿನ ಶ್ರೀರಂಗಪಟ್ಟಣದ ಬಳಿಯ ಗಂಜಾಂ ಎಂಬ ಹಳ್ಳಿಯಲ್ಲಿ, ಸುಮಾರು ೨೦೦ ವರ್ಷಗಳಿಂದ ಬೆಳೆಯುತ್ತಿದ್ದು, ಮಲೇರಿಯ ಬಂದು ಆ ಪ್ರದೇಶದ ಜನರಿಗೆ ತೊಂದರೆಯಾಯಿತು. ಕಾಲುವೆಯ ನೀರು ಕೆಳಮಟ್ಟದಲ್ಲಿ ಹರಿಯುತ್ತಿತ್ತು. ಹೊಲ ತೋಟಗಳು ಸ್ವಲ್ಪ ಎತ್ತರದಲ್ಲಿದ್ದು ಹೊಲಗಳಿಗೆ ನೀರು ಎತ್ತಿ ಹರಿಸುವುದು ಕಷ್ಟವಾಗಿತ್ತು. ಇದನ್ನು ಗಮನಿಸಿದ ಮಿರ್ಜಾರವರು, ಕೂಡಲೇ ನೀರೆತ್ತುವ ಪಂಪ್ ಗಳನ್ನು ತರಿಸಿ ಹಳ್ಳಿಯ ರೈತರಿಗೆ ಕೊಟ್ಟು, ಅವರ ಬೆಳೆಯನ್ನು ಕಾಪಾಡಿದರು. ಇದರಿಂದ ರೈತರ ಜೀವನದಲ್ಲಿ ಹೊಸ ಆಶಾಕಿರಣ ಬಂದಂತಾಯಿತು.
  • ಬೆಂಗಳೂರಿಗೆ ಕುಡಿಯುವ ನೀರನ್ನು ಸರಬರಾಜುಮಾಡಲು, ಹೇಸರಘಟ್ಟದಿಂದ ಬ್ರಿಟಿಷ್ ರೆಸಿಡೆಂಟರು ಸಲಹೆ ಮಾಡಿದಾಗ ಇಸ್ಮಾಯಿಲ್ ರು ಒಂದು ಸಮಿತಿಯನ್ನು ರಚಿಸಿ, ಅದರ ಪ್ರಕಾರ ಬೆಂಗಳೂರಿಗೆ ೨೨ ಮೈಲಿ ದೂರದಲ್ಲಿದ್ದ ಚಾಮರಾಜ ಜಲಾಶಯದ ನೀರನ್ನು ಬೆಂಗಳೂರಿಗೆ ತಂದರು. ೪ ಕೋಟಿ ಲೀ/ಪ್ರತಿದಿನ. ಮಂಡ್ಯದ ಬಳಿಯ ಇರ್ವಿನ್ ಕಾಲುವೆ (ವಿಶ್ವೇಶ್ವರಯ್ಯ ಕಾಲುವೆ) ೨.೫೦ ಲಕ್ಷ ರೂಪಾಯಿನಲ್ಲಿ ಕಟ್ಟಿಸಿದರು. ಇದು ೨೫,೦೦೦ ಎಕರೆಗಳಿಗೆ ನೀರು ಒದಗಿಸುತ್ತಿದೆ. ಗಾಂಧಿಯವರು ಅನಾರೋಗ್ಯದಿಂದ ಬಳಲುತ್ತಿದ್ದು ಬೆಂಗಳೂರಿಗೆ ಬಂದಾಗ, ಕುಮಾರಕೃಪಕ್ಕೆ ಬಂದು ವಿಶ್ರಾಂತಿ ತೆಗೆದುಕೊಳ್ಳಲು ಮೈಸೂರಿನ ದೊರಗಳು ಆಹ್ವಾನಿಸಿದಾಗ ವೈಸ್ ರಾಯ್ ವೆಲಿಂಗ್ಡನ್ ರು, ಅಸಮಧಾನ ವ್ಯಕ್ತಪಡಿಸಿದ್ದರು.
  • ಆದರೆ, ಮಿರ್ಜಾರವರು ವಸತಿಯ ಅಗತ್ಯಗಳನ್ನು ವಿವರಿಸಿ, ಅದನ್ನು ಅನುಮೋದಿಸಿದ್ದರಿಂದ, ಗಾಂಧಿಯವರು ಬರಲು ಸಹಾಯವಾಯಿತು. ಬ್ರಿಟಿಷ್ ಸರಕಾರ ೧೮೮೧ ರಲ್ಲಿ, ರಾಜಪರಿವಾರಕ್ಕೆ ಮೈಸೂರನ್ನು ಬಿಟ್ಟುಕೊಟ್ಟಿತು. ಬದಲಾಗಿ, ೩೫ ಲಕ್ಷ ಬೇಡಿತು. ಅದರ ಬಗ್ಗೆ, ಪತ್ರ ವ್ಯವಹಾರ ಮಾಡಿ ಮಿರ್ಜಾರವರು ೧೯೨೮ ರಲ್ಲಿ ೧೦.೫೦ ಲಕ್ಷ ಕಡಿಮೆ ಮಾಡಿಕೊಳ್ಳಲು ರಾಜಿಮಾಡಿಸಿಕೊಟ್ಟರು. ಮೈಸೂರಿನಲ್ಲಿ ಮೆಡಿಕಲ್ ಕಾಲೇಜು, ೧೦೦ ಶಾಲೆಗಳು ಸ್ಥಾಪಿಸಲ್ಪಟ್ಟವು. ಅದರ ಜವಾಬ್ದಾರಿಯನ್ನು ಮಿರ್ಜಾ ಇಸ್ಮಾಯಿಲ್ ವಹಿಸಿಕೊಂಡಿದ್ದರು. ೧೯೪೦ ರಲ್ಲಿ ರಾಜರು ಮಡಿದರು. ಕೆಲವು ತಿಂಗಳಲ್ಲೇ ಮಿರ್ಜಾರವರು ತಮ್ಮ ಪದವಿಗೆ ರಾಜೀನಾಮೆ ಕೊಟ್ಟರು.

ಜೈಪುರ್ ಮತ್ತು ಹೈದರಾಬಾದ್[ಬದಲಾಯಿಸಿ]

  • ಮೈಸೂರಿನಿಂದ ಅವರು ಜೈಪುರಕ್ಕೆ ೧೯೪೨ ರಲ್ಲಿ, ದಿವಾನರಾಗಿ ಹೋದರು. ಜೈಪುರದ ಪೂರ್ಣ ಮುಖವಾಡವನ್ನು ಬದಲಿಸಿದರು. ಅತ್ಯಂತ ಸುಂದರವಾಗಿ ಕಾಣಿಸುವಂತೆ ಮಾರ್ಪಟುಗಳನ್ನು ಮಾಡಿದರು. ಪಿಲಾನಿ ಶಿಕ್ಷಣಸಂಸ್ಥೆಯನ್ನು ಸ್ಥಾಪಿಸಿದರು. ರಾಜ್ ಪುಟಾನ ವಿಶ್ವವಿದ್ಯಾಲಯದ ಸ್ಥಾಪನೆ. ೧೯೪೬ ರಲ್ಲಿ ಹೈದರಾಬಾದ್ ನಿಜಾಮನ ಅರಮನೆಯಲ್ಲಿ ದಿವಾನರಾಗಿ ನೇಮಿಸಲ್ಪಟ್ಟರು.
  • ಅವರು ಮೇ ೧೯೪೬ ರಲ್ಲಿ ರಾಜೀನಾಮೆ ಕೊಟ್ಟರು. ಕಾಶ್ಮೀರದ ಮುಖ್ಯಮಂತ್ರಿಯಾಗಲು ಅವಕಾಶ ಬಂದಿತ್ತು. ವಿಶ್ವಸಂಸ್ಥೆಗೆ ದುಡಿದರು. ಇಂಡೋನೇಷಿಯದ ತಾಂತ್ರಿಕನೆರವಿಗೆ ಹೋದರು. ೧೯೫೨ ರಲ್ಲಿ ಮುಂದೆ, ಇರಾನ್ ಇರಾಕ್, ದೇಶಗಳನ್ನು ಭೇಟಿಮಾಡಿದರು. ೧೯೫೪ ರಲ್ಲಿ ತಮ್ಮ ಆತ್ಮಕಥೆಯನ್ನು ರಚಿಸಿದರು.

ಬೆಂಗಳೂರಿಗೆ ಮರಳಿದರು[ಬದಲಾಯಿಸಿ]

  • ಹೈದರಾಬಾದಿನಿಂದ ಅವರ ಪ್ರಾಣಪ್ರಿಯವಾದ ನಗರ ಬೆಂಗಳೂರಿಗೆ ವಾಪಸ್ ಬಂದರು. ೧೯೫೯ ರಲ್ಲಿ ಮರಣ ಹೊಂದಿದರು. ಬೆಂಗಳೂರಿನಲ್ಲೇ ತಮ್ಮ ಅಂತ್ಯ ಮತ್ತು ಅಲ್ಲೆ ಸಮಾಧಿಯೂ ಆಗಬೇಕೆಂಬುದು ಅವರ ಅಂತಿಮ ಆಶೆಯಾಗಿತ್ತು. ಹಿರಿಯ ವ್ಯಕ್ತಿತ್ವ. ಅಪ್ರತಿಮ ಪ್ರತಿಭೆ, ತೆರೆದಮನಸ್ಸಿನ ಪರಿಶೀಲನೆ, ಭಿನ್ನಾಭಿಪ್ರಾಯಗಳನ್ನು ದಕ್ಷತೆಯಿಂದ ನಿವಾರಿಸುವ ರೀತಿ, ನಿರ್ಭೀತಿಯಿಂದ ತೆಗೆದುಕೊಳ್ಳುವ ತೀರ್ಮಾನಗಳು, ಅದ್ಭುತ ನೆನಪಿನಶಕ್ತಿ, ಆಡಳಿತದಲ್ಲಿ ಚಾಣಾಕ್ಷತನ, ಎಲ್ಲ ವರ್ಗದ ಜನರಲ್ಲೂ ಸ್ನೇಹದ ಒಡನಾಟ, ಇವೇ ಮೊದಲಾದವುಗಳು ಅವರನ್ನು ಯಶಸ್ಸಿನ ಶಿಖರಕ್ಕೆ ಒಯ್ದಿದ್ದವು.

ಬರೆದು ಪ್ರಕಟಿಸಿದ ಪುಸ್ತಕ[ಬದಲಾಯಿಸಿ]

  1. ಮೈ ಪಬ್ಲಿಕ್ ಲೈಫ್ (ನನ್ನ ಸಾರ್ವಜನಿಕ ಬದುಕು - ಕನ್ನಡಕ್ಕೆ ಡಾ. ಗಜಾನನ ಶರ್ಮ)

ಆಕರ[ಬದಲಾಯಿಸಿ]

  • ಪ್ರೊ. ಶ್ರೀ ಎಲ್. ಎಸ್. ಶೇಷಗಿರಿಯರು ಬರೆದ, ಕಿರು ಹೊತ್ತಿಗೆ.

ಉಲ್ಲೇಖಗಳು[ಬದಲಾಯಿಸಿ]

  1. http://www.kanaja.in/%E0%B2%AE%E0%B2%BF%E0%B2%B0%E0%B3%8D%E0%B2%9C%E0%B2%BE-%E0%B2%87%E0%B2%B8%E0%B3%8D%E0%B2%AE%E0%B2%BE%E0%B2%AF%E0%B2%BF%E0%B2%B2%E0%B3%8D/[ಶಾಶ್ವತವಾಗಿ ಮಡಿದ ಕೊಂಡಿ]
  2. https://honalu.net/2014/01/08/%E0%B2%A8%E0%B2%BE%E0%B2%A1%E0%B2%AA%E0%B2%B0-%E0%B2%86%E0%B2%A1%E0%B2%B3%E0%B2%BF%E0%B2%A4%E0%B2%97%E0%B2%BE%E0%B2%B0-%E0%B2%AE%E0%B2%BF%E0%B2%B0%E0%B3%8D%E2%80%8D%E0%B2%9C%E0%B2%BE-%E0%B2%87/